ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav g20-india-2023

ಮುಂಬರುವ ದಶಕಗಳಲ್ಲಿ ಭಾರತವು 8% ರಷ್ಟು ಬೆಳವಣಿಗೆಯ ಸಾಮರ್ಥ್ಯವನ್ನು ಹೊಂದಿರುವ ವಿಶ್ವದ ಅತ್ಯಂತ ಶ್ರೀಮಂತ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದು ಉಪರಾಷ್ಟ್ರಪತಿಯವರು ಪ್ರತಿಪಾದಿಸಿದರು


ಭಾರತವು ಜಾಗತಿಕವಾಗಿ ಸಂಭಾವ್ಯ ಸ್ಥಳವಾಗಿದೆ ಮತ್ತು ಉತ್ತರ ಪ್ರದೇಶವು ಚಟುವಟಿಕೆಗಳಿಂದ ತುಂಬಿ ತುಳುಕುತ್ತಿದೆ ಎಂದು ಉಪರಾಷ್ಟ್ರಪತಿಯವರು ಹೇಳಿದರು

ಲೋಕಲ್ ಟು ಗ್ಲೋಬಲ್: ಭಾರತದ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ ಎಂದು ಶ್ರೀ ಧನಕರ್ ಹೇಳಿದರು

ಉತ್ತರ ಪ್ರದೇಶವನ್ನು 'ಉತ್ತಮ ಪ್ರದೇಶ'ವಾಗಿ ಪರಿವರ್ತಿಸಿರುವುದನ್ನು ಉಪರಾಷ್ಟ್ರಪತಿಯವರು ಶ್ಲಾಘಿಸಿದರು

ಪ್ರಧಾನಿ ಮೋದಿಯವರ ದೃಷ್ಟಿಕೋನ ಮತ್ತು ಮುಖ್ಯಮಂತ್ರಿ ಯೋಗಿಯವರ ನಾಯಕತ್ವದ ನಡುವಿನ ಸಹಯೋಗವು 2047ರ ವೇಳೆಗೆ ವಿಕಸಿತ ಭಾರತದ ಕಡೆಗಿನ ಭಾರತದ ಪ್ರಯಾಣವನ್ನು ಮುನ್ನಡೆಸುತ್ತಿದೆ ಎಂದು ಉಪರಾಷ್ಟ್ರಪತಿ ಧನಕರ್ ಹೇಳಿದರು

ಉತ್ತರ ಪ್ರದೇಶದ ಗ್ರೇಟರ್ ನೊಯ್ಡಾದಲ್ಲಿ ಉಪರಾಷ್ಟ್ರಪತಿಗಳು ಎರಡನೇ ಆವೃತ್ತಿಯ ಉತ್ತರ ಪ್ರದೇಶ ಅಂತರರಾಷ್ಟ್ರೀಯ ವ್ಯಾಪಾರ ಪ್ರದರ್ಶನವನ್ನು ಉದ್ಘಾಟಿಸಿದರು

Posted On: 25 SEP 2024 3:53PM by PIB Bengaluru

ಭಾರತದ ಗೌರವಾನ್ವಿತ ಉಪರಾಷ್ಟ್ರಪತಿಯವರಾದ ಶ್ರೀ ಜಗದೀಪ್ ಧನಕರ್ ಅವರು ಇಂದು ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ ಮತ್ತು ಜಾಗತಿಕ ಹೂಡಿಕೆಗೆ ಆದ್ಯತೆಯ ತಾಣವಾಗಿದೆ ಎಂದು ಹೇಳಿದರು. ಗ್ರೇಟರ್ ನೋಯ್ಡಾದಲ್ಲಿ ನಡೆದ ಉತ್ತರ ಪ್ರದೇಶ ಅಂತರಾಷ್ಟ್ರೀಯ ವ್ಯಾಪಾರ ಪ್ರದರ್ಶನ 2024ರ ಎರಡನೇ ಆವೃತ್ತಿಯಲ್ಲಿ ಉದ್ಘಾಟನಾ ಭಾಷಣ ಮಾಡಿದ ಶ್ರೀ ಧಂಖರ್, “ಇಂದು, ಭಾರತವು ಸುಮಾರು 4 ಟ್ರಿಲಿಯನ್  ಡಾಲರ್ ಆರ್ಥಿಕತೆಯನ್ನು ಹೊಂದಿದ್ದು, ಮುಂಬರುವ ದಶಕಗಳಲ್ಲಿ ಭಾರತವು ಶೇಕಡಾ 8ರ ಬೆಳವಣಿಗೆಯ ಸಾಮರ್ಥ್ಯವನ್ನು ಹೊಂದಿದೆ. ಈಗ ಉತ್ತರ ಪ್ರದೇಶವು ಜಾಗತಿಕ ಸಾಮರ್ಥ್ಯವನ್ನು ಹೊಂದಿರುವ ಸ್ಥಳವಾಗಿದೆ ಮತ್ತು ಬಹಳಷ್ಟು ಚಟುವಟಿಕೆಗಳು ನಡೆಯುತ್ತಿವೆ" ಎಂದು ಹೇಳಿದರು.

 

ದೇಶದ ಮೂಲಸೌಕರ್ಯ ಅಭಿವೃದ್ಧಿಯನ್ನು ಪ್ರಶಂಸಿಸುತ್ತಾ ಶ್ರೀ ಧನಕರ್ ಅವರು ವಾರ್ಷಿಕವಾಗಿ 8 ಹೊಸ ವಿಮಾನ ನಿಲ್ದಾಣಗಳ ಸೇರ್ಪಡೆ, ಮೆಟ್ರೋ ವ್ಯವಸ್ಥೆಗಳ ವೇಗದ ವಿಸ್ತರಣೆ ಮತ್ತು ಪ್ರತಿದಿನ 28 ಕಿಲೋಮೀಟರ್ ಹೆದ್ದಾರಿ ನಿರ್ಮಾಣವನ್ನು ಉಲ್ಲೇಖಿಸಿದರು. ಪ್ರಧಾನಮಂತ್ರಿ ಮಾನ್ಯ ಮೋದಿಯವರ ನೇತೃತ್ವದಲ್ಲಿ ರೂಪುಗೊಳ್ಳುತ್ತಿರುವ 12 ಹೊಸ ಕೈಗಾರಿಕಾ ವಲಯಗಳತ್ತ ಶ್ರೀ ಧನಕರ್ ಗಮನ ಸೆಳೆದರು. ಇವು ಉತ್ಪಾದನಾ ಕ್ಷೇತ್ರವನ್ನು ಉತ್ತೇಜಿಸುವುದಲ್ಲದೆ, ಕೃತಕ ಬುದ್ಧಿಮತ್ತೆ, ಎಲೆಕ್ಟ್ರಿಕ್ ಮೊಬಿಲಿಟಿ ಮತ್ತು ಸೆಮಿಕಂಡಕ್ಟರ್ ಗಳಂತಹ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲು ಭಾರತಕ್ಕೆ ಅನುಕೂಲ ಮಾಡಿಕೊಡುತ್ತವೆ ಎಂದು ಹೇಳಿದರು.

ಭಾರತದ ಮೂಲಸೌಕರ್ಯದಲ್ಲಿನ ಗಣನೀಯ ಪ್ರಗತಿಯನ್ನು ಎತ್ತಿ ಹಿಡಿದ ಉಪರಾಷ್ಟ್ರಪತಿಯವರು, "ನಾವು ಈಗ ವಿಶ್ವದ ಎರಡನೇ ಅತಿದೊಡ್ಡ ಮೆಟ್ರೋ ಜಾಲವನ್ನು ಹೊಂದಿದ್ದೇವೆ ಮತ್ತು ವಿಮಾನ ನಿಲ್ದಾಣಗಳನ್ನು ಹೊಂದಿರುವ ನಗರಗಳ ಸಂಖ್ಯೆ 70 ರಿಂದ 140 ಕ್ಕೆ ದ್ವಿಗುಣಗೊಂಡಿದೆ. 800 ಮಿಲಿಯನ್ಗಿಂತ ಹೆಚ್ಚು ಬ್ರಾಡ್ ಬ್ಯಾಂಡ್ ಬಳಕೆದಾರರೊಂದಿಗೆ ಭಾರತವು ವಿಶ್ವದಲ್ಲೇ ಅತಿ ದೊಡ್ಡ ಸಂಪರ್ಕಿತ ರಾಷ್ಟ್ರವಾಗಿದೆ " ಎಂದು ಹೇಳಿದರು. 170 ಮಿಲಿಯನ್ ಜನರಿಗೆ ವಸತಿ  60 ಮಿಲಿಯನ್ ಜನರಿಗೆ ಆರೋಗ್ಯ ರಕ್ಷಣೆ ಮತ್ತು ವಾರ್ಷಿಕವಾಗಿ 58 ಮಿಲಿಯನ್ ಸಣ್ಣ ಉದ್ಯಮಗಳಿಗೆ ಸಾಲವನ್ನು ಒದಗಿಸಿದ ಡಿಜಿಟಲ್ ತಂತ್ರಜ್ಞಾನಗಳ ಪ್ರಭಾವವನ್ನು ಅವರು ಹೈಲೈಟ್‌ ಮಾಡಿದರು.  

ಡಿಜಿಟಲ್ ಹಣಕಾಸು ವಹಿವಾಟುಗಳ ವಿಷಯದಲ್ಲಿ, ಭಾರತವು ಪ್ರತಿ ತಿಂಗಳು 13 ಬಿಲಿಯನ್ ವಹಿವಾಟುಗಳೊಂದಿಗೆ ವಿಶ್ವದಲ್ಲಿ ಅತ್ಯಧಿಕ ದಾಖಲೆ ಮಾಡುತ್ತದೆ. ಇದಲ್ಲದೆ, ನಾವು ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಯನ್ನು ಹೊಂದಿದ್ದೇವೆ. ಇದರಲ್ಲಿ 117 ಯುನಿಕಾರ್ನ್ ಗಳು ಮತ್ತು ವಿಶ್ವದ ಮೂರನೇ ಅತಿದೊಡ್ಡ ಖರೀದಿ ಶಕ್ತಿಯನ್ನು ಹೊಂದಿದೆ" ಎಂದು ಅವರು ಹೇಳಿದರು. 

ಸೆಮಿಕಂಡಕ್ಟರ್ ಉದ್ಯಮದ ಪ್ರಾಮುಖ್ಯತೆಯನ್ನೂ ಶ್ರೀ ಧನಕರ್ ಒತ್ತಿ ಹೇಳಿದರು. "ನಮ್ಮ ಬೆಳವಣಿಗೆಗೆ ಅತ್ಯಂತ ಮಹತ್ವದ ಈ ಉದ್ಯಮವು 2026 ರ ವೇಳೆಗೆ 55 ಬಿಲಿಯನ್ ಡಾಲರ್ ಗಳನ್ನು ಮೀರುವ ನಿರೀಕ್ಷೆಯಿದೆ. ಈ ಶತಮಾನವು ಭಾರತಕ್ಕೆ ಸೇರಿದೆ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ" ಎಂದು ಅವರು ಹೇಳಿದರು.

ಇದಲ್ಲದೆ, "ಮೇಕ್ ಇನ್ ಇಂಡಿಯಾ"ದಿಂದ "ಕಾನ್ಸೆಪ್ಟ್, ಡಿಸೈನ್ ಮತ್ತು ಮೇಕ್ ಇನ್ ಇಂಡಿಯಾ" ಗೆ ಭಾರತದ ಗಮನಾರ್ಹ ಏರಿಕೆಯನ್ನು ಉಪರಾಷ್ಟ್ರಪತಿಯವರು ಎತ್ತಿ ತೋರಿಸಿದರು. ಭಾರತವು ಈಗ ತನ್ನದೇ ಆದ ಪರಿಕಲ್ಪನೆಯ ವಿಕಾಸದಲ್ಲಿ ತೊಡಗಿಕೊಂಡಿದೆ. ಬಹುರಾಷ್ಟ್ರೀಯ ಕಂಪನಿಗಳು ಮತ್ತು ಭಾರತೀಯ ಕಂಪನಿಗಳೆರಡೂ ಸಹಭಾಗಿತ್ವದ ನಿಲುವನ್ನು ತೆಗೆದುಕೊಳ್ಳುತ್ತಿವೆ ಎಂದು ಅವರು ಹೇಳಿದರು.

 

ಈ ಕಾರ್ಯಕ್ರಮವು ಪ್ರಧಾನಿ ಮೋದಿಯವರ 'ಆತ್ಮನಿರ್ಭರ ಭಾರತ'ದ ದೃಷ್ಟಿಕೋನಕ್ಕೆ ಹೊಂದಿಕೆಯಾಗುತ್ತದೆ ಮತ್ತು 'ಲೋಕಲ್ ಟು ಗ್ಲೋಬಲ್' ಎಂಬ ಧ್ಯೇಯವಾಕ್ಯವನ್ನು ಅಳವಡಿಸಿಕೊಂಡಿದೆ ಎಂದು ಶ್ರೀ ಧನಕರ್ ಹೇಳಿದರು. ಮೊದಲು ಇದು 'ವೋಕಲ್‌ ಫಾರ್‌ ಲೋಕಲ್' ಆಗಿತ್ತು.  ಈಗ ನಾವು ಅದನ್ನು 'ಲೋಕಲ್ ಟು ಗ್ಲೋಬಲ್' ಮೂಲಕ ಮುಂದಿನ ಹಂತಕ್ಕೆ ಕೊಂಡೊಯ್ಯುತ್ತಿದ್ದೇವೆ. ವಿವಿಧ ಕ್ಷೇತ್ರಗಳಲ್ಲಿ ಭಾರತದ ಪ್ರಗತಿ ಸ್ಪಷ್ಟವಾಗಿದೆ ಮತ್ತು ಈ ವ್ಯಾಪಾರ ಪ್ರದರ್ಶನವು ಆ ಬೆಳವಣಿಗೆಯನ್ನು ಮುನ್ನಡೆಸಲು ಸರಿಯಾದ ಕೇಂದ್ರಬಿಂದುವಾಗಿ ಕಾರ್ಯನಿರ್ವಹಿಸುತ್ತದೆ," ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿ ಮತ್ತು ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಅವರ ಅನುಷ್ಠಾನದ ನಡುವಿನ ಸಮನ್ವಯದ ಅಡಿಯಲ್ಲಿ ಉತ್ತರ ಪ್ರದೇಶವನ್ನು ಉತ್ತಮ ಪ್ರದೇಶವಾಗಿ ಪರಿವರ್ತಿಸಿರುವುದನ್ನು ಶ್ರೀ ಧನಕರ್ ಶ್ಲಾಘಿಸಿದರು. ಈ ಸಮನ್ವಯವು ಭಾರತವನ್ನು 2047 ರ ವೇಳೆಗೆ ವಿಕಸಿತ ಭಾರತ ಮಾಡುವತ್ತ ಮುನ್ನಡೆಸುತ್ತಿದೆ ಎಂದು ಅವರು ಹೇಳಿದರು. 

ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಅವರನ್ನು ಶ್ಲಾಘಿಸುತ್ತಾ, ಒಮ್ಮೆ ಸವಾಲುಗಳಿಂದ ಕೂಡಿದ್ದ ಉತ್ತರ ಪ್ರದೇಶವು ಹೇಗೆ ಪ್ರಗತಿ ಮತ್ತು ಅಭಿವೃದ್ಧಿಯ ಕೇಂದ್ರವಾಗಿ ಪರಿವರ್ತನೆಗೊಂಡಿದೆ ಎಂಬುದನ್ನು ಉಪರಾಷ್ಟ್ರಪತಿಯವರು ಎತ್ತಿ ತೋರಿಸಿದರು. "ಹೂಡಿಕೆಗೆ ಕಾನೂನು ಮತ್ತು ಸುವ್ಯವಸ್ಥೆಗಿಂತ ಹೆಚ್ಚು ಮುಖ್ಯವಾದುದು ಬೇರೇನೂ ಇಲ್ಲ. ಕಾನೂನು ಮತ್ತು ಸುವ್ಯವಸ್ಥೆ ಪ್ರಜಾಪ್ರಭುತ್ವವನ್ನು ವ್ಯಾಖ್ಯಾನಿಸುತ್ತದೆ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಾನೂನು ಮತ್ತು ಸುವ್ಯವಸ್ಥೆಯನ್ನು ವ್ಯಾಖ್ಯಾನಿಸುತ್ತಾರೆ!" ಎಂದು ಅವರು ಹೇಳಿದರು.

 

ಉಪರಾಷ್ಟ್ರಪತಿಯವರು ವ್ಯಾಪಾರ ಪ್ರದರ್ಶನದಲ್ಲಿ ವಿಯೆಟ್ನಾಂ ದೇಶವನ್ನು  ಪಾಲುದಾರ ದೇಶವಾಗಿ ಪ್ರದರ್ಶಿಸುವ ಮಹತ್ವವನ್ನು ವಿವರಿದರು. ಇದನ್ನು ಅವರು ನೈಸರ್ಗಿಕ ಪಾಲುದಾರಿಕೆ ಎಂದು ವಿವರಿಸಿದರು. ಇದು ಎರಡು ರಾಷ್ಟ್ರಗಳ ನಡುವೆ ಸಾಂಸ್ಕೃತಿಕ ಮತ್ತು ಆರ್ಥಿಕ ವಿನಿಮಯಗಳನ್ನು ಬೆಳೆಸುತ್ತದೆ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳಲ್ಲಿ ಗ್ಲೋಬಲ್ ಸೌತ್ಗೆ ಹೆಚ್ಚಿನ ಪಾತ್ರಕ್ಕಾಗಿ ಸಂಕಲ್ಪವನ್ನು ಬಲಪಡಿಸುತ್ತದೆ. "ವಿಯೆಟ್ನಾಂ 435 ಬಿಲಿಯನ್ ಡಾಲರ್ ಗಳ ಗಮನಾರ್ಹ ಜಿಡಿಪಿಯನ್ನು ಹೊಂದಿದೆ ಮತ್ತು ನಾವು ಅವರ ಅಸಾಧಾರಣ ಉತ್ಪನ್ನಗಳು ಮತ್ತು ನವೀನ ಉತ್ಪಾದನಾ ಪದ್ಧತಿಗಳನ್ನು ನೋಡಲು ಎದುರು ನೋಡುತ್ತಿದ್ದೇವೆ" ಎಂದು ಉಪರಾಷ್ಟ್ರಪತಿಯವರು ಹೇಳಿದರು.

"ದೇಶದಾದ್ಯಂತ ಈ ಅಭೂತಪೂರ್ವ ಆರ್ಥಿಕ ಉತ್ಕರ್ಷ ಮತ್ತು ಅಭೂತಪೂರ್ವ ಮೂಲಸೌಕರ್ಯ ಅಭಿವೃದ್ಧಿಯಲ್ಲಿ, ಅತಿದೊಡ್ಡ ರಾಜ್ಯವಾದ ಉತ್ತರ ಪ್ರದೇಶವು ಪ್ರಮುಖ ಪಾತ್ರವನ್ನು ವಹಿಸುತ್ತಿದೆ, ಇದು ಕೆಲವು ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದ ಸನ್ನಿವೇಶಕ್ಕಿಂತ ಭಿನ್ನವಾಗಿದೆ" ಎಂದು ಶ್ರೀ ಧನಕರ್ ಹೇಳಿದರು. ಸಿಎಂ ಯೋಗಿ ಆದಿತ್ಯನಾಥ್ ಅವರ ಸಮರ್ಥ ನಾಯಕತ್ವದಲ್ಲಿ ಉತ್ತರ ಪ್ರದೇಶವು 2027 ರ ವೇಳೆಗೆ 1 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿಯನ್ನು ಸಾಧಿಸಲಿದೆ ಎಂದು ಉಪರಾಷ್ಟ್ರಪತಿಯವರು ವಿಶ್ವಾಸ ವ್ಯಕ್ತಪಡಿಸಿದರು. ಇದು ಭಾರತವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲು ಗಣನೀಯ ಕೊಡುಗೆ ನೀಡುತ್ತದೆ.

ಅದರ ವಿಶಾಲ ಸಂಪನ್ಮೂಲಗಳು, ಬೆಳೆಯುತ್ತಿರುವ ಜನಸಂಖ್ಯೆ ಮತ್ತು ತಂತ್ರಾತ್ಮಕ ಸ್ಥಾನದೊಂದಿಗೆ, ಉತ್ತರ ಪ್ರದೇಶವು ಭಾರತದ ಆರ್ಥಿಕ ಪಥವನ್ನು ಮುನ್ನಡೆಸುವ ಬೆಳವಣಿಗೆಯ ಎಂಜಿನ್ ಆಗಿ ಹೊರಹೊಮ್ಮುತ್ತಿದೆ. ಉತ್ತರ ಪ್ರದೇಶವು ಇನ್ನು ಮುಂದೆ ನಿದ್ರಿಸುವ ದೈತ್ಯನಲ್ಲ; ಇದು ಈಗ ಕ್ರಿಯಾಶೀಲ ರಾಜ್ಯವಾಗಿದೆ, ಫಲವತ್ತಾದ ಭೂಮಿ, ಯುವ ಕಾರ್ಯಪಡೆ, ಧಾರ್ಮಿಕ ಪ್ರವಾಸೋದ್ಯಮ ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (MSMEs) ಚೈತನ್ಯಶೀಲ ಪರಿಸರ ವ್ಯವಸ್ಥೆಯಂತಹ ತನ್ನ ಬಲಗಳನ್ನು ಬಳಸಿಕೊಳ್ಳುತ್ತಿದೆ" ಎಂದು ಉಪರಾಷ್ಟ್ರಪತಿಯವರು ಹೇಳಿದರು. 

ಹಿಂದಿನ ಕಾಲವನ್ನು ನೆನಪಿಸಿಕೊಂಡ ಉಪರಾಷ್ಟ್ರಪತಿಗಳು, "ಒಂದು ದಶಕದ ಹಿಂದೆ, ನಮ್ಮ ಆರ್ಥಿಕತೆಯು ತತ್ತರಿಸುತ್ತಿತ್ತು, ಮತ್ತು ರಾಷ್ಟ್ರದ ಮನೋಭಾವವು ಅಸ್ಥಿರವಾಗಿತ್ತು. ಆದರೆ ಕಳೆದ ದಶಕದಲ್ಲಿ ಅಭೂತಪೂರ್ವ ಬದಲಾವಣೆಗಳಿಗೆ ಸಾಕ್ಷಿಯಾಗಿದೆ" ಎಂದು ಹೇಳಿದರು.

ಅಂತಿಮವಾಗಿ ಉಪರಾಷ್ಟ್ರಪತಿಗಳು ಸಾಮೂಹಿಕ ಪ್ರಯತ್ನಕ್ಕಾಗಿ ಕರೆ ನೀಡಿ, "ಮಹಿಳೆಯರೇ ಮತ್ತು ಮಹನೀಯರೇ, ನಾವು ಮುಂದುವರೆಯುತ್ತಿದ್ದಂತೆ, ಉತ್ತರ ಪ್ರದೇಶಕ್ಕೆ ಹೊಸ ಉದಯವನ್ನು ಕಾಣುತ್ತಿದ್ದೇವೆ - ವ್ಯಾಪಾರ, ನಾವೀನ್ಯತೆ ಮತ್ತು ಸಾಂಸ್ಕೃತಿಕ ಪರಂಪರೆಯಲ್ಲಿ ನಮ್ಮ ರಾಷ್ಟ್ರವು ಜಾಗತಿಕ ನಾಯಕನಾಗಿ ಎತ್ತರಕ್ಕೆ ನಿಲ್ಲುವ ಭವಿಷ್ಯ" ಎಂದು ಹೇಳಿದರು.

ಉಪರಾಷ್ಟ್ರಪತಿಯವರು   ಆವರಣದಲ್ಲಿನ  ವಸ್ತುಪ್ರದರ್ಶನಕ್ಕೂ ಭೇಟಿ ನೀಡಿದರು. 

ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್, ಭಾರತ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವ ಶ್ರೀ ಜಿತನ್ ರಾಮ್ ಮಾಂಜಿ, ಉತ್ತರ ಪ್ರದೇಶ ಸರ್ಕಾರದ ಕೈಗಾರಿಕಾ ಅಭಿವೃದ್ಧಿ, ರಫ್ತು ಪ್ರೋತ್ಸಾಹ, ಎನ್‌ಆರ್‌ಐ, ಹೂಡಿಕೆ ಪ್ರೋತ್ಸಾಹ ಸಚಿವ ಶ್ರೀ ನಂದ ಗೋಪಾಲ್ ಗುಪ್ತಾ 'ನಂದಿ'; ಉತ್ತರ ಪ್ರದೇಶ ಸರ್ಕಾರದ MSME, ಖಾದಿ ಮತ್ತು ಗ್ರಾಮೋದ್ಯೋಗಗಳು, ರೇಷ್ಮೆ ಉದ್ಯಮಗಳು, ಕೈಮಗ್ಗ ಮತ್ತು ಜವಳಿ ಸಚಿವ ಶ್ರೀ ರಾಕೇಶ್ ಸಚನ್ ಹಾಗೂ ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಂಪೂರ್ಣ ಭಾಷಣವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: https://pib.gov.in/PressReleasePage.aspx?PRID=2058592

 

*****



(Release ID: 2058915) Visitor Counter : 5