ಗೃಹ ವ್ಯವಹಾರಗಳ ಸಚಿವಾಲಯ

 ಬೆಂಗಳೂರಿನಲ್ಲಿಂದು 'ಮಾದಕವಸ್ತು ಕಳ್ಳಸಾಗಣೆ ಮತ್ತು ರಾಷ್ಟ್ರೀಯ ಭದ್ರತೆ' ಕುರಿತ ಪ್ರಾದೇಶಿಕ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ


ಮಾದಕ ದ್ರವ್ಯ ಮುಕ್ತ ಭಾರತವನ್ನು ನಿರ್ಮಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಸರ್ಕಾರ ಮಾದಕದ್ರವ್ಯಗಳ ವಿರುದ್ಧ 'ಶೂನ್ಯ ಸಹಿಷ್ಣುತೆ' ನೀತಿಯನ್ನು ಅಳವಡಿಸಿಕೊಂಡಿದೆ

ಮಾದಕ ವಸ್ತು ವಿರುದ್ಧದ ಹೋರಾಟ ಕೇವಲ ಸರ್ಕಾರದ ಹೋರಾಟವಲ್ಲ, ಇದು ಮಾದಕವಸ್ತುಗಳ ವಿರುದ್ಧದ ಜನರ ಹೋರಾಟವೂ ಆಗಿದೆ.

ಕೇಂದ್ರ ಗೃಹ ಸಚಿವರ ಸಮ್ಮುಖದಲ್ಲಿ 1235 ಕೋಟಿ ರೂ.ಗಳ ಮೌಲ್ಯದ 9,298 ಕೆಜಿ ಮಾದಕವಸ್ತುಗಳ ನಾಶ

ಜೂನ್ 01, 2022 ರಿಂದ ಪ್ರಾರಂಭವಾದ 75 ದಿನಗಳ ಅಭಿಯಾನದಲ್ಲಿ, 75,000 ಕೆಜಿ ಮಾದಕವಸ್ತುವನ್ನು ನಾಶಪಡಿಸುವ ಗುರಿಯನ್ನು ಹೊಂದಲಾಗಿತ್ತು, ಆದರೆ ಈವರೆಗೆ 8,409 ಕೋಟಿ ರೂ.ಗಳ ಮೌಲ್ಯದ ಒಟ್ಟು 5,94,620 ಕೆಜಿ ಮಾದಕವಸ್ತುಗಳನ್ನು ನಾಶಪಡಿಸಲಾಗಿದ್ದು, ಗುರಿಗಿಂತ ಹಲವು ಪಟ್ಟು ಹೆಚ್ಚಾಗಿದೆ

ಗೃಹ ವ್ಯವಹಾರಗಳ ಸಚಿವಾಲಯವು ಮಾದಕವಸ್ತುಗಳ ವಿಷಯಗಳಲ್ಲಿ 'ಅಡಿಯಿಂದ ಮುಡಿಯವರೆಗೆ' ಮತ್ತು 'ಮುಡಿಯಿಂದ ಅಡಿವರೆಗೆ' ವಿಧಾನವನ್ನು ಅಳವಡಿಸಿಕೊಳ್ಳುತ್ತಿದ್ದು, ಇತರ ರಾಜ್ಯಗಳು ಮತ್ತು ಸಂಸ್ಥೆಗಳು ಸಹ ಮಾದಕವಸ್ತುಗಳ ಪಿಡುಗನ್ನು ಸಂಪೂರ್ಣವಾಗಿ ತೊಡೆದುಹಾಕಲು ಇದೇ ವಿಧಾನವನ್ನು ಅಳವಡಿಸಿಕೊಳ್ಳಬೇಕು

ಮಾದಕ ವಸ್ತುಗಳು ದೇಶದ ಭದ್ರತೆ ಮತ್ತು ಭವಿಷ್ಯದ ಶತ್ರುಗಳಾಗಿವೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ, ಗೃಹ ವ್ಯವಹಾರಗಳ ಸಚಿವಾಲಯವು ಈ ಪಿಡುಗನ್ನು ಸಂಪೂರ್ಣವಾಗಿ ತೊಡೆದುಹಾಕಲು ಸಂಪೂರ್ಣವಾಗಿ ಬದ್ಧವಾಗಿದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಸರ್ಕಾರವು ದೇಶದಿಂದ ಮಾದಕವಸ್ತುಗಳನ್ನು ನಿರ್ಮೂಲನೆ ಮಾಡುವ ಅಭಿಯಾನದಲ್ಲಿ ನಾಲ್ಕು ಪ್ರಮುಖ ಸ್ತಂಭಗಳನ್ನು ಹೊಂದಿದೆ: ಮಾದಕವಸ್ತುಗಳ ಪತ್ತೆ, ಜಾಲದ ನಾಶ, ಅಪರಾಧಿಗಳ ಬಂಧನ ಮತ್ತು ಮಾದಕ ವ್ಯಸನಿಗಳ ಪುನರ್ವಸತಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ಮಾದಕದ್ರವ್ಯಗಳ ವಿರುದ್ಧ 'ಸಂಪೂರ್ಣ ಸರ್ಕಾರದ ವಿಧಾನ'ವನ್ನು ಅಳವಡಿಸಿಕೊಂಡಿದೆ ಮತ್ತು ಎಲ್ಲ ಇಲಾಖೆಗಳು ಮತ್ತು ಸಂಸ್ಥೆಗಳ ನಡುವೆ ಸಹಕಾರ, ಸಮನ್ವಯ ಮತ್ತು ಸಹಯೋಗವನ್ನು ಹೆಚ್ಚಿಸುವ ಮೂಲಕ, ಸರ್ಕಾರವು ಮಾದಕವಸ್ತು ಮುಕ್ತ ಭಾರತವನ್ನು ನಿರ್ಮಿಸುವತ್ತ ಸಾಗುತ್ತಿದೆ

ಎನ್.ಸಿ.ಬಿಯ 5 ಹೊಸ ವಲಯ ಕಚೇರಿಗಳನ್ನು ಕೇಂದ್ರ ಗೃಹ ಸಚಿವರು ಉದ್ಘಾಟಿಸಿದರು, ತಮಿಳುನಾಡಿನ ಚೆನ್ನೈನಲ್ಲಿ ಉಪ ಮಹಾನಿರ್ದೇಶಕರ ನೇತೃತ್ವದ ಬ್ಯೂರೋದ ಪ್ರಾದೇಶಿಕ ಕಚೇರಿಯನ್ನು ಸಹ ಉದ್ಘಾಟಿಸಲಾಯಿತು

ಶಿವಮೊಗ್ಗದಲ್ಲಿ ಹೊಸ ಕ್ಯಾಂಪಸ್ ತೆರೆಯಲು ' ಕೇಂದ್ರ ಗೃಹ ಮತ್ತು ಸಹಕಾರ ಸಚಿವರ ಉಪಸ್ಥಿತಿಯಲ್ಲಿ, ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ' ಮತ್ತು ಕರ್ನಾಟಕ ಸರ್ಕಾರದ ನಡುವೆ ತಿಳಿವಳಿಕಾ ಒಡಂಬಡಿಕೆಗೆ ಸಹಿ ಹಾಕಲಾಯಿತು


Posted On: 24 MAR 2023 4:33PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ಕರ್ನಾಟಕದ ಬೆಂಗಳೂರಿನಲ್ಲಿ 'ಮಾದಕವಸ್ತು ಕಳ್ಳಸಾಗಣೆ ಮತ್ತು ರಾಷ್ಟ್ರೀಯ ಭದ್ರತೆ' ಕುರಿತ ಪ್ರಾದೇಶಿಕ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನದಲ್ಲಿ ದಕ್ಷಿಣದ 5 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಕೇಂದ್ರ ಗೃಹ ಸಚಿವರ ಸಮ್ಮುಖದಲ್ಲಿ 1,235 ಕೋಟಿ ಮೌಲ್ಯದ 9,298 ಕೆಜಿ ಮಾದಕ ದ್ರವ್ಯಗಳನ್ನು ನಾಶಪಡಿಸಲಾಯಿತು. ಇದಲ್ಲದೆ, ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ಸರ್ಕಾರದ ನಡುವೆ ಶಿವಮೊಗ್ಗದಲ್ಲಿ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ತೆರೆಯಲು ತಿಳಿವಳಿಕಾ ಒಡಂಬಡಿಕೆಗೆ ಸಹಿ ಹಾಕಲಾಯಿತು.

ತಮ್ಮ ಭಾಷಣದಲ್ಲಿ, ಕೇಂದ್ರ ಗೃಹ ಮತ್ತು ಸಹಕಾರ ಸಚಿವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಸರ್ಕಾರವು ಮಾದಕವಸ್ತು ಮುಕ್ತ ಭಾರತವನ್ನು ನಿರ್ಮಿಸಲು ಮಾದಕವಸ್ತುಗಳ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಯನ್ನು ಅಳವಡಿಸಿಕೊಂಡಿದೆ ಎಂದು ಹೇಳಿದರು. ಆಜಾದಿ ಕಾ ಅಮೃತ ಮಹೋತ್ಸವದ ಅಡಿಯಲ್ಲಿ, 2022ರ ಜೂನ್ 01 ರಿಂದ ಪ್ರಾರಂಭವಾಗುವ 75 ದಿನಗಳ ಅಭಿಯಾನದ ವೇಳೆ, 75,000 ಕೆಜಿ ಮಾದಕವಸ್ತುಗಳನ್ನು ನಾಶಪಡಿಸುವ ಗುರಿಯನ್ನು ನಿಗದಿಪಡಿಸಲಾಗಿತ್ತು ಎಂದು ಅವರು ಹೇಳಿದರು.  ಆದರೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಈವರೆಗೆ 8,409 ಕೋಟಿ ರೂ.ಗಳ ಮೌಲ್ಯದ ಒಟ್ಟು 5,94,620 ಕೆಜಿ ಮಾದಕವಸ್ತುಗಳನ್ನು ನಾಶಪಡಿಸಲಾಗಿದೆ. ಇಲ್ಲಿಯವರೆಗೆ ನಾಶವಾದ ಒಟ್ಟು ಮಾದಕವಸ್ತುಗಳಲ್ಲಿ, 3,138 ಕೋಟಿ ರೂ.ಗಳ ಮೌಲ್ಯದ 1,29,363 ಕೆಜಿ ಮಾದಕವಸ್ತುಗಳನ್ನು ಎನ್.ಸಿ.ಬಿ.ಯೊಂದೇ ನಾಶಪಡಿಸಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಿರ್ದೇಶನದ ಮೇರೆಗೆ ಗೃಹ ವ್ಯವಹಾರಗಳ ಸಚಿವಾಲಯವು ಮಾದಕವಸ್ತುಗಳ ನಿಗ್ರಹಕ್ಕೆ ಮೂರು ಆಯಾಮದ ವಿಧಾನವನ್ನು ಅಳವಡಿಸಿಕೊಂಡಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಸಾಂಸ್ಥಿಕ ಸ್ವರೂಪವನ್ನು ಬಲಪಡಿಸುವುದು, ಮಾದಕವಸ್ತುಗಳ ನಿಯಂತ್ರಣಕ್ಕೆ ಸಂಬಂಧಿಸಿದ ಎಲ್ಲ ಸಂಸ್ಥೆಗಳ ಸಬಲೀಕರಣ ಮತ್ತು ಅವುಗಳ ನಡುವಿನ ಸಮನ್ವಯವನ್ನು ಬಲಪಡಿಸುವುದು ಮತ್ತು ಜಾಗೃತಿ ಅಭಿಯಾನವನ್ನು ಪ್ರಾರಂಭಿಸುವುದು ಈ ತ್ರಿಮುಖ ವಿಧಾನ ಒಳಗೊಂಡಿದೆ. ಮಾದಕವಸ್ತು ಕಳ್ಳಸಾಗಣೆಯ ಸಮಸ್ಯೆ ಕೇವಲ ರಾಜ್ಯ ಅಥವಾ ಕೇಂದ್ರಕ್ಕೆ ಸಂಬಂಧಿಸಿದ್ದಲ್ಲ, ಆದರೆ ರಾಷ್ಟ್ರೀಯ ಸಮಸ್ಯೆಯಾಗಿದೆ ಮತ್ತು ಅದನ್ನು ಎದುರಿಸುವ ಪ್ರಯತ್ನಗಳು ರಾಷ್ಟ್ರೀಯ ಮತ್ತು ಏಕೀಕೃತವಾಗಿರಬೇಕು ಎಂದು ಅವರು ಹೇಳಿದರು. ಮಾದಕವಸ್ತು ವಿರುದ್ಧ ಸರ್ಕಾರ ಮಾತ್ರವಲ್ಲ, ಜನರೂ ಹೋರಾಡಬೇಕು ಎಂದು ಅವರು ಹೇಳಿದರು. ಈ ಸಮಸ್ಯೆಯನ್ನು ಎದುರಿಸಲು, ಜಿಲ್ಲಾ ಮಟ್ಟದ ಮತ್ತು ರಾಜ್ಯ ಮಟ್ಟದ ಎನ್.ಸಿ.ಓ.ಆರ್.ಡಿ. ಸಭೆಗಳನ್ನು ನಿಯಮಿತವಾಗಿ ಆಯೋಜಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. 

ಇಡೀ ಜಾಲವನ್ನು ಭೇದಿಸುವ ಸಲುವಾಗಿ, ಮಾದಕವಸ್ತು ಪ್ರಕರಣಗಳನ್ನು ಅಡಿಯಿಂದ ಮುಡಿಯವರೆಗೆ ಮತ್ತು ಮುಡಿಯಿಂದ ಅಡಿಯವರೆಗೆ ವಿಧಾನದೊಂದಿಗೆ ಕೂಲಂಕಷವಾಗಿ ತನಿಖೆ ನಡೆಸಬೇಕು ಎಂದು ಕೇಂದ್ರ ಗೃಹ ಸಚಿವರು ಒತ್ತಿ ಹೇಳಿದರು. ಯಾವುದೇ ಪ್ರಕರಣವನ್ನು ಪ್ರತ್ಯೇಕವಾಗಿ ತನಿಖೆ ಮಾಡಬಾರದು ಎಂದು ಅವರು ಹೇಳಿದರು.  2006-2013 ರ ನಡುವೆ ಒಟ್ಟು 1257 ಪ್ರಕರಣಗಳು ದಾಖಲಾಗಿದ್ದು, ಇದು 2014-2022 ರ ನಡುವೆ 152 ಪ್ರತಿಶತದಷ್ಟು ಏರಿಕೆಯಾಗಿ 3172 ಕ್ಕೆ ತಲುಪಿದೆ, ಆದರೆ ಇದೇ ಅವಧಿಯಲ್ಲಿ ಒಟ್ಟು ಬಂಧನಗಳ ಸಂಖ್ಯೆ 1362 ರಿಂದ 4888 ಕ್ಕೆ ಏರಿದೆ ಎಂದು ಶ್ರೀ ಶಾ ಮಾಹಿತಿ ನೀಡಿದರು. ಅದೇ ರೀತಿ 2006-2013ರ ಅವಧಿಯಲ್ಲಿ 1.52 ಲಕ್ಷ ಕೆ.ಜಿ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿತ್ತು, ಇದು 2014-2022ರ ನಡುವೆ 3.30 ಲಕ್ಷ ಕೆ.ಜಿ.ಗೆ ದ್ವಿಗುಣಗೊಂಡಿದೆ, 2006-2013ರ ಅವಧಿಯಲ್ಲಿ 768 ಕೋಟಿ ರೂ.ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು, ಇದು 2014-2022ರ ಅವಧಿಯಲ್ಲಿ 25 ಪಟ್ಟು ಹೆಚ್ಚಿ ರೂ.20000 ಕೋಟಿಗೆ ಮುಟ್ಟಿದೆ ಎಂದರು.

ದೇಶದಿಂದ ಮಾದಕ ದ್ರವ್ಯಗಳ ಪಿಡುಗನ್ನು ತೊಡೆದುಹಾಕಲು ಮೋದಿ ಸರ್ಕಾರದ ಅಭಿಯಾನದಲ್ಲಿ ನಾಲ್ಕು ಸ್ತಂಭಗಳಿವೆ: ಅವು ಮಾದಕವಸ್ತುಗಳ ಪತ್ತೆ, ಜಾಲದ ನಾಶ, ಅಪರಾಧಿಗಳ ಬಂಧನ ಮತ್ತು ಮಾದಕ ದ್ರವ್ಯ ವ್ಯಸನಿಗಳಿಗೆ ಪುನರ್ವಸತಿಯಾಗಿದೆ. ಮಾದಕವಸ್ತು ಕಳ್ಳಸಾಗಣೆ ವಿರುದ್ಧ ಪರಿಣಾಮಕಾರಿ ಕ್ರಮಕ್ಕಾಗಿ ಎಲ್ಲ ರಾಜ್ಯಗಳು ಎನ್.ಸಿ.ಓ.ಆರ್.ಡಿ. ಪೋರ್ಟಲ್ ಮತ್ತು ಎನ್.ಐ.ಡಿ.ಎ..ಎ.ಎನ್. ವೇದಿಕೆಯನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು. ಮಾದಕವಸ್ತುಗಳ ವಿರುದ್ಧದ ಹೋರಾಟದಲ್ಲಿ ನಿರ್ಣಾಯಕ ಕ್ರಮ ತೆಗೆದುಕೊಳ್ಳಲು ವಿವಿಧ ರಾಜ್ಯಗಳಲ್ಲಿ ರಚಿಸಲಾದ ಮಾದಕವಸ್ತು ನಿಗ್ರಹ ಕಾರ್ಯಪಡೆಯನ್ನು ಬಲಪಡಿಸುವುದು ಸಮಯದ ಅಗತ್ಯವಾಗಿದೆ ಎಂದು ಅವರು ಹೇಳಿದರು. ಇದಲ್ಲದೆ, ಎನ್.ಡಿ.ಪಿಎಸ್ ಕಾಯ್ದೆಯ ವಿವಿಧ ನಿಬಂಧನೆಗಳನ್ನು ಸಹ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ಮಾದಕವಸ್ತುಗಳ ವಿರುದ್ಧ "ಸಂಪೂರ್ಣ ಸರ್ಕಾರ" ವಿಧಾನವನ್ನು ಅಳವಡಿಸಿಕೊಂಡಿದೆ ಮತ್ತು ಎಲ್ಲ ಇಲಾಖೆಗಳು ಮತ್ತು ಸಂಸ್ಥೆಗಳು ಸಹಕಾರ, ಸಮನ್ವಯ ಮತ್ತು ಸಹಯೋಗವನ್ನು ಹೆಚ್ಚಿಸುವ ಮೂಲಕ ಮಾದಕದ್ರವ್ಯ ಮುಕ್ತ ಭಾರತವನ್ನು ನಿರ್ಮಿಸಲು ಮುಂದಾಗಬೇಕು ಎಂದು ಅವರು ಹೇಳಿದರು. ಇದಲ್ಲದೆ, ಕರಾವಳಿ ಭದ್ರತೆ ಮತ್ತು ಸಮುದ್ರ ಮಾರ್ಗಗಳ ಮೇಲೆ ಗಮನವನ್ನು ಹೆಚ್ಚಿಸುವ ಅವಶ್ಯಕತೆಯಿದೆ ಮತ್ತು ದಕ್ಷಿಣ ಸಮುದ್ರ ಮಾರ್ಗದಲ್ಲಿ ಕಟ್ಟುನಿಟ್ಟಿನ ಜಾಗರೂಕತೆಯನ್ನು ಕಾಪಾಡಿಕೊಳ್ಳಬೇಕು ಎಂದು ಅವರು ಹೇಳಿದರು.

****



(Release ID: 1910406) Visitor Counter : 200