ಸಂಸ್ಕೃತಿ ಸಚಿವಾಲಯ

ಕರ್ನಾಟಕದ ಹಂಪಿಯಲ್ಲಿ ಇಂದು ಆಯೋಜಿಸಲಾದ ಮೂರನೇ ʻಜಿ-20 ಸಂಸ್ಕೃತಿ ಕಾರ್ಯಪಡೆʼ(ಸಿಡಬ್ಲ್ಯೂಜಿ) ಸಭೆಯ ಉದ್ಘಾಟನಾ ಸಮಾರಂಭ


ಸಂಸ್ಕೃತಿಯು ಕೇವಲ ನಮ್ಮ ಅಸ್ಮಿತೆಯ ಒಂದು ಭಾಗವಷ್ಟೇ ಆಗಿರದೆ, ಅದು ಸುಸ್ಥಿರ ಅಭಿವೃದ್ಧಿ, ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಜಾಗತಿಕ ಸಾಮರಸ್ಯಕ್ಕೆ ಪ್ರೇರಕ ಶಕ್ತಿಯೂ ಆಗಿರುವಂತಹ ಭವಿಷ್ಯದತ್ತ ನಾವು ಇಂದು ಕೆಲಸ ಮಾಡೋಣ: ಶ್ರೀ ಪ್ರಹ್ಲಾದ್‌ ಜೋಶಿ

ಲಂಬಾಣಿ ಕಸೂತಿ ಪಟ್ಟಿಗಳ ಅತಿದೊಡ್ಡ ಪ್ರದರ್ಶನವನ್ನು ರಚಿಸುವ ಮೂಲಕ ʻಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ʼಗೆ ಪ್ರವೇಶಿಸುವ ಗುರಿಯನ್ನು ʻಸಿಡಬ್ಲ್ಯೂಜಿʼ ಹೊಂದಿದೆ

Posted On: 10 JUL 2023 12:45PM by PIB Bengaluru

ಕರ್ನಾಟಕದ ಹಂಪಿಯಲ್ಲಿ ಇಂದು ಮೂರನೇ ʻಜಿ-20 ಸಂಸ್ಕೃತಿ ಕಾರ್ಯಪಡೆʼ(ಸಿಡಬ್ಲ್ಯೂಜಿ) ಸಭೆಯ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿತ್ತು. ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಶ್ರೀ ಪ್ರಹ್ಲಾದ್‌ ಜೋಶಿ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದವರನ್ನುದ್ದೇಶಿಸಿ ಮಾತನಾಡಿದ ಅವರು, "ನಾವು ನಾಲ್ಕು ಆದ್ಯತೆಯ ಕ್ಷೇತ್ರಗಳನ್ನು ಗುರುತಿಸುವುದು ಮತ್ತು ಅವುಗಳ ಬಗ್ಗೆ ಚರ್ಚಿಸುವ ಹಂತದಿಂದ, ಕ್ರಿಯಾ-ಆಧಾರಿತ ಶಿಫಾರಸುಗಳ ಬಗ್ಗೆ ಒಮ್ಮತ ಗಿಟ್ಟಿಸುವ ಹಂತದವರೆಗೆ ಪ್ರಗತಿ ಸಾಧಿಸಿದ್ದೇವೆ. ಇದು ನೀತಿ ನಿರೂಪಣೆಯ ಹೃದಯಭಾಗದಲ್ಲಿ ಸಂಸ್ಕೃತಿಯನ್ನು ಇರಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ," ಎಂದು ಹೇಳಿದರು. 4 ಆದ್ಯತೆಯ ಕ್ಷೇತ್ರಗಳೆಂದರೆ: ಸಾಂಸ್ಕೃತಿಕ ಆಸ್ತಿಯ ರಕ್ಷಣೆ ಮತ್ತು ಪುನಃಸ್ಥಾಪನೆ; ಸುಸ್ಥಿರ ಭವಿಷ್ಯಕ್ಕಾಗಿ ಜೀವನ ಪರಂಪರೆಯ ಬಳಕೆ; ಸಾಂಸ್ಕೃತಿಕ ಮತ್ತು ಸೃಜನಶೀಲ ಕೈಗಾರಿಕೆಗಳು ಹಾಗೂ ಸೃಜನಶೀಲ ಆರ್ಥಿಕತೆಯ ಉತ್ತೇಜನ; ಸಂಸ್ಕೃತಿಯ ರಕ್ಷಣೆ ಮತ್ತು ಪ್ರಚಾರಕ್ಕಾಗಿ ಡಿಜಿಟಲ್ ತಂತ್ರಜ್ಞಾನಗಳ ಬಳಕೆ.

"ನಾವು ಕೇವಲ ಸಭೆಯಲ್ಲಿ ಭಾಗವಹಿಸುವುದು ಮಾತ್ರವಲ್ಲದೆ, ಜಾಗತಿಕ ಸಾಂಸ್ಕೃತಿಕ ಬದಲಾವಣೆಯಲ್ಲೂ ಸಕ್ರಿಯವಾಗಿ ಭಾಗವಹಿಸುತ್ತೇವೆ," ಎಂದು ಅವರು ಹೇಳಿದರು.

"ಅಂತರ್ಗತ ಮತ್ತು ಸುಸ್ಥಿರ ಭವಿಷ್ಯ ಕುರಿತಾದ ನಮ್ಮ ಆಶಯಕ್ಕೆ ಮೂಲಾಧಾರವಾಗಿರುವ ನಾಲ್ಕು ಆದ್ಯತೆಯ ಕ್ಷೇತ್ರಗಳನ್ನು ಒಳಗೊಂಡ ಸಚಿವರ ಘೋಷಣೆ ವಿಚಾರದಲ್ಲಿ ಒಮ್ಮತ ಮೂಡಿಸಲು ನಾವು ಶ್ರಮಿಸುತ್ತೇವೆ" ಎಂದು ಶ್ರೀ ಪ್ರಹ್ಲಾದ್‌ ಜೋಶಿ ಹೇಳಿದರು.

ನಾಲ್ಕು ಆದ್ಯತೆಗಳ ಬಗ್ಗೆ ಮಾತನಾಡಿದ ಅವರು, ಈ ಆದ್ಯತೆಗಳು ಸಾಂಸ್ಕೃತಿಕವಾಗಿ ವೈವಿಧ್ಯಮಯವಾಗಿದ್ದರೂ ಏಕೀಕೃತವಾದ ಜಗತ್ತನ್ನು ತೋರಿಸುತ್ತವೆ; ಅಲ್ಲದೆ, ಸಾಂಸ್ಕೃತಿಕ ಪರಂಪರೆ ಎಂಬುದು ಭೂತಕಾಲದ ಆಧಾರಸ್ತಂಭ ಮತ್ತು ಭವಿಷ್ಯದ ಹಾದಿ ಎಂದು ಅವು ಪ್ರದರ್ಶಿಸುತ್ತವೆ ಎಂದು ಹೇಳಿದರು.

ʻಜಿ-20ʼ ಸದಸ್ಯ ರಾಷ್ಟ್ರಗಳ ಅಮೂಲ್ಯ ಕೊಡುಗೆಗಳ ಬಗ್ಗೆ ಒತ್ತಿ ಹೇಳಿದ ಅವರು, "ಸಚಿವರ ಘೋಷಣೆಯ ಪ್ರಾಥಮಿಕ ಕರಡಿನ ಬಗ್ಗೆ ನಿಮ್ಮ ಒಳನೋಟಗಳು, ಅಭಿಪ್ರಾಯಗಳು ಮತ್ತು ಪ್ರತಿಕ್ರಿಯೆಗಳು ನಮ್ಮ ಪರಸ್ಪರ ಹಂಚಿಕೊಂಡ ಆಶಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ," ಎಂದು ಹೇಳಿದರು. ವೈವಿಧ್ಯತೆಯಿಂದ ತುಂಬಿರುವ ಜಗತ್ತಿನಲ್ಲಿ, ನಮ್ಮ ಪರಸ್ಪರ ಹಂಚಿಕೊಂಡ ಸಾಂಸ್ಕೃತಿಕ ಪರಂಪರೆಯು ನಮ್ಮೆಲ್ಲರನ್ನೂ ಒಟ್ಟುಗೂಡಿಸುವ ಎಳೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಸಂಸ್ಕೃತಿಯು ಸೇತುವೆಗಳನ್ನು ನಿರ್ಮಿಸುತ್ತದೆ, ತಿಳಿವಳಿಕೆ ಮತ್ತು ಸಹಾನುಭೂತಿಯನ್ನು ಬೆಳೆಸುತ್ತದೆ. ಜೊತೆಗೆ ನಮ್ಮ ನಡುವಿನ ವ್ಯತ್ಯಾಸಗಳನ್ನು ಮೀರಿ, ಪರಸ್ಪರ ಹಂಚಿಕೊಂಡ ಮಾನವ ಪ್ರಯಾಣವನ್ನು ಬೆಂಬಲಿಸಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದರು.

ಏಕತೆಯ ಶಕ್ತಿ, ವೈವಿಧ್ಯತೆಯ ಸೌಂದರ್ಯ ಮತ್ತು ಮಾನವ ಅಭಿವೃದ್ಧಿಯ ನಿಟ್ಟಿನಲ್ಲಿ ಸಂಸ್ಕೃತಿಯು ಹೊಂದಿರುವ ಅಪಾರ ಸಾಮರ್ಥ್ಯವನ್ನು ನೆನಪಿನಲ್ಲಿಟ್ಟುಕೊಳ್ಳುವಂತೆ ಶ್ರೀ ಪ್ರಹ್ಲಾದ್‌ ಜೋಶಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದವರನ್ನು ಒತ್ತಾಯಿಸಿದರು. "ನಾವು ಒಂದೇ ಕನಸುಗಳಿಂದ, ಅದೇ ಭಾವೋತ್ಕಟತೆಯಿಂದ ಪ್ರೇರಿತರಾಗಿ ಮತ್ತು ಅದೇ ಭರವಸೆಗಳಿಂದ ಸ್ಫೂರ್ತಿ ಪಡೆದಿದ್ದೇವೆ," ಎಂದು ಹೇಳಿದರು.

"ಸಂಸ್ಕೃತಿಯು ಕೇವಲ ನಮ್ಮ ಅಸ್ಮಿತೆಯ ಒಂದು ಭಾಗವಾಗಿರದೆ, ಅದು ಸುಸ್ಥಿರ ಅಭಿವೃದ್ಧಿ, ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಜಾಗತಿಕ ಸಾಮರಸ್ಯಕ್ಕೆ ಪ್ರೇರಕ ಶಕ್ತಿಯೂ ಆಗಿರುವಂತಹ ಭವಿಷ್ಯವನ್ನು ರೂಪಿಸಲು  ಇಂದು ನಮ್ಮ ಕೆಲಸವು ದಾರಿ ಮಾಡಿಕೊಡಲಿ," ಎಂದು ಅವರು ಆಶಯ ವ್ಯಕ್ತಪಡಿಸಿದರು.

ಲಂಬಾಣಿ ಕಸೂತಿ ಪಟ್ಟಿಗಳ ಅತಿದೊಡ್ಡ ಪ್ರದರ್ಶನವನ್ನು ರಚಿಸುವ ಮೂಲಕ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಪ್ರವೇಶಿಸುವ ಗುರಿಯನ್ನು ಸಿಡಬ್ಲ್ಯೂಜಿ ಹೊಂದಿದೆ. ಸಂಡೂರು ಕುಶಾಲ ಕಲಾ ಕೇಂದ್ರದೊಂದಿಗೆ ನಿಕಟ ಸಂಬಂಧ ಹೊಂದಿರುವ ಲಂಬಾಣಿ ಸಮುದಾಯದ 450ಕ್ಕೂ ಹೆಚ್ಚು ಮಹಿಳಾ ಕುಶಲಕರ್ಮಿಗಳು ʻಜಿ-20ʼ ಕಾರ್ಯಕ್ರಮದಲ್ಲಿ ಸುಮಾರು 1300 ಲಂಬಾಣಿ ಕಸೂತಿ ಪಟ್ಟಿಗಳ ಕೃತಿಗಳನ್ನು ಪ್ರದರ್ಶಿಸಿದ್ದಾರೆ.

ಜಿ-20 ಪ್ರತಿನಿಧಿಗಳನ್ನು ಯುನೆಸ್ಕೋ ವಿಶ್ವ  ಪಾರಂಪರಿಕ ತಾಣವಾದ ಹಂಪಿ ಸಮೂಹ ಸ್ಮಾರಕಗಳ ಭಾಗವಾಗಿರುವ - ವಿಜಯ ವಿಠ್ಠಲ ದೇವಸ್ಥಾನ, ರಾಯಲ್ ಎನ್‌ಕ್ಲೋಸರ್‌ ಮತ್ತು ಯಡೂರು ಬಸವಣ್ಣ ಕಾಂಪ್ಲೆಕ್ಸ್‌ನಂತಹ ಪಾರಂಪರಿಕ ತಾಣಗಳಿಗೆ ವಿಹಾರಕ್ಕೆ ಕರೆದೊಯ್ಯಲಾಗುತ್ತಿದೆ. ತುಂಗಭದ್ರ ನದಿಯಲ್ಲಿ ಪ್ರತಿನಿಧಿಗಳನ್ನು ತೆಪ್ಪ ಸವಾರಿಗೆ ಕರೆದೊಯ್ಯಲಾಗುತ್ತಿದೆ. ಶ್ರೀ ಪಟ್ಟಾಭಿರಾಮ ಸ್ವಾಮಿ ದೇವಸ್ಥಾನದಲ್ಲಿ ನಡೆಯುವ ಯೋಗ ಕಾರ್ಯಕ್ರಮದಲ್ಲಿ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

***



(Release ID: 1938392) Visitor Counter : 164