ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಮತ್ತು ಮಂತ್ರಿಮಂಡಲದ ಪ್ರಮಾಣವಚನ ಸಮಾರಂಭದಲ್ಲಿ ಭಾರತದ ನೆರೆಹೊರೆ ಮತ್ತು ಹಿಂದೂ ಮಹಾಸಾಗರ ಪ್ರದೇಶದ ನಾಯಕರು ಭಾಗಿ

Posted On: 09 JUN 2024 11:50PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಮಂತ್ರಿಮಂಡಲದ ಪ್ರಮಾಣವಚನ ಸ್ವೀಕಾರ ಸಮಾರಂಭ ರಾಷ್ಟ್ರಪತಿ ಭವನದಲ್ಲಿ 2024 ಜೂನ್ 9ರಂದು ನಡೆಯಿತು. ಭಾರತದ ನೆರೆಹೊರೆಯ ರಾಷ್ಟ್ರಗಳು ಮತ್ತು ಹಿಂದೂ ಮಹಾಸಾಗರ ಪ್ರದೇಶದ ನಾಯಕರು ಸಮಾರಂಭದಲ್ಲಿ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿದ್ದರು.

ಸಮಾರಂಭದಲ್ಲಿ ಪಾಲ್ಗೊಂಡಿದ್ದ ನಾಯಕರಲ್ಲಿ ಶ್ರೀಲಂಕಾ ಅಧ್ಯಕ್ಷ ಗೌರವಾನ್ವಿತ ಶ್ರೀ ರನಿಲ್ ವಿಕ್ರಮಸಿಂಘೆ, ಮಾಲ್ಡೀವ್ಸ್ ಅಧ್ಯಕ್ಷ ಗೌರವಾನ್ವಿತ ಡಾ. ಮೊಹಮದ್ ಮುಯಿಜ್ಜು, ಸೆಶೆಲ್ಸ್‌ ಉಪಾಧ್ಯಕ್ಷ ಗೌರವಾನ್ವಿತ ಶ್ರೀ ಅಹ್ಮದ್ ಅಫೀಫ್, ಬಾಂಗ್ಲಾದೇಶ ಪ್ರಧಾನಿ ಗೌರವಾನ್ವಿತ ಶೇಖ್ ಹಸೀನಾ, ಮಾರಿಷಸ್ ಪ್ರಧಾನ ಮಂತ್ರಿ ಗೌರವಾನ್ವಿತ ಶ್ರೀ. ಪ್ರವಿಂದ್ ಕುಮಾರ್ ಜುಗ್ನಾಥ್ ದಂಪತಿ, ನೇಪಾಳ ಪ್ರಧಾನಿ ಗೌರವಾನ್ವಿತ ಶ್ರೀ ಪುಷ್ಪ ಕಮಲ್ ದಹಾಲ್ 'ಪ್ರಚಂಡ' ಮತ್ತು ಭೂತಾನ್‌ ಪ್ರಧಾನ ಮಂತ್ರಿ ಗೌರವಾನ್ವಿತ ಶ್ರೀ ತ್ಶೆರಿಂಗ್ ಟೋಬ್ಗೆ ಸೇರಿದ್ದಾರೆ. ಮಾಲ್ಡೀವ್ಸ್, ಬಾಂಗ್ಲಾದೇಶ, ನೇಪಾಳ ಮತ್ತು ಭೂತಾನ್ ನಾಯಕರು ಸಚಿವರೊಂದಿಗೆ ಆಗಮಿಸಿದ್ದರು.

ಪ್ರಮಾಣವಚನ ಸಮಾರಂಭದ ನಂತರ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರಪತಿ ಭವನದಲ್ಲಿ ವಿದೇಶಿ ನಾಯಕರನ್ನು ಭೇಟಿ ಮಾಡಿದರು. ಸತತ 3ನೇ ಬಾರಿಗೆ ಭಾರತದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಕ್ಕಾಗಿ ಹೊರರಾಷ್ಟ್ರಗಳ ನಾಯಕರು ಅವರನ್ನು ಅಭಿನಂದಿಸಿದರು. ಈ ಸಂದರ್ಭವನ್ನು ಅಲಂಕರಿಸಿದ್ದಕ್ಕಾಗಿ ಅವರಿಗೆ ಧನ್ಯವಾದ ಅರ್ಪಿಸಿದ ಪ್ರಧಾನ ಮಂತ್ರಿ, ತನ್ನ ‘ನೆರೆಹೊರೆಗೆ ಮೊದಲು’ ನೀತಿ ಮತ್ತು ‘ಸಾಗರ್ ವಿಷನ್’ಗೆ ಭಾರತ ಹೊಂದಿರುವ ಬದ್ಧತೆಯನ್ನು ಪುನರುಚ್ಚರಿಸಿದರು. 2047ರ ವೇಳೆಗೆ ವೀಕ್ಷಿತ್ ಭಾರತ್ ಗುರಿ ಸಾಧನೆಯ ಧ್ಯೇಯ ಅನುಸರಿಸುವ ಜತೆಗೆ, ತನ್ನ 3ನೇ ಅವಧಿಯಲ್ಲಿ, ಭಾರತವು ನೆರೆಹೊರೆಯ ದೇಶಗಳೊಂದಿಗೆ ನಿಕಟ ಸಂಬಂಧ ಮತ್ತು ಸಹಭಾಗಿತ್ವದಲ್ಲಿ ಈ ಪ್ರದೇಶದ ಶಾಂತಿ, ಪ್ರಗತಿ ಮತ್ತು ಸಮೃದ್ಧಿಗಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಈ ಪ್ರದೇಶದಲ್ಲಿ ಆಳವಾದ ಜನರಿಂದ ಜನರ ಸಂಬಂಧಗಳು ಮತ್ತು ಸಂಪರ್ಕ ಹೊಂದುವುದಾಗಿ ಅವರು ಒತ್ತಿ ಹೇಳಿದರು. ಅಂತರಾಷ್ಟ್ರೀಯ ರಂಗದಲ್ಲಿ ಜಾಗತಿಕ ದಕ್ಷಿಣದ ಧ್ವನಿ ಹೆಚ್ಚಿಸಲು ಭಾರತವು ಮುಂದುವರಿಯುತ್ತದೆ ಎಂದು ಅವರು ಹೇಳಿದರು

ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಆಯೋಜಿಸಿದ್ದ ಔತಣಕೂಟದಲ್ಲಿ ಮುಖಂಡರು ಭಾಗವಹಿಸಿದ್ದರು. ರಾಷ್ಟ್ರಪತಿ ಭವನದಲ್ಲಿ ಗಣ್ಯರನ್ನು ಸ್ವಾಗತಿಸಿದ ದ್ರೌಪದಿ ಮುರ್ಮು, ರಾಷ್ಟ್ರದ ಸೇವೆಯಲ್ಲಿ ಮುಂದುವರಿಯುತ್ತಿರುವ ಪ್ರಧಾನಿ ಮೋದಿ ಅವರಿಗೆ ತಮ್ಮ ಶುಭಾಶಯಗಳನ್ನು ತಿಳಿಸುತ್ತಾ, ಭಾರತದ ಪ್ರಜಾಪ್ರಭುತ್ವದ ಚಟುವಟಿಕೆಯು ದೇಶದ ಜನರಿಗೆ ಹೆಮ್ಮೆಯ ಕ್ಷಣ ಮಾತ್ರವಲ್ಲ, ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದೆ ಎಂದು ಹೇಳಿದರು.

ಪ್ರಧಾನ ಮಂತ್ರಿ ಮತ್ತು ಮಂತ್ರಿಮಂಡಲದ ಪ್ರಮಾಣವಚನ ಸಮಾರಂಭದ ಮಹತ್ವದ ಸಂದರ್ಭದಲ್ಲಿ ಭಾರತದ ನೆರೆಹೊರೆ ರಾಷ್ಟ್ರಗಳು ಮತ್ತು ಹಿಂದೂ ಮಹಾಸಾಗರ ಪ್ರದೇಶದ ನಾಯಕರು ಭಾಗವಹಿಸಿರುವುದು, ಈ ಪ್ರದೇಶದೊಂದಿಗೆ ಭಾರತ ಹೊಂದಿರುವ ಆಳವಾಗಿ ಬೇರೂರಿರುವ ಸ್ನೇಹ ಮತ್ತು ಸಹಕಾರವನ್ನು ಒತ್ತಿಹೇಳುತ್ತದೆ.

*****



(Release ID: 2024013) Visitor Counter : 28