ಪ್ರಧಾನ ಮಂತ್ರಿಯವರ ಕಛೇರಿ

ರಷ್ಯಾದಲ್ಲಿ ಭಾರತೀಯ ಸಮುದಾಯ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

Posted On: 09 JUL 2024 2:25PM by PIB Bengaluru

ನಮಸ್ಕಾರ, ಇಲ್ಲಿರುವ ನನ್ನೆಲ್ಲಾ ಪ್ರೀತಿಯ ಭಾರತೀಯರೆ, ಹೇಗಿದ್ದೀರಿ? ಯಾಕೆ ಹೀಗಾಯಿತು?

ನಿಮ್ಮ ಪ್ರೀತಿ, ವಾತ್ಸಲ್ಯ ಮತ್ತು ನೀವು ಇಲ್ಲಿರಲು ತೆಗೆದುಕೊಂಡಿರುವ  ದೀರ್ಘ ಸಮಯವನ್ನು ನಾನು ಗಾಢವಾಗಿ ಪ್ರಶಂಸಿಸುತ್ತೇನೆ. ನಾನೊಬ್ಬನೇ ಇಲ್ಲಿಗೆ ಬಂದಿಲ್ಲ; ನಾನು ನನ್ನೊಂದಿಗೆ ಬಹಳಷ್ಟು ತಂದಿದ್ದೇನೆ. ನಾನು ಭಾರತದ ಫಲವತ್ತಾದ ಮಣ್ಣಿನ ಸಾರವನ್ನು ತಂದಿದ್ದೇನೆ, 140 ಕೋಟಿ ದೇಶವಾಸಿಗಳ ಪ್ರೀತಿ ಮತ್ತು ಅವರ ಹೃತ್ಪೂರ್ವಕ ಶುಭಾಶಯಗಳನ್ನು ಹೊತ್ತು ತಂದಿದ್ದೇನೆ. 3ನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದ ನಂತರ ಭಾರತೀಯ ಸಮುದಾಯದ ಜತೆಗಿನ ನನ್ನ ಮೊದಲ ಸಂವಾದ ಇಲ್ಲಿ ಮಾಸ್ಕೋದಲ್ಲಿ ನಡೆಯುತ್ತಿರುವುದು ನನಗೆ ಅಪಾರ ಸಂತೋಷ ನೀಡುತ್ತಿದೆ.

ಸ್ನೇಹಿತರೆ,

ಇಂದು ಜುಲೈ 9, ನಾನು ಪ್ರಮಾಣವಚನ ಸ್ವೀಕರಿಸಿ ಸರಿಯಾಗಿ 1 ತಿಂಗಳಾಗುತ್ತಿದೆ. 1 ತಿಂಗಳ ಹಿಂದೆ ಅಂದರೆ ಜೂನ್ 9ರಂದು ನಾನು ಸತತ 3ನೇ ಬಾರಿಗೆ ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದೇನೆ. ಅಂದೇ ನಾನು ಬದ್ಧತೆ ಮಾಡಿದ್ದೇನೆ. ನನ್ನ 3ನೇ ಅವಧಿಯಲ್ಲಿ ನಾನು 3 ಪಟ್ಟು ಶಕ್ತಿ ಮತ್ತು 3 ಪಟ್ಟು ವೇಗದೊಂದಿಗೆ ಕೆಲಸ ಮಾಡುತ್ತೇನೆ ಎಂದು ಸಂಕಲ್ಪ ತೊಟ್ಟಿದ್ದೇನೆ. ನಮ್ಮ ಸರ್ಕಾರದ ಹಲವು ಗುರಿಗಳಲ್ಲಿ 3 ಸಂಖ್ಯೆಯು ಪ್ರಮುಖವಾಗಿ ಕಾಣಿಸಿಕೊಂಡಿದೆ ಎಂಬುದು ಗಮನಾರ್ಹ ವಿಷಯವಾಗಿದೆ. ಈ ಅವಧಿಯಲ್ಲಿ ಭಾರತವನ್ನು ವಿಶ್ವದ 3ನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಿಸುವುದು, ಬಡವರಿಗೆ 3 ಕೋಟಿ ಮನೆಗಳನ್ನು ಕಟ್ಟಿಕೊಡುವುದು ಮತ್ತು 3 ಕೋಟಿ 'ಲಖಪತಿ ದೀದಿಗಳನ್ನು' ರಚಿಸುವುದೇ ನಮ್ಮ ಗುರಿಗಳಾಗಿವೆ. ಬಹುಶಃ ಈ ಪದವು ನಿಮಗೆ ಹೊಸದಿರಬಹುದು.

ಮಹಿಳಾ ಸ್ವಸಹಾಯ ಗುಂಪುಗಳು ಭಾರತಾದ್ಯಂತ ಹಳ್ಳಿಗಳಲ್ಲಿ ಸಕ್ರಿಯವಾಗಿವೆ. ಕೌಶಲ್ಯ ಅಭಿವೃದ್ಧಿ ಮತ್ತು ವೈವಿಧ್ಯೀಕರಣದ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ ಗಮನಾರ್ಹವಾಗಿ ಅವರನ್ನು ಸಬಲೀಕರಣಗೊಳಿಸುವ ಗುರಿಯನ್ನು ನಾವು ಹೊಂದಿದ್ದೇವೆ. ನನ್ನ 3ನೇ ಅವಧಿಯಲ್ಲಿ ಬಡ ಗ್ರಾಮೀಣ 3 ಕೋಟಿ ಸಹೋದರಿಯರು ಸಮೃದ್ಧಿ ಸಾಧಿಸುವುದು ನಮ್ಮ ಗುರಿಯಾಗಿದೆ. ಅಂದರೆ ಅವರ ವಾರ್ಷಿಕ ಆದಾಯ 1 ಲಕ್ಷ ರೂಪಾಯಿ ಮೀರಬೇಕು, ಅದು ಅನಿರ್ದಿಷ್ಟವಾಗಿ ಉಳಿಯುವಂತಾಗಬೇಕು. ಇದು ಅಸಾಧಾರಣವಾದ ಗುರಿಯೇ ಆಗಿದೆ, ಆದರೂ ನಿಮ್ಮಂತಹ ಸ್ನೇಹಿತರ ಬೆಂಬಲ ಮತ್ತು ಆಶೀರ್ವಾದದೊಂದಿಗೆ, ಉನ್ನತ ಗುರಿಗಳನ್ನು ನಾವು ಸಾಧಿಸಬಹುದು. ಆಧುನಿಕ ಭಾರತವು ನಿರಂತರವಾಗಿ ತನ್ನೆಲ್ಲಾ ಉದ್ದೇಶಗಳನ್ನು ಪೂರೈಸುತ್ತಿದೆ ಎಂದು ನಿಮಗೆಲ್ಲರಿಗೂ ತಿಳಿದಿದೆ. ಭಾರತವು ಚಂದ್ರಯಾನವನ್ನು ಯಶಸ್ವಿಯಾಗಿ ನಡೆಸಿತು, ಜಾಗತಿಕವಾಗಿ ಸುರಕ್ಷಿತ ಎನ್ನಬಹುದಾದ ಡಿಜಿಟಲ್ ವಹಿವಾಟುಗಳನ್ನು  ಮುನ್ನಡೆಸುತ್ತಿದೆ ಮತ್ತು ಪ್ರವರ್ತಕ ಎನಿಸುವ ಸಾಮಾಜಿಕ ವಲಯದ ನೀತಿಗಳನ್ನು ಅನುಷ್ಠಾನಗೊಳಿಸಿ ಗಮನಾರ್ಹ ಸಾಧನೆಗಳನ್ನು ಮಾಡಿದೆ. ಇದಲ್ಲದೆ, ಭಾರತವು ಇಂದು ವಿಶ್ವದ 3ನೇ ಅತಿದೊಡ್ಡ ಸ್ಟಾರ್ಟಪ್ ಪರಿಸರ ವ್ಯವಸ್ಥೆ ಹೊಂದಿದೆ.

2014ರಲ್ಲಿ ನಮ್ಮ ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಅವಕಾಶವನ್ನು ನೀವು ನನಗೆ ಒಪ್ಪಿಸಿದಾಗ, ಕೇವಲ 100 ಸ್ಟಾರ್ಟಪ್‌ಗಳು ಇದ್ದವು, ಇಂದು ಅವುಗಳ ಸಂಖ್ಯೆ ಲಕ್ಷಗಟ್ಟಲೆ ಇವೆ. ಭಾರತವು ಈಗ ಪೇಟೆಂಟ್ ಫೈಲಿಂಗ್‌ಗಳು ಮತ್ತು ಸಂಶೋಧನಾ ಪ್ರಕಟಣೆಗಳಲ್ಲಿ ದಾಖಲೆಗಳನ್ನು ಮುರಿಯುತ್ತಿದೆ, ನಮ್ಮ ಯುವಕರ ಅಗಾಧ ಪ್ರತಿಭೆ ಮತ್ತು ಶಕ್ತಿ ಪ್ರದರ್ಶಿಸುತ್ತಿದೆ, ಇದು ಇಡೀ ಜಗತ್ತನ್ನೇ ಆಕರ್ಷಿಸಿದ ಸಾಧನೆಯಾಗಿದೆ.

ಸ್ನೇಹಿತರೆ,

ಕಳೆದ 1 ದಶಕದಲ್ಲಿ ಭಾರತ ಸಾಧಿಸಿರುವ ಅಭಿವೃದ್ಧಿಯ ವೇಗಕ್ಕೆ ಇಡೀ ಜಗತ್ತೇ ಬೆರಗಾಗಿದೆ. ಭಾರತಕ್ಕೆ ಭೇಟಿ ನೀಡುವವರು ಆಗಾಗ್ಗೆ ದೇಶದ ಪರಿವರ್ತನೆಗಳ ಬಗ್ಗೆ, ಹೊಸ ನಿರ್ಮಾಣಗಳು ಮತ್ತು ಗಮನಾರ್ಹ ಬದಲಾವಣೆಗಳನ್ನು ಗುರುತಿಸುತ್ತಾರೆ. ಭಾರತವು ಜಿ-20 ಶೃಂಗಸಭೆಯಂತಹ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದಾಗ, ವಿಶ್ವವು ಭಾರತದ ವಿಕಸನಶೀಲತೆಯನ್ನು ಗುರುತಿಸಿತು. ಕೇವಲ 10 ವರ್ಷಗಳಲ್ಲಿ ಭಾರತದ ವಿಮಾನ ನಿಲ್ದಾಣಗಳ ಸಂಖ್ಯೆ ಕ್ಷಿಪ್ರ ಗತಿಯವ್ವಿ 2 ಪಟ್ಟು ಹೆಚ್ಚಾಗಿದೆ, 40,000 ಕಿಲೋಮೀಟರ್‌ಗಿಂತಲೂ ಹೆಚ್ಚು ರೈಲ್ವೆ ಮಾರ್ಗಗಳ ವಿದ್ಯುದೀಕರಣ ಕಾರ್ಯವು ಭಾರತದ ನೈಜ ಸಾಮರ್ಥ್ಯಗಳನ್ನು ಮತ್ತಷ್ಟು ಒತ್ತಿಹೇಳುತ್ತಿದೆ. ಇದು ಭಾರತದ ರೂಪಾಂತರ ಅಥವಾ ಪರಿವರ್ತನೆಯು ಜಾಗತಿಕವಾಗಿ ಶಾಶ್ವತವಾದ ಪ್ರಭಾವ ಬೀರುತ್ತಿದೆ.

ಇಂದು ಭಾರತವು ಡಿಜಿಟಲ್ ಪಾವತಿಗಳಲ್ಲಿ ಹೊಸ ಮಾನದಂಡಗಳನ್ನು ಹೊಂದಿಸುತ್ತಿದೆ. ಎಲ್-1 ಪಾಯಿಂಟ್‌ನಿಂದ ಸೂರ್ಯನ ಕಕ್ಷೆಗೆ ಹೋಗಿ, ಸಾಧನೆ ಮಾಡಿದೆ. ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯನ್ನು ನಿರ್ಮಿಸಿದೆ ಮತ್ತು ವಿಶ್ವದ ಅತಿ ಎತ್ತರದ ಪ್ರತಿಮೆ ಸ್ಥಾಪಿಸಿದೆ, ಭಾರತವು ನಿಜವಾಗಿಯೂ ಬದಲಾಗುತ್ತಿದೆ ಎಂಬುದು ಎಲ್ಲಾ ನೋಡುಗರಿಗೂ ಸ್ಪಷ್ಟವಾಗಿದೆ. ಈ ಬದಲಾವಣೆಯು ದೇಶ ಮತ್ತು ವಿದೇಶಗಳಲ್ಲಿ ತನ್ನ 140 ಕೋಟಿ ನಾಗರಿಕರ ಬಲದ ಮೇಲಿನ ಭಾರತದ ನಂಬಿಕೆಯಿಂದ ಪ್ರೇರೇಪಿಸಲ್ಪಟ್ಟಿದೆ. ಭಾರತವು ತನ್ನ ಜನರ ಬಗ್ಗೆ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಬದಲಾಗುವ ಅವರ ಸಾಮೂಹಿಕ ಮಹತ್ವಾಕಾಂಕ್ಷೆಯ ಬಗ್ಗೆ ಹೆಮ್ಮೆಪಡುತ್ತಿದೆ. ಈ ಬದ್ಧತೆಯು ರಾಷ್ಟ್ರದಾದ್ಯಂತ ಪ್ರತಿಯೊಬ್ಬ ರೈತರು, ಪ್ರತಿಯೊಬ್ಬ ಯುವಕರು ಮತ್ತು ಪ್ರತಿಯೊಬ್ಬ ಹಿಂದುಳಿದ ವ್ಯಕ್ತಿಯ ಪರಿಶ್ರಮದ ಪ್ರಯತ್ನಗಳಲ್ಲಿ ಗೋಚರಿಸುತ್ತಿದೆ.

ಇಂದು ನನ್ನ ಸಹ ಭಾರತೀಯರು ಜಗತ್ತಿನ ವಿವಿಧ ಮೂಲೆಗಳಲ್ಲಿ ನೆಲೆಸಿದ್ದಾರೆ. ನಿಮ್ಮಲ್ಲಿ ಪ್ರತಿಯೊಬ್ಬರೂ ನಿಮ್ಮ ತಾಯ್ನಾಡಿನ ಸಾಧನೆಗಳ ಬಗ್ಗೆ ಅಪಾರ ಹೆಮ್ಮೆ ಹೊಂದುತ್ತೀರಿ, ನೀವು ತಲೆಗಳನ್ನು ಎತ್ತಿ ನಿಲ್ಲುತ್ತಿದ್ದೀರಿ. ನಿಮ್ಮ ವಿದೇಶಿ ಸ್ನೇಹಿತರೊಂದಿಗೆ ಭಾರತದ ಬಗ್ಗೆ ಚರ್ಚಿಸುವಾಗ, ನೀವು ಉತ್ಸಾಹದಿಂದ ದೇಶದ ಸಾಧನೆಗಳನ್ನು ವರ್ಣಿಸುತ್ತೀರಿ,  ಅವರು ಸಹ ಗಮನವಿಟ್ಟು ಕೇಳುತ್ತಾರೆ. ನಾನು ನಿಮಗೆ ಸ್ಪಷ್ಟವಾಗಿ ಕೇಳುತ್ತೇನೆ: ನಾನು ಹೇಳುತ್ತಿರುವುದು ನಿಜವೇ? ನಿಮಗೆ ಹೆಮ್ಮೆ ಅನಿಸುತ್ತಿದೆಯೇ? ನಿಮ್ಮ ಬಗ್ಗೆ ಪ್ರಪಂಚದ ಗ್ರಹಿಕೆ ಬದಲಾಗಿದೆಯೇ? ಈ ದೃಢೀಕರಣವು 140 ಕೋಟಿ ಭಾರತೀಯರಿಂದ ನೇರವಾಗಿ ಬರುತ್ತದೆ. ಇಂದು ಎಲ್ಲಾ 140 ಕೋಟಿ ಭಾರತೀಯರು ದೀರ್ಘಕಾಲದ ಸಮಸ್ಯೆಗಳನ್ನು ಪರಿಹರಿಸಲು ಬದ್ಧರಾಗಿದ್ದಾರೆ.

ನನ್ನ ಸ್ನೇಹಿತರೆ, ನಮ್ಮ ರಾಷ್ಟ್ರವು ತನ್ನ ಗುರುತರ ಸವಾಲುಗಳಿಂದ ತಪ್ಪಿಸಿಕೊಳ್ಳುವುದಿಲ್ಲ. ಇಂದು ಎಲ್ಲಾ 140 ಕೋಟಿ ಭಾರತೀಯರು ಪ್ರತಿ ಕ್ಷೇತ್ರದಲ್ಲೂ ಉತ್ತಮ ಸಾಧನೆ ಮಾಡಲು ದಣಿವರಿಯದೆ ತಯಾರಿ ನಡೆಸುತ್ತಿದ್ದಾರೆ. ಕೋವಿಡ್ ಬಿಕ್ಕಟ್ಟಿನಿಂದ ನಾವು ನಮ್ಮ ಆರ್ಥಿಕತೆಯನ್ನು ಹೇಗೆ ಪುನರುಜ್ಜೀವನಗೊಳಿಸಿದ್ದೇವೆ ಎಂಬುದನ್ನು ನೀವು ಸಹ ನೋಡಿದ್ದೀರಿ. ಆದರೆ ಅದನ್ನು ಜಾಗತಿಕವಾಗಿ ಪ್ರಬಲವಾದ ಸ್ಥಾನದಲ್ಲಿ ಇರಿಸಿದ್ದೇವೆ. ನಾವು ಕೇವಲ ಮೂಲಸೌಕರ್ಯ ಕೊರತೆಗಳನ್ನು ಪರಿಹರಿಸುತ್ತಿಲ್ಲ, ನಾವು ಜಾಗತಿಕ ಮಾನದಂಡಗಳನ್ನು ಹೊಂದಿಸುತ್ತಿದ್ದೇವೆ. ಇದು ಆರೋಗ್ಯ ಸೇವೆಗಳನ್ನು ಹೆಚ್ಚಿಸುವ ಬಗ್ಗೆ ಮಾತ್ರವಲ್ಲ, ನಾವು ವಿಶ್ವದ ಅತಿದೊಡ್ಡ ಆರೋಗ್ಯ ಭರವಸೆ ಯೋಜನೆಯಾದ ಆಯುಷ್ಮಾನ್ ಭಾರತ್ ಮೂಲಕ ಪ್ರತಿಯೊಬ್ಬ ಹಿಂದುಳಿದ ವ್ಯಕ್ತಿಗೆ ಉಚಿತ ಚಿಕಿತ್ಸೆಯನ್ನು ಖಾತ್ರಿಪಡಿಸುತ್ತಿದ್ದೇವೆ. ಈ ಯೋಜನೆಯು ವಿಶ್ವಾದ್ಯಂತ ಈ ರೀತಿಯಾಗಿ ದೊಡ್ಡದಾಗಿದೆ. ಇದೆಲ್ಲಾ ಹೇಗೆ ಸಾಧ್ಯ ಗೆಳೆಯರೆ? ಈ ಬದಲಾವಣೆಗೆ ಚಾಲನೆ ನೀಡುವವರು ಯಾರು? ಮತ್ತೊಮ್ಮೆ ನಾನು ಪುನರುಚ್ಚರಿಸುತ್ತೇನೆ, ಇದು ನಮ್ಮ 140 ಕೋಟಿ ನಾಗರಿಕರ ದಣಿವರಿಯದ ಪ್ರಯತ್ನಗಳಾಗಿವೆ. ಸಮರ್ಪಣೆ, ಶ್ರದ್ಧೆ ಮತ್ತು ಅವರ ಕನಸುಗಳು, ನಿರ್ಣಯಗಳು ಮತ್ತು ಯಶಸ್ಸಿನ ಪರಿಶ್ರಮದ ಪ್ರಯತ್ನಗಳೇ ಆಗಿವೆ.

ಸ್ನೇಹಿತರೆ,

ಭಾರತದಲ್ಲಿ ಆಗಿರುವ ಪರಿವರ್ತನೆ ಅಥವಾ ರೂಪಾಂತರವು ಅಲ್ಲಿನ ವ್ಯವಸ್ಥೆಗಳು ಮತ್ತು ಮೂಲಸೌಕರ್ಯಗಳನ್ನು ದಾಟಿ ವಿಸ್ತರಿಸಿದೆ. ಇದು ಪ್ರತಿಯೊಬ್ಬ ನಾಗರಿಕನ, ವಿಶೇಷವಾಗಿ ಯುವಕರ ಆತ್ಮವಿಶ್ವಾಸದಲ್ಲೂ ಸ್ಪಷ್ಟವಾಗಿದೆ. ನಿಮಗೆ ತಿಳಿದಿರುವಂತೆ, ಆತ್ಮವಿಶ್ವಾಸವೇ ಯಶಸ್ಸಿನ ಮೊದಲ ಹೆಜ್ಜೆಯಾಗಿದೆ. 2014ರ ಮೊದಲು, ನಾವು ಹತಾಶೆಯಲ್ಲಿ ಮುಳುಗಿದ್ದೆವು. ಎಲ್ಲೆಡೆ ಹತಾಶೆಯೇ ಆವರಿಸಿತ್ತು. ಆದರೆ, ಇಂದು ರಾಷ್ಟ್ರದಲ್ಲಿ ಆತ್ಮಸ್ಥೈರ್ಯ ತುಂಬಿದೆ. ಆಸ್ಪತ್ರೆಯಲ್ಲಿ ಒಂದೇ ರೀತಿಯ ಕಾಯಿಲೆ ಇರುವ ಇಬ್ಬರು ರೋಗಿಗಳನ್ನು ಪರಿಗಣಿಸಿ, ಅಷ್ಟೇ ಸಮರ್ಥ ವೈದ್ಯರು ಹಾಜರಾಗುತ್ತಾರೆ. ಒಬ್ಬ ರೋಗಿ ಆತ್ಮವಿಶ್ವಾಸ ಹೊರಹಾಕಿದರೆ ಇನ್ನೊಬ್ಬ ಹತಾಶೆಯಿಂದ ಬಳಲುತ್ತಾನೆ. ಆತ್ಮವಿಶ್ವಾಸ ಹೊಂದಿರುವ ರೋಗಿಯು ಶೀಘ್ರವಾಗಿ ಚೇತರಿಸಿಕೊಳ್ಳುತ್ತಾನೆ, ಒಂದೇ ವಾರದಲ್ಲಿ ಆಸ್ಪತ್ರೆ ತೊರೆಯುತ್ತಾನೆ, ಆದರೆ ಹತಾಶೆಯಲ್ಲಿರುವ ರೋಗಿಗೆ ಸಹಾಯದ ಅಗತ್ಯವಿರುತ್ತದೆ. ಇಂದಿನ ಭಾರತವು ಈ ಸ್ವಯಂ-ಭರವಸೆಯನ್ನು ಉದಾಹರಿಸುತ್ತಿದೆ, ಇದೇ ನಮ್ಮ ದೊಡ್ಡ ಆಸ್ತಿಯಾಗಿದೆ.

ನೀವು ಇತ್ತೀಚೆಗೆ ಟಿ-20 ವಿಶ್ವಕಪ್‌ನಲ್ಲಿ ನಮ್ಮ ಭಾರತ ತಂಡದ ವಿಜಯ ಆಚರಿಸಿದ್ದೀರಿ, ನೀವು ಅದನ್ನು ಇಲ್ಲಿಯೇ ಆಚರಿಸಿದ್ದೀರಿ ಎಂಬುದು ನನಗೆ ಖಾತ್ರಿಯಿದೆ. ನೀವು ಮಾಡಿದ್ದೀರಾ? ನೀವು ಹೆಮ್ಮೆಪಡುತ್ತೀರಾ? ವಿಶ್ವಕಪ್‌ ವಿಜಯದ ಕಥೆಯು ನಮ್ಮ ತಂಡ ಪುಟಿದೆದ್ದ ಪ್ರಯಾಣವನ್ನು ಪ್ರತಿಬಿಂಬಿಸುತ್ತಿದೆ. ಭಾರತದ ಇಂದಿನ ಯುವಕರು ಅಂತಿಮ ಚೆಂಡಿನವರೆಗೂ ಸೋಲನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಿದ್ದಾರೆ, ಮಣಿಯಲು ಇಷ್ಟಪಡದವರಿಗೆ ಗೆಲುವಿನ ಕಿರೀಟ ನೀಡುವ ಮನೋಭಾವವನ್ನು ಸಾಕಾರಗೊಳಿಸುತ್ತದೆ. ಈ ವರ್ತನೆ ಕೇವಲ ಕ್ರಿಕೆಟ್‌ನಲ್ಲಿ ಮಾತ್ರವಲ್ಲದೆ, ಎಲ್ಲಾ ಕ್ರೀಡೆಗಳಲ್ಲೂ ಪ್ರತಿಧ್ವನಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ನಮ್ಮ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಐತಿಹಾಸಿಕ ಸಾಧನೆಗಳನ್ನು ಮಾಡಿದ್ದಾರೆ. ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ಗಾಗಿ ಭಾರತದಿಂದ ಅಸಾಧಾರಣ ತಂಡವೊಂದು ಇದೀಗ ಸಜ್ಜಾಗಿದ್ದು, ತಮ್ಮ ಪರಾಕ್ರಮ ಪ್ರದರ್ಶಿಸಲು ಸಿದ್ಧವಾಗಿದೆ. ಭಾರತದ ಯುವಕರಲ್ಲಿನ ಈ ಆತ್ಮವಿಶ್ವಾಸವೇ ನಮ್ಮ ನಿಜವಾದ ಬಂಡವಾಳವಾಗಿದೆ. 21ನೇ ಶತಮಾನದಲ್ಲಿ ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಸಾಮರ್ಥ್ಯವನ್ನು ಈ ಆತ್ಮವಿಶ್ವಾಸ ಹೊಂದಿದೆ.

ಸ್ನೇಹಿತರೆ,

ನೀವು ಚುನಾವಣೆಯ ವಾತಾವರಣ ಗಮನಿಸಿರಬೇಕು. ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಅಪ್‌ಡೇಟ್ ಪಡೆಯಲು ಸುದ್ದಿಗಾಗಿ ಟ್ಯೂನ್ ಮಾಡಿರಬಹುದು. ಯಾರು ಏನು ಹೇಳುತ್ತಾರೆ ಮತ್ತು ಯಾರು ಏನು ಮಾಡುತ್ತಿದ್ದಾರೆ ಎಂದು ನೋಡಿರಬಹುದು.

ಸ್ನೇಹಿತರೆ,

ಕಳೆದ 1 ದಶಕದಲ್ಲಿ ಭಾರತ ಸಾಧಿಸಿದ ಅಭಿವೃದ್ಧಿ ಕೇವಲ ಮಾದರಿ ತುಣುಕು(ಟ್ರೇಲರ್) ಎಂದು ಚುನಾವಣೆ ಸಂದರ್ಭದಲ್ಲಿ ನಾನು ಆಗಾಗ್ಗೆ ಹೇಳುತ್ತಿದ್ದೆ. ಮುಂದಿನ ದಶಕವು ಇನ್ನೂ ವೇಗದ ಬೆಳವಣಿಗೆ ಕಾಣುತ್ತದೆ ಎಂದು ಭರವಸೆ ನೀಡುತ್ತೇನೆ. ಸೆಮಿಕಂಡಕ್ಟರ್‌ಗಳಿಂದ ಹಿಡಿದು ವಿದ್ಯುನ್ಮಾನ ಸರಕುಗಳ ಉತ್ಪಾದನೆವರೆಗೆ, ಹಸಿರು ಹೈಡ್ರೋಜನ್‌ನಿಂದ ಎಲೆಕ್ಟ್ರಿಕ್ ವಾಹನಗಳ ತನಕ ಮತ್ತು ವಿಶ್ವ ದರ್ಜೆಯ ಮೂಲಸೌಕರ್ಯ ರೂಪಿಸುವವವರೆಗೆ ಭಾರತದ ಹೆಚ್ಚಿನ ವೇಗವು ಜಾಗತಿಕ ಅಭಿವೃದ್ಧಿಯಲ್ಲಿ ಹೊಸ ಅಧ್ಯಾಯ ಬರೆಯಲಿದೆ. ನಾನು ಇದನ್ನು ಅತ್ಯಂತ ಜವಾಬ್ದಾರಿಯಿಂದ ಹೇಳುತ್ತೇನೆ. ಪ್ರಸ್ತುತ, ಜಾಗತಿಕ ಆರ್ಥಿಕ ಬೆಳವಣಿಗೆಗೆ ಭಾರತವು 15% ಕೊಡುಗೆ ನೀಡುತ್ತಿದೆ, ಮುಂಬರುವ ವರ್ಷಗಳಲ್ಲಿ ಈ ಅಂಕಿಅಂಶವು ಗಮನಾರ್ಹವಾಗಿ ಹೆಚ್ಚಾಗಲಿದೆ. ಜಾಗತಿಕ ಬಡತನ ಮತ್ತು ಹವಾಮಾನ ಬದಲಾವಣೆಯ ಸವಾಲುಗಳನ್ನು ಭಾರತವು ಮುನ್ನಡೆಸುತ್ತಿದೆ, ಏಕೆಂದರೆ ಸವಾಲುಗಳನ್ನು ಎದುರಿಸುವುದು ನನ್ನ ರಕ್ತ(ಡಿಎನ್‌ಎ)ದಲ್ಲೇ ಬೇರೂರಿದೆ.

ಸ್ನೇಹಿತರೆ,

ನಾನು ಸಂತೋಷಗೊಂಡಿದ್ದೇನೆ. ಈ ಸೌಹಾರ್ದತೆಯೇ ಸಾರವಾಗಿದೆ, ಅಲ್ಲಿ ನಾಯಕ ಮತ್ತು ಜನರ ನಡುವೆ ಯಾವುದೇ ಅಂತರವಿಲ್ಲ, ಅಲ್ಲಿ ನಾಯಕನ ಆಲೋಚನೆಗಳು ಜನರೊಂದಿಗೆ ಪ್ರತಿಧ್ವನಿಸುತ್ತಿದೆ. ಈ ಜೋಡಣೆಯು ಪ್ರಚಂಡ ಶಕ್ತಿಯನ್ನು ಉತ್ಪಾದಿಸುತ್ತಿದೆ, ಇದಕ್ಕೆನ್ನು ನಾನೀಗ ಸಾಕ್ಷಿಯಾಗುತ್ತಿದ್ದೇನೆ.

ಸ್ನೇಹಿತರೆ,

ಜಾಗತಿಕ ಸಮೃದ್ಧಿ ಉತ್ತೇಜಿಸಲು ಭಾರತ ಮತ್ತು ರಷ್ಯಾ ನಿಕಟವಾಗಿ ಸಹಯೋಗ ಹೊಂದುತ್ತಿರುವುದು ನನಗೆ ಸಂತೋಷ ತಂದಿದೆ. ಇಲ್ಲಿ ಇರುವ ಪ್ರತಿಯೊಬ್ಬರೂ ನಮ್ಮ ರಾಷ್ಟ್ರಗಳ ನಡುವಿನ ಸಂಬಂಧವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ, ನಿಮ್ಮ ಕಠಿಣ ಪರಿಶ್ರಮ ಮತ್ತು ಸಮಗ್ರತೆಯ ಮೂಲಕ ರಷ್ಯಾ ಸಮಾಜಕ್ಕೆ ಕೊಡುಗೆ ನೀಡುತ್ತಿದ್ದೀರಿ.

ಸ್ನೇಹಿತರೆ,

ನಾನು ಭಾರತ ಮತ್ತು ರಷ್ಯಾ ನಡುವಿನ ವಿಶೇಷ ಬಾಂಧವ್ಯದ ಅಭಿಮಾನಿಯಾಗಿದ್ದೆ. ರಷ್ಯಾ ಎಂಬ ಪದವನ್ನು ನಾವು ಕೇಳಿದಾಗ, ಪ್ರತಿಯೊಬ್ಬ ಭಾರತೀಯನು ತಕ್ಷಣ ಸಂತೋಷ ಮತ್ತು ದುಃಖದಲ್ಲಿ ನಮ್ಮ ಸಂಗಾತಿಗಳ ಬಗ್ಗೆ ಯೋಚಿಸುತ್ತಾನೆ, ನಮ್ಮ ವಿಶ್ವಾಸಾರ್ಹ ಸ್ನೇಹಿತ. ನಮ್ಮ ರಷ್ಯನ್ ಸ್ನೇಹಿತರು ಇದನ್ನು "ದೃಜ್ಬಾ" ಎಂದು ಕರೆಯುತ್ತಾರೆ, ಹಿಂದಿಯಲ್ಲಿ ನಾವು ಅದನ್ನು 'ದೋಸ್ತಿ'(ಸ್ನೇಹ) ಎಂದು ಕರೆಯುತ್ತೇವೆ. ರಷ್ಯಾದಲ್ಲಿ ಕೊರೆಯುವ ಚಳಿಗಾಲದ ಹೊರತಾಗಿಯೂ, ಭಾರತ-ರಷ್ಯಾ ಸ್ನೇಹದ ಉಷ್ಣತೆಯು ಯಾವಾಗಲೂ ಬಲವಾಗಿದೆ ಮತ್ತು ಸಕಾರಾತ್ಮಕವಾಗಿ ಉಳಿದಿದೆ. ಈ ಸಂಬಂಧವು ಪರಸ್ಪರ ನಂಬಿಕೆ ಮತ್ತು ಗೌರವದ ಭದ್ರ ಬುನಾದಿಯಾಗಿ ನಿಂತಿದೆ, ಇಲ್ಲಿ ಪ್ರತಿ ಮನೆಯಲ್ಲೂ ಪ್ರತಿಧ್ವನಿಸುತ್ತಿದ್ದ ಪ್ರಸಿದ್ಧ ಹಾಡಿನಲ್ಲಿ ಪ್ರತಿಧ್ವನಿಸುತ್ತದೆ: "ಸರ್ ಪೆ ಲಾಲ್ ಟೋಪಿ ರಸ್ಸಿ, ಫಿರ್ ಭೀ? ಫಿರ್ ಭಿ? ಫಿರ್ ಭಿ? ದಿಲ್ ಹೈ ಹಿಂದೂಸ್ತಾನಿ...( "ತಲೆಯ ಮೇಲಿನ ಕೆಂಪು ಟೋಪಿ ರಷ್ಯನ್, ಇನ್ನೂ? ಇನ್ನೂ? ಇನ್ನೂ? ನನ್ನ ಹೃದಯ ಹಿಂದೂಸ್ತಾನಿ...") "ಈ ಹಾಡು ಹಳೆಯದಾಗಿದ್ದರೂ, ಅದರ ಭಾವನೆಗಳು ಕಾಲಾತೀತವಾಗಿದೆ. ಹಿಂದೆ ಸಿನಿಮಾ ದಂತಕಥೆಗಳಾದ ಶ್ರೀ ರಾಜ್ ಕಪೂರ್ ಮತ್ತು ಶ್ರೀ. ಮಿಥುನ್ ದಾ ಅವರು ತಮ್ಮ ಅಭಿನಯ ಕಲಾತ್ಮಕತೆಯ ಮೂಲಕ ಭಾರತ ಮತ್ತು ರಷ್ಯಾ ನಡುವಿನ ಸಾಂಸ್ಕೃತಿಕ ಸಂಬಂಧಗಳನ್ನು ಶ್ರೀಮಂತಗೊಳಿಸಿದರು. ನಮ್ಮ ಸಿನಿಮಾ ಈ ಬಾಂಧವ್ಯವನ್ನು ಮತ್ತಷ್ಟು ಗಾಢವಾಗಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ಇಂದು ನೀವು ಪ್ರತಿಯೊಬ್ಬರೂ ಭಾರತ-ರಷ್ಯಾ ಸಂಬಂಧವನ್ನು ಹೊಸ ದಿಗಂತಗಳಿಗೆ ಮುನ್ನಡೆಸುತ್ತಿದ್ದೀರಿ. ನಮ್ಮ ಸ್ನೇಹವು ಹಲವಾರು ಪರೀಕ್ಷೆಗಳನ್ನು ಎದುರಿಸಿ, ಮುಂದೆ ಸಾಗುತ್ತಿದೆ. ಪ್ರತಿ ಬಾರಿಯೂ ಬಲಿಷ್ಠವಾಗಿ ಹೊರಹೊಮ್ಮುತ್ತದೆ.

ಸ್ನೇಹಿತರೆ,

2 ದಶಕಗಳಿಗಿಂತಲೂ ಹೆಚ್ಚು ಕಾಲ ಭಾರತ ಮತ್ತು ರಷ್ಯಾ ನಡುವಿನ ಈ ನಿರಂತರ ಸ್ನೇಹ ವಿಶ್ವಾಸ ಪೋಷಿಸಲು ನನ್ನ ಆತ್ಮೀಯ ಸ್ನೇಹಿತ ಅಧ್ಯಕ್ಷ ಪುಟಿನ್ ಅವರ ನಾಯಕತ್ವವನ್ನು ನಾನು ವಿಶೇಷವಾಗಿ ಶ್ಲಾಘಿಸಲೇಬೇಕು. ಕಳೆದ ದಶಕದಲ್ಲಿ ನಾನು 6 ಬಾರಿ ರಷ್ಯಾಕ್ಕೆ ಭೇಟಿ ನೀಡಿದ್ದೇನೆ. ಇತ್ತೀಚಿನ ವರ್ಷಗಳಲ್ಲಿ 17 ಸಂದರ್ಭಗಳಲ್ಲಿ ಅಧ್ಯಕ್ಷ ಪುಟಿನ್ ಅವರನ್ನು ಭೇಟಿ ಮಾಡಿದ್ದೇನೆ. ಪ್ರತಿ ಸಭೆಯು ನಮ್ಮ ಪರಸ್ಪರ ನಂಬಿಕೆ ಮತ್ತು ಗೌರವವನ್ನು ಬಲಪಡಿಸಿದೆ. ಘರ್ಷಣೆಯ ಸಮಯದಲ್ಲಿ ನಮ್ಮ ವಿದ್ಯಾರ್ಥಿಗಳು ತೊಂದರೆಗಳನ್ನು ಎದುರಿಸಿದಾಗ, ಸುರಕ್ಷಿತವಾಗಿ ಭಾರತಕ್ಕೆ ಹಿಂದಿರುಗಿಸಲು ಅಧ್ಯಕ್ಷ ಪುಟಿನ್ ತಮ್ಮ ಸಹಾಯ ನೀಡಿದರು. ಈ ಬೆಂಬಲಕ್ಕಾಗಿ ನಾನು ಮತ್ತೊಮ್ಮೆ ರಷ್ಯಾದ ಮಹಾಜನತೆಗೆ ಮತ್ತು ನನ್ನ ಸ್ನೇಹಿತ ಅಧ್ಯಕ್ಷ ಪುಟಿನ್ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ.

ಸ್ನೇಹಿತರೆ,

ಇಂದು ನಮ್ಮ ಯುವಕರಲ್ಲಿ ಹೆಚ್ಚಿನ ಸಂಖ್ಯೆಯವರು ಅಧ್ಯಯನಕ್ಕಾಗಿ ರಷ್ಯಾಕ್ಕೆ ಬರುತ್ತಾರೆ. ಪ್ರತಿ ಪ್ರದೇಶದ ಹಬ್ಬಗಳು, ಪಾಕಪದ್ಧತಿ, ಭಾಷೆಗಳು, ಹಾಡುಗಳು ಮತ್ತು ಸಂಗೀತದ ವೈವಿಧ್ಯತೆಯನ್ನು ಸಂರಕ್ಷಿಸುವ ವಿವಿಧ ಭಾರತೀಯ ರಾಜ್ಯಗಳನ್ನು ಪ್ರತಿನಿಧಿಸುವ ಸಂಘಗಳು ಇಲ್ಲಿವೆ ಎಂಬುದು ನನಗೆ ತಿಳಿದುಬಂದಿದೆ. ನೀವು ಇಲ್ಲಿ ಹೋಳಿಯಿಂದ ದೀಪಾವಳಿಯವರೆಗೆ ಪ್ರತಿ ಹಬ್ಬವನ್ನು ಬಹಳ ಉತ್ಸಾಹದಿಂದ ಆಚರಿಸುತ್ತೀರಿ. ಭಾರತದ ಸ್ವಾತಂತ್ರ್ಯ ದಿನವನ್ನು ಸಹ ಉತ್ಸಾಹದಿಂದ ಆಚರಿಸಲಾಗಿದ. ಮುಂಬರುವ ಆಗಸ್ಟ್ 15ರಂದು ಈ ವರ್ಷದ ಆಚರಣೆ ಇನ್ನಷ್ಟು ಅದ್ಭುತವಾಗಿರಲಿ ಎಂದು ನಾನು ನಿರೀಕ್ಷಿಸುತ್ತೇನೆ. ಕಳೆದ ತಿಂಗಳು ಇಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಈ ಸಂಭ್ರಮಾಚರಣೆಗಳಲ್ಲಿ ನಮ್ಮ ರಷ್ಯಾ ಸ್ನೇಹಿತರು ಸಮಾನ ಉತ್ಸಾಹದಿಂದ ನಿಮ್ಮೊಂದಿಗೆ ಸೇರಿಕೊಳ್ಳುವುದನ್ನು ನೋಡುವುದು ನನಗೆ ಸಂತಸಕರ ಸಂಗತಿಯಾಗಿದೆ. ಈ ಜನರಿಂದ-ಜನರ ಸಂಪರ್ಕವು ಸರ್ಕಾರದ ಉಪಕ್ರಮಗಳನ್ನು ಮೀರಿದ್ದಾಗಿದೆ, ಇದು ನಿಜಕ್ಕೂ ಒಂದು ದೈತ್ಯ ಶಕ್ತಿಯಾಗಿದೆ.

ಸ್ನೇಹಿತರೆ,

ಈ ಸಕಾರಾತ್ಮಕ ವಾತಾವರಣದ ನಡುವೆ, ನಿಮ್ಮೊಂದಿಗೆ ಮತ್ತೊಂದು ಒಳ್ಳೆಯ ಸುದ್ದಿ ಹಂಚಿಕೊಳ್ಳಲು ನನಗೆ ಸಂತೋಷ ಪಡುತ್ತೇನೆ, ಅದೇನು ಎಂದು ನಿಮಗೆ ಆಶ್ಚರ್ಯವಾಗಬಹುದು. ಕಜಾನ್ ಮತ್ತು ಯೆಕಟೆರಿನ್‌ಬರ್ಗ್‌ನಲ್ಲಿ 2 ಹೊಸ ದೂತವಾಸ ಕಚೇರಿ(ಕಾನ್ಸುಲೇಟ್‌)ಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಈ ಹಂತವು ಸುಲಭವಾದ ಪ್ರಯಾಣವನ್ನು ಸುಗಮಗೊಳಿಸುತ್ತದೆ, ನಮ್ಮ ರಾಷ್ಟ್ರಗಳ ನಡುವೆ ವ್ಯಾಪಾರ ಅವಕಾಶಗಳನ್ನು ಉತ್ತೇಜಿಸುತ್ತದೆ.

ಸ್ನೇಹಿತರೆ,

ನಮ್ಮ ದ್ವಿಪಕ್ಷೀಯ ಸಂಬಂಧಗಳ ಸಂಕೇತವೆಂದರೆ, ಅಸ್ಟ್ರಾಖಾನ್‌ನಲ್ಲಿರುವ ಇಂಡಿಯಾ ಹೌಸ್, ಅಲ್ಲಿ ಗುಜರಾತ್‌ನ ವ್ಯಾಪಾರಿಗಳು 17ನೇ ಶತಮಾನದಲ್ಲೇ ನೆಲೆಸಿದರು. ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯ ಆರಂಭದಲ್ಲಿ ಅಲ್ಲಿಗೆ ಭೇಟಿ ನೀಡಿದ್ದೆ. 2 ವರ್ಷಗಳ ಹಿಂದೆ, ಮುಂಬೈ ಮತ್ತು ಅಸ್ಟ್ರಾಖಾನ್ ಬಂದರು ನಗರಗಳನ್ನು ಸಂಪರ್ಕಿಸುವ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್‌ನಿಂದ ಅಸ್ಟ್ರಾಖಾನ್ ತನ್ನ ಮೊದಲ ವಾಣಿಜ್ಯ ಸಂಪರ್ಕವನ್ನು ಪಡೆದುಕೊಂಡಿತು. ಪ್ರಸ್ತುತ, ಚೆನ್ನೈ-ವ್ಲಾಡಿವೋಸ್ಟಾಕ್ ಈಸ್ಟರ್ನ್ ಮ್ಯಾರಿಟೈಮ್ ಕಾರಿಡಾರ್‌ ನಿರ್ಮಿಸಲು ಪ್ರಯತ್ನಗಳು ನಡೆಯುತ್ತಿವೆ. ನಮ್ಮ ಎರಡೂ ರಾಷ್ಟ್ರಗಳು ನಾಗರಿಕತೆಯ ಗಂಗಾ-ವೋಲ್ಗಾ ಸಂವಾದದ ಮೂಲಕ ಪರಸ್ಪರ ಮರುಶೋಧನೆಯಲ್ಲಿ ತೊಡಗಿವೆ.

ಸ್ನೇಹಿತರೆ,

2015ರಲ್ಲಿ ಇಲ್ಲಿಗೆ ಭೇಟಿ ನೀಡಿದಾಗ 21ನೇ ಶತಮಾನ ಭಾರತದ್ದಾಗಲಿದೆ ಎಂದು ಹೇಳಿದ್ದೆ. ನಾನು ಅದನ್ನು ಅಂದು ಪ್ರತಿಪಾದಿಸಿದೆ, ಮತ್ತು ಇಂದು ಇಡೀ ಜಗತ್ತೇ ಈ ಭಾವನೆಯನ್ನು ಪ್ರತಿಧ್ವನಿಸುತ್ತಿದೆ. ಈ ವಿಷಯದ ಬಗ್ಗೆ ಜಾಗತಿಕ ತಜ್ಞರಲ್ಲಿ ಈಗ ಸರ್ವಾನುಮತದ ಒಪ್ಪಂದವಿದೆ. 21ನೇ ಶತಮಾನ ಭಾರತದ್ದು ಎಂದು ಎಲ್ಲರೂ ದೃಢಪಡಿಸುತ್ತಿದ್ದಾರೆ. ಇಂದು ಜಾಗತಿಕ ಒಡಹುಟ್ಟಿದವನಾಗಿ, ಭಾರತವು ಜಗತ್ತಿನಲ್ಲಿ ಹೊಸ ಆತ್ಮವಿಶ್ವಾಸ ತುಂಬುತ್ತಿದೆ. ಭಾರತದ ಬೆಳೆಯುತ್ತಿರುವ ಸಾಮರ್ಥ್ಯಗಳು ವಿಶ್ವಕ್ಕೆ ಸ್ಥಿರತೆ ಮತ್ತು ಸಮೃದ್ಧಿಯ ಭರವಸೆಯನ್ನು ನೀಡುತ್ತವೆ. ಉದಯೋನ್ಮುಖ ಬಹುಧ್ರುವೀಯ ವಿಶ್ವ ಕ್ರಮದಲ್ಲಿ ಭಾರತವು ಸದೃಢವಾದ ಆಧಾರಸ್ತಂಭವೆಂದು ಗುರುತಿಸಲ್ಪಟ್ಟಿದೆ. ಭಾರತವು ಶಾಂತಿ, ಸಂವಾದ ಮತ್ತು ರಾಜತಾಂತ್ರಿಕತೆಯನ್ನು ಪ್ರತಿಪಾದಿಸಿದಾಗ, ಜಗತ್ತು ಗಮನ ಹರಿಸುತ್ತದೆ. ಬಿಕ್ಕಟ್ಟಿನ ಸಮಯದಲ್ಲಿ, ಭಾರತವು ಸಹಾಯ ಮೊದಲಿಗನಾಗಿ ಜಾಗತಿಕ ನಿರೀಕ್ಷೆಗಳನ್ನು ಪೂರೈಸಲು ಬದ್ಧವಾಗಿದೆ. ದೀರ್ಘಕಾಲದವರೆಗೆ, ಪ್ರಪಂಚವು ಪ್ರಭಾವ-ಚಾಲಿತ ಜಾಗತಿಕ ಕ್ರಮಕ್ಕೆ ಸಾಕ್ಷಿಯಾಗಿದೆ. ಇಂದಿನ ಪ್ರಪಂಚವು ಸಂಗಮವನ್ನು ಬಯಸುತ್ತಿದೆಯೇ ಹೊರತು ಪ್ರಭಾವವನ್ನು ಅಲ್ಲ. ಕೂಟಗಳು ಮತ್ತು ಸಂಗಮಗಳನ್ನು ಗೌರವಿಸುವ ರಾಷ್ಟ್ರವಾದ ಭಾರತಕ್ಕಿಂತ ಉತ್ತಮವಾಗಿ ಇದನ್ನು ಯಾರು ಗ್ರಹಿಸಬಲ್ಲರು ಹೇಳಿ?

ಸ್ನೇಹಿತರೆ,

ನೀವೆಲ್ಲರೂ ರಷ್ಯಾದಲ್ಲಿ ಭಾರತದ ಬ್ರಾಂಡ್ ಅಂಬಾಸಿಡರ್‌(ರಾಯಭಾರಿ)ಗಳಾಗಿ ಸೇವೆ ಸಲ್ಲಿಸುತ್ತೀರಿ. ಮಿಷನ್‌ನಲ್ಲಿರುವವರು 'ರಾಜ್‌ದೂತ್‌ಗಳು'(ರಾಯಭಾರಿಗಳು) ಮತ್ತು ಮಿಷನ್‌ನ ಹೊರಗಿರುವವರು 'ರಾಷ್ಟ್ರದೂತರು'(ರಾಯಭಾರಿಗಲು ಸಹ). ರಷ್ಯಾ ಮತ್ತು ಭಾರತದ ನಡುವಿನ ಸಂಬಂಧ ಬಲಪಡಿಸುವಲ್ಲಿ ನಿಮ್ಮ ಪ್ರಯತ್ನಗಳೇ ಅತಿ ಪ್ರಮುಖವಾಗಿವೆ.

ಸ್ನೇಹಿತರೆ,

ಭಾರತದಲ್ಲಿ 60 ವರ್ಷಗಳ ನಂತರ ಸತತ 3ನೇ ಅವಧಿಗೆ ಸರ್ಕಾರವೊಂದು ಆಯ್ಕೆಯಾಗಿರುವುದು ಗಮನಾರ್ಹ. ಆದಾಗ್ಯೂ, ಈ ಚುನಾವಣೆಗಳ ಸಮಯದಲ್ಲಿ, ಎಲ್ಲಾ ಗಮನ, ಎಲ್ಲಾ ಕ್ಯಾಮೆರಾಗಳು ಮೋದಿಯ ಮೇಲೆ ಕೇಂದ್ರೀಕೃತವಾಗಿತ್ತು. ಇತರ ಅನೇಕ ಮಹತ್ವದ ಘಟನೆಗಳಿಂದ ಗಮನ ಬೇರೆಡೆಗೆ ತಿರುಗಿತು. ಉದಾಹರಣೆಗೆ, ಈ ಅವಧಿಯಲ್ಲಿ 4 ರಾಜ್ಯಗಳಾದ ಅರುಣಾಚಲ ಪ್ರದೇಶ, ಸಿಕ್ಕಿಂ, ಆಂಧ್ರ ಪ್ರದೇಶ ಮತ್ತು ಒಡಿಶಾ ಇಲ್ಲಿ ಎನ್‌ಡಿಎ ಸ್ಪಷ್ಟ  ಬಹುಮತದೊಂದಿಗೆ ಗೆದ್ದಿವೆ. ಪ್ರಸ್ತುತ, ಮಹಾಪ್ರಭು ಜಗನ್ನಾಥ ಜೀ ಅವರ ಮಂಗಳಕರ ಯಾತ್ರೆ ನಡೆಯುತ್ತಿದೆ - ಜೈ ಜಗನ್ನಾಥ. ಒಡಿಶಾ ಗಮನಾರ್ಹ ಬದಲಾವಣೆಗೆ ಸಾಕ್ಷಿಯಾಗಿದೆ, ಅದಕ್ಕಾಗಿಯೇ ನಾನು ಇಂದು ನಿಮ್ಮ ನಡುವೆ ಒರಿಯಾ ಸ್ಕಾರ್ಫ್ ಧರಿಸಿದ್ದೇನೆ.

ಸ್ನೇಹಿತರೆ,

ಮಹಾಪ್ರಭು ಜಗನ್ನಾಥನ ಆಶೀರ್ವಾದವು ನಿಮ್ಮೆಲ್ಲರ ಮೇಲಿರಲಿ, ಉತ್ತಮ ಆರೋಗ್ಯ ಮತ್ತು ಸಮೃದ್ಧಿ ನಿಮ್ಮದಾಗಲಿ. ಈ ಹೃತ್ಪೂರ್ವಕ ಹಾರೈಕೆಯೊಂದಿಗೆ, ನಿಮ್ಮಲ್ಲಿ ಪ್ರತಿಯೊಬ್ಬರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು! ಇದು ಶಾಶ್ವತ ಪ್ರೀತಿಯ ಕಥೆ. ಸ್ನೇಹಿತರೆ. ಇದು ದಿನದಿಂದ ದಿನಕ್ಕೆ ಪ್ರವರ್ಧಮಾನಕ್ಕೆ ಬರುತ್ತಲೇ ಇರುತ್ತದೆ, ಆಕಾಂಕ್ಷೆಗಳನ್ನು ಬದ್ಧತೆಗಳಾಗಿ ಪರಿವರ್ತಿಸುತ್ತದೆ, ನಮ್ಮ ಪರಿಶ್ರಮದ ಪ್ರಯತ್ನದಿಂದ ಪ್ರತಿಯೊಂದು ಗುರಿಯೂ ಸಾಧಿಸಲ್ಪಡುತ್ತದೆ ಎಂದು ನೆನಪಿಸುತ್ತಾ, ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ನನ್ನ ಗಾಢವಾದ ಮೆಚ್ಚುಗೆಯನ್ನು ತಿಳಿಸುತ್ತೇನೆ. ನನ್ನೊಂದಿಗೆ ನೀವೆಲ್ಲರೂ ಹೇಳಿ -

ಭಾರತ್ ಮಾತಾ ಕೀ ಜೈ!

ಭಾರತ್ ಮಾತಾ ಕೀ ಜೈ!

ಭಾರತ್ ಮಾತಾ ಕೀ ಜೈ!

ವಂದೇ ಮಾತರಂ!

ವಂದೇ ಮಾತರಂ!

ವಂದೇ ಮಾತರಂ!

ವಂದೇ ಮಾತರಂ!

ವಂದೇ ಮಾತರಂ!

ವಂದೇ ಮಾತರಂ!

ವಂದೇ ಮಾತರಂ!

ತುಂಬು ಧನ್ಯವಾದಗಳು!

 

ಹಕ್ಕು ನಿರಾಕರಣೆ: ಪ್ರಧಾನ ಮಂತ್ರಿ ಅವರ ಭಾಷಣದ ಅಂದಾಜು ಇಂಗ್ಲೀಷ್ ಅನುವಾದದ ಕನ್ನಡ ರೂಪಾಂತರ ಇದಾಗಿದೆ. ಪ್ರಧಾನಿ ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

 

*****

 



(Release ID: 2032277) Visitor Counter : 19