ಪ್ರಧಾನ ಮಂತ್ರಿಯವರ ಕಛೇರಿ

‘ಮನದ ಮಾತು’  ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ದಿನಾಂಕ 30.04.2023 ರಂದು ಮಾಡಿದ ‘ಮನ್ ಕಿ ಬಾತ್’ – 100 ನೇ ಸಂಚಿಕೆಯ ಕನ್ನಡ ಅವತರಣಿಕೆ

Posted On: 30 APR 2023 11:47AM by PIB Bengaluru

ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ. ಇಂದು 'ಮನದ ಮಾತಿನ'  ನೂರನೇ ಸಂಚಿಕೆ. ನಿಮ್ಮೆಲ್ಲರಿಂದ ನನಗೆ ಸಾವಿರಾರು ಪತ್ರಗಳು, ಲಕ್ಷಗಟ್ಟಲೆ ಸಂದೇಶಗಳು ಬಂದಿವೆ ಮತ್ತು ನಾನು ಸಾಧ್ಯವಾದಷ್ಟು ಪತ್ರಗಳನ್ನು ಓದಲು, ಅವುಗಳನ್ನು ನೋಡಲು ಮತ್ತು ಸಂದೇಶಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದೇನೆ. ನಿಮ್ಮ ಪತ್ರಗಳನ್ನು ಓದುವಾಗ ಹಲವು ಬಾರಿ ನಾನು ಭಾವುಕನಾದೆ, ಭಾವೋದ್ವೇಗಕ್ಕೆ ಒಳಗಾದೆ, ಭಾವೋದ್ವೇಗದ ಹೊಳೆಯಲ್ಲಿ ತೇಲಿ ಹೋದೆ ಜೊತೆಗೆ ನನ್ನನ್ನೂ ನಿಯಂತ್ರಿಸಿಕೊಂಡೆ. 'ಮನದ ಮಾತಿನ' 100 ನೇ ಸಂಚಿಕೆಗಾಗಿ ನೀವು ನನ್ನನ್ನು ಅಭಿನಂದಿಸಿದ್ದೀರಿ, ಆದರೆ ನಾನು ಮನಃ   ಪೂರ್ವಕವಾಗಿ ಹೇಳುತ್ತಿದ್ದೇನೆ, ವಾಸ್ತವವಾಗಿ, ನೀವೆಲ್ಲರೂ 'ಮನದ ಮಾತಿನ' ಶ್ರೋತೃಗಳು, ನಮ್ಮ ದೇಶವಾಸಿಗಳು, ಅಭಿನಂದನೆಗೆ ಅರ್ಹರಾಗಿದ್ದೀರಿ. 'ಮನದ ಮಾತು' ಕೋಟ್ಯಂತರ ಭಾರತೀಯರ 'ಮನದ ಮಾತಾಗಿದೆ', ಅದು ಅವರ ಭಾವನೆಗಳ ಅಭಿವ್ಯಕ್ತಿಯಾಗಿದೆ.

ಸ್ನೇಹಿತರೇ, ಅಕ್ಟೋಬರ್ 3, 2014 ವಿಜಯ ದಶಮಿಯ ಹಬ್ಬದಂದು ನಾವೆಲ್ಲರೂ ಒಗ್ಗೂಡಿ ವಿಜಯ ದಶಮಿಯ ದಿನದಂದು 'ಮನದ ಮಾತಿನ' ಪಯಣವನ್ನು ಆರಂಭಿಸಿದ್ದೆವು. ವಿಜಯ ದಶಮಿ ಎಂದರೆ ದುಷ್ಟ ಮರ್ದನ ಶಿಷ್ಟ ರಕ್ಷಣೆಯ ವಿಜಯದ ಹಬ್ಬ. 'ಮನದ ಮಾತು' ದೇಶವಾಸಿಗಳ ಒಳ್ಳೆಯತನ ಮತ್ತು ಸಕಾರಾತ್ಮಕತೆಯ ಒಂದು ವಿಶಿಷ್ಟ ಹಬ್ಬವಾಗಿದೆ. ಎಂಥ ಹಬ್ಬ ಎಂದರೆ ಪ್ರತಿ ತಿಂಗಳು ಬರುವ ಹಬ್ಬವಿದು. ಅದಕ್ಕಾಗಿ ನಾವೆಲ್ಲ ಕಾತುರದಿಂದ ಕಾಯುತ್ತಿರುತ್ತೇವೆ. ನಾವು ಇದರಲ್ಲಿ ಸಕಾರಾತ್ಮಕತೆಯನ್ನು ಆಚರಿಸುತ್ತೇವೆ. ಜನರ ಸಹಭಾಗಿತ್ವವನ್ನು ಆಚರಿಸುತ್ತೇವೆ. ‘ಮನದ ಮಾತು’ಗೆ ಇಷ್ಟು ತಿಂಗಳುಗಳು ಇಷ್ಟು ವರ್ಷಗಳು ತುಂಬಿದೆ ಎಂದರೆ ಕೆಲವೊಮ್ಮೆ ನಂಬುವುದು ಕಷ್ಟವಾಗುತ್ತದೆ. ಪ್ರತಿಯೊಂದು ಸಂಚಿಕೆಯೂ ತನ್ನದೇ ಆದ ವಿಶೇಷತೆಯನ್ನು ಹೊಂದಿತ್ತು. ಪ್ರತಿ ಬಾರಿ, ಹೊಸ ಉದಾಹರಣೆಗಳ ನಾವೀಣ್ಯತೆ, ಪ್ರತಿ ಬಾರಿಯೂ  ದೇಶವಾಸಿಗಳ ಯಶಸ್ಸಿನ ಹೊಸ ಅಧ್ಯಾಯ ಇದರಲ್ಲಿ ಮಿಳಿತವಾಗಿತ್ತು. 'ಮನದ ಮಾತು' ನೊಂದಿಗೆ ದೇಶದ ಮೂಲೆ ಮೂಲೆಯ ಜನರು, ಎಲ್ಲಾ ವಯೋಮಾನದವರು ಸೇರಿಕೊಂಡರು. ಭೇಟಿ ಬಚಾವೋ ಭೇಟಿ ಪಢಾವೋ ಆಂದೋಲನವಾಗಲಿ, ಸ್ವಚ್ಛ ಭಾರತ ಆಂದೋಲನವಾಗಲಿ, ಖಾದಿ ಅಥವಾ ಪ್ರಕೃತಿ ಪ್ರೀತಿಯೇ ಆಗಿರಲಿ, ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಥವಾ ಅಮೃತ ಸರೋವರವೇ ಆಗಿರಲಿ, 'ಮನದ ಮಾತು' ಯಾವ ವಿಷಯವನ್ನು ಪ್ರಸ್ತಾಪಿಸಿತೊ, ಅದು ಜನಾಂದೋಲನವಾಗಿ ರೂಪುಗೊಂಡಿತು. ನೀವು ಜನರು ಅದನ್ನು ಸಾಧ್ಯವಾಗಿಸಿದ್ದೀರಿ. ನಾನು ಅಂದಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರೊಂದಿಗೆ ‘ಮನದ ಮಾತು’ ಹಂಚಿಕೊಂಡಾಗ ಅದು ಜಗತ್ತಿನಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು.

 

       ಸ್ನೇಹಿತರೇ, 'ಮನದ ಮಾತು' ನನಗೆ ಇತರರ ಗುಣಗಳನ್ನು ಆರಾಧಿಸುವ ವೇದಿಕೆಯಂತಿದೆ. ನನಗೆ ಶ್ರೀ ಲಕ್ಷ್ಮಣರಾವ್ ಜಿ ಇನಾಮದಾರ್ ಎಂಬ ಒಬ್ಬ ಮಾರ್ಗದರ್ಶಕರಿದ್ದರು . ನಾವು ಅವರನ್ನು ವಕೀಲ್ ಸಾಹೇಬ್ ಎಂದು ಕರೆಯುತ್ತಿದ್ದೆವು. ನಾವು ಇತರರ ಗುಣಗಳನ್ನು ಮೆಚ್ಚಬೇಕು ಆರಾಧಿಸಬೇಕೆಂದು ಅವರು ಯಾವಾಗಲೂ ಹೇಳುತ್ತಿದ್ದರು. ನಿಮ್ಮ ಮುಂದೆ ಯಾರೇ ಇರಲಿ, ನಿಮ್ಮ ಜೊತೆಗಿರುವವರಾಗಿರಲಿ, ನಿಮ್ಮ ಎದುರಾಳಿಯಾಗಿರಲಿ, ಅವರ ಉತ್ತಮ ಗುಣಗಳನ್ನು ತಿಳಿದುಕೊಳ್ಳಲು ಮತ್ತು ಅವರಿಂದ ಕಲಿಯಲು ನಾವು ಪ್ರಯತ್ನಿಸಬೇಕು. ಅವರ ಈ ಮಾತು ನನಗೆ ಯಾವಾಗಲೂ ಸ್ಫೂರ್ತಿ ನೀಡುತ್ತದೆ. 'ಮನದ ಮಾತು' ಇತರರ ಗುಣಗಳಿಂದ ಕಲಿಯಲು ಉತ್ತಮ ಮಾಧ್ಯಮವಾಗಿದೆ.

        ನನ್ನ ಪ್ರಿಯ ದೇಶವಾಸಿಗಳೇ, ಈ ಕಾರ್ಯಕ್ರಮವು ನನ್ನನ್ನು ನಿಮ್ಮಿಂದ ದೂರ ಹೋಗದಂತೆ ನೋಡಿಕೊಂಡಿದೆ. ನನಗೆ ನೆನಪಿದೆ, ನಾನು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಅಲ್ಲಿನ ಜನಸಾಮಾನ್ಯರನ್ನು ಭೇಟಿಯಾಗುವುದು, ಸಂವಾದ ನಡೆಸುವುದು ಸಹಜವಾಗಿತ್ತು . ಮುಖ್ಯಮಂತ್ರಿಗಳ ಕೆಲಸ ಮತ್ತು ಅಧಿಕೃತ ಕಚೇರಿ  ಹೀಗಿಯೇ ಇರುತ್ತದೆ, ಭೇಟಿಯಾಗುವ ಹಲವಾರು ಅವಕಾಶಗಳು ಲಭಿಸುತ್ತವೆ. ಆದರೆ 2014ರಲ್ಲಿ ದೆಹಲಿಗೆ ಬಂದ ನಂತರ ಇಲ್ಲಿನ ಜೀವನ ತುಂಬಾ ವಿಭಿನ್ನವಾಗಿದೆ ಎಂಬುದನ್ನು ಕಂಡುಕೊಂಡೆ. ಕೆಲಸದ ಸ್ವರೂಪವೇ ಬೇರೆ, ಜವಾಬ್ದಾರಿಯೇ ಬೇರೆ, ಸ್ಥಿತಿ ಮತ್ತು ಪರಿಸ್ಥಿತಿಗಳು ವಿಭಿನ್ನವಾಗಿದ್ದವು, ಭದ್ರತೆಯ ಅತಿರೇಕ, ಕಾಲಮಿತಿ ಎಲ್ಲವೂ ಹೇರಿದಂತಿತ್ತು. ಆರಂಭದ ದಿನಗಳಲ್ಲಿ, ಏನೋ ವಿಭಿನ್ನ ಭಾವನೆ, ಶೂನ್ಯ ಭಾವನೆ ತುಂಬಿತ್ತು.  ಒಂದು ದಿನ ನನ್ನ ಸ್ವಂತ ದೇಶದ ಜನರನ್ನು ಸಂಪರ್ಕಿಸುವುದು ಕಷ್ಟಕರವೆನಿಸುವ ಸ್ಥಿತಿಯನ್ನು ಎದುರಿಸಲು ನಾನು ಐವತ್ತು ವರ್ಷಗಳ ಹಿಂದೆ ನನ್ನ ಮನೆಯನ್ನು ತೊರೆದಿರಲಿಲ್ಲ. ನನ್ನ ಸರ್ವಸ್ವವೂ ಆಗಿರುವ ದೇಶವಾಸಿಗಳಿಂದ ಬೇರ್ಪಟ್ಟು ಬದುಕಲು ಸಾಧ್ಯವಿರಲಿಲ್ಲ. ಈ ಸವಾಲನ್ನು ಎದುರಿಸಲು 'ಮನದ ಮಾತು' ನನಗೆ ಪರಿಹಾರವನ್ನು ನೀಡಿತು, ಸಾಮಾನ್ಯ ಜನರೊಂದಿಗೆ ಸಂಪರ್ಕ ಸಾಧಿಸುವ ಮಾರ್ಗವನ್ನು ಕಲ್ಪಿಸಿತು. ಅಲಂಕರಿಸಿದ ಹುದ್ದೆ ಮತ್ತು ಶಿಷ್ಟಾಚಾರ ಎಂಬುದು ವ್ಯವಸ್ಥೆಗೆ ಸೀಮಿತವಾಗಿ ಉಳಿಯಿತು ಮತ್ತು ಸಾರ್ವಜನಿಕ ಭಾವನೆಗಳು, ಕೋಟಿಗಟ್ಟಲೆ ಜನರೊಂದಿಗೆ ನನ್ನ ಭಾವನೆಗಳನ್ನು ಹಂಚಿಕೊಳ್ಳುವುದು  ನನ್ನ ಪ್ರಪಂಚದ ಅವಿಭಾಜ್ಯ ಅಂಗವಾಗಿದೆ. ಪ್ರತಿ ತಿಂಗಳು ನಾನು ದೇಶದ ಜನರ ಸಾವಿರಾರು ಸಂದೇಶಗಳನ್ನು ಓದುತ್ತೇನೆ, ಪ್ರತಿ ತಿಂಗಳು ನಾನು ದೇಶವಾಸಿಗಳ ಅದ್ಭುತ ಸ್ವರೂಪವನ್ನು ಕಾಣುತ್ತೇನೆ. ದೇಶವಾಸಿಗಳ ತಪಸ್ಸು ಮತ್ತು ತ್ಯಾಗದ ಪರಾಕಾಷ್ಠೆಗೆ ಸಾಕ್ಷಿಯಾಗುತ್ತೇನೆ ಮತ್ತು ಅದನ್ನು ಅನುಭವಿಸುತ್ತೇನೆ. ನಾನು ನಿಮ್ಮಿಂದ ಸ್ವಲ್ಪವೂ  ದೂರದಲ್ಲಿದ್ದೇನೆ ಎಂದು ನನಗೆ ಅನಿಸುವುದಿಲ್ಲ. ನನಗೆ 'ಮನದ ಮಾತು'  ಕೇವಲ ಕಾರ್ಯಕ್ರಮವಲ್ಲ, ನನಗೆ ಅದು ನಂಬಿಕೆ, ಪೂಜೆ, ವೃತದಂತೆ. ಜನರು ದೇವರ ಪೂಜೆಗೆ ಹೋದಾಗ ಪ್ರಸಾದದ ತಟ್ಟೆ ತರುತ್ತಾರೆ. ನನ್ನ ಪಾಲಿಗೆ 'ಮನದ ಮಾತು' ಎಂಬುದು ಭಗವಂತನ ಸ್ವರೂಪಿಯಾದ ಜನತಾ ಜನಾರ್ಧನನ ಪಾದಗಳಿಗೆ ಅರ್ಪಿಸುವ ಪ್ರಸಾದದ ತಟ್ಟೆ ಇದ್ದಂತೆ. 'ಮನದ ಮಾತು' ನನ್ನ ಮನಸ್ಸಿನ ಆಧ್ಯಾತ್ಮಿಕ ಯಾತ್ರೆಯಾಗಿದೆ.

'ಮನದ ಮಾತು' ಎಂಬುದು ವ್ಯಕ್ತಿಯಿಂದ ಸಮಷ್ಟಿಯತ್ತ ಪಯಣ.

'ಮನದ ಮಾತು' ಅಹಂ ನಿಂದ ವಯಂನೆಡೆಗೆ ಸಾಗುವ ಪಯಣ.

ಇದು ನಾನಲ್ಲ, ಬದಲಾಗಿ ನೀವುಗಳು ಈ ಸಂಸ್ಕೃತಿಯ ಸಾಧನೆಯಾಗಿದ್ದೀರಿ .

ನೀವು ಊಹಿಸಿಕೊಳ್ಳಿ, ನನ್ನ ದೇಶದ ಕೆಲ ದೇಶವಾಸಿಗಳು 40-40 ವರ್ಷಗಳಿಂದ ನಿರ್ಜನವಾದ ಬೆಟ್ಟಗಳಲ್ಲಿ ಮತ್ತು ಬರಡು ಭೂಮಿಯಲ್ಲಿ ಮರಗಳನ್ನು ನೆಡುತ್ತಿದ್ದಾರೆ, ಅದೆಷ್ಟೋ  ಜನರು 30-30 ವರ್ಷಗಳಿಂದ ನೀರಿನ ಸಂರಕ್ಷಣೆಗಾಗಿ ಬಾವಿಗಳನ್ನು ಮತ್ತು ಕೊಳಗಳನ್ನು ನಿರ್ಮಿಸುತ್ತಿದ್ದಾರೆ, ಅವುಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಕೆಲವರು 25-30 ವರ್ಷಗಳಿಂದ ಬಡ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ, ಕೆಲವರು ಬಡವರ ಚಿಕಿತ್ಸೆಗೆ ಸಹಾಯ ಮಾಡುತ್ತಿದ್ದಾರೆ. ‘ಮನದ ಮಾತಿನಲ್ಲಿ’ ಅವರನ್ನು ಹಲವು ಬಾರಿ ಪ್ರಸ್ತಾಪಿಸುವಾಗ ನಾನು ಭಾವುಕನಾಗಿದ್ದೇನೆ. ಆಕಾಶವಾಣಿಯ ಸಹೋದ್ಯೋಗಿಗಳು ಹಲವು ಬಾರಿ ಅದನ್ನು ಪುನಃ ಧ್ವನಿ ಮುದ್ರಿಸಬೇಕಾಯಿತು. ಇಂದು ಅದೆಷ್ಟೋ ಗತಕಾಲದ ನೆನಪುಗಳು ಕಣ್ಣ ಮುಂದೆ ಬರುತ್ತಿವೆ. ದೇಶವಾಸಿಗಳ ಈ ಪ್ರಯತ್ನಗಳು ನನ್ನನ್ನು ನಿರಂತರವಾಗಿ ಶ್ರಮಿಸುವಂತೆ ಪ್ರೇರೇಪಿಸಿದೆ.

 

ಸ್ನೇಹಿತರೇ, ನಾವು 'ಮನದ ಮಾತಿನಲ್ಲಿ” ಯಾರ ಬಗ್ಗೆ ಪ್ರಸ್ತಾಪಿಸುತ್ತೇವೆಯೋ ಅವರೆಲ್ಲರೂ  ಈ ಕಾರ್ಯಕ್ರಮಕ್ಕೆ ಜೀವಕಳೆ ತುಂಬಿದ ನಮ್ಮ ಹೀರೋಗಳು. ಇಂದು, ನಾವು 100 ನೇ ಸಂಚಿಕೆಯ ಘಟ್ಟವನ್ನು ತಲುಪಿರುವಾಗ, ನಾವು ಮತ್ತೊಮ್ಮೆ ಈ ಎಲ್ಲಾ ಹೀರೋಗಳ ಬಳಿ ಹೋಗಿ ಅವರ ಪಯಣದ ಬಗ್ಗೆ ತಿಳಿಯಬೇಕೆಂದು  ಬಯಸುತ್ತೇನೆ. ಇಂದು ನಾವು ಕೆಲವು ಸ್ನೇಹಿತರೊಂದಿಗೆ ಮಾತನಾಡಲು ಪ್ರಯತ್ನಿಸೋಣ. ಹರಿಯಾಣದ ಸಹೋದರ ಸುನಿಲ್ ಜಗ್ಲಾನ್ ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ. ಸುನಿಲ್ ಜಗ್ಲಾನ್ ಅವರು ನನ್ನ ಮನಸ್ಸಿನ ಮೇಲೆ ಬಹಳ ಪ್ರಭಾವ ಬೀರಲು ಕಾರಣವೇನೆಂದರೆ ಹರಿಯಾಣದಲ್ಲಿ ಲಿಂಗ ಅನುಪಾತದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು ಮತ್ತು ನಾನು ಹರಿಯಾಣದಿಂದಲೇ 'ಬೇಟಿ ಬಚಾವೋ-ಬೇಟಿ ಪಢಾವೋ' ಅಭಿಯಾನವನ್ನು ಪ್ರಾರಂಭಿಸಿದೆ. ಈ ಮಧ್ಯೆ ಸುನೀಲ್ ಅವರ 'ಸೆಲ್ಫಿ ವಿತ್ ಡಾಟರ್' ಅಭಿಯಾನದತ್ತ ನನ್ನ ಗಮನ ಹರಿಯಿತು. ಅದನ್ನು ನೋಡಿದಾಗ ನನಗೆ ತುಂಬಾ ಸಂತೋಷವಾಯಿತು. ನಾನೂ ಅವರಿಂದ ಅರಿತು ಮತ್ತು  ‘ಮನದ ಮಾತಿನಲ್ಲಿ’ ಈ ಪ್ರಸ್ತಾಪ ಮಾಡಿದೆ. ನೋಡ ನೋಡುತ್ತಿದ್ದಂತೆ, 'ಸೆಲ್ಫಿ ವಿತ್ ಡಾಟರ್' ಜಾಗತಿಕ ಅಭಿಯಾನವಾಗಿ ಮಾರ್ಪಟ್ಟಿತು. ಮತ್ತು ಇದರಲ್ಲಿ ವಿಷಯ ಸೆಲ್ಫಿಯಲ್ಲ, ತಂತ್ರಜ್ಞಾನವೂ ಅಲ್ಲ, ಮಗಳು, ಮಗಳಿಗೆ ಪ್ರಾಮುಖ್ಯತೆ ನೀಡಲಾಗಿತ್ತು. ಈ ಅಭಿಯಾನದ ಮೂಲಕ ಜೀವನದಲ್ಲಿ ಹೆಣ್ಣು ಮಗಳ ಸ್ಥಾನ ಎಷ್ಟು ಮಹತ್ವವಾಗಿದೆ ಎಂಬುದು ತಿಳಿದುಬಂತು. ಇಂತಹ ಹಲವು ಪ್ರಯತ್ನಗಳ ಫಲವೇ ಇಂದು ಹರಿಯಾಣದಲ್ಲಿ ಲಿಂಗ ಅನುಪಾತ ಸುಧಾರಿಸಿದೆ. ಇಂದು ಸುನೀಲ್ ಅವರ ಜೊತೆ ಹರಟೆ ಹೊಡೆಯೋಣ.

 

ಪ್ರಧಾನಮಂತ್ರಿ:  ನಮಸ್ಕಾರ ಸುನೀಲ್ ಅವರೇ

ಸುನೀಲ್:  ನಮಸ್ಕಾರ ಸರ್, ನಿಮ್ಮ ಧ್ವನಿ ಕೇಳಿ ನನ್ನ ಖುಷಿ ಇಮ್ಮಡಿಯಾಗಿದೆ ಸರ್.

ಪ್ರಧಾನಮಂತ್ರಿ: ಸುನೀಲ್ ಅವರೇ,   'ಸೆಲ್ಫಿ ವಿತ್ ಡಾಟರ್' ಎಲ್ಲರಿಗೂ ನೆನಪಿದೆ... ಈಗ ಮತ್ತೆ ಇದರ ಬಗ್ಗೆ ಚರ್ಚೆಯಾಗುತ್ತಿರುವಾಗ, ನಿಮಗೆ ಏನನಿಸುತ್ತದೆ?

ಸುನೀಲ್: ಪ್ರಧಾನಮಂತ್ರಿಯವರೆ, ವಾಸ್ತವವಾಗಿ, ನಮ್ಮ ರಾಜ್ಯ ಹರಿಯಾಣದಿಂದ ಹೆಣ್ಣುಮಕ್ಕಳ ಮುಖದಲ್ಲಿ ಮಂದಹಾಸವನ್ನು ತರಲು ಪ್ರಾರಂಭಿಸಿದ ನಾಲ್ಕನೇ ಪಾಣಿಪತ್ ಯುದ್ಧವನ್ನು ಇಡೀ ದೇಶವು ನಿಮ್ಮ ನಾಯಕತ್ವದಲ್ಲಿ ಗೆಲ್ಲಲು ಪ್ರಯತ್ನಿಸಿತ್ತು. ಈ ವಿಷಯ  ನನಗೆ ಮತ್ತು ಮಗಳನ್ನು ಪ್ರೀತಿಸುವ ಪ್ರತಿಯೊಬ್ಬ ತಂದೆಗೆ ಬಹಳ ಮಹತ್ವದ ವಿಷಯವಾಗಿದೆ.

ಪ್ರಧಾನಮಂತ್ರಿ: ಸುನೀಲ್ ಜೀ, ನಿಮ್ಮ ಮಗಳು ಈಗ ಹೇಗಿದ್ದಾಳೆ, ಈಗ ಏನು ಮಾಡುತ್ತಿದ್ದಾಳೆ?

ಸುನೀಲ್: ಹೌದು ಸರ್, ನನ್ನ ಹೆಣ್ಣುಮಕ್ಕಳು ನಂದನಿ ಮತ್ತು ಯಾಚಿಕಾ, ಒಬ್ಬಳು 7 ನೇ ತರಗತಿಯಲ್ಲಿ ಓದುತ್ತಿದ್ದಾಳೆ, ಒಬ್ಬಳು 4 ನೇ ತರಗತಿಯಲ್ಲಿ ಓದುತ್ತಿದ್ದಾಳೆ ಮತ್ತು ಅವಳು ನಿಮ್ಮ ದೊಡ್ಡ ಅಭಿಮಾನಿ. ಅವಳು ತನ್ನ ಸ್ನೇಹಿತರೊಂದಿಗೆ ನಿಮಗೆ ಥ್ಯಾಂಕ್ಯು ಪಿ ಎಂ ಎಂದು ಪತ್ರವನ್ನು ಸಿದ್ಧಪಡಿಸಿ ಕಳುಹಿಸಿದ್ದರು

ಪ್ರಧಾನಮಂತ್ರಿ: ವಾಹ್ ವಾಹ್! ಒಳ್ಳೆಯದು, ನೀವು ಮಕ್ಕಳಿಗೆ ನನ್ನ ಮತ್ತು ಮನದ ಮಾತಿನ ಕೇಳುಗರ ವತಿಯಿಂದ ಬಹಳಷ್ಟು ಆಶೀರ್ವಾದಗಳನ್ನು ತಿಳಿಸಿ

ಸುನೀಲ್: ತುಂಬಾ ಧನ್ಯವಾದಗಳು, ನಿಮ್ಮಿಂದಾಗಿ ದೇಶದ ಹೆಣ್ಣುಮಕ್ಕಳ ಮುಖದಲ್ಲಿ ನಗು ನಿರಂತರವಾಗಿ ನೆಲೆ ನಿಂತಿದೆ.

ಪ್ರಧಾನಮಂತ್ರಿ: ಅನಂತ ಧನ್ಯವಾದಗಳು ಸುನಿಲ್ ಅವರೇ.

ಸುನೀಲ್: ಧನ್ಯವಾದಗಳು ಸರ್

 

ಸ್ನೇಹಿತರೇ, 'ಮನದ ಮಾತಿನಲ್ಲಿ’ ನಾವು ದೇಶದ ಮಹಿಳಾ ಶಕ್ತಿಯ ನೂರಾರು ಸ್ಪೂರ್ತಿದಾಯಕ ಕಥೆಗಳನ್ನು ಉಲ್ಲೇಖಿಸಿದ್ದೇವೆ ಎಂಬುದು ನನಗೆ ತುಂಬಾ ತೃಪ್ತಿಯಾಗಿದೆ. ನಮ್ಮ ಸೈನ್ಯವೇ ಆಗಿರಲಿ, ಕ್ರೀಡಾ ಜಗತ್ತೇ ಇರಲಿ, ನಾನು ಮಹಿಳೆಯರ ಸಾಧನೆಯ ಬಗ್ಗೆ ಮಾತನಾಡಿದಾಗಲೆಲ್ಲ ಆ ಕುರಿತು ಸಾಕಷ್ಟು ಪ್ರಶಂಸೆ ಕೇಳಿ ಬಂದಿದೆ. ಛತ್ತೀಸ್ ‌ಗಢದ ದೇವೂರ್ ಗ್ರಾಮದ ಮಹಿಳೆಯರ ಬಗ್ಗೆ ನಾವು ಚರ್ಚಿಸಿದ್ದೆವು. ಈ ಮಹಿಳೆಯರು ಸ್ವ-ಸಹಾಯ ಗುಂಪುಗಳ ಮೂಲಕ ಗ್ರಾಮದ ಕೂಡು ರಸ್ತೆಗಳು, ರಸ್ತೆಗಳು ಮತ್ತು ದೇವಾಲಯಗಳನ್ನು ಸ್ವಚ್ಛಗೊಳಿಸುವ ಅಭಿಯಾನವನ್ನು ಆರಂಬಿಸಿದ್ದರು. ಅದೇ ರೀತಿ, ಸಾವಿರಾರು ಪರಿಸರ ಸ್ನೇಹಿ ಟೆರಾಕೋಟಾ ಕಪ್‌ ಗಳನ್ನು ರಫ್ತು ಮಾಡಿದ ತಮಿಳುನಾಡಿನ ಬುಡಕಟ್ಟು ಮಹಿಳೆಯರಿಂದ ದೇಶವು ಸಾಕಷ್ಟು ಸ್ಫೂರ್ತಿ ಪಡೆದಿದೆ. ತಮಿಳುನಾಡಿನಲ್ಲಿಯೇ 20 ಸಾವಿರ ಮಹಿಳೆಯರು ಒಗ್ಗೂಡಿ ವೆಲ್ಲೂರಿನಲ್ಲಿ ನಾಗ್ ನದಿಯನ್ನು ಪುನರುಜ್ಜೀವನಗೊಳಿಸಿದ್ದರು. ನಮ್ಮ ಮಹಿಳಾ ಶಕ್ತಿಯ ನೇತೃತ್ವದಲ್ಲಿ ಇಂತಹ ಅನೇಕ ಅಭಿಯಾನಗಳು ನಡೆದಿವೆ ಮತ್ತು ಅವರ ಪ್ರಯತ್ನಗಳನ್ನು ಪ್ರಸ್ತಾಪಿಸಲು   'ಮನದ ಮಾತು' ವೇದಿಕೆಯಾಗಿದೆ.

ಸ್ನೇಹಿತರೇ, ಈಗ ನಮ್ಮೊಂದಿಗೆ ಫೋನ್ ಲೈನ್‌ ನಲ್ಲಿ ಮತ್ತೊಬ್ಬರು ಸಂಪರ್ಕದಲ್ಲಿದ್ದಾರೆ. ಅವನ ಹೆಸರು ಮಂಜೂರ್ ಅಹಮದ್. 'ಮನದ ಮಾತಿನಲ್ಲಿ' ಜಮ್ಮು ಮತ್ತು ಕಾಶ್ಮೀರದ ಪೆನ್ಸಿಲ್ ಸ್ಲೇಟ್‌ ಗಳ ಬಗ್ಗೆ ಪ್ರಸ್ತಾಪಿಸಿದಾಗ ಮಂಜೂರ್ ಅಹ್ಮದ್ ಅವರ ಬಗ್ಗೆಯೂ ಉಲ್ಲೇಖಿಸಲಾಗಿತ್ತು.

 

ಪ್ರಧಾನಮಂತ್ರಿ: ಮಂಜೂರ್ ಅವರೇ ಹೇಗಿದ್ದೀರಾ? 

ಮಂಜೂರ್: ಧನ್ಯವಾದ ಸರ್, ತುಂಬಾ ಚೆನ್ನಾಗಿದ್ದೇನೆ

ಪ್ರಧಾನಮಂತ್ರಿ: ಮನದ ಮಾತಿನ 100 ನೇ ಕಂತಿನಲ್ಲಿ ನಿಮ್ಮೊಂದಿಗೆ ಮಾತನಾಡಿ ತುಂಬಾ ಸಂತೋಷವೆನಿಸುತ್ತಿದೆ

ಮಂಜೂರ್: ಧನ್ಯವಾದ ಸರ್

ಪ್ರಧಾನಮಂತ್ರಿ: ಪೆನ್ಸಿಲ್ ಸ್ಲೇಟ್ ಕೆಲಸ ಹೇಗೆ ಸಾಗಿದೆ

ಮಂಜೂರ್: ತುಂಬಾ ಚೆನ್ನಾಗಿ ನಡೆದಿದೆ. ನೀವು ನಮ್ಮ ಬಗ್ಗೆ ಮನದ ಮಾತಿನಲ್ಲಿ ಪ್ರಸ್ತಾಪಿಸಿದ ನಂತರ ತುಂಬಾ ಕೆಲಸ ಹೆಚ್ಚಿದೆ. ಬಹಳಷ್ಟು ಜನರಿಗೆ ಈ ಕೆಲಸ ಉದ್ಯೋಗ ಒದಗಿಸಿದೆ. 

ಪ್ರಧಾನಮಂತ್ರಿ:  ಈಗ ಎಷ್ಟು ಜನರಿಗೆ ಉದ್ಯೋಗ ಲಭಿಸುತ್ತಿದೆ?

ಮಂಜೂರ್ :  ಈಗ ನನ್ನ ಬಳಿ 200 ಕ್ಕೂ ಹೆಚ್ಚು ಜನರಿದ್ದಾರೆ...

ಪ್ರಧಾನಮಂತ್ರಿ: ಓಹ್!  ತುಂಬಾ ಸಂತೋಷವಾಯಿತು

ಮಂಜೂರ್:  ಹೌದು ಸರ್.....ಈಗ  ಇದನ್ನು ಒಂದೆರಡು ತಿಂಗಳಲ್ಲಿ ವಿಸ್ತರಿಸುತ್ತಿದ್ದೇನೆ ಮತ್ತು 200 ಜನರಿಗೆ ಉದ್ಯೋಗಾವಕಾಶ ಹೆಚ್ಚಲಿದೆ ಸರ್.

ಪ್ರಧಾನಮಂತ್ರಿ: ವಾಹ್ ವಾಹ್! ಮಂಜೂರ್ ನೋಡಿ...

ಮಂಜೂರ್: ಹೇಳಿ ಸರ್

ಪ್ರಧಾನಮಂತ್ರಿ:  ಆ ದಿನ ಇದನ್ನು ಯಾರೂ ಗುರುತಿಸುವುದಿಲ್ಲ, ಪರಿಗಣನೆ ಇಲ್ಲದ ಕೆಲಸ ಇದು ಎಂದು ನೀವು ನನಗೆ ಹೇಳಿದ್ದಿರಿ, ಅದು ನನಗೆ ಚೆನ್ನಾಗಿ ನೆನಪಿದೆ ಮತ್ತು ನಿಮಗೆ ಈ ಕುರಿತು ತುಂಬಾ ನೋವಿತ್ತು. ಇದರಿಂದ ನೀವು ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಯಿತು. ಆದರೆ ಈಗ ನಿಮ್ಮನ್ನು ಗುರುತಿಸಲಾಗಿದೆ ಮತ್ತು ನೀವು 200 ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುತ್ತಿದ್ದೀರಿ.

ಮಂಜೂರ್: ಹೌದು ಸರ್, ಹೌದು ಸರ್ ..

ಪ್ರಧಾನಮಂತ್ರಿ:  ನೀವು ಮತ್ತಷ್ಟು ಇದನ್ನು ವಿಸ್ತರಿಸಿ 200 ಜನರಿಗೆ ಉದ್ಯೋಗ ನೀಡುವ ಮೂಲಕ ಅತ್ಯಂತ ಸಂತೋಷದ ಸುದ್ದಿಯನ್ನು ನೀಡಿದ್ದೀರಿ.

ಮಂಜೂರ್: ಇಷ್ಟೇ ಅಲ್ಲ ಸರ್, ಇಲ್ಲಿಯ ರೈತರಿಗೂ ಇದರಿಂದ ಬಹಳ ಲಾಭವಾಗಿದೆ. ಹಿಂದೆ ರೂ. 2000 ಮೌಲ್ಯಕ್ಕೆ ಮರವನ್ನು ಮಾರಾಟ ಮಾಡುತ್ತಿದ್ದರು, ಈಗ ಅದೇ ಮರ ರೂ 5000 ಕ್ಕೆ ಮಾರಾಟವಾಗುತ್ತಿದೆ. ಅಂದಿನಿಂದ ತುಂಬಾ ಬೇಡಿಕೆ ಹೆಚ್ಚಿದೆ. ಹಾಗೂ ಇದು ತನ್ನದೇ ಛಾಪನ್ನೂ ಮೂಡಿಸಿದೆ, ಇದಕ್ಕೆ ನನ್ನ ಬಳಿ ಹಲವು ಆರ್ಡರ್ ‌ಗಳಿವೆ, ಈಗ ನಾನು ಒಂದೆರಡು ತಿಂಗಳಲ್ಲಿ ಮತ್ತಷ್ಟು ವಿಸ್ತರಿಸಲಿದ್ದೇನೆ ಮತ್ತು  ಎರಡು-ನಾಲ್ಕು ಹಳ್ಳಿಗಳ ಎರಡು ನೂರರಿಂದ – 250 ಜನರಿಗೆ ಇದರಲ್ಲಿ ಉದ್ಯೋಗ ನೀಡಲು ಪ್ರಯತ್ನಿಸುತ್ತೇನೆ. ಇದರಿಂದ ಯುವಕ ಯುವತಿಯರಿಗೆ ಜೀವನೋಪಾಯ ಮುಂದುವರಿಯಬಹುದು ಸರ್.

ಪ್ರಧಾನಮಂತ್ರಿ: ಮಂಜೂರ್ ಜೀ ನೋಡಿದಿರಾ, ಸ್ಥಳೀಯ ವಸ್ತುಗಳಿಗಾಗಿ ಧ್ವನಿ ಎತ್ತುವುದರ ಶಕ್ತಿ ಎಷ್ಟು ಅದ್ಭುತವಾಗಿದೆ, ನೀವು ಅದನ್ನು ನಿಮ್ಮ ತಾಯ್ನೆಲದಲ್ಲಿ ಸಾಧಿಸಿ  ತೋರಿಸಿದ್ದೀರಿ.

ಮಂಜೂರ್: ಹೌದು ಸರ್

ಪ್ರಧಾನಮಂತ್ರಿ: ನಿಮಗೆ ಮತ್ತು ಗ್ರಾಮದ ಎಲ್ಲಾ ರೈತರಿಗೆ ಮತ್ತು ನಿಮ್ಮೊಂದಿಗೆ ಕೆಲಸ ಮಾಡುವ ಎಲ್ಲಾ ಸಹೋದ್ಯೋಗಿಗಳಿಗೆ ಅನಂತ ಅಭಿನಂದನೆಗಳು, ಧನ್ಯವಾದಗಳು ಸಹೋದರ.

ಮಂಜೂರ್: ಧನ್ಯವಾದಗಳು ಸರ್

 

ಸ್ನೇಹಿತರೇ, ತಮ್ಮ ಕಠಿಣ ಪರಿಶ್ರಮದಿಂದ ಯಶಸ್ಸಿನ ಶಿಖರವನ್ನು ತಲುಪಿದ ಅನೇಕ ಪ್ರತಿಭಾವಂತರು ನಮ್ಮ ದೇಶದಲ್ಲಿದ್ದಾರೆ. ನನಗೆ ನೆನಪಿದೆ, ವಿಶಾಖಪಟ್ಟಣಂನ ವೆಂಕಟ್ ಮುರಳಿ ಪ್ರಸಾದ್ ಅವರು ಸ್ವಾವಲಂಬಿ ಭಾರತದ ಒಂದು  ಚಾರ್ಟ್ ಅನ್ನು ಹಂಚಿಕೊಂಡಿದ್ದರು. ಅವರು ಗರಿಷ್ಠ ಪ್ರಮಾಣದಲ್ಲಿ ಭಾರತೀಯ ಉತ್ಪನ್ನಗಳನ್ನು ಮಾತ್ರ ಹೇಗೆ ಬಳಸುತ್ತಾರೆ ಎಂದು ಹೇಳಿದ್ದರು. ಬೆತಿಯಾದ ಪ್ರಮೋದ್ ಅವರು ಎಲ್ ಇ ಡಿ ಬಲ್ಬ್ ತಯಾರಿಸುವ ಸಣ್ಣ ಘಟಕವನ್ನು ಸ್ಥಾಪಿಸಿದಾಗ ಅಥವಾ ಗಡಮುಕ್ತೇಶ್ವರದ ಸಂತೋಷ್ ಅವರು ಮ್ಯಾಟ್ ತಯಾರಿಸುವ ಉದ್ಯೋಗ ಪ್ರಾರಂಭಿಸಿದಾಗ, ಅವರ ಉತ್ಪನ್ನಗಳನ್ನು ಎಲ್ಲರ ಮುಂದೆ ಪ್ರಸ್ತಾಪಿಸಲು  'ಮನದ ಮಾತು' ಮಾಧ್ಯಮವಾಯಿತು. ನಾವು 'ಮನದ ಮಾತಿನಲ್ಲಿ'  ಮೇಕ್ ಇನ್ ಇಂಡಿಯಾ ದಿಂದ ಸ್ಪೇಸ್ ಸ್ಟಾರ್ಟ್-ಅಪ್‌ ಗಳ ಅನೇಕ ಉದಾಹರಣೆಗಳನ್ನು ಚರ್ಚಿಸಿದ್ದೇವೆ.

ಸ್ನೇಹಿತರೇ, ಕೆಲವು ಸಂಚಿಕೆಗಳ ಹಿಂದೆ ನಾನು ಮಣಿಪುರದ ಸಹೋದರಿ ವಿಜಯಶಾಂತಿ ದೇವಿಯವರ ಬಗ್ಗೆಯೂ ಪ್ರಸ್ತಾಪಿಸಿದ್ದುದು ನಿಮಗೆ ನೆನಪಿರಬಹುದು. ವಿಜಯಶಾಂತಿ ಅವರು ಕಮಲದ ನಾರುಗಳಿಂದ ಬಟ್ಟೆಗಳನ್ನು ಸಿದ್ಧಪಡಿಸುತ್ತಾರೆ. ಅವರ ಈ ಅನನ್ಯ ಪರಿಸರ ಸ್ನೇಹಿ ಕಲ್ಪನೆಯನ್ನು 'ಮನದ ಮಾತಿನಲ್ಲಿ’ ಚರ್ಚಿಸಲಾಗಿತ್ತು ಮತ್ತು ಅವರ ಕೆಲಸವು ಹೆಚ್ಚು ಜನಪ್ರಿಯವಾಯಿತು. ಇಂದು ವಿಜಯಶಾಂತಿಯವರು ನಮ್ಮೊಂದಿಗೆ ದೂರವಾಣಿ ಸಂಪರ್ಕದಲ್ಲಿದ್ದಾರೆ.

 

ಪ್ರಧಾನಮಂತ್ರಿ:- ನಮಸ್ತೆ ವಿಜಯ ಶಾಂತಿಯವರೆ. ಹೇಗಿದ್ದೀರಿ?

 

ವಿಜಯಶಾಂತಿ:-ಸರ್, ನಾನು ಚೆನ್ನಾಗಿದ್ದೇನೆ.

 

ಪ್ರಧಾನಮಂತ್ರಿ:- ನಿಮ್ಮ ಕೆಲಸ ಹೇಗೆ ನಡೆಯುತ್ತಿದೆ ?

 

ವಿಜಯಶಾಂತಿ:- ಸರ್, ಈಗಲೂ ನನ್ನ ತಂಡದ 30 ಮಹಿಳೆಯರೊಂದಿಗೆ ಸೇರಿ ಕೆಲಸ ಮಾಡುತ್ತಿದ್ದೇನೆ

 

ಪ್ರಧಾನಮಂತ್ರಿ:- ಇಷ್ಟು ಕಡಿಮೆ ಅವಧಿಯಲ್ಲಿ ನೀವು 30 ಮಂದಿ ತಂಡದ ಗುರಿ ತಲುಪಿದ್ದೀರಿ!

 

ವಿಜಯಶಾಂತಿ:- ಹೌದು ಸರ್,  ಈ ವರ್ಷ ಕೂಡಾ ನಾನಿರುವ ಪ್ರದೇಶದಲ್ಲಿ ಸುಮಾರು 100 ಮಹಿಳೆಯರನ್ನು ಒಳಗೊಳ್ಳುವಂತೆ ವಿಸ್ತರಿಸುವ ಯೋಜನೆ ಇದೆ.

 

ಪ್ರಧಾನಮಂತ್ರಿ:- ನಿಮ್ಮ ಗುರಿ 100 ಮಹಿಳೆಯರು

 

ವಿಜಯಶಾಂತಿ:- ಹೌದು ! 100 ಮಹಿಳೆಯರು

 

ಪ್ರಧಾನಮಂತ್ರಿ:- ಈಗ ಜನರು ತಾವರೆ ಕಾಂಡದ ನಾರಿನ ಕುರಿತು ಪರಿಚಿತರಾಗಿದ್ದಾರೆ

 

ವಿಜಯಶಾಂತಿ :- ಹೌದು ಸರ್, ಭಾರತದಾದ್ಯಂತ ಮನದ ಮಾತು ಕಾರ್ಯಕ್ರಮದಿಂದ ಪ್ರತಿಯೊಬ್ಬರಿಗೂ ಈ ಮಾಹಿತಿ ಇದೆ.    

 

ಪ್ರಧಾನಮಂತ್ರಿ:- ಹಾಗಾದರೆ ಈಗ ಇದು ಬಹಳ ಜನಪ್ರಿಯವಾಗಿದೆ

 

ವಿಜಯಶಾಂತಿ:- ಹೌದು ಸರ್, ಪ್ರಧಾನ ಮಂತ್ರಿಯವರ ಮನದ ಮಾತು ಕಾರ್ಯಕ್ರಮದಿಂದ ಪ್ರತಿಯೊಬ್ಬರೂ ತಾವರೆ ನಾರಿನ ಕುರಿತು ಅರಿತಿದ್ದಾರೆ

 

ಪ್ರಧಾನಮಂತ್ರಿ:- ಹಾಗಾದರೆ ನಿಮಗೆ ಈಗ ಮಾರುಕಟ್ಟೆಯೂ ದೊರೆತಿದೆ ಅಲ್ಲವೇ?

 

ವಿಜಯಶಾಂತಿ:- ಹೌದು,  ನನಗೆ ಅಮೆರಿಕದಿಂದ ಮಾರುಕಟ್ಟೆ ಅವಕಾಶ ದೊರೆತಿದೆ, ಮತ್ತು ಅವರು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಲು ಬಯಸುತ್ತಾರೆ, ನಾನು ಈ ವರ್ಷದಿಂದ ಅಮೆರಿಕಾಗೆ ರಫ್ತು ಮಾಡಲು ಪ್ರಾರಂಭಿಸುವವಳಿದ್ದೇನೆ.

 

ಪ್ರಧಾನಮಂತ್ರಿ:- ಹಾಗಾದರೆ, ಈಗ ನೀವು ರಫ್ತುದಾರರು ? 

 

ವಿಜಯಶಾಂತಿ:- ಹೌದು ಸರ್, ಈ ವರ್ಷದಿಂದ ನಾನು ಭಾರತದಲ್ಲಿ ತಾವರೆ ನಾರಿನಿಂದ ತಯಾರಿಸಿದ ನಮ್ಮ ಉತ್ಪನ್ನವನ್ನು ರಫ್ತು ಮಾಡುತ್ತೇನೆ. 

 

ಪ್ರಧಾನಮಂತ್ರಿ:- ಸರಿ, ನಾನು ವೋಕಲ್ ಫಾರ್ ಲೋಕಲ್ ಎನ್ನುತ್ತಿದ್ದೆ ಈಗ ಲೋಕಲ್ ಫಾರ್ ಗ್ಲೋಬಲ್

 

ವಿಜಯಶಾಂತಿ:- ಹೌದು ಸರ್, ನನ್ನ ಉತ್ಪನ್ನಗಳು ವಿಶ್ವದ ಎಲ್ಲೆಡೆ ತಲುಪಬೇಕೆಂದು ನಾನು ಬಯಸುತ್ತೇನೆ.

 

ಪ್ರಧಾನಮಂತ್ರಿ:- ಅಭಿನಂದನೆಗಳು ಮತ್ತು ನಿಮಗೆ ಶುಭವಾಗಲಿ

 

ವಿಜಯಶಾಂತಿ:- ಧನ್ಯವಾದ ಸರ್

 

ಪ್ರಧಾನಮಂತ್ರಿ:- ಧನ್ಯವಾದ. ಧನ್ಯವಾದ ವಿಜಯಶಾಂತಿ

 

ವಿಜಯಶಾಂತಿ:- ಧನ್ಯವಾದ ಸರ್

 

ಸ್ನೇಹಿತರೇ, ಮನದ ಮಾತಿನ ಮತ್ತೊಂದು ವಿಶೇಷತೆಯಿದೆ. ‘ಮನದ ಮಾತಿನ’ ಮೂಲಕ ಎಷ್ಟೊಂದು ಜನಾಂದೋಲನಗಳು ಜನ್ಮತಾಳಿವೆ ಮತ್ತು ವೇಗವನ್ನೂ ಪಡೆದುಕೊಂಡಿವೆ. ನಮ್ಮ ಆಟಿಕೆಗಳು, ನಮ್ಮ ಆಟಿಕೆ ಉದ್ಯಮವನ್ನು ಮರುಸ್ಥಾಪಿಸುವ ಯೋಜನೆ ಕೂಡಾ ಮನದ ಮಾತಿನಿಂದಲೇ ಆರಂಭವಾಯಿತು.  ನಮ್ಮ ಭಾರತೀಯ ತಳಿಯಾದ ದೇಶೀಯ ನಾಯಿಗಳ ಕುರಿತಂತೆ ಅರಿವು ಮೂಡಿಸುವ ಆರಂಭ ಕೂಡಾ ಮನದ ಮಾತಿನಿಂದಲೇ ಆಯಿತಲ್ಲವೇ. ನಾವು ಬಡ ಸಣ್ಣ ಪುಟ್ಟ ಅಂಗಡಿಯವರೊಂದಿಗೆ ಚೌಕಾಸಿ ಮಾಡುವುದಿಲ್ಲ, ಅವರೊಂದಿಗೆ ಜಗಳವಾಡುವುದಿಲ್ಲ ಎಂಬ ಮತ್ತೊಂದು ಅಭಿಯಾನವನ್ನು ಕೂಡಾ ನಾವು ಆರಂಭಿಸಿದೆವು. ಮನೆ ಮನೆಯಲ್ಲಿ ತ್ರಿವರ್ಣ ಧ್ವಜ ಅಭಿಯಾನ ಆರಂಭಿಸಿದಾಗ, ದೇಶವಾಸಿಗಳು ಈ ಸಂಕಲ್ಪದೊಂದಿಗೆ ತಮ್ಮನ್ನು ತಾವು ಸೇರಿಕೊಳ್ಳುವ ವಿಷಯದಲ್ಲಿ ‘ಮನದ ಮಾತು’ ಬಹು ದೊಡ್ಡ ಪಾತ್ರ ವಹಿಸಿತು. ಹೀಗೆ ಪ್ರತಿಯೊಂದು ಉದಾಹರಣೆಯೂ ಸಮಾಜದ ಬದಲಾವಣೆ ತರಲು ಕಾರಣವಾಗಿದೆ. ಪ್ರದೀಪ್ ಸಾಂಗ್ವಾನ್ ಅವರು ಕೂಡಾ ಸಮಾಜಕ್ಕೆ ಪ್ರೇರಣೆಯಾಗುವಂತಹ ಕಾರ್ಯವನ್ನು ಕೈಗೊಂಡಿದ್ದಾರೆ. ‘ಮನದ ಮಾತಿನಲ್ಲಿ’ ನಾವು ಪ್ರದೀಪ್ ಸಾಂಗವಾನ್ ಅವರ ‘ಹೀಲಿಂಗ್ ಹಿಮಾಲಯಾಜ್’ ಅಭಿಯಾನ ಕುರಿತು ಮಾತನಾಡಿದ್ದೆವವು. ಅವರು ನಮ್ಮೊಂದಿಗೆ ದೂರವಾಣಿ ಸಂಭಾಷಣೆಯಲ್ಲಿದ್ದಾರೆ. 

ಮೋದಿ – ಪ್ರದೀಪ್ ಅವರೆ ನಮಸ್ಕಾರ !

ಪ್ರದೀಪ್ – ಸರ್ ಜೈ ಹಿಂದ್.

ಮೋದಿ – ಜೈ ಹಿಂದ್. ಜೈ ಹಿಂದ್ ಸೋದರಾ. ನೀವು ಹೇಗಿದ್ದೀರಿ?

ಪ್ರದೀಪ್ – ಸರ್ ಚೆನ್ನಾಗಿದ್ದೇನೆ. ನಿಮ್ಮ ಧ್ವನಿ ಕೇಳಿ ಮತ್ತಷ್ಟು ಸಂತೋಷವಾಗುತ್ತಿದೆ.

ಮೋದಿ – ನೀವು ಹಿಮಾಲಯದ ಸ್ವಾಸ್ಥ್ಯ ಕುರಿತು ಆಲೋಚಿಸಿದಿರಿ.

ಪ್ರದೀಪ್ – ಹೌದು ಸರ್.

ಮೋದಿ – ಅಭಿಯಾನವನ್ನೂ ಕೈಗೊಂಡಿದ್ದೀರಿ.  ಈಗ ನಿಮ್ಮ ಅಭಿಯಾನ ಹೇಗೆ ನಡೆಯುತ್ತಿದೆ?

ಪ್ರದೀಪ್ – ಬಹಳ ಚೆನ್ನಾಗಿ ನಡೆಯುತ್ತಿದೆ ಸರ್. ನಂಬಿ ಸರ್, ನಾವು ಯಾವ ಕೆಲಸವನ್ನು ಐದು ವರ್ಷಗಳಲ್ಲಿ ಮಾಡುತ್ತಿದ್ದೆವೋ ಅದೇ ಕೆಲಸ  2020 ರ ನಂತರ ಈಗ ಒಂದು ವರ್ಷದಲ್ಲೇ ಆಗಿಬಿಡುತ್ತಿದೆ.

ಮೋದಿ – ಅರೆ ವಾಹ್ !

ಪ್ರದೀಪ್ – ಹೌದು ಹೌದು ಸರ್. ಆರಂಭದಲ್ಲಿ ಬಹಳ ಆತಂಕವಾಗಿತ್ತು. ಜೀವನದಲ್ಲಿ ಇದನ್ನು ಮಾಡಲು ಸಾಧ್ಯವಾಗುತ್ತದೋ ಅಥವಾ ಇಲ್ಲವೋ ಎಂಬ ಹೆದರಿಕೆ ಬಹಳವಿತ್ತು ಆದರೆ ಸ್ವಲ್ಪ ಬೆಂಬಲ ದೊರೆತಿತ್ತು.  ಪ್ರಾಮಾಣಿಕವಾಗಿ ಹೇಳುವುದಾದರೆ,  2020 ರವರೆಗೆ ನಾವು ಬಹಳ ಕಷ್ಟ ಪಟ್ಟಿದ್ದೇವೆ. ಬಹಳ ಕಡಿಮೆ ಜನರು ನಮ್ಮೊಡನೆ ಕೈಜೋಡಿಸಿದ್ದರು  ಮತ್ತು ಬೆಂಬಲ ನೀಡದೇ ಇದ್ದಂತಹ ಜನರು ಕೂಡಾ ಬಹಳಷ್ಟಿದ್ದರು.  ನಮ್ಮ ಪ್ರಚಾರಕ್ಕೆ ಹೆಚ್ಚು ಗಮನ ಕೂಡಾ ನೀಡುತ್ತಿರಲಿಲ್ಲ. ಆದರೆ 2020 ರಲ್ಲಿ ಮನದ ಮಾತಿನಲ್ಲಿ ವಿಷಯ  ಪ್ರಸ್ತಾಪವಾದ ನಂತರ, ಬಹಳಷ್ಟು ಬದಲಾವಣೆಗಳಾದವು.  ಅಂದರೆ ಮೊದಲು ನಾವು ವರ್ಷವೊಂದರಲ್ಲಿ 6-7 ಸ್ವಚ್ಛತಾ ಅಭಿಯಾನ ಕೈಗೊಳ್ಳುತ್ತಿದ್ದೆವು, 10 ಸ್ವಚ್ಛತಾ ಅಭಿಯಾನ ಮಾಡುತ್ತಿದ್ದೆವು. ಇಂದು ನಾವು ದಿನಂಪ್ರತಿ ಬೇರೆ ಬೇರೆ ಪ್ರದೇಶಗಳಿಂದ ಐದು ಟನ್ ತ್ಯಾಜ್ಯ ಸಂಗ್ರಹಿಸುತ್ತಿದ್ದೇವೆ. 

ಮೋದಿ – ಅರೆ ವಾಹ್!

ಪ್ರದೀಪ್ – ನಾನು ಒಂದು ಸಮಯದಲ್ಲಿ ಹೆಚ್ಚುಕಡಿಮೆ ಇದನ್ನು ಬಿಟ್ಟುಬಿಡುವ ಹಂತ ತಲುಪಿದ್ದೆ , ಮನದ ಮಾತಿನಲ್ಲಿ ಈ ಕುರಿತು ಪ್ರಸ್ತಾಪವಾದ ನಂತರ ನನ್ನ ಜೀವನದಲ್ಲಿ ಬಹಳಷ್ಟು ಬದಲಾವಣೆಗಳಾದವು. ನಂತರ ನಾವು ಯೋಚಿಸದೇ ಇದ್ದ ವಿಷಯಗಳೂ ಅಪಾರ ವೇಗ ಪಡೆದುಕೊಂಡವು. ನಮ್ಮಂತಹ ಜನರನ್ನು ನೀವು ಹೇಗೆ ಪತ್ತೆ ಮಾಡುತ್ತೀರಿ? ಎಂದು ತಿಳಿಯದು ಆದರೆ ಸರ್ ನಾನು ಬಹಳ ಕೃತಜ್ಞನಾಗಿದ್ದೇನೆ.  ಇಷ್ಟು ದೂರದ ಪ್ರದೇಶದಲ್ಲಿ ಯಾರು ಕೆಲಸ ಮಾಡುತ್ತಾರೆ, ಹಿಮಾಲಯ ಹೋಗಿ ಅಲ್ಲೇ ಇದ್ದು ನಾವು ಕೆಲಸ ಮಾಡುತ್ತಿದ್ದೇವೆ. ಇಷ್ಟು ಎತ್ತರದ ಪ್ರದೇಶದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಅಲ್ಲಿ ನೀವು ನಮ್ಮನ್ನು ಹುಡುಕಿದ್ದೀರಿ. ನಮ್ಮ ಕೆಲಸವನ್ನು ಪ್ರಪಂಚದ ಎದುರು ತಂದಿರಿ. ನಾನು ನಮ್ಮ ದೇಶದ ಪ್ರಥಮ ಸೇವಕ ಎಂದು ಕರೆದುಕೊಳ್ಳುವ ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದೇನೆ. ಅಂದು ಮತ್ತು ಇಂದು ಕೂಡಾ ನನಗೆ ಇದು ಬಹಳ ಭಾವನಾತ್ಮಕ ಕ್ಷಣವಾಗಿದೆ ಸರ್. ನನ್ನ ಪಾಲಿಗೆ ಇದಕ್ಕಿಂತ ಹೆಚ್ಚಿನ ಸೌಭಾಗ್ಯದ ವಿಷಯ ಬೇರೊಂದಿಲ್ಲ.

ಮೋದಿ – ಪ್ರದೀಪ್ ಅವರೆ! ನೀವು ಹಿಮಾಲಯದ ಶಿಖರಗಳಲ್ಲಿ ನಿಜವಾದ ಅರ್ಥದಲ್ಲಿ ಸಾಧನೆ ಮಾಡುತ್ತಿರುವಿರಿ ಮತ್ತು ಈಗ ನಿಮ್ಮ ಹೆಸರು ಕೇಳುತ್ತಲೇ ಜನರಿಗೆ ನೀವು ಪರ್ವತಗಳ ಸ್ವಚ್ಛತಾ ಅಭಿಯಾನದಲ್ಲಿ ಹೇಗೆ ತೊಡಗಿಕೊಂಡಿದ್ದೀರಿ ಎನ್ನುವುದು ನೆನಪಿಗೆ ಬರುತ್ತದೆ ಎಂಬ ಬಲವಾದ ನಂಬಿಕೆ ನನಗಿದೆ.

ಪ್ರದೀಪ್ – ಹೌದು ಸರ್.

ಮೋದಿ – ನೀವು ಹೇಳಿದ ಹಾಗೆ ಈಗ ತಂಡ ದೊಡ್ಡದಾಗುತ್ತಾ ಬರುತ್ತಿದೆ ಮತ್ತು ನೀವು ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರತಿದಿನ ಕೆಲಸ ಮಾಡುತ್ತಿರುವಿರಿ.

ಪ್ರದೀಪ್ – ಹೌದು ಸರ್

ಮೋದಿ – ನನಗೆ ಪೂರ್ಣ ವಿಶ್ವಾಸವಿದೆ, ನಿಮ್ಮ ಇಂತಹ ಪ್ರಯತ್ನಗಳಿಂದ, ಅದರ ಕುರಿತ ಮಾತುಕತೆಯಿಂದ, ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪರ್ವತಾರೋಹಿಗಳೆಲ್ಲಾ ಫೋಟೋ ಪೋಸ್ಟ್ ಮಾಡಲಾರಂಭಿಸಿದ್ದಾರೆ.

ಪ್ರದೀಪ್ – ಹೌದು ಸರ್.  ನಿಜ.

ಮೋದಿ – ಇದು ಬಹಳ ಒಳ್ಳೆಯ ವಿಚಾರ, ನಿಮ್ಮಂತಹ ಸ್ನೇಹಿತರ ಪ್ರಯತ್ನಗಳ ಕಾರಣದಿಂದಾಗಿ ತ್ಯಾಜ್ಯ ಕೂಡಾ ಸಂಪತ್ತು, (ಕಸದಿಂದ ರಸ) ಎಂಬುದು ಜನರ ಮನಸ್ಸಿನಲ್ಲಿ ಈಗ ಸ್ಥಿರವಾಗಿದೆ. ಹಾಗೆಯೇ ಪರಿಸರದ ರಕ್ಷಣೆಯೂ ಆಗುತ್ತಿದೆ ಮತ್ತು ನಮ್ಮ ಹೆಮ್ಮೆಯೆನಿಸಿರುವ ಹಿಮಾಲಯದ ಸ್ವಾಸ್ಥ್ಯ ಸಂರಕ್ಷಣೆಗೆ, ನಿರ್ವಹಣೆಗೆ ನಾಗರಿಕರು ಕೂಡಾ ಕೈಜೋಡಿಸುತ್ತಿದ್ದಾರೆ.  ಪ್ರದೀಪ್ ಅವರೆ ನನಗೆ ಬಹಳ ಸಂತೋಷವೆನಿಸುತ್ತಿದೆ. ಅನೇಕಾನೇಕ ಧನ್ಯವಾದ ಸೋದರಾ.

ಪ್ರದೀಪ್ – ಧನ್ಯವಾದ ಸರ್. ಬಹಳ ಧನ್ಯವಾದ. ಜೈಹಿಂದ್.

ಸ್ನೇಹಿತರೆ, ಇಂದು ದೇಶದಲ್ಲಿ ಪ್ರವಾಸೋದ್ಯಮ ಬಹಳ ವೇಗವಾಗಿ ಅಭಿವೃದ್ಧಿಹೊಂದುತ್ತಿದೆ.  ನಮ್ಮ ದೇಶಧ ಈ ಪ್ರಾಕೃತಿಕ ಸಂಪನ್ಮೂಲವಿರಲಿ, ನದಿಗಳಿರಲಿ, ಬೆಟ್ಟಗಳಿರಲಿ, ಕೆರೆ ಸರೋವರಗಳಿರಲಿ, ಅಂತೆಯೇ ನಮ್ಮ ಪುಣ್ಯ ಕ್ಷೇತ್ರಗಳಿರಲಿ, ಅವುಗಳನ್ನು ಸ್ವಚ್ಛವಾಗಿರಿಸುವುದು ಅತ್ಯಗತ್ಯವಾಗಿದೆ. ಇದು ಪ್ರವಾಸೋದ್ಯಮಕ್ಕೆ ಬಹಳ ನೆರವಾಗುತ್ತದೆ. ಪ್ರವಾಸೋದ್ಯದಲ್ಲಿ ಸ್ವಚ್ಛತೆಯೊಂದಿಗೆ ನಾವು Incredible India movement  ಬಗ್ಗೆ ಕೂಡಾ ಅನೇಕ ಬಾರಿ ಮಾತುಕತೆ ನಡೆಸಿದ್ದೇವೆ.  ಈ ಆಂದೋಲನದಿಂದ ಜನರಿಗೆ ತಮ್ಮ ಸುತ್ತ ಮುತ್ತಲು ಇರುವಂತಹ ಅನೇಕ ಸ್ಧಳಗಳ ಬಗ್ಗೆ ಮೊದಲ ಬಾರಿಗೆ ತಿಳಿದು ಬಂದಿತು. ನಾವು ವಿದೇಶ ಪ್ರವಾಸ ಮಾಡುವುದಕ್ಕೆ ಮೊದಲು ನಮ್ಮ ದೇಶದಲ್ಲೇ ಇರುವಂತಹ ಪ್ರವಾಸಿ ತಾಣಗಳ ಪೈಕಿ ಕನಿಷ್ಠ 15 ತಾಣಗಳಿಗೆ ಖಂಡಿತವಾಗಿಯೂ ಹೋಗಬೇಕೆಂದು ನಾನು ಯಾವಾಗಲೂ ಹೇಳುತ್ತಿರುತ್ತೇನೆ. ಈ ಪ್ರವಾಸಿ ತಾಣಗಳು ನೀವು ವಾಸ ಮಾಡುತ್ತಿರುವ ರಾಜ್ಯದಲ್ಲೇ ಇರಬೇಕೆಂದಿಲ್ಲ, ನಿಮ್ಮ ರಾಜ್ಯದ ಹೊರಗೆ ಇರುವ ಬೇರೊಂದು ರಾಜ್ಯದಲ್ಲಿರಬೇಕು. ಅಂತೆಯೇ ನಾವು ಸ್ವಚ್ಛ ಸಿಯಾಚಿನ್, ಏಕ ಬಳಕೆ ಪ್ಲಾಸ್ಟಿಕ್ ಹಾಗೂ ಇ-ತ್ಯಾಜ್ಯದಂತಹ ಗಂಭೀರ ವಿಷಯಗಳ ಬಗ್ಗೆ ಕೂಡಾ ಸತತವಾಗಿ ಮಾತನಾಡಿದ್ದೇವೆ.  ಇಂದು ಇಡೀ ವಿಶ್ವ ಪರಿಸರಕ್ಕೆ ಸಂಬಂಧಿಸಿದಂತೆ ಇಷ್ಟೊಂದು ಸಮಸ್ಯೆ ಎದುರಿಸುತ್ತಿರುವಾಗ, ಅದನ್ನು ಪರಿಹರಿಸುವ ನಿಟ್ಟಿನಲ್ಲಿ  ಮನದ ಮಾತಿನ ಈ ಪ್ರಯತ್ನ ಬಹಳ ಮುಖ್ಯವಾಗಿದೆ.

ಸ್ನೇಹಿತರೇ, ‘ಮನದ ಮಾತಿಗೆ’ ಸಂಬಂಧಿಸಿದಂತೆ ನನಗೆ ಈ ಬಾರಿ ಮತ್ತೊಂದು ಮತ್ತು ವಿಶೇಷ ಸಂದೇಶವೊಂದು UNESCO ದ DG ಆದ್ರೇ ಅಜುಲೇ (Audrey Azoulay) ಅವರಿಂದ ಬಂದಿದೆ. ಅವರು ಎಲ್ಲಾ ದೇಶವಾಸಿಗಳಿಗೆ ನೂರು ಸಂಚಿಕೆಗಳ ಈ ಅದ್ಭುತ ಪಯಣಕ್ಕೆ ಶುಭ ಹಾರೈಸಿದ್ದಾರೆ.  ಅದರೊಂದಿಗೆ, ಅವರು ಕೆಲವು ಪ್ರಶ್ನೆಗಳನ್ನು ಕೂಡಾ ಕೇಳಿದ್ದಾರೆ. ಬನ್ನಿ ಮೊದಲು UNESCO ದ  DG ಯವರ ಮನದ ಮಾತುಗಳನ್ನು ಆಲಿಸೋಣ.

                                       #ಆಡಿಯೋ (UNESCO DG)#

 

ಡಿಜಿ ಯುನೆಸ್ಕೊ: ನಮಸ್ತೆ ಗೌರವಾನ್ವಿತ, ಆತ್ಮೀಯ ಪ್ರಧಾನಿಯವರೆ, ಮನದ ಮಾತು ರೇಡಿಯೋ ಪ್ರಸಾರದ 100 ನೇ ಸಂಚಿಕೆಯ ಭಾಗವಾಗುವ ಈ ಅವಕಾಶಕ್ಕಾಗಿ ಯುನೆಸ್ಕೋ ಪರವಾಗಿ ನಿಮಗೆ ಧನ್ಯವಾದ ಹೇಳುತ್ತಿದ್ದೇನೆ. ಯುನೆಸ್ಕೊ ಮತ್ತು ಭಾರತ ಎರಡೂ ದೀರ್ಘಕಾಲೀನ ಸಮಾನ ಇತಿಹಾಸ ಹೊಂದಿವೆ. ಶಿಕ್ಷಣ, ವಿಜ್ಞಾನ, ಸಂಸ್ಕೃತಿ, ಮತ್ತು ಮಾಹಿತಿ ಈ ಎಲ್ಲಾ ವಲಯಗಳಲ್ಲಿ ನಾವು ಒಟ್ಟಾಗಿ ಬಲವಾದ ಪಾಲುದಾರಿಕೆ ಹೊಂದಿದ್ದೇವೆ. ಶಿಕ್ಷಣದ ಪ್ರಾಮುಖ್ಯತೆ ಕುರಿತು ಮಾತನಾಡುವುದಕ್ಕೆ ನಾನು ಇಂದಿನ ಈ ಅವಕಾಶ ಬಳಸಿಕೊಳ್ಳುತ್ತೇನೆ. 2030 ರ ವೇಳೆಗೆ ವಿಶ್ವದ ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ದೊರೆಯುವುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ತನ್ನ ಸದಸ್ಯ ರಾಷ್ಟ್ರಗಳೊಂದಿಗೆ ಯುನೆಸ್ಕೊ ಕೆಲಸ ಮಾಡುತ್ತಿದೆ. ವಿಶ್ವದಲ್ಲಿ ಅತಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ದೇಶವಾಗಿರುವ ನೀವು, ಈ ಉದ್ದೇಶ ಸಾಧನೆಗೆ ಭಾರತದ ಮಾರ್ಗಗಳನ್ನು ದಯವಿಟ್ಟು ವಿವರಿಸುವಿರಾ. ಸಂಸ್ಕೃತಿಗಳನ್ನು ಬೆಂಬಲಿಸಲು ಮತ್ತು ಪರಂಪರೆಯನ್ನು ರಕ್ಷಿಸಲು ಯುನೆಸ್ಕೋ ಕೂಡಾ ಕೆಲಸ ಮಾಡುತ್ತದೆ ಮತ್ತು ಭಾರತ ಈ ವರ್ಷ ಜಿ20 ಅಧ್ಯಕ್ಷತೆ ವಹಿಸಿದೆ. ಈ ಸಮಾರಂಭದಲ್ಲಿ ಭಾಗವಹಿಸಲು ಜಾಗತಿಕ ಮುಖಂಡರು ನವದೆಹಲಿಗೆ ಆಗಮಿಸಲಿದ್ದಾರೆ. ಮಾನ್ಯರೇ, ಅಂತಾರಾಷ್ಟ್ರೀಯ ಕಾರ್ಯಸೂಚಿಯಲ್ಲಿ ಸಂಸ್ಕೃತಿ ಮತ್ತು ಶಿಕ್ಷಣವನ್ನು ಭಾರತ ಅಗ್ರಸ್ಥಾನದಲ್ಲಿ ಯಾವರೀತಿ ಇರಿಸಲು ಬಯಸುತ್ತದೆ? ಈ ಅವಕಾಶಕ್ಕಾಗಿ ನಾನು ಮತ್ತೊಮ್ಮೆ ಧನ್ಯವಾದ ಅರ್ಪಿಸುತ್ತಿದ್ದೇನೆ ಮತ್ತು ಭಾರತೀಯರಿಗೆ ನಿಮ್ಮ ಮೂಲಕ ನನ್ನ ಶುಭಾಶಯಗಳನ್ನು ಕೋರುತ್ತಿದ್ದೇನೆ. ಶೀಘ್ರದಲ್ಲೇ ಭೇಟಿಯಾಗೋಣ. ಧನ್ಯವಾದ.

ಪ್ರಧಾನಿ ಮೋದಿ: ಧನ್ಯವಾದ ಮಾನ್ಯರೇ. ಮನದ ಮಾತು ಕಾರ್ಯಕ್ರಮದ 100 ನೇ ಸಂಚಿಕೆಯಲ್ಲಿ ನಿಮ್ಮೊಂದಿಗೆ ಸಂವಾದ ನಡೆಸಿದ್ದು ನನಗೆ ಬಹಳ ಸಂತೋಷವೆನಿಸಿದೆ. ಶಿಕ್ಷಣ ಮತ್ತು ಸಂಸ್ಕೃತಿಯ ಪ್ರಮುಖ ವಿಷಯಗಳ ಕುರಿತು ನೀವು ಮಾತನಾಡಿದ್ದು ನನಗೆ ಕೂಡಾ ಸಂತಸವೆನಿಸಿದೆ. 

ಸ್ನೇಹಿತರೆ, UNESCO ದ DG ಯವರು, Education ಮತ್ತು Cultural Preservation, ಅಂದರೆ ಶಿಕ್ಷಣ ಮತ್ತು ಸಂಸ್ಕೃತಿ ಸಂರಕ್ಷಣೆಯ ಕುರಿತಂತೆ ಭಾರತದ ಪ್ರಯತ್ನಗಳ ಬಗ್ಗೆ ತಿಳಿದುಕೊಳ್ಳಲು ಬಯಸಿದ್ದಾರೆ. ಇವೆರಡೂ ವಿಷಯಗಳು ಮನದ ಮಾತಿನ ಅತ್ಯಂತ  ನೆಚ್ಚಿನ ವಿಷಯಗಳೆನಿಸಿವೆ.

ಶಿಕ್ಷಣ ಕುರಿತ ಮಾತಾಗಿರಲಿ, ಅಥವಾ ಸಂಸ್ಕೃತಿ ಕುರಿತಾಗಿರಲಿ, ಅವುಗಳ ಸಂರಕ್ಷಣೆಯಾಗಿರಲಿ ಅಥವಾ ಪ್ರಗತಿಯಾಗಿರಲಿ, ಇದು ಭಾರತದ ಪ್ರಾಚೀನ ಸಂಪ್ರದಾಯವಾಗಿದೆ. ಈ ನಿಟ್ಟಿನಲ್ಲಿ ದೇಶದಲ್ಲಿ ಇಂದು ನಡೆಯುತ್ತಿರುವ ಕೆಲಸ ಕಾರ್ಯಗಳು ನಿಜಕ್ಕೂ ಬಹಳ ಪ್ರಶಂಸನೀಯವಾಗಿವೆ. ರಾಷ್ಟ್ರೀಯ ಶಿಕ್ಷಣ ನೀತಿ, ಅಥವಾ ಸ್ಥಳೀಯ ಭಾಷೆಗಳಲ್ಲಿ ಶಿಕ್ಷಣ ಪಡೆಯುವ ಆಯ್ಕೆ,  ಶಿಕ್ಷಣದಲ್ಲಿ ತಂತ್ರಜ್ಞಾನದ ಏಕೀಕರಣ, ನಿಮಗೆ ಇಂತಹ ಅನೇಕ ಪ್ರಯತ್ನಗಳು ಕಂಡುಬರುತ್ತವೆ. ಬಹಳ ವರ್ಷಗಳ ಹಿಂದೆ ಗುಜರಾತ್ ನಲ್ಲಿ ಉತ್ತಮ ಶಿಕ್ಷಣ ನೀಡುವ ಮತ್ತು ಅರ್ಧದಲ್ಲೇ  ಶಿಕ್ಷಣ ನಿಲ್ಲಿಸಿಬಿಡುವವರ ಪ್ರಮಾಣ ಕಡಿಮೆ ಮಾಡುವುದಕ್ಕಾಗಿ, ‘ಗುಣೋತ್ಸವ ಮತ್ತು ಶಾಲಾ ಪ್ರವೇಶೋತ್ಸವ ದಂತಹ ಕಾರ್ಯಕ್ರಮ ಜನರ ಪಾಲುದಾರಿಕೆಯಿಂದಾಗಿ ಒಂದು ಅದ್ಭುತ ಉದಾಹರಣೆಯಾಯಿತು.  ನಿಸ್ವಾರ್ಥ ಮನೋಭಾವದಿಂದ ಶಿಕ್ಷಣಕ್ಕಾಗಿ ಕೆಲಸ ಮಾಡುವ ಇಂತಹ ಅದೆಷ್ಟೋ ಜನರ ಪ್ರಯತ್ನಗಳನ್ನು ನಾವು ‘ಮನದ ಮಾತು’ ಕಾರ್ಯಕ್ರಮದಲ್ಲಿ Highlight ಮಾಡಿದ್ದೇವೆ. ನಿಮಗೆ ನೆನಪಿರಬಹುದು, ಒಡಿಶಾದಲ್ಲಿ ತಳ್ಳುವ ಗಾಡಿಯಲ್ಲಿ ಚಹಾ ಮಾರಾಟ ಮಾಡುತ್ತಿದ್ದ ದಿವಂಗತ ಡಿ. ಪ್ರಕಾಶ್ ರಾವ್ ಅವರ ಬಗ್ಗೆ ಮಾತನಾಡಿದ್ದೆವು. ಇವರು ಬಡ ಮಕ್ಕಳಿಗೆ ಶಿಕ್ಷಣ ಒದಗಿಸುವ ಅಭಿಯಾನದಲ್ಲಿ ತೊಡಗಿಕೊಂಡಿದ್ದರು. ಜಾರ್ಖಂಡ್ ನಲ್ಲಿ ಹಳ್ಳಿಯಲ್ಲಿ ಡಿಜಿಟಲ್ ಗ್ರಂಥಾಲಯ ನಡೆಸುವ ಸಂಜಯ್ ಕಶ್ಯಪ್ ಇರಬಹುದು, ಕೋವಿಡ್ ಸಮಯದಲ್ಲಿ ಇ-ಲರ್ನಿಂಗ್ ಮುಖಾಂತರ ಹಲವಾರು ಮಕ್ಕಳಿಗೆ ನೆರವಾದಂತಹ ಹೇಮಲತಾ ಎನ್ ಕೆ ಇರಬಹುದು, ಇಂತಹ ಅನೇಕ ಶಿಕ್ಷಕರ ಉದಾಹರಣೆಗಳನ್ನು ನಾವು ‘ಮನದ ಮಾತಿನಲ್ಲಿ’ ನೀಡಿದ್ದೇವೆ.  ನಾವು ಸಾಂಸ್ಕೃತಿಕ ರಕ್ಷಣೆಯ ಪ್ರಯತ್ನಗಳ ಬಗ್ಗೆ ಕೂಡಾ ಮನದ ಮಾತಿನಲ್ಲಿ ಸಾಕಷ್ಟು ಬಾರಿ ಮಾತನಾಡಿದ್ದೇವೆ.

ಲಕ್ಷದ್ವೀಪದ Kummel Brothers Challengers Club ಇರಬಹುದು, ಅಥವಾ ಕರ್ನಾಟಕದ ಕ್ವೇಮ್ ಶ್ರೀ ಅವರ ಕಲಾಚೇತನದಂತಹ ವೇದಿಕೆಯಿರಬಹುದು, ದೇಶದ ಮೂಲೆ ಮೂಲೆಗಳಿಂದ ಜನರು ನನಗೆ ಪತ್ರ ಬರೆದು ಹಲವು ಉದಾಹರಣೆಗಳನ್ನು ಕಳುಹಿಸಿಕೊಡುತ್ತಾರೆ. ದೇಶ ಭಕ್ತಿ ಕುರಿತ ಹಾಡು, ಜೋಗುಳ ಮತ್ತು ರಂಗೋಲಿ ಸ್ಪರ್ಧೆ ಈ ಮೂರು ಸ್ಪರ್ಧೆಗಳ ಕುರಿತು ಕೂಡಾ ನಾವು ಮಾತನಾಡಿದ್ದೆವು. ನಿಮಗೆ ನೆನಪಿರಬಹುದು ಒಂದು ಬಾರಿ ನಾವು ದೇಶಾದ್ಯಂತ ಕತೆ ಹೇಳುವವರಿಂದ ಕಥೆ ಹೇಳುತ್ತಾ ಶಿಕ್ಷಣ ನೀಡುವಂತಹ ಭಾರತೀಯ ವಿಧಾನಗಳ ಬಗ್ಗೆ ಕೂಡಾ ಮಾತನಾಡಿದ್ದೆವು. ಸಾಮೂಹಿಕ ಪ್ರಯತ್ನದಿಂದ ದೊಡ್ಡ ದೊಡ್ಡ ಬದಲಾವಣೆಗಳನ್ನು ತರಬಹುದು ಎನ್ನುವುದು ನನ್ನ ಅಚಲ ನಂಬಿಕೆಯಾಗಿದೆ. ಈ ವರ್ಷ ನಾವು ಸ್ವಾತಂತ್ರ್ಯದ ಅಮೃತ ಕಾಲದಲ್ಲಿ ಮುಂದೆ ಸಾಗುತ್ತಿದ್ದೇವೆ, ಜಿ 20 ಅಧ್ಯಕ್ಷತೆಯನ್ನೂ ವಹಿಸುತ್ತಿದ್ದೇವೆ. ಶಿಕ್ಷಣದೊಂದಿಗೆ ವೈವಿಧ್ಯಮಯ ಜಾಗತಿಕ ಸಂಸ್ಕೃತಿಗಳನ್ನು ಸಮೃದ್ಧಿಗೊಳಿಸುವ ನಮ್ಮ ಸಂಕಲ್ಪ ಮತ್ತಷ್ಟು ಬಲಿಷ್ಠಗೊಳ್ಳಲು ಇದು ಕೂಡಾ ಒಂದು ಕಾರಣವಾಗಿದೆ.

ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ಉಪನಿಷತ್ತುಗಳಲ್ಲಿ ಒಂದು ಮಂತ್ರ ಶತಮಾನಗಳಿಂದ ನಮ್ಮ ಮನಸ್ಸಿಗೆ ಪ್ರೇರಣೆ ನೀಡುತ್ತಾ ಬಂದಿದೆ.

ಚರೈವೇತಿ ಚರೈವೇತಿ ಚರೈವೇತಿ

ಚಲತೇ ರಹೋ – ಚಲತೇ ರಹೋ – ಚಲತೇ ರಹೋ

(चरैवेति चरैवेति चरैवेति |

चलते रहो-चलते रहो-चलते रहो |)

ನಾವು ಇಂದು ಇದೇ ಮುಂದೆ ಸಾಗಿ ಮುಂದೆ ಸಾಗಿ ಎನ್ನುವ ಭಾವನೆಯೊಂದಿಗೆ ಮನದ ಮಾತಿನ 100 ನೇ ಸಂಚಿಕೆ ಪೂರ್ಣಗೊಳಿಸುತ್ತಿದ್ದೇವೆ. ಭಾರತದ ಸಾಮಾಜಿಕ ರಚನೆಯನ್ನು ಬಲಿಷ್ಠಗೊಳಿಸುವಲ್ಲಿ, ಮನದ ಮಾತು ಯಾವುದೇ ಹಾರದ ದಾರ ಮಣಿಗಳನ್ನು ಹಿಡಿದಿಟ್ಟುಕೊಳ್ಳುವ ರೀತಿಯಲ್ಲಿ, ಪ್ರತಿಯೊಬ್ಬರನ್ನೂ ಒಂದುಗೂಡಿಸುತ್ತದೆ. ಪ್ರತಿಯೊಂದು ಸಂಚಿಕೆಯಲ್ಲಿ ದೇಶವಾಸಿಗಳ ಸೇವೆ ಮತ್ತು ಸಾಮರ್ಥ್ಯ ಇತರರಿಗೆ  ಸ್ಫೂರ್ತಿಯಾಗುತ್ತದೆ. ಈ ಕಾರ್ಯಕ್ರಮದಲ್ಲಿ ಪ್ರತಿ ದೇಶವಾಸಿ ಮತ್ತೊಬ್ಬ ದೇಶವಾಸಿಗೆ ಪ್ರೇರಣೆಯಾಗುತ್ತಾರೆ. ಒಂದು ರೀತಿಯಲ್ಲಿ ಮನದ ಮಾತಿನ ಪ್ರತಿ ಸಂಚಿಕೆಯೂ ಮುಂದಿನ ಸಂಚಿಕೆಗೆ ಭದ್ರ ಬುನಾದಿ ಸಿದ್ಧಪಡಿಸುತ್ತದೆ. ‘ಮನದ ಮಾತು’ ಯಾವಾಗಲೂ ಸದ್ಭಾವನೆ, ಸೇವಾ ಮನೋಭಾವ ಮತ್ತು ಕರ್ತವ್ಯ ಮನೋಭಾವದಿಂದ ಮುಂದೆ ಸಾಗಿ ಬಂದಿದೆ. ಸ್ವಾತಂತ್ರ್ಯದ ಅಮೃತ ಕಾಲದಲ್ಲಿ ಇದೇ ಸಕಾರಾತ್ಮಕ ಭಾವನೆ ದೇಶವನ್ನು ಮುಂದೆ ಕರೆದೊಯ್ಯಲಿದೆ, ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ ಮತ್ತು ಅಂದು ಆರಂಭಗೊಂಡ ಮನದ ಮಾತು ಇಂದು ದೇಶದ ಹೊಸ ಪರಂಪರೆಗೆ ನಾಂದಿಯಾಗಿದೆ ಎಂದು ತಿಳಿದು ನನಗೆ ಸಂತಸವೆನಿಸುತ್ತಿದೆ. ಈ ಪರಂಪರೆಯಿಂದ ಪ್ರತಿಯೊಬ್ಬರ ಪ್ರಯತ್ನವನ್ನೂ ಅರಿಯುವ ಅವಕಾಶ ದೊರೆತಿದೆ.

ಸ್ನೇಹಿತರೇ, ಅತ್ಯಂತ ಧೈರ್ಯದಿಂದ ಈ ಇಡೀ ಕಾರ್ಯಕ್ರಮ ರೆಕಾರ್ಡ್ ಮಾಡುವಂತಹ ಆಕಾಶವಾಣಿಯ ಸ್ನೇಹಿತರಿಗೆ ಕೂಡಾ ನಾನು ಇಂದು ಧನ್ಯವಾದ ಹೇಳುತ್ತಿದ್ದೇನೆ. ಬಹಳ ಕಡಿಮೆ ಸಮಯದಲ್ಲಿ, ಬಹಳ ವೇಗವಾಗಿ, ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಅನುವಾದ ಮಾಡುವಂತಹ ಅನುವಾದಕರಿಗೆ ಕೂಡಾ ನಾನು ಕೃತಜ್ಞನಾಗಿದ್ದೇನೆ. ನಾನು ದೂರದರ್ಶನ ಮತ್ತು MyGov ನ ಸ್ನೇಹಿತರಿಗೆ ಕೂಡಾ ಧನ್ಯವಾದ ಹೇಳುತ್ತಿದ್ದೇನೆ. ಮನ್ ಕಿ ಬಾತ್ ಕಾರ್ಯಕ್ರಮವನ್ನು ವಾಣಿಜ್ಯ ವಿರಾಮ ಇಲ್ಲದೇ ಪ್ರಸಾರ ಮಾಡುವ ದೇಶಾದ್ಯಂತದ ಟಿವಿ ವಾಹಿನಿಗಳಿಗೆ, ವಿದ್ಯುನ್ಮಾನ ಮಾಧ್ಯಮದ ಮಿತ್ರರಿಗೂ ನಾನು ಕೃತಜ್ಞನಾಗಿದ್ದೇನೆ. ಕೊನೆಯದಾಗಿ ಮನದ ಮಾತಿನ ಚುಕ್ಕಾಣಿ ಹಿಡಿದಿರುವ, ನಿಭಾಯಿಸುತ್ತಿರುವ ಭಾರತದ ಜನರಿಗೆ, ಭಾರತದ ಮೇಲೆ ವಿಶ್ವಾಸ ಇರಿಸಿರುವ ಎಲ್ಲರಿಗೂ ನಾನು ನನ್ನ ಕೃತಜ್ಞತೆ ವ್ಯಕ್ತ ಪಡಿಸುತ್ತಿದ್ದೇನೆ. ಇವೆಲ್ಲವೂ ನಿಮ್ಮೆಲ್ಲರ ಪ್ರೇರಣೆ, ಸ್ಫೂರ್ತಿ ಮತ್ತು ಶಕ್ತಿಯಿಂದಲೇ ಸಾಧ್ಯವಾಯಿತು.

ಸ್ನೇಹಿತರೇ, ನನ್ನ ಮನದಲ್ಲಿ ಇಂದು ಇನ್ನೂ ಬಹಳ ಹೇಳಬೇಕೆಂಬ ಆಸೆ ಇದೆ ಆದರೆ ಸಮಯ ಮತ್ತು ಪದಗಳು ಎರಡೂ ಕಡಿಮೆ ಎನಿಸುತ್ತಿದೆ. ಆದರೂ ನೀವೆಲ್ಲರೂ ನನ್ನ ಅನಿಸಿಕೆಗಳನ್ನು ಅರ್ಥ ಮಾಡಿಕೊಳ್ಳುತ್ತೀರಿ, ನನ್ನ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತೀರಿ ಎಂಬ ನಂಬಿಕೆ ನನಗಿದೆ. ನಿಮ್ಮ ಕುಟುಂಬದ ಓರ್ವ ಸದಸ್ಯನ ರೂಪದಲ್ಲಿ ಮನದ ಮಾತಿನ ಮುಖಾಂತರ ನಿಮ್ಮೊಂದಿಗಿದ್ದೇನೆ. ನಿಮ್ಮ ನಡುವೆಯೇ ಇರುತ್ತೇನೆ. ಮುಂದಿನ ತಿಂಗಳು ನಾವು ಪುನಃ ಭೇಟಿಯಾಗೋಣ. ಮತ್ತೊಮ್ಮೆ ಹೊಸ ವಿಚಾರಗಳೊಂದಿಗೆ, ಹೊಸ ಮಾಹಿತಿಯೊಂದಿಗೆ ದೇಶವಾಸಿಗಳ ಯಶಸ್ಸನ್ನು ಆಚರಿಸೋಣ. ಅಲ್ಲಿಯವರೆಗೆ ನನಗೆ ಅನುಮತಿ ನೀಡಿ ಹಾಗೆಯೇ ನಿಮ್ಮ ಹಾಗೂ ನಿಮ್ಮವರ ಬಗ್ಗೆ ಕಾಳಜಿ ವಹಿಸಿ. ಅನೇಕಾನೇಕ ಧನ್ಯವಾದ. ನಮಸ್ಕಾರ.

*****

 

 



(Release ID: 1921968) Visitor Counter : 180