ಪ್ರಧಾನ ಮಂತ್ರಿಯವರ ಕಛೇರಿ
ಸವಾಲಿನ ಈ ಸಮಯದಲ್ಲಿ ನಾವೆಲ್ಲರೂ ಕೇರಳದ ಜನರೊಂದಿಗೆ ನಿಲ್ಲುವೆವು – ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
ಎಲ್ಲರಿಗೂ ಅದರಲ್ಲೂ ಬಾಧಿತರಿಗೆ ಎಲ್ಲಾ ಸಾಧ್ಯ ಬೆಂಬಲ ನೀಡುವುದನ್ನು ಮುಂದುವರಿಸಲಾಗುವುದು – ಪ್ರಧಾನಮಂತ್ರಿ ಭರವಸೆ
ಪರಿಹಾರ ಕಾರ್ಯದಲ್ಲಿ ಮುಂಚೂಣಿಯಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಪ್ರಧಾನಮಂತ್ರಿ ವಂದನೆ
ಪ್ರಕಟಣಾ ದಿನಾಂಕ:
10 AUG 2024 10:58PM by PIB Bengaluru
ವಯನಾಡಿನಲ್ಲಿ ಭೂಕುಸಿತದಲ್ಲಿ ಬಾಧಿತರಾದವರಿಗೆ ಎಲ್ಲಾ ಸಾಧ್ಯ ನೆರವನ್ನು ಕೇಂದ್ರ ಸರ್ಕಾರ ನೀಡಲಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಎಕ್ಸ್ ನಲ್ಲಿ ಸರಣಿ ಪೋಸ್ಟ್ ಗಳನ್ನು ಮಾಡಿರುವ ಪ್ರಧಾನಮಂತ್ರಿಗಳು, “ವಯನಾಡಿನ ಭೂಕುಸಿತ ದುರಂತದಿಂದ ನಮ್ಮೆಲ್ಲರಿಗೂ ದುಃಖವಾಗಿದೆ. ದುರಂತ ಸಂಭವಿಸಿದಾಗಿನಿಂದ, ನಾನು ಪರಿಸ್ಥಿತಿಯ ಬಗ್ಗೆ ನಿಕಟ ನಿಗಾ ವಹಿಸಿದ್ದೇನೆ. ಬಾಧಿತರಿಗೆ ನೆರವು ನೀಡಲು ಎಲ್ಲಾ ಸಂಪನ್ಮೂಲಗಳನ್ನು ಕೇಂದ್ರ ಸರ್ಕಾರ ಒದಗಿಸಿದೆ. ಇಂದು ನಾನು ಅಲ್ಲಿಗೆ ಭೇಟಿ ನೀಡಿ ಪರಾಮರ್ಶೆ ನಡೆಸಿದ್ದೇನೆ. ನಾನು ವೈಮಾನಿಕ ಸಮೀಕ್ಷೆಯನ್ನೂ ಕೈಗೊಂಡೆನು” ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿಗಳು ದುರಂತದ ಸಂತ್ರಸ್ತರನ್ನೂ ಭೇಟಿಯಾದರು. ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಅವರು, “ಭೂಕುಸಿತದಿಂದ ಬಾಧಿತರಾದವರನ್ನು ವೈಯಕ್ತಿಕವಾಗಿ ಭೇಟಿ ಮಾಡಿದೆ. ಈ ದುರಂತ ಅನೇಕ ಕುಟುಂಬಗಳ ಮೇಲೆ ಬೀರಿರುವ ಪರಿಣಾಮವನ್ನು ನಾನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದೇನೆ. ನಾನು ಆಶ್ರಯ ಶಿಬಿರಕ್ಕೂ ಭೇಟಿ ನೀಡಿದ್ದು, ಗಾಯಾಳುಗಳೊಂದಿಗೂ ಮಾತನಾಡಿದೆ.” ಎಂದು ಪೋಸ್ಟ್ ಮಾಡಿದ್ದಾರೆ.
ಕೇಂದ್ರ ಸರ್ಕಾರದ ಪರಿಹಾರ ಘಟಕಗಳ ಸಂಪೂರ್ಣ ಬೆಂಬಲದ ಭರವಸೆ ನೀಡಿರುವ ಅವರು, “ನಾನು ಎಲ್ಲರಿಗೂ, ಅದರಲ್ಲೂ ಬಾಧಿತರಿಗೆ, ಎಲ್ಲಾ ಸಾಧ್ಯ ನೆರವು ನೀಡುವುದನ್ನು ಮುಂದುವರಿಸಲಾಗುವುದು ಎಂದು ಭರವಸೆ ನೀಡುತ್ತೇನೆ. ಈ ಸವಾಲಿನ ಸಮಯದಲ್ಲಿ ನಾವೆಲ್ಲರೂ ಕೇರಳದ ಜನರೊಂದಿಗೆ ನಿಲ್ಲುವೆವು” ಎಂದು ಹೇಳಿದ್ದಾರೆ.
ಪರಿಸ್ಥಿತಿಯ ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ಶ್ರೀ ಮೋದಿ ಅವರು ಪರಿಹಾರ ಕಾರ್ಯದಲ್ಲಿ ನಿರತರಾದವರನ್ನು ಭೇಟಿ ಮಾಡಿದರು. ಇದರ ಬಗ್ಗೆ ಹೇಳುತ್ತಾ, “ ನಾನು ಪರಿಹಾರ ಕಾರ್ಯದಲ್ಲಿ ಮುಂಚೂಣಿಯಲ್ಲಿ ನಿರತರಾಗಿರುವವರನ್ನು ಮತ್ತು ಅಧಿಕಾರಿಗಳನ್ನು ಭೇಟಿ ಮಾಡಿದೆ ಮತ್ತು ಸವಾಲಿನ ಸಮಯದಲ್ಲಿ ಅವರ ಸೇವೆಗೆ ವಂದಿಸಿದೆ. ಕೇರಳ ಸರ್ಕಾರದಿಂದ ವಿಸ್ತೃತ ಮಾಹಿತಿ ಸ್ವೀಕೃತವಾದ ಕೂಡಲೇ, ಕೇಂದ್ರ ಸರ್ಕಾರವು ಶಾಲೆ, ಮನೆ ಸೇರಿದಂತೆ ಬಾಧಿತ ಪ್ರದೇಶದಲ್ಲಿ ಅಗತ್ಯ ಮೂಲಸೌಕರ್ಯ ಮರುಸ್ಥಾಪನೆಗೆ ನೆರವು ನೀಡಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ” ಎಂದು ಭರವಸೆ ನೀಡಿದ್ದಾರೆ.
*****
(ಪ್ರಕಟಣೆ ಐ.ಡಿ.: 2044286)
ವಿಸಿಟರ್ ಕೌಂಟರ್ : 69
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
हिन्दी
,
Marathi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam