ಗೃಹ ವ್ಯವಹಾರಗಳ ಸಚಿವಾಲಯ

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಉತ್ತರಾಖಂಡದ ಡೆಹ್ರಾಡೂನ್‌ ನಲ್ಲಿಂದು ಐಟಿಬಿಪಿಯ 62 ನೇ ಸಂಸ್ಥಾಪನಾ ದಿನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು


ಸೈನಿಕರಿಗಾಗಿ ಸ್ವಯಂ ಸುಸ್ಥಿರ ಇಂಧನ ಕಟ್ಟಡ (ಎಸ್‌ ಎಸ್‌ ಇ ಬಿ) ಮತ್ತು ಕಷ್ಟಕರ ಪ್ರದೇಶಗಳಲ್ಲಿರುವ ಬಿಒಪಿಗಳಲ್ಲಿ ತರಕಾರಿ, ಔಷಧಿ ಮತ್ತು ಇತರ ಅಗತ್ಯ ವಸ್ತುಗಳ ಪೂರೈಕೆಗಾಗಿ ಡ್ರೋನ್‌ ಗಳನ್ನು ಶ್ರೀ ಅಮಿತ್ ಶಾ ಅವರು ವರ್ಚುವಲ್‌ ಮಾದರಿಯಲ್ಲಿ ಉದ್ಘಾಟಿಸಿದರು. ಐಟಿಬಿಪಿಯ 147 ಹುತಾತ್ಮರ ಬಗೆಗಿನ ಫ್ಲಿಪ್ ಪುಸ್ತಕವನ್ನು ಸಹ ಗೃಹ ಸಚಿವರು ಬಿಡುಗಡೆ ಮಾಡಿದರು

ಭಾರತದ 130 ಕೋಟಿ ಜನರು ವೀರ ಸೈನಿಕರ ತ್ಯಾಗ, ಧೈರ್ಯ ಮತ್ತು ಶೌರ್ಯವನ್ನು ಹೃತ್ಪೂರ್ವಕವಾಗಿ ಗೌರವಿಸುತ್ತಾರೆ

ಶೌರ್ಯ, ದೃಢತಾ ಮತ್ತು ಕರ್ಮನಿಷ್ಠ ಎಂಬ ಧ್ಯೇಯದೊಂದಿಗೆ ಐಟಿಬಿಪಿಯ ಹಿಮವೀರರು ಭಾರತದ ದುರ್ಗಮ ಗಡಿಗಳನ್ನು ರಕ್ಷಿಸಿದ್ದಾರೆ

ನಮ್ಮ ಯೋಧರು ಗಡಿಯಲ್ಲಿರುವವರೆಗೂ ಭಾರತದ ಒಂದು ಇಂಚು ಭೂಮಿಯನ್ನೂ ಯಾರೂ ವಶಪಡಿಸಿಕೊಳ್ಳಲು ಸಾಧ್ಯವಿಲ್ಲ

ಮೋದಿ ಸರ್ಕಾರವು ಸಿಎಪಿಎಫ್‌ ಗಳಿಗೆ ಸೇನೆಯ ಮಾದರಿಯಲ್ಲಿ ವಾಯು ಮತ್ತು ರೈಲಿನಲ್ಲಿ ಕೋಟಾವನ್ನು ನಿಗದಿಪಡಿಸಿದೆ

ಗಡಿಯಲ್ಲಿ ರಸ್ತೆ ನಿರ್ಮಾಣ, ಬಿಒಪಿ ನಿರ್ಮಾಣ, ಯೋಧರಿಗೆ ಸೌಲಭ್ಯಗಳನ್ನು ಖಾತ್ರಿಪಡಿಸುವುದು ಮತ್ತು ಹಳ್ಳಿಗಳಿಗೆ ಸೌಕರ್ಯಗಳನ್ನು ಒದಗಿಸುವುದಕ್ಕಾಗಿ ಮೋದಿ ಸರ್ಕಾರವು ವೆಚ್ಚವನ್ನು ಮೂರು ಪಟ್ಟು ಹೆಚ್ಚಿಸಿದೆ

Posted On: 10 NOV 2023 5:47PM by PIB Bengaluru

ಇಂದು ಉತ್ತರಾಖಂಡದ ಡೆಹ್ರಾಡೂನ್‌ ನಲ್ಲಿ ಇಂಡೋ ಟಿಬೆಟಿಯನ್ ಬಾರ್ಡರ್ ಪೋಲೀಸ್ (ಐಟಿಬಿಪಿ) 62 ನೇ ಸಂಸ್ಥಾಪನಾ ದಿನ ಸಮಾರಂಭದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಶ್ರೀ ಅಮಿತ್ ಶಾ ಅವರು ಸೈನಿಕರಿಗಾಗಿ ಸ್ವಯಂ ಸುಸ್ಥಿರ ಇಂಧನ ಕಟ್ಟಡ (ಎಸ್‌ ಎಸ್‌ ಇ ಬಿ) ಮತ್ತು ಕಷ್ಟಕರ ಪ್ರದೇಶಗಳಲ್ಲಿ ಇರುವ ಬಿಒಪಿಗಳಲ್ಲಿ (ಗಡಿ ವೀಕ್ಷಣಾ ಠಾಣೆಗಳು) ತರಕಾರಿಗಳು, ಔಷಧಗಳು ಮತ್ತು ಇತರ ಅಗತ್ಯ ಸರಕುಗಳ ಪೂರೈಕೆಗಾಗಿ ಡ್ರೋನ್‌ ಗಳನ್ನು ವರ್ಚುವಲ್‌ ಮಾದರಿಯಲ್ಲಿ ಉದ್ಘಾಟಿಸಿದರು. ಶ್ರೀ ಶಾ ಅವರು ಐಟಿಬಿಪಿಯ 147 ಹುತಾತ್ಮರನ್ನು ಕುರಿತ ಫ್ಲಿಪ್ ಪುಸ್ತಕವನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ, ಉತ್ತರಾಖಂಡದ ಮುಖ್ಯಮಂತ್ರಿ ಶ್ರೀ ಪುಷ್ಕರ್ ಸಿಂಗ್ ಧಾಮಿ ಮತ್ತು ಐಟಿಬಿಪಿ ಮಹಾನಿರ್ದೇಶಕರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

https://static.pib.gov.in/WriteReadData/userfiles/image/image0014XP8.jpg

ದೀಪಾವಳಿಯಂದು ದೇಶದ ಜನರು ತಮ್ಮ ಮನೆಗಳಲ್ಲಿ ದೀಪವನ್ನು ಬೆಳಗಿಸಿದಾಗ, ಗಡಿಯಲ್ಲಿ ನಿಯೋಜಿಸಲಾದ ನಮ್ಮ ವೀರ ಯೋಧರಿಗಾಗಿಯೂ ದೀಪವನ್ನು ಬೆಳಗಿಸುತ್ತಾರೆ ಎಂದು ಶ್ರೀ ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ ಹೇಳಿದರು. ದೇಶದ 130 ಕೋಟಿ ಜನರು ವೀರ ಸೈನಿಕರ ತ್ಯಾಗ, ಧೈರ್ಯ ಮತ್ತು ಶೌರ್ಯವನ್ನು ಹೃತ್ಪೂರ್ವಕವಾಗಿ ಗೌರವಿಸುತ್ತಾರೆ ಎಂದು ಅವರು ಹೇಳಿದರು. ದೇಶದ ವೀರ ಸೈನಿಕರು ತಮ್ಮ ಜೀವನದ ಸುವರ್ಣ ವರ್ಷಗಳನ್ನು ಗಡಿಯಲ್ಲಿ ದೇಶದ ಭದ್ರತೆಗಾಗಿ ಮುಡಿಪಾಗಿಟ್ಟಿರುವುದರಿಂದಲೇ ದೇಶದ ಜನತೆ ವರ್ಷವಿಡೀ ನೆಮ್ಮದಿಯಿಂದ ನಿದ್ರಿಸುತ್ತಾರೆ ಎಂದರು. ಹಿಮವೀರರ ತ್ಯಾಗ ಮತ್ತು ಸೇವೆ ಅಮೂಲ್ಯವಾದುದು ಮತ್ತು ಇದಕ್ಕೆ ಇಡೀ ದೇಶವೇ ನಮನ ಸಲ್ಲಿಸುತ್ತದೆ ಎಂದು ಶ್ರೀ ಶಾ ಹೇಳಿದರು.

https://static.pib.gov.in/WriteReadData/userfiles/image/image002LW8M.jpg

ಇಂದು ಐಟಿಬಿಪಿಯ ಸಂಸ್ಥಾಪನಾ ದಿನವಾಗಿದ್ದು, ಶೌರ್ಯ, ದೃಢತಾ ಮತ್ತು ಕರ್ಮನಿಷ್ಠ (ಶೌರ್ಯ, ಸಂಕಲ್ಪ ಮತ್ತು ಕರ್ತವ್ಯ ನಿಷ್ಠೆ) ಎಂಬ ಧ್ಯೇಯದೊಂದಿಗೆ ನಮ್ಮ ಹಿಮವೀರರು ಕಳೆದ 62 ವರ್ಷಗಳಿಂದ ಭಾರತದ ದುರ್ಗಮ ಗಡಿಗಳನ್ನು ರಕ್ಷಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಮೈನಸ್ 45 ಡಿಗ್ರಿ ತಾಪಮಾನದಲ್ಲಿ ಜಾಗರೂಕರಾಗಿರುವುದು ಮತ್ತು ದೇಶದ ಗಡಿಗಳನ್ನು ರಕ್ಷಿಸುವುದು ಐಟಿಬಿಪಿಯ ಸಂಪ್ರದಾಯವಾಗಿದೆ ಮತ್ತು ಸರ್ವೋಚ್ಚ ತ್ಯಾಗಕ್ಕೆ ಯಾವಾಗಲೂ ಸಿದ್ಧವಾಗಿರುತ್ತದೆ ಎಂದು ಅವರು ಹೇಳಿದರು. 62 ವರ್ಷಗಳ ಹಿಂದೆ 7 ವಿಭಾಗಗಳೊಂದಿಗೆ ಪ್ರಾರಂಭವಾದ ಐಟಿಬಿಪಿ ಇಂದು ಒಂದು ಲಕ್ಷ ಹಿಮವೀರರು, 60 ಬೆಟಾಲಿಯನ್‌ ಗಳು, 17 ತರಬೇತಿ ಕೇಂದ್ರಗಳು, 16 ಸೆಕ್ಟರ್‌ ಗಳು, 5 ಗಡಿಗಳು ಮತ್ತು 2 ಕಮಾಂಡ್ ಹೆಡ್ ಕ್ವಾರ್ಟರ್ಸ್‌ ಗಳೊಂದಿಗೆ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ಶ್ರೀ ಶಾ ಹೇಳಿದರು. ಹಿಮವೀರರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಿಗೆ (ಸಿಎಪಿಎಫ್) ವಾಯು ಮತ್ತು ರೈಲಿನಲ್ಲಿ ಸೇನೆಯ ಮಾದರಿಯಲ್ಲಿ ಕೋಟಾವನ್ನು ನಿಗದಿಪಡಿಸಿದೆ ಎಂದು ಅವರು ಹೇಳಿದರು.

https://static.pib.gov.in/WriteReadData/userfiles/image/image003F8MX.jpg

ಇಂದು ಕೈಗೊಂಡಿರುವ ಅನೇಕ ಹೊಸ ಉಪಕ್ರಮಗಳ ಪೈಕಿ, ಸ್ವಯಂ ಸುಸ್ಥಿರ ಇಂಧನ ಕಟ್ಟಡ (ಎಸ್‌ ಎಸ್‌ ಇ ಬಿ) ಬಹಳ ವಿಶೇಷವಾಗಿದೆ, ಏಕೆಂದರೆ ಈ ಕಟ್ಟಡವನ್ನು 17,000 ಅಡಿ ಎತ್ತರದಲ್ಲಿ ಶೀತ ಮರುಭೂಮಿಯಲ್ಲಿ ನಿರ್ಮಿಸಲಾಗಿದ್ದು, ಇದು ಸ್ವಾವಲಂಬಿ ಭಾರತದ ಸಂಕೇತವಾಗಲಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಈ ಕಟ್ಟಡವು ದೇಶದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಗೃಹ ಸಚಿವಾಲಯದಿಂದ ಹಿಮವೀರರಿಗೆ ವಿಶಿಷ್ಟವಾದ ದೀಪಾವಳಿ ಉಡುಗೊರೆಯಾಗಿದೆ ಎಂದು ಅವರು ಹೇಳಿದರು. ಹೊರಗಿನ ತಾಪಮಾನವು ಶೂನ್ಯಕ್ಕಿಂತ 40-45 ಡಿಗ್ರಿಗಳಿಗೆ ಇಳಿದಾಗ ಮತ್ತು ಪೆಟ್ರೋಲ್ ಅಥವಾ ಡೀಸೆಲ್ ಅನ್ನು ಸಹ ಬಳಸಲಾಗುವುದಿಲ್ಲ, ಈ ಕಟ್ಟಡವು 18-19 ಡಿಗ್ರಿ ತಾಪಮಾನದಲ್ಲಿ ಸೈನಿಕರನ್ನು ಸುರಕ್ಷಿತವಾಗಿರಿಸುತ್ತದೆ ಎಂದು ಶ್ರೀ ಶಾ ಹೇಳಿದರು. ಕೇವಲ 2 ತಿಂಗಳಲ್ಲಿ ಸ್ವಯಂ ಸುಸ್ಥಿರ ಇಂಧನ ಕಟ್ಟಡವನ್ನು ಪೂರ್ಣಗೊಳಿಸಲಾಗಿದೆ ಎಂದು ಅವರು ಹೇಳಿದರು.

https://static.pib.gov.in/WriteReadData/userfiles/image/image004U7DK.jpg

ಎತ್ತರದ ಮತ್ತು ಕಷ್ಟಕರ ಪ್ರದೇಶಗಳಲ್ಲಿರುವ ಬಿಒಪಿ (ಗಡಿ ವೀಕ್ಷಣಾ ಪೋಸ್ಟ್) ನಲ್ಲಿ ತರಕಾರಿಗಳು, ಔಷಧಗಳು ಮತ್ತು ಇತರ ಅಗತ್ಯ ಲಾಜಿಸ್ಟಿಕ್ಸ್ ವಸ್ತುಗಳ ಪೂರೈಕೆಗೆ ಡ್ರೋನ್‌ ಗಳನ್ನು ಬಳಸುವ ಆಲೋಚನೆಯನ್ನು ಪ್ರಧಾನಿ ಮೋದಿ ನಮ್ಮೆಲ್ಲರ ಮುಂದಿಟ್ಟರು ಎಂದು ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ಹೇಳಿದರು. ಈ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಮೊದಲ ಡ್ರೋನ್ ಇಂದು 15 ಕೆಜಿ ಔಷಧಿ ಮತ್ತು ತರಕಾರಿಗಳನ್ನು ಹೊತ್ತು ದೂರದ ಪ್ರದೇಶವನ್ನು ತಲುಪಿದೆ, ಇದೊಂದು ದೊಡ್ಡ ಹೆಜ್ಜೆಯಾಗಿದೆ ಎಂದು ಅವರು ಹೇಳಿದರು. ಇಂದು ಆರಂಭಗೊಂಡಿರುವ ಡ್ರೋನ್ ಸೇವೆಯು ನಮ್ಮ ಹಿಮವೀರರಿಗೆ ಮಾತ್ರವಲ್ಲದೆ ಗಡಿ ಗ್ರಾಮಗಳ ಜನತೆಗೂ ಅನುಕೂಲವಾಗಲಿದೆ ಎಂದರು. ದೂರದ ಪ್ರದೇಶಗಳಲ್ಲಿ ಭದ್ರತೆಯನ್ನು ಕಾಪಾಡಿಕೊಳ್ಳಲು, ಅಂತರವನ್ನು ತುಂಬುವುದು ಬಹಳ ಮುಖ್ಯವಾಗಿದೆ ಮತ್ತು ಈ ಅಂತರಗಳಿಂದಾಗಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಶ್ರೀ ಶಾ ಹೇಳಿದರು. ಇತ್ತೀಚೆಗೆ, ಗೃಹ ಸಚಿವಾಲಯದ ಉಪಕ್ರಮದ ಮೇರೆಗೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಐಟಿಬಿಪಿ ಸ್ಥಾಪನೆಯಾದ ನಂತರ ಇದೇ ಮೊದಲ ಬಾರಿಗೆ ಒಟ್ಟಾಗಿ 7 ಬೆಟಾಲಿಯನ್‌ ಗಳಿಗೆ ಅನುಮೋದನೆ ನೀಡಿದ್ದಾರೆ. ಈ 7 ಬೆಟಾಲಿಯನ್‌ ಗಳಲ್ಲಿ 4 ಬೆಟಾಲಿಯನ್‌ ಗಳನ್ನು ಶೀಘ್ರದಲ್ಲೇ ನಿಯೋಜಿಸಲಾಗುವುದು. ಸುಮಾರು 3000 ಕೋಟಿ ರೂಪಾಯಿ ವೆಚ್ಚದಲ್ಲಿ ಈ 7 ಬೆಟಾಲಿಯನ್‌ ಗಳು ಮತ್ತು 1 ಸೆಕ್ಟರ್ ಪ್ರಧಾನ ಕಛೇರಿಗಳನ್ನು ನಿರ್ಮಿಸಲಾಗುವುದು ಎಂದು ಶ್ರೀ ಶಾ ಹೇಳಿದರು.

https://static.pib.gov.in/WriteReadData/userfiles/image/image005WHWS.jpg

ಐಟಿಬಿಪಿ ಶೌರ್ಯ, ದೃಢತೆ ಮತ್ತು ಕರ್ಮನಿಷ್ಠೆಗೆ ಹೆಸರುವಾಸಿಯಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಭಾರತವು 7516 ಕಿ.ಮೀ ಉದ್ದದ ಕರಾವಳಿ ಮತ್ತು 15,000 ಕಿ.ಮೀ ಗಿಂತಲೂ ಹೆಚ್ಚು ಭೂ ಗಡಿಯನ್ನು ಹೊಂದಿದೆ ಎಂದು ಅವರು ಹೇಳಿದರು. ಭಾರತವು ತನ್ನ ಭೂ ಗಡಿಯನ್ನು 7 ದೇಶಗಳೊಂದಿಗೆ ಹಂಚಿಕೊಂಡಿದ್ದು, ಹಿಮಾಲಯ ಪ್ರದೇಶದಲ್ಲಿನ ಗಡಿಗಳನ್ನು ರಕ್ಷಿಸುವ ಜವಾಬ್ದಾರಿಯನ್ನು ಐಟಿಬಿಪಿಗೆ ನೀಡಲಾಗಿದೆ ಎಂದು ಅವರು ಹೇಳಿದರು. ನಮ್ಮ ವೀರ ಹಿಮವೀರರು ಅತ್ಯಂತ ಕಷ್ಟಕರ ಪ್ರದೇಶಗಳಲ್ಲಿ ಅತ್ಯುತ್ತಮ ರೀತಿಯಲ್ಲಿ ಗಡಿಗಳನ್ನು ರಕ್ಷಿಸಿದ್ದಾರೆ ಎಂದು ಅವರು ಹೇಳಿದರು. ಐಟಿಬಿಪಿಯು ತನ್ನ 6 ದಶಕಗಳ ನಿರಂತರ ಸೇವೆಯಲ್ಲಿ 7 ಪದ್ಮಶ್ರೀ, 2 ಕೀರ್ತಿ ಚಕ್ರಗಳು, 6 ಶೌರ್ಯ ಚಕ್ರಗಳು, 19 ರಾಷ್ಟ್ರಪತಿಯವರ ಪೊಲೀಸ್ ಪದಕಗಳು, 14 ತೇನ್ಸಿಂಗ್ ನಾರ್ಗೆ ಸಾಹಸ ಪದಕಗಳು ಮತ್ತು ಇತರ ಅನೇಕ ಪದಕಗಳನ್ನು ಪಡೆದಿದೆ ಎಂದು ಶ್ರೀ ಶಾ ಹೇಳಿದರು, ಇದು ಈ ಪಡೆಯ ಶೌರ್ಯ ಮತ್ತು ತ್ಯಾಗವನ್ನು ಸಂಕೇತಿಸುತ್ತದೆ. ಗಡಿಯಲ್ಲಿ ನಮ್ಮ ಐಟಿಬಿಪಿ ಮತ್ತು ಸೇನೆಯ ಸಿಬ್ಬಂದಿ ಇರುವವರೆಗೂ ಭಾರತದ ಒಂದು ಇಂಚು ಭೂಮಿಯನ್ನೂ ಯಾರೂ ವಶಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಇದೀಗ ಹಿಮ ವೀರಾಂಗನೆಯರೂ ದೇಶದ ಗಡಿ ರಕ್ಷಣೆಯಲ್ಲಿ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿದ್ದಾರೆ ಎಂದರು. ಇಂತಹ ದೂರದ ಪ್ರದೇಶದಲ್ಲಿ ದೇಶದ ಗಡಿಯನ್ನು ರಕ್ಷಿಸಲು ನಿಯೋಜನೆಗೊಂಡಿರುವ ವೀರಾಂಗನೆಯರನ್ನು ಕೇಂದ್ರ ಗೃಹ ಸಚಿವರು ವಿಶೇಷವಾಗಿ ಅಭಿನಂದಿಸಿ ಶುಭ ಹಾರೈಸಿದರು.

https://static.pib.gov.in/WriteReadData/userfiles/image/image006HK8U.jpg

ಕ್ರೀಡಾ ಕ್ಷೇತ್ರದಲ್ಲಿ ಐಟಿಬಿಪಿಯ ಪಾಲ್ಗೊಳ್ಳುವಿಕೆ ಕೂಡ ಸಾಕಷ್ಟು ಹೆಚ್ಚಾಗಿದ್ದು, ಇದು ಶ್ಲಾಘನೀಯವಾದುದು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಇದಲ್ಲದೆ, ಪರಿಸರ ಸಂರಕ್ಷಣೆಗಾಗಿ ತಮ್ಮ ಪ್ರಯತ್ನದಲ್ಲಿ, ಐಟಿಬಿಪಿ ದೂರದ ಪ್ರದೇಶಗಳಲ್ಲಿ 36 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿದೆ. ಎಲ್ಲಾ ಸೈನಿಕರು ಗಿಡಮರಗಳೊಂದಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಅವರು ಹೇಳಿದರು, ಇದು ಅವರ ಮನಸ್ಸಿನಲ್ಲಿ ಅಗಾಧವಾದ ಬದಲಾವಣೆ ಮತ್ತು ಸೂಕ್ಷ್ಮತೆಯನ್ನು ತರುವುದು ಮಾತ್ರವಲ್ಲದೆ ಮರಗಳ ಪೋಷಣೆಯೊಂದಿಗಿನ ಈ ಒಡನಾಟವು ಸೈನಿಕರ ಮನಸ್ಸಿನಲ್ಲೂ ದೊಡ್ಡ ಬದಲಾವಣೆಯನ್ನು ತರುತ್ತದೆ. ಈ 36 ಲಕ್ಷ ಸಸಿಗಳು 5 ವರ್ಷಗಳಲ್ಲಿ ದೊಡ್ಡ ಮರಗಳಾಗುತ್ತವೆ ಮತ್ತು ದೇಶದ ಹಾಗೂ ಇಡೀ ಪ್ರಪಂಚದ ಪರಿಸರವನ್ನು ಶುದ್ಧೀಕರಿಸುತ್ತವೆ ಎಂದು ಶ್ರೀ ಶಾ ಹೇಳಿದರು. ಇತ್ತೀಚೆಗೆ ಪ್ರಧಾನಿ ಮೋದಿಯವರು ವೈಬ್ರೆಂಟ್ ವಿಲೇಜ್ ಕಾರ್ಯಕ್ರಮದ ಮೂಲಕ ದೇಶಕ್ಕೆ ಹೊಸ ಪರಿಕಲ್ಪನೆಯನ್ನು ಪ್ರಸ್ತುತಪಡಿಸಿದ್ದಾರೆ ಎಂದು ಶ್ರೀ ಶಾ ಹೇಳಿದರು. ಈ ಹಿಂದೆ ಗಡಿ ಭಾಗದಲ್ಲಿರುವ ಗ್ರಾಮವನ್ನು ದೇಶದ ಕೊನೆಯ ಗ್ರಾಮ ಎಂದು ಕರೆಯಲಾಗುತ್ತಿತ್ತು, ಆದರೆ ಪ್ರಧಾನಿ ಮೋದಿ ಅಲ್ಲಿಗೆ ತೆರಳಿ ಇದು ಕೊನೆಯ ಗ್ರಾಮವಲ್ಲ, ದೇಶದ ಮೊದಲ ಗ್ರಾಮ ಎಂದು ಹೇಳಿದರು. ಗಡಿಯಲ್ಲಿರುವ ಗ್ರಾಮಗಳ ಜನಸಂಖ್ಯೆಯನ್ನು ಉಳಿಸಿಕೊಳ್ಳುವುದು ಮಾತ್ರವಲ್ಲದೆ ಅದನ್ನು ಹೆಚ್ಚಿಸುವ ಮತ್ತು ದೇಶದ ಇತರ ಭಾಗಗಳಂತೆ ಸೌಲಭ್ಯಗಳನ್ನು ಒದಗಿಸುವ ವಿಧಾನದೊಂದಿಗೆ ಪ್ರಧಾನಿ ಮೋದಿ ಅವರು ವೈಬ್ರಂಟ್ ವಿಲೇಜ್ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದಾರೆ ಎಂದು ಶ್ರೀ ಶಾ ಹೇಳಿದರು. ಈ ಕಾರ್ಯಕ್ರಮದ ಮೊದಲ ಹಂತದಲ್ಲಿ 19 ಜಿಲ್ಲೆಗಳ 46 ಬ್ಲಾಕ್‌ ಗಳ 662 ಗ್ರಾಮಗಳಿಗೆ ವಿದ್ಯುತ್, ರಸ್ತೆ, ಉದ್ಯೋಗ, ಕೌಶಲ್ಯಾಭಿವೃದ್ಧಿ, ಶಿಕ್ಷಣ ಮತ್ತು ಆರೋಗ್ಯವನ್ನು ಸುವ್ಯವಸ್ಥಿತಗೊಳಿಸಲು ಮೋದಿ ಸರ್ಕಾರವು 4800 ಕೋಟಿ ರೂಪಾಯಿಗಳ ಬಜೆಟ್‌ ನೊಂದಿಗೆ ಕೆಲಸ ಮಾಡಿದೆ ಎಂದು ಶ್ರೀ ಶಾ ಹೇಳಿದರು.

ದೇಶದ ಗಡಿಗಳ ಭದ್ರತೆ ಹಿಮವೀರರ ಜವಾಬ್ದಾರಿಯಾಗಿದೆ, ಆದರೆ ಈ ಗಡಿ ಗ್ರಾಮಗಳು ಖಾಲಿಯಾದರೆ ಈ ಕಾರ್ಯದಲ್ಲಿ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತವೆ ಎಂದು ಅವರು ಹೇಳಿದರು. ನಮ್ಮ ಸಿಎಪಿಎಫ್‌ ಗಳು ನಿಯೋಜನೆಯಾಗಿರುವ ಕಡೆಯಲ್ಲೆಲ್ಲಾ ನಾವು ಅವರನ್ನು ಅಭಿವೃದ್ಧಿ ಕಾರ್ಯಗಳಿಗೆ ನೋಡಲ್ ಏಜೆನ್ಸಿಯಾಗಿಸಬೇಕು ಮತ್ತು ಎಲ್ಲಾ ಸೌಲಭ್ಯಗಳು ಹಳ್ಳಿಗಳಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದರು. ಮುಂಬರುವ ವರ್ಷದಲ್ಲಿ 168 ಸಂಪರ್ಕರಹಿತ ಗ್ರಾಮಗಳಿಗೆ ರಸ್ತೆ, ವಿದ್ಯುತ್, ದೂರಸಂಪರ್ಕ ಮತ್ತು ಆರೋಗ್ಯ ಸೇವೆಗಳನ್ನು ಕಲ್ಪಿಸಲಾಗುವುದು ಎಂದು ಶ್ರೀ ಶಾ ಹೇಳಿದರು. ಗಡಿಯಲ್ಲಿ ಸೌಲಭ್ಯಗಳನ್ನು ಅಭಿವೃದ್ಧಿಪಡಿಸದೆ ದೇಶ ಸುರಕ್ಷಿತವಾಗಿರಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. 2014ರ ಮೊದಲು ಭಾರತ-ಚೀನಾ ಗಡಿ ಸೌಲಭ್ಯಗಳ ಅಭಿವೃದ್ಧಿಗೆ ವಾರ್ಷಿಕ ಸರಾಸರಿ ವೆಚ್ಚ 4,000 ಕೋಟಿ ರೂ.ಗಳಷ್ಟಿತ್ತು, ಆದರೆ ಕಳೆದ 9 ವರ್ಷಗಳಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಇದನ್ನು ವರ್ಷಕ್ಕೆ 12,340 ಕೋಟಿ ರೂ.ಗೆ ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು. ಗಡಿಯಲ್ಲಿ ರಸ್ತೆ ನಿರ್ಮಾಣ, ಬಿಒಪಿ ನಿರ್ಮಾಣ, ಸೈನಿಕರಿಗೆ ಸೌಲಭ್ಯಗಳನ್ನು ಖಾತ್ರಿಪಡಿಸಲು ಮತ್ತು ಹಳ್ಳಿಗಳಿಗೆ ಸೌಕರ್ಯಗಳನ್ನು ಒದಗಿಸಲು ಭಾರತ ಸರ್ಕಾರ ವೆಚ್ಚವನ್ನು ಮೂರು ಪಟ್ಟು ಹೆಚ್ಚಿಸಿದೆ ಎಂದು ಅವರು ಹೇಳಿದರು. ಮೋದಿ ಸರ್ಕಾರವು ಈ ಕಷ್ಟಕರ ಪ್ರದೇಶದಲ್ಲಿ 350 ಕ್ಕೂ ಹೆಚ್ಚು ಸೇತುವೆಗಳು ಮತ್ತು ಮೋರಿಗಳನ್ನು ನಿರ್ಮಿಸಿದೆ ಎಂದು ಶ್ರೀ ಶಾ ಹೇಳಿದರು. ಸರಕಾರ ಕಳೆದ 9 ವರ್ಷಗಳಲ್ಲಿ ಸೈನಿಕರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಅವರು ಹೇಳಿದರು.

https://static.pib.gov.in/WriteReadData/userfiles/image/image00736QP.jpg

ಶ್ರೀ ಮೋದಿಯವರ ನೇತೃತ್ವದಲ್ಲಿ ಕಳೆದ 9 ವರ್ಷಗಳಲ್ಲಿ ದೇಶದ ಆಂತರಿಕ ಭದ್ರತೆಯ ಪರಿಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಕಾಶ್ಮೀರದಿಂದ 370 ನೇ ವಿಧಿಯನ್ನು ತೆಗೆದುಹಾಕಿದ ನಂತರ, ನಾವು ಭಯೋತ್ಪಾದನೆಯ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾಗಿದ್ದೇವೆ. ಸಾವುಗಳಲ್ಲಿ ಶೇ.72 ರಷ್ಟು ಇಳಿಕೆಯಾಗಿದೆ. ಎಡಪಂಥೀಯ ಉಗ್ರವಾದದಲ್ಲಿ ಶೇ.80ರಷ್ಟು ಇಳಿಕೆಯಾಗಿದೆ. ಶ್ರೀ ಮೋದಿಯವರ ನೇತೃತ್ವದಲ್ಲಿ ದೇಶದ ಆಂತರಿಕ ಭದ್ರತೆಯು ತುಂಬಾ ಪ್ರಬಲವಾಗುತ್ತಿದೆ ಮತ್ತು ನಮ್ಮ ಹಿಮವೀರರು ಗಡಿಗಳ ಭದ್ರತೆಯನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಶ್ರೀ ಶಾ ಹೇಳಿದರು. ಸ್ವಾತಂತ್ರ್ಯದ ಅಮೃತ ವರ್ಷವು ಈಗಷ್ಟೇ ಕೊನೆಗೊಂಡಿದೆ ಮತ್ತು ಸ್ವಾತಂತ್ರ್ಯದ ಅಮೃತ ಕಾಲದ ಸಮಯದಲ್ಲಿ, 2047 ರ ವೇಳೆಗೆ ಭಾರತವನ್ನು ಎಲ್ಲಾ ಕ್ಷೇತ್ರಗಳಲ್ಲೂ ವಿಶ್ವದಲ್ಲಿ ಮೊದಲ ಸ್ಥಾನದಲ್ಲಿರಿಸಲು ನಾವೆಲ್ಲರೂ ಸಂಕಲ್ಪ ಮಾಡಬೇಕಾಗಿದೆ ಎಂದು ಅವರು ಹೇಳಿದರು. 2047 ರ ವೇಳೆಗೆ ನಾವು ಭಾರತವನ್ನು ಪ್ರತಿಯೊಂದು ಕ್ಷೇತ್ರದಲ್ಲೂ ಜಗತ್ತನ್ನು ಮುನ್ನಡೆಸುವ ದೇಶವನ್ನಾಗಿ ಮಾಡಬೇಕಾಗಿದೆ ಎಂದು ಶ್ರೀ ಶಾ ಹೇಳಿದರು.

***



(Release ID: 1976281) Visitor Counter : 76