ಪ್ರಧಾನ ಮಂತ್ರಿಯವರ ಕಛೇರಿ

ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಿಗಳ ಉತ್ತರ


“ರಾಷ್ಟ್ರಪತಿಗಳ ಭಾಷಣ ಭಾರತದ ಪ್ರಗತಿಗೆ ಹೊಸ ಗತಿ ಮತ್ತು ಮಾಪನದ ಸೂಚನೆ ನೀಡಿದೆ”

“ರಾಜಮನೆತನಗಳ ರಾಜಕೀಯವು ಭಾರತದ ಪ್ರಜಾಪ್ರಭುತ್ವಕ್ಕೆ ಕಳವಳಕಾರಿ ಸಂಗತಿ”

“ಮೂರನೇ ಅವಧಿಯಲ್ಲಿ ಭಾರತ ಮೂರನೇ ಅತಿ ದೊಡ್ಡ ಆರ್ಥಿಕತೆಯ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂಬುದು ಮೋದಿ ಅವರ ವಿಶ್ವಾಸ”

“ಮೊದಲ ಅವಧಿಯಲ್ಲಿ, ಹಿಂದಿನ ಸರ್ಕಾರದ ಲೋಪದೋಷಗಳನ್ನು ಸರಿಪಡಿಸುತ್ತಾ ಬಂದೆವು, ಎರಡನೆಯ ಅವಧಿಯಲ್ಲಿ ನವ ಭಾರತಕ್ಕಾಗಿ ಬುನಾದಿ ಹಾಕಿದೆವು, ಮೂರನೆಯ ಅವಧಿಯಲ್ಲಿ ನಾವು ವಿಕಸಿತ ಭಾರತದ ಅಭಿವೃದ್ಧಿಗೆ ವೇಗ ನೀಡುವೆವು”

“ಉತ್ತರದಿಂದ ದಕ್ಷಿಣಕ್ಕೆ; ಪೂರ್ವದಿಂದ ಪಶ್ಚಿಮಕ್ಕೆ, ಬಾಕಿ ಉಳಿದಿರುವ ಯೋಜನೆಗಳು ಸಮಯಾಧಾರಿತವಾಗಿ ಪೂರ್ಣಗೊಳ್ಳುತ್ತಿರುವುದನ್ನು ನೋಡುತ್ತಿದ್ದಾರೆ”

“ ಅಯೋಧ್ಯೆಯ ರಾಮ ಮಂದಿರವು ಭಾರತದ ಭವ್ಯ ಸಂಸ್ಕೃತಿ ಮತ್ತು ಪರಂಪರೆಗೆ ಶಕ್ತಿ ನೀಡುವುದನ್ನು ಮುಂದುವರಿಸಲಿದೆ”

“ಸರ್ಕಾರದ ಮೂರನೇ ಅವಧಿಯು ಮುಂದಿನ ಒಂದು ಸಾವಿರ ವರ್ಷಗಳಿಗೆ ಭಾರತಕ್ಕೆ ಬುನಾದಿ ಹಾಕಲಿದೆ” 

“ದೇಶದ ಹೆಣ್ಣು ಮಕ್ಕಳಿಗೆ ಬಾಗಿಲು ತೆರೆಯದ ಯಾವುದೇ ವಲಯ ಭಾರತದಲ್ಲಿಲ್ಲ”

“ಭಾರತ ಮಾತೆಯ ಅಭಿವೃದ್ಧಿಗೆ ಮತ್ತು 140 ಕೋಟಿ ನಾಗರಿಕರ ಏಳಿಗೆಗೆ ನಾನು ನಿಮ್ಮ ಬೆಂಬಲ ಕೋರುತ್ತಿದ್ದೇನೆ”

Posted On: 05 FEB 2024 8:24PM by PIB Bengaluru

ಸಂಸತ್ತನ್ನುದ್ದೇಶಿಸಿ ರಾಷ್ಟ್ರಪತಿಗಳು ಮಾಡಿದ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಲೋಕಸಭೆಯಲ್ಲಿಂದು ಉತ್ತರ ನೀಡಿದರು.

ಮಾನ್ಯ ರಾಷ್ಟ್ರಪತಿಗಳು ಸಂಸತ್ತಿನಲ್ಲಿ ಭಾಷಣ ಮಾಡಲು ಹೆಮ್ಮೆ ಮತ್ತು ಗೌರವದ ಸೆಂಗೋಲ್ ನೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿದ್ದು, ಇತರ ಸಂಸತ್ ಸದಸ್ಯರು ಅವರ ನೇತೃತ್ವ ಅನುಸರಿಸಿದ ಸಂದರ್ಭವನ್ನು ಉಲ್ಲೇಖಿಸಿ ಪ್ರಧಾನಮಂತ್ರಿಗಳು ತಮ್ಮ ಮಾತು ಆರಂಭಿಸಿದರು.   ಈ ಪರಂಪರೆಯು ಸದನದ ಘನತೆಯನ್ನು ಹೆಚ್ಚಿಸುತ್ತದೆ ಎಂದು ಒತ್ತಿ ಹೇಳಿದ ಪ್ರಧಾನಿ ಮೋದಿ, 75 ನೇ ಗಣರಾಜ್ಯೋತ್ಸವ, ಹೊಸ ಸಂಸತ್ ಭವನ ಮತ್ತು ಸೆಂಗೋಲ್ ಪ್ರತಿಷ್ಠಾಪನೆಯು ಅತ್ಯಂತ ಪ್ರಮುಖ ಘಟನೆಗಳಾಗಿವೆ ಎಂದು ಹೇಳಿದರು. ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ತಮ್ಮ ಆಲೋಚನೆಗಳು ಮತ್ತು ಸಲಹೆಗಳನ್ನು ನೀಡಿದ ಸದನದ ಸದಸ್ಯರಿಗೆ ಅವರು ಕೃತಜ್ಞತೆ ಸಲ್ಲಿಸಿದರು.

ರಾಷ್ಟ್ರಪತಿಗಳ ಭಾಷಣವು ಭಾರತದ ಪ್ರಗತಿಯ ವೇಗ ಮತ್ತು ಮಾಪನ ಸೂಚಿಸುವ ಸಂಗತಿಗಳನ್ನು ಆಧರಿಸಿದ ಬೃಹತ್ ದಾಖಲೆಯಾಗಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ, ನಾರಿ ಶಕ್ತಿ, ಯುವ ಶಕ್ತಿ, ಬಡವರು ಮತ್ತು ಅನ್ನದಾತರು ಎಂಬ ನಾಲ್ಕು ಸ್ತಂಭಗಳ ಅಭಿವೃದ್ಧಿಯಾದಲ್ಲಿ ದೇಶ ವೇಗವಾಗಿ ಅಭಿವೃದ್ಧಿ ಹೊಂದುತ್ತದೆ ಎಂಬ ಅಂಶದತ್ತ ಬೆಳಕು ಚೆಲ್ಲಿದರು. ಈ ನಾಲ್ಕು ಸ್ತಂಭಗಳನ್ನು ಬಲಪಡಿಸುವ ಮೂಲಕ ವಿಕಸಿತ ಭಾರತ ರೂಪುಗೊಳ್ಳಲು ಸಾಧ್ಯ ಎಂಬುದನ್ನು ರಾಷ್ಟ್ರಪತಿಗಳ ಭಾಷಣ ವಿವರಿಸಿದೆ.

ಪ್ರಬಲ ವಿರೋಧ ಪಕ್ಷದ ಅಗತ್ಯವನ್ನು ಒತ್ತಿ ಹೇಳಿದ ಅವರು, ರಾಜಮನೆತನಗಳ ರಾಜಕೀಯವು ಭಾರತದ ಪ್ರಜಾಪ್ರಭುತ್ವಕ್ಕೆ ಕಳವಳಕಾರಿ ಸಂಗತಿಯಾಗಿದೆ. ರಾಜಮನೆತನದ ರಾಜಕೀಯ ಎಂದರೆ ಕುಟುಂಬವೇ ನಡೆಸುವ ಪಕ್ಷ, ತನ್ನ ಕುಟುಂಬ ಸದಸ್ಯರಿಗೆ ಆದ್ಯತೆ ನೀಡುವ ಮತ್ತು ಕೇವಲ ಕುಟುಂಬ ಸದಸ್ಯರು ಮಾತ್ರ ನಿರ್ಣಯಗಳನ್ನು ಕೈಗೊಳ್ಳುವ  ಪಕ್ಷಗಳು. ರಾಜಕೀಯದ ಕುಟುಂಬವಾಗಿ ಜನರ ಬೆಂಬಲದೊಂದಿಗೆ ರಾಜಕೀಯದಲ್ಲಿ ಸಕ್ರಿಯವಾಗಿರಬೇಕು ಎಂಬ ಅನೇಕರ ಅಭಿಪ್ರಾಯಗಳನ್ನು ಕೇಳದೇ ಕೇವಲ ಕುಟುಂಬ ಸದಸ್ಯರು ಮಾತ್ರ ನಿರ್ಧಾರ ಕೈಗೊಳ್ಳುವಂತಹ ಸ್ಥಿತಿ ಎಂದು ವಿವರಿಸಿದರು. “ದೇಶ ಸೇವೆಗೆ ಸಿದ್ಧರಿರುವ ಯುವಜನತೆಯನ್ನು ನಾನು ರಾಜಕೀಯಕ್ಕೆ ಸ್ವಾಗತಿಸುತ್ತೇನೆ” ಎಂದು ಉದ್ಗರಿಸಿದ ಪ್ರಧಾನಿಗಳು ರಾಜಮನೆತನದ ರಾಜಕೀಯ ಹೇಗೆ ಪ್ರಜಾಪ್ರಭುತ್ವಕ್ಕೆ ಕಂಟಕ ಎಂಬುದರ ಬಗ್ಗೆ ಗಮನಸೆಳೆದರು. ರಾಜಕೀಯ ಸಂಸ್ಕೃತಿ ಹೊರಹೊಮ್ಮುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದ ಅವರು, ದೇಶದ ಅಭಿವೃದ್ಧಿ ಯಾರೊಬ್ಬರಿಗೂ ಸೀಮಿತವಲ್ಲ, ಅದು ಎಲ್ಲ ನಾಗರಿಕರಿಗೂ ಸೇರಿದ್ದು” ಎಂದರು. 

ಪ್ರಸ್ತುತ ವಿಶ್ವದ ಮೆಚ್ಚುಗೆ ಗಳಿಸಿರುವ ಭಾರತದ ಸದೃಢ ಆರ್ಥಿಕತೆಯ ಕುರಿತು ಪ್ರತಿಕ್ರಯಿಸಿದ ಪ್ರಧಾನಿ, "ಪ್ರಸ್ತುತ ಸರ್ಕಾರದ ಮೂರನೇ ಅವಧಿಯಲ್ಲಿ ಭಾರತವು ವಿಶ್ವದ 3 ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂಬುದು ಮೋದಿಯವರ ಭರವಸೆ" ಎಂದರು. ಭಾರತದ ಬಗೆಗಿನ ಪ್ರಪಂಚದ ದೃಷ್ಟಿಕೋನಗಳು ಮತ್ತು ಅಭಿಪ್ರಾಯಗಳನ್ನು ಜಿ-20 ಶೃಂಗಸಭೆಯ ಯಶಸ್ಸು ಸೂಚಿಸುತ್ತದೆ ಎಂದು ಹೇಳಿದರು.

ರಾಷ್ಟ್ರವನ್ನು ಸಮೃದ್ಧಿಯತ್ತ ಕೊಂಡೊಯ್ಯುವಲ್ಲಿ ಸರ್ಕಾರದ ಪಾತ್ರದ ಬಗ್ಗೆ ತಿಳಿಸಲು ಹಿಂದಿನ ಸರ್ಕಾರವು 2014 ರಲ್ಲಿ ಸದನದಲ್ಲಿ ಮಂಡಿಸಿದ ಮಧ್ಯಂತರ ಬಜೆಟ್ ಮತ್ತು ಅಂದಿನ ಹಣಕಾಸು ಸಚಿವರ ಹೇಳಿಕೆಯ ಬಗ್ಗೆ ಪ್ರಧಾನಿ ಗಮನ ಸೆಳೆದರು. ಅಂದಿನ ಹಣಕಾಸು ಸಚಿವರು ತಮ್ಮ ಭಾಷಣದಲ್ಲಿ, ಭಾರತವು ಜಿಡಿಪಿ ಗಾತ್ರಾಧಾರಿತವಾಗಿ 11 ನೇ ಅತಿದೊಡ್ಡ ಆರ್ಥಿಕತೆ ಎಂದು ತಿಳಿಸಿದ್ದರು. ಇಂದು ದೇಶವು 5 ನೇ ಸ್ಥಾನಕ್ಕೆ ತಲುಪಿದೆ. ಅಂದಿನ ಎಫ್‌ಎಂ ಅನ್ನು ಉಲ್ಲೇಖಿಸಿದ ಪ್ರಧಾನಿ, ಮುಂದಿನ 3 ದಶಕಗಳಲ್ಲಿ ಯುಎಸ್ಎ ಮತ್ತು ಚೀನಾದ ನಂತರ ರಾಷ್ಟ್ರವು ವಿಶ್ವದ 3 ನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆಯಲಿದೆ ಎಂದು ಪ್ರಧಾನಿ ಹೇಳಿದರು. ಮುಂದಿನ ಮೂರು ದಶಕಗಳಲ್ಲಿ ಅಮೆರಿಕ ಮತ್ತು ಚೀನಾ ನಂತರ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ಅಂದಿನ ಹಣಕಾಸು ಸಚಿವರು ಹೇಳಿದ್ದು, ಆದರೆ "ಇಂದು" ಈಗಿನ ಸರ್ಕಾರದ ಮೂರನೇ ಅವಧಿಯಲ್ಲಿ ಭಾರತವು ವಿಶ್ವದ 3 ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ನಾನು ರಾಷ್ಟ್ರಕ್ಕೆ ಭರವಸೆ ನೀಡುತ್ತೇನೆ" ಎಂದು ಪ್ರಧಾನಿ ಉದ್ಗರಿಸಿದರು.

ಇಡೀ ಜಗತ್ತು ಸರ್ಕಾರದ ಕೆಲಸದ ವೇಗ ಮತ್ತು ಅದರ ದೊಡ್ಡ ಗುರಿಗಳು ಮತ್ತು ಧೈರ್ಯವನ್ನು ಗಮನಿಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಪ್ರಸ್ತುತ ಸರಕಾರ ಗ್ರಾಮೀಣ ಬಡವರಿಗೆ 4 ಕೋಟಿ ಮನೆ ಹಾಗೂ ನಗರ ಪ್ರದೇಶದ ಬಡವರಿಗೆ 80 ಲಕ್ಷ ಪಕ್ಕಾ ಮನೆಗಳನ್ನು ನಿರ್ಮಿಸಿದೆ ಎಂದು ಅವರು ಸದನಕ್ಕೆ ಮಾಹಿತಿ ನೀಡಿದರು. ಕಳೆದ 10 ವರ್ಷಗಳಲ್ಲಿ, 40,000 ಕಿಮೀ ರೈಲು ಮಾರ್ಗಗಳ ವಿದ್ಯುದ್ದೀಕರಣವನ್ನು ಸಾಧಿಸಲಾಗಿದೆ, 17 ಕೋಟಿ ಹೆಚ್ಚುವರಿ ಅನಿಲ ಸಂಪರ್ಕಗಳನ್ನು ಒದಗಿಸಲಾಗಿದೆ ಮತ್ತು ನೈರ್ಮಲ್ಯ ವ್ಯಾಪ್ತಿಯನ್ನು 40 ಪ್ರತಿಶತದಿಂದ 100 ಪ್ರತಿಶತಕ್ಕೆ ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು. 

ಜನಕಲ್ಯಾಣದ ಬಗ್ಗೆ ಹಿಂದಿನ ಸರ್ಕಾರಗಳ ಅರೆಮನಸ್ಸಿನ ವಿಧಾನ ಮತ್ತು ಭಾರತದ ಜನರಲ್ಲಿ ಅದರ ವಿಶ್ವಾಸದ ಕೊರತೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ ಪ್ರಧಾನಿ, ಭಾರತೀಯ ನಾಗರಿಕರ ಬಲ ಮತ್ತು ಸಾಮರ್ಥ್ಯಗಳಲ್ಲಿ ಈಗಿನ ಸರ್ಕಾರಕ್ಕೆ  ನಂಬಿಕೆಯಿದೆ ಎಂದು ಪುನರುಚ್ಚರಿಸಿದರು. “ಮೊದಲ ಅವಧಿಯಲ್ಲಿ ನಾವು ಹಿಂದಿನ ಸರ್ಕಾರದ ಲೋಪದೋಷಗಳನ್ನು ಸರಿಪಡಿಸಿದೆವು, ಎರಡನೇ ಅವಧಿಯಲ್ಲಿ ನಾವು ನವ ಭಾರತಕ್ಕೆ ಅಡಿಪಾಯ ಹಾಕಿದೆವು, ಇನ್ನು ಮೂರನೇ ಅವಧಿಯಲ್ಲಿ ನಾವು ವಿಕಸತಿ ಭಾರತದ ಅಭಿವೃದ್ಧಿಯನ್ನು ವೇಗಗೊಳಿಸುತ್ತೇವೆ ಎಂದು ತಿಳಿಸಿದರು. ಪ್ರಧಾನಿಗಳು ಮೊದಲ ಅವಧಿಯ ಯೋಜನೆಗಳನ್ನು ಪಟ್ಟಿ ಸ್ವಚ್ಛ ಭಾರತ್, ಉಜ್ವಲಾ, ಆಯುಷ್ಮಾನ್ ಭಾರತ್, ಬೇಟಿ ಬಚಾವೋ-ಬೇಟಿ ಪಢಾವೋ, ಸುಗಮ್ಯ ಭಾರತ್, ಡಿಜಿಟಲ್ ಇಂಡಿಯಾ ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಯನ್ನು ಉಲ್ಲೇಖಿಸಿದರು. ಅದೇ ರೀತಿ, ಎರಡನೇ ಅವಧಿಯಲ್ಲಿ 370 ನೇ ವಿಧಿ ರದ್ದತಿ, ನಾರಿ ಶಕ್ತಿ ವಂದನ್ ಮಸೂದೆ ಅಂಗೀಕಾರ, 40,000 ಕ್ಕೂ ಹೆಚ್ಚು ಬಳಕೆಯಲ್ಲಿಲ್ಲದ ಕಾನೂನುಗಳನ್ನು ರದ್ದುಗೊಳಿಸುವ ಭಾರತೀಯ ನ್ಯಾಯ ಸಂಹಿತೆಯ ಅಳವಡಿಕೆ ಹಾಗೂ ವಂದೇ ಭಾರತ್, ನಮೋ ಭಾರತ್ ರೈಲುಗಳ ಪ್ರಾರಂಭಕ್ಕೆ ರಾಷ್ಟ್ರವು ಸಾಕ್ಷಿಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. 

“ಉತ್ತರದಿಂದ ದಕ್ಷಿಣಕ್ಕೆ, ಪೂರ್ವದಿಂದ ಪಶ್ಚಿಮಕ್ಕೆ, ಬಾಕಿ ಉಳಿದಿರುವ ಯೋಜನೆಗಳು ಸಮಯಾನುಕ್ರಮವಾಗಿ ಪೂರ್ಣಗೊಳ್ಳುತ್ತಿರುವುದನ್ನು ಜನರು ನೋಡುತ್ತಿದ್ದಾರೆ” ಎಂದು ಅವರು ಹೇಳಿದರು. ಪ್ರತಿಯೊಬ್ಬರಿಗೂ ಮೂಲಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರದ ಸಮರ್ಪಣೆ ಮತ್ತು ಸಂಕಲ್ಪವನ್ನು ವಿಕಸಿತ ಭಾರತ ಸಂಕಲ್ಪ ಯಾತ್ರೆಯು ತೋರಿಸಿದೆ ಎಂದು ಅವರು ಹೇಳಿದರು. ರಾಮ ಮಂದಿರದ ಪ್ರತಿಷ್ಠಾಪನೆಯ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಅಯೋಧ್ಯೆಯಲ್ಲಿ ರಾಮ ಮಂದಿರವು ಭಾರತದ ಶ್ರೇಷ್ಠ ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಶಕ್ತಿ ನೀಡುವುದನ್ನು ಮುಂದುವರಿಸುತ್ತದೆ” ಎಂದರು. 

ಪ್ರಸ್ತುತ ಸರ್ಕಾರದ ಮೂರನೇ ಅವಧಿಯು ಪ್ರಮುಖ ನಿರ್ಧಾರಗಳ ಮೇಲೆ ಕೇಂದ್ರೀಕೃತವಾಗಿರುತ್ತದೆ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು. "ಸರ್ಕಾರದ ಮೂರನೇ ಅವಧಿಯು ಮುಂದಿನ 1000 ವರ್ಷಗಳಿಗೆ ದೇಶದ ಅಡಿಪಾಯವನ್ನು ಹಾಕುತ್ತದೆ" ಎಂದು ಪ್ರಧಾನಿ ಟೀಕಿಸಿದರು. ದೇಶದ 140 ಕೋಟಿ ನಾಗರಿಕರಲ್ಲಿನ ಸಾಮರ್ಥ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಕಳೆದ 10 ವರ್ಷಗಳಲ್ಲಿ 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ಹೇಳಿದರು. ಬಡವರಿಗೆ ಸೂಕ್ತ ಸಂಪನ್ಮೂಲ ಮತ್ತು ಸ್ವಾಭಿಮಾನ ಒದಗಿಸಿದರೆ ಬಡತನವನ್ನು ಸೋಲಿಸಬಹುದು ಎಂದು ಅವರು ಪುನರುಚ್ಚರಿಸಿದರು. 50 ಕೋಟಿ ಬಡವರಿಗೆ ಸ್ವಂತ ಬ್ಯಾಂಕ್ ಖಾತೆಗಳು, 4 ಕೋಟಿ ಸ್ವಂತ ಮನೆಗಳು, 11 ಕೋಟಿ ಜನರಿಗೆ ನಲ್ಲಿ ನೀರಿನ ಸಂಪರ್ಕ ಒದಗಿಸಲಾಗಿದೆ. 55 ಕೋಟಿ ಜನರು ಆಯುಷ್ಮಾನ್ ಕಾರ್ಡ್ಗಳನ್ನು ಹೊಂದಿದ್ದಾರೆ ಮತ್ತು 80 ಕೋಟಿ ಜನರು ಉಚಿತ ಆಹಾರ ಧಾನ್ಯಗಳನ್ನು ಪಡೆದಿದ್ದಾರೆ ಎಂದು ಶ್ರೀ ಮೋದಿ ವಿವರ ನೀಡಿದ್ದಾರೆ. "ಒಂದು ಕಾಲದಲ್ಲಿ ಯಾರೂ ಕಾಳಜಿ ಮಾಡದವರ ಬಗ್ಗೆ ಮೋದಿ ಕಾಳಜಿ ಹೊಂದಿದ್ದಾರೆ" ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಈಗ ಪ್ರಧಾನ ಮಂತ್ರಿ ಸ್ವ-ನಿಧಿ ಯೋಜನೆಯಡಿಯಲ್ಲಿ ಬಡ್ಡಿ ರಹಿತ ಸಾಲವನ್ನು ಬೀದಿ ಬದಿ ವ್ಯಾಪಾರಿಗಳು ಪಡೆಯಬಹುದಾಗಿದೆ. ಕುಶಲಕರ್ಮಿಗಳು ಮತ್ತು ಕರಕುಶಲಕರ್ಮಿಗಳಿಗೆ ವಿಶ್ವಕರ್ಮ ಯೋಜನೆ, ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳಿಗೆ ಪ್ರಧಾನಮಂತ್ರಿ ಜನ್ ಮನ್ ಯೋಜನೆ, ಗಡಿ ಪ್ರದೇಶಗಳ ಅಭಿವೃದ್ಧಿಗಾಗಿ ರೋಮಾಂಚಕ ಗ್ರಾಮಗಳ ಯೋಜನೆ, ಸಿರಿಧಾನ್ಯ ಉತ್ಪಾದನೆಗೆ ಒತ್ತು, ವೋಕಲ್ ಫಾರ್ ಲೋಕಲ್ ಮೂಲಕ ಖಾದಿ ವಲಯಕ್ಕೆ ಬಲ ನೀಡಲಾಗಿದೆ ಎಂದು ಅವರು ವಿವರಿಸಿದರು. ಶ್ರೀ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡುವ ಬಗ್ಗೆ ಪ್ರಸ್ತಾಪಿಸಿದ ಅವರು, ಹಿಂದಿನ ಸರ್ಕಾರಗಳು ಮಹಾನ್ ವ್ಯಕ್ತಿಯನ್ನು ಅಗೌರವದಿಂದ ನಡೆಸಿಕೊಂಡಿವೆ ಎಂದು ಟೀಕಿಸಿದರು. 1970 ರ ದಶಕದಲ್ಲಿ ಶ್ರೀ ಠಾಕೂರ್ ಅವರು ಬಿಹಾರದ ಮುಖ್ಯಮಂತ್ರಿಯಾಗಿದ್ದಾಗ ಅವರ ಸರ್ಕಾರವನ್ನು ಉರುಳಿಸಲು ಮಾಡಿದ ಪ್ರಯತ್ನಗಳನ್ನು ಅವರು ನೆನಪು ಮಾಡಿದರು. 

ಭಾರತದ ನಾರಿ ಶಕ್ತಿಯನ್ನು ಸಶಕ್ತಗೊಳಿಸಲು ಸರ್ಕಾರದ ಕೊಡುಗೆಗಳ ಬಗ್ಗೆ ತಿಳಿಸಿದ ಧಾನಮಂತ್ರಿ, “ದೇಶದ ಹೆಣ್ಣುಮಕ್ಕಳಿಗೆ ಅವಕಾಶವಿಲ್ಲದ ಕ್ಷೇತ್ರ ಈಗ ಭಾರತದಲ್ಲಿಲ್ಲ. ನಮ್ಮ ಹೆಣ್ಣು ಮಕ್ಕಳು ಫೈಟರ್ ಜೆಟ್‌ಗಳನ್ನು ಹಾರಿಸುತ್ತಿದ್ದಾರೆ ಮತ್ತು ಗಡಿಗಳನ್ನು ಸುರಕ್ಷಿತವಾಗಿರಿಸುತ್ತಿದ್ದಾರೆ” ಎಂದು ಪ್ರಧಾನಿ ಹೆಮ್ಮೆಯಿಂದ ನುಡಿದರು. 10 ಕೋಟಿಗೂ ಹೆಚ್ಚು ಸದಸ್ಯರನ್ನು ಹೊಂದಿರುವ ಮತ್ತು ಭಾರತದ ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ನೀಡುವ ಮಹಿಳಾ ಸ್ವ-ಸಹಾಯ ಗುಂಪುಗಳ ಸಾಮರ್ಥ್ಯದ ಬಗ್ಗೆ ಅವರು ವಿಶ್ವಾಸ ವ್ಯಕ್ತಪಡಿಸಿದರು. ಮುಂಬರುವ ವರ್ಷಗಳಲ್ಲಿ ದೇಶವು 3 ಕೋಟಿ ಹೆಣ್ಣು ಮಕ್ಕಳು ಲಕ್ಷಾಧಿಪತಿಗಳಾಗಲಿದ್ದಾರೆ ಎಂದು ಪ್ರಧಾನಿ ಮೋದಿ ತಿಳಿಸಿದರು. ಹೆಣ್ಣು ಮಗುವಿನ ಜನನವನ್ನು ಆಚರಿಸುವ ಬಗ್ಗೆ ಜನರು ಯೋಚಿಸುವಂತೆ ಪರಿಸ್ಥಿತಿ ಬದಲಾಗಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ ಅವರು, ಮಹಿಳೆಯರ ಜೀವನವನ್ನು ಸುಲಲಿತಗೊಳಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳೇ ಇದಕ್ಕೆ ಕಾರಣ ಎಂದು ಹೇಳಿದರು.

ರೈತರ ಕಲ್ಯಾಣದ ಬಗ್ಗೆ ಮಾತನಾಡಿದ ಪ್ರಧಾನಿ, ಹಿಂದಿನ ಸರ್ಕಾರಗಳ ಅವಧಿಯಲ್ಲಿ 25,000 ಕೋಟಿ ರೂಪಾಯಿಗಳಷ್ಟಿದ್ದ ವಾರ್ಷಿಕ ಕೃಷಿ ಬಜೆಟ್ ಅನ್ನು ಈಗ 1.25 ಲಕ್ಷ ಕೋಟಿ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ರೈತರಿಗೆ ರೂ.2,80,000 ಕೋಟಿ ನೀಡಲಾಗಿದೆ. ರೂ. 30,000 ಪ್ರೀಮಿಯಂ ನಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೂ.1,50,000 ಕೋಟಿ ಪರಿಹಾರ ಒದಗಿಸಲಾಗಿದೆ ಎಂದು ಹೇಳಿದರು.  ಮೀನುಗಾರಿಕೆ ಮತ್ತು ಪಶುಸಂಗೋಪನೆಗಾಗಿ ಪ್ರತ್ಯೇಕ ಸಚಿವಾಲಯದ ರಚನೆ ಮತ್ತು ಮೀನುಗಾರರು ಮತ್ತು ಹೈನುಗಾರರಿಗೆ ಪಿಎಂ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ಒದಗಿಸಿರುವ ಬಗ್ಗೆ ಪ್ರಸ್ತಾಪಿಸಿದರು. ಪ್ರಾಣಿಗಳ ಜೀವ ಉಳಿಸಲು ಕಾಲು ಮತ್ತು ಬಾಯಿ ರೋಗ ನಿಯಂತ್ರಣಕ್ಕಾಗಿ 50 ಕೋಟಿ ಲಸಿಕೆಗಳ ಬಗ್ಗೆ ಅವರು ಉಲ್ಲೇಖಿಸಿದರು. 

ಭಾರತದ ಯುವಜನತೆಗಾಗಿ ಸೃಷ್ಟಿಸಲಾದ ಅವಕಾಶಗಳ ಬಗ್ಗೆ ಬೆಳಕು ಚೆಲ್ಲುತ್ತಾ ಪ್ರಧಾನಿಯವರು ಸ್ಟಾರ್ಟಪ್ ಯುಗ, ಯುನಿಕಾರ್ನ್, ಡಿಜಿಟಲ್ ಸೃಷ್ಟಿಕರ್ತರ ಹೊರಹೊಮ್ಮುವಿಕೆ ಮತ್ತು ಕೊಡುಗೆ ಆರ್ಥಿಕತೆಯ (ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮೌಲ್ಯಗಳ ಹಂಚಿಕೆಯ ಆರ್ಥಿಕತೆ) ಬಗ್ಗೆ ಮಾತನಾಡಿದರು. ಇಂದು, ಭಾರತವು ವಿಶ್ವದ ಮುಂಚೂಣಿ ಡಿಜಿಟಲ್ ಆರ್ಥಿಕತೆಯಾಗಿದೆ ಮತ್ತು ಇದು ಭಾರತದ ಯುವಕರಿಗೆ ಹಲವಾರು ಹೊಸ ಅವಕಾಶಗಳನ್ನು ನೀಡಬಲ್ಲದಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಅವರು ಭಾರತದಲ್ಲಿ ಮೊಬೈಲ್ ಉತ್ಪಾದನೆ ಮತ್ತು ಅಗ್ಗದ ಡೇಟಾದ ಲಭ್ಯತೆಯ ಬಗ್ಗೆಯೂ ಮಾತನಾಡಿದರು. ಪ್ರವಾಸೋದ್ಯಮ ವಲಯ ಮತ್ತು ವಿಮಾನಯಾನ ವಲಯದಲ್ಲಿ ಭಾರತದ  ಬೆಳವಣಿಗೆಯ ಬಗ್ಗೆ ತಿಳಿಸಿದ ಅವರು, ಭಾರತದ ಯುವಕರಿಗೆ ಉದ್ಯೋಗಾವಕಾಶಗಳು ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸುವ ಸರ್ಕಾರದ ವಿಧಾನದ ಬಗ್ಗೆ ಒತ್ತಿ ಹೇಳಿದರು.

2014ರ ಹಿಂದಿನ 10 ವರ್ಷಗಳಲ್ಲಿ ದೇಶದ ಮೂಲಸೌಕರ್ಯ ಬಜೆಟ್ ರೂ.12 ಲಕ್ಷ ಕೋಟಿಯಷ್ಟಿದ್ದು ಕಳೆದ 10 ವರ್ಷಗಳಲ್ಲಿ ಈ ಪ್ರಮಾಣ ರೂ.44 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ಪ್ರಧಾನಿ ಮೋದಿ ಸದನಕ್ಕೆ ಮಾಹಿತಿ ನೀಡಿದರು. ಸರಿಯಾದ ವ್ಯವಸ್ಥೆಗಳು ಮತ್ತು ಆರ್ಥಿಕ ನೀತಿಗಳನ್ನು ಅಭಿವೃದ್ಧಿಪಡಿಸುವ ಮೂಲಕ ದೇಶವನ್ನು ವಿಶ್ವದ ಸಂಶೋಧನೆ ಮತ್ತು ನಾವಿನ್ಯತೆಯ ಕೇಂದ್ರವನ್ನಾಗಿ ಮಾಡುವತ್ತ ದೇಶದ ಯುವಕರನ್ನು ಸರ್ಕಾರ ಪ್ರೋತ್ಸಾಹಿಸುತ್ತಿದೆ ಎಂದು ಅವರು ತಿಳಿಸಿದರು. ಇಂಧನ ವಲಯದಲ್ಲಿ ರಾಷ್ಟ್ರವನ್ನು ಆತ್ಮನಿರ್ಭರ್ ಮಾಡಲು ಸರ್ಕಾರದ ಪ್ರಯತ್ನಗಳ ಬಗ್ಗೆ ಬೆಳಕು ಚೆಲ್ಲುತ್ತಾ ಪ್ರಧಾನಮಂತ್ರಿ, ಹಸಿರು ಜಲಜನಕ ಮತ್ತು ಸೆಮಿಕಂಡಕ್ಟರ್ ವಲಯಗಳಲ್ಲಿ ಹೂಡಿಕೆಯಲ್ಲಿ ಕೂಡ ಭಾರತವು ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.

ಪ್ರಧಾನಮಂತ್ರಿಯವರು ಬೆಲೆ ಏರಿಕೆಯ ಬಗ್ಗೆ ಪ್ರಸ್ತಾಪಿಸಿ, 1974 ರಲ್ಲಿ 30 ಪ್ರತಿಶತದಷ್ಟು ಹಣದುಬ್ಬರ ದರವಿತ್ತು ಎಂದು ನೆನಪಿಸಿಕೊಂಡರು. ಎರಡು ಯುದ್ಧಗಳು ಮತ್ತು ಕರೋನಾ ಸಾಂಕ್ರಾಮಿಕದ ನಡುವೆ ದೇಶದಲ್ಲಿ ಬೆಲೆ ಏರಿಕೆಯನ್ನು ನಿಯಂತ್ರಣದಲ್ಲಿಟ್ಟ ಈಗಿನ ಸರ್ಕಾರವನ್ನು ಶ್ಲಾಘಿಸಿದರು. ಸದನದಲ್ಲಿ ಚರ್ಚೆಗಳು ದೇಶದ ಹಗರಣಗಳ ಸುತ್ತ ಸುತ್ತುತ್ತಿದ್ದ ಸಂದರ್ಭಗಳನ್ನು ಪ್ರಧಾನಿ ಮೋದಿ ನೆನಪಿಸಿಕೊಂಡರು. ಹಿಂದಿನ ಸರ್ಕಾರಗಳ ನಂತರ ಪಿಎಂಎಲ್ಎ ಅಡಿಯಲ್ಲಿ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಿದ್ದು, ಜಾರಿ ನಿರ್ದೇಶನಾಲಯದ ವಶಪಡಿಸಿಕೊಳ್ಳುವಿಕೆಯು 5,000 ಕೋಟಿ ರೂ.ಗಳಿಂದ 1 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ಅವರು ಉಲ್ಲೇಖಿಸಿದರು. "ವಶಪಡಿಸಿಕೊಂಡ ಎಲ್ಲಾ ಹಣವನ್ನು ಬಡವರ ಕಲ್ಯಾಣಕ್ಕಾಗಿ ಬಳಸಲಾಗಿದೆ", ನೇರ ಲಾಭ ವರ್ಗಾವಣೆ ಮೂಲಕ 30 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಹಣವನ್ನು ಅರ್ಹರಿಗೆ ತಲುಪಿಸಲಾಗಿದೆ” ಎಂದು ಪ್ರಧಾನಿ ಹೇಳಿದರು.

ಭ್ರಷ್ಟಾಚಾರದ ವಿರುದ್ಧ ಕೊನೆಯವರೆಗೂ ಹೋರಾಡುವುದಾಗಿ ಪ್ರಧಾನಿ ಪ್ರತಿಜ್ಞೆ ಮಾಡಿದರು.  "ರಾಷ್ಟ್ರವನ್ನು ಲೂಟಿ ಮಾಡಿದವರು ಅದನ್ನು ವಾಪಸ್ಸು ಮಾಡಬೇಕು" ಎಂದು ಹೇಳಿದರು. ರಾಷ್ಟ್ರದಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡುವ ಸರ್ಕಾರದ ಪ್ರಯತ್ನಗಳನ್ನು ಶ್ಲಾಘಿಸಿದ ಪ್ರಧಾನಿ, ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆಯ ಭಾರತದ ನೀತಿಯನ್ನು ಅನುಸರಿಸಲು ವಿಶ್ವ ಬದ್ಧವಾಗಿದೆ ಎಂದು ಪುನರುಚ್ಚರಿಸಿದರು. ಪ್ರತ್ಯೇಕತಾವಾದದ ಸಿದ್ಧಾಂತವನ್ನು ಖಂಡಿಸುತ್ತಾ, ಭಾರತದ ರಕ್ಷಣಾ ಪಡೆಗಳ ಸಾಮರ್ಥ್ಯದ ಬಗ್ಗೆ ಹೆಮ್ಮೆ ಮತ್ತು ನಂಬಿಕೆಯನ್ನು ವ್ಯಕ್ತಪಡಿಸಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿರುವ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ದೇಶದ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಮುಂದೆ ಬರಬೇಕು ಎಂದು ಪ್ರಧಾನಿ ಮೋದಿ ಸದನದ ಸದಸ್ಯರನ್ನು ಕೋರಿದರು. "ತಾಯಿ ಭಾರತಿಯ ಅಭಿವೃದ್ಧಿಗೆ ಮತ್ತು 140 ಕೋಟಿ ನಾಗರಿಕರ ಅಭ್ಯುದಯಕ್ಕೆ ನಿಮ್ಮ ಸಹಕಾರ ಕೋರುತ್ತೇನೆ” ಎಂದು ಅವರು ತಮ್ಮ ಮಾತು ಮುಗಿಸಿದರು. 

***



(Release ID: 2002924) Visitor Counter : 50