ಪ್ರಧಾನ ಮಂತ್ರಿಯವರ ಕಛೇರಿ

ಭಾರತ್ ಮಂಟಪದಲ್ಲಿ ಜಿ 20 ಶೃಂಗಸಭೆಯ ತಳಮಟ್ಟದ ಕಾರ್ಯಕರ್ತರೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂವಾದ 


"ಇಂದಿನ ಕಾರ್ಯಕ್ರಮವು ಕಾರ್ಮಿಕರ (ಮಜ್ದೂರ್ ಏಕ್ತಾ) ಏಕತೆಯನ್ನು ಹೇಳುತ್ತದೆ  ಮತ್ತು ನೀವು ಹಾಗು ನಾನು ಇಬ್ಬರೂ ಮಜ್ದೂರ್"

"ಕ್ಷೇತ್ರದಲ್ಲಿ  ಸಾಮೂಹಿಕವಾಗಿ ಕೆಲಸ ಮಾಡುವುದರಿಂದ  ಅಡೆತಡೆಗಳು ನಿವಾರಣೆಯಾಗುತ್ತವೆ ಮತ್ತು ಅದು ತಂಡವನ್ನು ನಿರ್ಮಾಣ ಮಾಡುತ್ತದೆ"

"ಸಾಮೂಹಿಕ ಮನೋಭಾವದಲ್ಲಿ ಶಕ್ತಿ ಅಡಗಿದೆ"

"ಉತ್ತಮವಾಗಿ ಆಯೋಜಿಸಲಾದ ಕಾರ್ಯಕ್ರಮವು ದೂರಗಾಮಿ ಪ್ರಯೋಜನಗಳನ್ನು ಹೊಂದಿರುತ್ತದೆ. ಸಿಡಬ್ಲ್ಯೂಜಿಯು  ವ್ಯವಸ್ಥೆಯಲ್ಲಿ ಹತಾಶೆಯ  ಭಾವನೆಯನ್ನು ಮೂಡಿಸಿದರೆ, ಜಿ 20 ದೇಶಕ್ಕೆ ದೊಡ್ಡ ವಿಷಯಗಳ ಬಗ್ಗೆ ವಿಶ್ವಾಸ ಮೂಡಿಸಿತು" 

"ಮಾನವತೆಯ ಕಲ್ಯಾಣಕ್ಕಾಗಿ, ಭಾರತವು ದೃಢವಾಗಿ ನಿಂತಿದೆ ಮತ್ತು ಅಗತ್ಯವಿರುವ ಸಮಯದಲ್ಲಿ ಎಲ್ಲೆಡೆ ತಲುಪುತ್ತದೆ"

Posted On: 22 SEP 2023 8:05PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭಾರತ ಮಂಟಪದಲ್ಲಿ ಜಿ-20 ತಂಡದೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಸಭಿಕರನ್ನುದ್ದೇಶಿಸಿ ಮಾತನಾಡಿದರು.

ಈ ಸಮಾರಂಭದಲ್ಲಿ  ಮಾತನಾಡಿದ ಪ್ರಧಾನಮಂತ್ರಿಯವರು, ಜಿ20 ರ  ಯಶಸ್ವೀ ಸಂಘಟನೆಗೆ ಸಂಬಂಧಿಸಿ ಲಭಿಸುತ್ತಿರುವ  ಪ್ರಶಂಸೆಗಳನ್ನು ಒತ್ತಿ ಹೇಳಿದರು  ಮತ್ತು  ಈ ಯಶಸ್ಸು ತಳಮಟ್ಟದ ಕಾರ್ಯಕರ್ತರಿಗೆ ಸಲ್ಲಬೇಕಾದ ಮನ್ನಣೆ ಎಂದರು. 

ವಿಸ್ತಾರವಾದ ಯೋಜನೆ ಮತ್ತು ಕಾರ್ಯಗತಗೊಳಿಸುವ ಪ್ರಕ್ರಿಯೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ತಮ್ಮ ಅನುಭವಗಳನ್ನು ಮತ್ತು ಕಲಿಕೆಗಳನ್ನು ದಾಖಲಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು. ಹೀಗೆ ಸಿದ್ಧಪಡಿಸಿದ ದಾಖಲೆಯು ಭವಿಷ್ಯದ ಕಾರ್ಯಕ್ರಮಗಳಿಗೆ, ಘಟನೆಗಳಿಗೆ ಉಪಯುಕ್ತ ಮಾರ್ಗಸೂಚಿಗಳನ್ನು ಸಿದ್ಧಪಡಿಸಬಹುದು ಎಂದೂ  ಅವರು ಹೇಳಿದರು.

ಉದ್ಯಮದ ಪ್ರಾಮುಖ್ಯತೆಯ ಪ್ರಜ್ಞೆ ಮತ್ತು ಪ್ರತಿಯೊಬ್ಬರಲ್ಲೂ ಆ ಉದ್ಯಮದ ಕೇಂದ್ರ ಭಾಗವಾಗಿದ್ದೇನೆ ಎಂಬ ಭಾವನೆಯೇ ಇಂತಹ ದೊಡ್ಡ ಘಟನೆಗಳ ಯಶಸ್ಸಿನ ರಹಸ್ಯವಾಗಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು. 

ಅನೌಪಚಾರಿಕವಾಗಿ ಕುಳಿತು ತಮ್ಮ ತಮ್ಮ ಇಲಾಖೆಗಳಲ್ಲಿನ ಅನುಭವಗಳನ್ನು ಹಂಚಿಕೊಳ್ಳುವಂತೆ ಪ್ರಧಾನಮಂತ್ರಿಯವರು ಕಾರ್ಯಕರ್ತರಿಗೆ ತಿಳಿಸಿದರು. ಇದು ಒಬ್ಬರ ಕಾರ್ಯಕ್ಷಮತೆಯನ್ನು ವಿಶಾಲ ದೃಷ್ಟಿಕೋನದಲ್ಲಿ ನೋಡಲು ಅವಕಾಶ ಒದಗಿಸುತ್ತದೆ  ಎಂದು ಅವರು ಹೇಳಿದರು. ಇತರರ ಪ್ರಯತ್ನಗಳನ್ನು ನಾವು ತಿಳಿದ ನಂತರ ಅದು ನಮ್ಮನ್ನು ಉತ್ತಮವಾಗಿ ಕಾರ್ಯನಿರ್ವಹಿಸಲು ಪ್ರೇರೇಪಿಸುತ್ತದೆ ಎಂದು ಅವರು ನುಡಿದರು. 'ಇಂದಿನ ಕಾರ್ಯಕ್ರಮವು ಕಾರ್ಮಿಕರ ಏಕತೆಯನ್ನು ಪ್ರತಿಬಿಂಬಿಸುತ್ತದೆ ಮತ್ತು ನೀವು ಹಾಗು ನಾನು ಇಬ್ಬರೂ ಮಜ್ದೂರ್' ಎಂದು ಅವರು ಹೇಳಿದರು.

ದೈನಂದಿನ ಕಚೇರಿ ಕೆಲಸಗಳಲ್ಲಿ ನಮಗೆ  ನಮ್ಮ ಸಹೋದ್ಯೋಗಿಗಳ ಸಾಮರ್ಥ್ಯಗಳನ್ನು ತಿಳಿದುಕೊಳ್ಳಲು ಅವಕಾಶವಾಗುವುದಿಲ್ಲ ಎಂದು ಪ್ರಧಾನಿ ಹೇಳಿದರು. ಕ್ಷೇತ್ರದಲ್ಲಿ ಸಾಮೂಹಿಕವಾಗಿ ಕೆಲಸ ಮಾಡುವಾಗ ಅಡೆ ತಡೆಗಳು, ಲಂಬ ಮತ್ತು ಸಮತಲಗಳಲ್ಲಿ ಎದುರಾಗುವ ತೊಂದರೆಗಳನ್ನು ತೆಗೆದುಹಾಕಲು ಸಾಧ್ಯವಾಗುತ್ತದೆ ಮತ್ತು ಅದು ತಂಡವನ್ನು ನಿರ್ಮಾಣ ಮಾಡುತ್ತದೆ ಎಂದ ಅವರು ಇದಕ್ಕೆ ಪ್ರಸ್ತುತ  ನಡೆಯುತ್ತಿರುವ ಸ್ವಚ್ಛತಾ ಅಭಿಯಾನದ ಉದಾಹರಣೆಯನ್ನು ನೀಡಿ ಈ ಅಂಶವನ್ನು ವಿವರಿಸಿದರು ಹಾಗು  ಇಲಾಖೆಗಳಲ್ಲಿ ಅದನ್ನು ಸಾಮೂಹಿಕ ಪ್ರಯತ್ನವನ್ನಾಗಿ ಮಾಡುವಂತೆ ಕೇಳಿಕೊಂಡರು. ಇದು ಯೋಜನೆಯನ್ನು ದೈನಂದಿನ ಕೆಲಸದ ಬದಲು ಉತ್ಸವವನ್ನಾಗಿ, ಹಬ್ಬವನ್ನಾಗಿ  ಮಾಡುತ್ತದೆ ಎಂದು ಅವರು ಹೇಳಿದರು. ಸಾಮೂಹಿಕ ಮನೋಭಾವದಲ್ಲಿ ಶಕ್ತಿ ಇದೆ ಎಂದು ಅವರು ಅಭಿಪ್ರಾಯಪಟ್ಟರು.

ಕಚೇರಿಗಳಲ್ಲಿನ ಶ್ರೇಣೀಕರಣದಿಂದ ಹೊರಬರಲು ಮತ್ತು ಸಹೋದ್ಯೋಗಿಗಳ ಸಾಮರ್ಥ್ಯಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸುವಂತೆ ಅವರು ಸಲಹೆ ಮಾಡಿದರು. 

ಮಾನವ ಸಂಪನ್ಮೂಲ ಮತ್ತು ಕಲಿಕೆಯ ದೃಷ್ಟಿಕೋನದಿಂದ ಇಂತಹ ಯಶಸ್ವಿ ಕಾರ್ಯಕ್ರಮ ಸಂಘಟನೆಗಳ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಿ, ಒಂದು ಕಾರ್ಯಕ್ರಮ  ಕೇವಲ ಆಗಿ ಹೋಗುವ  ಬದಲು ಸರಿಯಾಗಿ ನಡೆದಾಗ ಅದು ದೂರಗಾಮಿ ಪರಿಣಾಮ ಬೀರುತ್ತದೆ ಎಂದರು. ಕಾಮನ್ವೆಲ್ತ್ ಕ್ರೀಡಾಕೂಟದ ಉದಾಹರಣೆಯನ್ನು ನೀಡುವ ಮೂಲಕ ಅವರು ಇದನ್ನು ವಿವರಿಸಿದರು, ಇದು ದೇಶವನ್ನು  ಬ್ರಾಂಡ್ ಮಾಡಲು ಉತ್ತಮ ಅವಕಾಶವಾಗಬಹುದಾಗಿತ್ತು,  ಆದರೆ ಇದು ಅದರಲ್ಲಿ ಭಾಗಿಯಾಗಿದ್ದ ಜನರನ್ನು ಮತ್ತು ದೇಶವನ್ನು ಅವಮಾನ ಮಾಡಿತಲ್ಲದೆ ಆಡಳಿತ ವ್ಯವಸ್ಥೆಯಲ್ಲಿ ನಿರಾಶೆಯ, ಹತಾಶೆಯ  ಭಾವನೆಯನ್ನು ಹುಟ್ಟುಹಾಕಿತು. ಆದರೆ ಮತ್ತೊಂದೆಡೆ, ಜಿ 20 ರ ಸಂಚಿತ ಪರಿಣಾಮವು ದೇಶದ ಶಕ್ತಿಯನ್ನು ಜಗತ್ತಿಗೆ ಪ್ರದರ್ಶಿಸುವಲ್ಲಿ ಯಶಸ್ವಿಯಾಗಿದೆ. "ಸಂಪಾದಕೀಯಗಳಲ್ಲಿನ ಹೊಗಳಿಕೆಯ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ, ಆದರೆ ನನ್ನ ದೇಶವು ಈಗ ಅಂತಹ ಯಾವುದೇ ಕಾರ್ಯಕ್ರಮವನ್ನು ಉತ್ತಮ ರೀತಿಯಲ್ಲಿ ಆಯೋಜಿಸಬಹುದು ಎಂಬ ವಿಶ್ವಾಸ ಮೂಡಿಸಿರುವುದು ನನಗೆ, ನಿಜವಾದ ಸಂತೋಷವನ್ನು ತಂದಿದೆ.” ಎಂದು ಅವರು ಹೇಳಿದರು.

ವಿಪತ್ತಿನ ಸಂದರ್ಭಗಳಲ್ಲಿ ಜಾಗತಿಕ ಮಟ್ಟದಲ್ಲಿ ಪರಿಹಾರ ಕಾರ್ಯಾಚರಣೆ ನಡೆಸುವಲ್ಲಿ ವಿಶ್ವಾಸ ಹೆಚ್ಚುತ್ತಿರುವುದನ್ನು ವಿವರಿಸಿದ ಅವರು ನೇಪಾಳದಲ್ಲಿ ಭೂಕಂಪ, ಫಿಜಿಯಲ್ಲಿ ಚಂಡಮಾರುತ, ಶ್ರೀಲಂಕಾದಲ್ಲಿ ಅನಾಹುತಗಳಾದ ಸಾಮಗ್ರಿಗಳನ್ನು ರವಾನಿಸಿದ್ದನ್ನು,  ಮಾಲ್ಡೀವ್ಸ್ ವಿದ್ಯುತ್ ಮತ್ತು ನೀರಿನ ಬಿಕ್ಕಟ್ಟು, ಯೆಮೆನ್ ನಿಂದ ಸ್ಥಳಾಂತರಿಸುವಿಕೆ, ಟರ್ಕಿ ಭೂಕಂಪದಂತಹ ಜಾಗತಿಕ ಮಟ್ಟದಲ್ಲಿ ವಿಪತ್ತುಗಳ ಸಮಯದಲ್ಲಿ ರಕ್ಷಣೆಯಲ್ಲಿ ಭಾರತದ ದೊಡ್ಡ ಕೊಡುಗೆಯನ್ನು ಉಲ್ಲೇಖಿಸಿದರು ಮತ್ತು ಆ  ಮೂಲಕ ಈ ಹೆಚ್ಚುತ್ತಿರುವ ವಿಶ್ವಾಸವನ್ನು ಅವರು ವಿವರಿಸಿದರು. ಇವೆಲ್ಲವೂ ಮಾನವತೆಯ  ಕಲ್ಯಾಣಕ್ಕಾಗಿ, ಭಾರತವು ಬಲವಾಗಿ ನಿಂತಿದೆ ಮತ್ತು ಅಗತ್ಯವಿರುವ ಸಮಯದಲ್ಲಿ ಎಲ್ಲೆಡೆ ತಲುಪುತ್ತದೆ ಎಂಬುದನ್ನು ಸಾಬೀತು ಮಾಡಿದೆ ಎಂದು ಅವರು ಹೇಳಿದರು.  ಜಿ 20 ಶೃಂಗಸಭೆಯ ನಡುವೆಯೂ  ಜೋರ್ಡಾನ್ ವಿಪತ್ತಿಗೆ ಸಂಬಂಧಿಸಿ ರಕ್ಷಣಾ ಕಾರ್ಯದ ಸಿದ್ಧತೆಗಳ ಬಗ್ಗೆ ಅವರು ಮಾಹಿತಿ ನೀಡಿದರು, ಆದರೆ ಹೋಗುವ ಅಗತ್ಯವು ಉದ್ಭವಿಸಲಿಲ್ಲ ಎಂದವರು ಹೇಳಿದರು. 

ಈ ಕಾರ್ಯಕ್ರಮದಲ್ಲಿ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಹಿಂದಿನ ಆಸನಗಳಲ್ಲಿ ಕುಳಿತಿದ್ದಾರೆ ಮತ್ತು ತಳಮಟ್ಟದ ಕಾರ್ಯಕರ್ತರು ಮುಂಚೂಣಿಯಲ್ಲಿದ್ದಾರೆ ಎಂದು ಅವರು ಹೇಳಿದರು. "ನಾನು ಈ ವ್ಯವಸ್ಥೆಯನ್ನು ಇಷ್ಟಪಡುತ್ತೇನೆ ಏಕೆಂದರೆ ಇದು ನನಗೆ ಅಡಿಪಾಯವು ದೃಢವಾಗಿದೆ ಎಂಬ  ವಿಶ್ವಾಸವನ್ನು, ಭರವಸೆಯನ್ನು ನೀಡುತ್ತದೆ" ಎಂದು ಅವರು ಹೇಳಿದರು.

ಇನ್ನಷ್ಟು ಸುಧಾರಣೆಗಳಿಗೆ  ಜಾಗತಿಕ ಮಟ್ಟದ ಅನುಭವದ  ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು. ಈಗ ನಮ್ಮ ಎಲ್ಲಾ ಕೆಲಸಗಳಲ್ಲಿಯೂ ಜಾಗತಿಕ ದೃಷ್ಟಿಕೋನ ಮತ್ತು ಆ ಹಿನ್ನೆಲೆ  ಒಡಮೂಡಬೇಕು ಎಂದು ಅವರು ಒತ್ತಿ ಹೇಳಿದರು. ಒಂದು ಲಕ್ಷ ಪ್ರಮುಖ ನಿರ್ಧಾರ ತೆಗೆದುಕೊಳ್ಳುವವರು ಜಿ 20 ರ ಸಮಯದಲ್ಲಿ ಭಾರತಕ್ಕೆ ಭೇಟಿ ನೀಡಿದರು ಮತ್ತು ಅವರು ಭಾರತದ ಪ್ರವಾಸೋದ್ಯಮ ರಾಯಭಾರಿಗಳಾಗಿ ಮರಳಿದ್ದಾರೆ ಎಂದು ಅವರು ಹೇಳಿದರು.   ಈ ರಾಯಭಾರಿತ್ವದ ಬೀಜವನ್ನು ತಳಮಟ್ಟದ ಕಾರ್ಯಕರ್ತರ ಉತ್ತಮ ಕೆಲಸದಿಂದ ನೆಡಲಾಗಿದೆ ಎಂದು ಅವರು ಹೇಳಿದರು. ಪ್ರವಾಸೋದ್ಯಮವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಸಮಯ ಇದು ಎಂದು ಅವರು ಹೇಳಿದರು.

ಪ್ರಧಾನಮಂತ್ರಿಯವರು ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದರು ಮತ್ತು ಅವರ ಅನುಭವಗಳನ್ನು ಆಲಿಸಿದರು.

ಜಿ 20 ಶೃಂಗಸಭೆಯ ಯಶಸ್ಸಿಗೆ ಕೊಡುಗೆ ನೀಡಿದ ಸುಮಾರು 3000 ಜನರು ಸಂವಾದದಲ್ಲಿ ಭಾಗವಹಿಸಿದ್ದರು,. ಇದರಲ್ಲಿ ಶೃಂಗಸಭೆಯನ್ನು ಸುಗಮವಾಗಿ ನಡೆಸುವುದನ್ನು ಖಚಿತಪಡಿಸಿಕೊಳ್ಳಲು ವಿಶೇಷವಾಗಿ ತಳಮಟ್ಟದಲ್ಲಿ ಕೆಲಸ ಮಾಡಿದವರು  ಒಳಗೊಂಡಿದ್ದರು.  ಅವರಲ್ಲಿ ಸ್ವಚ್ಛತಾ ಕಾರ್ಮಿಕರು  (ಕ್ಲೀನರ್ ಗಳು), ಚಾಲಕರು, ಪರಿಚಾರಕರು ಮತ್ತು ವಿವಿಧ ಸಚಿವಾಲಯಗಳ ಇತರ ಸಿಬ್ಬಂದಿ ಸೇರಿದ್ದಾರೆ. ಸಂವಾದದಲ್ಲಿ ಸಚಿವರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

***



(Release ID: 1959939) Visitor Counter : 83