ಪ್ರಧಾನ ಮಂತ್ರಿಯವರ ಕಛೇರಿ

​​​​​​​ ಉತ್ತರ ಪ್ರದೇಶದ ವಾರಣಾಸಿಯಲ್ಲಿ ʻವಿಕಸಿತ ಭಾರತ ಸಂಕಲ್ಪ ಯಾತ್ರೆ(ನಗರ)ʼಯಲ್ಲಿ ಪಾಲ್ಗೊಂಡ ಪ್ರಧಾನಮಂತ್ರಿಗಳು


ಫಲಾನುಭವಿಗಳು ಸರ್ಕಾರದ ಸುತ್ತ ಓಡುವ ಅಗತ್ಯವಿಲ್ಲ. ಬದಲಿಗೆ ಸರ್ಕಾರವೇ ಫಲಾನುಭವಿಗಳ ಬಳಿಗೆ ಹೋಗಬೇಕು"

ʻವಿಕಸಿತ ಭಾರತ ಸಂಕಲ್ಪ ಯಾತ್ರೆʼ ನನಗೆ ಒಂದು ಪರೀಕ್ಷೆಯಾಗಿದೆ. ಅಪೇಕ್ಷಿತ ಫಲಿತಾಂಶಗಳನ್ನು ಸಾಧಿಸಲಾಗಿದೆಯೇ ಎಂದು ನಾನು ಜನರಿಂದ ಕೇಳಲು ಬಯಸುತ್ತೇನೆ

 "ಯಶಸ್ವಿ ಯೋಜನೆಗಳು ನಾಗರಿಕರಲ್ಲಿ ಮಾಲೀಕತ್ವದ ಪ್ರಜ್ಞೆಯನ್ನು ಸೃಷ್ಟಿಸುತ್ತವೆ",

"ವಿಕಸಿತ ಭಾರತʼದ  ಬೀಜಗಳನ್ನು ಬಿತ್ತಿದ ನಂತರ, ಮುಂದಿನ 25 ವರ್ಷಗಳ ಫಲಿತಾಂಶವನ್ನು ನಮ್ಮ ಭವಿಷ್ಯದ ಪೀಳಿಗೆಯು ಕೊಯ್ಲು ಮಾಡುತ್ತದೆ"

"ವಿಕಸಿತ ಭಾರತ , ಎಲ್ಲಾ ತೊಂದರೆಗಳನ್ನು ತೊಡೆದುಹಾಕುವ ಮಾರ್ಗವಾಗಿದೆ"

Posted On: 17 DEC 2023 6:03PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದ ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯಲ್ಲಿ ಪಾಲ್ಗೊಂಡರು. ಶ್ರೀ ಮೋದಿ ಅವರು ಕಾರ್ಯಕ್ರಮ ನಡೆದ ಸ್ಥಳದಲ್ಲಿ ಹಾಕಲಾಗಿದ್ದ ಮಳಿಗೆಗಳ ಮಧ್ಯೆ ಹೆಜ್ಜೆ ಹಾಕಿದರು. ʻವಿಕಸಿತ ಭಾರತ ಯಾತ್ರಾ ವನʼ ಮತ್ತು ರಸಪ್ರಶ್ನೆ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೂ ಭೇಟಿ ನೀಡಿದರು. ಪ್ರಧಾನಮಂತ್ರಿಯವರು ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು ಮತ್ತು ಈ ಸಂದರ್ಭದಲ್ಲಿ ಅವರನ್ನುದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ʻವಿಕಸಿತ ಭಾರತ ಸಂಕಲ್ಪ ಪ್ರತಿಜ್ಞೆʼಯನ್ನೂ ಬೋಧಿಸಲಾಯಿತು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಭಾರತದಾದ್ಯಂತ ಎಲ್ಲಾ ಸಂಸದರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಿದರು. ತಾವು ಸಂಸದರಾಗಿ ಮತ್ತು ನಗರದ ಸೇವಕನಾಗಿ ವಾರಣಾಸಿಯಲ್ಲಿ ಈ ಯಾತ್ರೆಯಲ್ಲಿ ಭಾಗವಹಿಸುತ್ತಿರುವುದಾಗಿ ಹೇಳಿದರು. ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ಕಾಲಮಿತಿಯೊಳಗೆ ಮತ್ತು ಅಡಚಣೆ ಇಲ್ಲದೆ ತಲುಪಿಸುವ ಅಗತ್ಯವನ್ನು ಒತ್ತಿಹೇಳಿದ ಪ್ರಧಾನಿ ಮೋದಿ, "ಫಲಾನುಭವಿಗಳು ಸರ್ಕಾರದ ಸುತ್ತಲೂ ಓಡಬೇಕಾಗಿಲ್ಲ. ಬದಲಿಗೆ ಸರ್ಕಾರವೇ ಫಲಾನುಭವಿಗಳ ಬಳಿಗೆ ಹೋಗಬೇಕು," ಎಂದು ಹೇಳಿದರು. ʻಪಿಎಂಎವೈʼ ಅಡಿಯಲ್ಲಿ 4 ಕೋಟಿ ಕುಟುಂಬಗಳಿಗೆ ಶಾಶ್ವತ ಮನೆಗಳನ್ನು ಹಸ್ತಾಂತರಿಸಲಾಗಿದೆ ಎಂದು ತಿಳಿಸಿದ ಶ್ರೀ ಮೋದಿ, ಯಾವುದೇ ಯೋಜನೆಯು ಪರಿಪೂರ್ಣತೆಯ ಸಾಧಿಸಬೇಕಾದ ಹಾಗೂ ಹಿಂದುಳಿದಿರುವ ಜನರನ್ನು ತಲುಪಬೇಕಾದ ಅಗತ್ಯವನ್ನು ಒತ್ತಿ ಹೇಳಿದರು. ಇಲ್ಲಿಯವರೆಗೆ ಹಿಂದುಳಿದವರನ್ನು ಒಳಗೊಂಡಂತೆ ಫಲಾನುಭವಿಗಳ ಅನುಭವವನ್ನು ದಾಖಲಿಸುವ ಗುರಿಯನ್ನು ʻವಿಬಿಎಸ್‌ವೈʼ ಹೊಂದಿದೆ ಎಂದು ಪ್ರಧಾನಿ ಹೇಳಿದರು. "ವಿಕಸಿತ ಭಾರತ ಸಂಕಲ್ಪ ಯಾತ್ರೆʼಯು ನನ್ನ ಪಾಲಿಗೆ ಒಂದು ಪರೀಕ್ಷೆಯಾಗಿದೆ," ಎಂದ ಪ್ರಧಾನಮಂತ್ರಿಯವರು, ಅಪೇಕ್ಷಿತ ಫಲಿತಾಂಶಗಳನ್ನು ಸಾಧಿಸಲಾಗಿದೆಯೇ ಎಂದು ಜನರಿಂದ ಕೇಳಲು ಬಯಸುತ್ತೇನೆ ಎಂದರು. ಕೆಲ ಸಮಯದ ಹಿಂದೆ ಫಲಾನುಭವಿಗಳೊಂದಿಗಿನ ಸಂವಾದವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ʻಆಯುಷ್ಮಾನ್ ಭಾರತ್ʼ ಮತ್ತು ʻಆಯುಷ್ಮಾನ್ ಕಾರ್ಡ್ʼಗಳಂತಹ ಯೋಜನೆಗಳ ಪ್ರಯೋಜನಗಳನ್ನು ಉಲ್ಲೇಖಿಸಿದರು. ಸರ್ಕಾರದ ಯೋಜನೆಗಳನ್ನು ತಳಮಟ್ಟದಲ್ಲಿ ಅನುಷ್ಠಾನಗೊಳಿಸುತ್ತಿರುವ ಅಧಿಕಾರಿಗಳು ಮಾಡುತ್ತಿರುವ ಸಕಾರಾತ್ಮಕ ಕೆಲಸದ ಪರಿಣಾಮವನ್ನು ಒತ್ತಿ ಹೇಳಿದ ಶ್ರೀ ಮೋದಿ, ಇದು ಅವರಿಗೆ ಹೊಸ ಉತ್ಸಾಹ ಮತ್ತು ಸಂತೃಪ್ತಿಯನ್ನು ನೀಡುತ್ತದೆ ಎಂದರು. "ತಳಮಟ್ಟದಲ್ಲಿ ಸರ್ಕಾರಿ ಯೋಜನೆಗಳ ಅನುಷ್ಠಾನದ ಪರಿಣಾಮವು ಸರ್ಕಾರಿ ನೌಕರರಲ್ಲಿ ಸಂತೋಷದ ಹೊಸ ಆಯಾಮವನ್ನು ತೆರೆಯುತ್ತದೆ, ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯಿಂದ ಇದು ಸಾಧ್ಯವಾಗಿದೆ," ಎಂದು ಪ್ರಧಾನಿ ಹೇಳಿದರು.

ಯೋಜನೆಗಳ ಪರಿಣಾಮವನ್ನು ನೇರವಾಗಿ ತಿಳಿದುಕೊಳ್ಳುವ ಪರಿವರ್ತಕ ಶಕ್ತಿಯ ಬಗ್ಗೆ ವಿವರಿಸಿದ ಪ್ರಧಾನಿ, ಈ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಈ ಯೋಜನೆಗಳು ಅಡುಗೆಮನೆಗಳನ್ನು ಹೊಗೆಯಿಂದ ಮುಕ್ತಗೊಳಿಸುತ್ತಿವೆ, ಶಾಶ್ವತ ಮನೆಗಳು ಜನರಲ್ಲಿ ಹೊಸ ವಿಶ್ವಾಸವನ್ನು ತುಂಬುತ್ತಿವೆ, ಬಡ ವರ್ಗವು ಸಶಕ್ತವಾಗಿದೆ ಎಂಬ ಭಾವನೆ ಮೂಡಿದೆ. ಜೊತೆಗೆ, ಶ್ರೀಮಂತ ಮತ್ತು ಬಡವರ ನಡುವಿನ ವ್ಯತ್ಯಾಸಗಳನ್ನು ಕಡಿಮೆ ಮಾಡಲಾಗಿದೆ. ಇವೆಲ್ಲವೂ ಹೆಚ್ಚಿನ ತಮ್ಮಲ್ಲಿ ತೃಪ್ತಿ ಮೂಡಿಸಿವೆ ಎಂದು ಅವರು ಹೇಳಿದರು.

ಯಶಸ್ವಿ ಯೋಜನೆಗಳು ನಾಗರಿಕರಲ್ಲಿ ಮಾಲೀಕತ್ವದ ಪ್ರಜ್ಞೆಯನ್ನು ಸೃಷ್ಟಿಸುತ್ತವೆ ಎಂದು ಪ್ರಧಾನಿ ಮೋದಿ ಹೇಳಿದರು. ಸಾಲ ಮತ್ತು ಇತರ ಸೌಲಭ್ಯಗಳನ್ನು ಪಡೆಯುವ ವ್ಯಕ್ತಿಯು ಇದು ತನ್ನ ದೇಶ, ತನ್ನ ರೈಲ್ವೆ, ತನ್ನ ಕಚೇರಿ, ತನ್ನ ಆಸ್ಪತ್ರೆ ಎಂದು ಭಾವಿಸುತ್ತಾನೆ. ಮಾಲೀಕತ್ವದ ಈ ಭಾವನೆ ಮೂಡಿದಾಗ, ರಾಷ್ಟ್ರಕ್ಕಾಗಿ ಏನಾದರೂ ಮಾಡುವ ಬಯಕೆಯೂ ಮೂಡುತ್ತದೆ ಎಂದು ಪಿಎಂ ಮೋದಿ ವಿವರಿಸಿದರು. ಇದು ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯದ ಬಗ್ಗೆ ಜನರಲ್ಲಿ ವಿಶ್ವಾಸವನ್ನು ಮೂಡಿಸುತ್ತದೆ ಎಂದರು.

ಸ್ವಾತಂತ್ರ್ಯಗಳಿಸುವ ಮುನ್ನ, ದೇಶದಲ್ಲಿ ಕೈಗೊಂಡ ಪ್ರತಿಯೊಂದು ಕ್ರಮದ ಸಾಮಾನ್ಯ ಉದ್ದೇಶವೂ ಸ್ವತಂತ್ರ ಭಾರತವನ್ನು ಸಾಧಿಸುವುದೇ ಆಗಿತ್ತು ಎಂದು ಪ್ರಧಾನಿ ಮೋದಿ ಸ್ಮರಿಸಿದರು. "ಆಗ ಪ್ರತಿಯೊಬ್ಬ ನಾಗರಿಕರೂ ತಮ್ಮದೇ ಮಾರ್ಗದಲ್ಲಿ ಸ್ವಾತಂತ್ರ್ಯಕ್ಕಾಗಿ ಕೊಡುಗೆ ನೀಡುತ್ತಿದ್ದರು," ಎಂದು ಹೇಳಿದ ಪ್ರಧಾನಿಯವರು, ಇದು ಏಕತೆಯ ವಾತಾವರಣವನ್ನು ಸೃಷ್ಟಿಸಿತು, ಇದು ಅಂತಿಮವಾಗಿ ಬ್ರಿಟಿಷರು ಭಾರತವನ್ನು ತೊರೆಯಲು ಕಾರಣವಾಯಿತು ಎಂದು ವಿವರಿಸಿದರು. ʻವಿಕಸಿತ ಭಾರತʼದ ಸಂಕಲ್ಪವನ್ನು ಈಡೇರಿಸಲು ಮತ್ತು ಪ್ರತಿಯೊಬ್ಬ ವ್ಯಕ್ತಿಯನ್ನು ಗೌರವಿಸಿ ರಾಷ್ಟ್ರವನ್ನು ಮುಂದೆ ಕೊಂಡೊಯ್ಯಲು ಇದೇ ರೀತಿಯ ದೃಷ್ಟಿಕೋನವನ್ನು ಅಳವಡಿಸಿಕೊಳ್ಳುವಂತೆ ಪ್ರಧಾನಿ ಕರೆ ನೀಡಿದರು. "ವಿಕಸಿತ ಭಾರತʼದ ಬೀಜಗಳನ್ನು ಬಿತ್ತಿದ ನಂತರ, ಮುಂದಿನ 25 ವರ್ಷಗಳ ಫಲಿತಾಂಶವನ್ನು ನಮ್ಮ ಭವಿಷ್ಯದ ಪೀಳಿಗೆಯು ಕೊಯ್ಲು ಮಾಡುತ್ತದೆ," ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. "ಪ್ರತಿಯೊಬ್ಬ ಭಾರತೀಯನಿಗೂ ಇಂದು ಈ ಮನಸ್ಥಿತಿ ಮತ್ತು ಸಂಕಲ್ಪದ ಅಗತ್ಯವಿದೆ," ಎಂದು ಅವರು ಹೇಳಿದರು.

ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯು ಒಂದು ರಾಷ್ಟ್ರೀಯ ಪ್ರಯತ್ನವಾಗಿದೆ. ಇದು ಯಾವುದೇ ರಾಜಕೀಯ ಪಕ್ಷದ ಕೆಲಸವಲ್ಲ, ಇದೊಂದು ಪವಿತ್ರ ಕರ್ತವ್ಯ ಎಂದು ಅವರು ಹೇಳಿದರು. ಜನರು ಇದರಲ್ಲಿ ನೇರವಾಗಿ ಭಾಗವಹಿಸಬೇಕು. "ಬರೀ ಪತ್ರಿಕೆಗಳಲ್ಲಿ ಅದರ ಬಗ್ಗೆ ಓದುವ ಮೂಲಕ ಸಮಾಧಾನಗೊಂಡರೆ, ಅಂಥವರು  ಪ್ರಮುಖವಾದದ್ದನ್ನು ಕಳೆದುಕೊಳ್ಳುತ್ತಿದ್ದಾರೆ ಎಂದರ್ಥ," ಎಂದು ಪ್ರಧಾನಿ ಹೇಳಿದರು. ಯಾತ್ರೆಯ ವಿವಿಧ ಆಯಾಮಗಳಲ್ಲಿ ಭಾಗವಹಿಸಲು ತಮಗೆ ಸಾಧ್ಯವಾಗಿರುವುದಕ್ಕೆ ಅವರು ವೈಯಕ್ತಿಕವಾಗಿ ತೃಪ್ತಿ ವ್ಯಕ್ತಪಡಿಸಿದರು.

'ಸಕಾರಾತ್ಮಕತೆಯು ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತದೆ' ಎಂದು ಹೇಳೀದ ಪ್ರಧಾನಿಯವರು, ಯಾತ್ರೆಯ ಬಗ್ಗೆ ಸಕ್ರಿಯವಾಗಿ ಪ್ರಚಾರ ಮಾಡುವಂತೆ ಫಲಾನುಭವಿಗಳು ಮತ್ತು ನಾಗರಿಕರನ್ನು ಅವರು ಕೋರಿದರು. ʻವಿಬಿಎಸ್‌ವೈʼ ಅನ್ನು ʻಭವ್ಯ ಸಂಕಲ್ಪʼ ಎಂದು ಬಣ್ಣಿಸಿದ ಪ್ರಧಾನಮಂತ್ರಿಯವರು, 'ಸರ್ವರ ಪ್ರಯತ್ನʼದ ಮೂಲಕ ಅದನ್ನು ಸಾಕಾರಗೊಳಿಸುವಂತೆ ಕರೆ ನೀಡಿದರು. ಆರ್ಥಿಕವಾಗಿ ಸದೃಢವಾಗಿರುವ ʻವಿಕಸಿತ ಭಾರತʼವು ತನ್ನ ನಾಗರಿಕರ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. "ಎಲ್ಲಾ ತೊಂದರೆಗಳನ್ನು ತೊಡೆದುಹಾಕುವ ಮಾರ್ಗವು ʻವಿಕಸಿತ ಭಾರತ ಸಂಕಲ್ಪʼದ ಮೂಲಕ ಹಾದುಹೋಗುತ್ತದೆ. ನಿಮ್ಮ ಪ್ರತಿನಿಧಿಯಾಗಿ ಮತ್ತು ನೀವು ನೀಡಿದ ರಾಷ್ಟ್ರೀಯ ಜವಾಬ್ದಾರಿಗಾಗಿ ನಾನು ಈ ನಿಟ್ಟಿನಲ್ಲಿ ಯಾವೊಂದು ಪ್ರಯತ್ನವನ್ನೂ ಬಿಡುವುದಿಲ್ಲ ಎಂದು ನಾನು ಕಾಶಿಯ ಜನರಿಗೆ ಭರವಸೆ ನೀಡುತ್ತೇನೆ," ಎಂದು ಪ್ರಧಾನಿ ಭರವಸೆ ನೀಡಿದರು.

ಪ್ರಧಾನಮಂತ್ರಿಯವರೊಂದಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಅವರೂ ಇದ್ದರು.

***



(Release ID: 1987580) Visitor Counter : 51