ಪ್ರಧಾನ ಮಂತ್ರಿಯವರ ಕಛೇರಿ

2ನೇ ʻಜಾಗತಿಕ ದಕ್ಷಿಣದ ಧ್ವನಿʼ (ವಾಯ್ಸ್ ಆಫ್ ಗ್ಲೋಬಲ್ ಸೌತ್‌) ಶೃಂಗಸಭೆ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಉದ್ಘಾಟನಾ ಭಾಷಣದ ಕನ್ನಡ ಅನುವಾದ

Posted On: 17 NOV 2023 11:43AM by PIB Bengaluru

ಗೌರವಾನ್ವಿತರೇ,

ನಿಮ್ಮೆಲ್ಲರಿಗೂ ಸ್ವಾಗತ.

ಗೌರವಾನ್ವಿತರೇ,

140 ಕೋಟಿ ಭಾರತೀಯರ ಪರವಾಗಿ, 2ನೇ ʻಜಾಗತಿಕ ದಕ್ಷಿಣದ ಧ್ವನಿʼ(ವಾಯ್ಸ್‌ ಆಫ್‌ ಗ್ಲೋಬಲ್‌ ಸೌತ್‌) ಶೃಂಗಸಭೆಯ ಉದ್ಘಾಟನಾ ಅಧಿವೇಶನಕ್ಕೆ ನಿಮ್ಮೆಲ್ಲರನ್ನೂ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ʻಜಾಗತಿಕ ದಕ್ಷಿಣದ ಧ್ವನಿʼಯು 21ನೇ ಶತಮಾನದ ಬದಲಾಗುತ್ತಿರುವ ವಿಶ್ವದ ಅತ್ಯಂತ ವಿಶಿಷ್ಟ ವೇದಿಕೆಯಾಗಿದೆ. ಭೌಗೋಳಿಕವಾಗಿ, ಜಾಗತಿಕ ದಕ್ಷಿಣವು ಯಾವಾಗಲೂ ಅಸ್ತಿತ್ವದಲ್ಲಿದೆ. ಆದರೆ ಇದು ಮೊದಲ ಬಾರಿಗೆ ಈ ರೀತಿಯ ಧ್ವನಿಯನ್ನು ಪಡೆಯುತ್ತಿದೆ. ಮತ್ತು ಇದು ನಮ್ಮೆಲ್ಲರ ಜಂಟಿ ಪ್ರಯತ್ನದಿಂದ ಸಾಧ್ಯವಾಗಿದೆ. ನಾವು 100ಕ್ಕೂ ಹೆಚ್ಚು ವಿಭಿನ್ನ ದೇಶಗಳು, ಆದರೆ ನಾವು ಒಂದೇ ರೀತಿಯ ಆಸಕ್ತಿಗಳು ಮತ್ತು ಸಮಾನ ಆದ್ಯತೆಗಳನ್ನು ಹೊಂದಿದ್ದೇವೆ.

ಸ್ನೇಹಿತರೇ,

ಕಳೆದ ವರ್ಷ ಡಿಸೆಂಬರ್‌ನಲ್ಲಿ ಭಾರತವು ʻಜಿ-20ʼ ಶೃಂಗಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಾಗ, ಈ ವೇದಿಕೆಯಲ್ಲಿ ಜಾಗತಿಕ ದಕ್ಷಿಣದ ದೇಶಗಳ ಧ್ವನಿಯನ್ನು ಬಲಪಡಿಸುವುದು ನಮ್ಮ ಜವಾಬ್ದಾರಿ ಎಂದು ನಾವು ಪರಿಗಣಿಸಿದ್ದೆವು. ʻಜಿ -20ʼ ಅನ್ನು ಜಾಗತಿಕ ಮಟ್ಟದಲ್ಲಿ ಸಮಗ್ರ ಮತ್ತು ಮಾನವ ಕೇಂದ್ರಿತವನ್ನಾಗಿಸುವುದು ನಮ್ಮ ಆದ್ಯತೆಯಾಗಿತ್ತು. ʻಜಿ -20ʼಯ ಗಮನವು ಜನರ, ಜನರಿಂದ ಮತ್ತು ಜನರಿಗಾಗಿ ಅಭಿವೃದ್ಧಿಯಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ನಮ್ಮ ಪ್ರಯತ್ನವಾಗಿತ್ತು. ಈ ಉದ್ದೇಶದೊಂದಿಗೆ ನಾವು ಈ ವರ್ಷದ ಜನವರಿಯಲ್ಲಿ ಮೊದಲ ಬಾರಿಗೆ ʻಜಾಗತಿಕ ದಕ್ಷಿಣದ ಧ್ವನಿ ಶೃಂಗಸಭೆʼಯನ್ನು ಆಯೋಜಿಸಿದ್ದೆವು. ಭಾರತದ ವಿವಿಧ ರಾಜ್ಯಗಳಲ್ಲಿ ನಡೆದ 200ಕ್ಕೂ ಹೆಚ್ಚು ʻಜಿ -20ʼ ಸಭೆಗಳಲ್ಲಿ, ನಾವು ಜಾಗತಿಕ ದಕ್ಷಿಣದ ಆದ್ಯತೆಗಳಿಗೆ ಪ್ರಾಮುಖ್ಯತೆ ನೀಡಿದ್ದೇವೆ. ಇದರ ಪರಿಣಾಮವಾಗಿ, ʻನವದೆಹಲಿ ನಾಯಕರ ಘೋಷಣೆʼಯಲ್ಲಿ ಜಾಗತಿಕ ದಕ್ಷಿಣದ ವಿಷಯಗಳ ಬಗ್ಗೆ ಎಲ್ಲರ ಸಮ್ಮತಿಯನ್ನು ಪಡೆಯುವಲ್ಲಿ ನಾವು ಯಶಸ್ವಿಯಾಗಿದ್ದೇವೆ.

ಗೌರವಾನ್ವಿತರೇ, s

ʻಜಿ-20ʼ ಕಾರ್ಯಕ್ರಮದಲ್ಲಿ, ಜಾಗತಿಕ ದಕ್ಷಿಣದ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಂಡ ಕೆಲವು ಪ್ರಮುಖ ನಿರ್ಧಾರಗಳನ್ನು ನಾನು ನಿಮ್ಮೊಂದಿಗೆ ವಿನಮ್ರವಾಗಿ ಹಂಚಿಕೊಳ್ಳಲು ಬಯಸುತ್ತೇನೆ. ಭಾರತದ ಪ್ರಯತ್ನದಿಂದಾಗಿ ಆಫ್ರಿಕನ್ ಒಕ್ಕೂಟವು ನವದೆಹಲಿ ಶೃಂಗಸಭೆಯಲ್ಲಿ ʻಜಿ -20ʼಯ ಶಾಶ್ವತ ಸದಸ್ಯತ್ವವನ್ನು ಪಡೆದ ಆ ಐತಿಹಾಸಿಕ ಕ್ಷಣವನ್ನು ನಾನು ಮರೆಯಲು ಸಾಧ್ಯವಿಲ್ಲ. ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳಲ್ಲಿ ಪ್ರಮುಖ ಸುಧಾರಣೆಗಳನ್ನು ತರಬೇಕು ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸುಸ್ಥಿರ ಹಣಕಾಸು ಒದಗಿಸಲು ಒತ್ತು ನೀಡಬೇಕು ಎಂದು ʻಜಿ -20ʼಯ ಪ್ರತಿಯೊಬ್ಬರೂ ಒಪ್ಪಿಕೊಂಡಿದ್ದಾರೆ.

 
ಕಳೆದ ಕೆಲವು ವರ್ಷಗಳಲ್ಲಿ ನಿಧಾನಗತಿಯಲ್ಲಿದ್ದ ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ವೇಗ ನೀಡಲು  ಕ್ರಿಯಾ ಯೋಜನೆಯನ್ನು ಸಹ ರೂಪಿಸಲಾಗಿದೆ. ಇದು ಜಾಗತಿಕ ದಕ್ಷಿಣದ ದೇಶಗಳಲ್ಲಿ ನಡೆಯುತ್ತಿರುವ ಬಡತನ ನಿರ್ಮೂಲನೆ ಕಾರ್ಯಕ್ರಮಗಳನ್ನು ಬಲಪಡಿಸುತ್ತದೆ. ಈ ಬಾರಿ ʻಜಿ -20ʼಯು ಹವಾಮಾನ ಹಣಕಾಸು ವಿಷಯವನ್ನು ಇನ್ನಿಲ್ಲದ ಗಂಭೀರತೆಯೊಂದಿಗೆ ಪರಿಗಣಿಸಿದೆ. ಜಾಗತಿಕ ದಕ್ಷಿಣದ ದೇಶಗಳಿಗೆ ಹವಾಮಾನ ಪರಿವರ್ತನೆಗೆ ಹಣಕಾಸು ಮತ್ತು ತಂತ್ರಜ್ಞಾನವನ್ನು ಸುಲಭ ಷರತ್ತುಗಳಲ್ಲಿ ಒದಗಿಸಲು ಸಹ ಒಪ್ಪಲಾಗಿದೆ. ಹವಾಮಾನ ಪ್ರಕ್ರಿಯೆಗಾಗಿ ʻಲೈಫ್‌ʼನ (LiFE) ಉನ್ನತ ಮಟ್ಟದ ತತ್ವಗಳನ್ನು, ಅಂದರೆ ʻಪರಿಸರಕ್ಕಾಗಿ ಜೀವನಶೈಲಿʼಯನ್ನುಅಳವಡಿಸಿಕೊಳ್ಳಲಾಯಿತು. ಈ ಶೃಂಗಸಭೆಯಲ್ಲಿ ʻಜಾಗತಿಕ ಜೈವಿಕ ಇಂಧನ ಮೈತ್ರಿʼಯನ್ನು ಪ್ರಾರಂಭಿಸಲಾಗಿದೆ. ಜಾಗತಿಕ ದಕ್ಷಿಣದ ದೇಶಗಳಿಗೆ ಇದು ಬಹಳ ಮುಖ್ಯ. ಮತ್ತು ನೀವೆಲ್ಲರೂ ಅದರಲ್ಲಿ ಕೈಜೋಡಿಸುತ್ತೀರಿ ಎಂದು ನಾವು ಆಶಿಸುತ್ತೇವೆ.

ಹೊಸ ತಂತ್ರಜ್ಞಾನವು ಉತ್ತರ ಮತ್ತು ದಕ್ಷಿಣದ ನಡುವಿನ ಅಂತರವನ್ನು ಹೆಚ್ಚಿಸುವ ಹೊಸ ಮೂಲವಾಗಬಾರದು ಎಂದು ಭಾರತ ಭಾವಿಸುತ್ತದೆ. ಇಂದು, ಕೃತಕ ಬುದ್ಧಿಮತ್ತೆಯ(ಎಐ) ಯುಗದಲ್ಲಿ, ತಂತ್ರಜ್ಞಾನವನ್ನು ಜವಾಬ್ದಾರಿಯುತ ರೀತಿಯಲ್ಲಿ ಬಳಸುವ ಅವಶ್ಯಕತೆ ಹೆಚ್ಚಾಗಿದೆ. ಇದನ್ನು ಮುಂದುವರಿಸಲು, ಮುಂದಿನ ತಿಂಗಳು ಭಾರತದಲ್ಲಿ ʻಎಐ ಜಾಗತಿಕ ಪಾಲುದಾರಿಕೆ ಶೃಂಗಸಭೆʼಯನ್ನು ಆಯೋಜಿಸಲಾಗುತ್ತಿದೆ. ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಚೌಕಟ್ಟನ್ನು, ಅಂದರೆ ʻಡಿಪಿಐʼ ಅನ್ನು ʻಜಿ-20ʼ ಅಳವಡಿಸಿಕೊಂಡಿದೆ, ಇದು ಅಗತ್ಯ ಸೇವೆಗಳ ಕೊನೆಯ ಮೈಲಿ ವಿತರಣೆಗೆ ಸಹಾಯ ಮಾಡುತ್ತದೆ ಮತ್ತು ಒಳಗೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಜಾಗತಿಕ ʻಡಿಪಿಐ ಭಂಡಾರʼವನ್ನು ರಚಿಸಲು ಸಹ ಒಪ್ಪಲಾಗಿದೆ. ಇದರ ಅಡಿಯಲ್ಲಿ, ಭಾರತವು ತನ್ನ ಸಾಮರ್ಥ್ಯಗಳನ್ನು ಇಡೀ ಜಾಗತಿಕ ದಕ್ಷಿಣದೊಂದಿಗೆ ಹಂಚಿಕೊಳ್ಳಲು ಸಿದ್ಧವಾಗಿದೆ.

ಜಾಗತಿಕ ದಕ್ಷಿಣದ ದೇಶಗಳು ಯಾವುದೇ ನೈಸರ್ಗಿಕ ವಿಪತ್ತುಗಳಿಂದ ಹೆಚ್ಚು ಪರಿಣಾಮ ಎದುರಿಸುತ್ತವೆ. ಇದನ್ನು ಎದುರಿಸಲು, ಭಾರತವು ʻವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಕ್ಕಾಗಿ ಒಕ್ಕೂಟʼವನ್ನು, ಅಂದರೆ ʻಸಿಡಿಆರ್‌ಐʼ ಅನ್ನು ಪ್ರಾರಂಭಿಸಿದೆ. ಈಗ ವಿಪತ್ತು ಅಪಾಯವನ್ನು ಕಡಿಮೆ ಮಾಡಲು ಮತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಕ್ಕಾಗಿ ʻಜಿ -20ʼನಲ್ಲಿ ಹೊಸ ಕಾರ್ಯ ಪಡೆಯನ್ನು ಸಹ ರಚಿಸಲಾಗಿದೆ.

ಭಾರತದ ಉಪಕ್ರಮದ ಮೇರೆಗೆ, ವಿಶ್ವಸಂಸ್ಥೆಯು ಈ ವರ್ಷವನ್ನು ʻಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷʼವಾಗಿ ಆಚರಿಸುತ್ತಿದೆ. ʻಜಿ-20ʼ ಅಡಿಯಲ್ಲಿ, ʻಸೂಪರ್‌ಫುಡ್‌ʼ ಸಿರಿಧಾನ್ಯಗಳ ಬಗ್ಗೆ ಸಂಶೋಧನೆ ನಡೆಸಲು ಹೊಸ ಉಪಕ್ರಮವನ್ನು ಕೈಗೊಳ್ಳಲಾಗಿದೆ. ಇದಕ್ಕೆ ನಾವು ಭಾರತದಲ್ಲಿ 'ಶ್ರೀ ಅನ್ನ' ಎಂಬ ಗುರುತನ್ನು ನೀಡಿದ್ದೇವೆ. ಇದು ಹವಾಮಾನ ಬದಲಾವಣೆ ಮತ್ತು ಸಂಪನ್ಮೂಲಗಳ ಕೊರತೆಯಿಂದ ಉದ್ಭವಿಸುವ ಆಹಾರ ಭದ್ರತಾ ಕಳವಳಗಳನ್ನು  ಪರಿಹರಿಸಲು ಜಾಗತಿಕ ದಕ್ಷಿಣಕ್ಕೆ ಅನುವು ಮಾಡಿಕೊಡುತ್ತದೆ.

ಇದೇ ಮೊದಲ ಬಾರಿಗೆ ʻಜಿ-20ʼ ಶೃಂಗಸಭೆಯಲ್ಲಿ ಸುಸ್ಥಿರ ಮತ್ತು ಸಾಗರ ಆಧಾರಿತ ಆರ್ಥಿಕತೆಗೆ ಒತ್ತು ನೀಡಲಾಗಿದೆ. ಜಾಗತಿಕ ದಕ್ಷಿಣದ, ಸಣ್ಣ ದ್ವೀಪ ಸ್ವರೂಪದ ಅಭಿವೃದ್ಧಿಶೀಲ ದೇಶಗಳಿಗೆ ಇವು ಬಹಳ ಮುಖ್ಯ, ಇವುಗಳನ್ನು ನಾನು ʻದೊಡ್ಡ ಸಾಗರʼ ದೇಶಗಳು ಎಂದು ಪರಿಗಣಿಸುತ್ತೇನೆ. ಜಾಗತಿಕ ಮೌಲ್ಯ ಸರಪಳಿ ಮ್ಯಾಪಿಂಗ್ ಮತ್ತು ಡಿಜಿಟಲ್ ಪ್ರಮಾಣಪತ್ರಗಳ ಮಾನ್ಯತೆಗಾಗಿ ಶೃಂಗಸಭೆಯಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ಇದು ಜಾಗತಿಕ ದಕ್ಷಿಣದ ದೇಶಗಳಲ್ಲಿ ʻಎಂಎಸ್ಎಂಇʼ ವಲಯ ಮತ್ತು ವ್ಯವಹಾರಕ್ಕೆ ಹೊಸ ಅವಕಾಶಗಳನ್ನು ತೆರೆಯುತ್ತದೆ.

ಗೌರವಾನ್ವಿತರೇ,

 ಜಾಗತಿಕ ಸಮೃದ್ಧಿಗೆ ಎಲ್ಲರ ಬೆಂಬಲ ಮತ್ತು ಎಲ್ಲರ ಅಭಿವೃದ್ಧಿ ಅಗತ್ಯವಾಗಿದೆ. ಆದರೆ ಪಶ್ಚಿಮ ಏಷ್ಯಾ ಪ್ರದೇಶದ ಘಟನೆಗಳಿಂದ ಹೊಸ ಸವಾಲುಗಳು ಹೊರಹೊಮ್ಮುತ್ತಿರುವುದನ್ನು ನಾವೆಲ್ಲರೂ ನೋಡುತ್ತಿದ್ದೇವೆ. ಅಕ್ಟೋಬರ್ 7ರಂದು ಇಸ್ರೇಲ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ಭಾರತ ಖಂಡಿಸಿದೆ. ನಾವು ನಿರ್ಬಂಧಗಳ ಜೊತೆಗೆ ಮಾತುಕತೆ ಮತ್ತು ರಾಜತಾಂತ್ರಿಕತೆಗೆ ಒತ್ತು ನೀಡಿದ್ದೇವೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷದಲ್ಲಿ ನಾಗರಿಕರ ಸಾವುಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ. ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರೊಂದಿಗೆ ಮಾತನಾಡಿದ ನಂತರ, ನಾವು ಪ್ಯಾಲೆಸ್ತೀನ್‌ ಜನರಿಗೆ ಮಾನವೀಯ ಸಹಾಯವನ್ನು ಕಳುಹಿಸಿದ್ದೇವೆ. ಜಾಗತಿಕ ಒಳಿತಿಗಾಗಿ ಜಾಗತಿಕ ದಕ್ಷಿಣದ ದೇಶಗಳು ಒಂದೇ ಧ್ವನಿಯಲ್ಲಿ ಮಾತನಾಡುವ ಸಮಯ ಇದಾಗಿದೆ.

"ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ" ಕ್ಕಾಗಿ, ನಾವೆಲ್ಲರೂ ʻ5-ಸಿʼಗಳೊಂದಿಗೆ ಒಟ್ಟಾಗಿ ಮುಂದುವರಿಯೋಣ. ನಾನು ಹೇಳಿದ ʻ5-ಸಿʼ ಗಳೆಂದರೆ:  ಸಮಾಲೋಚನೆ(ಕನ್ಸಲ್ಟೇಷನ್‌), ಸಹಕಾರ(ಕೋಪರೇಷನ್‌), ಸಂವಹನ(ಕಮ್ಯುನಿಕೇಶನ್‌), ಸೃಜನಶೀಲತೆ(ಕ್ರಿಯೇಟಿವಿಟಿ) ಮತ್ತು ಸಾಮರ್ಥ್ಯ ವರ್ಧನೆ(ಕೆಪಾಸಿಟಿ ಬಿಲ್ಡಿಂಗ್‌).

ಗೌರವಾನ್ವಿತರೇ,

ಮೊದಲ ʻಜಾಗತಿಕ ದಕ್ಷಿಣದ ಧ್ವನಿʼ ಶೃಂಗಸಭೆಯಲ್ಲಿ, ಜಾಗತಿಕ ದಕ್ಷಿಣಕ್ಕಾಗಿ ಶ್ರೇಷ್ಠತೆಯ ಕೇಂದ್ರವನ್ನು ಸ್ಥಾಪಿಸಲು ನಾನು ಪ್ರಸ್ತಾಪಿಸಿದ್ದೆ. ಇಂದು ʻದಕ್ಷಿಣ್ – ಅಭಿವೃದ್ಧಿ ಮತ್ತು ಜ್ಞಾನ ಹಂಚಿಕೆ ಉಪಕ್ರಮʼ – ʻಗ್ಲೋಬಲ್ ಸೌತ್ ಸೆಂಟರ್ ಆಫ್ ಎಕ್ಸಲೆನ್ಸ್ʼ ಅನ್ನು ಉದ್ಘಾಟಿಸುತ್ತಿರುವುದು ನನಗೆ ಸಂತೋಷ ತಂದಿದೆ. ʻಜಿ-20ʼ ಶೃಂಗಸಭೆಯ ಸಮಯದಲ್ಲಿ, ಜಾಗತಿಕ ದಕ್ಷಿಣಕ್ಕಾಗಿ ಹವಾಮಾನ ಮತ್ತು ಹವಾಮಾನ ಮೇಲ್ವಿಚಾರಣೆಗಾಗಿ ಉಪಗ್ರಹಗಳನ್ನು ಉಡಾವಣೆ ಮಾಡಲು ನಾನು ಭಾರತದ ಪರವಾಗಿ ಪ್ರಸ್ತಾಪಿಸಿದ್ದೆ. ನಾವು ಈ ನಿಟ್ಟಿನಲ್ಲಿ ತ್ವರಿತ ಗತಿಯಲ್ಲಿ ಕೆಲಸ ಮಾಡುತ್ತಿದ್ದೇವೆ.

ಸ್ನೇಹಿತರೇ,

ಈ ಆಲೋಚನೆಗಳೊಂದಿಗೆ ನಾನು ನನ್ನ ಮಾತುಗಳನ್ನು ಮುಗಿಸುತ್ತೇನೆ. ಈಗ, ನಿಮ್ಮ ಆಲೋಚನೆಗಳನ್ನು ಕೇಳಲು ನಾನು ತುಂಬಾ ಉತ್ಸುಕನಾಗಿದ್ದೇನೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ ನಾನು ನಿಮಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.

ತುಂಬಾ ಧನ್ಯವಾದಗಳು!

ಗಮನಿಸಿ: ಇದು ಪ್ರಧಾನಿಯವರ ಭಾಷಣದ ಭಾವಾನುವಾದ. ಮೂಲ ಭಾಷಣ ಹಿಂದಿಯಲ್ಲಿತ್ತು.

*****

 



(Release ID: 1979323) Visitor Counter : 67