ಪ್ರಧಾನ ಮಂತ್ರಿಯವರ ಕಛೇರಿ

ದೆಹಲಿ ವಿಶ್ವವಿದ್ಯಾಲಯದ ಶತಮಾನೋತ್ಸವದ ಸಮಾರೋಪ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ


ವಿಶ್ವವಿದ್ಯಾಲಯದ ತಂತ್ರಜ್ಞಾನ ವಿಭಾಗ, ಕಂಪ್ಯೂಟರ್ ಕೇಂದ್ರ ಮತ್ತು ಅಕಾಡೆಮಿಕ್ ಬ್ಲಾಕ್ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು

ಶತಮಾನೋತ್ಸವದ ಸ್ಮರಣಾರ್ಥ ಸಂಪುಟ - ʻಶತಮಾನೋತ್ಸವ ಆಚರಣೆಗಳ ಸಂಕಲನʼ;  ʻದೆಹಲಿ ವಿಶ್ವವಿದ್ಯಾಲಯ ಮತ್ತು ಅದರ ಕಾಲೇಜುಗಳ ಲೋಗೋ ಪುಸ್ತಕʼ ಹಾಗೂ ʻಔರಾ - ದೆಹಲಿ ವಿಶ್ವವಿದ್ಯಾಲಯದ 100 ವರ್ಷಗಳುʼ ಪುಸ್ತಕಗಳನ್ನು ಅವರು ಲೋಕಾರ್ಪಣೆ ಮಾಡಿದರು

ದೆಹಲಿ ವಿಶ್ವವಿದ್ಯಾಲಯವನ್ನು ತಲುಪಲು ಮೆಟ್ರೋ ರೈಲಿನಲ್ಲಿ ಪ್ರಧಾನಿ ಪ್ರಯಾಣ

"ದೆಹಲಿ ವಿಶ್ವವಿದ್ಯಾಲಯವು ಕೇವಲ ವಿಶ್ವವಿದ್ಯಾಲಯವಲ್ಲ, ಅದೊಂದು ಒಂದು ಆಂದೋಲನವಾಗಿದೆ"

"ಈ ನೂರು ವರ್ಷಗಳಲ್ಲಿ, ದೆಹಲಿ ವಿಶ್ವವಿದ್ಯಾಲಯವು ತನ್ನ ಭಾವನೆಗಳನ್ನು ಜೀವಂತವಾಗಿರಿಸಿರುವುದಲ್ಲದೆ, ಅದು ತನ್ನ ಮೌಲ್ಯಗಳನ್ನು ಸಹ ಸದೃಢವಾಗಿರಿಸಿದೆ"

"ಭಾರತದ ಶ್ರೀಮಂತ ಶಿಕ್ಷಣ ವ್ಯವಸ್ಥೆಯು ಭಾರತದ ಸಮೃದ್ಧಿಯ ವಾಹಕವಾಗಿದೆ"

"ಪ್ರತಿಭಾವಂತ ಯುವಕರ ಬಲವಾದ ಪೀಳಿಗೆಯನ್ನು ಸೃಷ್ಟಿಸುವಲ್ಲಿ ದೆಹಲಿ ವಿಶ್ವವಿದ್ಯಾಲಯವು ಪ್ರಮುಖ ಪಾತ್ರ ವಹಿಸಿದೆ"

"ಒಬ್ಬ ವ್ಯಕ್ತಿಯ ಅಥವಾ ಸಂಸ್ಥೆಯ ಸಂಕಲ್ಪವು ದೇಶದ ಕಡೆಗೆ ಇದ್ದಾಗ, ಅದರ ಸಾಧನೆಗಳನ್ನು ರಾಷ್ಟ್ರದ ಸಾಧನೆಗಳೊಂದಿಗೆ ಸಮೀಕರಿಸಲಾಗುತ್ತದೆ"

"ಕಳೆದ ಶತಮಾನದ ಮೂರನೇ ದಶಕವು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ವೇಗವನ್ನು ನೀಡಿತು, ಈಗ ಹೊಸ ಶತಮಾನದ ಮೂರನೇ ದಶಕವು ಭಾರತದ ಅಭಿವೃದ್ಧಿಯ ಪ್ರಯಾಣಕ್ಕೆ ಉತ್ತೇಜನ ನೀಡುತ್ತದೆ"

"ಪ್ರಜಾಪ್ರಭುತ್ವ, ಸಮಾನತೆ ಮತ್ತು ಪರಸ್ಪರ ಗೌರವದಂತಹ ಭಾರತೀಯ ಮೌಲ್ಯಗಳು ಮಾನವೀಯ ಮೌಲ್ಯಗಳಾಗುತ್ತಿವೆ"

"ವಿಶ್ವದ ಅತಿದೊಡ್ಡ ಪಾರಂಪರಿಕ ವಸ್ತುಸಂಗ್ರಹಾಲಯ - 'ಯುಗೆ ಯುಗೀನ್ ಭಾರತ್' ಅನ್ನು ದೆಹಲಿಯಲ್ಲಿ ನಿರ್ಮಿಸಲಾಗುವುದು"

"ಭಾರತದ ʻಮೃದು ಶಕ್ತಿʼಯು ಭಾರತೀಯ ಯುವಕರ ಯಶೋಗಾಥೆಯಾಗುತ್ತಿದೆ"

Posted On: 30 JUN 2023 1:29PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ದೆಹಲಿ ವಿಶ್ವವಿದ್ಯಾಲಯದ ಕ್ರೀಡಾ ಸಂಕೀರ್ಣದ ವಿವಿಧೋದ್ದೇಶ ಸಭಾಂಗಣದಲ್ಲಿ ನಡೆದ ದೆಹಲಿ ವಿಶ್ವವಿದ್ಯಾಲಯದ ಶತಮಾನೋತ್ಸವ ಆಚರಣೆಯ ಸಮಾರೋಪ ಸಮಾರಂಭ ಉದ್ದೇಶಿಸಿ ಭಾಷಣ ಮಾಡಿದರು. ವಿಶ್ವವಿದ್ಯಾಲಯದ ಉತ್ತರ ಕ್ಯಾಂಪಸ್‌ನಲ್ಲಿ ನಿರ್ಮಾಣವಾಗಲಿರುವ ತಂತ್ರಜ್ಞಾನ ವಿಭಾಗ, ಕಂಪ್ಯೂಟರ್ ಕೇಂದ್ರ ಮತ್ತು ಅಕಾಡೆಮಿಕ್ ಬ್ಲಾಕ್ ಕಟ್ಟಡಕ್ಕೂ ಅವರು ಶಂಕುಸ್ಥಾಪನೆ ನೆರವೇರಿಸಿದರು. ಪ್ರಧಾನಮಂತ್ರಿಯವರು ಶತಮಾನೋತ್ಸವ ಆಚರಣೆಗಳ ಸಂಕಲನವಾದ ಶತಮಾನೋತ್ಸವ ಸಂಪುಟವನ್ನು ಬಿಡುಗಡೆ ಮಾಡಿದರು.  ಜೊತೆಗೆ, ʻದೆಹಲಿ ವಿಶ್ವವಿದ್ಯಾಲಯ ಮತ್ತು ಅದರ ಕಾಲೇಜುಗಳ ಲೋಗೋ ಪುಸ್ತಕ; ಹಾಗೂ ಹೌರಾ - ದೆಹಲಿ ವಿಶ್ವವಿದ್ಯಾಲಯದ 100 ವರ್ಷಗಳುʼ ಪುಸ್ತಕವನ್ನೂ ಲೋಕಾರ್ಪಣೆ ಮಾಡಿದರು.

ದೆಹಲಿ ವಿಶ್ವವಿದ್ಯಾಲಯವನ್ನು ತಲುಪಲು ಪ್ರಧಾನಮಂತ್ರಿಯವರು ಮೆಟ್ರೋ ಪ್ರಯಾಣ ಮಾಡಿದರು. ಪ್ರಯಾಣದ ಸಮಯದಲ್ಲಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವಿಶ್ವವಿದ್ಯಾಲಯಕ್ಕೆ ಆಗಮಿಸಿದ ನಂತರ ಪ್ರಧಾನಮಂತ್ರಿಯವರು ʻ100 ವರ್ಷಗಳ ಪ್ರಯಾಣʼ ಎಂಬ ವಸ್ತುಪ್ರದರ್ಶನದಲ್ಲಿ ಒಂದು ಸುತ್ತು ಹಾಕಿದರು. ʻಸರಸ್ವತಿ ವಂದನಾʼ ಕಾರ್ಯಕ್ರಮ ಹಾಗೂ ಸಂಗೀತ ಮತ್ತು ಲಲಿತಕಲಾ ವಿಭಾಗದಿಂದ ಪ್ರಸ್ತುತಪಡಿಸಿದ ವಿಶ್ವವಿದ್ಯಾಲಯದ ʻಕುಲಗೀತೆʼಗೆ ಅವರು ಸಾಕ್ಷಿಯಾದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ದೆಹಲಿ ವಿಶ್ವವಿದ್ಯಾಲಯದ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ತಾವು ದೃಢವಾಗಿ ನಿರ್ಧರಿಸಿದ್ದಾಗಿ ಹೇಳಿದರು. ಇದು ತಮ್ಮಲ್ಲಿ ಮನೆಗೆ ಹಿಂದಿರುಗಿದ ಭಾವನೆಯನ್ನು ಮೂಡಿಸಿರುವುದಾಗಿ ಬಣ್ಣಿಸಿದರು. ಭಾಷಣಕ್ಕೂ ಮುನ್ನ ಪ್ರದರ್ಶಿಸಲಾದ ಕಿರುಚಿತ್ರವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ವಿಶ್ವವಿದ್ಯಾಲಯದಿಂದ ಹೊರಹೊಮ್ಮಿದ ವ್ಯಕ್ತಿಗಳ ಕೊಡುಗೆಗಳು ದೆಹಲಿ ವಿಶ್ವವಿದ್ಯಾಲಯದ ಜೀವನದ ಒಂದು ಇಣುಕುನೋಟವನ್ನು ನೀಡುತ್ತವೆ ಎಂದರು. ದೆಹಲಿ ವಿಶ್ವವಿದ್ಯಾಲಯದಲ್ಲಿ ನಡೆದ ಹಬ್ಬದ ಸಂದರ್ಭದಲ್ಲಿ ಮತ್ತು ಹಬ್ಬದ ಉತ್ಸಾಹದಲ್ಲಿ ತಾವು ಉಪಸ್ಥಿತರಿರುವುದಕ್ಕೆ ಪ್ರಧಾನಮಂತ್ರಿಯವರು ಸಂತಸ ವ್ಯಕ್ತಪಡಿಸಿದರು. ಯಾವಾಗ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದರೂ ಸಹೋದ್ಯೋಗಿಗಳ ಜೊತೆಗೆ ಬರುವುದರ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಈ ಕಾರ್ಯಕ್ರಮವನ್ನು ತಲುಪಲು ಮೆಟ್ರೋದಲ್ಲಿ ಪ್ರಯಾಣಿಸುವ ಅವಕಾಶ ದೊರೆತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಭಾರತವು ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸಿದ ಅಂಗವಾಗಿ ʻಆಜಾದಿ ಕಾ ಅಮೃತ ಮಹೋತ್ಸವʼವನ್ನು ಆಚರಿಸುತ್ತಿರುವ ಸಮಯದಲ್ಲೇ ದೆಹಲಿ ವಿಶ್ವವಿದ್ಯಾಲಯದ ಶತಮಾನೋತ್ಸವ ಆಚರಣೆಗಳು ನಡೆಯುತ್ತಿದೆ ಎಂದು ಪ್ರಧಾನಿ ಹೇಳಿದರು. "ಯಾವುದೇ ರಾಷ್ಟ್ರದ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳು ದೇಶದ ಸಾಧನೆಗಳನ್ನು ಪ್ರತಿಬಿಂಬಿಸುತ್ತವೆ," ಎಂದು ಪ್ರಧಾನಿ ಹೇಳಿದ್ದಾರೆ. ದೆಹಲಿ ವಿಶ್ವವಿದ್ಯಾಲಯದ 100 ವರ್ಷಗಳ ಪ್ರಯಾಣದಲ್ಲಿ, ಅನೇಕ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಮತ್ತು ಇತರರ ಜೀವನವನ್ನು ಬೆಸೆದ ಅನೇಕ ಐತಿಹಾಸಿಕ ಹೆಗ್ಗುರುತುಗಳಿವೆ ಎಂದು ಪ್ರಧಾನಿ ಹೇಳಿದರು. ದೆಹಲಿ ವಿಶ್ವವಿದ್ಯಾಲಯವು ಕೇವಲ ವಿಶ್ವವಿದ್ಯಾಲಯವಲ್ಲ, ಅದೊಂದು ಆಂದೋಲನ. ಅದು ಪ್ರತಿ ಕ್ಷಣದಲ್ಲೂ ಜೀವಂತಿಕೆಯನ್ನು ತುಂಬಿದೆ ಎಂದು ಅವರು ಬಣ್ಣಿಸಿದರು. ಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ದೆಹಲಿ ವಿಶ್ವವಿದ್ಯಾಲಯದ ಪ್ರತಿಯೊಬ್ಬ ವಿದ್ಯಾರ್ಥಿ, ಪ್ರಾಧ್ಯಪಕ ಮತ್ತು ವಿಶ್ವವಿದ್ಯಾಲಯಕ್ಕೆ ಸಂಬಂಧಪಟ್ಟವರನ್ನು ಪ್ರಧಾನಮಂತ್ರಿಯವರು ಅಭಿನಂದಿಸಿದರು.

ಹಳೆಯ ಮತ್ತು ಹೊಸ ಹಳೆಯ ವಿದ್ಯಾರ್ಥಿಗಳ ಸಮಾವೇಶವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಇದು ಪರಸ್ಪರ ಸಮ್ಮಿಲನದ ಸಂದರ್ಭವಾಗಿದೆ ಎಂದರು. "ಈ ನೂರು ವರ್ಷಗಳಲ್ಲಿ, ದೆಹಲಿ ವಿಶ್ವವಿದ್ಯಾಲಯವು ತನ್ನ ಭಾವನೆಗಳನ್ನು ಜೀವಂತವಾಗಿರಿಸಿರುವುದಲ್ಲದೆ, ಅದು ತನ್ನ ಮೌಲ್ಯಗಳನ್ನು ಸಹ ಸದೃಢವಾಗಿರಿಸಿದೆ," ಎಂದು ಪ್ರಧಾನಿ ಹೇಳಿದರು. ಜ್ಞಾನದ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಭಾರತವು ನಳಂದ ಮತ್ತು ತಕ್ಷಿಲಾದಂತಹ ಅದ್ಭುತ ವಿಶ್ವವಿದ್ಯಾಲಯಗಳನ್ನು ಹೊಂದಿದ್ದಾಗ ಅದು ಸಮೃದ್ಧಿಯ ಉತ್ತುಂಗದಲ್ಲಿತ್ತು ಎಂದರು. "ಭಾರತದ ಶ್ರೀಮಂತ ಶಿಕ್ಷಣ ವ್ಯವಸ್ಥೆಯು ಭಾರತದ ಸಮೃದ್ಧಿಯ ವಾಹಕವಾಗಿದೆ" ಎಂದು ಅವರು ಹೇಳಿದರು. ಇದೇ ವೇಳೆ, ಜಾಗತಿಕ ಜಿಡಿಪಿಯಲ್ಲಿ ಭಾರತದ ಪಾಲು ಹೆಚ್ಚಿರುವ ಬಗ್ಗೆ ಒತ್ತಿಹೇಳಿದರು. ಗುಲಾಮಗಿರಿಯ ಅವಧಿಯಲ್ಲಿ ನಿರಂತರ ದಾಳಿಗಳು ಈ ಶಿಕ್ಷಣ ಸಂಸ್ಥೆಗಳನ್ನು ನಾಶಪಡಿಸಿದವು, ಇದು ಭಾರತದ ಬೌದ್ಧಿಕ ಹರಿವಿಗೆ ಅಡ್ಡಿಯಾಯಿತು ಮತ್ತು ಬೆಳವಣಿಗೆಯನ್ನು ಸ್ಥಗಿತಗೊಳಿಸಿತು ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಸ್ವಾತಂತ್ರ್ಯದ ಬಳಿಕ ಪ್ರತಿಭಾವಂತ ಯುವಕರ ಬಲವಾದ ಪೀಳಿಗೆಯನ್ನು ಸೃಷ್ಟಿಸುವ ಮೂಲಕ ಸ್ವಾತಂತ್ರ್ಯೋತ್ತರ ಭಾರತದ ಭಾವನಾತ್ಮಕ ಉತ್ತುಂಗಕ್ಕೆ ಒಂದು ಸದೃಢ ಆಕಾರವನ್ನು ನೀಡುವಲ್ಲಿ ವಿಶ್ವವಿದ್ಯಾಲಯಗಳು ನಿರ್ಣಾಯಕ ಪಾತ್ರ ವಹಿಸಿವೆ ಎಂದು ಅವರು ಹೇಳಿದರು. ದೆಹಲಿ ವಿಶ್ವವಿದ್ಯಾಲಯ ಕೂಡ ಇದರಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಶ್ಲಾಘಿಸಿದರು. ಗತಕಾಲದ ಈ ತಿಳಿವಳಿಕೆ ನಮ್ಮ ಅಸ್ತಿತ್ವಕ್ಕೆ ಆಕಾರವನ್ನು ನೀಡುತ್ತದೆ, ನಮ್ಮ ಆದರ್ಶಗಳಿಗೆ ಆಕಾರವನ್ನು ನೀಡುತ್ತದೆ ಮತ್ತು ಭವಿಷ್ಯದ ದೃಷ್ಟಿಕೋನವನ್ನು ವಿಸ್ತರಿಸುತ್ತದೆ ಎಂದು ಅವರು ಹೇಳಿದರು.

"ಒಬ್ಬ ವ್ಯಕ್ತಿಯ ಅಥವಾ ಸಂಸ್ಥೆಯ ಸಂಕಲ್ಪವು ದೇಶದ ಕಡೆಗೆ ಇದ್ದಾಗ, ಅದರ ಸಾಧನೆಗಳನ್ನು ರಾಷ್ಟ್ರದ ಸಾಧನೆಗಳೊಂದಿಗೆ ಸಮೀಕರಿಸಲಾಗುತ್ತದೆ," ಎಂದು ಪ್ರಧಾನಿ ಹೇಳಿದರು. ದೆಹಲಿ ವಿಶ್ವವಿದ್ಯಾಲಯವು ಪ್ರಾರಂಭವಾದಾಗ ಅದರ ಅಡಿಯಲ್ಲಿ ಕೇವಲ 3 ಕಾಲೇಜುಗಳಿದ್ದವು. ಆದರೆ ಇಂದು ಅದರ ಅಡಿಯಲ್ಲಿ 90ಕ್ಕೂ ಹೆಚ್ಚು ಕಾಲೇಜುಗಳಿವೆ ಎಂದು ಶ್ರೀ ಮೋದಿ ಗಮನಸೆಳೆದರು. ಒಂದು ಕಾಲದಲ್ಲಿ ದುರ್ಬಲ ಆರ್ಥಿಕತೆ ಎಂದು ಪರಿಗಣಿಸಲ್ಪಟ್ಟಿದ್ದ ಭಾರತವು ಈಗ ವಿಶ್ವದ ಅಗ್ರ 5 ಆರ್ಥಿಕತೆಗಳಲ್ಲಿ ಒಂದಾಗಿದೆ ಎಂದು ಅವರು ಒತ್ತಿಹೇಳಿದರು. ದೆಹಲಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿರುವ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಹೆಚ್ಚಾಗಿದೆ ಎಂದು ಹೇಳಿದ ಪ್ರಧಾನಿ, ದೇಶದಲ್ಲಿ ಲಿಂಗಾನುಪಾತ ಗಮನಾರ್ಹವಾಗಿ ಸುಧಾರಿಸಿದೆ ಎಂದರು. ವಿಶ್ವವಿದ್ಯಾಲಯ ಮತ್ತು ರಾಷ್ಟ್ರದ ನಿರ್ಣಯಗಳ ನಡುವೆ ಪರಸ್ಪರ ಸಂಪರ್ಕದ ಮಹತ್ವವನ್ನು ಒತ್ತಿ ಹೇಳಿದ ಅವರು, ಶಿಕ್ಷಣ ಸಂಸ್ಥೆಗಳ ಬೇರುಗಳು ಆಳವಾದಷ್ಟೂ ದೇಶದ ಪ್ರಗತಿ ಹೆಚ್ಚುತ್ತದೆ ಎಂದರು. ಮೊದಲ ಬಾರಿಗೆ ಪ್ರಾರಂಭವಾದಾಗ ಭಾರತದ ಸ್ವಾತಂತ್ರ್ಯವೇ ದೆಹಲಿ ವಿಶ್ವವಿದ್ಯಾಲಯದ ಗುರಿಯಾಗಿತ್ತು. ಆದರೆ ಈಗ ಭಾರತವು ಸ್ವಾತಂತ್ರ್ಯದ 100 ವರ್ಷಗಳನ್ನು ಪೂರೈಸಿದಾಗ, ದೆಹಲಿ ವಿಶ್ವವಿದ್ಯಾಲಯವು ಸಹ 125 ವರ್ಷಗಳನ್ನು ಪೂರೈಸುತ್ತದೆ. ಹೀಗಾಗಿ ಭಾರತವನ್ನು 'ವಿಕಸಿತ ಭಾರತ'ವನ್ನಾಗಿ ಮಾಡುವುದು ದೆಹಲಿ ವಿಶ್ವವಿದ್ಯಾಲಯದ ಗುರಿಯಾಗಿರಬೇಕು ಎಂದು ಪ್ರಧಾನಿ ಹೇಳಿದರು. "ಕಳೆದ ಶತಮಾನದ ಮೂರನೇ ದಶಕವು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ವೇಗವನ್ನು ನೀಡಿತು, ಈಗ ಹೊಸ ಶತಮಾನದ ಮೂರನೇ ದಶಕವು ಭಾರತದ ಅಭಿವೃದ್ಧಿಯ ಪ್ರಯಾಣಕ್ಕೆ ಸ್ಫೂರ್ತಿ ನೀಡುತ್ತದೆ" ಎಂದು ಪ್ರಧಾನಿ ಹೇಳಿದರು. ಮುಂಬರುವ ವಿಶ್ವವಿದ್ಯಾಲಯಗಳು, ಕಾಲೇಜುಗಳು, ಐಐಟಿಗಳು, ಐಐಎಂಗಳು ಮತ್ತು ಏಮ್ಸ್‌ಗಳ ಬಗ್ಗೆ ಪ್ರಧಾನ ಮಂತ್ರಿಯವರು ಸುಳಿವು ನೀಡಿದರು. "ಈ ಎಲ್ಲಾ ಶಿಕ್ಷಣ ಸಂಸ್ಥೆಗಳು ʻನವ ಭಾರತʼದ ಅಡಿಪಾಯಗಳಾಗುತ್ತಿವೆ," ಎಂದು ಅವರು ಬಣ್ಣಿಸಿದರು.

ಶಿಕ್ಷಣವು ಕೇವಲ ಬೋಧನೆಯ ಪ್ರಕ್ರಿಯೆಯಲ್ಲ, ಅದೊಂದು ಕಲಿಕೆಯ ಮಾರ್ಗವೂ ಹೌದು ಎಂದು ಪ್ರಧಾನಿ ಒತ್ತಿ ಹೇಳಿದರು. ಬಹಳ ಸಮಯದ ನಂತರ, ವಿದ್ಯಾರ್ಥಿಯು ಏನನ್ನು ಕಲಿಯಲು ಬಯಸುತ್ತಾನೋ ಅದರತ್ತಲೇ ಶಿಕ್ಷಣದಲ್ಲಿ ಗಮನ ಹರಿಸಲಾಗುತ್ತಿದೆ ಎಂದರು. ವಿಷಯಗಳನ್ನು ಆಯ್ಕೆ ಮಾಡಲು ʻಹೊಸ ರಾಷ್ಟ್ರೀಯ ಶಿಕ್ಷಣ ನೀತಿʼಯಲ್ಲಿನ ನಮ್ಯತೆಯ ಬಗ್ಗೆ ಅವರು ಉಲ್ಲೇಖಿಸಿದರು. ಶಿಕ್ಷಣ ಸಂಸ್ಥೆಗಳ ಗುಣಮಟ್ಟ ಸುಧಾರಣೆ ಮತ್ತು ಸ್ಪರ್ಧಾತ್ಮಕತೆಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಶಿಕ್ಷಣ ಸಂಸ್ಥೆಗಳನ್ನು ಪ್ರೇರೇಪಿಸುತ್ತಿರುವ ʻರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟಿʼನ ಬಗ್ಗೆ ಉಲ್ಲೇಖಿಸಿದರು. ಶಿಕ್ಷಣ ಸಂಸ್ಥೆಗಳ ಸ್ವಾಯತ್ತತೆಯನ್ನು ಶಿಕ್ಷಣದ ಗುಣಮಟ್ಟದೊಂದಿಗೆ ಸಂಪರ್ಕಿಸುವ ಪ್ರಯತ್ನದ ಬಗ್ಗೆ ಅವರು ಉಲ್ಲೇಖಿಸಿದರು.

ಭವಿಷ್ಯ ಸನ್ನದ್ಧ ಶೈಕ್ಷಣಿಕ ನೀತಿಗಳು ಮತ್ತು ನಿರ್ಧಾರಗಳಿಂದಾಗಿ, ಭಾರತೀಯ ವಿಶ್ವವಿದ್ಯಾಲಯಗಳ ಮಾನ್ಯತೆ ಹೆಚ್ಚುತ್ತಿದೆ ಎಂದು ಪ್ರಧಾನಿ ಹೇಳಿದರು. 2014ರಲ್ಲಿ ʻಕ್ಯೂಎಸ್ ವಿಶ್ವ ಶ್ರೇಯಾಂಕʼದಲ್ಲಿ ಕೇವಲ 12 ಭಾರತೀಯ ವಿಶ್ವವಿದ್ಯಾಲಯಗಳು ಇದ್ದವು, ಆದರೆ ಇಂದು ಈ ಸಂಖ್ಯೆ 45ಕ್ಕೆ ತಲುಪಿದೆ ಎಂದು ಅವರು ಮಾಹಿತಿ ನೀಡಿದರು. ಈ ಪರಿವರ್ತನೆಗೆ ಭಾರತದ ಯುವ ಶಕ್ತಿಯೇ ಮಾರ್ಗದರ್ಶಕವಾಗಿದೆ ಎಂದು ಅವರು ಶ್ಲಾಘಿಸಿದರು. ಶಿಕ್ಷಣವು ಉದ್ಯೋಗ ಮತ್ತು ಪದವಿಗಳಿಗೆ ಸೀಮಿತವಾಗಿರಬೇಕು ಎಂಬ ಪರಿಕಲ್ಪನೆಯನ್ನು ಮೀರಿದ್ದಕ್ಕಾಗಿ ಇಂದಿನ ಯುವಕರನ್ನು ಪ್ರಧಾನಿ ಶ್ಲಾಘಿಸಿದರು. ಒಂದು ಲಕ್ಷಕ್ಕೂ ಹೆಚ್ಚು ನವೋದ್ಯಮಗಳನ್ನು ಪ್ರಸ್ತುತಪಡಿಸಲು ಯುವಜನತೆ ಬಯಸಿದ್ದಾರೆ. 2014-15ನೇ ಸಾಲಿಗೆ ಹೋಲಿಸಿದರೆ ಪೇಟೆಂಟ್ ಫೈಲಿಂಗ್‌ನಲ್ಲಿ ಶೇ.40ರಷ್ಟು ಹೆಚ್ಚಳ ಹಾಗೂ ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿನ ಹೆಚ್ಚಳವು ಈ ಚಿಂತನೆಗೆ ಪುರಾವೆಯಾಗಿದೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿಯವರು ತಮ್ಮ ಇತ್ತೀಚಿನ ಭೇಟಿಯ ಸಂದರ್ಭದಲ್ಲಿ ಅಮೆರಿಕದೊಂದಿಗೆ ಸಹಿ ಮಾಡಿಕೊಳ್ಳಲಾದ ʻನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನ ಉಪಕ್ರಮʼ ಅಥವಾ ʻಐಸಿಇಟಿʼ ಒಪ್ಪಂದದ ಬಗ್ಗೆ ಒತ್ತಿ ಹೇಳಿದರು. ಇದು ಕೃತಕ ಬುದ್ಧಿಮತ್ತೆಯಿಂದ(ಎಐ) ಅರೆವಾಹಕಗಳವರೆಗೆ ವಿವಿಧ ಕ್ಷೇತ್ರಗಳಲ್ಲಿ ಭಾರತದ ಯುವಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಹೇಳಿದರು. ಒಂದು ಕಾಲದಲ್ಲಿ ನಮ್ಮ ಯುವಕರಿಗೆ ಕೈಗೆಟುಕದಂತಿದ್ದ ತಂತ್ರಜ್ಞಾನಗಳಿಗೆ ಇದು ಪ್ರವೇಶವನ್ನು ಕಲ್ಪಲಿಸುತ್ತದೆ, ಜೊತೆಗೆ ಕೌಶಲ್ಯ ಅಭಿವೃದ್ಧಿಯನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು. ʻಮೈಕ್ರಾನ್ʼ, ʻಗೂಗಲ್ʼ, ʻಅಪ್ಲೈಡ್ ಮೆಟೀರಿಯಲ್ಸ್ʼ ಮುಂತಾದ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದ್ದೇವೆ ಎಂದು ಹೇಳಿದ ಪ್ರಧಾನಿಯವರು ದೇಶದ ಯುವಕರಿಗೆ ದೊರೆಯಲಿರುವ ಉಜ್ವಲ ಭವಿಷ್ಯದ ನೋಟವನ್ನು ಮುಂದಿಟ್ಟರು.

"ಇಂಡಸ್ಟ್ರಿ 4.0 ಕ್ರಾಂತಿಯು ಭಾರತದ ಬಾಗಿಲು ತಟ್ಟುತ್ತಿದೆ," ಎಂದ ಪ್ರಧಾನಮಂತ್ರಿಯವರು, ಚಲನಚಿತ್ರಗಳಲ್ಲಿ ಮಾತ್ರ ಕಾಣಬಹುದಾದ ʻಎಐʼ, ʻಎಆರ್ʼ ಮತ್ತು ʻವಿಆರ್ʼನಂತಹ ತಂತ್ರಜ್ಞಾನಗಳು ಈಗ ನಮ್ಮ ನಿಜ ಜೀವನದ ಭಾಗವಾಗಿವೆ ಎಂದರು. ವಾಹನ ಚಾಲನೆಯಿಂದ ಶಸ್ತ್ರಚಿಕಿತ್ಸೆಯವರೆಗೆ ರೊಬೊಟಿಕ್ಸ್ ಎಂಬುದು ಈಗ ʻಹೊಸ ಸಾಮಾನ್ಯʼವಾಗಿದೆ. ಈ ಎಲ್ಲಾ ಕ್ಷೇತ್ರಗಳು ಭಾರತದ ಯುವ ಪೀಳಿಗೆಗೆ ಹೊಸ ಮಾರ್ಗಗಳನ್ನು ಸೃಷ್ಟಿಸುತ್ತಿವೆ ಎಂದು ಅವರು ಹೇಳಿದರು. ಕಳೆದ ಕೆಲ ವರ್ಷಗಳಲ್ಲಿ, ಭಾರತವು ತನ್ನ ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರವನ್ನು ಮುಕ್ತಗೊಳಿಸಿದೆ. ಡ್ರೋನ್‌ಗಳಿಗೆ ಸಂಬಂಧಿಸಿದ ನೀತಿಗಳಲ್ಲಿ ಭಾರಿ ಬದಲಾವಣೆಗಳನ್ನು ಮಾಡಿದೆ. ಇದರಿಂದ ಯುವಕರಿಗೆ ಮುಂದೆ ಸಾಗಲು ಅವಕಾಶವನ್ನು ದೊರೆತಿದೆ ಎಂದು ಪ್ರಧಾನಿ ಹೇಳಿದರು.

ಬೆಳೆಯುತ್ತಿರುವ ಭಾರತದ ಚಿತ್ರಣವು ವಿದ್ಯಾರ್ಥಿಗಳ ಮೇಲೆ ಬೀರುತ್ತಿರುವ ಪರಿಣಾಮವನ್ನು ಪ್ರಧಾನಿ ವಿವರಿಸಿದರು. ಈಗ ಜನರು ಭಾರತದ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಿದ್ದಾರೆ ಎಂದು ಅವರು ಹೇಳಿದರು. ಕರೋನಾ ಅವಧಿಯಲ್ಲಿ ವಿಶ್ವಕ್ಕೆ ಭಾರತ ನೀಡಿದ ಸಹಾಯವನ್ನು ಅವರು ಉಲ್ಲೇಖಿಸಿದರು. ಇದು ಬಿಕ್ಕಟ್ಟಿನ ಸಮಯದಲ್ಲಿಯೂ ಸಹಾಯ ಹಸ್ತ, ವಿಶ್ವಕ್ಕೆ ಕೊಡಬಲ್ಲ ಭಾರತದ ಶಕ್ತಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಜಗತ್ತಿನ ಕುತೂಹಲವನ್ನು ಹೆಚ್ಚಿಸಿತು. ಜಿ-20 ಅಧ್ಯಕ್ಷತೆಯಂತಹ ಸ್ಥಾನಮಾನದಿಂದ ಭಾರತಕ್ಕೆ ಹೆಚ್ಚುತ್ತಿರುವ ಮನ್ನಣೆಯು ವಿದ್ಯಾರ್ಥಿಗಳಿಗೆ ಯೋಗ, ವಿಜ್ಞಾನ, ಸಂಸ್ಕೃತಿ, ಹಬ್ಬಗಳು, ಸಾಹಿತ್ಯ, ಇತಿಹಾಸ, ಪರಂಪರೆ ಮತ್ತು ಪಾಕಪದ್ಧತಿಯಂತಹ ಹೊಸ ಮಾರ್ಗಗಳನ್ನು ಸೃಷ್ಟಿಸುತ್ತಿದೆ ಎಂದು ಅವರು ಹೇಳಿದರು. "ಭಾರತೀಯ ಯುವಕರ ಬೇಡಿಕೆ ಹೆಚ್ಚುತ್ತಿದೆ, ಅವರು ಭಾರತದ ಬಗ್ಗೆ ಜಗತ್ತಿಗೆ ಹೇಳಬಲ್ಲರು ಮತ್ತು ನಮ್ಮ ವಸ್ತುಗಳನ್ನು ಜಗತ್ತಿಗೆ ಕೊಂಡೊಯ್ಯಬಹುದು," ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವ, ಸಮಾನತೆ ಮತ್ತು ಪರಸ್ಪರ ಗೌರವದಂತಹ ಭಾರತೀಯ ಮೌಲ್ಯಗಳು ಮಾನವೀಯ ಮೌಲ್ಯಗಳಾಗುತ್ತಿವೆ. ಇದರಿಂದ ಭಾರತೀಯ ಯುವಕರಿಗೆ ಸರ್ಕಾರ ಮತ್ತು ರಾಜತಾಂತ್ರಿಕತೆ ವಲಯಗಳಲ್ಲಿ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ ಎಂದು ಪ್ರಧಾನಿ ಹೇಳಿದರು. ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯ ಮೇಲೆ ಗಮನ ಕೇಂದ್ರೀಕರಿಸುವುದರಿಂದ ಯುವಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಬಹುದು ಎಂದು ಅವರು ಒತ್ತಿ ಹೇಳಿದರು. ದೇಶದ ವಿವಿಧ ರಾಜ್ಯಗಳಲ್ಲಿ ಬುಡಕಟ್ಟು ವಸ್ತುಸಂಗ್ರಹಾಲಯಗಳನ್ನು ಸ್ಥಾಪಿಸಲಾಗುತ್ತಿದೆ ಮತ್ತು ʻಪಿಎಂ ಮ್ಯೂಸಿಯಂʼ ಮೂಲಕ ಸ್ವತಂತ್ರ ಭಾರತದ ಅಭಿವೃದ್ಧಿ ಪಯಣವನ್ನು ಪ್ರಸ್ತುತಪಡಿಸಲಾಗುತ್ತಿದೆ ಎಂದು ಅವರು ಉದಾಹರಣೆ ನೀಡಿದರು. ವಿಶ್ವದ ಅತಿದೊಡ್ಡ ಪಾರಂಪರಿಕ ವಸ್ತುಸಂಗ್ರಹಾಲಯವಾದ 'ಯುಗೆ ಯುಗೀನ್ ಭಾರತ್' ಅನ್ನು ಸಹ ದೆಹಲಿಯಲ್ಲಿ ನಿರ್ಮಿಸಲಾಗುತ್ತಿರುವ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದರು. ಭಾರತೀಯ ಶಿಕ್ಷಕರಿಗೆ ಹೆಚ್ಚುತ್ತಿರುವ ಮನ್ನಣೆಯನ್ನೂ ಸ್ಮರಿಸಿದ ಪ್ರಧಾನಮಂತ್ರಿಯವರು, ವಿಶ್ವ ನಾಯಕರು ಭಾರತೀಯ ಶಿಕ್ಷಕರ ಬಗ್ಗೆ ಹೇಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಎಂಬುದನ್ನು ಉಲ್ಲೇಖಿಸಿದರು. "ಭಾರತದ ಈ ʻಮೃದು ಶಕ್ತಿʼಯು ಭಾರತೀಯ ಯುವಕರ ಯಶೋಗಾಥೆಯಾಗುತ್ತಿದೆ," ಎಂದು ಪ್ರಧಾನಿ ಹೇಳಿದರು. ಈ ಬೆಳವಣಿಗೆಗೆ ವಿಶ್ವವಿದ್ಯಾಲಯಗಳು ತಮ್ಮ ಮನಸ್ಥಿತಿಯನ್ನು ಸಜ್ಜುಗೊಳಿಸಿಕೊಳ್ಳುವ ಅಗತ್ಯವಿದೆ ಎಂದು ಅವರು ಕರೆ ನೀಡಿದರು. ಇದಕ್ಕಾಗಿ ಮಾರ್ಗಸೂಚಿಯನ್ನು ಸಿದ್ಧಪಡಿಸುವಂತೆ ಅವರು ಅವರನ್ನು ಕೋರಿದರು. ಜೊತೆಗೆ, ದೆಹಲಿ ವಿಶ್ವವಿದ್ಯಾಲಯವು 125 ವರ್ಷಗಳನ್ನು ಆಚರಿಸಿದಾಗ, ಅದು ವಿಶ್ವದ ಉನ್ನತ ಶ್ರೇಣಿಯ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿ ಸ್ಥಾನ ಪಡೆಯಬೇಕು ಎಂದು ಹೇಳಿದರು. "ಭವಿಷ್ಯದ ಆವಿಷ್ಕಾರಗಳು ಇಲ್ಲಿಂದಲೇ ಆರಂಭವಾಗಬೇಕು, ವಿಶ್ವದ ಅತ್ಯುತ್ತಮ ವಿಚಾರಗಳು ಮತ್ತು ನಾಯಕರು ಇಲ್ಲಿಂದಲೇ ಹೊರಹೊಮ್ಮಬೇಕು, ಇದಕ್ಕಾಗಿ ನೀವು ನಿರಂತರವಾಗಿ ಕೆಲಸ ಮಾಡಬೇಕಾಗುತ್ತದೆ," ಎಂದು ಪ್ರಧಾನಿ ಕರೆ ನೀಡಿದರು.

ಭಾಷಣವನ್ನು ಮುಗಿಸುವ ಮುನ್ನ ಕೊನೆಯದಾಗಿ, ಜೀವನದಲ್ಲಿ ನಮಗಾಗಿ ನಾವು ನಿಗದಿಪಡಿಸಿಕೊಂಡ ಗುರಿಯನ್ನು ಸಾಧಿಸಲು ನಮ್ಮ ಮನಸ್ಸು ಮತ್ತು ಹೃದಯಗಳನ್ನು ಸಿದ್ಧಪಡಿಸುವ ಅಗತ್ಯವನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ರಾಷ್ಟ್ರದ ಮನಸ್ಸು ಮತ್ತು ಹೃದಯವನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನು ದೇಶದ ಶಿಕ್ಷಣ ಸಂಸ್ಥೆಗಳು ಪೂರೈಸಬೇಕು ಎಂದು ಅವರು ಒತ್ತಿಹೇಳಿದರು. ಈ ಪ್ರಯಾಣವನ್ನು ಮುಂದುವರಿಸುತ್ತಾ, ದೆಹಲಿ ವಿಶ್ವವಿದ್ಯಾಲಯವು ಈ ಸಂಕಲ್ಪವನ್ನು ಈಡೇರಿಸುತ್ತದೆ ಎಂಬ ವಿಶ್ವಾಸವನ್ನು ಪ್ರಧಾನಿ ವ್ಯಕ್ತಪಡಿಸಿದರು. "ನಮ್ಮ ಹೊಸ ತಲೆಮಾರು ಭವಿಷ್ಯಕ್ಕೆ

ಸನ್ನದ್ಧವಾಗಿರಬೇಕು, ಸವಾಲುಗಳನ್ನು ಸ್ವೀಕರಿಸುವ ಮತ್ತು ಎದುರಿಸುವ ಮನೋಭಾವವನ್ನು ಹೊಂದಿರಬೇಕು, ಇದು ಶಿಕ್ಷಣ ಸಂಸ್ಥೆಯ ದೂರದೃಷ್ಟಿ ಮತ್ತು ಧ್ಯೇಯದಿಂದ ಮಾತ್ರ ಸಾಧ್ಯ," ಎಂದು ಪ್ರಧಾನಿ ಹೇಳಿದರು.

ಕೇಂದ್ರ ಶಿಕ್ಷಣ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಮತ್ತು ದೆಹಲಿ ವಿಶ್ವವಿದ್ಯಾಲಯದ ಉಪಕುಲಪತಿ ಶ್ರೀ ಯೋಗೇಶ್ ಸಿಂಗ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ದೆಹಲಿ ವಿಶ್ವವಿದ್ಯಾಲಯವನ್ನು 1922ರ ಮೇ 1ರಂದು ಸ್ಥಾಪಿಸಲಾಯಿತು. ಕಳೆದ ನೂರು ವರ್ಷಗಳಲ್ಲಿ, ವಿಶ್ವವಿದ್ಯಾಲಯವು ಅಗಾಧವಾಗಿ ಬೆಳೆದಿದೆ ಮತ್ತು ವಿಸ್ತರಿಸಿದೆ. ಈಗ 86 ವಿಭಾಗಗಳು, 90 ಕಾಲೇಜುಗಳು ಮತ್ತು 6 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಅಪಾರ ಕೊಡುಗೆ ನೀಡಿದೆ.

 

*****



(Release ID: 1936471) Visitor Counter : 114