ಪಂಚಾಯತ್ ರಾಜ್ ಸಚಿವಾಲಯ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ʻರಾಷ್ಟ್ರೀಯ ಪಂಚಾಯತ್ ರಾಜ್ ದಿನʼವಾದ ಏಪ್ರಿಲ್ 24ರಂದು ಬಿಹಾರದ ಮಧುಬನಿಯಿಂದ ರಾಷ್ಟ್ರವ್ಯಾಪಿ ಗ್ರಾಮ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ
ಪ್ರಧಾನಮಂತ್ರಿಯವರು ʻವಿಶೇಷ ವರ್ಗದ ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿ-2025ʼ ಪ್ರದಾನ ಮಾಡಲಿದ್ದಾರೆ, ಈ ಸಂದರ್ಭ 13,500 ಕೋಟಿ ರೂ. ಮೌಲ್ಯದ ವಿವಿಧ ಮೂಲಸೌಕರ್ಯ ಯೋಜನೆಗಳನ್ನೂ ಅವರು ಲೋಕಾರ್ಪಣೆ ಮಾಡಲಿದ್ದಾರೆ
Posted On:
23 APR 2025 3:53PM by PIB Bengaluru
ಪಂಚಾಯತ್ಗಳಿಗೆ ಗ್ರಾಮೀಣ ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳಾಗಿ ಸಾಂವಿಧಾನಿಕ ಸ್ಥಾನಮಾನ ಕಲ್ಪಿಸಿದ '73ನೇ ಸಾಂವಿಧಾನಿಕ ತಿದ್ದುಪಡಿ ಕಾಯ್ದೆ(1992)ʼಗೆ 32 ವರ್ಷ ತುಂಬಿರುವುದರ ಸ್ಮರಣಾರ್ಥ 2025ರ ಏಪ್ರಿಲ್ 24 ರಂದು ದೇಶವು 'ರಾಷ್ಟ್ರೀಯ ಪಂಚಾಯತ್ ರಾಜ್ ದಿನ'ವನ್ನು (ಎನ್. ಪಿ. ಆರ್. ಡಿ) ಆಚರಿಸಲಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಉಪಸ್ಥಿತಿಯಲ್ಲಿ ಬಿಹಾರದ ಮಧುಬನಿ ಜಿಲ್ಲೆಯ ಝಂಜರ್ಪುರ್ ಬ್ಲಾಕ್ನ ಲೋಹ್ನಾ ಉತ್ತರ ಗ್ರಾಮ ಪಂಚಾಯಿತಿಯಲ್ಲಿ ಮುಖ್ಯ ಸಮಾರಂಭವನ್ನು ಆಯೋಜಿಸಲಾಗಿದೆ. ಪ್ರಧಾನಮಂತ್ರಿಯವರು ದೇಶಾದ್ಯಂತ ಪಂಚಾಯತ್ ರಾಜ್ ಸಂಸ್ಥೆಗಳು (ಪಿಆರ್ಐ) ಮತ್ತು ಗ್ರಾಮ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮತ್ತು ಈ ಸಂದರ್ಭದಲ್ಲಿ ʻವಿಶೇಷ ವರ್ಗದ ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿ-2025ʼ ಪ್ರದಾನ ಮಾಡಲಿದ್ದಾರೆ. ಗ್ರಾಮೀಣಾಭಿವೃದ್ಧಿ ಸಚಿವಾಲಯ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, ಇಂಧನ ಸಚಿವಾಲಯ, ರೈಲ್ವೆ ಸಚಿವಾಲಯ ಹಾಗೂ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸೇರಿದಂತೆ ಆರು ಕೇಂದ್ರ ಸಚಿವಾಲಯಗಳ ಭಾಗವಹಿಸುವಿಕೆಯೊಂದಿಗೆ "ಸಂಪೂರ್ಣ ಸರ್ಕಾರ" ಕಾರ್ಯವಿಧಾನದ ಮೂಲಕ ಈ ಬಾರಿಯ ʻರಾಷ್ಟ್ರೀಯ ಪಂಚಾಯತ್ ರಾಜ್ ದಿನʼವನ್ನು ಪ್ರಮುಖ ರಾಷ್ಟ್ರೀಯ ಕಾರ್ಯಕ್ರಮವಾಗಿ ಆಚರಿಸಲಾಗುತ್ತಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ಸಂದರ್ಭದಲ್ಲಿ ಈ ಸಚಿವಾಲಯಗಳಿಗೆ ಸಂಬಂಧಿಸಿದ ಹಲವಾರು ಪ್ರಮುಖ ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇವುಗಳಲ್ಲಿ ಸುಮಾರು 13,500 ಕೋಟಿ ರೂ. ಮೌಲ್ಯದ ಎಲ್ಪಿಜಿ ಬಾಟ್ಲಿಂಗ್ ಘಟಕಗಳು, ವಿದ್ಯುದ್ದೀಕರಣ ಯೋಜನೆಗಳು, ವಸತಿ ಯೋಜನೆಗಳು, ರೈಲ್ವೆ ಮೂಲಸೌಕರ್ಯ ಮತ್ತು ರಸ್ತೆ ಅಭಿವೃದ್ಧಿ ಸೇರಿವೆ. ʻಪ್ರಧಾನ ಮಂತ್ರಿ ಆವಾಸ್ ಯೋಜನೆʼ(ಗ್ರಾಮೀಣ ಮತ್ತು ನಗರ) ಮತ್ತು 'ಡಿಎವೈ-ಎನ್ಆರ್ಎಲ್ಎಂ' ಯೋಜನೆಗಳ ಅಡಿಯಲ್ಲಿ ಆರ್ಥಿಕ ಸಹಾಯವನ್ನು ಸಹ ಕಾರ್ಯಕ್ರಮದಲ್ಲಿ ವಿತರಿಸಲಾಗುವುದು. ಈ ಉಪಕ್ರಮಗಳೊಂದಿಗೆ, ಗ್ರಾಮೀಣ ಭಾರತ, ವಿಶೇಷವಾಗಿ ಬಿಹಾರದ ಗ್ರಾಮೀಣ ಪ್ರದೇಶಗಳು ಸಂಪರ್ಕ ಸುಧಾರಣೆ, ಸೇವೆಗಳು ಮತ್ತು ಆರ್ಥಿಕ ಅವಕಾಶಗಳ ಮೂಲಕ ಅಪಾರ ಪ್ರಯೋಜನ ಪಡೆಯಲಿವೆ.
ಈ ಕಾರ್ಯಕ್ರಮದಲ್ಲಿ ಬಿಹಾರದ ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್; ಕೇಂದ್ರ ಪಂಚಾಯತ್ ರಾಜ್ ಸಚಿವರಾದ ಶ್ರೀ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಾಲನ್ ಸಿಂಗ್; ಬಿಹಾರದ ಉಪ ಮುಖ್ಯಮಂತ್ರಿಗಳಾದ ಶ್ರೀ ಸಾಮ್ರಾಟ್ ಚೌಧರಿ ಮತ್ತು ಶ್ರೀ ವಿಜಯ್ ಕುಮಾರ್ ಸಿನ್ಹಾ; ಬಿಹಾರದ ಪಂಚಾಯತ್ ರಾಜ್ ಸಚಿವರಾದ ಶ್ರೀ ಕೇದಾರ್ ಪ್ರಸಾದ್ ಗುಪ್ತಾ; ಬಿಹಾರದ ಮುಖ್ಯ ಕಾರ್ಯದರ್ಶಿ ಶ್ರೀ ಅಮೃತ್ ಲಾಲ್ ಮೀನಾ; ಮತ್ತು ಪಂಚಾಯತ್ ರಾಜ್ ಸಚಿವಾಲಯದ ಕಾರ್ಯದರ್ಶಿ ಶ್ರೀ ವಿವೇಕ್ ಭಾರದ್ವಾಜ್ ಹಾಗೂ 6 ಸಚಿವಾಲಯಗಳ ಇತರ ಹಿರಿಯ ಅಧಿಕಾರಿಗಳು ಮತ್ತು ಎಲ್ಲಾ ಪಂಚಾಯತ್ಗಳ ಪ್ರತಿನಿಧಿಗಳು ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ. ಗ್ರಾಮ ಪಂಚಾಯತ್ ಮಟ್ಟದಿಂದ ʻರಾಷ್ಟ್ರೀಯ ಪಂಚಾಯತ್ ರಾಜ್ ದಿನ-2025ʼ ಆಚರಣೆಯು, ʻವಿಕಸಿತ ಪಂಚಾಯತ್ʼಗಳು ʻವಿಕಸಿತ ಭಾರತʼದ ಸದೃಢ ಅಡಿಪಾಯವಾಗುವುದನ್ನು ಖಚಿತಪಡಿಸಿಕೊಳ್ಳುವಲ್ಲಿ ಸರ್ಕಾರದ ಬದ್ಧತೆಯನ್ನು ಒತ್ತಿಹೇಳುತ್ತದೆ.
ʻವಿಶೇಷ ವರ್ಗದ ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಗಳು- 2025ʼ ಕುರಿತು
ಈ ಪ್ರಶಸ್ತಿಗಳಲ್ಲಿ ʻಹವಾಮಾನ ಉಪಕ್ರಮ ವಿಶೇಷ ಪಂಚಾಯತ್ ಪ್ರಶಸ್ತಿʼ (ಸಿಎಎಸ್ಪಿಎ), ಆತ್ಮನಿರ್ಭರ ಪಂಚಾಯತ್ ವಿಶೇಷ ಪ್ರಶಸ್ತಿʼ(ಎಎನ್ಪಿಎಸ್ಎ) ಮತ್ತು ʻಪಂಚಾಯತ್ ಕ್ಷಮತಾ ನಿರ್ಮಾಣ್ ಸರ್ವೋತ್ತಮ್ ಸಂಸ್ಥಾನ್ ಪುರಸ್ಕಾರʼ(ಪಿಕೆಎನ್ಎಸ್ಎಸ್ಪಿ) ಸೇರಿವೆ. ಹವಾಮಾನ ಸ್ಥಿತಿಸ್ಥಾಪಕತ್ವ, ಹಣಕಾಸಿನ ಸ್ವಾವಲಂಬನೆ ಮತ್ತು ಸಾಮರ್ಥ್ಯ ವರ್ಧನೆಯಂತಹ ಕ್ಷೇತ್ರಗಳಲ್ಲಿ ಅನುಕರಣೀಯ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದ ಗ್ರಾಮ ಪಂಚಾಯಿತಿಗಳು ಮತ್ತು ಸಂಸ್ಥೆಗಳನ್ನು ಗುರುತಿಸುವ ಗುರಿಯನ್ನು ಈ ಪ್ರಶಸ್ತಿಗಳು ಹೊಂದಿವೆ. ಬಿಹಾರ, ಮಹಾರಾಷ್ಟ್ರ, ಒಡಿಶಾ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ಅಸ್ಸಾಂ ರಾಜ್ಯಗಳಿಂದ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪುರಸ್ಕೃತ ಆರು ಗ್ರಾಮ ಪಂಚಾಯಿತಿಗಳ ಪೈಕಿ ಮೂರು ಗ್ರಾಮ ಪಂಚಾಯಿತಿಗಳಾದ - ಮೋತಿಪುರ (ಬಿಹಾರ), ದವ್ವಾ ಎಸ್ (ಮಹಾರಾಷ್ಟ್ರ) ಮತ್ತು ಹತ್ಬಾದ್ರಾಗಳನ್ನು (ಒಡಿಶಾ) ಮಹಿಳಾ ಸರಪಂಚರು ಮುನ್ನಡೆಸುತ್ತಿದ್ದಾರೆ. ಇದು ತಳಮಟ್ಟದಲ್ಲಿ ಎಲ್ಲರನ್ನೂ ಒಳಗೊಂಡ ನಾಯಕತ್ವವನ್ನು ಪ್ರತಿಬಿಂಬಿಸುತ್ತದೆ.
*****
(Release ID: 2123888)