ಪ್ರಧಾನ ಮಂತ್ರಿಯವರ ಕಛೇರಿ

ನ್ಯೂಸ್ 9 ಜಾಗತಿಕ ಶೃಂಗಸಭೆ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ


"ಇಂದು ಭಾರತವು ಬಹುದೊಡ್ಡ ಎತ್ತರಕ್ಕೆ ಜಿಗಿಯಲು ಸಿದ್ಧವಾಗಿದೆ ಎಂದು ಜಗತ್ತು ಭಾವಿಸಿದರೆ, ಅದರ ಹಿಂದೆ 10 ವರ್ಷಗಳ ಭದ್ರ ಬುನಾದಿ ಇದೆ ಎಂದರ್ಥ"

“ಇಂದು 21ನೇ ಶತಮಾನದ ಭಾರತವು ಚಿಕ್ಕದಾಗಿ ಯೋಚಿಸುವುದನ್ನು ನಿಲ್ಲಿಸಿದೆ. ಇಂದು ನಾವು ಮಾಡುತ್ತಿರುವುದು ಅತ್ಯುತ್ತಮ ಮತ್ತು ಅತಿ ದೊಡ್ಡ ಪರಿಕಲ್ಪನೆ"

"ಭಾರತದಲ್ಲಿ ಸರ್ಕಾರ ಮತ್ತು ಆಡಳಿತ ವ್ಯವಸ್ಥೆಯಲ್ಲಿ ನಂಬಿಕೆ ಹೆಚ್ಚಾಗುತ್ತಿದೆ"

"ಸರ್ಕಾರಿ ಕಚೇರಿಗಳು ಇನ್ನು ಮುಂದೆ ಸಮಸ್ಯೆಯಾಗಿಲ್ಲ, ಅವು ದೇಶವಾಸಿಗಳ ಮಿತ್ರರಾಗುತ್ತಿವೆ"

"ನಮ್ಮ ಸರಕಾರ ಹಳ್ಳಿಗಳನ್ನು ಗಮನದಲ್ಲಿಟ್ಟುಕೊಂಡು ಮೂಲಸೌಕರ್ಯಗಳನ್ನು ಸೃಷ್ಟಿಸುತ್ತಿದೆ"

"ಭ್ರಷ್ಟಾಚಾರ ನಿಗ್ರಹಿಸುವ ಮೂಲಕ, ಅಭಿವೃದ್ಧಿಯ ಪ್ರಯೋಜನಗಳನ್ನು ಭಾರತದ ಪ್ರತಿಯೊಂದು ಪ್ರದೇಶಕ್ಕೂ ಸಮಾನವಾಗಿ ವಿತರಿಸಲಾಗುತ್ತಿದೆ ಎಂಬುದನ್ನು ನಾವು ಖಚಿತಪಡಿಸಿದ್ದೇವೆ"

"ನಾವು ಶುದ್ಧ ಆಡಳಿತವನ್ನು ನಂಬುತ್ತೇವೆ, ಕೊರತೆಯ ರಾಜಕೀಯವನ್ನಲ್ಲ"

"ನಮ್ಮ ಸರ್ಕಾರವು ರಾಷ್ಟ್ರದ ಅಭಿವೃದ್ಧಿಯ ಮೊದಲ ತತ್ವವನ್ನು ಪ್ರಮುಖವಾಗಿ ಇಟ್ಟುಕೊಂಡು ಮುನ್ನಡೆಯುತ್ತಿದೆ"

"ನಾವು 21 ನೇ ಶತಮಾನದ ಭಾರತವನ್ನು ಅದರ ಮುಂಬರುವ ದಶಕಗಳಿಗೆ ಇಂದೇ ಸಿದ್ಧಪಡಿಸಬೇಕಾಗಿದೆ"

"ಅಭಿವೃದ್ಧಿ ಹೊಂದಿದ ಭಾರತವೇ ಭವಿಷ್ಯವಾಗಿದೆ"

Posted On: 26 FEB 2024 9:34PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿಂದು ನ್ಯೂಸ್ 9 ಜಾಗತಿಕ ಶೃಂಗಸಭೆ ಉದ್ದೇಶಿಸಿ ಭಾಷಣ ಮಾಡಿದರು. 'ಭಾರತ: ಬೃಹತ್ ಎತ್ತರಕ್ಕೆ ಜಿಗಿಯಲು ಸಿದ್ಧವಾಗಿದೆ' ಎಂಬುದು ಶೃಂಗಸಭೆಯ ವಿಷಯವಾಗಿದೆ.

ಟಿವಿ 9 ವರದಿ ಮಾಡುವ ತಂಡವು ಭಾರತದ ವೈವಿಧ್ಯತೆಯನ್ನು ಪ್ರತಿನಿಧಿಸುತ್ತಿದೆ. ಅವರ ಬಹು-ಭಾಷಾ ಸುದ್ದಿ ವೇದಿಕೆಗಳು ಟಿವಿ 9 ಅನ್ನು ಭಾರತದ ರೋಮಾಂಚಕ ಪ್ರಜಾಪ್ರಭುತ್ವದ ಪ್ರತಿನಿಧಿಯನ್ನಾಗಿ ಮಾಡಿದೆ ಎಂದು ಪ್ರಧಾನಿ ಹೇಳಿದರು.

ಶೃಂಗಸಭೆಯ ವಿಷಯದ ಮೇಲೆ ಬೆಳಕು ಚೆಲ್ಲಿದ ಪ್ರಧಾನ ಮಂತ್ರಿ, 'ಭಾರತವು ಬೃಹತ್ ಎತ್ತರಕ್ಕೆ ಜಿಗಿಯಲು ಸಿದ್ಧವಾಗಿದೆ'. ಚೈತನ್ಯ ಮತ್ತು ಉತ್ಸಾಹದಿಂದ ತುಂಬಿದಾಗ ಮಾತ್ರ ದೊಡ್ಡ ಜಿಗಿತ ಕಾಣಲು ಸಾಧ್ಯ. 10 ವರ್ಷಗಳ ಭದ್ರ ಬುನಾದಿಯಿಂದಾಗಿ ಭಾರತದ ಆತ್ಮವಿಶ್ವಾಸ ಮತ್ತು ಆಕಾಂಕ್ಷೆಗಳನ್ನು ಈ ಘೋಷವಾಕ್ಯ ಅಥವಾ ವಸ್ತು ವಿಷಯ (ಥೀಮ್) ಎತ್ತಿ ತೋರಿಸುತ್ತಿದೆ. ಈ 10 ವರ್ಷಗಳಲ್ಲಿ, ಮನಸ್ಥಿತಿ, ಆತ್ಮವಿಶ್ವಾಸ ಮತ್ತು ಉತ್ತಮ ಆಡಳಿತವು ಪರಿವರ್ತನೆಯ ಪ್ರಮುಖ ಅಂಶಗಳಾಗಿವೆ ಎಂದು ಪ್ರಧಾನಿ ಹೇಳಿದರು.

ಭಾರತದ ಭವಿಷ್ಯದಲ್ಲಿ ನಾಗರಿಕರು ಕೇಂದ್ರ ಭಾಗವಾಗಲು ಒತ್ತು ನೀಡಲಾಗಿದೆ. ಸೋಲಿನ ಮನಸ್ಥಿತಿಯು ಗೆಲುವಿಗೆ ಕಾರಣವಾಗುವುದಿಲ್ಲ. ಈ ಬೆಳಕಿನಲ್ಲಿ ಭಾರತವು ಸ್ವೀಕರಿಸಿದ ಮನಸ್ಥಿತಿ ಮತ್ತು ಬಹು ಎತ್ತರಕ್ಕೆ ಜಿಗಿತ ಕಂಡ ಬದಲಾವಣೆಯು ನಂಬಲಾಗದು. ಹಿಂದಿನ ನಾಯಕತ್ವ ಬಹಿರಂಗಪಡಿಸಿದ ನಕಾರಾತ್ಮಕ ದೃಷ್ಟಿಕೋನ ಮತ್ತು ಭ್ರಷ್ಟಾಚಾರ, ಹಗರಣಗಳು, ನೀತಿ ತಾರತಮ್ಯಗಳು ಮತ್ತು ವಂಶ ಪಾರಂಪರ್ಯ ರಾಜಕೀಯವು ರಾಷ್ಟ್ರದ ಅಡಿಪಾಯವನ್ನೇ ಅಲ್ಲಾಡಿಸಿ. ದೇಶದಲ್ಲಿ ಆಗುತ್ತಿರುವ ಗಣನೀಯ ಬದಲಾವಣೆ ಮತ್ತು ಭಾರತವು ವಿಶ್ವದ ಅಗ್ರ 5 ಆರ್ಥಿಕತೆಗಳಿಗೆ ಪ್ರವೇಶಿಸುತ್ತಿರುವುದನ್ನು ಪ್ರಸ್ತಾಪಿಸಿದ ಪ್ರಧಾನಿ, “21ನೇ ಶತಮಾನದ ಭಾರತ ಚಿಕ್ಕದು ಎಂದು ಯಾವುದನ್ನೂ ಭಾವಿಸುವುದಿಲ್ಲ. ನಾವು ಏನೇ ಮಾಡಿದರೂ, ನಾವು ಅತ್ಯುತ್ತಮವಾದದ್ದನ್ನು ಮತ್ತು ದೊಡ್ಡದನ್ನೇ ಮಾಡುತ್ತೇವೆ. ಇದಕ್ಕಾಗಿ ಇಡೀ ಜಗತ್ತೇ ಆಶ್ಚರ್ಯಚಕಿತವಾಗಿದೆ. ಭಾರತದೊಂದಿಗೆ ಸಾಗುವ ಪ್ರಯೋಜನವನ್ನು ನೋಡುತ್ತಿದೆ” ಎಂದು ಪ್ರಧಾನಿ ಹೇಳಿದರು.

2014ರ ಹಿಂದಿನ 10 ವರ್ಷಗಳಿಗೆ ಹೋಲಿಸಿದರೆ ಕಳೆದ 10 ವರ್ಷಗಳ ಸಾಧನೆಗಳು ಶ್ಲಾಘನೀಯ ಎಂದ ಪ್ರಧಾನಿ, ವಿದೇಶಿ ನೇರ ಬಂಡವಾಳ ಎಫ್‌ಡಿಐ 300 ಶತಕೋಟಿ ಡಾಲರ್‌ಗಳಿಂದ 640 ಶತಕೋಟಿ ಡಾಲರ್‌ಗಳಿಗೆ ದಾಖಲೆಯ ಏರಿಕೆ ಕಂಡಿದೆ. ಭಾರತದ ಡಿಜಿಟಲ್ ಕ್ರಾಂತಿ, ಭಾರತದ ಕೋವಿಡ್ ಲಸಿಕೆ ಮೇಲಿನ ನಂಬಿಕೆ ಮತ್ತು ಹೆಚ್ಚುತ್ತಿರುವ ಸಂಖ್ಯೆಯನ್ನು ಪ್ರಸ್ತಾಪಿಸಿದರು. ದೇಶದಲ್ಲಿ ತೆರಿಗೆದಾರರು ಮತ್ತು ಜನರು ಸರ್ಕಾರದ ಮೇಲೆ ಇಟ್ಟಿರುವ ನಂಬಿಕೆಯನ್ನು ಇದು ಸಂಕೇತಿಸುತ್ತಿದೆ. ದೇಶದಲ್ಲಿ ಮ್ಯೂಚುವಲ್ ಫಂಡ್ ಹೂಡಿಕೆಗಳ ಕುರಿತು ಮಾತನಾಡಿದ ಪ್ರಧಾನಿ, 2014ರಲ್ಲಿ ಜನರು 9 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರೆ, 2024ರಲ್ಲಿ 52 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆ ಕಂಡಿದೆ. "ರಾಷ್ಟ್ರವು ಶಕ್ತಿಯಿಂದ ಮುನ್ನಡೆಯುತ್ತಿದೆ ಎಂಬುದನ್ನು ಇದು ನಾಗರಿಕರಿಗೆ ಸಾಬೀತುಪಡಿಸುತ್ತದೆ". "ಜನರ ಸ್ವಯಂ ಮತ್ತು ಸರ್ಕಾರದ ಕಡೆಗೆ ನಂಬಿಕೆಯ ಮಟ್ಟವು ಸಮಾನವಾಗಿದೆ". ಸರ್ಕಾರದ ಕಾರ್ಯ ಸಂಸ್ಕೃತಿ ಮತ್ತು ಆಡಳಿತ ಈ ಬದಲಾವಣೆಗೆ ಕಾರಣ. "ಸರ್ಕಾರಿ ಕಚೇರಿಗಳು ಇನ್ನು ಮುಂದೆ ಸಮಸ್ಯೆಯಾಗಿ ಉಳಿದಿಲ್ಲ, ಆದರೆ ಅವು ದೇಶವಾಸಿಗಳ ಮಿತ್ರರಾಗುತ್ತಿವೆ" ಎಂದು ಪ್ರಧಾನಿ ಹೇಳಿದರು.

ದೇಶದ ಈ ಜಿಗಿತಕ್ಕೆ ಗೇರ್ ಬದಲಾವಣೆ ಅಗತ್ಯವಿದೆ. ಉತ್ತರ ಪ್ರದೇಶದ ಸರಯು ಕಾಲುವೆ ಯೋಜನೆ, ಸರ್ದಾರ್ ಸರೋವರ ಯೋಜನೆ ಮತ್ತು ಮಹಾರಾಷ್ಟ್ರದ ಕೃಷ್ಣಾ ಕೊಯೆನಾ ಪರಿಯೋಜನಾ ಮುಂತಾದ ದೀರ್ಘಾವಧಿಯ ಬಾಕಿ ಇರುವ ಯೋಜನೆಗಳು ದಶಕಗಳಿಂದ ಬಾಕಿ ಉಳಿದಿವೆ. ಅವುಗಳನ್ನು ಸರ್ಕಾರ ಪೂರ್ಣಗೊಳಿಸಿದೆ ಎಂದು ಪ್ರಧಾನಿ ಉದಾಹರಣೆ ನೀಡಿದರು. ಅಟಲ್ ಸುರಂಗ ಮಾರ್ಗಕ್ಕೆ 2002ರಲ್ಲಿ ಶಂಕುಸ್ಥಾಪನೆ ನೆರವೇರಿಸಿ 2014ರ ವರೆಗೂ ಅಪೂರ್ಣವಾಗಿಯೇ ಉಳಿದುಕೊಂಡಿತ್ತು. ಅದು 2020ರಲ್ಲಿ ಉದ್ಘಾಟನೆ ಆಗುವ ಮೂಲಕ ಈಗಿನ ಸರಕಾರವೇ ಕಾಮಗಾರಿ ಪೂರ್ಣಗೊಳಿಸಿದೆ. ಅಸ್ಸಾಂನ ಬೋಗಿಬೀಲ್ ಸೇತುವೆಯ ಪರಿಸ್ಥಿತಿಯೂ ಅದೇ ಆಗಿತ್ತು. 1998ರಲ್ಲಿ ಶಂಕುಸ್ಥಾಪನೆಯಾದರೆ, ಅಂತಿಮವಾಗಿ 20 ವರ್ಷಗಳ ನಂತರ 2018ರಲ್ಲಿ ಪೂರ್ಣಗೊಂಡಿತು. ಪೂರ್ವ ಸಮರ್ಪಿತ ಸರಕು ಕಾರಿಡಾರ್ 2008ರಲ್ಲಿ ಶಂಕುಸ್ಥಾಪನೆ ಆಗಿತ್ತಾದರೂ, ಅದು 15 ವರ್ಷಗಳ ನಂತರ 2023ರಲ್ಲಿ ಪೂರ್ಣಗೊಂಡಿತು. "ಈಗಿನ ಸರ್ಕಾರವು 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಅಂತಹ ನೂರಾರು ಬಾಕಿ ಯೋಜನೆಗಳನ್ನು ಪೂರ್ಣಗೊಳಿಸಿದೆ". ಬೃಹತ್ ಯೋಜನೆಗಳ ನಿಯಮಿತ ಮೇಲ್ವಿಚಾರಣೆ ಮಾಡಿದರೆ ಅದರ ಪರಿಣಾಮಗಳು ಸಕಾರಾತ್ಮಕವಾಗಿರುತ್ತವೆ. ಕಳೆದ 10 ವರ್ಷಗಳಲ್ಲಿ 17 ಲಕ್ಷ ಕೋಟಿ ಮೌಲ್ಯದ ಯೋಜನೆಗಳನ್ನು ಕಾರ್ಯವಿಧಾನದ ಅಡಿ ಪರಿಶೀಲಿಸಲಾಗಿದೆ. ಅಟಲ್ ಸೇತು, ಸಂಸತ್ ಭವನ, ಜಮ್ಮು ಏಮ್ಸ್, ರಾಜ್‌ಕೋಟ್ ಎಐಐಎಂಎಸ್, ಐಐಎಂ ಸಂಬಲ್‌ಪುರ, ತಿರುಚ್ಚಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್, ಐಐಟಿ ಭಿಲಾಯಿ, ಗೋವಾ ವಿಮಾನ ನಿಲ್ದಾಣ, ಲಕ್ಷದ್ವೀಪ, ಬನಾಸ್‌ವರೆಗಿನ ಸಮುದ್ರದೊಳಗಿನ ಕೇಬಲ್‌ಗಳಂತಹ ಕೆಲವು ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲಾಗಿದೆ ಎಂದು ಪ್ರಧಾನಿ ಉದಾಹರಣೆ ನೀಡಿದರು. ವಾರಾಣಸಿಯಲ್ಲಿ ಡೇರಿ, ದ್ವಾರಕಾ ಸುದರ್ಶನ ಸೇತು ಈ ಎಲ್ಲಾ ಯೋಜನೆಗಳ ಶಂಕುಸ್ಥಾಪನೆಯನ್ನು ಪ್ರಧಾನ ಮಂತ್ರಿಯ ನೆರವೇರಿಸಿ, ಅವರೇ ಅವುಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. "ತೆರಿಗೆದಾರರ ಹಣದ ಬಗ್ಗೆ ಇಚ್ಛಾಶಕ್ತಿ ಮತ್ತು ಗೌರವ ಇದ್ದಾಗ ಮಾತ್ರ ರಾಷ್ಟ್ರವು ಮುಂದೆ ಸಾಗುತ್ತದೆ ಮತ್ತು ದೊಡ್ಡ ಬದಲಾವಣೆಗೆ ಸಿದ್ಧವಾಗುತ್ತದೆ" ಎಂದು ಅವರು ಹೇಳಿದರು.

ಕೇವಲ ಒಂದು ವಾರದ ಚಟುವಟಿಕೆಗಳನ್ನು ಪಟ್ಟಿ ಮಾಡುವ ಮೂಲಕ ಪ್ರಧಾನ ಮಂತ್ರಿ ಅವರು ಪ್ರಮಾಣವನ್ನು ವಿವರಿಸಿದರು. ಅವರುಫೆಬ್ರವರಿ 20ರಂದು ಐಐಟಿ, ಐಐಎಂ, ಐಐಐಟಿಗಳಂತಹ ಡಜನ್ ಗಟ್ಟಲೆ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಚಾಲನೆ ನೀಡುವ  ಜತೆಗೆ, ಜಮ್ಮುವಿನಲ್ಲಿ ಬೃಹತ್ ಶೈಕ್ಷಣಿಕ ಉತ್ತೇಜನ ನೀಡಲಾಗಿದೆ. ಫೆಬ್ರವರಿ 24ರಂದು ರಾಜ್‌ಕೋಟ್‌ನಿಂದ 5 ಏಮ್ಸ್ ಗಳನ್ನು ದೇಶಕ್ಕೆ ಸಮರ್ಪಿಸಲಾಗಿದೆ. 500ಕ್ಕೂ ಹೆಚ್ಚು ಅಮೃತ್ ಕೇಂದ್ರಗಳನ್ನು ನವೀಕರಣ ಸೇರಿದಂತೆ 2000ಕ್ಕೂ ಹೆಚ್ಚು ಯೋಜನೆಗಳಿಗೆ ಚಾಲನೆ ನೀಲಾಗಿದೆ. ಮುಂದಿನ 2 ದಿನಗಳಲ್ಲಿ 3 ರಾಜ್ಯಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಈ ಕಾರ್ಯಕ್ರಮಗಳ ಸರಣಿ ಮುಂದುವರಿಯಲಿದೆ. "ನಾವು ಮೊದಲ, ಎರಡನೇ ಮತ್ತು ಮೂರನೇ ಕ್ರಾಂತಿಗಳಲ್ಲಿ ಹಿಂದುಳಿದಿದ್ದೇವೆ, ಈಗ ನಾವು 4ನೇ ಕ್ರಾಂತಿಯಲ್ಲಿ ಜಗತ್ತನ್ನು ಮುನ್ನಡೆಸಬೇಕಾಗಿದೆ" ಎಂದು ಪ್ರಧಾನಿ ಹೇಳಿದರು.

ದೇಶದಲ್ಲಿ ನಡೆಯುತ್ತಿರುವ ಪ್ರಗತಿ ಯೋಜನೆಗಳನ್ನು ಪ್ರಸ್ತಾಪಿಸಿದ ಅವರು, ಪ್ರತಿದಿನ 2 ಹೊಸ ಕಾಲೇಜುಗಳು, ಪ್ರತಿ ವಾರ ಹೊಸ ವಿಶ್ವವಿದ್ಯಾಲಯ, 55 ಪೇಟೆಂಟ್‌ಗಳು ಮತ್ತು 600 ಟ್ರೇಡ್‌ಮಾರ್ಕ್‌ಗಳು, ಪ್ರತಿದಿನ 1.5 ಲಕ್ಷ ಮುದ್ರಾ ಸಾಲಗಳು, 37 ಸ್ಟಾರ್ಟಪ್‌ಗಳು, ಪ್ರತಿದಿನ 16 ಸಾವಿರ ಕೋಟಿ ರೂಪಾಯಿಗಳ ಯುಪಿಐ ವಹಿವಾಟು, ದಿನಕ್ಕೆ 3 ಹೊಸ ಜನೌಷಧಿ ಕೇಂದ್ರಗಳು ಮುಂತಾದ ಅಂಕಿಅಂಶ ನೀಡಿದರು. ಪ್ರತಿದಿನ 14 ಕಿಮೀ ರಸ್ತೆ ನಿರ್ಮಾಣ, ಪ್ರತಿದಿನ 50 ಸಾವಿರ ಎಲ್‌ಪಿಜಿ ಸಂಪರ್ಕಗಳು, ಪ್ರತಿ ಸೆಕೆಂಡಿಗೆ ಒಂದು ನಲ್ಲಿ ನೀರಿನ ಸಂಪರ್ಕ ಮತ್ತು ಪ್ರತಿದಿನ 75 ಸಾವಿರ ಜನರು ಬಡತನದಿಂದ ಹೊರಬರುತ್ತಿದ್ದಾರೆ.

ದೇಶದ ಬಳಕೆಯ ಮಾದರಿಯ ಇತ್ತೀಚಿನ ವರದಿ ಉಲ್ಲೇಖಿಸಿದ ಪ್ರಧಾನ ಮಂತ್ರಿ, ಬಡತನವು ಇಲ್ಲಿಯವರೆಗಿನ ಅತ್ಯಂತ ಕೆಳಮಟ್ಟಕ್ಕೆ ಇಳಿದಿದ್ದು, ಒಂದಂಕಿಗೆ ಮುಟ್ಟಿದೆ. ಅಂಕಿಅಂಶಗಳ ಪ್ರಕಾರ, ವಿವಿಧ ಸರಕು ಮತ್ತು ಸೇವೆಗಳಿಗೆ ಖರ್ಚು ಮಾಡುವ ಜನರ ಸಾಮರ್ಥ್ಯವು ಹೆಚ್ಚಾಗಿದೆ. ಒಂದು ದಶಕದ ಹಿಂದಿನದಕ್ಕೆ ಹೋಲಿಸಿದರೆ ಬಳಕೆಯ ಪ್ರಮಾಣ 2.5 ಪಟ್ಟು ಹೆಚ್ಚಾಗಿದೆ. “ಕಳೆದ 10 ವರ್ಷಗಳಲ್ಲಿ, ಹಳ್ಳಿಗಳಲ್ಲಿ ಬಳಕೆ ನಗರಗಳಿಗಿಂತ ಹೆಚ್ಚು ವೇಗದಲ್ಲಿ ಹೆಚ್ಚಾಗಿದೆ. ಇದರರ್ಥ ಹಳ್ಳಿಯ ಜನರ ಆರ್ಥಿಕ ಶಕ್ತಿ ಹೆಚ್ಚುತ್ತಿದೆ, ಅವರು ಖರ್ಚು ಮಾಡಲು ಹೆಚ್ಚು ಹಣವನ್ನು ಹೊಂದಿದ್ದಾರೆ ಎಂದು ಅವರು ಹೇಳಿದರು.

ಗ್ರಾಮೀಣ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇದರ ಪರಿಣಾಮವಾಗಿ ಉತ್ತಮ ಸಂಪರ್ಕ, ಹೊಸ ಉದ್ಯೋಗಾವಕಾಶಗಳು ಮತ್ತು ಮಹಿಳೆಯರಿಗೆ ಆದಾಯ ಹೆಚ್ಚಾಗಿದೆ. ಇದರಿಂದ ಗ್ರಾಮೀಣ ಭಾರತ ಸದೃಢವಾಗುತ್ತಿದೆ. "ಭಾರತದಲ್ಲಿ ಮೊದಲ ಬಾರಿಗೆ, ಆಹಾರ ವೆಚ್ಚವು ಒಟ್ಟು ವೆಚ್ಚದ ಶೇಕಡ 50ಕ್ಕಿಂತ ಕಡಿಮೆಯಾಗಿದೆ. ಅದೇನೆಂದರೆ, ಹಿಂದೆ ತನ್ನೆಲ್ಲ ಶಕ್ತಿಯನ್ನು ಆಹಾರ ಸಂಗ್ರಹಣೆಗಾಗಿ ವ್ಯಯಿಸುತ್ತಿದ್ದ ಕುಟುಂಬ ಸದಸ್ಯರು ಇಂದು ಇತರೆ ವಿಷಯಗಳಿಗೆ ಹಣ ವ್ಯಯಿಸಲು ಸಮರ್ಥರಾಗಿದ್ದಾರೆ” ಎಂದು ಪ್ರಧಾನ ಮಂತ್ರಿ ತಿಳಿಸಿದರು.

ಹಿಂದಿನ ಸರ್ಕಾರವು ಅನುಸರಿಸಿದ ಮತ ಬ್ಯಾಂಕ್ ರಾಜಕಾರಣದ ಪ್ರವೃತ್ತಿಯನ್ನು ಎತ್ತಿ ತೋರಿಸಿದ ಪ್ರಧಾನಿ, ಕಳೆದ 10 ವರ್ಷಗಳಲ್ಲಿ ಭಾರತವು ಭ್ರಷ್ಟಾಚಾರ ಕೊನೆಗೊಳಿಸುವ ಮೂಲಕ ಮತ್ತು ಅಭಿವೃದ್ಧಿಯ ಪ್ರಯೋಜನಗಳನ್ನು ಸಮಾನವಾಗಿ ವಿತರಿಸುವ ಮೂಲಕ ಕೊರತೆಯ ಮನಸ್ಥಿತಿಯಿಂದ ಹೊರಬಂದಿದೆ. "ನಾವು ಕೊರತೆಯ ರಾಜಕೀಯದ ಬದಲಿಗೆ ಶುದ್ಧ ಆಡಳಿತ ನಂಬುತ್ತೇವೆ", "ನಾವು ತುಷ್ಟೀಕರಣದ ಬದಲಿಗೆ ಜನರ ಸಂತುಷ್ಟಿಯ (ತೃಪ್ತಿ) ಮಾರ್ಗವನ್ನು ಆರಿಸಿಕೊಂಡಿದ್ದೇವೆ" ಎಂದು ಪ್ರಧಾನಿ ಮೋದಿ ಹೇಳಿದರು. ಇದು ಕಳೆದ ಒಂದು ದಶಕದಿಂದಲೂ ಸರ್ಕಾರದ ಮಂತ್ರವಾಗಿದೆ. "ಇದೇ ಸಬ್ಕಾ ಸಾಥ್ ಸಬ್ಕಾ ವಿಕಾಸ್" ಎಂದ ಪ್ರಧಾನಿ, ಸರ್ಕಾರವು ವೋಟ್ ಬ್ಯಾಂಕ್ ರಾಜಕೀಯವನ್ನು ಕಾರ್ಯಕ್ಷಮತೆಯ ರಾಜಕೀಯವಾಗಿ ಪರಿವರ್ತಿಸಿದೆ. ಮೋದಿ ಕಿ ಗ್ಯಾರಂಟಿ ವಾಹನ ಮನೆ ಮನೆಗೆ ತೆರಳಿ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳನ್ನು ನೀಡುತ್ತಿದೆ. "ಪರಿಪೂರ್ಣತೆ ಒಂದು ಧ್ಯೇಯವಾದಾಗ, ಯಾವುದೇ ರೀತಿಯ ತಾರತಮ್ಯಕ್ಕೆ ಅವಕಾಶವಿಲ್ಲ" ಎಂದು ಪ್ರಧಾನಿ ಮೋದಿ ತಿಳಿಸಿದರು.

ಹಳೆಯ ಸವಾಲುಗಳನ್ನು ಪರಿಹರಿಸಲು ಸರ್ಕಾರ ತೆಗೆದುಕೊಂಡ ನಿರ್ಣಾಯಕ ನಿರ್ಧಾರಗಳನ್ನು ಪ್ರಸ್ತಾಪಿಸಿದ ಅವರು, "ನಮ್ಮ ಸರ್ಕಾರವು ರಾಷ್ಟ್ರದ ಅಭಿವೃದ್ಧಿಯ ಮೊದಲ ತತ್ವವನ್ನು ಪ್ರಮುಖವಾಗಿ ಇಟ್ಟುಕೊಂಡು ಮುನ್ನಡೆಯುತ್ತಿದೆ". 370ನೇ ವಿಧಿಯ ರದ್ದತಿ, ರಾಮಮಂದಿರ ನಿರ್ಮಾಣ, ತ್ರಿವಳಿ ತಲಾಖ್‌ ಅಂತ್ಯ, ನಾರಿಶಕ್ತಿ ವಂದನ್‌ ಅಧಿನಿಯಮ, ಒಂದು ರಾಂಕ್(Rank) ಒಂದು ಪಿಂಚಣಿ ಮತ್ತು ಮೂರು ಸಶಸ್ತ್ರ ಪಡೆಗಳಿಗೆ ಮುಖ್ಯಸ್ಥರ ಹುದ್ದೆಯ ರಚನೆ ಮಾಡಲಾಗಿದೆ. ದೇಶ ಮೊದಲು ಎಂಬ ಚಿಂತನೆಯೊಂದಿಗೆ ಸರ್ಕಾರ ಇಂತಹ ಎಲ್ಲಾ ಅಪೂರ್ಣ ಕಾರ್ಯಗಳನ್ನು ಪೂರ್ಣಗೊಳಿಸಿದೆ ಎಂದು ಹೇಳಿದರು.

21ನೇ ಶತಮಾನದ ಭಾರತವನ್ನು ಸಿದ್ಧಪಡಿಸುವ ಅಗತ್ಯವಿದೆ. ವೇಗವಾಗಿ ಪ್ರಗತಿಯಲ್ಲಿರುವ ಯೋಜನೆಗಳ ಮೇಲೆ ಬೆಳಕು ಚೆಲ್ಲಿದ ಅವರು, "ಬಾಹ್ಯಾಕಾಶದಿಂದ ಸೆಮಿಕಂಡಕ್ಟರ್‌ಗೆ, ಡಿಜಿಟಲ್‌ನಿಂದ ಡ್ರೋನ್‌ಗೆ, ಕೃತಕ ಬುದ್ಧಿಮತ್ತೆಯಿಂದ ಹಿಡಿದು ಶುದ್ಧ ಇಂಧನದವರೆಗೆ, 5-ಜಿ ತಂತ್ರಜ್ಞಾನದಿಂದ ಹಣಕಾಸು ತಂತ್ರಜ್ಞಾನದವರೆಗೆ ಭಾರತ ಇಂದು ವಿಶ್ವದ ಮುಂಚೂಣಿಗೆ ಬಂದು ನಿಂತಿದೆ". ಜಾಗತಿಕ ಡಿಜಿಟಲ್ ಪಾವತಿಯಲ್ಲಿ ಅತಿದೊಡ್ಡ ಶಕ್ತಿಗಳಲ್ಲಿ ಒಂದಾಗಿ ಭಾರತ ಬೆಳೆಯುತ್ತಿರುದೆ. ಹಣಕಾಸು ತಂತ್ರಜ್ಞಾನ ಅಳವಡಿಕೆಯ ದರದಲ್ಲಿ ವೇಗವಾಗಿ ಬೆಳೆಯುತ್ತಿರುವ ದೇಶ, ಚಂದ್ರನ ದಕ್ಷಿಣ ಧ್ರುವದಲ್ಲಿ ರೋವರ್ ಅನ್ನು ಇಳಿಸಿದ ಮೊದಲ ದೇಶ, ಪ್ರಮುಖ ದೇಶಗಳಲ್ಲಿ ಸೌರ ಸ್ಥಾಪಿತ ಸಾಮರ್ಥ್ಯದಲ್ಲಿ ಜಗತ್ತಿನಲ್ಲೇ ಮುಂಚೂಣಿಯಲ್ಲಿದೆ. 5ಜಿ ತಂತ್ರಜ್ಞಾನ ಜಾಲ ವಿಸ್ತರಣೆಯಲ್ಲಿ ಯುರೋಪ್ ಅನ್ನು ಹಿಂದೆ ಹಾಕಿದೆ. ಸೆಮಿಕಂಡಕ್ಟರ್ ವಲಯದಲ್ಲಿ ತ್ವರಿತ ಪ್ರಗತಿ ಮತ್ತು ಹಸಿರು ಹೈಡ್ರೋಜನ್‌ನಂತಹ ಭವಿಷ್ಯದ ಇಂಧನಗಳ ಮೇಲೆ ತ್ವರಿತ ಬೆಳವಣಿಗೆ ಕಾಣುತ್ತಿದೆ ಎಂದರು.

“ಇಂದು ಭಾರತವು ತನ್ನ ಉಜ್ವಲ ಭವಿಷ್ಯದತ್ತ ಶ್ರಮಿಸುತ್ತಿದೆ. ಭಾರತವು ಫ್ಯೂಚರಿಸ್ಟಿಕ್ ಆಗಿದೆ ಎಂದು ಇಂದು ಎಲ್ಲರೂ ಹೇಳುತ್ತಾರೆ - ಭಾರತವೇ ಭವಿಷ್ಯ." ಮುಂದಿನ 5 ವರ್ಷಗಳ ಮಹತ್ವದ ಬಗ್ಗೆಯೂ ಗಮನ ಸೆಳೆದರು. 3ನೇ ಅವಧಿಯಲ್ಲಿ ಬಿಜೆಪಿ ಸರ್ಕಾರವು ಭಾರತದ ಸಾಮರ್ಥ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ನಂಬಿಕೆಯನ್ನು ಅವರು ಪುನರುಚ್ಚರಿಸಿದರು.  ಮುಂಬರುವ 5 ವರ್ಷಗಳು ಪ್ರಗತಿಯ ವರ್ಷಗಳು ಮತ್ತು ವಿಕ್ಷಿತ್ ಭಾರತ್‌ಗೆ ಭಾರತದ ಪ್ರಯಾಣವನ್ನು ಎಲ್ಲರೂ ಪ್ರಶಂಸಿಸಲಿ ಎಂದು ಶುಭ ಹಾರೈಸುತ್ತಾ, ಪ್ರಧಾನ ಮಂತ್ರಿ ಅವರು ತಮ್ಮ ಭಾಷಣ ಮುಕ್ತಾಯಗೊಳಿಸಿದರು.

 

***

 

 

 



(Release ID: 2009794) Visitor Counter : 31