ಪ್ರಧಾನ ಮಂತ್ರಿಯವರ ಕಛೇರಿ

‘ಮನದ ಮಾತು’ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ದಿನಾಂಕ 27.08.2023 ರಂದು ಮಾಡಿದ ‘ಮನ್ ಕಿ ಬಾತ್’ – 104 ನೇ ಸಂಚಿಕೆಯ ಕನ್ನಡ ಅವತರಣಿಕೆ

Posted On: 27 AUG 2023 11:45AM by PIB Bengaluru

ನನ್ನ ಪ್ರಿಯ ಕುಟುಂಬದ ಸದಸ್ಯರೆ, ನಮಸ್ಕಾರ. ಮನದ ಮಾತಿನ ಆಗಸ್ಟ್ ಸಂಚಿಕೆಗೆ ಮತ್ತೊಮ್ಮೆ ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ. ಶ್ರಾವಣ ಮಾಸದಲ್ಲಿ ಹಿಂದೆಂದೂ ಎರಡು ಬಾರಿ ‘ಮನದ ಮಾತು’ ಕಾರ್ಯಕ್ರಮ ನಡೆದಿದ್ದು ನನಗೆ ನೆನಪಿಲ್ಲ, ಆದರೆ, ಈ ಬಾರಿ ಅದು ಸಾಧ್ಯವಾಗಿದೆ. ಶ್ರಾವಣ ಎಂದರೆ ಮಹಾಶಿವನ ಮಾಸ, ಸಂಭ್ರಮಾಚರಣೆ ಮತ್ತು ಸಂತೋಷದ ತಿಂಗಳಿದು. ಚಂದ್ರಯಾನದ ಯಶಸ್ಸು ಈ ಸಂಭ್ರಮದ ವಾತಾವರಣಕ್ಕೆ ಮತ್ತಷ್ಟು ಕಳೆ ತಂದಿದೆ. ಚಂದ್ರಯಾನ ಚಂದ್ರನನ್ನು ತಲುಪಿ ಮೂರು ದಿನಗಳಿಗಿಂತ ಹೆಚ್ಚು ಸಮಯ ಕಳೆದಿದೆ. ಈ ಯಶಸ್ಸು ಎಷ್ಟು ಮಹತ್ತರವಾದದ್ದು ಎಂದರೆ ಅದರ ಬಗ್ಗೆ ಎಷ್ಟು ಚರ್ಚೆ ಮಾಡಿದರೂ ಕಡಿಮೆಯೇ ಅನ್ನಿಸುತ್ತದೆ. ಇಂದು ನಿಮ್ಮೊಂದಿಗೆ ಮಾತನಾಡುವಾಗ ಹಳೆಯ ನನ್ನ ಕವಿತೆಯ ಕೆಲವು ಸಾಲುಗಳು ನೆನಪಿಗೆ ಬರುತ್ತಿವೆ.

 

ಬಾನಲ್ಲಿ ತಲೆ ಎತ್ತಿ

ದಟ್ಟ ಮೋಡಗಳನ್ನು ಭೇದಿಸಿ

ಪ್ರಕಾಶದ ಸಂಕಲ್ಪ ಕೈಗೊಳ್ಳು

ಸೂರ್ಯ ಈಗಷ್ಟೇ ಉದಯಿಸಿದ್ದಾನೆ.

 

ಸಂಕಲ್ಪದಿಂದ ನಡೆದು

ಎಲ್ಲಾ ಅಡಚಣೆಗಳನ್ನು ಜಯಿಸಿ

ಕತ್ತಲೆಯನ್ನು ಹೋಗಲಾಡಿಸಿ

ಸೂರ್ಯ ಈಗಷ್ಟೇ ಉದಯಿಸಿದ್ದಾನೆ

.

ಬಾನಲ್ಲಿ ತಲೆ ಎತ್ತಿ

ದಟ್ಟ ಮೋಡಗಳನ್ನು ಭೇದಿಸಿ

ಸೂರ್ಯ ಈಗಷ್ಟೇ ಉದಯಿಸಿದ್ದಾನೆ.

 

ನನ್ನ ಕುಟುಂಬ ಸದಸ್ಯರೆ, ಆಗಸ್ಟ್ 23 ರಂದು, ಭಾರತ ಮತ್ತು ಭಾರತದ ಚಂದ್ರಯಾನವು ಚಂದ್ರನ ಮೇಲೆ ಕೂಡ ಸಂಕಲ್ಪದ ಸೂರ್ಯ ಉದಯಿಸುತ್ತಾನೆ ಎಂದು ಸಾಬೀತುಪಡಿಸಿದೆ. ಮಿಷನ್ ಚಂದ್ರಯಾನವು ಯಾವುದೇ ಪರಿಸ್ಥಿತಿಯಲ್ಲಿ ಗೆಲ್ಲಲು ಬಯಸುವ ಮತ್ತು ಯಾವುದೇ ಪರಿಸ್ಥಿತಿಯಲ್ಲಿ ಗೆಲುವನ್ನು ಸಾಧಿಸುವುದು ಹೇಗೆ ಎಂದು ಅರಿತಿರುವ ನವ ಭಾರತದ ಚೈತನ್ಯದ ಸಂಕೇತವಾಗಿದೆ.

ಸ್ನೇಹಿತರೇ, ಈ ಮಿಷನ್‌ನ ಒಂದು ಭಾಗ ಎಷ್ಟು ವಿಶೇಷವಾಗಿತ್ತು ಎಂದರೆ ಆ ಅಂಶದ ಕುರಿತು ನಾನು ಖಂಡಿತ ಇಂದು ನಿಮ್ಮೆಲ್ಲರೊಂದಿಗೆ ಚರ್ಚಿಸಲು ಬಯಸುತ್ತೇನೆ. ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ರಾಷ್ಟ್ರ ಚರಿತ್ರೆಯ ರೂಪದಲ್ಲಿ  ಬಲಪಡಿಸಬೇಕು ಎಂದು ನಾನು ಕೆಂಪು ಕೋಟೆಯಿಂದ ಈ ಬಾರಿ ಹೇಳಿದ್ದು ನಿಮಗೆ ನೆನಪಿರಬಹುದು. ಸ್ತ್ರೀಶಕ್ತಿಯ ಸಾಮರ್ಥ್ಯ ಎಲ್ಲಿ ಒಗ್ಗೂಡುತ್ತದೆಯೋ ಅಲ್ಲಿ ಅಸಾಧ್ಯವಾದುದನ್ನೂ ಸಾಧ್ಯವಾಗಿಸಬಹುದಾಗಿದೆ. ಭಾರತದ ಮಿಷನ್ ಚಂದ್ರಯಾನವು ಸ್ತ್ರೀ ಶಕ್ತಿಯ ಜ್ವಲಂತ ಉದಾಹರಣೆಯಾಗಿದೆ. ಅನೇಕ ಮಹಿಳಾ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು ಈ ಸಂಪೂರ್ಣ ಕಾರ್ಯಾಚರಣೆಯಲ್ಲಿ ನೇರವಾಗಿ ತೊಡಗಿಸಿಕೊಂಡಿದ್ದಾರೆ. ಇವರು ಯೋಜನಾ ನಿರ್ದೇಶಕರಾಗಿ, ವಿವಿಧ ವಿಭಾಗಗಳ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಹಲವು ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಭಾರತದ ಹೆಣ್ಣುಮಕ್ಕಳು ಈಗ ಅನಂತ ಎಂದು ಪರಿಗಣಿಸಲಾದ ಬಾಹ್ಯಾಕಾಶಕ್ಕೂ ಸವಾಲೊಡ್ಡುತ್ತಿದ್ದಾರೆ. ಯಾವುದೇ ದೇಶದ ಹೆಣ್ಣು ಮಕ್ಕಳು ಇಷ್ಟೊಂದು ಮಹತ್ವಾಕಾಂಕ್ಷಿಗಳಾದಾಗ ಆ ದೇಶದ ಅಭಿವೃದ್ಧಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ

ಸ್ನೇಹಿತರೇ, ಇಂದು ನಮ್ಮ ಕನಸುಗಳು ಮತ್ತು ಪ್ರಯತ್ನಗಳೂ  ಉತ್ಕೃಷ್ಟವಾಗಿರುವುದರಿಂದಲೇ ನಾವು ಇಷ್ಟು ಎತ್ತರಕ್ಕೇರಲು ಸಾಧ್ಯವಾಗಿದೆ. ಏಕೆಂದರೆ ಚಂದ್ರಯಾನ-3ರ ಯಶಸ್ಸಿನಲ್ಲಿ ನಮ್ಮ ವಿಜ್ಞಾನಿಗಳ ಜೊತೆಗೆ ಇತರ ವಲಯಗಳೂ ಪ್ರಮುಖ ಪಾತ್ರ ವಹಿಸಿವೆ. ಎಲ್ಲಾ ಬಿಡಿ ಭಾಗಗಳು ಮತ್ತು ತಾಂತ್ರಿಕ ಅವಶ್ಯಕತೆಗಳನ್ನು ಪೂರೈಸುವಲ್ಲಿ ಎಲ್ಲ  ದೇಶವಾಸಿಗಳು ಕೊಡುಗೆ ನೀಡಿದ್ದಾರೆ. ಎಲ್ಲರ ಪ್ರಯತ್ನಗಳೂ ಒಗ್ಗೂಡಿದಾಗ ಯಶಸ್ಸು ಕೂಡ ಲಭಿಸಿತು. ಇದು ದೇ ಚಂದ್ರಯಾನ-3 ರ ಅತಿ ದೊಡ್ಡ ಯಶಸ್ಸು. ಭವಿಷ್ಯದಲ್ಲಿ ಕೂಡ ನಮ್ಮ ಬಾಹ್ಯಾಕಾಶ ಕ್ಷೇತ್ರವು ಎಲ್ಲರ ಪ್ರಯತ್ನದಿಂದ ಈ ರೀತಿಯ ಅಸಂಖ್ಯಾತ ಯಶಸ್ಸನ್ನು ಸಾಧಿಸಲಿ ಎಂದು ನಾನು ಆಶಿಸುತ್ತೇನೆ.

          ನನ್ನ ಕುಟುಂಬದ ಸದಸ್ಯರೆ, ಸೆಪ್ಟೆಂಬರ್ ತಿಂಗಳು ಭಾರತದ ಸಾಮರ್ಥ್ಯಕ್ಕೆ ಸಾಕ್ಷಿಯಾಗಲಿದೆ. ಮುಂದಿನ ತಿಂಗಳು ನಡೆಯಲಿರುವ ಜಿ-20 ನಾಯಕರ ಶೃಂಗಸಭೆಗೆ ಭಾರತ ಸಂಪೂರ್ಣ ಸಜ್ಜಾಗಿದೆ. ಈ ಸಮಾರಂಭದಲ್ಲಿ ಭಾಗವಹಿಸಲು 40 ದೇಶಗಳ ಮುಖ್ಯಸ್ಥರು ಮತ್ತು ಅನೇಕ ಜಾಗತಿಕ ಸಂಸ್ಥೆಗಳು ರಾಜಧಾನಿ ದೆಹಲಿಗೆ ಆಗಮಿಸಲಿವೆ. ಜಿ-20 ಶೃಂಗಸಭೆಯ ಇತಿಹಾಸದಲ್ಲಿ ಇಲ್ಲಿವರೆಗಿನ ಅತ್ಯಂತ ದೊಡ್ಡ ಭಾಗವಹಿಸುವಿಕೆ ಇದಾಗಿದೆ. ತನ್ನ ಅಧ್ಯಕ್ಷತೆಯ ಅವಧಿಯಲ್ಲಿ, ಭಾರತವು G-20 ಅನ್ನು ಹೆಚ್ಚೆಚ್ಚು ಒಳಗೊಳ್ಳುವಿಕೆಯ ವೇದಿಕೆಯನ್ನಾಗಿ ಮಾಡಿದೆ. ಭಾರತದ ಆಹ್ವಾನದ ಮೇರೆಗೆ ಆಫ್ರಿಕನ್ ಒಕ್ಕೂಟ ಕೂಡ ಜಿ -20 ರೊಂದಿಗೆ ಸೇರಿಕೊಂಡಿತು ಮತ್ತು ಆಫ್ರಿಕಾದ ಜನರ ಧ್ವನಿಯು ವಿಶ್ವದ ಈ ಪ್ರಮುಖ ವೇದಿಕೆಯವರೆಗೆ ತಲುಪಿತು. ಸ್ನೇಹಿತರೇ, ಕಳೆದ ವರ್ಷ ಬಾಲಿಯಲ್ಲಿ ಭಾರತಕ್ಕೆ G-20 ರ ಅಧ್ಯಕ್ಷ ಸ್ಥಾನ ದೊರಕಿದಂದಿನಿಂದ, ನಮ್ಮಲ್ಲಿ ಹೆಮ್ಮೆಯನ್ನು ತುಂಬುವಂತಹ ಅನೇಕ ಘಟನೆಗಳು ನಡೆದಿವೆ. ದೆಹಲಿಯ ದೊಡ್ಡ ಕಾರ್ಯಕ್ರಮಗಳ ಸಂಪ್ರದಾಯವನ್ನು ತೊಡೆದು, ದೇಶದ ವಿವಿಧ ನಗರಗಳಿಗೆ ನಾವು ಅದನ್ನು ಕೊಂಡೊಯ್ದಿದ್ದೇವೆ. ದೇಶದ 60 ನಗರಗಳಲ್ಲಿ ಇದಕ್ಕೆ ಸಂಬಂಧಿಸಿದ ಸುಮಾರು 200 ಸಭೆಗಳನ್ನು ಆಯೋಜಿಸಲಾಗಿದೆ. ಜಿ-20 ಪ್ರತಿನಿಧಿಗಳು ಹೋದಲ್ಲೆಲ್ಲಾ ಜನರು ಅವರನ್ನು ಗೌರವದಿಂದ ಸ್ವಾಗತಿಸಿದರು. ನಮ್ಮ ದೇಶದ ವೈವಿಧ್ಯತೆ ಮತ್ತು ನಮ್ಮ ರೋಮಾಂಚಕ ಪ್ರಜಾಪ್ರಭುತ್ವವನ್ನು ನೋಡಿ ಈ ಪ್ರತಿನಿಧಿಗಳು ಬಹಳ ಪ್ರಭಾವಿತರಾದರು. ಭಾರತದಲ್ಲಿ ಅದೆಷ್ಟು ಅವಕಾಶಗಳಿವೆ ಎಂದು ಕೂಡಾ ಅವರಿಗೆ ಅರಿವಾಗಿದೆ.

         ಸ್ನೇಹಿತರೇ, G-20 ರ ನಮ್ಮ ಅಧ್ಯಕ್ಷತೆಯು ಜನರ ಅಧ್ಯಕ್ಷತೆಯಾಗಿದೆ. ಇದರಲ್ಲಿ ಸಾರ್ವಜನಿಕ ಭಾಗವಹಿಸುವಿಕೆಯ ಮನೋಭಾವವು ಅಗ್ರಸ್ಥಾನದಲ್ಲಿದೆ. G-20 ರ ಹನ್ನೊಂದು ಎಂಗೇಜ್‌ಮೆಂಟ್ ಗುಂಪುಗಳಿದ್ದವು, ಅವುಗಳಲ್ಲಿ ಶೈಕ್ಷಣಿಕ, ನಾಗರಿಕ ಸಂಸ್ಥೆಗಳು, ಯುವಕರು, ಮಹಿಳೆಯರು, ನಮ್ಮ ಸಂಸದರು, ವಾಣಿಜ್ಯೋದ್ಯಮಿಗಳು ಮತ್ತು ನಗರ ಆಡಳಿತಕ್ಕೆ ಸಂಬಂಧಿಸಿದ ಜನರು ಪ್ರಮುಖ ಪಾತ್ರ ವಹಿಸಿದ್ದಾರೆ. ಒಂದಲ್ಲ ಒಂದು ರೀತಿಯಲ್ಲಿ, 1.5 ಕೋಟಿಗೂ ಹೆಚ್ಚು ಜನರು ದೇಶಾದ್ಯಂತ ಆಯೋಜಿಸುವ G-20 ರ ಕಾರ್ಯಕ್ರಮಗಳಿಗೆ ಕೈಜೋಡಿಸಿದ್ದಾರೆ. ಸಾರ್ವಜನಿಕ ಸಹಭಾಗಿತ್ವದ ನಮ್ಮ ಈ ಪ್ರಯತ್ನದಲ್ಲಿ ಒಂದಲ್ಲ, ಎರಡು ವಿಶ್ವ ದಾಖಲೆಗಳೂ ಸೃಷ್ಟಿಯಾಗಿವೆ.

ವಾರಣಾಸಿಯಲ್ಲಿ ನಡೆದ ಜಿ-20 ರಸಪ್ರಶ್ನೆಯಲ್ಲಿ 800 ಶಾಲೆಗಳ 1.25 ಲಕ್ಷ ವಿದ್ಯಾರ್ಥಿಗಳು ಭಾಗವಹಿಸಿದ್ದು ಹೊಸ ವಿಶ್ವ ದಾಖಲೆಯಾಯಿತು. ಇದೇ ಸಂದರ್ಭದಲ್ಲಿ ಲಂಬಾಣಿ ಕುಶಲಕರ್ಮಿಗಳೂ ಅದ್ಭುತ ಕೆಲಸ ಮಾಡಿದರು. 450 ಕುಶಲಕರ್ಮಿಗಳು ಸುಮಾರು 1800 ವಿಶಿಷ್ಟ ಪ್ಯಾಚ್‌ಗಳ ಅದ್ಭುತ ಸಂಗ್ರಹವನ್ನು ರಚಿಸುವ ಮೂಲಕ ತಮ್ಮ ಕೌಶಲ್ಯ ಮತ್ತು ಕರಕುಶಲತೆಯನ್ನು ಪ್ರದರ್ಶಿಸಿದರು. ಜಿ-20 ಕ್ಕೆ ಬಂದಿದ್ದ ಪ್ರತಿಯೊಬ್ಬ ಪ್ರತಿನಿಧಿಯೂ ನಮ್ಮ ದೇಶದ ಕಲಾತ್ಮಕ ವೈವಿಧ್ಯತೆಯನ್ನು ಕಂಡು ಅಚ್ಚರಿಗೊಂಡರು. ಇಂಥದ್ದೇ ಒಂದು ಅದ್ಭುತ ಕಾರ್ಯಕ್ರಮವನ್ನು ಸೂರತ್‌ನಲ್ಲಿ ಆಯೋಜಿಸಲಾಗಿತ್ತು. ಅಲ್ಲಿ ನಡೆದ ‘ಸೀರೆಯ ವಾಕಥಾನ್’ನಲ್ಲಿ 15 ರಾಜ್ಯಗಳ 15,000 ಮಹಿಳೆಯರು ಭಾಗವಹಿಸಿದ್ದರು. ಈ ಕಾರ್ಯಕ್ರಮದಿಂದ ಸೂರತ್‌ನ ಜವಳಿ ಉದ್ಯಮಕ್ಕೆ ಉತ್ತೇಜನ ದೊರೆಯಿತಲ್ಲದೆ, ವೋಕಲ್ ಫಾರ್ ಲೋಕಲ್' ಸಹ ಉತ್ತೇಜನವನ್ನು ಪಡೆದುಕೊಂಡಿತು. ಅಲ್ಲದೆ ಸ್ಥಳೀಯ ಉತ್ಪನ್ನಗಳು ಜಾಗತಿಕ ಸ್ಥಾನ ಪಡೆಯಲು ದಾರಿ ಮಾಡಿಕೊಟ್ಟಿತು. ಶ್ರೀನಗರದಲ್ಲಿ ಜಿ-20 ಸಭೆ ನಡೆದ ನಂತರ, ಕಾಶ್ಮೀರದಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ವೃದ್ಧಿ ಕಂಡುಬಂದಿದೆ. ಬನ್ನಿ ನಾವು ಒಗ್ಗೂಡಿ ಜಿ-20 ಸಮ್ಮೇಳನವನ್ನು ಯಶಸ್ವಿಗೊಳಿಸೋಣ ಮತ್ತು ದೇಶದ ಘನತೆಯನ್ನು ಹೆಚ್ಚಿಸೋಣ ಎಂದು ನಾನು ಸಮಸ್ತ ದೇಶವಾಸಿಗಳಿಗೆ ಹೇಳಲು ಬಯಸುತ್ತೇನೆ.    

    ನನ್ನ ಕುಟುಂಬದ ಸದಸ್ಯರೆ, 'ಮನದ ಮಾತು' ಸಂಚಿಕೆಯಲ್ಲಿ, ನಮ್ಮ ಯುವ ಪೀಳಿಗೆಯ ಸಾಮರ್ಥ್ಯದ ಕುರಿತು ಆಗಾಗ್ಗೆ ಚರ್ಚಿಸುತ್ತೇವೆ. ಇಂದು, ಕ್ರೀಡೆಯು ನಮ್ಮ ಯುವಕರು ನಿರಂತರವಾಗಿ ಹೊಸ ಯಶಸ್ಸನ್ನು ಸಾಧಿಸುವ ಒಂದು ಕ್ಷೇತ್ರವಾಗಿ ಹೊರಹೊಮ್ಮಿದೆ. ಇಂದು 'ಮನದ ಮಾತು' ನಲ್ಲಿ, ಇತ್ತೀಚೆಗೆ ನಮ್ಮ ಆಟಗಾರರು ರಾಷ್ಟ್ರಧ್ವಜವನ್ನು ಎತ್ತಿ ಹಿಡಿದಂತಹ ಪಂದ್ಯಾವಳಿಯ ಬಗ್ಗೆ ಮಾತನಾಡುತ್ತೇನೆ. ಕೆಲವೇ ದಿನಗಳ ಹಿಂದೆ ಚೀನಾದಲ್ಲಿ ವಿಶ್ವಮಟ್ಟದ ವಿಶ್ವವಿದ್ಯಾಲಯಗಳ ಕ್ರೀಡಾಕೂಟ ನಡೆಯಿತು. ಈ ಬಾರಿಯ ಪಂದ್ಯಾವಳಿಗಳಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡಿದೆ. ನಮ್ಮ ಆಟಗಾರರು ಒಟ್ಟು 26 ಪದಕಗಳನ್ನು ಗೆದ್ದಿದ್ದಾರೆ, ಅವುಗಳಲ್ಲಿ 11 ಚಿನ್ನದ ಪದಕಗಳು. 1959 ರಿಂದ ಇಲ್ಲಿವರೆಗೆ ನಡೆದ ಎಲ್ಲಾ ವಿಶ್ವ ವಿಶ್ವವಿದ್ಯಾನಿಲಯ ಕ್ರೀಡಾಕೂಟಗಳಲ್ಲಿ ನಾವು ಗೆದ್ದ ಎಲ್ಲಾ ಪದಕಗಳ ಸಂಖ್ಯೆಯನ್ನು ಒಟ್ಟುಗೂಡಿಸಿದರೂ ಆ ಸಂಖ್ಯೆ 18 ನ್ನು ಕೂಡ ದಾಟುವುದಿಲ್ಲ ಎಂದು ತಿಳಿದು ನಿಮಗೆ ಆಶ್ಚರ್ಯವಾಗಬಹುದು. ಇಷ್ಟೊಂದು ದಶಕಗಳಲ್ಲಿ ಕೇವಲ 18 ಪದಕಗಳು, ಆದರೆ ಈ ಬಾರಿ ನಮ್ಮ ಆಟಗಾರರು 26 ಪದಕಗಳನ್ನು ಗೆದ್ದಿದ್ದಾರೆ. ಆದ್ದರಿಂದ, ವಿಶ್ವಮಟ್ಟದ ವಿಶ್ವವಿದ್ಯಾಲಯದ ಕ್ರೀಡಾಕೂಟದಲ್ಲಿ ಪದಕಗಳನ್ನು ಗೆದ್ದ ಕೆಲವು ಯುವ ಕ್ರೀಡಾ ಪಟುಗಳು, ವಿದ್ಯಾರ್ಥಿಗಳು ಪ್ರಸ್ತುತ ನನ್ನೊಂದಿಗೆ ಫೋನ್ ಲೈನ್‌ನಲ್ಲಿ ಸಂಪರ್ಕದಲ್ಲಿದ್ದಾರೆ. ಮೊದಲು ಅವರ ಬಗ್ಗೆ ನಿಮಗೆ ಹೇಳಿಬಿಡುತ್ತೇನೆ. ಉತ್ತರಪ್ರದೇಶ ನಿವಾಸಿ ಪ್ರಗತಿ ಬಿಲ್ಲಗಾರಿಕೆಯಲ್ಲಿ ಪದಕ ಗೆದ್ದಿದ್ದಾರೆ. ಅಸ್ಸಾಂ ನಿವಾಸಿ ಅಮ್ಲಾನ್ ಅಥ್ಲೆಟಿಕ್ಸ್‌ನಲ್ಲಿ ಪದಕ ಗೆದ್ದಿದ್ದಾರೆ. ಉತ್ತರಪ್ರದೇಶ ನಿವಾಸಿ ಪ್ರಿಯಾಂಕಾ ರೇಸ್ ವಾಕ್ ನಲ್ಲಿ ಪದಕ ಗೆದ್ದಿದ್ದಾರೆ. ಮಹಾರಾಷ್ಟ್ರದ ನಿವಾಸಿ ಅಭಿದನ್ಯ ಶೂಟಿಂಗ್‌ನಲ್ಲಿ ಪದಕ ಗೆದ್ದಿದ್ದಾರೆ

ಮೋದಿಯವರು: ನನ್ನ ಪ್ರಿಯ ಕ್ರೀಡಾಳುಗಳೇ ನಮಸ್ಕಾರ 

ಯುವ ಕ್ರೀಡಾಳು: ನಮಸ್ತೆ ಸರ್

ಮೋದಿಯವರು: ನಿಮ್ಮೊಂದಿಗೆ ಮಾತಾಡಿ ನನಗೆ ಬಹಳ ಸಂತೋಷವೆನಿಸುತ್ತಿದೆ. ಭಾರತಕ್ಕೆ ಕೀರ್ತಿ ತಂದುಕೊಟ್ಟ ಭಾರತದ ವಿಶ್ವವಿದ್ಯಾನಿಲಯಗಳಿಂದ ಆಯ್ಕೆಯಾದ ಮೊದಲ ತಂಡವನ್ನು ಅಭಿನಂದಿಸುತ್ತೇನೆ. ವಿಶ್ವ ವಿಶ್ವವಿದ್ಯಾನಿಲಯ ಕ್ರೀಡಾಕೂಟದಲ್ಲಿ ನಿಮ್ಮ ಪ್ರದರ್ಶನದಿಂದ ಪ್ರತಿಯೊಬ್ಬ ದೇಶವಾಸಿಯೂ ಹೆಮ್ಮೆಪಡುವಂತೆ ಮಾಡಿದ್ದೀರಿ.

ಪ್ರಗತಿ, ನಾನು ನಿಮ್ಮೊಂದಿಗೆ ಸಂಭಾಷಣೆಯನ್ನು ಪ್ರಾರಂಭಿಸುತ್ತಿದ್ದೇನೆ. ಆರಂಭದಲ್ಲಿ ಎರಡು ಪದಕ ಗೆದ್ದು ಇಲ್ಲಿಂದ ಹೊರಟಾಗ ಇದನ್ನು ನೀವು ಊಹಿಸಿದ್ದಿರೆ? ನಿಮಗೆ ಏನನ್ನಿಸಿತ್ತು ಹೇಳಿ? ಮತ್ತು ಅಂತಹ ಬೃಹತ್ ವಿಜಯವನ್ನು ಸಾಧಿಸಿದ ನಂತರ, ನೀಮಗೇನು ಅನ್ನಿಸುತ್ತಿದೆ?

ಪ್ರಗತಿ :- ಸರ್, ನನಗೆ ತುಂಬಾ ಹೆಮ್ಮೆ ಎನ್ನಿಸಿತ್ತು, ನನ್ನ ದೇಶದ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಹಾರಿಸಿದ್ದಕ್ಕೆ ನನಗೆ ತುಂಬಾ ಸಂತೋಷವೆನಿಸಿತು, ನಾನು ಒಮ್ಮೆಯಂತೂ ಚಿನ್ನದ ಪದಕಕ್ಕಾಗಿ ಹೋರಾಡಿ ಸೋತಿದ್ದೆ ಮತ್ತು ಅದಕ್ಕಾಗಿ ಬಹಳ ಪಶ್ಚಾತ್ತಾಪ ಪಟ್ಟಿದ್ದೆ. ಆದರೆ ಎರಡನೆ ಬಾರಿ ಏನೇ ಆಗಲಿ ಮತ್ತೆ ಸೋಲಬಾರದು ಎಂಬುದು ಮನಸಿನಲ್ಲಿ ಮೂಡಿತ್ತು. ಯಾವುದೇ ಪರಿಸ್ಥಿತಿಯಲ್ಲೂ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಹಾರಿಸಬೇಕು ಎಂಬ ಛಲ ಮೂಡಿತ್ತು. ಕಳೆದ ಬಾರಿಯ ಹೋರಾಟದಲ್ಲಿ ಗೆದ್ದಾಗ ಅದೇ ವೇದಿಕೆಯಲ್ಲಿ ಚೆನ್ನಾಗಿ ಸಂಭ್ರಮಿಸಿದ್ದೆವು. ಆ ಕ್ಷಣ ತುಂಬಾ ಅದ್ಭುತವಾಗಿತ್ತು. ನನ್ನ ಹೆಮ್ಮೆಗೆ ಪಾರವೇ ಇರಲಿಲ್ಲ.

ಮೋದಿಯವರು:- ಪ್ರಗತಿ, ನೀವು ದೈಹಿಕವಾಗಿ ಬಹಳ ಸಮಸ್ಯೆಯನ್ನು ಎದುರಿದ್ದಿರಿ ಅದನ್ನು ಮೆಟ್ಟಿ ನೀವು ಹೊರಬಂದಿದ್ದೀರಿ. ಇದು ದೇಶದ ಯುವಜನತೆಗೆ ಬಹುದೊಡ್ಡ ಸ್ಫೂರ್ತಿಯಾಗಿದೆ. ಏನಾಗಿತ್ತು ನಿಮಗೆ?

ಪ್ರಗತಿ :- ಸರ್, ತಾರೀಖು ಮೇ 5, 2020 ರಂದು ನನಗೆ ಮೆದುಳಿನ ರಕ್ತಸ್ರಾವವಾಗಿತ್ತು. ನಾನು ವೆಂಟಿಲೇಟರ್‌ನಲ್ಲಿದ್ದೆ. ನಾನು ಬದುಕುಳಿಯುವೆನೋ ಇಲ್ಲವೋ ಎಂಬುದು ಅನುಮಾನಾಸ್ಪದವಾಗಿತ್ತು, ಬದುಕುಳಿದರೂ ಹೇಗೆ ಬದುಕುತ್ತೇನೆ ಎಂಬುದೇ ತಿಳಿದಿರಲಿಲ್ಲ? ಆದರೆ ನಾನು ಮತ್ತೆ ಮೈದಾನಕ್ಕಿಳಿಯಬೇಕು, ಎದ್ದು ನಿಲ್ಲಬೇಕು ಬಾಣ ಹೂಡಬೇಕು ಎಂಬ ಅಚಲವಾದ ಛಲ ಮನದಲ್ಲಿತ್ತು. ಈ ಧೈರ್ಯ ಆಂತರಿಕವಾಗಿ ಮೂಡಿ ಬಂದಿತು. ನನ್ನ ಜೀವವನ್ನು ಉಳಿಸುವಲ್ಲಿ ದೇವರ ಕೃಪೆ ಬಹು ದೊಡ್ಡದು, ನಂತರ ವೈದ್ಯರು, ನಂತರ ಬಿಲ್ಲುಗಾರಿಕೆಯದ್ದಾಗಿದೆ.

ನಮ್ಮೊಂದಿಗೆ ಅಮ್ಲಾನ್ ಕೂಡ ಇದ್ದಾರೆ. ಅಮ್ಲಾನ್, ನೀವು ಅಥ್ಲೆಟಿಕ್ಸ ನಲ್ಲಿ ಇಷ್ಟು ಆಸಕ್ತಿಯನ್ನು ಹೇಗೆ ಬೆಳೆಸಿಕೊಂಡಿದ್ದೀರಿ ಹೇಳುವಿರಾ!

ಅಮ್ಲಾನ್:-ನಮಸ್ಕಾರ ಸರ್.

ಮೋದಿಯವರು :- ನಮಸ್ಕಾರ! ನಮಸ್ಕಾರ |

ಅಮ್ಲಾನ್:- ಸರ್, ಅಥ್ಲೆಟಿಕ್ಸ್‌ ನಲ್ಲಿ ಆರಂಭದಲ್ಲಿ ಅಷ್ಟೇನೂ ಆಸಕ್ತಿ ಇರಲಿಲ್ಲ. ಮೊದಲು ನಾನು ಫುಟ್‌ಬಾಲ್‌ನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದೆ. ಆದರೆ ನನ್ನ ಸೋದರನ ಸ್ನೇಹಿತನೊಬ್ಬ ‘ಅಮ್ಲಾನ್ ನೀನು ಅಥ್ಲೆಟಿಕ್ಸ್, ಸ್ಪರ್ಧೆಗೆ ಹೋಗಬೇಕು ಎಂದು ಹೇಳಿದ. ಹಾಗಾಗಿ ನಾನೂ ಓಕೆ ಅಂದುಕೊಂಡೆ. ಮೊದಲ ಸಲ ಸ್ಟೇಟ್ ಮೀಟ್ ಆಡಿದಾಗ ಅದರಲ್ಲಿ ನಾನು ಸೋತಿದ್ದೆ. ನನಗೆ ಸೋಲು ಇಷ್ಟವಾಗಲಿಲ್ಲ. ನಾನು ಅಥ್ಲೆಟಿಕ್ಸ್‌ ನಲ್ಲಿ ತೊಡಗಿಕೊಂಡೆ. ಹೀಗೆ ಕ್ರಮೇಣ ನನಗೆ ಇದು ಇಷ್ಟವಾಗತೊಡಗಿತು. ಹಾಗಾಗಿ ನನ್ನ ಆಸಕ್ತಿಯೂ ಹೆಚ್ಚಾಯಿತು.

ಮೋದಿಯವರು :- ಅಮ್ಲಾನ್ ನೀವು ಎಲ್ಲಿ ಹೆಚ್ಚಾಗಿ ಅಭ್ಯಾಸ ಮಾಡುತ್ತಿದ್ದೀರಿ!

ಅಮ್ಲಾನ್:- ನಾನು ಹೆಚ್ಚಾಗಿ ಹೈದರಾಬಾದ್‌ನಲ್ಲಿ ಸಾಯಿ ರೆಡ್ಡಿ ಸರ್ ಗರಡಿಯಲ್ಲಿ ಅಭ್ಯಾಸ ಮಾಡಿದ್ದೇನೆ. ಆಮೇಲೆ ಭುವನೇಶ್ವರಕ್ಕೆ ಶಿಫ್ಟ್ ಆದೆ. ಅಲ್ಲಿಂದ ವೃತ್ತಿಪರ ತರಬೇತಿ ಶುರು ಮಾಡಿದೆ ಸರ್.

ಪ್ರಿಯಾಂಕಾ ಕೂಡ ನಮ್ಮೊಂದಿಗಿದ್ದಾರೆ. ಪ್ರಿಯಾಂಕಾ, ನೀವು 20 ಕಿಲೋಮೀಟರ್ ರೇಸ್ ವಾಕ್ ತಂಡದ ಭಾಗವಾಗಿದ್ದಿರಿ. ಇಡೀ ದೇಶವು ಇಂದು ನಿಮ್ಮ ಮಾತನ್ನು ಕೇಳುತ್ತಿದೆ ಮತ್ತು ಅವರು ಈ ಕ್ರೀಡೆಯ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾರೆ. ಇದಕ್ಕೆ ಯಾವ ರೀತಿಯ ಕೌಶಲ್ಯಗಳು ಬೇಕು ಎಂದು ನೀವೇ ಹೇಳಿ. ಮತ್ತು ನಿಮ್ಮ ವೃತ್ತಿಜೀವನ ಎಲ್ಲಿಂದ ಎಲ್ಲಿಗೆ ತಲುಪಿದೆ?

ಪ್ರಿಯಾಂಕಾ :- ನಾನು ಭಾಗವಹಿಸುವಂತಹ ಈವೆಂಟ್‌ನಲ್ಲಿ ಐವರು ತೀರ್ಪುದಾರರು ಇರುವುದರಿಂದ ಇದು ತುಂಬಾ ಕಠಿಣ. ಓಡಿದರೂ ನಮ್ಮನ್ನು ಹೊರ ಹಾಕುತ್ತಾರೆ ಅಥವಾ ರಸ್ತೆಯಿಂದ ಸ್ವಲ್ಪ ಕೆಳಗೆ ಇಳಿದರೂ ಜಂಪ್ ಮಾಡಿದರೂ ಅನರ್ಹಗೊಳಿಸುತ್ತಾರೆ. ಇಷ್ಟೇ ಅಲ್ಲ ನಾವು ಮೊಣಕಾಲುಗಳನ್ನು ಮಣಿಸಿದರೂ, ನಮ್ಮನ್ನು ಅನರ್ಹಗೊಳಿಸುತ್ತಾರೆ ಮತ್ತು ನನಗೆ 2 ಬಾರಿ ಎಚ್ಚರಿಕೆಯನ್ನು ಸಹ ನೀಡಲಾಗಿತ್ತು. ತದನಂತರ, ನಾನು ನನ್ನ ವೇಗವನ್ನು ಎಷ್ಟು ನಿಯಂತ್ರಿಸಿದೆ ಎಂದರೆ ಕನಿಷ್ಠ ಇಲ್ಲಿಂದ ಟೀಂ ಮೆಡಲ್ ಗೆಲ್ಲಬೇಕು ಎಂದು ನಿರ್ಧರಿಸಿದ್ದೆ. ಏಕೆಂದರೆ ನಾವು ದೇಶಕ್ಕಾಗಿ ಇಲ್ಲಿವರೆಗೆ ಬಂದಿದ್ದೇವೆ ಮತ್ತು ನಾವು ಖಾಲಿ ಕೈಯಿಂದ ಹೋಗಬಾರದು.

ಮೋದಿಯವರು: ನಿಮ್ಮ ತಂದೆ, ಸಹೋದರ ಎಲ್ಲರೂ ಚೆನ್ನಾಗಿದ್ದಾರೆಯೇ?

ಪ್ರಿಯಾಂಕಾ :- ಹೌದು ಸರ್, ಎಲ್ಲರೂ ಚೆನ್ನಾಗಿದ್ದಾರೆ, ನೀವು ನಮಗೆ ತುಂಬಾ ಪ್ರೇರಣೆ ನೀಡುತ್ತೀರಿ ಎಂದು ನಾನು ಎಲ್ಲರಿಗೂ ಹೇಳುತ್ತಿರುತ್ತೇನೆ, ನಿಜವಾಗಿಯೂ ಸರ್, ನನಗೆ ತುಂಬಾ ಸಂತೋಷವೆನಿಸುತ್ತಿದೆ, ಏಕೆಂದರೆ ಭಾರತದಲ್ಲಿ ವಿಶ್ವಮಟ್ಟದ ವಿಶ್ವವಿದ್ಯಾಲಯದಂತಹ ಕ್ರೀಡಾಕೂಟಕ್ಕೆ ಅಷ್ಟೆನೂ ಮಾನ್ಯತೆಯಿರಲಿಲ್ಲ. ಆದರೆ ಈಗ ಈ ಕ್ರೀಡಾಕೂಟಕ್ಕೂ ನಮಗೆ ತುಂಬಾ ಬೆಂಬಲ ಸಿಗುತ್ತಿದೆ. ನಾವು ಈಗ ತುಂಬಾ ಪದಕಗಳನ್ನು ಗೆದ್ದಿದ್ದೇವೆ ಎಂದು ಎಲ್ಲರೂ ಟ್ವೀಟ್ ಮಾಡುತ್ತಿರುವುದನ್ನೂ ನೋಡುತ್ತಿದ್ದೇವೆ. ಆದ್ದರಿಂದ ಒಲಿಂಪಿಕ್ಸ್ ನಂತೆಯೇ ಈ ಕ್ರೀಡಾಕೂಟಕ್ಕೂ ಪ್ರೋತ್ಸಾಹ, ಉತ್ತೇಜನ ದೊರೆಯುತ್ತಿರುವುದು ಸಂತೋಷವೆನಿಸುತ್ತದೆ.

ಮೋದಿಯವರು: ಪ್ರಿಯಾಂಕಾ, ನನ್ನ ಪರವಾಗಿ ಅಭಿನಂದನೆಗಳು. ನೀವು ಬಹಳ ಕೀರ್ತಿ ಗಳಿಸಿದ್ದೀರಿ, ಬನ್ನಿ, ನಾವು ಅಭಿದನ್ಯಾ ಅವರೊಂದಿಗೆ ಮಾತನಾಡೋಣ.

ಅಭಿದನ್ಯ :- ನಮಸ್ಕಾರ ಸರ್.

ಮೋದಿಜಿ: ನಿಮ್ಮ ಬಗ್ಗೆ ಹೇಳಿ.

ಅಭಿದನ್ಯಾ:- ಸರ್ ನಾನು ಮಹಾರಾಷ್ಟ್ರದ ಕೊಲ್ಲಾಪುರದವಳು. ನಾನು ಶೂಟಿಂಗ್ ನಲ್ಲಿ 25 ಎಂ ಸ್ಪೋರ್ಟ್ಸ್ ಪಿಸ್ಟಲ್ ಮತ್ತು 10 ಎಂ ಪಿಸ್ಟಲ್ ಎರಡೂ ವಿಭಾಗಗಳಲ್ಲಿ ಸ್ಪರ್ಧಿಸುತ್ತೇನೆ. ನನ್ನ ತಾಯಿ ತಂದೆ ಇಬ್ಬರೂ ಹೈ ಸ್ಕೂಲ್ ಶಿಕ್ಷಕರಾಗಿದ್ದಾರೆ. ನಾನು 2015 ರಲ್ಲಿ ಶೂಟಿಂಗ್ ಆರಂಭಿಸಿದೆ. ನಾನು ಶೂಟಿಂಗ್ ಆರಂಭಿಸಿದಾಗ, ಕೊಲ್ಲಾಪುರದಲ್ಲಿ ಅಷ್ಟೊಂದು ಸೌಲಭ್ಯಗಳು ದೊರೆಯುತ್ತಿರಲಿಲ್ಲ. ಬಸ್ ನಲ್ಲಿ ಪ್ರಯಾಣಿಸಿ ವಡ್ ಗಾಂವ್ ನಿಂದ ಕೊಲ್ಲಾಪುರಕ್ಕೆ ಹೋಗುವುದಕ್ಕೆ ಒಂದೂವರೆ ಗಂಟೆಕಾಲ ಹಿಡಿಯುತ್ತಿತ್ತು. ಹಾಗೆಯೇ ಹಿಂದಿರುಗಿ ಬರಲು ಒಂದೂವರೆ ಗಂಟೆಕಾಲ ಬೇಕಾಗುತ್ತಿತ್ತು. ಹಾಗೂ ನಾಲ್ಕು ಗಂಟೆಗಳ ಕಾಲ ತರಬೇತಿ, ಹೀಗೆ 6-7 ಗಂಟೆಗಳ ಕಾಲ ಹೋಗು ಬಂದು ಮಾಡುವುದಕ್ಕೆ ಮತ್ತು ತರಬೇತಿಗೆ ಬೇಕಾಗುತ್ತಿತ್ತು. ಹೀಗಾಗಿ ನನಗೆ ಶಾಲೆಯ ಪಾಠಗಳು ಕೂಡಾ ತಪ್ಪಿ ಹೋಗುತ್ತಿದ್ದವು. ಆಗ ನನ್ನ ಅಮ್ಮ ಅಪ್ಪ ಮಗೂ ನಾವು ನಿನ್ನನ್ನು ಶನಿವಾರ ಮತ್ತು ಭಾನುವಾರಗಳಂದು ಶೂಟಿಂಗ್ ರೇಂಜ್ ಗೆ ಕರೆದುಕೊಂಡು ಹೋಗುತ್ತೇವೆ. ಉಳಿದ ಸಮಯದಲ್ಲಿ ನೀನು ಬೇರೆ ಕ್ರೀಡೆಗಳನ್ನು ಆಡು ಎಂದು ಹೇಳಿದರು. ನಾನು ಬಾಲ್ಯದಲ್ಲಿ ಬಹಳಷ್ಟು ಕ್ರೀಡೆಗಳನ್ನು ಆಡುತ್ತಿದ್ದೆ, ಏಕೆಂದರೆ ನನ್ನ ಅಪ್ಪ ಅಮ್ಮ ಇಬ್ಬರಿಗೂ ಕ್ರೀಡೆಗಳಲ್ಲಿ ಬಹಳ ಒಲವಿತ್ತು, ಆದರೆ, ಅವರಿಗೆ ಏನನ್ನೂ ಸಾಧಿಸಲು ಆಗಿರಲಿಲ್ಲ. ಹಣಕಾಸು ನೆರವು ಕೂಡಾ ಸಾಕಷ್ಟಿರಲಿಲ್ಲ ಹಾಗೆಯೇ ಕ್ರೀಡೆಗಳ ಬಗ್ಗೆ ಹೆಚ್ಚಿನ ತಿಳುವಳಿಕೆಯೂ ಇರಲಿಲ್ಲ. ಆದ್ದರಿಂದ ದೇಶವನ್ನು ಪ್ರತಿನಿಧಿಸಬೇಕು ಮತ್ತು ದೇಶಕ್ಕಾಗಿ ಪದಕ ಗೆಲ್ಲಬೇಕು ಎನ್ನುವುದು ನನ್ನ ತಾಯಿಯ ದೊಡ್ಡ ಕನಸಾಗಿತ್ತು. ಆದ್ದರಿಂದ ನಾನು ಅವರ ಕನಸನ್ನು ನನಸಾಗಿಸಲು ಬಾಲ್ಯದಿಂದಲೇ ಬಹಳಷ್ಟು ಆಟ, ಕ್ರೀಡೆಗಳಲ್ಲಿ ಆಸಕ್ತಿ ವಹಿಸುತ್ತಿದ್ದೆ ಮತ್ತು ನಾನು Taekwondo ಕೂಡಾ ಕಲಿತಿದ್ದೇನೆ ಮತ್ತು ಅದರಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದಿದ್ದೇನೆ ಹಾಗೂ ಬಾಕ್ಸಿಂಗ್, ಜುಡೋ ಮತ್ತು ಫೆನ್ಸಿಂಗ್ ಮತ್ತು ಡಿಸ್ಕಸ್ ಥ್ರೋ ಇತ್ಯಾದಿ ಅನೇಕ ಕ್ರೀಡೆಗಳಲ್ಲಿ ಭಾಗವಹಿಸುತ್ತಾ, 2015 ರಲ್ಲಿ ಶೂಟಿಂಗ್ ಕ್ಷೇತ್ರಕ್ಕೆ ಬಂದೆ. 2-3 ವರ್ಷಗಳ ಕಾಲ ಕಷ್ಟಪಟ್ಟೆ ಮತ್ತು ಮೊದಲ ಬಾರಿ ನನ್ನ ಯೂನಿವರ್ಸಿಟಿ ಚಾಂಪಿಯನ್ ಶಿಪ್ ಗಾಗಿ ಮಲೇಷಿಯಾಗೆ ಹೋಗಲು ಆಯ್ಕೆಯಾದೆ ಮತ್ತು ಅಲ್ಲಿ ನಾನು ಕಂಚಿನ ಪದಕ ಗೆದ್ದೆ. ನಿಜಹೇಳಬೇಕೆಂದರೆ ಅಲ್ಲಿಂದಲೇ ನನಗೆ ಒತ್ತು ದೊರೆಯಿತು. ನಂತರ ನನ್ನ ಶಾಲೆ ನನಗಾಗಿ ಶೂಟಿಂಗ್ ರೇಜ್ ಸಿದ್ಧಪಡಿಸಿತು, ನಾನು ಅಲ್ಲಿ ತರಬೇತಿ ಪಡೆಯುತ್ತಿದ್ದೆ ಮತ್ತು ಆ ನಂತರ ಅವರು ನನ್ನನ್ನು ತರಬೇತಿಗಾಗಿ ಪೂನಾಗೆ ಕಳುಹಿಸಿದರು. ಇಲ್ಲಿ ಗಗನ್ ನಾರಂಗ್ ಸ್ಪೋರ್ಟ್ಸ್ ಫೌಂಡೇಷನ್, ಗನ್ ಫಾರ್ ಗ್ಲೋರಿ ಇದೆ ನಾನು ಅದರ ಅಡಿಯಲ್ಲಿ ತರಬೇತಿ ಪಡೆಯುತ್ತಿದ್ದೇನೆ. ಈಗ ಗಗನ್ ಸರ್ ನನಗೆ ಬಹಳ ಬೆಂಬಲ ನೀಡಿದರು ಮತ್ತು ನನ್ನ ಆಟಕ್ಕಾಗಿ ಒತ್ತು ನೀಡಿದರು.

ಮೋದಿ :- ಒಳ್ಳೆಯದು, ನೀವು ನಾಲ್ವರೂ ನನಗೆ ಏನನ್ನಾದರೂ ಹೇಳಲು ಬಯಸುವಿರಾದರೆ ನಾನು ಕೇಳಿಸಿಕೊಳ್ಳಲು ಇಷ್ಟಪಡುತ್ತೇನೆ, ಪ್ರಗತಿ, ಅಮ್ಲಾನ್, ಪ್ರಿಯಾಂಕಾ, ಅಭಿದನ್ಯಾ ಯಾರೇ ಆಗಲಿ ನನಗೆ ಹೇಳಬಹುದು. ನೀವೆಲ್ಲರೂ ನನ್ನೊಂದಿಗೆ ಸಂಪರ್ಕದಲ್ಲಿದ್ದೀರಿ, ಹೀಗಾಗಿ ನೀವು ಏನನ್ನಾದರೂ ಹೇಳಲು ಬಯಸಿದರೆ ನಾನು ಖಂಡಿತವಾಗಿಯೂ ಕೇಳಿಸಿಕೊಳ್ಳುತ್ತೇನೆ.

ಅಮ್ಲಾನ್ :- ಸರ್, ನನ್ನದೊಂದು ಪ್ರಶ್ನೆಯಿದೆ

ಮೋದಿ :- ಹೇಳಿ|

ಅಮ್ಲಾನ್ :- ನಿಮಗೆ ಯಾವ ಕ್ರೀಡೆ ಬಹಳ ಇಷ್ಟವಾಗುತ್ತದೆ ಸರ್?

ಮೋದಿ :- ಕ್ರೀಡಾ ಪ್ರಪಂಚದಲ್ಲಿ ಭಾರತ ಬಹಳಷ್ಟು ಅಭಿವೃದ್ಧಿ ಹೊಂದಬೇಕಾಗಿದೆ  ಆದ್ದರಿಂದ ನಾನು ಈ ವಿಷಯಗಳಿಗೆ ಬಹಳ ಪ್ರಚಾರ ನೀಡುತ್ತಿದ್ದೇನೆ. ಆದರೆ ಹಾಕಿ, ಫುಟ್ಬಾಲ್, ಕಬಡ್ಡಿ, ಖೋ ಖೋ ಇವುಗಳು ನಮ್ಮ ತಾಯ್ನನೆಲದೊಂದಿಗೆ ಸಂಬಂಧಿಸಿದ  ಆಟಗಳಾಗಿವೆ, ಈ ಕ್ರೀಡೆಗಳಲ್ಲಿ ನಾವು ಎಂದಿಗೂ ಹಿಂದುಳಿಯಬಾರದು, ನಮ್ಮ ಜನರು ಆರ್ಚರಿಯಲ್ಲಿ, ಶೂಟಿಂಗ್ ನಲ್ಲಿ ಉತ್ತಮ ಸಾಧನೆ ಮಾಡುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ನಮ್ಮ ಯುವಜನತೆಯಲ್ಲಿ ಮತ್ತು ಕುಟುಂಬಗಳಲ್ಲಿ ಕೂಡಾ ಕ್ರೀಡೆಗಳ ಬಗ್ಗೆ ಮೊದಲಿದ್ದ ಭಾವನೆ ಈಗಿಲ್ಲ. ಈ ಮೊದಲು ಮಕ್ಕಳು ಆಟವಾಡಲು ಹೋದರೆ ತಡೆಯಲಾಗುತ್ತಿತ್ತು, ಆದರೆ ಈಗ ಸಮಯ ಬದಲಾಗಿದೆ ಮತ್ತು ನೀವುಗಳು ಈಗ ಸಾಧಿಸಿ ತರುತ್ತಿರುವ ಯಶಸ್ಸು ಎಲ್ಲಾ ಕುಟುಂಬಗಳಿಗೆ ಪ್ರೇರಣೆಯಾಗುತ್ತಿದೆ. ನಮ್ಮ ಮಕ್ಕಳು ಯಾವುದೇ ಕ್ರೀಡೆಗೆ ಹೋಗುತ್ತಿರಲಿ, ದೇಶಕ್ಕಾಗಿ ಏನಾದರೊಂದನ್ನು ಸಾಧಿಸಿಯೇ ಬರುತ್ತಿದ್ದಾರೆ. ಅಂತೆಯೇ ಈ ಸುದ್ದಿಗಳನ್ನು ಇಂದು ಪ್ರಮುಖವಾಗಿ ತೋರಿಸಲಾಗುತ್ತಿದೆ, ಪ್ರಮುಖವಾಗಿ ಹೇಳಲಾಗುತ್ತಿದೆ ಮತ್ತು ಶಾಲೆ, ಕಾಲೇಜುಗಳಲ್ಲಿ ಚರ್ಚೆಗಳು ಕೂಡಾ ನಡೆಯುತ್ತವೆ. ಸರಿ, ನನಗೆ ಬಹಳ ಸಂತೋಷವಾಗಿದೆ. ನಿಮಗೆಲ್ಲರಿಗೂ ನನ್ನ ಕಡೆಯಿಂದ ಬಹಳ ಬಹಳ ಅಭಿನಂದನೆ, ಅನೇಕಾನೇಕ ಶುಭ ಹಾರೈಕೆಗಳು.

ಯುವ ಕ್ರೀಡಾಕಾರ :- ಬಹಳ ಧನ್ಯವಾದ! ಧನ್ಯವಾದ ಸರ್ ! ಧನ್ಯವಾದ |

ಮೋದಿ :- ಧನ್ಯವಾದ. ನಮಸ್ಕಾರ.

    ನನ್ನ ಕುಟುಂಬದ ಬಂಧುಗಳೇ, ಈ ವರ್ಷ ಆಗಸ್ಟ್ 15 ರಂದು ದೇಶ ‘ಎಲ್ಲರ ಪ್ರಯತ್ನದ’ (‘ಸಬ್ ಕಾ ಪ್ರಯಾಸ್’) ಸಾಮರ್ಥ್ಯವನ್ನು ನೋಡಿತು. ದೇಶವಾಸಿಗಳೆಲ್ಲರ ಪ್ರಯತ್ನವು ‘ಮನೆ ಮನೆಯಲ್ಲೂ ತ್ರಿವರ್ಣ ಧ್ವಜ’ (‘ಹರ್ ಘರ್ ತಿರಂಗಾ’) ಅಭಿಯಾನವನ್ನು ವಾಸ್ತವದಲ್ಲಿ ‘ಪ್ರತಿ ಮನದಲ್ಲೂ ತ್ರಿವರ್ಣ ಧ್ವಜ’ (‘ಹರ್ ಮನ್ ತಿರಂಗಾ’) ಅಭಿಯಾನವನ್ನಾಗಿ ಮಾಡಿತು. ಈ ಅಭಿಯಾನದ ಮೂಲಕ ಹಲವು ದಾಖಲೆಗಳು ಕೂಡಾ ಸೃಷ್ಟಿಯಾಗಿವೆ. ದೇಶವಾಸಿಗಳು ಕೋಟಿ ಸಂಖ್ಯೆಗಟ್ಟಲೆ ತ್ರಿವರ್ಣ ಧ್ವಜಗಳನ್ನು ಖರೀದಿಸಿದರು. ಒಂದೂವರೆ ಲಕ್ಷ ಅಂಚೆ ಕಚೇರಿಗಳ ಮೂಲಕ ಸುಮಾರು ಒಂದೂವರೆ ಕೋಟಿ ತ್ರಿವರ್ಣ ಧ್ವಜಗಳನ್ನು ಮಾರಾಟ ಮಾಡಲಾಯಿತು. ಇದರಿಂದ ನಮ್ಮ ಕೆಲಸಗಾರರು, ನೇಕಾರರು ಮತ್ತು ವಿಶೇಷವಾಗಿ ಮಹಿಳೆಯರಿಗೆ ನೂರಾರು ಕೋಟಿ ರೂಪಾಯಿ ಆದಾಯ ಕೂಡಾ ಬಂದಿದೆ. ತ್ರಿವರ್ಣ ಧ್ವಜದೊಂದಿಗೆ ಸೆಲ್ಫಿ ಪೋಸ್ಟ್ ಮಾಡುವುದರಲ್ಲಿ ಕೂಡಾ ಈ ಬಾರಿ ದೇಶವಾಸಿಗಳು ದಾಖಲೆ ಮಾಡಿದ್ದಾರೆ. ಕಳೆದ ವರ್ಷ ಆಗಸ್ಟ್ 15 ರವರೆಗೆ ಸುಮಾರು 5 ಕೋಟಿ ದೇಶವಾಸಿಗಳು ತ್ರಿವರ್ಣ ಧ್ವಜದ ಜೊತೆಯಲ್ಲಿ ಸೆಲ್ಫಿ ಪೋಸ್ಟ್ ಮಾಡಿದ್ದರು. ಈ ವರ್ಷ ಈ ಸಂಖ್ಯೆ 10 ಕೋಟಿಯನ್ನು ಕೂಡಾ ಮೀರಿದೆ.

    ಸ್ನೇಹಿತರೇ, ದೇಶದಲ್ಲಿ ಈಗ ದೇಶಭಕ್ತಿಯ ಭಾವನೆಯನ್ನು ಎತ್ತಿ ಹಿಡಿಯುವ ‘ನನ್ನ ಮಣ್ಣು ನನ್ನ ದೇಶ‘ (ಮೇರೀ ಮಾಟೀ ಮೇರಾ ದೇಶ್) ಅಭಿಯಾನ ಭರದಿಂದ ನಡೆಯುತ್ತಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ದೇಶದ ಹಳ್ಳಿ ಹಳ್ಳಿಗಳಲ್ಲಿ, ಪ್ರತಿ ಮನೆಯಿಂದಲೂ ಮಣ್ಣು ಸಂಗ್ರಹಿಸುವ ಅಭಿಯಾನ ನಡೆಯಲಿದೆ. ಸಾವಿರಾರು ಅಮೃತ ಕಳಶಗಳಲ್ಲಿ ದೇಶದ ಪವಿತ್ರ ಮಣ್ಣನ್ನು ಸಂಗ್ರಹಿಸಲಾಗುತ್ತದೆ.  ಅಕ್ಟೋಬರ್ ತಿಂಗಳಾಂತ್ಯದಲ್ಲಿ ಸಾವಿರಾರು ಅಮೃತ ಕಳಶಗಳು ಮೆರವಣಿಗೆಯಲ್ಲಿ ದೇಶದ ರಾಜಧಾನಿ ದೆಹಲಿ ತಲುಪಲಿವೆ. ಈ ಮಣ್ಣಿನಿಂದಲೇ ದೆಹಲಿಯ ಅಮೃತ್ ಉದ್ಯಾನವನದ ನಿರ್ಮಾಣವಾಗಲಿದೆ. ಪ್ರತಿಯೊಬ್ಬ ದೇಶವಾಸಿಯ ಪ್ರಯತ್ನ ಈ ಅಭಿಯಾನವನ್ನು ಕೂಡಾ ಯಶಸ್ವಿಯಾಗಿಸಲಿದೆ ಎನ್ನುವ ನಂಬಿಕೆ ನನಗಿದೆ. 

   

ನನ್ನ ಕುಟುಂಬದ ಬಂಧುಗಳೇ, ಈ ಬಾರಿ ಸಂಸ್ಕೃತ ಭಾಷೆಯಲ್ಲಿ ಬರೆದಂತಹ ನನಗೆ ಹಲವಾರು ಪತ್ರಗಳು ನನಗೆ ತಲುಪಿವೆ. ಶ್ರಾವಣ ಮಾಸದ ಹುಣ್ಣಿಮೆಯ ದಿನಾಂಕದಂದು ವಿಶ್ವ ಸಂಸ್ಕೃತ ದಿನ ಆಚರಿಸುವುದು ಇದಕ್ಕೆ ಕಾರಣವಾಗಿದೆ.

ಸರ್ವೇಭ್ಯಃ ವಿಶ್ವ-ಸಂಸ್ಕೃತ-ದಿವಸಸ್ಯ ಹಾರ್ದಯಃ ಶುಭಕಾಮನಾಃ

ನಿಮಗೆಲ್ಲರಿಗೂ ವಿಶ್ವ ಸಂಸ್ಕೃತ ದಿನದ ಅನೇಕಾನೇಕ ಶುಭಾಶಯಗಳು. ಸಂಸ್ಕೃತ ಭಾಷೆ ವಿಶ್ವದ ಪ್ರಾಚೀನ ಭಾಷೆಗಳಲ್ಲಿ ಒಂದೆನ್ನುವ ವಿಷಯ ನಮಗೆಲ್ಲರಿಗೂ ತಿಳಿದೇ ಇದೆ. ಇದನ್ನು ಅನೇಕ ಆಧುನಿಕ ಭಾಷೆಗಳ ತಾಯಿ ಎಂದು ಕೂಡಾ ಕರೆಯುತ್ತಾರೆ. ಸಂಸ್ಕೃತ ತನ್ನ ಪ್ರಾಚೀನತೆಯೊಂದಿಗೆ ತನ್ನ ವೈಜ್ಞಾನಿಕತೆ ಮತ್ತು ವ್ಯಾಕರಣಕ್ಕಾಗಿ ಕೂಡಾ ಹೆಸರುವಾಸಿಯಾಗಿದೆ. ಭಾರತದ ಎಷ್ಟೊಂದು ಪ್ರಾಚೀನ ಜ್ಞಾನದ ವಿಷಯಗಳನ್ನು ಸಂಸ್ಕೃತ ಭಾಷೆಯಲ್ಲಿಯೇ ಸಂರಕ್ಷಿಸಿ ಇಡಲಾಗಿದೆ. ಯೋಗ, ಆಯುರ್ವೇದ ಮತ್ತು ತತ್ವ ಶಾಸ್ತ್ರದಂತಹ ವಿಷಯಗಳ ಕುರಿತು ಸಂಶೋಧನೆ ಮಾಡುವವರು ಈಗ ಹೆಚ್ಚು ಹೆಚ್ಚು ಸಂಸ್ಕೃತ ಕಲಿಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಹಲವಾರು ಸಂಸ್ಥೆಗಳು ಉತ್ತಮ ಕೆಲಸ ಮಾಡುತ್ತಿವೆ. ಉದಾಹರಣೆಗೆ ಹೇಳಬೇಕೆಂದರೆ Sanskrit Promotion foundation, Sanskrit for Yog, Sanskrit for Ayurveda ಮತ್ತು  Sanskrit for Buddhism ನಂತಹ ಅನೇಕ ಕೋರ್ಸ್ ಗಳನ್ನು ನಡೆಸುತ್ತಿವೆ.  ‘ಸಂಸ್ಕೃತ ಭಾರತಿ’ ಜನರಿಗೆ ಸಂಸ್ಕೃತ ಕಲಿಸುವ ಅಭಿಯಾನ ನಡೆಸುತ್ತದೆ. ಇವುಗಳ ಪೈಕಿ  ನೀವು 10 ದಿನಗಳ ‘ಸಂಸ್ಕೃತ ಸಂಭಾಷಣಾ ಶಿಬಿರ’ ದಲ್ಲಿ ಭಾಗವಹಿಸಬಹುದು. ಇಂದು ಜನರಲ್ಲಿ ಸಂಸ್ಕೃತ ಭಾಷೆ ಕುರಿತಂತೆ ಅರಿವು ಮತ್ತು ಹೆಮ್ಮೆ ಹೆಚ್ಚಾಗುತ್ತಿರುವುದು ನನಗೆ ಸಂತಸ ತಂದಿದೆ.  ಇವೆಲ್ಲದರ ಹಿಂದೆ ಕಳೆದ ಕೆಲವು ವರ್ಷಗಳಲ್ಲಿ ದೇಶದ ವಿಶೇಷ ಕೊಡುಗೆಯೂ ಇದೆ. ಅಂದರೆ ಮೂರು Sanskrit Deemed Universities ಗಳನ್ನು 2020 ರಲ್ಲಿ Central Universities ಮಾಡಲಾಯಿತು. ಬೇರೆ ಬೇರೆ ನಗರಗಳಲ್ಲಿ ಸಂಸ್ಕೃತ ವಿಶ್ವವಿದ್ಯಾಲಯಗಳ ಅನೇಕ ಕಾಲೇಜು ಮತ್ತು ಸಂಸ್ಥೆಗಳು ಕೂಡಾ ನಡೆಯುತ್ತಿವೆ. IITಗಳು ಮತ್ತು IIMಗಳಂತಹ ಸಂಸ್ಥೆಗಳಲ್ಲಿ ಸಂಸ್ಕೃತ ಕೇಂದ್ರ ಸಾಕಷ್ಟು ಜನಪ್ರಿಯವಾಗುತ್ತಿವೆ.

ಸ್ನೇಹಿತರೇ, ನಿಮಗೆ ಆಗಾಗ್ಗೆ ಒಂದು ವಿಷಯದ ಅನುಭವ ಖಂಡಿತವಾಗಿಯೂ ಆಗಿರುತ್ತದೆ, ಅದೆಂದರೆ ಬೇರುಗಳೊಂದಿಗೆ ಸೇರ್ಪಡೆಯಾಗುವುದು, ನಮ್ಮ ಸಂಸ್ಕೃತಿಯೊಂದಿಗೆ ಬೆರೆಯುವುದು, ಇದಕ್ಕೆ ನಮ್ಮ ಪರಂಪರೆಯಲ್ಲಿ ಬಹು ದೊಡ್ಡ ಸಮರ್ಥ ಮಾಧ್ಯಮವಿದೆ ಅದೆಂದರೆ ನಮ್ಮ ಮಾತೃಭಾಷೆ. ನಾವು ನಮ್ಮ ಮಾತೃಭಾಷೆಯೊಂದಿಗೆ ಬೆರೆತರೆ, ನಾವು ಸಹಜವಾಗಿಯೇ ನಮ್ಮ ಸಂಸ್ಕೃತಿಯೊಂದಿಗೆ ಬೆರೆಯುತ್ತೇವೆ. ನಮ್ಮ ಸಂಸ್ಕಾರಗಳೊಂದಿಗೆ ಬೆರೆಯುತ್ತೇವೆ.ನಮ್ಮ ಸಂಪ್ರದಾಯಗಳೊಂದಿಗೆ ಬೆರೆಯುತ್ತೇವೆ, ನಮ್ಮ ಪ್ರಾಚೀನ ವೈಭವದೊಂದಿಗೆ ಬೆರೆಯುತ್ತೇವೆ. ಅಂತೆಯೇ ಭಾರತದ ಮತ್ತೊಂದು ಮಾತೃಭಾಷೆಯಿದೆ. ಅದೆಂದರೆ ಗೌರವಶಾಲಿ ತೆಲುಗು ಭಾಷೆ. ಆಗಸ್ಟ್ 29 ಅನ್ನು ತೆಲುಗು ದಿನವನ್ನಾಗಿ ಆಚರಿಸಲಾಗುತ್ತದೆ.

ಅಂದರಿಕೀ ತೆಲುಗು ಭಾಷಾ ದಿನೋತ್ಸವ ಶುಭಾಕಾಂಕ್ಷಲು

ನಿಮ್ಮೆಲ್ಲರಿಗೂ ತೆಲುಗು ದಿನದ ಅನೇಕಾನೇಕ ಶುಭಾಶಯಗಳು. ತೆಲುಗು ಭಾಷೆಯ ಸಾಹಿತ್ಯ ಮತ್ತು ಪರಂಪರೆಯಲ್ಲಿ ಭಾರತೀಯ ಸಂಸ್ಕೃತಿಯ ಅನೇಕ ಅನರ್ಘ್ಯ ರತ್ನಗಳು ಅಡಗಿವೆ. ತೆಲುಗು ಭಾಷೆಯ ಈ ಪರಂಪರೆಯ ಪ್ರಯೋಜನ ಇಡೀ ದೇಶಕ್ಕೆ ದೊರೆಯುವಂತೆ ಮಾಡಲು ಹಲವು ಪ್ರಯತ್ನಗಳನ್ನು ಮಾಡಲಾಗುತ್ತಿದೆ.

ನನ್ನ ಪ್ರೀತಿಯ ಕುಟುಂಬದ ಬಂಧುಗಳು, ‘ಮನದ ಮಾತಿನ’ ಅನೇಕ ಸಂಚಿಕೆಗಳಲ್ಲಿ ನಾವು ಪ್ರವಾಸೋದ್ಯಮ ಕುರಿತು ಮಾತನಾಡಿದ್ದೇವೆ. ವಸ್ತುಗಳನ್ನು ಅಥವಾ ಸ್ಥಳಗಳನ್ನು ಖುದ್ದು ನೋಡುವುದು, ಅರ್ಥ ಮಾಡಿಕೊಳ್ಳುವುದು ಮತ್ತು ಕೆಲವು ಕ್ಷಣಗಳನ್ನು ಅವುಗಳಲ್ಲಿ ಜೀವಿಸುವುದು ನಿಜಕ್ಕೂ ಒಂದು ಪ್ರತ್ಯೇಕ ಅನುಭವ ನೀಡುತ್ತದೆ.

ಸಮುದ್ರವನ್ನು ಬೇರೆಯವರು ಎಷ್ಟೇ ವರ್ಣನೆ ಮಾಡಲಿ, ನಾವು ಸಮುದ್ರವನ್ನು ಸ್ವಯಂ ನೋಡದೇ ಇದ್ದರೆ ಅದರ ಅಗಾಧತೆಯನ್ನು ಅನುಭವಿಸಲಾಗುವುದಿಲ್ಲ. ಬೇರೆಯವರು ಹಿಮಾಲಯದ ಕುರಿತು ಎಷ್ಟೇ ಮಾತನಾಡಿದರೂ, ನಾವು ಹಿಮಾಲಯವನ್ನು ನೋಡದ ಹೊರತು ಅದರ ಸೌಂದರ್ಯವನ್ನು ಊಹಿಸಲಾಗುವುದಿಲ್ಲ. ಆದ್ದರಿಂದಲೇ ನಾನು ಅವಕಾಶ ದೊರೆತಾಗ ನಮ್ಮ ದೇಶದ ಸೌಂದರ್ಯ, ನಮ್ಮ ದೇಶದ ವೈವಿಧ್ಯತೆಯನ್ನು ನೋಡಲು ಖಂಡಿತಾ ಹೋಗಿ ಎಂದು  ನಿಮ್ಮೆಲ್ಲರಲ್ಲೂ ಆಗಾಗ್ಗೆ ಮನವಿ ಮಾಡುತ್ತಿರುತ್ತೇನೆ. ನಾವು ಪ್ರಪಂಚದ ಮೂಲೆ ಮೂಲೆಗೆ ಹೋಗಿ ಬರಬಹುದು, ಆದರೆ ಕೆಲವೊಮ್ಮೆ ನಮ್ಮದೇ ನಗರ ಅಥವಾ ರಾಜ್ಯದ ಅನೇಕ ಉತ್ತಮ ಸ್ಥಳಗಳು ಮತ್ತು ವಸ್ತುಗಳ ಬಗ್ಗೆ ತಿಳಿದಿರುವುದೇ ಇಲ್ಲ.

ಕೆಲವೊಮ್ಮೆ ಹೀಗೂ ಆಗುವುದುಂಟು, ಜನರಿಗೆ ತಮ್ಮ ನಗರದಲ್ಲೇ ಇರುವ ಐತಿಹಾಸಿಕ ಸ್ಥಳಗಳ ಬಗ್ಗೆ ತಿಳಿದೇ ಇರುವುದಿಲ್ಲ. ಇದೇ ರೀತಿಯ ಅನುಭವ ಧನ್ ಪಾಲ್ ಅವರಿಗೂ ಆಗಿದೆ. ಧನ್ ಪಾಲ್ ಅವರು ಬೆಂಗಳೂರಿನ ಟ್ರಾನ್ಸ್ ಪೋರ್ಟ್ ಕಛೇರಿಯೊಂದರಲ್ಲಿ ಚಾಲಕನ ವೃತ್ತಿ ಮಾಡುತ್ತಾರೆ. ಸುಮಾರು 17 ವರ್ಷಗಳ ಹಿಂದೆ ಅವರಿಗೆ ಸೈಟ್ ಸೀಯೀಂಗ್ ವಿಂಗ್ ನಲ್ಲಿ ಜವಾಬ್ದಾರಿ ಹುದ್ದೆ ದೊರೆಯಿತು. ಈಗ ಜನರು ಅದನ್ನು ಬೆಂಗಳೂರು ದರ್ಶಿನಿ ಎಂದು ಕರೆಯುತ್ತಾರೆ. ಧನ್ ಪಾಲ್ ಅವರು ಪ್ರವಾಸಿಗರನ್ನು ನಗರದ ಬೇರೆ ಬೇರಿ ಸ್ಥಳಗಳಿಗೆ ಕರೆದೊಯ್ಯುತ್ತಿದ್ದರು. ಇಂತಹದ್ದೇ ಒಂದು ಪ್ರವಾಸದ ಸಂದರ್ಭದಲ್ಲಿ ಓರ್ವ ಪ್ರವಾಸಿಗ ಧನ್ ಪಾಲ್ ಅವರನ್ನು ಬೆಂಗಳೂರಿನ ಟ್ಯಾಂಕ್ ಅನ್ನು ಸ್ಯಾಂಕಿ ಟ್ಯಾಂಕ್ ಎಂದು ಏಕೆ ಕರೆಯುತ್ತಾರೆಂದು ಪ್ರಶ್ನಿಸಿದರು. ಈ ಪ್ರಶ್ನೆಗೆ ಉತ್ತರ ತಿಳಿದಿಲ್ಲದ ಕಾರಣ ಧನ್ ಪಾಲ್ ಅವರಿಗೆ ಬಹಳ ಖೇದವೆನಿಸಿತು. ಹೀಗಾಗಿ ಅವರು ಸ್ವತಃ ಅರಿವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಗಮನ ಹರಿಸಿದರು. ತಮ್ಮ ಪರಂಪರೆಯನ್ನು ಅರಿಯುವ ಈ ಉತ್ಸಾಹದಲ್ಲಿ ಅವರಿಗೆ ಅನೇಕ ಶಿಲೆಗಳು ಮತ್ತು ಶಿಲಾಶಾಸನಗಳು ದೊರೆತವು.  ಈ ಕೆಲಸದಲ್ಲಿ ಅವರ ಮನಸ್ಸು ಅದೆಷ್ಟು ಮಗ್ನವಾಯಿತೆಂದರೆ, ಅವರು ಎಪಿಗ್ರಾಫಿ (एपिग्राफी) ಅಂದರೆ ಶಿಲಾಲೇಖನಗಳಿಗೆ ಸಂಬಂಧಿಸಿದ ವಿಷಯದಲ್ಲಿ ಡಿಪ್ಲೊಮಾ ಪದವಿಯನ್ನು ಕೂಡಾ ಪಡೆದರು. ಇತ್ತೀಚೆಗೆ ಅವರು ನಿವೃತ್ತರಾಗಿದ್ದಾರೆ, ಆದರೂ ಬೆಂಗಳೂರಿನ ಇತಿಹಾಸವನ್ನು ಅನ್ವೇಷಿಸುವ ಅವರ ಹವ್ಯಾಸ ಇಂದಿಗೂ ಅದೇ ರೀತಿ ಉಳಿದಿದೆ.

ಸ್ನೇಹಿತರೇ, ನನಗೆ Brian D. Kharpran (ब्रायन डी खारप्रन) ಅವರ ಬಗ್ಗೆ ಹೇಳುವುದಕ್ಕೆ ಬಹಳ ಸಂತೋಷವೆನಿಸುತ್ತದೆ. ಇವರು ಮೇಘಾಲಯದ ನಿವಾಸಿಯಾಗಿದ್ದಾರೆ ಮತ್ತು ಅವರಿಗೆ Speleology (स्पेलियो-लॉजी) ನಲ್ಲಿ ಬಹಳ ಆಸಕ್ತಿ ಇದೆ. ಸರಳ ಭಾಷೆಯಲ್ಲಿ ಹೇಳುವುದಾದರೆ ಇದರ ಅರ್ಥ ಗುಹೆಗಳ ಅಧ್ಯಯನ. ಕೆಲವು ವರ್ಷಗಳ ಹಿಂದೆ ಕತೆ ಪುಸ್ತಕಗಳನ್ನು ಓದಿದ ಸಮಯದಲ್ಲಿ ಅವರಿಗೆ ಈ ವಿಷಯದಲ್ಲಿ ಆಸಕ್ತಿ ಮೂಡಿತು. 1964 ರಲ್ಲಿ ಅವರು ಶಾಲಾ ವಿದ್ಯಾರ್ಥಿಯಾಗಿದ್ದ ಸಮಯದಲ್ಲಿ ತಮ್ಮ ಮೊದಲ ಅನ್ವೇಷಣೆ ಮಾಡಿದ್ದರು. 1990 ರಲ್ಲಿ ಅವರು ತಮ್ಮ ಸ್ನೇಹಿತರೊಂದಿಗೆ ಸೇರಿ ಒಂದು Association ಸ್ಥಾಪಿಸಿದರು ಮತ್ತು ಅದರ ಮೂಲಕ ಮೇಘಾಲಯದ ಅಜ್ಞಾತ ಗುಹೆಗಳ ಬಗ್ಗೆ ಕಂಡುಹಿಡಿಯಲು ಆರಂಭಿಸಿದರು. ಕಾಲ ಕ್ರಮೇಣ ಅವರು ತಮ್ಮ ತಂಡದೊಂದಿಗೆ ಮೇಘಾಲಯದ 1700 ಕ್ಕೂ ಅಧಿಕ ಗುಹೆಗಳನ್ನು ಅನ್ವೇಷಿಸಿದರು ಮತ್ತು ರಾಜ್ಯವನ್ನು World Cave Map ನಲ್ಲಿ ತಂದುಬಿಟ್ಟರು.  ಭಾರತದ ಅತ್ಯಂತ ಉದ್ದದ ಮತ್ತು ಆಳವಾದ ಗುಹೆಗಳ ಪೈಕಿ ಕೆಲವು ಗುಹೆಗಳಲ್ಲಿ ಮೇಘಾಲಯದಲ್ಲಿವೆ.  Brian Ji ಮತ್ತು ಅವರ ತಂಡವು Cave Fauna ಅಂದರೆ ಜಗತ್ತಿನಲ್ಲಿ ಬೇರೆಲ್ಲಿಯೂ ಕಂಡುಬರದಂತಹ  ಗುಹೆಯ ಜೀವ ಜಂತುಗಳನ್ನು ಕೂಡಾ ದಾಖಲಿಸಿದೆ. ನಾನು ಇವರ ಇಡೀ ತಂಡದ ಪ್ರಯತ್ನಗಳನ್ನು ಶ್ಲಾಘಿಸುತ್ತೇನೆ ಮತ್ತು ಜೊತೆಯಲ್ಲಿ ನೀವು ಮೇಘಾಲಯದ ಗುಹೆಗಳನ್ನು ನೋಡಿ ಬರುವ ಯೋಜನೆ ಖಂಡಿತಾ ಮಾಡಬೇಕೆಂದು ಮನವಿ ಮಾಡುತ್ತೇನೆ.

ನನ್ನ ಕುಟುಂಬ ಬಂಧುಗಳೇ, ಹೈನುಗಾರಿಕೆ ವಲಯ, ನಮ್ಮ ದೇಶದ ಅತ್ಯಂತ ಪ್ರಮುಖ ವಲಯಗಳಲ್ಲಿ ಒಂದೆನಿಸಿದೆ ಎಂಬುದು ನಿಮಗೆಲ್ಲಾ ತಿಳಿದೇ ಇದೆ.  ನಮ್ಮ ಮಾತೆಯರು ಮತ್ತು ಸೋದರಿಯರ ಜೀವನದಲ್ಲಿ ದೊಡ್ಡ ಬದಲಾವಣೆ ತರುವಲ್ಲಿ ಈ ಕ್ಷೇತ್ರದ ಪಾತ್ರ ಬಹಳ ಮುಖ್ಯವಾಗಿದೆ. ಕೆಲವ ದಿನಗಳ ಹಿಂದಷ್ಟೇ ನನಗೆ ಗುಜರಾತ್ ನ ಬನಾಸ್ ಡೈರಿಯ ಒಂದು ಆಸಕ್ತಿದಾಯಕ ಉಪಕ್ರಮದ ಬಗ್ಗೆ ತಿಳಿದುಬಂದಿತು. ಬನಾಸ್ ಡೈರಿಯನ್ನು, ಏಷ್ಯಾದ ಅತಿ ದೊಡ್ಡ ಡೈರಿಯೆಂದು ಹೇಳಲಾಗುತ್ತದೆ. ಇಲ್ಲಿ ಪ್ರತಿದಿನ ಸರಾಸರಿ 75 ಲಕ್ಷ ಲೀಟರ್ ಹಾಲು ಸಂಸ್ಕರಣೆಯಾಗುತ್ತದೆ. ನಂತರ ಇದನ್ನು ಬೇರೆ ರಾಜ್ಯಗಳಿಗೆ ಕಳುಹಿಸಲಾಗುತ್ತದೆ. ಬೇರೆ ರಾಜ್ಯಗಳಲ್ಲಿ ಇಲ್ಲಿನ ಹಾಲನ್ನು ಸಕಾಲಕ್ಕೆ ವಿತರಣೆ ಮಾಡುವುದಕ್ಕಾಗಿ ಈವರೆಗೆ ಟ್ಯಾಂಕರ್ ಅಥವಾ ಮಿಲ್ಕ್ ಟ್ರೈನ್ಸ್ ಗಳ ನೆರವು ಪಡೆಯಲಾಗುತ್ತಿತ್ತು. ಆದರೆ ಇದರಲ್ಲಿ ಸವಾಲುಗಳು ಕಡಿಮೆಯೇನೂ ಇರಲಿಲ್ಲ. ಲೋಡಿಂಗ್ ಮತ್ತು ಅನ್ಲೋಡಿಂಗ್ ಗೆ ಸಾಕಷ್ಟು ಸಮಯ ಬೇಕಾಗುತ್ತಿತ್ತು ಮತ್ತು ಅನೇಕ ಬಾರಿ ಈ ಅವಧಿಯಲ್ಲಿ ಹಾಲು ಹಾಳಾಗುತ್ತಿತ್ತು.  ಈ ಸಮಸ್ಯೆಯನ್ನು ನಿವಾರಿಸುವುದಕ್ಕಾಗಿ ಭಾರತೀಯ ರೈಲ್ವೇ ಹೊಸದೊಂದು ಪ್ರಯೋಗ ಮಾಡಿತು. ರೈಲ್ವೇಯು ಪಾಲನ್ ಪೂರ್ ದಿಂದ ನ್ಯೂ ರೇವಾಡಿವರೆಗೆ ಟ್ರಕ್ ಆನ್ ಟ್ರಕ್ ನ ಸೌಲಭ್ಯ ಆರಂಭಿಸಿತು. ಇದರಲ್ಲಿ ಹಾಲಿನ ಟ್ರಕ್ ಗಳನ್ನು ನೇರವಾಗಿ ಟ್ರೈನುಗಳ ಮೇಲೆ ಏರಿಸಲಾಗುತ್ತಿತ್ತು. ಅಂದರೆ ಟ್ರಾನ್ಸ್ ಪೋರ್ಟೇಷನ್ ನ ಬಹುದೊಡ್ಡ ಕಷ್ಟ ಇದರಿಂದ ದೂರವಾಯಿತು.  Truck-on-Track ಸೌಲಭ್ಯದ ಫಲಿತಾಂಶಗಳು ಬಹಳ ಸಂತೃಪ್ತಿಕರವಾಗಿವೆ. ಮೊದಲು ಹಾಲನ್ನು ತಲುಪಿಸಲು 30 ಗಂಟೆಗಳ ಕಾಲ ಹಿಡಿಯುತ್ತಿತ್ತು ಈಗ ಅದರಲ್ಲಿ ಅರ್ಧದಷ್ಟು ಸಮಯದಲ್ಲೇ ಹಾಲು ತಲುಪಿಸಲಾಗುತ್ತಿದೆ. ಇದರಿಂದ ಇಂಧನದಿಂದ ಉಂಟಾಗುತ್ತಿದ್ದ ಮಾಲಿನ್ಯ ನಿಂತಿರುವುದು ಮಾತ್ರವಲ್ಲದೇ ಇಂಧನಕ್ಕಾಗುವ ಖರ್ಚು ವೆಚ್ಚ ಕೂಡಾ ಉಳಿತಾಯವಾಗುತ್ತಿದೆ. ಇದರ ಪ್ರಯೋಜನ ಟ್ರಕ್ ನ ಚಾಲಕರಿಗೆ ಕೂಡಾ ಉಂಟಾಗಿದ್ದು ಅವರ ಜೀವನ ಸುಲಭವಾಗಿದೆ.

ಸ್ನೇಹಿತರೇ, ಸಾಮೂಹಿಕ ಪ್ರಯತ್ನಗಳಿಂದ ಇಂದು ನಮ್ಮ ಡೈರಿಗಳು ಕೂಡಾ ಆಧುನಿಕ ಚಿಂತನೆಯೊಂದಿಗೆ ಮುಂದೆ ಸಾಗುತ್ತಿವೆ. ಬನಾಸ್ ಡೈರಿ ಕೂಡಾ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಇಟ್ಟಿರುವ ಹೆಜ್ಜೆಯು ಅದು ನಡೆಸುತ್ತಿರುವ ಸೀಡ್ ಬಾಲ್ ವೃಕ್ಷಾರೋಪಣ ಅಭಿಯಾನದಿಂದ ತಿಳಿದು ಬರುತ್ತದೆ. Varanasi Milk Union ನಮ್ಮ dairy farmers ಗಳ ಆದಾಯ ಹೆಚ್ಚಿಸುವುದಕ್ಕಾಗಿ ಗೊಬ್ಬರ ನಿರ್ವಹಣೆ ಕುರಿತು ಕೆಲಸ ಮಾಡುತ್ತಿದೆ. ಕೇರಳದ ಮಲಬಾರ್ Milk Union Dairy ಯ ಪ್ರಯತ್ನ ಕೂಡಾ ಬಹಳ ವಿಶಿಷ್ಟವಾಗಿದೆ. ಇದು ಹಸುಗಳಿಗೆ ತಗಲುವ ರೋಗಗಳ ಚಿಕಿತ್ಸೆಗಾಗಿ ಆಯುರ್ವೇದ ಔಷಧಗಳನ್ನು ಅಭಿವೃದ್ಧಿ ಪಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.

ಸ್ನೇಹಿತರೇ, ಇಂದು ಅನೇಕರರು ಹೈನುಗಾರಿಕೆಯನ್ನು ತಮ್ಮದಾಗಿಸಿಕೊಂಡು ಇದನ್ನು ವೈವಿಧ್ಯಮಯಗೊಳಿಸುತ್ತಿದ್ದಾರೆ. ರಾಜಸ್ತಾನದ ಕೋಟಾದಲ್ಲಿ, ಡೈರಿ ಫಾರಂ ನಡೆಸುತ್ತಿರುವ ಅಮನ್ ಪ್ರೀತ್ ಸಿಂಗ್ ಅವರ ಬಗ್ಗೆ ಕೂಡಾ ನಿಮಗೆ ಖಂಡಿತವಾಗಿಯೂ ಹೇಳಬೇಕಿದೆ. ಇವರು ಡೈರಿಯೊಂದಿಗೆ ಜೈವಿಕ ಅನಿಲ - Biogas  ಕುರಿತು ಕೂಡಾ ಗಮನ ಹರಿಸಿದ್ದು, ಎರಡು biogas plants ಸ್ಥಾಪಿಸಿದ್ದಾರೆ. ಇದರಿಂದಾಗಿ ವಿದ್ಯುತ್ ನಿಂದಾಗುತ್ತಿದ್ದ ಅವರ ಖರ್ಚು ಸುಮಾರು ಶೇಕಡಾ 70 ರಷ್ಟು ಕಡಿಮೆಯಾಗಿದೆ. ಇವರ ಈ ಪ್ರಯತ್ನವು ದೇಶಾದ್ಯಂತ dairy farmers ಗೆ ಸ್ಫೂರ್ತಿ ನೀಡುವಂತಹದ್ದಾಗಿದೆ. ಇಂದು ಅನೇಕ ದೊಡ್ಡ dairies, biogas ಕುರಿತು ಗಮನ ಹರಿಸುತ್ತಿವೆ. ಈ ರೀತಿಯ ಸಮುದಾಯ ಚಾಲಿತ ಮೌಲ್ಯ ವರ್ಧನೆ ಬಹಳ ಪ್ರೋತ್ಸಾಹ ನೀಡುವಂತದ್ದಾಗಿದೆ. ದೇಶಾದ್ಯಂತ ಇಂತಹ trends ಸತತವಾಗಿ ನಡೆಯುತ್ತಿರುತ್ತವೆ ಎನ್ನುವ ನಂಬಿಕೆ ನನಗಿದೆ.

ನನ್ನ ಕುಟುಂಬದ ಬಂಧುಗಳೇ, ಇವಿಷ್ಟೂ ಇಂದಿನ ಮನದ ಮಾತುಗಳಾಗಿದ್ದವು. ಈಗ ಹಬ್ಬಗಳ ಕಾಲ ಕೂಡಾ ಆಗಮಿಸಿದೆ. ನಿಮಗೆಲ್ಲರಿಗೂ ಮುಂಚಿತವಾಗಿಯೇ ರಕ್ಷಾಬಂಧನ ಹಬ್ಬದ ಶುಭಾಶಯಗಳು. ಹಬ್ಬದ ಆಚರಣೆಯ ಸಮಯದಲ್ಲಿ ನಾವು Vocal for Local ನ ಮಂತ್ರವನ್ನು ಕೂಡಾ ನೆನಪಿನಲ್ಲಿ ಇರಿಸಿಕೊಳ್ಳಬೇಕು. ‘ಆತ್ಮನಿರ್ಭರ್ ಭಾರತ್’ ಈ ಅಭಿಯಾನ ಪ್ರತಿ ದೇಶವಾಸಿಯ ತಮ್ಮದೇ ಸ್ವಂತ ಅಭಿಯಾನವಾಗಿದೆ. ನಾವು ನಮ್ಮ ಶ್ರದ್ಧೆ ಮತ್ತು ನಂಬಿಕೆಯ ಸ್ಥಳಗಳು ಮತ್ತು ಅವುಗಳ ಸುತ್ತಮುತ್ತಲಿನ ಪ್ರದೇಶಗಳನ್ನು ಹಬ್ಬದ ಸಮಯದಲ್ಲಿ ಮಾತ್ರವಲ್ಲದೇ, ಸದಾ ಕಾಲವೂ ಸ್ವಚ್ಛವಾಗಿ ಇರಿಸಿಕೊಳ್ಳಬೇಕು.  ನಿಮ್ಮೊಂದಿಗೆ ಮುಂದಿನ ಬಾರಿ ಕೆಲವು ಹೊಸ ವಿಷಯಗಳೊಂದಿಗೆ ಮತ್ತೆ ‘ಮನದ ಮಾತು‘ ಆಡುತ್ತೇನೆ.  ನಮ್ಮ ದೇಶವಾಸಿಗಳ ಕೆಲವು ಹೊಸ ಪ್ರಯತ್ನಗಳ ಕುರಿತು, ಅವುಗಳ ಯಶಸ್ಸಿನ ಕುರಿತು ಮಾತನಾಡೋಣ. ಅಲ್ಲಿಯವರೆಗೆ ನನಗೆ ಅನುಮತಿ ನೀಡಿ. ಅನೇಕಾನೇಕ ಧನ್ಯವಾದ. ನಮಸ್ಕಾರ

 

*****

 

 



(Release ID: 1952951) Visitor Counter : 128