ಪ್ರಧಾನ ಮಂತ್ರಿಯವರ ಕಛೇರಿ

ಮಾರ್ಚ್ 25ರಂದು ಕರ್ನಾಟಕಕ್ಕೆ ಪ್ರಧಾನಿ ಭೇಟಿ 

 
ಚಿಕ್ಕಬಳ್ಳಾಪುರದಲ್ಲಿ ಶ್ರೀ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಉದ್ಘಾಟಿಸಲಿರುವ ಪ್ರಧಾನಿ
 
ಬೆಂಗಳೂರು ಮೆಟ್ರೋದ ಕೃಷ್ಣರಾಜಪುರ - ವೈಟ್‌ಫೀಲ್ಡ್ (ಕಾಡುಗೋಡಿ) ಮೆಟ್ರೋ ಮಾರ್ಗ ಉದ್ಘಾಟಿಸಲಿರುವ ಪ್ರಧಾನಮಂತ್ರಿ
 
ಮೆಟ್ರೋ ಮಾರ್ಗವು ಸುಗಮ ಸಂಚಾರವನ್ನು ಇನ್ನಷ್ಟು ಹೆಚ್ಚಿಸಲಿದೆ; ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲಿದೆ

Posted On: 23 MAR 2023 5:51PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023 ಮಾರ್ಚ್ 25ರಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ಅಂದು ಬೆಳಗ್ಗೆ 10:45ಕ್ಕೆ ಪ್ರಧಾನಿ ಅವರು ಚಿಕ್ಕಬಳ್ಳಾಪುರದಲ್ಲಿ ಶ್ರೀ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಲೋಕೋರ್ಪಣೆ ಮಾಡಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಪ್ರಧಾನಿ ಅವರು ಬೆಂಗಳೂರು ಮೆಟ್ರೋದ ವೈಟ್‌ಫೀಲ್ಡ್ (ಕಾಡುಗೋಡಿ) - ಕೃಷ್ಣರಾಜಪುರ ಮೆಟ್ರೋ ಮಾರ್ಗ ಉದ್ಘಾಟಿಸಿ,  ಮೆಟ್ರೋ ರೈಲಿನಲ್ಲಿ ಸಂಚಾರ ಮಾಡಲಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಪ್ರಧಾನಿ

ಚಿಕ್ಕಬಳ್ಳಾಪುರ ಆಸುಪಾಸಿನ ವಿದ್ಯಾರ್ಥಿಗಳು ಲಭ್ಯವಾಗಬಹುದಾದ ಹೊಸ ಅವಕಾಶಗಳನ್ನು ಪಡೆಯಲು ಮತ್ತು ಈ ಪ್ರದೇಶದ ಜನಸಾಮಾನ್ಯರಿಗೆ ಕೈಗೆಟುಕುವ ಬೆಲೆಗೆ ಆರೋಗ್ಯ ಸೇವೆಗಳನ್ನು ಒದಗಿಸಲು ಸಹಾಯ ಮಾಡುವ ಉಪಕ್ರಮವಾಗಿ,  ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಎಸ್ಎಂಎಸ್ಐಎಂಎಸ್ಆರ್)ಯನ್ನು ಉದ್ಘಾಟಿಸಲಿದ್ದಾರೆ. ಚಿಕ್ಕಬಳ್ಳಾಪುರದ ಗ್ರಾಮೀಣ ಪ್ರದೇಶ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಸ್ಥಾಪನೆಯಾಗಿರುವ ಶ್ರೀ ಸತ್ಯಸಾಯಿ ವಿಶ್ವವಿದ್ಯಾಲಯವು ಮಾನವ ಶ್ರೇಷ್ಠತೆಗಾಗಿ ಈ ಆಸ್ಪತ್ರೆಯನ್ನು ಆರಂಭಿಸುತ್ತಿದೆ. ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಂರಕ್ಷಣಾ ಕ್ಷೇತ್ರವನ್ನು ವಾಣಿಜ್ಯೀಕರಣ ಮುಕ್ತಗೊಳಿಸುವ ದೂರದೃಷ್ಟಿಯಿಂದ ಈ ಆಸ್ಪತ್ರೆ  ಸ್ಥಾಪಿಸಲಾಗಿದೆ. ಶ್ರೀ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ವೈದ್ಯಕೀಯ ಶಿಕ್ಷಣ ಮತ್ತು ಗುಣಮಟ್ಟದ ವೈದ್ಯಕೀಯ ಸೇವೆಯನ್ನು ಸಂಪೂರ್ಣ ಉಚಿತವಾಗಿ ಎಲ್ಲರಿಗೂ ಒದಗಿಸಲಿದೆ. 2023ರ ಶೈಕ್ಷಣಿಕ ವರ್ಷದಿಂದ ಈ ಸಂಸ್ಥೆಯು ಕಾರ್ಯಾರಂಭ ಮಾಡಲಿದೆ. 

ಬೆಂಗಳೂರಿನಲ್ಲಿ ಪ್ರಧಾನಿ

ದೇಶಾದ್ಯಂತ ಚಲನಶೀಲತೆಯ ವಿಶ್ವ ದರ್ಜೆಯ ನಗರ ಮೂಲಸೌಕರ್ಯಗಳ ಅಭಿವೃದ್ಧಿಗೆ ಪ್ರಧಾನ ಮಂತ್ರಿ ಅವರು ವಿಶೇಷ ಗಮನ ಹರಿಸಿದ್ದಾರೆ. ಇದಕ್ಕೆ ಅನುಗುಣವಾಗಿ ಬೆಂಗಳೂರು ಮೆಟ್ರೊ ಹಂತ 2ರ ಅಡಿ, ವೈಟ್‌ಫೀಲ್ಡ್ (ಕಾಡುಗೋಡಿ) - ಕೃಷ್ಣರಾಜಪುರ ಮೆಟ್ರೊ ಲೈನ್‌ನ ರೀಚ್-1ರ  13.71 ಕಿ.ಮೀ ವಿಸ್ತರಣಾ ಮಾರ್ಗವನ್ನು ವೈಟ್‌ಫೀಲ್ಡ್ (ಕಾಡುಗೋಡಿ) ಮೆಟ್ರೊ ನಿಲ್ದಾಣದಲ್ಲಿ ಪ್ರಧಾನಿ ಉದ್ಘಾಟಿಸಲಿದ್ದಾರೆ. ಸುಮಾರು 4,250 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ ಮೆಟ್ರೋ ಮಾರ್ಗದ ಉದ್ಘಾಟನೆಯು ಬೆಂಗಳೂರಿನ ಪ್ರಯಾಣಿಕರಿಗೆ ಸ್ವಚ್ಛ, ಸುರಕ್ಷಿತ, ತ್ವರಿತ ಮತ್ತು ಆರಾಮದಾಯಕ ಪ್ರಯಾಣ ಸೌಲಭ್ಯ ಒದಗಿಸಲಿದೆ. ಇದು ಸುಗಮ ಸಂಚಾರಕ್ಕೆ ಅನುವು ಮಾಡುವ ಜತೆಗೆ, ನಗರದ  ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ.

****



(Release ID: 1910187) Visitor Counter : 127