ವಾರ್ತಾ ಮತ್ತು ಪ್ರಸಾರ ಸಚಿವಾಲಯ

​​​​​​​ವಿಬಿಎಸ್ ವೈ :ಕನಸುಗಳನ್ನು ನನಸು ಮಾಡಿದ ಇನ್ಶಾ ಶಬೀರ್ ಅವರ ಕಥೆ

Posted On: 28 DEC 2023 10:43AM by PIB Bengaluru

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಸುಂದರವಾದ ಕಣಿವೆಯಲ್ಲಿ, ವಾಸಿಸುತ್ತಿರುವ ಯುವತಿಯೊಬ್ಬರು ಸ್ವಾತಂತ್ರ್ಯ, ಪುನಶ್ಚೇತನ ಮತ್ತು ಪರಿವರ್ತನೆಯ ಸಂಕೇತವಾಗಿದ್ದಾರೆ. ಪುಲ್ವಾಮಾದ ಆರಿಗಾಮ್ನಲ್ಲಿ ಸಾಧಾರಣ ಕುಟುಂಬದಲ್ಲಿ ಜನಿಸಿದ ಇನ್ಶಾ ಶಬೀರ್ ಇಂದು ವ್ಯವಹಾರದ ಮಾಲೀಕರಾಗಿದ್ದಾರೆ ಮತ್ತು ಅವರು ತಮ್ಮ ಅಂಗಡಿಯನ್ನು ನಿರ್ವಹಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ದೀನ್ ದಯಾಳ್ ಅಂತ್ಯೋದಯ ಯೋಜನೆ - ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ನಿನ ಅನೇಕ ಫಲಾನುಭವಿಗಳಲ್ಲಿ ಅವರು ಒಬ್ಬರು, ಇದು ಇನ್ಶಾ ಅವರಂತಹ ಅನೇಕ ಹುಡುಗಿಯರು ಮತ್ತು ಮಹಿಳೆಯರಿಗೆ ಹಾರಲು ರೆಕ್ಕೆಗಳನ್ನು ನೀಡುತ್ತಿದೆ.  

 

ಪ್ರಸ್ತುತ ನಡೆಯುತ್ತಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಸಂದರ್ಭದಲ್ಲಿ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ, ಇನ್ಶಾ ಅವರು ತಾನು ದೀನ್ ದಯಾಳ್ ಅಂತ್ಯೋದಯ ಯೋಜನೆ - ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಬಗ್ಗೆ ಮೊದಲು 2017ರಲ್ಲಿ ಕೇಳಿದ್ದೆ ಮತ್ತು ತಕ್ಷಣ ಅದಕ್ಕೆ ನೋಂದಾಯಿಸಿಕೊಂಡೆ ಎಂದು ಹೇಳಿದರು. ಈ ಯೋಜನೆಯನ್ನು ಗ್ರಾಮೀಣಾಭಿವೃದ್ಧಿ ಸಚಿವಾಲಯವು 2011ರಲ್ಲಿ ಪ್ರಾರಂಭಿಸಿತು. ಇದು ಗ್ರಾಮೀಣ ಬಡವರಿಗೆ ದಕ್ಷ ಮತ್ತು ಪರಿಣಾಮಕಾರಿ ಸಾಂಸ್ಥಿಕ ವೇದಿಕೆಗಳನ್ನು ರಚಿಸುವ ಗುರಿಯನ್ನು ಹೊಂದಿದೆ, ಸುಸ್ಥಿರ ಜೀವನೋಪಾಯ ವರ್ಧನೆ ಮತ್ತು ಹಣಕಾಸು ಸೇವೆಗಳಿಗೆ ಸುಧಾರಿತ ಪ್ರವೇಶ/ಲಭ್ಯತೆಯ ಮೂಲಕ ಕುಟುಂಬ ಆದಾಯವನ್ನು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ.

ಇನ್ಶಾ ತನ್ನ ಕಥೆಯನ್ನು ಹಂಚಿಕೊಂಡಿದ್ದು, ಅದರಲ್ಲಿ ಬಾಲ್ಯದಿಂದಲೂ ಬಟ್ಟೆಗಳನ್ನು ವಿನ್ಯಾಸಗೊಳಿಸಲು ಮತ್ತು ತಯಾರಿಸಲು ತಾನು ಆಸಕ್ತಿ ಹೊಂದಿದ್ದನ್ನು ಬಹಿರಂಗಪಡಿಸಿದರು. ಅವರು ಡಿ.ಎ.ವೈ-ಎನ್.ಆರ್.ಎಲ್.ಎಂ. (DAY-NRLM) ಅಡಿಯಲ್ಲಿ ಸ್ಥಳೀಯ ಟೈಲರಿಂಗ್ ಶಾಲೆಗೆ ದಾಖಲಾದಾಗ ಅವರ ಜೀವನದಲ್ಲಿ ಒಂದು ತಿರುವು ಒದಗಿತು. ಅವರ ಪ್ರತಿಭೆ ಮತ್ತು ಆಸಕ್ತಿಯು ವ್ಯಾಪಾರದ ಅವಕಾಶವಾಗಿ ಮತ್ತು ಜೀವನೋಪಾಯವನ್ನು ಗಳಿಸುವ ಮಾರ್ಗವಾಗಿ ರೂಪಾಂತರಗೊಂಡಿತು.

ಇನ್ಸ್ಟಿಟ್ಯೂಟ್ನಲ್ಲಿ ವಿನ್ಯಾಸ ಕೋರ್ಸ್ ಪೂರ್ಣಗೊಳಿಸಿದ ನಂತರ, ಇನ್ಶಾ ತನ್ನ ಅಂಗಡಿಯನ್ನು ಸ್ಥಾಪಿಸುವ  ಬಯಕೆಯನ್ನು ಅರಿತುಕೊಂಡರು. ಅವರು ಪಿಎಂಇಜಿಪಿ ಉಮೀದ್ ಸಾಲವನ್ನು ಪಡೆದರು ಮತ್ತು ಈ ಪ್ರಯತ್ನದಲ್ಲಿಯೂ, ಡಿ.ಎ.ವೈ-ಎನ್.ಆರ್.ಎಲ್.ಎಂ. (DAY-NRLM) ಆರ್ಥಿಕ ಬೆಂಬಲವನ್ನು ನೀಡುವ ಮೂಲಕ ಅವರಿಗೆ ಸಹಾಯ ಮಾಡಿತು. ಅಂತಿಮವಾಗಿ, ಇದರಿಂದ ಅವರಿಗೆ  ತಮ್ಮ ಅಂಗಡಿಯನ್ನು ಸ್ಥಾಪಿಸಲು ಸಾಧ್ಯವಾಯಿತು.

ಕೆಲವೊಮ್ಮೆ, ಸೀಮಿತ ಸಂಪನ್ಮೂಲಗಳು ಮತ್ತು ಕಡಿಮೆ ಅವಕಾಶಗಳೊಂದಿಗೆ, ಕನಸುಗಳು ಹೆಚ್ಚಾಗಿ ರಾತ್ರಿ ಆಕಾಶದಲ್ಲಿಯ ದೂರದ ನಕ್ಷತ್ರಗಳಂತೆ ಕಾಣುತ್ತವೆ. ಆದರೆ ಇನ್ಶಾಗೆ, ಡಿ.ಎ.ವೈ-ಎನ್.ಆರ್.ಎಲ್.ಎಂ. (DAY-NRLM) ತನ್ನ ಕನಸನ್ನು ನನಸಾಗಿಸಲು ಅನುವು ಮಾಡಿಕೊಟ್ಟಿತು. ಈ ಯೋಜನೆಯಡಿ ಸಬ್ಸಿಡಿ ಸಾಲವನ್ನು ಲಭಿಸದಿದ್ದರೆ ತಮಗೆ ವ್ಯವಹಾರವನ್ನು ಪ್ರಾರಂಭಿಸಲು ಸಾಧ್ಯವಾಗುತ್ತಿರಲಿಲ್ಲ ಎಂಬುದನ್ನೂ  ಇನ್ಶಾ ಹಂಚಿಕೊಂಡಿದ್ದಾರೆ.

ಯುವಜನರಿಗೆ ಸಹಾಯ ಮಾಡುತ್ತಿರುವ ಮತ್ತು ಹೊಸ, ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುತ್ತಿರುವ ಸರ್ಕಾರದ ವ್ಯವಹಾರ ಯೋಜನೆಗಳನ್ನು ಇನ್ಶಾ ಶ್ಲಾಘಿಸಿದರು. ಇಂದು, ಯಶಸ್ಸು ಶ್ರೀಮಂತರಿಗೆ ಮಾತ್ರ ಸೀಮಿತವಾಗಿ ಉಳಿದಿಲ್ಲ, ಬಡ ಹಿನ್ನೆಲೆ ಮತ್ತು ಹಳ್ಳಿಗಳ ವ್ಯಕ್ತಿಗಳು ಸಹ ಯಶಸ್ವಿ ವ್ಯವಹಾರಗಳನ್ನು ಪ್ರಾರಂಭಿಸುತ್ತಿದ್ದಾರೆ ಎಂದು ಅವರು ಹೇಳಿದರು.  ಆರ್ಥಿಕವಾಗಿ ಸ್ವತಂತ್ರವಾಗಿರಲು ಅನುವು ಮಾಡಿಕೊಡುವ ಯೋಜನೆಗಳನ್ನು ತಂದಿದ್ದಕ್ಕಾಗಿ ತಾನು  ಸರ್ಕಾರಕ್ಕೆ ಕೃತಜ್ಞರಾಗಿರುವುದಾಗಿಯೂ  ಅವರು ಹೇಳಿದರು. ಇಂದು, ಇನ್ಶಾ ತಮ್ಮ ಹಣಕಾಸಿನ ನಿರ್ವಹಣೆ ಮಾತ್ರವಲ್ಲದೆ ತಮ್ಮ ಅಂಗಡಿಯಲ್ಲಿ ಇತರ ಮಹಿಳೆಯರಿಗೆ ಉದ್ಯೋಗವನ್ನು ಸಹ ಒದಗಿಸುತ್ತಾರೆ. ಚಿಕ್ಕದಾದರೂ, ಈ ಅಂಗಡಿಯು ವಿಕಾಸ್ ಮತ್ತು ಆತ್ಮನಿರ್ಭರತೆಗೆ ಸಮಾನಾರ್ಥಕವಾಗಿ, ಅನ್ವರ್ಥವಾಗಿದೆ.

References –

§  https://aajeevika.gov.in/

X link –

§ http:// https://twitter.com/HSVB2047/status/1734913248858866043

  ಪಿಐಬಿ ಜಮ್ಮು / ನಿಮಿಶ್ ರುಸ್ತಗಿ / ಹಿಮಾಂಶು ಪಾಠಕ್ / ರಿತು ಕಟಾರಿಯಾ / ಅರುಶೀ ಪ್ರಧಾನ್ ಅವರ ಮಾಹಿತಿಯೊಂದಿಗೆ

****



(Release ID: 1991185) Visitor Counter : 86