ಪ್ರಧಾನ ಮಂತ್ರಿಯವರ ಕಛೇರಿ

ಹೆಚ್ಚು ಇಳುವರಿ ನೀಡುವ, ಹವಾಮಾನಕ್ಕೆ ಚೇತರಿಸಿಕೊಳ್ಳುವ ಮತ್ತು ಜೈವಿಕ ಬಲವರ್ಧಿತ ಬೆಳೆಗಳ 109 ತಳಿಗಳನ್ನು ಪ್ರಧಾನಮಂತ್ರಿ ಅವರು ಬಿಡುಗಡೆ ಮಾಡಿದರು


ಕೃಷಿಯಲ್ಲಿ ಮೌಲ್ಯವರ್ಧನೆಯ ಮಹತ್ವವನ್ನು ಪ್ರಧಾನಮಂತ್ರಿಯವರು ವಿವರಿಸಿದರು 

ವೆಚ್ಚವನ್ನು ಕಡಿಮೆ ಮಾಡಲು ಮತ್ತು ಪರಿಸರದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲು ಹೊಸ ತಳಿಗಳು ಹೆಚ್ಚು ಪ್ರಯೋಜನಕಾರಿ ಎಂದು ರೈತರು ಹೇಳಿದರು

ಈ ಹೊಸ ಬೆಳೆಗಳ ತಳಿಗಳನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ವಿಜ್ಞಾನಿಗಳನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು
 
ದೈನಂದಿನ ಜೀವನದಲ್ಲಿ ಬಳಕೆಯಾಗದ ಬೆಳೆಗಳನ್ನು ಮುಖ್ಯವಾಹಿನಿಗೆ ತರಲು ಪ್ರಧಾನಮಂತ್ರಿಯವರು ನೀಡಿದ ಸಲಹೆಗೆ ಅನುಗುಣವಾಗಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ವಿಜ್ಞಾನಿಗಳು ತಿಳಿಸಿದರು

ನೈಸರ್ಗಿಕ ಕೃಷಿಯ ಪ್ರಯೋಜನಗಳು ಮತ್ತು ಸಾವಯವ ಆಹಾರಕ್ಕೆ ಹೆಚ್ಚುತ್ತಿರುವ ಬೇಡಿಕೆಯ ಕುರಿತು ಪ್ರಧಾನಮಂತ್ರಿ ಚರ್ಚಿಸಿದರು

Posted On: 11 AUG 2024 1:15PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ನವದೆಹಲಿಯ ಭಾರತ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಹೆಚ್ಚು ಇಳುವರಿ ನೀಡುವ, ಹವಾಮಾನ ಸ್ಥಿತಿಸ್ಥಾಪಕ ಮತ್ತು ಜೈವಿಕ ಬಲವರ್ಧಿತ ಬೆಳೆಗಳ 109 ತಳಿಗಳನ್ನು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ರೈತರು ಮತ್ತು ವಿಜ್ಞಾನಿಗಳೊಂದಿಗೆ ಸಂವಾದ ನಡೆಸಿದರು. ಈ ಹೊಸ ಬೆಳೆಗಳ ತಳಿಗಳ ಪ್ರಾಮುಖ್ಯತೆಯನ್ನು ಚರ್ಚಿಸಿದ ಪ್ರಧಾನಮಂತ್ರಿಯವರು ಕೃಷಿಯಲ್ಲಿ ಮೌಲ್ಯವರ್ಧನೆಯ ಮಹತ್ವದ ಬಗ್ಗೆ ಒತ್ತಿ ಹೇಳಿದರು. 

ಈ ಹೊಸ ತಳಿಗಳು ಅವರಿಗೆ ಹೆಚ್ಚು ಪ್ರಯೋಜನಕಾರಿಯಾಗುತ್ತವೆ, ಇದು ಅವರ ಕೃಷಿಯ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಪರಿಸರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಭಾಗವಹಿಸಿದ ರೈತರು ಹೇಳಿದರು.

ಪ್ರಧಾನಮಂತ್ರಿಯವರು ಸಿರಿಧಾನ್ಯಗಳ ಮಹತ್ವವನ್ನು ಚರ್ಚಿಸಿದರು ಮತ್ತು ಜನರು ಪೌಷ್ಟಿಕ ಆಹಾರದ ಕಡೆಗೆ ಹೇಗೆ ಸಾಗುತ್ತಿದ್ದಾರೆ ಎಂಬುದನ್ನು ವಿವರಿಸಿದರು.  ನೈಸರ್ಗಿಕ ಕೃಷಿಯಿಂದ ಆಗುವ ಪ್ರಯೋಜನಗಳು ಮತ್ತು ಸಾವಯವ ಕೃಷಿಯತ್ತ ಜನಸಾಮಾನ್ಯರಲ್ಲಿ ಹೆಚ್ಚುತ್ತಿರುವ ನಂಬಿಕೆಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಜನರು ದೈನಂದಿನ ಬಳಕೆಯಲ್ಲಿ ಸಾವಯವ ಆಹಾರವನ್ನು ಸೇವಿಸಲು ಮತ್ತು ಬೇಡಿಕೆಯಿಡಲು ಪ್ರಾರಂಭಿಸಿದ್ದಾರೆ ಎಂದು ವಿವರಿಸಿದರು.

ನೈಸರ್ಗಿಕ ಕೃಷಿಗೆ ಉತ್ತೇಜನ ನೀಡಲು ಸರ್ಕಾರ ಕೈಗೊಂಡಿರುವ ಪ್ರಯತ್ನಕ್ಕೆ ರೈತರು ಮೆಚ್ಚುಗೆ ವ್ಯಕ್ತಪಡಿಸಿದರು.

ಜಾಗೃತಿ ಮೂಡಿಸುವಲ್ಲಿ ಕೃಷಿ ವಿಜ್ಞಾನ ಕೇಂದ್ರಗಳು (ಕೆವಿಕೆ) ವಹಿಸಿದ ಪಾತ್ರವನ್ನು ರೈತರು ಶ್ಲಾಘಿಸಿದರು.  ಕೃಷಿ ವಿಜ್ಞಾನ ಕೇಂದ್ರಗಳು (ಕೆವಿಕೆ)  ಗಳು ಪ್ರತಿ ತಿಂಗಳು ಅಭಿವೃದ್ಧಿಪಡಿಸುತ್ತಿರುವ ಹೊಸ ತಳಿಗಳ ಪ್ರಯೋಜನಗಳ ಬಗ್ಗೆ ರೈತರಿಗೆ ಅರಿವು ಪೂರ್ವಭಾವಿಯಾಗಿ ತಿಳಿಸಬೇಕು ಎಂದು ಪ್ರಧಾನಮಂತ್ರಿಯವರು ಸಲಹೆ ನೀಡಿದರು.

ಈ ಹೊಸ ಬೆಳೆಗಳ ತಳಿಗಳನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ವಿಜ್ಞಾನಿಗಳನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು.  ಬಳಕೆಯಾಗದ ಬೆಳೆಗಳನ್ನು ಮುಖ್ಯವಾಹಿನಿಗೆ ತರಲು ಪ್ರಧಾನಿಯವರು ನೀಡಿದ ಸಲಹೆಗೆ ಅನುಗುಣವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ವಿಜ್ಞಾನಿಗಳು ಈ ಸಂದರ್ಭದಲ್ಲಿ ಮಾಹಿತಿ ನೀಡಿದರು.

ಪ್ರಧಾನಮಂತ್ರಿಯವರು ಬಿಡುಗಡೆ ಮಾಡಿದ 61 ಬೆಳೆಗಳ 109 ವಿಧಗಳ ತಳಿಗಳಲ್ಲಿ 34 ಕ್ಷೇತ್ರ ಬೆಳೆಗಳು ಮತ್ತು 27 ತೋಟಗಾರಿಕಾ ಬೆಳೆಗಳು ಸೇರಿವೆ.  ಕ್ಷೇತ್ರ ಬೆಳೆಗಳಲ್ಲಿ ಸಿರಿಧಾನ್ಯ, ಮೇವು ಬೆಳೆಗಳು, ಎಣ್ಣೆಕಾಳುಗಳು, ದ್ವಿದಳ ಧಾನ್ಯಗಳು, ಕಬ್ಬು, ಹತ್ತಿ, ನಾರು ಮತ್ತು ಇತರ ಸಂಭಾವ್ಯ ಬೆಳೆಗಳು ಸೇರಿದಂತೆ ವಿವಿಧ ಧಾನ್ಯಗಳ ಬೀಜಗಳನ್ನು ಬಿಡುಗಡೆ ಮಾಡಲಾಯಿತು.  ತೋಟಗಾರಿಕಾ ಬೆಳೆಗಳ ಪೈಕಿ ವಿವಿಧ ಬಗೆಯ ಹಣ್ಣುಗಳು, ತರಕಾರಿ ಬೆಳೆಗಳು, ತೋಟದ ಬೆಳೆಗಳು, ಗಡ್ಡೆ ಬೆಳೆಗಳು, ಸಾಂಬಾರು ಪದಾರ್ಥಗಳು, ಹೂವುಗಳು ಮತ್ತು ಔಷಧೀಯ ಬೆಳೆಗಳ ತಳಿಗಳನ್ನು ಬಿಡುಗಡೆ ಮಾಡಲಾಯಿತು.

 

*****



(Release ID: 2044340) Visitor Counter : 18