ಪ್ರಧಾನ ಮಂತ್ರಿಯವರ ಕಛೇರಿ

ಶ್ರೀ ರಾಮಲಾಲಾ ಪ್ರಾಣ ಪ್ರತಿಷ್ಠೆಗಾಗಿ 11 ದಿನಗಳ ವಿಶೇಷ ಪೂಜಾ ಆಚರಣೆ ಆರಂಭಿಸಿದ ಪ್ರಧಾನ ಮಂತ್ರಿ 


ಇಂದು ಪಂಚವಟಿ - ನಾಸಿಕ್ ಧಾಮ್ ನಿಂದ ಧಾರ್ಮಿಕ ಕಾರ್ಯ ಆರಂಭ

"ನಾನು ಭಾವನೆಗಳಲ್ಲಿ ಮುಳುಗಿದ್ದೇನೆ! ನನ್ನ ಜೀವನದಲ್ಲಿ ಮೊದಲ ಬಾರಿಗೆ ನಾನು ಅಂತಹ ಭಾವನೆಗಳನ್ನು ಅನುಭವಿಸುತ್ತಿದ್ದೇನೆ”

“ದೇವರು ನನ್ನನ್ನು ಭಾರತದ ಎಲ್ಲ ಜನರನ್ನು ಪ್ರತಿನಿಧಿಸುವ ಸಾಧನವನ್ನಾಗಿ ಮಾಡಿದ್ದಾರೆ. ಇದು ಬಹುದೊಡ್ಡ ಜವಾಬ್ದಾರಿ"

“ಪ್ರಾಣ ಪ್ರತಿಷ್ಠೆಯ ಕ್ಷಣವು ನಾವೆಲ್ಲರೂ ಹಂಚಿಕೊಳ್ಳುವ ಅನುಭವವಾಗಿದೆ. ರಾಮಮಂದಿರ ನಿರ್ಮಾಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಅಸಂಖ್ಯಾತ ವ್ಯಕ್ತಿಗಳ ಸ್ಫೂರ್ತಿಯನ್ನು ನಾನು ಸ್ವೀಕರಿಸುತ್ತೇನೆ

“ನನಗೆ ದೇವರಂತಿರುವ ಜನರು ತಮ್ಮ ಭಾವನೆಗಳನ್ನು ಮಾತಿನಲ್ಲಿ ವ್ಯಕ್ತಪಡಿಸಿ ಆಶೀರ್ವಾದ ನೀಡಿದಾಗ ನನ್ನಲ್ಲಿ ಹೊಸ ಶಕ್ತಿ ತುಂಬುತ್ತದೆ. ಇಂದು ನನಗೆ ನಿಮ್ಮ ಆಶೀರ್ವಾದ ಬೇಕು”

Posted On: 12 JAN 2024 10:31AM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನವರಿ 22ರಂದು ಅಯೋಧ್ಯ ಧಾಮ ದೇವಸ್ಥಾನದಲ್ಲಿ ಶ್ರೀ ರಾಮಲಾಲಾ ಅವರ ಪ್ರಾಣ ಪ್ರತಿಷ್ಠೆಯ ಪೂರ್ವಭಾವಿಯಾಗಿ 11 ದಿನಗಳ ವಿಶೇಷ ಪೂಜಾ ಆಚರಣೆ ಆರಂಭಿಸಿದರು. “ಇದೊಂದು ಬಹುದೊಡ್ಡ ಜವಾಬ್ದಾರಿ. ನಮ್ಮ ಧರ್ಮಗ್ರಂಥಗಳಲ್ಲಿ ಹೇಳಿರುವಂತೆ, ಯಾಗ ಮತ್ತು ದೇವರ ಆರಾಧನೆಗಾಗಿ ನಮ್ಮಲ್ಲಿ ದೈವಿಕ ಪ್ರಜ್ಞೆಯನ್ನು ಜಾಗೃತಗೊಳಿಸಬೇಕು. ಇದಕ್ಕಾಗಿ ಧರ್ಮಗ್ರಂಥಗಳಲ್ಲಿ ಉಪವಾಸ ಮತ್ತು ಕಟ್ಟುನಿಟ್ಟಿನ ನಿಯಮಗಳನ್ನು ನಿಗದಿಪಡಿಸಲಾಗಿದೆ, ಅದನ್ನು ಪವಿತ್ರೀಕರಣದ ಮೊದಲು ಅನುಸರಿಸಬೇಕು. ಆದ್ದರಿಂದ, ನಾನು ಕೆಲವು ಪುಣ್ಯಾತ್ಮರು ಮತ್ತು ಆಧ್ಯಾತ್ಮಿಕ ಪ್ರಯಾಣದ ಮಹಾಪುರುಷರಿಂದ ಪಡೆದ ಮಾರ್ಗದರ್ಶನದ ಪ್ರಕಾರ, ಅವರು ಸೂಚಿಸಿದ ‘ಯಮ-ನಿಯಮ’ಗಳ ಪ್ರಕಾರ, ನಾನು ಇಂದಿನಿಂದ 11 ದಿನಗಳ ವಿಶೇಷ ಪೂಜಾ ಆಚರಣೆ ಆರಂಭಿಸುತ್ತಿದ್ದೇನೆ.

ಪ್ರಾಣ ಪ್ರತಿಷ್ಠೆ ಆಚರಣೆಯಲ್ಲಿ ಇಡೀ ರಾಷ್ಟ್ರವನ್ನು ಮುಳುಗಿಸುವ ರಾಮಭಕ್ತಿಯ ಭಾವನೆಯ ಕುರಿತು ಪ್ರಧಾನ ಮಂತ್ರಿ ಭಾವುಕ ಸಂದೇಶ ನೀಡಿದರು. ಈ ಕ್ಷಣವನ್ನು ಸರ್ವಶಕ್ತನ ಆಶೀರ್ವಾದ ಎಂದು ಕರೆದ ಪ್ರಧಾನಿ, “ನಾನು ಭಾವನೆಗಳಿಂದ ಮುಳುಗಿದ್ದೇನೆ! ನನ್ನ ಜೀವನದಲ್ಲಿ ಮೊದಲ ಬಾರಿಗೆ, ನಾನು ಅಂತಹ ಭಾವನೆಗಳನ್ನು ಅನುಭವಿಸುತ್ತಿದ್ದೇನೆ. ನಾನು ವಿಭಿನ್ನವಾದ ಭಕ್ತಿಯ ಭಾವನೆಯನ್ನು ಅನುಭವಿಸುತ್ತಿದ್ದೇನೆ. ನನ್ನ ಅಂತರಂಗದ ಈ ಭಾವುಕ ಪಯಣ ಅಭಿವ್ಯಕ್ತಿಗೆ ಅವಕಾಶವಲ್ಲ, ಇದು ನೈಜ ಅನುಭವ. ನಾನು ಇದನ್ನು ಬಯಸಿದ್ದರೂ, ಅದರ ಆಳ, ಅಗಲ ಮತ್ತು ತೀವ್ರತೆಯನ್ನು ಪದಗಳಲ್ಲಿ ಹೇಳಲು ನನಗೆ ಸಾಧ್ಯವಾಗುತ್ತಿಲ್ಲ. ನನ್ನ ಪರಿಸ್ಥಿತಿಯನ್ನು ನೀವು ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು” ಎಂದರು.

ಈ ಅಪರೂಪದ ಅವಕಾಶಕ್ಕಾಗಿ ಕೃತಜ್ಞತೆ ಸಲ್ಲಿಸಿದ ಪ್ರಧಾನಿ ಮೋದಿ, “ಹಲವು ತಲೆಮಾರುಗಳು ತಮ್ಮ ಹೃದಯದಲ್ಲಿ ವರ್ಷಗಳ ಸಂಕಲ್ಪದಂತೆ ಬದುಕಿರುವ ಕನಸನ್ನು ನನಸಾಗಿಸುವ ಸಮಯದಲ್ಲಿ ನಾನು ಇಲ್ಲಿ ಇರುವ ಭಾಗ್ಯ ಪಡೆದಿದ್ದೇನೆ. ಭಾರತದ ಎಲ್ಲಾ ಜನರನ್ನು ಪ್ರತಿನಿಧಿಸಲು ದೇವರು ನನ್ನನ್ನು ಸಾಧನವನ್ನಾಗಿ ಮಾಡಿದ್ದಾನೆ. ಇದು ಬಹುದೊಡ್ಡ ಜವಾಬ್ದಾರಿಯಾಗಿದೆ ಎಂದರು”.

ಈ ಕಾರ್ಯಕ್ಕಾಗಿ ಜನರು, ಋಷಿ ಮುನಿಗಳು ಮತ್ತು ದೇವರ ಆಶೀರ್ವಾದವನ್ನು ಕೋರಿದ ಪ್ರಧಾನ ಮಂತ್ರಿ, ಶ್ರೀರಾಮನು ಅತಿ ಹೆಚ್ಚು ಸಮಯ ಕಳೆದ ನಾಸಿಕ್ ಧಾಮ್ - ಪಂಚವಟಿಯಿಂದ ಆಚರಣೆ ಆರಂಭಿಸುತ್ತಿರುವುದು ಸಂತಸ ತಂದಿದೆ. ಇಂದು ಸ್ವಾಮಿ ವಿವೇಕಾನಂದ ಮತ್ತು ಮಾತಾ ಜೀಜಾಬಾಯಿ ಅವರ ಜಯಂತಿಯ ಸಂತೋಷದ ಕಾಕತಾಳೀಯ ಸುಸಂದರ್ಭ ಎಂದರು. ರಾಷ್ಟ್ರ ಪ್ರಜ್ಞೆಯ ಇಬ್ಬರು ದಿಗ್ಗಜರಿಗೂ ಪ್ರಧಾನಿ ಗೌರವ ನಮನ ಸಲ್ಲಿಸಿದರು. ಸೀತಾ-ರಾಮರ ಬಗ್ಗೆ ಸದಾ ಭಕ್ತಿಯಿಂದ ತುಂಬಿರುವ ತಮ್ಮ ತಾಯಿಯನ್ನು ಈ ಕ್ಷಣದಲ್ಲಿ ಪ್ರಧಾನಿ ನೆನಪಿಸಿಕೊಂಡರು.

ಭಗವಾನ್ ರಾಮನ ಭಕ್ತರ ತ್ಯಾಗಕ್ಕೆ ಗೌರವ ಸಲ್ಲಿಸಿದ ಪ್ರಧಾನಿ, “ಭೌತಿಕವಾಗಿ, ನಾನು ಆ ಪವಿತ್ರ ಕ್ಷಣಕ್ಕೆ ಸಾಕ್ಷಿಯಾಗಿದ್ದೇನೆ. ಆದರೆ ನನ್ನ ಮನಸ್ಸಿನಲ್ಲಿ, ನನ್ನ ಹೃದಯದ ಪ್ರತಿ ಬಡಿತದಲ್ಲಿ, 140 ಕೋಟಿ ಭಾರತೀಯರು ನನ್ನೊಂದಿಗೆ ಇರುತ್ತಾರೆ. ನೀನು ನನ್ನೊಂದಿಗಿರುವೆ. ಪ್ರತಿಯೊಬ್ಬ ರಾಮಭಕ್ತನೂ ನನ್ನೊಂದಿಗಿರುತ್ತಾನೆ. ಆ ಪ್ರಜ್ಞಾಪೂರ್ವಕ ಕ್ಷಣವು ನಾವೆಲ್ಲರೂ ಹಂಚಿಕೊಳ್ಳುತ್ತಿರುವ ಅನುಭವವಾಗಿದೆ. ರಾಮಮಂದಿರ ನಿರ್ಮಾಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಅಸಂಖ್ಯಾತ ವ್ಯಕ್ತಿಗಳ ಸ್ಫೂರ್ತಿಯನ್ನು ನಾನು ಸ್ವೀಕರಿಸುತ್ತಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಇಡೀ ರಾಷ್ಟ್ರವು ತಮ್ಮೊಂದಿಗೆ ಬೆರೆಯಬೇಕು ಎಂದು ಪ್ರಧಾನಿ ಜನರ ಆಶೀರ್ವಾದ ಕೋರಿದರು. ತಮ್ಮ ಅಭಿವ್ಯಕ್ತಿಗಳನ್ನು ಹಂಚಿಕೊಳ್ಳುವಂತೆ ಕೇಳಿಕೊಂಡರು. “ದೇವರು ‘ನಿರಾಕಾರ’ ಎಂಬ ಸತ್ಯ ನಮಗೆಲ್ಲರಿಗೂ ತಿಳಿದಿದೆ. ಆದರೆ ದೇವರು, ಭೌತಿಕ ರೂಪದಲ್ಲಿಯೂ ಸಹ, ನಮ್ಮ ಆಧ್ಯಾತ್ಮಿಕ ಪ್ರಯಾಣವನ್ನು ಬಲಪಡಿಸುತ್ತಾನೆ. ಜನರಲ್ಲಿ ದೇವರ ರೂಪವಿದೆ ಎಂದು ನಾನು ವೈಯಕ್ತಿಕವಾಗಿ ನೋಡಿದ್ದೇನೆ ಮತ್ತು ಅನುಭವಿಸಿದ್ದೇನೆ. ಆದರೆ ನನಗೆ ದೇವರಂತಿರುವ ಜನರು ತಮ್ಮ ಭಾವನೆಗಳನ್ನು ಮಾತಿನಲ್ಲಿ ವ್ಯಕ್ತಪಡಿಸಿ ಆಶೀರ್ವಾದ ನೀಡಿದಾಗ ನನ್ನಲ್ಲಿ ಹೊಸ ಶಕ್ತಿ ತುಂಬುತ್ತದೆ. ಇಂದು ನನಗೆ ನಿಮ್ಮ ಆಶೀರ್ವಾದ ಬೇಕು”, ಎಂದು ಪ್ರಧಾನಿ ಕೋರಿದರು.

***



(Release ID: 1995509) Visitor Counter : 82