ಪ್ರಧಾನ ಮಂತ್ರಿಯವರ ಕಛೇರಿ

​​​​​​​ಗುಜರಾತ್ ನ ಗಾಂಧಿನಗರದಲ್ಲಿ ಸೆಮಿಕಾನ್ ಇಂಡಿಯಾ – 2023 ಉದ್ಘಾಟಿಸಿದ ಪ್ರಧಾನಮಂತ್ರಿ


 “ಭಾರತದಲ್ಲಿ ಏಕೆ ಹೂಡಿಕೆ ಮಾಡಬೇಕು” ಎಂಬುದರಿಂದ “ಭಾರತದಲ್ಲಿ ಏಕಾಗಿ ಹೂಡಿಕೆ ಮಾಡಬಾರದು” ಎಂಬಲ್ಲಿಗೆ ಒಂದೇ ವರ್ಷದಲ್ಲಿ ಪ್ರಶ್ನೆ ಬದಲಾಗಿದೆ

“ತನ್ನ ಸಾಮರ್ಥ್ಯದೊಂದಿಗೆ ತಮ್ಮ ಕನಸುಗಳನ್ನು ಜೋಡಿಸುವವರನ್ನು ಭಾರತ ನಿರಾಶೆಗೊಳಿಸುವುದಿಲ್ಲ”

“ಪ್ರಜಾಪ್ರಭುತ್ವ, ಜನಸಂಖ್ಯೆ ಮತ್ತು ಲಾಭಾಂಶ ಭಾರತದಲ್ಲಿನ ವ್ಯವಹಾರಗಳನ್ನು ದ್ವಿಗುಣಗೊಳಿಸುತ್ತದೆ”

“ಅದು ಆರೋಗ್ಯ, ಕೃಷಿ ಅಥವಾ ಸಾಗಾಣೆ ವ್ಯವಸ್ಥೆಯಾಗಿರಬಹುದು, ಭಾರತ ಚತುರ ತಂತ್ರಜ್ಞಾನದ ಬಳಕೆಯ ದೃಷ್ಟಿಯಲ್ಲಿ ಕೆಲಸ ನಿರ್ವಹಿಸುತ್ತದೆ”

“ಜಗತ್ತಿಗೆ ನಂಬಲರ್ಹವಾದ ಪೂರೈಕೆ ಸರಪಳಿ ಅಗತ್ಯವಿದೆ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವಕ್ಕಿಂತ ಯಾರು ವಿಶ್ವಾಸಾರ್ಹ ಪಾಲುದಾರರಾಗಬಹುದು”

“ಸೆಮಿಕಂಡಕ್ಟರ್ ವಲಯದಲ್ಲಿ ಹೂಡಿಕೆಗೆ ಭಾರತ ಅತ್ಯುತ್ತಮ ನಿರ್ವಹಣಾ ವ್ಯವಸ್ಥೆಯನ್ನು ಒಳಗೊಂಡಿದೆ”

“ಭಾರತ ಜಾಗತಿಕ ಜವಾಬ್ದಾರಿತನವನ್ನು ಅರ್ಥಮಾಡಿಕೊಂಡಿದೆ ಮತ್ತು ಸ್ನೇಹಪರ ರಾಷ್ಟ್ರಗಳೊಂದಿಗೆ ಸಮಗ್ರ ನೀಲನಕ್ಷೆಯೊಂದಿಗೆ ಕಾರ್ಯನಿರ್ವಹಿಸಲಿದೆ”

Posted On: 28 JUL 2023 1:18PM by PIB Bengaluru

ಗುಜರಾತ್ ನ ಗಾಂಧಿನಗರದ ಮಹಾತ್ಮಾ ಮಂದಿರದಲ್ಲಿ ಸೆಮಿಕಾನ್ ಇಂಡಿಯಾ 2023 ಅನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಉದ್ಘಾಟಿಸಿದರು. “ಭಾರತದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಗೆ ವೇಗವರ್ಧನೆ” ಎಂಬುದು ಈ ಸಮ್ಮೇಳನದ ವಿಷಯವಾಗಿದೆ. ಇದು ಭಾರತದ ಸೆಮಿಕಂಡಕ್ಟರ್ ಕಾರ್ಯತಂತ್ರ ಮತ್ತು ನೀತಿಯನ್ನು ಅನಾವರಣಗೊಳಿಸುತ್ತದೆ, ಭಾರತವನ್ನು ಸೆಮಿಕಂಡಕ್ಟರ್ ವಲಯದ ವಿನ್ಯಾಸ, ಉತ್ಪಾದನೆ ಮತ್ತು ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಇದು ಜಾಗತಿಕ ಕೇಂದ್ರವನ್ನಾಗಿ ಮಾಡುತ್ತದೆ.

ಈ ಸಂದರ್ಭದಲ್ಲಿ ಪರಿಣಿತ ನಾಯಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಸೆಮಿ ಸಂಸ್ಥೆಯ ಸಿಇಒ ಮತ್ತು ಅಧ್ಯಕ್ಷ ಶ್ರೀ ಅಜಿತ್ ಮಿನೋಚ ಮಾತನಾಡಿ, ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಭೂ ರಾಜತಾಂತ್ರಿಕತೆ, ದೇಶೀಯ ರಾಜಕೀಯ ಮತ್ತು ಖಾಸಗಿ ಗೌಪ್ಯ ಸಾಮರ್ಥ್ಯಗಳ ಮೂಲಕ ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಪ್ರಮುಖವಾಗಿ ಹೊರ ಹೊಮ್ಮಲು ಭಾರತದ ಜೊತೆ ಕೈಜೋಡಿಸಲಾಗಿದೆ. ಮೈಕ್ರಾನ್ ನಿಂದ ಹೂಡಿಕೆಯಲ್ಲಿ ಇತಿಹಾಸ ಸೃಷ್ಟಿಸಲಾಗಿದೆ ಮತ್ತು ಇತರರಿಗೆ ಈ ಮಾರ್ಗವನ್ನು ಅನುಸರಣೆ ಮಾಡಲು ವೇದಿಕೆಯಾಗಿದೆ. ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳುವ ನಾಯಕತ್ವ ಪ್ರಸ್ತುತ ವ್ಯವಸ್ಥೆಯನ್ನು ವಿಭಿನ್ನವಾಗಿಸುತ್ತದೆ. ಏಷ್ಯಾದ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಭಾರತ ಭವಿಷ್ಯದ ಶಕ್ತಿ ಕೇಂದ್ರವಾಗಲಿದೆ ಎಂದರು.

ಇವಿಪಿ ಮತ್ತು ಸಿಟಿಒ – ಎಎಂಡಿ ಶ್ರೀ ಮಾರ್ಕ್ ಪೇಪರ್ ಮಾಸ್ಟರ್ ಅವರು ಇತ್ತೀಚೆಗೆ ಶ್ವೇತ ಭವನದಲ್ಲಿ ಪ್ರಧಾನಮಂತ್ರಿ ಅವರೊಂದಿಗೆ ಎಎಂಡಿಯ ಸಿಇಒ ಅವರು ನಡೆಸಿದ ಸಭೆಯಲ್ಲಿನ ಸಮಾಲೋಚನೆಯನ್ನು ಸ್ಮರಿಸಿಕೊಂಡರು. ಮುಂದಿನ ಐದು ವರ್ಷಗಳಲ್ಲಿ ಎಎಂಡಿ ಸುಮಾರು 400 ದಶಲಕ್ಷ ಡಾಲರ್ ಮೊತ್ತವನ್ನು ಹೂಡಿಕೆ ಮಾಡಲಿದೆ. ಎಎಂಡಿ ತನ್ನ ಸಂಶೋಧನೆ ಮತ್ತು ಅಭಿವೃದ್ಧಿ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಲಿದೆ. “ಬೆಂಗಳೂರಿನಲ್ಲಿ ನಾವು ಅತಿ ದೊಡ್ಡ ವಿನ್ಯಾಸ ಕೇಂದ್ರವನ್ನು ಸ್ಥಾಪಿಸುತ್ತೇವೆ” ಎಂದರು.

ಸೆಮಿಕಂಡಕ್ಟರ್ ಪ್ರಾಡೆಕ್ಟ್ ಗ್ರೂಪ್ ಅಪ್ಲೈಡ್ ಮೆಟಿರಿಯಲ್ಸ್ ನ ಡಾ. ಪ್ರಭು ರಾಜಾ ಮಾತನಾಡಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಬಲಿಷ್ಠ ದೃಷ್ಟಿಕೋನದಿಂದಾಗಿ ಭಾರತ ಜಾಗತಿಕ ಸಮಿಕಂಡಕ್ಟರ್ ವಲಯದಲ್ಲಿ ಕೇಂದ್ರೀಕೃತ ಪಾತ್ರ ನಿಭಾಯಿಸುತ್ತಿದೆ. “ಭಾರತ ಈ ಸಮಯದಲ್ಲಿ ಪ್ರಕಾಶಿಸುತ್ತದೆ ಎಂದು ನಾವು ಬಲವಾಗಿ ನಂಬುತ್ತೇವೆ”. ಯಾವುದೇ ಕಂಪೆನಿ ಅಥವಾ ರಾಷ್ಟ್ರ ಕೇವಲ ತನ್ನ ಕ್ಷೇತ್ರದಲ್ಲಿ ಸವಾಲುಗಳನ್ನು ಜಯಿಸಲು ಸಾಧ್ಯವಿಲ್ಲ”. ಈ ಕ್ಷೇತ್ರದಲ್ಲಿ ಪಾಲುದಾರಿಕೆಯನ್ನು ಹೊಂದಲು ಇದು ಸುಸಮಯ.  ಈ ಹೊಸ ಸಹಭಾಗಿತ್ವ ಮಾದರಿ ಈ ವಲಯದಲ್ಲಿ ವೇಗ ವರ್ಧನೆಗೊಳ್ಳಲು ನಮಗೆ ನೆರವಾಗಬಹುದು ಎಂದು ಒತ್ತಿ ಹೇಳಿದರು. “ಭಾರತದ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಮೌಲ್ಯಯುತ ಭಾಗೀದಾರನಾಗಲು ನಮ್ಮನ್ನು ಪರಿಗಣಿಸಿದ್ದಕ್ಕಾಗಿ ಧನ್ಯವಾದ ಸಲ್ಲಿಸುತ್ತೇನೆ” ಎಂದರು.

ಕ್ಯಾಡೆನ್ಸೆ ಸಿಇಒ ಮತ್ತು ಅಧ್ಯಕ್ಷ ಶ್ರೀ ಅನಿರುದ್ಧ್ ದೇವಗನ್ ಮಾತನಾಡಿ, ಅಂತಿಮವಾಗಿ ಸೆಮಿಕಂಡಕ್ಟರ್ ವಲಯದಲ್ಲಿ ಹೂಡಿಕೆ ಮಾಡಿರುವುದನ್ನು ನೋಡಲು ಉತ್ತಮವೆನಿಸುತ್ತಿದೆ. ಸರ್ಕಾರ ತನ್ನ ಸಂಪೂರ್ಣ ಪರಿಸರ ವ್ಯವಸ್ಥೆಯನ್ನೇ ಹೂಡಿಕೆ ಮಾಡುತ್ತಿರುವ ಬಗ್ಗೆ ಸಂತಸವಿದೆ ಎಂದರು.

ವೇದಾಂತ ಗ್ರೂಪ್ ನ ಅಧ್ಯಕ್ಷ ಶ್ರೀ ಅನಿಲ್ ಅಗರ್ ವಾಲ್ ಮಾತನಾಡಿ, ಭಾರತದ ಸಿಲಿಕಾನ್ ಕಣಿವೆಯಾಗಲು ಗುಜರಾತ್ ಸೂಕ್ತ ತಾಣವಾಗಿದೆ. ಭಾರತದ ಯುವ ಸಮೂಹಕ್ಕೆ ಉತ್ತಮ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಅವರು ಸೂಕ್ತ ವ್ಯವಸ್ಥೆಯನ್ನು ರೂಪಿಸಿದ್ದಾರೆ. “ಕಳೆದ ದಶಕದಿಂದ ಭಾರತ ರೂಪಾಂತರವಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ ಮತ್ತು ಯುವ ಭಾರತೀಯರ ನಿರೀಕ್ಷೆಗಳು ಹೆಚ್ಚಿವೆ” ಎಂದರು.

ಮೈಕ್ರಾನ್ ಟೆಕ್ನಾಲಜಿ ಸಿಇಒ ಮತ್ತು ಅಧ್ಯಕ್ಷ ಶ್ರೀ ಸಂಜಯ್ ಮೆಹ್ರೋತ್ರಾ ಮಾತನಾಡಿ, ಭಾರತವನ್ನು ಜಾಗತಿಕ ಸೆಮಿಕಂಡಕ್ಟರ್ ವಲಯದ ಕೇಂದ್ರವನ್ನಾಗಿ ಪರಿವರ್ತಿಸುವ ಜಾಗತಿಕ ದೃಷ್ಟಿಕೋನಕ್ಕಾಗಿ ಪ್ರಧಾನಮಂತ್ರಿ ಅವರಿಗೆ ಧನ್ಯವಾದ ಸಲ್ಲಿಸಿದರು. ಗುಜರಾತ್ ನಲ್ಲಿ ಸೆಮಿಕಂಡಕ್ಟರ್ ಘಟಕ ಮತ್ತು ಮೆಮೋರಿ ಪರೀಕ್ಷಾ ಸೌಲಭ್ಯವನ್ನು ಸ್ಥಾಪಿಸುತ್ತಿರುವ ಕುರಿತು ಸಂತಸ ವ್ಯಕ್ತಪಡಿಸಿದ ಶ್ರೀ ಮೆಹ್ರೋತ್ರಾ, ಇದರಿಂದ ಸಮುದಾಯ ಹಂತದಲ್ಲಿ 15,000 ಹೆಚ್ಚುವರಿ ಹಾಗೂ 5000 ಉದ್ಯೋಗವನ್ನು ಸೃಜಿಸಿದಂತಾಗುತ್ತದೆ ಎಂದು ಹೇಳಿದರು. ರಾಜ್ಯದಲ್ಲಿ ಸೆಮಿಕಂಡಕ್ಟರ್ ಕೈಗಾರಿಕೆ ಸ್ಥಾಪಿಸಲು ಬೆಂಬಲ ನೀಡಿದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಶ್ಲಾಘಿಸಿದರು. ಸೂಕ್ತ ಫಲಿತಾಂಶ ದೊರೆಕಿಸುವ ನಿಟ್ಟಿನಲ್ಲಿ ನಾವೀನ್ಯತೆ, ವ್ಯಾಪಾರ ಬೆಳವಣಿಗೆ ಮತ್ತು ಸಾಮಾಜಿಕ ಪ್ರಗತಿಯ ವಾತಾವರಣವನ್ನು ಬೆಳೆಸಲು ನೀಡಿದ ಬೆಂಬಲಕ್ಕಾಗಿ ಪ್ರಧಾನಮಂತ್ರಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು. “ಡಿಜಿಟಲ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾ ನೈಜವಾಗಿ ಪರಿವರ್ತನೆಯ ಶಕ್ತಿಯಾಗಿದ್ದು, ಇದೇ ರೀತಿ ನೈಜತೆಯಿಂದ ಪ್ರಗತಿಯ ಹಾದಿಯಲ್ಲಿ ಸಾಗಲಿದೆ” ಎಂದರು.

ಫಾಕ್ಸ್ ಕಾನ್ ನ ಅಧ್ಯಕ್ಷ ಶ್ರೀ ಯಂಗ್ ಲಿಯು ಮಾತನಾಡಿ, ಈ ಕ್ಷೇತ್ರ ಯಾರನ್ನು ದೂರದೇ ಕಷ್ಟಪಟ್ಟು ಕೆಲಸ ಮಾಡುವ ಸಾಮರ್ಥ್ಯ ಹೊಂದಿದ್ದು, ಇದೇ ಮನೋಭಾವನೆ ಭಾರತಕ್ಕೂ ಅನ್ವಯಿಸುತ್ತದೆ. ತೈವಾನ್ ಗೆ ಸೆಮಿಕಂಡಕ್ಟರ್ ವಲಯದ ಸ್ಫೂರ್ತಿಯ ಬಗ್ಗೆ ಹೆಮ್ಮೆ ಇದೆ ಎಂದರು. ಭಾರತ ಸರ್ಕಾರದ ಹೇಳುವ ಮತ್ತು ಮಾಡುವ ಅನುಪಾತವನ್ನು ಉಲ್ಲೇಖಿಸಿದ ಅವರು, ಅನೇಕ ವರ್ಷಗಳ ಹಿಂದೆ ತೈವಾನ್ ನಂತೆ ನಂಬಿಕೆಯ ಮಹತ್ವ ಮತ್ತು ಸವಾಲುಗಳನ್ನು ಗೆಲ್ಲಲು ಒಟ್ಟಾಗಿ ಕೆಲಸ ಮಾಡುವ ಬಗ್ಗೆ ಒತ್ತಿ ಹೇಳಿದರು. ಸೆಮಿಕಂಡಕ್ಟರ್ ಕೈಗಾರಿಕಾ ವಲಯದಲ್ಲಿ ಭಾರತ ದೃಢ ನಿಶ್ಚಯತೆ, ಆಶಾಭಾವನೆ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. “ಭಾರತ ಮತ್ತು ತೈವಾನ್ ಮಾಹಿತಿ ತಂತ್ರಜ್ಞಾನ ಪರ ನಿಲ್ಲುತ್ತದೆ”. ಸೆಮಿಕಂಡಕ್ಟರ್ ವಲಯದಲ್ಲಿ ತೈವಾನ್ ಭಾರತದ ನಂಬಿಕಸ್ತ ಮತ್ತು ವಿಶ್ವಾಸಾರ್ಹ ಪಾಲುದಾರ ಎಂದು ಪ್ರಧಾನಮಂತ್ರಿ ಅವರು ಹೇಳಿದ್ದನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಿದರು.  

ಸಮಾರಂಭ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಸೆಮಿಕಾನ್ ನಂತಹ ಕಾರ್ಯಕ್ರಮ ತಂತ್ರಾಂಶವನ್ನು ಮೇಲ್ದರ್ಜೇಗೇರಿಸುವ ನಿಟ್ಟಿನಲ್ಲಿ ಪರಿಣಿತರು ಮತ್ತು ಉದ್ಯಮದ ನಾಯಕರು ಪರಸ್ಪರ ಭೇಟಿಯಾಗಿ ವಿಚಾರ ವಿನಿಮಯ ಮಾಡುವ ವೇದಿಕೆಯಾಗಿದೆ. “ನಮ್ಮ ಬಾಂಧವ್ಯಗಳನ್ನು ಸಂಯೋಜಿಸಲು ಇದು ಅತ್ಯಂತ ಮುಖ್ಯವಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಪ್ರದರ್ಶನವನ್ನು ವೀಕ್ಷಿಸಿದ ಪ್ರಧಾನಮಂತ್ರಿ ಅವರು, ಈ ಕ್ಷೇತ್ರದ ನಾವೀನ್ಯತೆ ಮತ್ತು ಶಕ್ತಿಯ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಪ್ರತಿಯೊಬ್ಬರು, ಅದರಲ್ಲೂ ವಿಶೇಷವಾಗಿ ಯುವ ಸಮೂಹ ಈ ಪ್ರದರ್ಶನ ವೀಕ್ಷಿಸಬೇಕು ಮತ್ತು ತಂತ್ರಜ್ಞಾನದ ಶಕ್ತಿಯ ಬಗ್ಗೆ ಅರಿಯಬೇಕು ಎಂದು ಒತ್ತಾಯಿಸಿದರು.

ಕಳೆದ ವರ್ಷ ಸೆಮಿಕಾನ್ ನ ಮೊದಲ ಅವೃತ್ತಿಯಲ್ಲಿ ಭಾಗವಹಿಸಿದ್ದನ್ನು ಸ್ಮರಿಸಿಕೊಂಡ ಪ್ರಧಾನಮಂತ್ರಿಯವರು, ಆ ಸಂದರ್ಭದಲ್ಲಿ ಭಾರತದ ಸೆಮಿಕಂಡಕ್ಟರ್ ವಲಯದಲ್ಲಿ ಹೂಡಿಕೆ ಮಾಡುವ ಕುರಿತು ಎದ್ದಿದ್ದ ಪ್ರಶ್ನೆಗಳನ್ನು ಉಲ್ಲೇಖಿಸಿದರು. “ಒಂದು ವರ್ಷದಲ್ಲಿ “ಭಾರತದಲ್ಲಿ ಏಕೆ ಹೂಡಿಕೆ ಮಾಡಬೇಕು” ಎಂಬುದರಿಂದ “ಭಾರತದಲ್ಲಿ ಏಕಾಗಿ ಹೂಡಿಕೆ ಮಾಡಬಾರದು” ಎಂಬಲ್ಲಿಗೆ ಪ್ರಶ್ನೆ ಬದಲಾಗಿದೆ. ಕೈಗಾರಿಕಾ ವಲಯದ ನಾಯಕರ ಪ್ರಯತ್ನದಿಂದಾಗಿ ನಿರ್ಣಾಯಕ ಬದಲಾವಣೆಯಾಗಿದೆ. ಭಾರತದಲ್ಲಿ ತಮ್ಮ ನಂಬಿಕೆಯನ್ನು ಪ್ರದರ್ಶಿಸಿದಕ್ಕಾಗಿ ಉದ್ಯಮದ ನಾಯಕರನ್ನು ಪ್ರಧಾನಮಂತ್ರಿಯವರು ಅಭಿನಂದಿಸಿದರು. ಉದ್ಯಮದ ನಾಯಕರು ತಮ್ಮ ಸ್ವಂತ ಭವಿಷ್ಯ ಮತ್ತು ಕನಸುಗಳೊಂದಿಗೆ ಭಾರತದ ಬ್ಯಾಂಕ್ ಗಳು ಮತ್ತು ಸಾಮರ್ಥ್ಯವನ್ನು ಸಂಯೋಜಿಸಿದ್ದಾರೆ ಎಂದರು. “ಭಾರತ ನಿರಾಶೆಗೊಳಿಸುವುದಿಲ್ಲ” ಎಂದು ಉದ್ಗರಿಸಿದರು. ಶ್ರೀ ಮೋದಿ ಅವರು 21 ನೇ ಶತಮಾನದಲ್ಲಿ ಭಾರತದಲ್ಲಿ ಅವಕಾಶಗಳ ಸಮೃದ್ಧತೆ ಬಗ್ಗೆ ಒತ್ತಿ ಹೇಳಿದರು. ದೇಶದ ಪ್ರಜಾಪ್ರಭುತ್ವ, ಜನಸಂಖ್ಯೆ ಮತ್ತು ಲಾಭಾಂಶ ಭಾರತದಲ್ಲಿನ ವ್ಯವಹಾರಗಳನ್ನು ದ್ವಿಗುಣಗೊಳಿಸುತ್ತದೆ ಮತ್ತು ಮೂರು ಪಟ್ಟು ಹೆಚ್ಚಿಸುತ್ತದೆ ಎಂದರು.

ಮೂರೇ ಎಂಬುವರ ನಿಯಮವನ್ನು ಉಲ್ಲೇಖಿಸಿದ ಅವರು, ಬೆಳವಣಿಗೆ ಅದರ ಹೃದಯಲ್ಲಿದೆ ಎಂದರು. ಭಾರತದ ಡಿಜಿಟಲ್ ಮತ್ತು ವಿದ್ಯುನ್ಮಾನ ಉತ್ಪಾದನಾ ಕ್ಷೇತ್ರದಲ್ಲಿ ನಾವು ಅದೇ ರೀತಿಯ ಬೆಳವಣಿಗೆಯನ್ನು ನೋಡುತ್ತಿದ್ದೇವೆ. ಜಾಗತಿಕ ವಿದ್ಯುನ್ಮಾನ ಉತ್ಪಾದನೆಯಲ್ಲಿ ಭಾರತದ ಪಾಲು ಅನೇಕ ಪಟ್ಟು ಹೆಚ್ಚಾಗಿದೆ ಎಂದು ತಿಳಿಸಿದರು. 2014 ರಲ್ಲಿ ವಿದ್ಯುನ್ಮಾನ ಉತ್ಪಾದನಾ ವಲಯದಲ್ಲಿ 30 ಶತಕೋಟಿ ಡಾಲರ್ ನಷ್ಟಿದ್ದ ವಹಿವಾಟು, ಇಂದು 100 ಶತಕೋಟಿ ಡಾಲರ್ ದಾಟಿದೆ. ಕಳೆದ 2 ವರ್ಷಗಳಲ್ಲಿ ವಿದ್ಯುನ್ಮಾನ ಮತ್ತು ಮೊಬೈಲ್ ಸಾಧನಗಳ ವಲಯದಲ್ಲಿ ರಫ್ತು ಪ್ರಮಾಣ ದ್ವಿಗುಣಗೊಂಡಿದೆ. 2014ಕ್ಕೂ ಹಿಂದಿನ ತಂತ್ರಜ್ಞಾನ ಅಭಿವೃದ್ಧಿ ಬಗ್ಗೆ ಮಾತನಾಡಿದ ಅವರು, 2014 ಕ್ಕೂ ಮುನ್ನ ಭಾರತದಲ್ಲಿ ಕೇವಲ ಎರಡು ಮೊಬೈಲ್ ಉತ್ಪಾದನಾ ಘಟಕಗಳಿದ್ದವು. ಇಂದು ಈ ಸಂಖ್ಯೆ 200 ರ ಗಡಿ ದಾಟಿದೆ ಎಂದರು. ಬ್ರ್ಯಾಡ್ ಬ್ಯಾಂಡ್ ಬಳಸುವರ ಸಂಖ್ಯೆ 6 ಕೋಟಿಯಿಂದ 80 ಕೋಟಿಗೆ ಹೆಚ್ಚಳವಾಗಿದೆ. ಇಂಟರ್ನೆಟ್ ಬಳಕೆದಾರರ ಪ್ರಮಾಣ 25 ಕೋಟಿಯಿಂದ 85 ಕೋಟಿಗೆ ವೃದ್ಧಿಸಿದೆ. ಈ ಸಂಖ್ಯೆ ಭಾರತದ ಪ್ರಗತಿಯ ಮಹತ್ವವನ್ನಷ್ಟೇ ಪ್ರತಿಬಿಂಬಿಸುವುದಿಲ್ಲ, ಬದಲಿಗೆ ವ್ಯಾಪಾರದ ಸೂಚ್ಯಂಕವನ್ನು ಸಹ ತೋರಿಸುತ್ತದೆ. ಸೆಮಿಕಾನ್ ಉದ್ಯಮದ ಬೆಳವಣಿಗೆಯ ಗುರಿಯಲ್ಲಿ ಭಾರತದ ನಿರ್ಣಾಯಕ ಪಾತ್ರವನ್ನು ಅವರು ಉಲ್ಲೇಖಿಸಿದರು.

“ಜಗತ್ತು ಇಂದು 4.0 ಕೈಗಾರಿಕಾ ಕ್ರಾಂತಿಗೆ ಸಾಕ್ಷಿಯಾಗಿದೆ”. ಜಗತ್ತಿನ ಯಾವುದೇ ಕೈಗಾರಿಕಾ ಕ್ರಾಂತಿಗೆ ಆ ನಿರ್ದಿಷ್ಟ ವಲಯದ ಜನರ ನಿರೀಕ್ಷೆಗಳೇ ಆಧಾರದ ಎಂದರು.  “ಕೈಗಾರಿಕಾ ಕ್ರಾಂತಿ ಮತ್ತು ಅಮೆರಿಕದ ಕನಸು ಒಂದೇ ಸಂಬಂಧವನ್ನು ಹೊಂದಿವೆ”. ಉದ್ಯಮದ 4.0 ಕ್ರಾಂತಿ ಮತ್ತು ಭಾರತೀಯ ಆಕಾಂಕ್ಷೆಗಳ ನಡುವಿನ ದೃಶ್ಯವನ್ನು ಪ್ರಧಾನಮಂತ್ರಿಯವರು ಅನಾವರಣಗೊಳಿಸಿದರು. ಭಾರತದ ನಿರೀಕ್ಷೆಗಳ ಹಿಂದೆ ಭಾರತದ ಅಭಿವೃದ್ಧಿಯ ಚಾಲನಾ ಶಕ್ತಿಯಿದೆ. ದೇಶದಲ್ಲಿ ನವ ಮಧ್ಯಮವರ್ಗ ಹೊರ ಹೊಮ್ಮುತ್ತಿದ್ದು, ಇದರಿಂದ ಬಡತನ ಅತ್ಯಂತ ವೇಗವಾಗಿ ಕಡಿಮೆಯಾಗುತ್ತಿದೆ ಎಂಬ ಇತ್ತೀಚಿನ ವರದಿಯನ್ನು ಉಲ್ಲೇಖಿಸಿದರು. ತಂತ್ರಜ್ಞಾನ ಸ್ನೇಹಿ ಪರಿಸರ ಮತ್ತು ತಂತ್ರಜ್ಞಾನವನ್ನು ಅಡಕಗೊಳಿಸಿಕೊಳ್ಳಲು ಭಾರತೀಯರ ಕಾತುರವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಸುಲಭದರದ ಇಂಟರ್ನೆಟ್, ಗುಣಮಟ್ಟದ ಡಿಜಿಟಲ್ ಮೂಲ ಸೌಕರ್ಯ ಮತ್ತು ಹಳ್ಳಿಗಳಿಗೂ ಸಹ ತಡೆರಹಿತ ವಿದ್ಯುತ್ ಪೂರೈಕೆಯಿಂದಾಗಿ ಡಿಜಿಟಲ್ ಉತ್ಪನ್ನಗಳ ಬಳಕೆ ಹೆಚ್ಚಾಗುತ್ತಿದೆ. “ಅದು ಆರೋಗ್ಯ, ಕೃಷಿ ಅಥವಾ ಸಾಗಾಣೆ ವ್ಯವಸ್ಥೆಯೇ ಆಗಿರಬಹುದು, ಭಾರತ ಚತುರ ತಂತ್ರಜ್ಞಾನ ಬಳಕೆಯ ದೃಷ್ಟಿಕೋನದತ್ತ ಕಾರ್ಯನಿರ್ವಹಿಸುತ್ತಿದೆ” ಎಂದು ಶ್ರೀ ಮೋದಿ ಹೇಳಿದರು. ಮೂಲಭೂತ ಗೃಹೋಪಯೋಗಿ ಉಪಕರಣಗಳನ್ನು ಬಳಸದೇ ಇರುವ ಜನ ಭಾರತದಲ್ಲಿದ್ದಾರೆ. ಆದರೆ ಇವರು ಅಂತರ್ ಸಂಪರ್ಕ ಹೊಂದಿರುವ ಚತುರ ಸಾಧನಗಳನ್ನು ಬಳಸಲು ಹೊರಟಿದ್ದಾರೆ. ಇದೇ ರೀತಿ ನಿರ್ದಿಷ್ಟ ವಿದ್ಯಾರ್ಥಿಗಳು ಹಿಂದೆ ಬೈಸಿಕಲ್ ಬಳಸುತ್ತಿರಲಿಲ್ಲ, ಆದರೆ ಇಂದು ಸ್ಮಾರ್ಟ್ ಎಲೆಕ್ಟ್ರಿಕ್ ಬೈಕ್ ಗಳನ್ನು ಬಳಸುತ್ತಿದ್ದಾರೆ. “ನವ ಮಧ್ಯಮ ವರ್ಗ ಭಾರತದಲ್ಲಿ ಬೆಳವಣಿಗೆಯಾಗುತ್ತಿದ್ದು, ಇವರು ಭಾರತದ ನಿರೀಕ್ಷೆಗಳ ಶಕ್ತಿ ಕೇಂದ್ರವಾಗಿದ್ದಾರೆ” ಎಂದು ಪ್ರಧಾನಮಂತ್ರಿಯವರು ತಿಳಿಸಿದರು. ಚಿಪ್ ತಯಾರಿಕೆ ಉದ್ಯಮ ಅವಕಾಶಗಳಿಂದ ತುಂಬಿದ ಮಾರುಕಟ್ಟೆಯಾಗಿದೆ ಎಂದು ಅವರು ಒತ್ತಿ ಹೇಳಿದರು. ಇದನ್ನು ಇತರರಿಗಿಂತ ಮೊದಲು ಪ್ರಾರಂಭಿಸಿದರೆ ಹೆಚ್ಚಿನ ಪ್ರಯೋಜನ ಪಡೆಯಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಾಂಕ್ರಾಮಿಕ ಮತ್ತು ರಷ್ಯಾ – ಉಕ್ರೇನ್ ಯುದ್ಧದ ಪರಿಣಾಮಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಜಗತ್ತಿಗೆ ನಂಬಿಕಸ್ತ ಪೂರೈಕೆ ವ್ಯವಸ್ಥೆ ಅಗತ್ಯವಾಗಿದ್ದು, ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವಕ್ಕಿಂತ ಯಾರು ವಿಶ್ವಾಸಾರ್ಹ ಪಾಲುದಾರರಾಗಬಹುದು” ಎಂದು ಪ್ರಶ್ನಿಸಿದರು. ಭಾರತದ ಬಗ್ಗೆ ಜಾಗತಿಕ ನಂಬಿಕೆ ಬಲಗೊಳ್ಳುತ್ತಿರುವ ಕುರಿತು ಸಂತಸ ವ್ಯಕ್ತಪಡಿಸಿದ ಅವರು, “ಭಾರತ ಸ್ಥಿರ, ಜವಾಬ್ದಾರಿಯುತ ಮತ್ತು ಸುಧಾರಣೆ ಆಧಾರಿತ ಸರ್ಕಾರ ಹೊಂದಿರುವುದರಿಂದ ಹೂಡಿಕೆದಾರರು ಭಾರತವನ್ನು ನಂಬುತ್ತಾರೆ. ಪ್ರತಿಯೊಂದು ಕ್ಷೇತ್ರದಲ್ಲೂ ಮೂಲ ಸೌಕರ್ಯ ವೃದ್ಧಿಯಾಗುತ್ತಿದ್ದು, ಉದ್ಯಮ ವಲಯಕ್ಕೆ ಭಾರತದ ಬಗ್ಗೆ ನಂಬಿಕೆ ಮೂಡಿದೆ. ಇಲ್ಲಿ ತಂತ್ರಜ್ಞಾನ ಬೆಳೆಯುತ್ತಿರುವುದರಿಂದ ತಾಂತ್ರಿಕ ಕ್ಷೇತ್ರ ಭಾರತವನ್ನು ನಂಬಿದೆ. ಸೆಮಿಕಂಡಕ್ಟರ್ ಉದ್ಯಮ ಭಾರತವನ್ನು ನಂಬುತ್ತದೆ. ಏಕೆಂದರೆ ನಮ್ಮಲ್ಲಿ ಬೃಹತ್ ಪ್ರತಿಭೆಗಳಿವೆ” ಎಂದು ಹೇಳಿದರು. ಕೌಶಲ್ಯಯುತ ತಂತ್ರಜ್ಞರು ಮತ್ತು ವಿನ್ಯಾಸಕಾರರು ನಮ್ಮ ಶಕ್ತಿ. ಜಗತ್ತಿನ ಅತ್ಯಂತ ಉಜ್ವಲ ಮತ್ತು ಏಕೀಕೃತ ಮಾರುಕಟ್ಟೆ ವ್ಯವಸ್ಥೆಯನ್ನು ಭಾರತ ಹೊಂದಿದ್ದು, ಜನತೆ ನಮ್ಮನ್ನು ನಂಬುತ್ತಾರೆ. ನಾವು ಭಾರತದಲ್ಲೇ ತಯಾರಿಸುವ ಬಗ್ಗೆ ಮಾತನಾಡಿದರೆ, ಭಾರತಕ್ಕಾಗಿಯೂ,  ಪ್ರಪಂಚಕ್ಕಾಗಿಯೂ ತಯಾರಿಸೋಣ ಎಂಬುದನ್ನು ಸಹ ಈ ಉದ್ದೇಶ ಒಳಗೊಂಡಿರುತ್ತದೆ” ಎಂದರು,.

ಜಾಗತಿಕ ಜವಾಬ್ದಾರಿತನವನ್ನು ಭಾರತ ಅರ್ಥಮಾಡಿಕೊಂಡಿದೆ ಮತ್ತು ಸ್ನೇಹಪರ ರಾಷ್ಟ್ರಗಳೊಂದಿಗೆ ಸಮಗ್ರ ನೀಲನಕ್ಷೆಯೊಂದಿಗೆ ಕಾರ್ಯನಿರ್ವಹಿಸಲಿದೆ. ಅದಕ್ಕಾಗಿಯೇ ಭಾರತ ಉಜ್ವಲ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ. ಇತ್ತೀಚೆಗೆ ಕ್ವಾಂಟಮ್ ಮಿಷನ್ ಗೆ ಅನುಮೋದನೆ ನೀಡಲಾಗಿದೆ. ಮುಂದುವರೆದು ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ ಮಸೂದೆಯನ್ನು ಸಹ ಸಂಸತ್ತಿನಲ್ಲಿ ಮಂಡಿಸಲಾಗಿದೆ. ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ರಚಿಸಲು ಎಂಜಿನಿಯರಿಂಗ್ ಪಠ್ಯ ಕ್ರಮವನ್ನು ಪರಿಷ್ಕರಿಸಲಾಗುತ್ತಿದೆ. ಭಾರತದಲ್ಲಿ ಅಂತಹ 300 ಕ್ಕೂ ಕಾಲೇಜುಗಳನ್ನು ಗುರುತಿಸಲಾಗಿದ್ದು, ಅಲ್ಲಿ ಸೆಮಿಕಂಡಕ್ಟರ್ ಕೋರ್ಸ್ ಗಳು ಲಭ್ಯವಿದೆ. ಚಿಪ್ಸ್ ನಿಂದ ನವೋದ್ಯಮ ಕಾರ್ಯಕ್ರಮ ಇಂಜಿನಿಯರ್ ಗಳಿಗೆ ಅನುಕೂಲವಾಗಲಿದೆ. “ಮುಂದಿನ 5 ವರ್ಷಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ವಿನ್ಯಾಸ ಇಂಜಿನಿಯರ್ ಗಳನ್ನು ದೇಶದಲ್ಲಿ ತಯಾರು ಮಾಡಲಾಗುತ್ತದೆ. ಭಾರತದ ನವೋದ್ಯಮ ಪರಿಸರ ವ್ಯವಸ್ಥೆಯಿಂದಾಗಿ ಸೆಮಿಕಂಡಕ್ಟರ್ ವಲಯ ಬಲಗೊಳ್ಳಲಿದೆ” ಎಂದು ಹೇಳಿದರು.

ಅನಲಾಗ್ ಕಂಡಕ್ಟರ್ ಮತ್ತು ಇನ್ಸುಲೇಟರ್ ಗಳು ಶಕ್ತಿಯ ವಾಹಕಗಳ ಮೂಲಕ ಹಾದು ಹೋಗುತ್ತವೆಯೇ ಹೊರತು ಇನ್ಸುಲೇಟರ್ ಗಳ ಮೂಲಕವಲ್ಲ. ಸೆಮಿಕಂಡಕ್ಟರ್ ಉದ್ಯಮಕ್ಕೆ ಉತ್ತಮ ಶಕ್ತಿವಾಹಕವಾಗಲು ಭಾರತ ಪ್ರತಿಯೊಂದು ಹಂತದಲ್ಲಿ ನೆರವಾಗುತ್ತಿದೆ. ಈ ವಲಯದಲ್ಲಿ ವಿದ್ಯುತ್ ಚ್ಛಕ್ತಿಯ ನಿರ್ಣಾಯಕತೆ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ಕಳೆದೊಂದು ದಶಕದಲ್ಲಿ ಸೌರ ವಿದ್ಯುತ್ ಸ್ಥಾಪನಾ ಪ್ರಮಾಣ 20 ಪಟ್ಟು ಹೆಚ್ಚಾಗಿದೆ ಮತ್ತು ಈ ದಶಕದ ಅಂತ್ಯದ ವೇಳೆಗೆ 500 ಗಿಗಾವ್ಯಾಟ್ ಇಂಧನ ಸಾಮರ್ಥ್ಯ ಸ್ಥಾಪಿಸುವ ಗುರಿ ಹೊಂದಸಲಾಗಿದೆ. ಸೌರ ವಲಯದ ಪಿವಿ ಮಾದರಿಗಳು, ಹಸಿರು ಜಲ ಜನಕ ಮತ್ತು ವಿದ್ಯುದ್ವಿಭಜಕಗಳ ಕ್ಷೇತ್ರಗಳ ಉತ್ಪಾದನೆಯಲ್ಲಿ  ಕೈಗೊಂಡಿರುವ ಪ್ರಮುಖ ಹೆಜ್ಜೆಗಳನ್ನು ಪ್ರಸ್ತಾಪಿಸಿದರು. ಭಾರತದಲ್ಲಿನ ನೀತಿ, ಸುಧಾರಣೆಗಳಿಂದಾಗಿ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತಿದೆ. ಹೊಸ ಉತ್ಪಾದನಾ ಘಟಕಗಳಿಗೆ ಹಲವಾರು ರೀತಿಯ ತೆರಿಗೆ ವಿನಾಯಿತಿ ನೀಡಲಾಗಿದೆ ಮತ್ತು ಭಾರತದಲ್ಲಿ ಕಡಿಮೆ ಸಾಂಸ್ಥಿಕ ತೆರಿಗೆ ಇದ್ದು, ಮುಖರಹಿತ, ತಡೆರಹಿತ ತೆರಿಗೆ ಪದ್ಧತಿ ಇದ್ದು, ಅರಾಜಕತೆಯ ಕಾನೂನುಗಳನ್ನು ತೊಡೆದುಹಾಕಲಾಗಿದೆ. ವ್ಯಾಪಾರ ವಲಯದ ಸುಲಭತೆಯನ್ನು ಹೆಚ್ಚಿಸಲು ಸೆಮಿಕಂಡಕ್ಟರ್ ವಲಯಕ್ಕೆ ವಿಶೇಷ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು. ಈ  ನಿರ್ಧಾರಗಳು ಮತ್ತು ನೀತಿಗಳು ಭಾರತದ ಸೆಮಿಕಂಡಕ್ಟರ್ ಉದ್ಯಮಕ್ಕೆ ಕೆಂಪು ರತ್ನಗಂಬಳಿ ಹಾಸುವಂತಾಗಿದೆ. “ಭಾರತ ಸುಧಾರಣೆಯ ಹಾದಿಯಲ್ಲಿ ಸಾಗಿದ್ದು, ಹೊಸ ಅವಕಾಶಗಳು ಸೃಷ್ಟಿಯಾಗಿವೆ. ಸೆಮಿಕಂಡಕ್ಟರ್ ವಲಯದ ಹೂಡಿಕೆಗೆ ಅತ್ಯುತ್ತಮ ನಿರ್ವಹಣೆ ಮಾಡಲಾಗುತ್ತಿದೆ” ಎಂದು ಹೇಳಿದರು.

ಈ ನಿರ್ಧಾರಗಳು ಮತ್ತು ನೀತಿಗಳು ಭಾರತ ಸಾಗುತ್ತಿರುವ ಹಾದಿಯನ್ನು ಬಿಂಬಿಸುತ್ತವೆ. ಜಾಗತಿಕ ಪೂರೈಕೆ ಸರಪಳಿ, ಕಚ್ಚಾ ವಸ್ತುಗಳು, ಕೌಶಲ್ಯಯುತ ಮಾನವ ಸಂಪನ್ಮೂಲ, ಯಂತ್ರೋಪಕರಣಗಳ ಅಗತ್ಯಗಳನ್ನು ಭಾರತ ಅರ್ಥಮಾಡಿಕೊಂಡಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. “ಖಾಸಗಿ ವಲಯದೊಂದಿಗೆ ನಾವು ನಿಕಟವಾಗಿ ಕೆಲಸ ಮಾಡಿ ಹೊಸ ಎತ್ತರಕ್ಕೆ ಏರಿದ್ದೇವೆ. ಅದು ಬಾಹ್ಯಾಕಾಶ ವಲಯವಿರಬಹುದು, ನಾವು ಎಲ್ಲೆಡೆ ಅತ್ಯುತ್ತಮ ಫಲಿತಾಂಶವನ್ನೇ ಪಡೆದಿದ್ದೇವೆ” ಎಂದು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು. ದೊರೆತ ಪ್ರತಿಕ್ರಿಯೆಗಳ ಆಧಾರದ ಮೇಲೆ ತೆಗೆದುಕೊಂಡ ನಿರ್ಣಾಯಕ ಕ್ರಮಗಳ ಕುರಿತಂತೆಯೂ ಅವರು ಪ್ರಸ್ತಾಪಿಸಿದರು. ಸೆಮಿಕಂಡಕ್ಟರ್ ಇಂಡಿಯಾ ಕಾರ್ಯಕ್ರಮದಲ್ಲಿ ಪ್ರೋತ್ಸಾಹಧನ ಹೆಚ್ಚಿಸಿರುವ ಬಗ್ಗೆ ಮಾತನಾಡಿದರು. ಭಾರತದಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸಲು ಇದೀಗ ತಂತ್ರಜ್ಞಾನ ಸಂಸ್ಥೆಗಳಿಗೆ ಶೇ 50 ರಷ್ಟು ಆರ್ಥಿಕ ನೆರವು ನೀಡಲಾಗುವುದು ಎಂದು ವಿವರಿಸಿದರು. “ನಾವು ಭಾರತದ ಸೆಮಿಕಂಡಕ್ಟರ್ ವಲಯದ ಪ್ರಗತಿಗಾಗಿ ನಿರಂತರವಾಗಿ ನೀತಿ ಸುಧಾರಣೆಗಳನ್ನು ತರುತ್ತಿದ್ದೇವೆ” ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

ಜಿ-20ಯ “ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ” ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ಇದೇ ಮಾದರಿಯಲ್ಲಿ ಸೆಮಿಕಂಡಕ್ಟರ್ ವಲಯದಲ್ಲಿ ಪ್ರಮುಖ ಉತ್ಪಾದನಾ ತಾಣವನ್ನಾಗಿ ಮಾಡಲಾಗುತ್ತಿದೆ. ಜಗತ್ತಿನ ಪ್ರತಿಯೊಬ್ಬರಿಗೂ ತನ್ನಲ್ಲಿನ ಕೌಶಲ್ಯ, ಸಾಮರ್ಥ್ಯ ಮತ್ತು ಸಮರ್ಥತೆಯ ಅರಿವಾಗಬೇಕು ಎಂದು ಭಾರತ ಬಯಸುತ್ತದೆ. ಜಗತ್ತಿಗೆ ಉತ್ತಮವಾದದ್ದನ್ನು ಮಾಡಲು ಮತ್ತು ಉತ್ತಮ ಜಗತ್ತಿಗಾಗಿ ಭಾರತದ ಸಾಮರ್ಥ್ಯಕ್ಕೆ ಪುಷ್ಟಿ ನೀಡಲಾಗಿದೆ ಎಂದು ಒತ್ತಿ ಹೇಳಿದರು. ಈ ವಲಯದಲ್ಲಿ ಪಾಲ್ಗೊಂಡಿರುವವರನ್ನು ಸ್ವಾಗತಿಸಿದ ಪ್ರಧಾನಮಂತ್ರಿಯರು, ಆಲೋಚನೆಗಳು ಮತ್ತು ಸಲಹೆಗಳನ್ನು ಸ್ವಾಗತಿಸಿದರು. ಪ್ರತಿಯೊಂದು ಹಂತದಲ್ಲಿ ನಿಮ್ಮ ಜೊತೆ ನಾವಿರುತ್ತೇವೆ ಎಂದು ಕೈಗಾರಿಕಾ ವಲಯಕ್ಕೆ ವಾಗ್ದಾನ ಮಾಡಿದರು. ತಮ್ಮ ಭಾಷಣದ ಕೊನೆಗೆ ಕೆಂಪುಕೋಟೆ ಮೇಲಿನ ಭಾಷಣವನ್ನು ಸ್ಮರಿಸಿಕೊಂಡರು ಮತ್ತು “ಇದು ಸಮಯ, ಇದು ನಿಜವಾದ ಸಮಯ, ಇದು ಕೇವಲ ಭಾರತಕ್ಕಾಗಿ ಮಾತ್ರವಲ್ಲ, ಜಗತ್ತಿಗಾಗಿ” ಎಂದು ಹೇಳಿದರು.

ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್, ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್, ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವರಾದ ಶ್ರೀ ರಾಜೀವ್ ಚಂದ್ರಶೇಖರ್, ಕೆಡೆನ್ಸ್ ಸಿಇಒ ಶ್ರೀ ಅನಿರುದ್ಧ್ ದೇವಗನ್, ಫಾಕ್ಸ್ ಕಾನ್ ನ ಅಧ್ಯಕ್ಷ ಶ್ರೀ ಯಂಗ್ ಲಿಯು, ವೇದಾಂತ ಸಂಸ್ಥೆಯ ಅಧ್ಯಕ್ಷ ಶ್ರೀ ಅನಿಲ್ ಅಗರ್ವಾಲ್, ಮೈಕ್ರಾನ್ ಸಿಇಒ ಶ್ರೀ ಸಂಜಯ್ ಮೆಹ್ರೋತ್ರಾ, ಎಎಂಡಿಯ ಸಿಟಿಒ ಶ್ರೀ ಮಾರ್ಕ್ ಪೇಪರ್ ಮಾಸ್ಟರ್ ಮತ್ತು ಸೆಮಿಕಂಡಕ್ಟರ್ ಪ್ರಾಡೆಕ್ಟ್ ಗ್ರೂಪ್  ಎಎಂಎಟಿ ಅಧ್ಯಕ್ಷ ಶ್ರೀ ಪ್ರಭುರಾಜ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

“ಭಾರತದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಗೆ ವೇಗವರ್ಧನೆ” ಎಂಬುದು ಈ ಸಮ್ಮೇನಳದ ವಿಷಯವಾಗಿದೆ. ಇದರ ಉದ್ದೇಶ ಜಾಗತಿಕ ಕೈಗಾರಿಕಾ ನಾಯಕರು, ಶಿಕ್ಷಣ ತಜ್ಞರು ಮತ್ತು ಸಂಶೋಧನಾ ಸಂಸ್ಥೆಗಳನ್ನು ಒಂದು ಕಡೆ ಒಟ್ಟುಗೂಡಿಸುವುದಾಗಿದೆ. ಇದು ಭಾರತದ ಸೆಮಿಕಂಡಕ್ಟರ್ ಕಾರ್ಯತಂತ್ರ ಮತ್ತು ನೀತಿಯ ಮೂಳಕ ಸೆಮಿಕಂಡಕ್ಟರ್ ವಲಯದಲ್ಲಿ ವಿನ್ಯಾಸ, ಉತ್ಪಾದನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಪಡಿಸುವ ಗುರಿ ಹೊಂದಿದೆ. ಸೆಮಿಕಾನ್ ಇಂಡಿಯಾ 2023 ರಲ್ಲಿ ಮೈಕ್ರಾನ್ ಟೆಕ್ನಾಲಜಿ, ಅಪ್ಲೈಡ್ ಮೆಟೆರಿಯಲ್ಸ್, ಫಾಕ್ಸ್ ಕಾನ್, ಸೆಮಿ, ಕೆಡೆನ್ಸೆ ಮತ್ತು ಎಎಂಡಿ ಮತ್ತಿತರ ಸಂಸ್ಥೆಗಳು ಪಾಲ್ಗೊಂಡಿದ್ದವು.

*****



(Release ID: 1943734) Visitor Counter : 108