ಪ್ರಧಾನ ಮಂತ್ರಿಯವರ ಕಛೇರಿ

​​​​​​​ʻವಿಶ್ವ ಆಹಾರ ಭಾರತ-2023ʼಕ್ಕೆ ಚಾಲನೆ ನೀಡಿದ ಪ್ರಧಾನಿ


ಒಂದು ಲಕ್ಷಕ್ಕೂ ಅಧಿಕ ಸ್ವಸಹಾಯ ಗುಂಪುಗಳ (ಎಸ್‌ಎಚ್‌ಜಿ) ಸದಸ್ಯರಿಗೆ ಬೀಜ ಬಂಡವಾಳ ನೆರವು ವಿತರಣೆ

ʻವಿಶ್ವ ಆಹಾರ ಭಾರತ-2023ʼರ ಭಾಗವಾಗಿ ʻಆಹಾರ ಮೇಳʼ ಉದ್ಘಾಟನೆ

“ತಂತ್ರಜ್ಞಾನ ಮತ್ತು ಅಭಿರುಚಿಯ ಸಮಾಗಮವು ಭವಿಷ್ಯದ ಆರ್ಥಿಕತೆಗೆ ದಾರಿ ಮಾಡಿಕೊಡುತ್ತದೆ"

"ಸರ್ಕಾರದ ಹೂಡಿಕೆದಾರ ಸ್ನೇಹಿ ನೀತಿಗಳು ಆಹಾರ ಕ್ಷೇತ್ರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿವೆ"

"ಆಹಾರ ಸಂಸ್ಕರಣಾ ಉದ್ಯಮದ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತ ಗಮನಾರ್ಹ ಬೆಳವಣಿಗೆಯನ್ನು ಸಾಧಿಸಿದೆ"

"ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಭಾರತದ ಬೆಳವಣಿಗೆಯ ಯಶೋಗಾಥೆಯ ಮೂರು ಸ್ತಂಭಗಳೆಂದರೆ ಸಣ್ಣ ರೈತರು, ಸಣ್ಣ ಕೈಗಾರಿಕೆಗಳು ಮತ್ತು ಮಹಿಳೆಯರು"

" ಒಂದು ಜಿಲ್ಲೆ ಒಂದು ಉತ್ಪನ್ನ" ದಂತಹ ಯೋಜನೆಗಳು ಸಣ್ಣ ರೈತರು ಮತ್ತು ಸಣ್ಣ ಕೈಗಾರಿಕೆಗಳಿಗೆ ಹೊಸ ಗುರುತನ್ನು ನೀಡುತ್ತಿವೆ”

"ಭಾರತೀಯ ಮಹಿಳೆಯರು ಆಹಾರ ಸಂಸ್ಕರಣಾ ಉದ್ಯಮವನ್ನು ಮುನ್ನಡೆಸುವ ಸ್ವಾಭಾವಿಕ ಸಾಮರ್ಥ್ಯವನ್ನು ಹೊಂದಿದ್ದಾರೆ"

"ಭಾರತದ ಆಹಾರ ವೈವಿಧ್ಯತೆಯು ಜಾಗತಿಕ ಹೂಡಿಕೆದಾರರಿಗೆ ವರದಾನವಾಗಿದೆ"

"ಭಾರತದ ಸುಸ್ಥಿರ ಆಹಾರ ಸಂಸ್ಕೃತಿಯು ಸಾವಿರಾರು ವರ್ಷಗಳಿಂದ ವಿಕಸನಗೊಂಡಿದೆ. ನಮ್ಮ ಪೂರ್ವಜರು ಆಹಾರ ಪದ್ಧತಿಯನ್ನು ಆಯುರ್ವೇದದೊಂದಿಗೆ ಜೋಡಿಸಿದ್ದಾರೆ."

"ಸಿರಿಧಾನ್ಯಗಳು ಭಾರತದ 'ಸೂಪರ್ ಫುಡ್ಬಕೆಟ್' ನ ಒಂದು ಭಾಗವಾಗಿದೆ ಮತ್ತು ಸರ್ಕಾರ ಅದನ್ನು “ಶ್ರೀ ಅನ್ನʼʼ ಎಂದು ಗುರುತಿಸಿದೆ"

"ಆಹಾರದ ಪೋಲನ್ನು ತಗ್ಗಿಸುವುದು ಸುಸ್ಥಿರ ಜೀವನಶೈಲಿಯ ಉದ್ದೇಶವನ್ನು ಸಾಕಾರಗೊಳಿಸುವಲ್ಲಿ ಮಹತ್ವದ ಪ್ರಯತ್ನವಾಗಿದೆ"

Posted On: 03 NOV 2023 12:55PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಪ್ರಗತಿ ಮೈದಾನದ ʻಭಾರತ್ ಮಂಟಪಂʼನಲ್ಲಿ ಬೃಹತ್‌ ಆಹಾರ ಕಾರ್ಯಕ್ರಮದ ಎರಡನೇ ಆವೃತ್ತಿಯಾದ 'ವಿಶ್ವ ಆಹಾರ ಭಾರತ-2023'ಕ್ಕೆ ಚಾಲನೆ ನೀಡಿದರು. ಸ್ವಸಹಾಯ ಗುಂಪುಗಳನ್ನು ಬಲಪಡಿಸಲು ಒಂದು ಲಕ್ಷಕ್ಕೂ ಅಧಿಕ ಸ್ವಸಹಾಯ ಗುಂಪುಗಳ (ಎಸ್‌ಎಚ್‌ಜಿ) ಸದಸ್ಯರಿಗೆ ಬೀಜ ಬಂಡವಾಳ ನೆರವನ್ನು ಅವರು ವಿತರಿಸಿದರು. ಈ ಸಂದರ್ಭದಲ್ಲಿ ಏರ್ಪಡಿಸಲಾದ ವಸ್ತುಪ್ರದರ್ಶನದಲ್ಲೂ ಪ್ರಧಾನಿ ಶ್ರೀ ಮೋದಿ ಅವರು ಹೆಜ್ಜೆ ಹಾಕಿದರು. ಭಾರತವನ್ನು 'ವಿಶ್ವದ ಆಹಾರ ಬುಟ್ಟಿ' ಎಂದು ಪ್ರದರ್ಶಿಸುವುದು ಮತ್ತು 2023 ಅನ್ನು ʻಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷʼವಾಗಿ ಆಚರಿಸುವುದು ಈ ಕಾರ್ಯಕ್ರಮದ ಗುರಿಯಾಗಿದೆ.

ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಈ ಸಂದರ್ಭದಲ್ಲಿ ಪ್ರದರ್ಶಿಸಲಾದ ತಂತ್ರಜ್ಞಾನ ಮತ್ತು ನವೋದ್ಯಮ ಪೆವಿಲಿಯನ್ ಹಾಗೂ ಆಹಾರ ಮೇಳವನ್ನು ಶ್ಲಾಘಿಸಿದರು. ತಂತ್ರಜ್ಞಾನ ಮತ್ತು ಅಭಿರುಚಿಯ ಸಮಾಗಮವು ಭವಿಷ್ಯದ ಆರ್ಥಿಕತೆಗೆ ದಾರಿ ಮಾಡಿಕೊಡುತ್ತದೆ ಎಂದರು. ಇಂದಿನ ಬದಲಾಗುತ್ತಿರುವ ಜಗತ್ತಿನಲ್ಲಿ, ಆಹಾರ ಭದ್ರತೆಯ ಪ್ರಮುಖ ಸವಾಲೊಂದನ್ನು ವಿಶೇಷವಾಗಿ ಎತ್ತಿ ಹಿಡಿದ ಪ್ರಧಾನಿಯವರು ʻವಿಶ್ವ ಆಹಾರ ಭಾರತ-2023ʼರ ಮಹತ್ವವನ್ನು ಒತ್ತಿ ಹೇಳಿದರು.

ಭಾರತದ ಆಹಾರ ಸಂಸ್ಕರಣಾ ವಲಯವನ್ನು 'ಸೂರ್ಯೋದಯ ವಲಯ' ಎಂದು ಗುರುತಿಸಿರುವುದಕ್ಕೆ ʻವಿಶ್ವ ಆಹಾರ ಭಾರತʼದ ಫಲಿತಾಂಶಗಳು ಸಹ ದೊಡ್ಡ ಉದಾಹರಣೆ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು. ಕಳೆದ 9 ವರ್ಷಗಳಲ್ಲಿ, ಸರ್ಕಾರದ ಉದ್ಯಮ ಪರ ಮತ್ತು ರೈತ ಪರ ನೀತಿಗಳ ಪರಿಣಾಮವಾಗಿ ಈ ವಲಯವು 50,000 ಕೋಟಿ ರೂ.ಗಿಂತಲೂ ಅಧಿಕ ವಿದೇಶಿ ನೇರ ಹೂಡಿಕೆಯನ್ನು ಆಕರ್ಷಿಸಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಆಹಾರ ಸಂಸ್ಕರಣಾ ವಲಯದಲ್ಲಿ ʻಉತ್ಪಾದನೆ ಆಧರಿತ ಸಹಾಯಧನʼ(ಪಿಎಲ್‌ಐ) ಯೋಜನೆಯ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಇದು ಉದ್ಯಮದಲ್ಲಿನ ಹೊಸಬರಿಗೆ ಭಾರಿ ನೆರವು ನೀಡುತ್ತಿದೆ ಎಂದರು. ಸುಗ್ಗಿಯ ನಂತರದ ಮೂಲಸೌಕರ್ಯ ಅಭಿವೃದ್ಧಿಗಾಗಿ ಸುಮಾರು 50,000 ಕೋಟಿ ರೂ.ಗಿಂತಲೂ ಅಧಿಕ ಹೂಡಿಕೆಯೊಂದಿಗೆ ʻಕೃಷಿ-ಮೂಲಸೌಕರ್ಯ ನಿಧಿʼಯಡಿ ಸಾವಿರಾರು ಯೋಜನೆಗಳಲ್ಲಿ ಕೆಲಸ ನಡೆಯುತ್ತಿದೆ. ಮೀನುಗಾರಿಕೆ ಮತ್ತು ಪಶುಸಂಗೋಪನಾ ಕ್ಷೇತ್ರದಲ್ಲಿ ಸಂಸ್ಕರಣಾ ಮೂಲಸೌಕರ್ಯವನ್ನು ಸಹ ಸಾವಿರಾರು ಕೋಟಿ ಹೂಡಿಕೆಯೊಂದಿಗೆ ಪ್ರೋತ್ಸಾಹಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

"ಸರ್ಕಾರದ ಹೂಡಿಕೆದಾರ ಸ್ನೇಹಿ ನೀತಿಗಳು ಆಹಾರ ಕ್ಷೇತ್ರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿವೆ," ಎಂದು ಶ್ರೀ ಮೋದಿ ವಿಶ್ವಾಸ ವ್ಯಕ್ತಪಡಿಸಿದರು. ಕಳೆದ 9 ವರ್ಷಗಳಲ್ಲಿ, ಭಾರತದ ಕೃಷಿ ರಫ್ತುಗಳಲ್ಲಿ ಸಂಸ್ಕರಿಸಿದ ಆಹಾರಗಳ ಪಾಲು ಶೇಕಡಾ 13 ರಿಂದ 23 ಕ್ಕೆ ಏರಿದೆ, ರಫ್ತು ಮಾಡಿದ ಸಂಸ್ಕರಿಸಿದ ಆಹಾರಗಳಲ್ಲಿ ಒಟ್ಟಾರೆ 150 ಪ್ರತಿಶತದಷ್ಟು ಹೆಚ್ಚಳವಾಗಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. "ಇಂದು, ಭಾರತವು ಕೃಷಿ ಉತ್ಪನ್ನಗಳಲ್ಲಿ ಒಟ್ಟಾರೆ 50,000 ದಶಲಕ್ಷ ಅಮೆರಿಕನ್‌ ಡಾಲರ್‌ಗಿಂತಲೂ ಹೆಚ್ಚಿನ ರಫ್ತು ಮೌಲ್ಯದೊಂದಿಗೆ 7ನೇ ಸ್ಥಾನದಲ್ಲಿದೆ," ಎಂದು ಅವರು ಮಾಹಿತಿ ನೀಡಿದರು. ಆಹಾರ ಸಂಸ್ಕರಣಾ ಉದ್ಯಮದಲ್ಲಿ ಭಾರತವು ಅಭೂತಪೂರ್ವ ಬೆಳವಣಿಗೆಯನ್ನು ಪ್ರದರ್ಶಿಸದ ಕ್ಷೇತ್ರವೇ ಇಲ್ಲ ಎಂದು ಒತ್ತಿಹೇಳಿದ ಅವರು, ಆಹಾರ ಸಂಸ್ಕರಣಾ ಉದ್ಯಮಕ್ಕೆ ಸಂಬಂಧಿಸಿದ ಪ್ರತಿಯೊಂದು ಕಂಪನಿ ಮತ್ತು ನವೋದ್ಯಮಗಳಿಗೆ ಇದು ಸುವರ್ಣಾವಕಾಶವಾಗಿದೆ ಎಂದು ಹೇಳಿದರು.

ಭಾರತದ ಆಹಾರ ಸಂಸ್ಕರಣಾ ಉದ್ಯಮದ ತ್ವರಿತ ಮತ್ತು ವೇಗದ ಬೆಳವಣಿಗೆಯ ಹಿಂದೆ ಸರ್ಕಾರದ ಸ್ಥಿರ ಮತ್ತು ಸಮರ್ಪಿತ ಪ್ರಯತ್ನಗಳನ್ನು ಪ್ರಧಾನಿ ಮೋದಿ ಶ್ಲಾಘಿಸಿದರು. ಭಾರತದಲ್ಲಿ ಮೊದಲ ಬಾರಿಗೆ ʻಕೃಷಿ-ರಫ್ತು ನೀತಿʼಯ ರಚನೆ, ರಾಷ್ಟ್ರವ್ಯಾಪಿ ಸರಕು-ಸಾಗಣೆ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿ, ಜಿಲ್ಲೆಯನ್ನು ಜಾಗತಿಕ ಮಾರುಕಟ್ಟೆಗಳೊಂದಿಗೆ ಸಂಪರ್ಕಿಸುವ ನಿಟ್ಟಿನಲ್ಲಿ 100ಕ್ಕೂ ಹೆಚ್ಚು ಜಿಲ್ಲಾ ಮಟ್ಟದ ಹಬ್‌ಗಳ ರಚನೆ, ʻಮೆಗಾ ಫುಡ್ ಪಾರ್ಕ್ʼಗಳ ಸಂಖ್ಯೆ 2 ರಿಂದ 20ಕ್ಕೂ ಅಧಿಕ ಮಟ್ಟಕ್ಕೆ ಹೆಚ್ಚಳ ಹಾಗೂ ಭಾರತದ ಆಹಾರ ಸಂಸ್ಕರಣಾ ಸಾಮರ್ಥ್ಯವು 12 ಲಕ್ಷ ಮೆಟ್ರಿಕ್ ಟನ್‌ಗಳಿಂದ 200 ಲಕ್ಷ ಮೆಟ್ರಿಕ್ ಟನ್‌ಗಳಿಗೆ ಹೆಚ್ಚಳಗೊಂಡಿರುವುದನ್ನು ಅವರು ಉಲ್ಲೇಖಿಸಿದರು. ಇದು ಕಳೆದ 9 ವರ್ಷಗಳಲ್ಲಿ 15 ಪಟ್ಟು ಹೆಚ್ಚಳವಾಗಿದೆ. ಭಾರತದಿಂದ ಮೊದಲ ಬಾರಿಗೆ ರಫ್ತಾಗುತ್ತಿರುವ ಕೃಷಿ ಉತ್ಪನ್ನಗಳ ಉದಾಹರಣೆಗಳನ್ನು ನೀಡಿದ ಪ್ರಧಾನಿ, ಹಿಮಾಚಲ ಪ್ರದೇಶದಿಂದ ಕಪ್ಪು ಬೆಳ್ಳುಳ್ಳಿ, ಜಮ್ಮು ಮತ್ತು ಕಾಶ್ಮೀರದಿಂದ ಡ್ರ್ಯಾಗನ್ ಹಣ್ಣು, ಮಧ್ಯಪ್ರದೇಶದಿಂದ ಸೋಯಾ ಹಾಲಿನ ಪುಡಿ, ಲಡಾಕ್‌ನ ಕಾರ್ಕಿಚೂ ಸೇಬು, ಪಂಜಾಬ್‌ನಿಂದ ಕ್ಯಾವೆಂಡಿಷ್ ಬಾಳೆಹಣ್ಣು, ಜಮ್ಮುವಿನ ಗುಚ್ಚಿ ಅಣಬೆಗಳು ಮತ್ತು ಕರ್ನಾಟಕದ ಕಚ್ಚಾ ಜೇನುತುಪ್ಪವನ್ನು ಉಲ್ಲೇಖಿಸಿದರು.

ಭಾರತದ ತ್ವರಿತ ನಗರೀಕರಣದ ಬಗ್ಗೆ ಗಮನ ಸೆಳೆದ ಪ್ರಧಾನಮಂತ್ರಿಯವರು, ಪ್ಯಾಕೇಜ್ ಮಾಡಿದ ಆಹಾರಕ್ಕೆ ಹೆಚ್ಚುತ್ತಿರುವ ಬೇಡಿಕೆಯ ಬಗ್ಗೆ ಉಲ್ಲೇಖಿಸಿದರು. ಇದು ರೈತರು, ನವೋದ್ಯಮಗಳು ಮತ್ತು ಸಣ್ಣ ಉದ್ಯಮಿಗಳಿಗೆ ವಿನೂತನ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದರು. ಈ ಸಾಧ್ಯತೆಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಮಹತ್ವಾಕಾಂಕ್ಷೆಯ ಯೋಜನೆಯ ಅಗತ್ಯವನ್ನು ಶ್ರೀ ಮೋದಿ ಒತ್ತಿ ಹೇಳಿದರು.

ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಭಾರತದ ಬೆಳವಣಿಗೆಯ ಯಶೋಗಾಥೆಯಲ್ಲಿ ಸಣ್ಣ ರೈತರು, ಸಣ್ಣ ಕೈಗಾರಿಕೆಗಳು ಮತ್ತು ಮಹಿಳೆಯರು ಮೂರು ಪ್ರಮುಖ ಸ್ತಂಭಗಳು ಎಂದು ಪ್ರಧಾನಿ ಒತ್ತಿ ಹೇಳಿದರು. ಸಣ್ಣ ರೈತರ ಭಾಗವಹಿಸುವಿಕೆ ಮತ್ತು ಲಾಭವನ್ನು ಹೆಚ್ಚಿಸುವ ವೇದಿಕೆಯಾಗಿ ʻರೈತ ಉತ್ಪನ್ನ ಸಂಸ್ಥೆʼಗಳು ಅಥವಾ ʻಎಫ್‌ಪಿಒʼಗಳ ಪರಿಣಾಮಕಾರಿ ಬಳಕೆಯನ್ನು ಅವರು ಒತ್ತಿ ಹೇಳಿದರು. "ನಾವು ಭಾರತದಲ್ಲಿ 10 ಸಾವಿರ ಹೊಸ ʻಎಫ್‌ಪಿಒʼಗಳನ್ನು ಸ್ಥಾಪಿಸುತ್ತಿದ್ದೇವೆ, ಈ ಪೈಕಿ 7 ಸಾವಿರ ಈಗಾಗಲೇ ಸ್ಥಾಪನೆಗೊಂಡಿವೆ," ಎಂದು ಅವರು ಮಾಹಿತಿ ನೀಡಿದರು. ರೈತರಿಗೆ ಹೆಚ್ಚಿದ ಮಾರುಕಟ್ಟೆ ಪ್ರವೇಶ ಮತ್ತು ಸಂಸ್ಕರಣಾ ಸೌಲಭ್ಯಗಳ ಲಭ್ಯತೆಯ ಬಗ್ಗೆ ಅವರು ಗಮನ ಸೆಳೆದರು. ಸಣ್ಣ ಪ್ರಮಾಣದ ಕೈಗಾರಿಕೆಗಳ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಆಹಾರ ಸಂಸ್ಕರಣಾ ಉದ್ಯಮದಲ್ಲಿ ಸುಮಾರು 2 ಲಕ್ಷ ʻಸೂಕ್ಷ್ಮ ಉದ್ಯಮʼಗಳನ್ನು ಆಯೋಜಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. 'ಒಂದು ಜಿಲ್ಲೆ-ಒಂದು ಉತ್ಪನ್ನ'(ಒಡಿಒಪಿ)  ಯಂತಹಯೋಜನೆಗಳು ಸಣ್ಣ ರೈತರು ಮತ್ತು ಸಣ್ಣ ಕೈಗಾರಿಕೆಗಳಿಗೆ ಹೊಸ ಗುರುತನ್ನು ನೀಡುತ್ತಿವೆ ಎಂದು ಪ್ರಧಾನಿ ಹೇಳಿದರು.

ಭಾರತದಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿಯ ಪಥದ ಮೇಲೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಆರ್ಥಿಕತೆಗೆ ಮಹಿಳೆಯರ ಕೊಡುಗೆಗಳು ಹೆಚ್ಚುತ್ತಿದ್ದು, ಆ ಮೂಲಕ ಆಹಾರ ಸಂಸ್ಕರಣಾ ಉದ್ಯಮಕ್ಕೆ ಲಾಭವಾಗಲಿದೆ ಎಂದು ಒತ್ತಿ ಹೇಳಿದರು. ಇಂದು ಭಾರತದಲ್ಲಿ 9 ಕೋಟಿಗೂ ಅಧಿಕ ಮಹಿಳೆಯರು ಸ್ವಸಹಾಯ ಗುಂಪುಗಳೊಂದಿಗೆ ತೊಡಗಿಸಿಕೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಸಾವಿರಾರು ವರ್ಷಗಳಿಂದ ಭಾರತದಲ್ಲಿ ಆಹಾರ ವಿಜ್ಞಾನದಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಭಾರತದಲ್ಲಿ ಆಹಾರ ವಿವಿಧತೆ ಮತ್ತು ಆಹಾರ ವೈವಿಧ್ಯತೆಯು ಭಾರತೀಯ ಮಹಿಳೆಯರ ಕೌಶಲ್ಯ ಮತ್ತು ಜ್ಞಾನದ ಫಲವಾಗಿದೆ ಎಂದರು. ಮಹಿಳೆಯರು ಉಪ್ಪಿನಕಾಯಿ, ಹಪ್ಪಳ, ಚಿಪ್ಸ್, ಮುರಬ್ಬಾ ಮುಂತಾದ ಅನೇಕ ಉತ್ಪನ್ನಗಳ ಮಾರುಕಟ್ಟೆಯನ್ನು ತಮ್ಮ ಮನೆಗಳಿಂದಲೇ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು. "ಭಾರತೀಯ ಮಹಿಳೆಯರು ಆಹಾರ ಸಂಸ್ಕರಣಾ ಉದ್ಯಮವನ್ನು ಮುನ್ನಡೆಸುವ ಸ್ವಾಭಾವಿಕ ಸಾಮರ್ಥ್ಯವನ್ನು ಹೊಂದಿದ್ದಾರೆ," ಎಂದು ಶ್ರೀ ಮೋದಿ ಹೇಳಿದರು. ಮಹಿಳೆಯರಿಗಾಗಿ ಪ್ರತಿಯೊಂದು ಹಂತದಲ್ಲೂ ಗುಡಿ ಕೈಗಾರಿಕೆಗಳು ಮತ್ತು ಸ್ವಸಹಾಯ ಗುಂಪುಗಳನ್ನು ಉತ್ತೇಜಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಇಂದಿನ ಕಾರ್ಯಕ್ರಮದಲ್ಲಿ 1 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಕೋಟಿ ರೂಪಾಯಿ ಮೌಲ್ಯದ ಬೀಜ ಬಂಡವಾಳವನ್ನು ವಿತರಿಸುವುದನ್ನು ಪಿಎಂ ಮೋದಿ ಉಲ್ಲೇಖಿಸಿದರು.

"ಭಾರತದಲ್ಲಿ ಸಾಂಸ್ಕೃತಿಕ ವೈವಿಧ್ಯತೆಯಷ್ಟೇ ಆಹಾರ ವೈವಿಧ್ಯತೆಯೂ ಇದೆ. ಭಾರತದ ಆಹಾರ ವೈವಿಧ್ಯತೆಯು ವಿಶ್ವದ ಪ್ರತಿಯೊಬ್ಬ ಹೂಡಿಕೆದಾರನಿಗೂ ವರದಾನವಾಗಿದೆ," ಎಂದು ಪ್ರಧಾನಿ ಹೇಳಿದರು. ಭಾರತದ ಬಗ್ಗೆ ಹೆಚ್ಚುತ್ತಿರುವ ಕುತೂಹಲದ ಬಗ್ಗೆ ಗಮನ ಸೆಳೆದ ಪ್ರಧಾನಮಂತ್ರಿಯವರು, ಭಾರತದ ಆಹಾರ ಸಂಪ್ರದಾಯಗಳಿಂದ ವಿಶ್ವದಾದ್ಯಂತದ ಆಹಾರ ಉದ್ಯಮವು ಕಲಿಯುವುದು ಬಹಳಷ್ಟಿದೆ ಎಂದು ಒತ್ತಿ ಹೇಳಿದರು. ಭಾರತದ ಸುಸ್ಥಿರ ಆಹಾರ ಸಂಸ್ಕೃತಿಯು ದೇಶದ ಸಾವಿರಾರು ವರ್ಷಗಳ ಅಭಿವೃದ್ಧಿಯ ಪಯಣದ ಫಲವಾಗಿದೆ ಎಂದರು. ಸಾವಿರಾರು ವರ್ಷಗಳಿಂದ ಭಾರತದ ಸುಸ್ಥಿರ ಆಹಾರ ಸಂಸ್ಕೃತಿ ವಿಕಸನಗೊಂಡ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಭಾರತದ ಪೂರ್ವಜರು ಆಹಾರ ಪದ್ಧತಿಯನ್ನು ಆಯುರ್ವೇದದೊಂದಿಗೆ ಬೆಸೆದಿದ್ದರು ಎಂದು ಒತ್ತಿ ಹೇಳಿದರು. "ಆಯುರ್ವೇದದಲ್ಲಿ, 'ಋತ-ಭುಕ್' ಅಂದರೆ ಋತುವಿಗೆ ಅನುಗುಣವಾಗಿ ತಿನ್ನಬೇಕು, 'ಮಿತ ಭುಕ್' ಅಂದರೆ ಸಮತೋಲಿತ ಆಹಾರ ಸೇವಿಸಬೇಕು ಹಾಗೂ 'ಹಿತ ಭುಕ್' ಅಂದರೆ ಆರೋಗ್ಯಕರ ಆಹಾರಗಳನ್ನು ಸೇವಿಸಬೇಕು ಎಂದು ಹೇಳಲಾಗಿದೆ. ಇವು ಭಾರತದ ವೈಜ್ಞಾನಿಕ ತಿಳುವಳಿಕೆಯ ಪ್ರಮುಖ ಭಾಗಗಳಾಗಿವೆ," ಎಂದು ಅವರು ವಿವರಿಸಿದರು. ಆಹಾರ ಧಾನ್ಯಗಳ, ವಿಶೇಷವಾಗಿ ಭಾರತದಿಂದ ಬರುವ ಸಾಂಬಾರ ಪದಾರ್ಥಗಳ ವ್ಯಾಪಾರವು ವಿಶ್ವದ ಮೇಲೆ ನಿರಂತರ ಪರಿಣಾಮ ಬೀರುತ್ತಿರುವುದನ್ನು ಅವರು ಉಲ್ಲೇಖಿಸಿದರು. ಜಾಗತಿಕ ಆಹಾರ ಭದ್ರತೆಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಸುಸ್ಥಿರ ಮತ್ತು ಆರೋಗ್ಯಕರ ಆಹಾರ ಪದ್ಧತಿ ಕುರಿತಾದ ಪ್ರಾಚೀನ ಜ್ಞಾನವನ್ನು ಆಹಾರ ಸಂಸ್ಕರಣಾ ಉದ್ಯಮವು ಅರ್ಥಮಾಡಿಕೊಳ್ಳಬೇಕಾಗಿದೆ ಹಾಗೂ ಕಾರ್ಯಗತಗೊಳಿಸಬೇಗಿದೆ ಎಂದು ಒತ್ತಿ ಹೇಳಿದರು. 2023ನೇ ವರ್ಷವನ್ನು ವಿಶ್ವವು ʻಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷʼವಾಗಿ ಆಚರಿಸುತ್ತಿದೆ ಎಂದು ಶ್ರೀ ಮೋದಿ ತಿಳಿಸಿದರು. "ಸಿರಿಧಾನ್ಯಗಳು ಭಾರತದ 'ಸೂಪರ್ ಫುಡ್ ಬಕೆಟ್'ನ ಒಂದು ಭಾಗವಾಗಿದೆ ಮತ್ತು ಸರ್ಕಾರ ಅದನ್ನು ʻಶ್ರೀ ಅನ್ನʼ ಎಂದು ಗುರುತಿಸಿದೆ" ಎಂದು ಶ್ರೀ ಮೋದಿ ಹೇಳಿದರು. ಶತಮಾನಗಳಿಂದಲೂ ಹೆಚ್ಚಿನ ನಾಗರಿಕತೆಗಳಲ್ಲಿ ಸಿರಿಧಾನ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದರೂ, ಕಳೆದ ಕೆಲವು ದಶಕಗಳಲ್ಲಿ ಭಾರತ ಸೇರಿದಂತೆ ಅನೇಕ ದೇಶಗಳಲ್ಲಿನ ಆಹಾರ ಪದ್ಧತಿಯಿಂದ ಸಿರಿಧಾನ್ಯಗಳು ದೂರಾಗಿವೆ. ಇದರಿಂದಾಗಿ ಜಾಗತಿಕ ಆರೋಗ್ಯ, ಸುಸ್ಥಿರ ಕೃಷಿ ಮತ್ತು ಸುಸ್ಥಿರ ಆರ್ಥಿಕತೆಗೆ ಭಾರಿ ಹಾನಿಯಾಗಿದೆ ಎಂದು ಪ್ರಧಾನಿ ಗಮನಸೆಳೆದರು. "ಭಾರತದ ಉಪಕ್ರಮದ ಬಗ್ಗೆ, ವಿಶ್ವದಲ್ಲಿ ಸಿರಿಧಾನ್ಯಗಳ ಬಗ್ಗೆ ಜಾಗೃತಿ ಅಭಿಯಾನ ಪ್ರಾರಂಭವಾಗಿದೆ" ಎಂದು ಹೇಳಿದ ಪ್ರಧಾನಮಂತ್ರಿಯವರು, ʻಅಂತಾರಾಷ್ಟ್ರೀಯ ಯೋಗ ದಿನʼದ ಪರಿಣಾಮವಾಗಿ ಯೋಗ ಜಗತ್ತಿನ ಮೂಲೆಮೂಲೆ ತಲುಪಿದಂತೆಯೇ ಸಿರಿಧಾನ್ಯಗಳು ಸಹ ವಿಶ್ವದ ಮೂಲೆ ಮೂಲೆಯನ್ನು ತಲುಪುತ್ತವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಇತ್ತೀಚೆಗೆ ನಡೆದ ʻಜಿ-20ʼ ಶೃಂಗಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಭೇಟಿ ನೀಡಿದ ಗಣ್ಯರಿಗಾಗಿ ಸಿರಿಧಾನ್ಯಗಳಿಂದ ತಯಾರಿಸಿದ ಭಕ್ಷ್ಯಗಳು ಮತ್ತು ಮಾರುಕಟ್ಟೆಯಲ್ಲಿ ಸಿರಿಧಾನ್ಯಗಳಿಂದ ತಯಾರಿಸಿದ ಸಂಸ್ಕರಿಸಿದ ಆಹಾರ ಪದಾರ್ಥಗಳ ಲಭ್ಯತೆಯನ್ನು ಅವರು ಉಲ್ಲೇಖಿಸಿದರು. ಆಹಾರದಲ್ಲಿ ಸಿರಿಧಾನ್ಯಗಳ ಪಾಲನ್ನು ಹೆಚ್ಚಿಸುವ ಮಾರ್ಗಗಳ ಬಗ್ಗೆ ಚರ್ಚಿಸಲು ಹಾಗೂ ಉದ್ಯಮ ಮತ್ತು ರೈತರ ಅನುಕೂಲಕ್ಕಾಗಿ ಸಾಮೂಹಿಕ ಮಾರ್ಗಸೂಚಿಯನ್ನು ಸಿದ್ಧಪಡಿಸಲು ಪ್ರಧಾನಿ ಮೋದಿ ಅವರು ಈ ಸಂದರ್ಭದಲ್ಲಿ ಗಣ್ಯರನ್ನು ಒತ್ತಾಯಿಸಿದರು.

ʻದೆಹಲಿ ನಾಯಕರ ಘೋಷಣೆʼಯಲ್ಲಿ ಸುಸ್ಥಿರ ಕೃಷಿ, ಆಹಾರ ಭದ್ರತೆ ಮತ್ತು ಪೌಷ್ಟಿಕಾಂಶ ಭದ್ರತೆಗೆ ʻಜಿ-20ʼ ಮೈತ್ರಿಕೂಟವು ಒತ್ತು ನೀಡಿದೆ ಮತ್ತು ಆಹಾರ ಸಂಸ್ಕರಣೆಗೆ ಸಂಬಂಧಿಸಿದ ಎಲ್ಲ ಪಾಲುದಾರರ ಪಾತ್ರವನ್ನು ಎತ್ತಿ ತೋರಿಸಿದೆ ಎಂದು ಶ್ರೀ ಮೋದಿ ಹೇಳಿದರು. ಆಹಾರ ವಿತರಣಾ ಕಾರ್ಯಕ್ರಮದಲ್ಲಿ  ವೈವಿಧ್ಯಮಯ ಆಹಾರಕ್ಕೆ ಒತ್ತು ನೀಡುವ ಹಾಗೂ ಸುಗ್ಗಿಯ ನಂತರದ ನಷ್ಟವನ್ನು ಕಡಿಮೆ ಮಾಡುವ ಅಗತ್ಯದ ಬಗ್ಗೆ ಅವರು ಒತ್ತಿ ಹೇಳಿದರು. ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ವ್ಯರ್ಥವನ್ನು ಕಡಿಮೆ ಮಾಡಲು ಅವರು ಕರೆ ನೀಡಿದರು. ಹಾಳಾಗುವ ಉತ್ಪನ್ನಗಳ ಸಂಸ್ಕರಣೆಯನ್ನು ಹೆಚ್ಚಿಸಿ ಅವು ವ್ಯರ್ಥವಾಗುವುದನ್ನು ಕಡಿಮೆ ಮಾಡಬೇಕು, ಆ ಮೂಲಕ ರೈತರಿಗೆ ಪ್ರಯೋಜನವಾಗಬೇಕು. ಜೊತೆಗೆ ಬೆಲೆ ಏರಿಳಿತಗಳನ್ನು ತಡೆಯಬೇಕು ಎಂದು ಅವರು ಒತ್ತಾಯಿಸಿದರು. ಮಾತನ್ನು ಮುಗಿಸುವ ಮುನ್ನ ಕೊನೆಯದಾಗಿ ಪ್ರಧಾನಮಂತ್ರಿಯವರು, ರೈತರ ಹಿತಾಸಕ್ತಿ ಮತ್ತು ಗ್ರಾಹಕರ ತೃಪ್ತಿಯ ನಡುವೆ ಸಮತೋಲನವನ್ನು ಸಾಧಿಸುವ ಅಗತ್ಯವನ್ನು ಒತ್ತಿ ಹೇಳಿದರು. ಇಲ್ಲಿ ತೆಗೆದುಕೊಳ್ಳಲಾದ ತೀರ್ಮಾನಗಳು ಜಗತ್ತಿಗೆ ಸುಸ್ಥಿರ ಮತ್ತು ಆಹಾರ-ಸುರಕ್ಷಿತ ಭವಿಷ್ಯದ ಅಡಿಪಾಯವನ್ನು ಹಾಕುತ್ತವೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಶ್ರೀ ಪಿಯೂಷ್ ಗೋಯಲ್; ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ ಶ್ರೀ ಪಶುಪತಿ ಕುಮಾರ್ ಪರಾಸ್; ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶ್ರೀ ಗಿರಿರಾಜ್ ಸಿಂಗ್; ಕೇಂದ್ರ ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಖಾತೆ ಸಹಾಯಕ ಸಚಿವ ಶ್ರೀ ಪುರುಷೋತ್ತಮ್ ರೂಪಾಲಾ ಹಾಗೂ ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಹಾಯಕ ಸಚಿವ ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಸ್ವಸಹಾಯ ಗುಂಪುಗಳನ್ನು ಬಲಪಡಿಸುವ ನಿಟ್ಟಿನಲ್ಲಿ, ಪ್ರಧಾನಮಂತ್ರಿಯವರು ಒಂದು ಲಕ್ಷಕ್ಕೂ ಅಧಿಕ ಸ್ವಸಹಾಯ ಗುಂಪುಗಳ(ಎಸ್‌ಎಚ್‌ಜಿ) ಸದಸ್ಯರಿಗೆ ಬೀಜ ಬಂಡವಾಳ ನೆರವನ್ನು ವಿತರಿಸಿದರು. ಈ ಬೆಂಬಲವು ಸುಧಾರಿತ ಪ್ಯಾಕೇಜಿಂಗ್ ಮತ್ತು ಉತ್ಪಾದನೆ ಗುಣಮಟ್ಟ ಹೆಚ್ಚಳದ ಮೂಲಕ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಪಡೆಯಲು ಸ್ವಸಹಾಯ ಸಂಘಗಳಿಗೆ ಸಹಾಯ ಮಾಡುತ್ತದೆ. ʻವಿಶ್ವ ಆಹಾರ ಭಾರತ-2023ʼರ ಭಾಗವಾಗಿ ಪ್ರಧಾನಮಂತ್ರಿಯವರು ಆಹಾರ ಮೇಳವನ್ನೂ ಉದ್ಘಾಟಿಸಿದರು. ಇದು ಪ್ರಾದೇಶಿಕ ಪಾಕಪದ್ಧತಿಗಳು ಮತ್ತು ವೈಭವದ ಪಾಕಶಾಲೆಯ ಪರಂಪರೆಯನ್ನು ಒಳಗೊಂಡಿದೆ. ಇದರಲ್ಲಿ 200ಕ್ಕೂ ಅಧಿಕ ಬಾಣಸಿಗರು ಭಾಗವಹಿಸಿದ್ದು, ಸಾಂಪ್ರದಾಯಿಕ ಭಾರತೀಯ ಪಾಕಪದ್ಧತಿಯನ್ನು  ಪ್ರಸ್ತುತಪಡಿಸಲಿದ್ದಾರೆ. ಇದೊಂದು ವಿಶಿಷ್ಟ ಪಾಕಶಾಲೆಯ ಅನುಭವವಾಗಿರಲಿದೆ.

ಭಾರತವನ್ನು 'ವಿಶ್ವದ ಆಹಾರ ಬುಟ್ಟಿ' ಎಂದು ಪ್ರದರ್ಶಿಸುವ ಹಾಗೂ 2023 ಅನ್ನು ʻಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷʼವಾಗಿ ಆಚರಿಸುವ ಗುರಿಯನ್ನು ಈ ಕಾರ್ಯಕ್ರಮವು ಹೊಂದಿದೆ. ಇದು ಸರ್ಕಾರಿ ಸಂಸ್ಥೆಗಳು, ಉದ್ಯಮ ವೃತ್ತಿಪರರು, ರೈತರು, ಉದ್ಯಮಿಗಳು ಮತ್ತು ಇತರ ಮಧ್ಯಸ್ಥಗಾರರಿಗೆ ಚರ್ಚೆಗಳಲ್ಲಿ ತೊಡಗಲು, ಪಾಲುದಾರಿಕೆಯನ್ನು ಹೊಂದಲು ವೇದಿಕೆ ಒದಗಿಸುತ್ತದೆ. ಜೊತೆಗೆ, ಕೃಷಿ-ಆಹಾರ ಕ್ಷೇತ್ರದಲ್ಲಿ ಹೂಡಿಕೆ ಅವಕಾಶಗಳನ್ನು ಅನ್ವೇಷಿಸುವ ನಿಟ್ಟಿನಲ್ಲಿ ಸಂಪರ್ಕಜಾಲ ಮತ್ತು ವ್ಯವಹಾರ ವೇದಿಕೆಯನ್ನೂ ಇದು ಒದಗಿಸುತ್ತದೆ. ʻಸಿಇಓʼಗಳ ದುಂಡುಮೇಜಿನ ಸಭೆಗಳು ಹೂಡಿಕೆ ಮತ್ತು ಸುಗಮ ವ್ಯಾಪಾರದ ಬಗ್ಗೆ ಗಮನ ಹರಿಸಲಿವೆ.

ಭಾರತೀಯ ಆಹಾರ ಸಂಸ್ಕರಣಾ ಉದ್ಯಮದ ನಾವೀನ್ಯತೆ ಮತ್ತು ಶಕ್ತಿಯನ್ನು ಪ್ರದರ್ಶಿಸಲು ವಿವಿಧ ಪೆವಿಲಿಯನ್‌ಗಳನ್ನು ಸ್ಥಾಪಿಸಲಾಗಿದೆ. ಆಹಾರ ಸಂಸ್ಕರಣಾ ಉದ್ಯಮದ ವಿವಿಧ ಅಂಶಗಳ ಮೇಲೆ ಗಮನ ಕೇಂದ್ರೀಕರಿಸುವ ಹಾಗೂ  ಆರ್ಥಿಕ ಸಬಲೀಕರಣ, ಗುಣಮಟ್ಟದ ಭರವಸೆ, ಯಂತ್ರೋಪಕರಣಗಳು ಮತ್ತು ತಂತ್ರಜ್ಞಾನದಲ್ಲಿನ ಆವಿಷ್ಕಾರಗಳಿಗೆ ಒತ್ತು ನೀಡುವ 48 ಗೋಷ್ಠಿಗಳನ್ನು ಈ ಕಾರ್ಯಕ್ರಮವು ಒಳಗೊಂಡಿದೆ.

ಈ ಕಾರ್ಯಕ್ರಮದಲ್ಲಿ ಪ್ರಮುಖ ಆಹಾರ ಸಂಸ್ಕರಣಾ ಕಂಪನಿಗಳ ʻಸಿಇಒʼಗಳು ಸೇರಿದಂತೆ 80ಕ್ಕೂ ಹೆಚ್ಚು ದೇಶಗಳ ಗಣ್ಯರು ಭಾಗವಹಿಸಲಿದ್ದಾರೆ. ಇದು ʻಹಿಮ್ಮುಖ ಖರೀದಿದಾರ ಮಾರಾಟಗಾರರ ಸಭೆʼಯನ್ನು ಸಹ ಒಳಗೊಂಡಿರುತ್ತದೆ. 80ಕ್ಕೂ ಹೆಚ್ಚು ದೇಶಗಳಿಂದ 1200ಕ್ಕೂ ಹೆಚ್ಚು ಸಾಗರೋತ್ತರ ಖರೀದಿದಾರರು ಇದರಲ್ಲಿ ಭಾಗವಹಿಸಲಿದ್ದಾರೆ. ನೆದರ್ಲ್ಯಾಂಡ್ಸ್ ಪಾಲುದಾರ ದೇಶವಾಗಿ ಕಾರ್ಯನಿರ್ವಹಿಸಿದರೆ, ಜಪಾನ್ ಈ ಕಾರ್ಯಕ್ರಮದ ಕೇಂದ್ರೀಬಿಂದು ದೇಶವಾಗಲಿದೆ.

*****



(Release ID: 1974474) Visitor Counter : 133