ಪ್ರಧಾನ ಮಂತ್ರಿಯವರ ಕಛೇರಿ

​​​​​​​ಕರ್ನಾಟಕದ ಮಂಡ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ವೇಳೆ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಅನುವಾದ

Posted On: 12 MAR 2023 4:17PM by PIB Bengaluru

ಭಾರತ್ ಮಾತಾ ಕಿ ಜೈ..!

ಭಾರತ್ ಮಾತಾ ಕಿ ಜೈ..!

ಕರ್ನಾಟಕದ ಎಲ್ಲ ಜನತೆಗೆ ನನ್ನ ಹುತ್ಪೂರ್ವಕ ಶುಭಾಶಯಗಳು..!

ತಾಯಿ ಭುವನೇಶ್ವರಿಗೂ ನನ್ನ ನಮನಗಳು..!

ಮೇಲುಕೋಟೆ ಮತ್ತು ಆದಿಚುಂಚನಗಿರಿ ಗುರುಗಳಿಗೆ ನಾನು ಶಿರಬಾಗಿ ನಮಿಸುತ್ತೇನೆ ಮತ್ತು ಅವರ ಆಶೀರ್ವಾದ ಕೋರುತ್ತೇನೆ.

ಈ ಹಿಂದೆ ಕರ್ನಾಟಕದ ಹಲವು ಪ್ರದೇಶಗಳಿಗೆ ಭೇಟಿ ನೀಡುವ ಅವಕಾಶ ನನಗೆ ದೊರಕಿತ್ತು. ಎಲ್ಲೆಡೆ ಕರ್ನಾಟಕದ ಜನತೆ ಅಭೂತಪೂರ್ವ ಆಶೀರ್ವಾದವನ್ನು ನನಗೆ ನೀಡಿದ್ದಾರೆ. ಮಂಡ್ಯದ ಜನರ ಆಶೀರ್ವಾದದಲ್ಲಿ ಸಿಹಿ ಇದೆ. ಏಕೆಂದರೆ ಇದನ್ನು ಸಕ್ಕರೆ ನಗರಿ ಎಂದು ಕರೆಯುತ್ತಾರೆ. ಮಂಡ್ಯ ಜನರ ಈ ಪ್ರೀತಿ ಮತ್ತು ಆತಿಥ್ಯದಿಂದ ನನ್ನ ಹೃದಯ ತುಂಬಿ ಬಂದಿದೆ. ನಾನು ನಿಮ್ಮೆಲ್ಲರಿಗೂ ಶಿರಬಾಗಿ ನಮಿಸುತ್ತೇನೆ.

ನಿಮ್ಮ ಪ್ರೀತಿ ಸಾಲವನ್ನು ಕ್ಷಿಪ್ರ ಅಭಿವೃದ್ಧಿ ಮೂಲಕ ಬಡ್ಡಿ ಸಮೇತ ಮರುಪಾವತಿ ಮಾಡಲು ಡಬ್ಬಲ್ ಇಂಜಿನ್ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ. ಕೋಟ್ಯಾಂತರ ರೂಪಾಯಿಗಳ ಮೂಲಸೌಕರ್ಯ ಯೋಜನೆಗಳು, ಅವುಗಳಲ್ಲಿ ಕೆಲವು ಉದ್ಘಾಟನೆಗೊಂಡಿವೆ ಹಾಗೂ ಕೆಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಅವೆಲ್ಲಾ ಈ ಪ್ರಯತ್ನದ ಭಾಗವಾಗಿದೆ.

ಕಳೆದ ಕೆಲವು ದಿನಗಳಿಂದೀಚೆಗೆ ದೇಶಾದ್ಯಂತ ಬೆಂಗಳೂರು –ಮೈಸೂರು ಎಕ್ಸ್ ಪ್ರೆಸ್ ವೇ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಎಕ್ಸ್ ಪ್ರೆಸ್ ವೇ ಕುರಿತ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಇಂತಹ ಅದ್ಧೂರಿ ಹಾಗೂ ಆಧುನಿಕ ಎಕ್ಸ್ ಪ್ರೆಸ್ ವೇಗಳನ್ನು ದೇಶಾದ್ಯಂತ ನಿರ್ಮಿಸಬೇಕು ಎಂಬುದು ದೇಶದ ಪ್ರತಿಯೊಬ್ಬ ನಾಗರಿಕ ಮತ್ತು ನಮ್ಮ ಯುವ ಜನತೆಯ ಬಯಕೆಯಾಗಿದೆ. ಇಂದು ಬೆಂಗಳೂರು – ಮೈಸೂರು ಎಕ್ಸ್ ಪ್ರೆಸ್ ವೇ ನೋಡುತ್ತಿದ್ದರೆ ನಮ್ಮ ದೇಶದ ಯುವಜನತೆ ಹೆಮ್ಮೆ ಪಡುತ್ತಿದ್ದಾರೆ. ಈ ಎಕ್ಸ್ ಪ್ರೆಸ್ ವೇ ಯಿಂದಾಗಿ ಬೆಂಗಳೂರು ಮತ್ತು ಮೈಸೂರು ನಡುವಿನ ಪ್ರಯಾಣದ ಅವಧಿ ಅರ್ಧಕ್ಕೂ ಅಧಿಕ ಕಡಿಮೆಯಾಗಿದೆ.

ಇಂದು ಮೈಸೂರು-ಕುಶಾಲನಗರ ನಾಲ್ಕು ಪಥದ ಹೆದ್ದಾರಿ ಯೋಜನೆಗೂ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈ ಎಲ್ಲ ಯೋಜನೆಗಳು ಈ ಪ್ರದೇಶದಲ್ಲಿ ‘ಸಬ್ ಕಾ ವಿಕಾಸ್’ ಅನ್ನು ವೇಗಗೊಳಿಸುವ ಜತೆಗೆ ಸಮೃದ್ಧಿಗೆ ದಾರಿ ಮಾಡಿಕೊಡುತ್ತದೆ. ಈ ಎಲ್ಲ ಸಂಪರ್ಕ ಯೋಜನೆಗಳಿಗಾಗಿ ನಾನು ನಿಮ್ಮೆಲ್ಲರನ್ನೂ ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ.

ಭಾರತದಲ್ಲಿ ಯಾವುದೇ ಸಮಯದಲ್ಲಿ ಮೂಲಸೌಕರ್ಯ ಮುನ್ನೋಟದ ಬಗ್ಗೆ ಚರ್ಚೆ ನಡೆದರೂ, ಆಗ ಎರಡು ಶ್ರೇಷ್ಠ ವ್ಯಕ್ತಿಗಳ ಹೆಸರು ಕೃಷ್ಣರಾಜ ಒಡೆಯರ್ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಅವರ ಹೆಸರು ನಮ್ಮ ಕಣ್ಣ ಮುಂದೆ ಬರುತ್ತವೆ. ಈ ಇಬ್ಬರು ಶ್ರೇಷ್ಠ ವ್ಯಕ್ತಿಗಳು ಈ ಮಣ್ಣಿನ ಸುಪುತ್ರರು ಮತ್ತು ಅವರು ಇಡೀ ದೇಶಕ್ಕೆ ಹೊಸ ದೂರದೃಷ್ಟಿ ಮತ್ತು ಸಾಮರ್ಥ್ಯವನ್ನು ಕೊಟ್ಟವರು. ಈ ಶ್ರೇಷ್ಠ ವ್ಯಕ್ತಿಗಳು ವಿಪತ್ತನ್ನು ಅವಕಾಶವನ್ನಾಗಿ ಪರಿವರ್ತಿಸಿದವರು; ಮೂಲಸೌಕರ್ಯದ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಂಡವರು ಮತ್ತು ಇಂದಿನ ಪೀಳಿಗೆ ತಮ್ಮ ಪೂರ್ವಜರು ತಪಸ್ಸಿನ ಲಾಭವನ್ನು ಪಡೆಯುತ್ತಿರುವ ನಿಜಕ್ಕೂ ಅದೃಷ್ಟವಂತರು.

ಅಂತಹ ಶ್ರೇಷ್ಠ ವ್ಯಕ್ತಿಗಳಿಂದ ಸ್ಫೂರ್ತಿಪಡೆದು, ದೇಶದಲ್ಲಿ ಇಂದು ಆಧುನಿಕ ಮೂಲಸೌಕರ್ಯ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಇಂದು ಕರ್ನಾಟಕ, ಭಾರತ್ ಮಾಲಾ ಮತ್ತು ಸಾಗರಮಾಲಾ ಯೋಜನೆಗಳನ್ನು ಬದಲಾಯಿಸುತ್ತಿದೆ. ದೇಶ ಕೂಡ ಪರಿವರ್ತನೆಯಾಗುತ್ತಿದೆ. ಇಡೀ ವಿಶ್ವ ಕೊರೊನಾದಿಂದ ನರಳುತ್ತಿದ್ದಾಗ ಭಾರತ ತನ್ನ ಮೂಲಸೌಕರ್ಯ ಬಜೆಟ್ ಅನ್ನು ಹಲವು ಪಟ್ಟು ಹೆಚ್ಚಿಸಿದೆ. ಈ ವರ್ಷದ ಬಜೆಟ್ ನಲ್ಲಿ ನಾವು ಮೂಲಸೌಕರ್ಯಕ್ಕೆ 10 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದೇವೆ.

ಮೂಲಸೌಕರ್ಯ ಕೇವಲ ಅನುಕೂಲವನ್ನು ಒದಗಿಸುವುದಲ್ಲದೆ, ಉದ್ಯೋಗಾವಕಾಶಗಳು ಹೂಡಿಕೆಗಳನ್ನು ತಂದುಕೊಡುತ್ತದೆ. ಜತೆಗೆ ಗಳಿಕೆಯ ಮಾರ್ಗಗಳನ್ನು ಒದಗಿಸುತ್ತದೆ. ಕರ್ನಾಟಕ ಒಂದರಲ್ಲೇ ಕಳೆದ ಕೆಲವು ವರ್ಷಗಳಿಂದೀಚೆಗೆ ಹೆದ್ದಾರಿ ಯೋಜನೆಗಳಿಗಾಗಿ ನಾವು ಒಂದು ಲಕ್ಷ ಕೋಟಿ ರೂ.ಗಳನ್ನು ಹೂಡಿಕೆ ಮಾಡಿದ್ದೇವೆ.

ಬೆಂಗಳೂರು ಮತ್ತು ಮೈಸೂರು ಕರ್ನಾಟಕದ ಎರಡು ಪ್ರಮುಖ ನಗರಗಳು, ಒಂದು ನಗರ ತಂತ್ರಜ್ಞಾನದಿಂದ ಹೆಸರಾದರೆ, ಮತ್ತೊಂದು ನಗರ ಪರಂಪರೆಗೆ ಹೆಸರಾಗಿದೆ. ಹಲವು ಆಯಾಮಗಳಿಂದ ಈ ಎರಡು ನಗರಗಳ ನಡುವೆ ಆಧುನಿಕ ವಿಧಾನದ ಸಂಪರ್ಕ ಒದಗಿಸುವುದು ಅತ್ಯಂತ ನಿರ್ಣಾಯಕವಾಗಿದೆ.

ದೀರ್ಘ ಕಾಲದಿಂದ ಈ ಎರಡು ನಗರಗಳ ನಡುವೆ ಜನರು ಭಾರೀ ವಾಹನ ದಟ್ಟಣೆಯಲ್ಲಿ ಪ್ರಯಾಣಿಸುತ್ತಿದ್ದರು. ಇದೀಗ ಎಕ್ಸ್ ಪ್ರೆಸ್ ವೇಯಿಂದಾಗಿ ದೂರವನ್ನು ಕೇವಲ 1.5 ಗಂಟೆಯಲ್ಲಿ ತಲುಪಬಹುದಾಗಿದೆ. ಇದರಿಂದ ಇಡೀ ಪ್ರದೇಶದಲ್ಲಿ ಆರ್ಥಿಕ ಬೆಳವಣಿಗೆಯ ವೇಗ ಗಣನೀಯ ರೀತಿಯಲ್ಲಿ ಹೆಚ್ಚಾಗಲಿದೆ.

ಈ ಎಕ್ಸ್ ಪ್ರೆಸ್ ವೇ ರಾಮನಗರ ಮತ್ತು ಮಂಡ್ಯದ ಮೂಲಕ ಹಾದು ಹೋಗುತ್ತದೆ. ಇಲ್ಲಿ ಹಲವು ಐತಿಹಾಸಿಕ, ಪಾರಂಪರಿಕ ತಾಣಗಳಿವೆ. ಈ ನಗರಗಳಲ್ಲಿ ಪ್ರವಾಸೋದ್ಯಮ ಸಾಮರ್ಥ್ಯ ಗಣನೀಯವಾಗಿ ಹೆಚ್ಚಲಿದೆ. ಅಲ್ಲದೆ ಇದು ಮೈಸೂರು ತಲುಪುವುದನ್ನು ಸುಲಭಗೊಳಿಸುವುದರ ಜತೆಗೆ ಮಾತೆ ಕಾವೇರಿಯ ನೆಲೆ ಕೊಡಗು ತಲುಪುವುದು ಕೂಡ ಸುಲಭವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮಳೆಗಾಲದಲ್ಲಿ ಪಶ್ಚಿಮಘಟ್ಟದ ಬೆಂಗಳೂರು-ಮಂಗಳೂರು ರಸ್ತೆ ಭೂಕುಸಿತದಿಂದಾಗಿ ಆಗಾಗ್ಗೆ ಬಂದ್ ಆಗಿರುತ್ತದೆ. ಇದು ಆ ಭಾಗದ ಬಂದರು ಸಂಪರ್ಕದ ಮೇಲೆ ಪರಿಣಾಮ ಬೀರುತ್ತಿದೆ. ಮೈಸೂರು-ಕುಶಾಲನಗರ ಹೆದ್ದಾರಿ ಅಗಲೀಕರಣದಿಂದ ಈ ಸಮಸ್ಯೆ ನಿವಾರಣೆಯಾಗಲಿದೆ. ಉತ್ತಮ ಸಂಪರ್ಕದಿಂದಾಗಿ ಈ ಪ್ರದೇಶದಲ್ಲಿ ಕೈಗಾರಿಕೆಗಳು ಕ್ಷಿಪ್ರವಾಗಿ ವಿಸ್ತರಣೆಯಾಗಲಿವೆ.

2014ಕ್ಕೂ ಮುನ್ನ ಕೇಂದ್ರದಲ್ಲಿ ಮೈತ್ರಿ, ಕಾಂಗ್ರೆಸ್ ಅಧಿಕಾರದಲ್ಲಿತ್ತು. ಅದು ಹಲವು ಪಕ್ಷಗಳ ಬೆಂಬಲದೊಂದಿಗೆ ನಡೆಯುತ್ತಿತ್ತು. ಆ ಸರ್ಕಾರಕ್ಕೆ ಬಡಜನರು ಮತ್ತು ಬಡಕುಟುಂಬಗಳ ಕಷ್ಟಗಳಿಗೆ ಸ್ಪಂದಿಸಲು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಬಡವರ ಅಭಿವೃದ್ಧಿಗಾಗಿ ಮೀಸಲಾಗಿದ್ದ ಕೋಟ್ಯಾಂತರ ರೂಪಾಯಿಗಳನ್ನು ಕಾಂಗ್ರೆಸ್ ಸರ್ಕಾರ ಲೂಟಿ ಮಾಡಿತ್ತು. ಕಾಂಗ್ರೆಸ್ ಎಂದಿಗೂ ಬಡಜನರ ನೋವು ಮತ್ತು ಬವಣೆಯ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ.   

2014ರಲ್ಲಿ ನೀವು ಮತದಾನದ ಮೂಲಕ ನನಗೆ ನಿಮ್ಮ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ನಂತರ ಬಡವರ ಸರ್ಕಾರ ದೇಶದಲ್ಲಿ ಅಧಿಕಾರಕ್ಕೆ ಬಂದಿತು. ಆ ಸರ್ಕಾರ ಬಡವರ ನೋವು ಮತ್ತು ಕಷ್ಟಗಳಿಗೆ ಸ್ಪಂದಿಸುವ ಸಲುವಾಗಿ ರಚನೆಯಾಯಿತು. ಆದ್ದರಿಂದ ಬಿಜೆಪಿಯ ಕೇಂದ್ರ ಸರ್ಕಾರ ಸಂಪೂರ್ಣ ಪ್ರಾಮಾಣಿಕತೆಯೊಂದಿಗೆ ಬಡವರಿಗೆ ಸೇವೆ ಸಲ್ಲಿಸಲು ಪ್ರಯತ್ನಿಸಿತು ಮತ್ತು ನಿರಂತರವಾಗಿ ಬಡವರು ಎದುರಿಸುತ್ತಿದ್ದ ಸಮಸ್ಯೆಗಳನ್ನು ನಿವಾರಿಸಲು ಕ್ರಮಗಳನ್ನು ಕೈಗೊಂಡಿತು.

ಬಿಜೆಪಿ ಸರ್ಕಾರ ಬಡವರಿಗೆ ಪಕ್ಕಾ ಮನೆಗಳನ್ನು ಒದಗಿಸುವುದು, ಅವರ ಮನೆಗಳಿಗೆ ಕೊಳಾಯಿ ನೀರು ಒದಗಿಸುವುದು, ಉಜ್ವಲ ಅಡುಗೆ ಅನಿಲ ಸಂಪರ್ಕ, ವಿದ್ಯುತ್ ಸಂಪರ್ಕ, ಗ್ರಾಮಗಳಿಗೆ ರಸ್ತೆಗಳು, ಆಸ್ಪತ್ರೆಗಳು ಮತ್ತು ಸೂಕ್ತ ಚಿಕಿತ್ಸೆ ಒದಗಿಸಲು ಪ್ರಮುಖ ಆದ್ಯತೆಯನ್ನು ನೀಡಿದೆ.

ಕಳೆದ 9 ವರ್ಷಗಳಲ್ಲಿ ಬಿಜೆಪಿ ಸರ್ಕಾರದ ಯೋಜನೆಗಳಿಂದಾಗಿ ಕೋಟ್ಯಾಂತರ ಬಡಜನರ ಜೀವನ ಸುಲಭವಾಗಿದೆ. ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಸೌರ್ಕಯಗಳಿಗಾಗಿ ಜನರು ಕಚೇರಿಯಿಂದ ಕಚೇರಿಗೆ ಅಲೆಯಬೇಕಾಗಿತ್ತು. ಇದೀಗ ಬಿಜೆಪಿ ಸರ್ಕಾರ ಬಡಜನರ ಮನೆ ಬಾಗಿಲು ತಲುಪುತ್ತಿದೆ ಮತ್ತು ಅವರಿಗೆ ಸೌಕರ್ಯಗಳನ್ನು ಒದಗಿಸುತ್ತಿದೆ. ಬಿಜೆಪಿ ಸರ್ಕಾರದ ಯೋಜನೆಗಳಿಂದ ಪ್ರಯೋಜನ ಪಡೆಯದೆ, ಹೊರಗಿರುವವರನ್ನು ಸಹ ತಲುಪಲಾಗುತ್ತಿದೆ.

ಬಿಜೆಪಿ ಸರ್ಕಾರ ಸಮಸ್ಯೆಗಳಿಗೆ ಶಾಶ್ವತ ಪರಿಹಾರಗಳನ್ನು ಕಂಡುಕೊಳ್ಳಲು ಸದಾ ಪ್ರಾಮುಖ್ಯತೆ ನೀಡಿದೆ. ಕಳೆದ 9 ವರ್ಷಗಳಲ್ಲಿ ದೇಶದಲ್ಲಿ ಮೂರು ಕೋಟಿಗೂ ಅಧಿಕ ಮನೆಗಳನ್ನು ಬಡವರಿಗಾಗಿ ನಿರ್ಮಿಸಿದೆ. ಆ ಪೈಕಿ ಕರ್ನಾಟಕದಲ್ಲೂ ಲಕ್ಷಾಂತರ ಮನೆಗಳನ್ನು ನಿರ್ಮಿಸಲಾಗಿದೆ. ಜಲಜೀವನ್ ಮಿಷನ್ ಅಡಿ ಕರ್ನಾಟಕದ 40 ಲಕ್ಷಕ್ಕೂ ಅಧಿಕ ಹೊಸ ಕುಟುಂಬಗಳಿಗೆ ಕೊಳಾಯಿ ನೀರು ಸಂಪರ್ಕ ಒದಗಿಸಲಾಗಿದೆ.

ದೇಶದಲ್ಲಿ ಹಲವು ದಶಕಗಳಿಂದ ತೂಗುಯ್ಯಾಲೆಯಲ್ಲಿದ್ದ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲಾಗಿದೆ. ಈ ವರ್ಷದ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ.ಗಳನ್ನು ಪ್ರಕಟಿಸಿದೆ. ಅದಲ್ಲದೆ, ಕರ್ನಾಟಕದ ಬಹುತೇಕ ಭಾಗದ ನೀರಾವರಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲಾಗುತ್ತಿದೆ.

ರೈತರ ಪ್ರತಿಯೊಂದು ಸಣ್ಣ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಅವರಿಗೆ ಕಾಯಂ ಪರಿಹಾರವನ್ನು ಬಿಜೆಪಿ ಸರ್ಕಾರ ಒದಗಿಸುತ್ತಿದೆ. ಪಿಎಂ-ಕಿಸಾನ್ ಸಮ್ಮಾನ್ ನಿಧಿ ಅಡಿ ಕರ್ನಾಟಕದ ರೈತರ ಬ್ಯಾಂಕ್ ಖಾತೆಗಳಿಗೆ 12 ಸಾವಿರ ಕೋಟಿ ರೂ.ಗಳನ್ನು ನೇರವಾಗಿ ವರ್ಗಾವಣೆ ಮಾಡಲಾಗಿದೆ. ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ಮಂಡ್ಯದ 2.75 ಲಕ್ಷ ರೈತರ ಖಾತೆಗಳಿಗೆ 600 ಕೋಟಿ ರೂ.ಗಳನ್ನು ವರ್ಗಾಯಿಸಿದೆ.

ಮತ್ತೊಂದು ಕಾರ್ಯಕ್ಕಾಗಿ ಕರ್ನಾಟಕದಲ್ಲಿನ ಬಿಜೆಪಿ ಸರ್ಕಾರವನ್ನು ನಾನು ಶ್ಲಾಘಿಸಲು ಬಯಸುತ್ತೇನೆ. ಕೇಂದ್ರ ಸರ್ಕಾರ ಪಿಎಂ-ಕಿಸಾನ್ ಸಮ್ಮಾನ್ ನಿಧಿ ಅಡಿ 6 ಸಾವಿರ ಕೋಟಿ ರೂ.ಗಳನ್ನು ಕಳಿಸಿದರೆ, ಕರ್ನಾಟಕ ಸರ್ಕಾರ ಕೂಡ ಅದಕ್ಕೆ 4 ಸಾವಿರ ಕೋಟಿ ರೂ.ಗಳನ್ನು ಸೇರಿಸಿದೆ. ಅಂದರೆ ಡಬ್ಬಲ್ ಇಂಜಿನ್ ಸರ್ಕಾರದಲ್ಲಿ ರೈತರಿಗೆ ಡಬ್ಬಲ್ ಪ್ರಯೋಜನಗಳು ಲಭಿಸುತ್ತಿವೆ ಎಂದರ್ಥ. ಅದರ ಪರಿಣಾಮ ಅವರ ಸಮಸ್ಯೆಗಳು ಬಗೆಹರಿಯುತ್ತಿವೆ.  

ಕರ್ನಾಟಕದ ಸಕ್ಕರೆ ನಗರಿ ಮಂಡ್ಯದ ಕಬ್ಬು ಬೆಳೆಗಾರರು ದಶಕಗಳಿಂದ ಮತ್ತೊಂದು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕಬ್ಬಿನ ಉತ್ಪಾದನೆ ಹೆಚ್ಚಾದರೆ ಅವರು ಸಮಸ್ಯೆ ಎದುರಿಸುತ್ತಾರೆ. ಕಬ್ಬಿನ ಉತ್ಪಾದನೆ ಕಡಿಮೆ ಆದರೆ ಆಗ ಅವರಿಗೆ ಸಮಸ್ಯೆಗಳಿರುವುದಿಲ್ಲ. ಹಾಗಾಗಿ ಹಲವು ವರ್ಷಗಳಿಂದ ಕಬ್ಬು ಬೆಳೆಗಾರರ ಬಾಕಿಯನ್ನು ಸಕ್ಕರೆ ಕಾರ್ಖಾನೆಗಳು ಹಾಗೆಯೇ ಉಳಿಸಿಕೊಂಡಿದ್ದವು.  

ಈ ಸಮಸ್ಯೆಗೆ ಕೆಲವು ಪರಿಹಾರಗಳನ್ನು ಕಂಡುಕೊಳ್ಳುವುದು ಅಗತ್ಯವಾಗಿತ್ತು. ಬಿಜೆಪಿ ಸರ್ಕಾರ ರೈತರ ಹಿತಾಸಕ್ತಿಗೆ ಆದ್ಯತೆಯನ್ನು ನೀಡಿದ್ದು ಮತ್ತು ಎಥೆನಾಲ್ ಮಾರ್ಗವನ್ನು ಆಯ್ಕೆಮಾಡಿಕೊಂಡಿತು. ನಾವು ಕಬ್ಬಿನಿಂದ ಎಥೆನಾಲ್ ಉತ್ಪಾದನೆ ಹೆಚ್ಚಳಕ್ಕೆ ನಿರ್ಧರಿಸಿದೆವು. ಆದ್ದರಿಂದಾಗಿ ಕಬ್ಬಿನ ಉತ್ಪಾದನೆ ಹೆಚ್ಚಾದಾಗ ಅದರಿಂದ ಎಥೆನಾಲ್ ಉತ್ಪಾದಿಸಲಾಗುತ್ತಿದೆ. ಎಥೆನಾಲ್ ಉತ್ಪಾದನೆಯಿಂದ ರೈತರ ಆದಾಯ ಖಾತ್ರಿಯಾಗಿದೆ.

ಕಳೆದ ಒಂದೇ ವರ್ಷದಲ್ಲಿ ದೇಶದ ಸಕ್ಕರೆ ಕಾರ್ಖಾನೆಗಳು 20 ಸಾವಿರ ಕೋಟಿ. ರೂ.ಗಳಿಗೂ ಅಧಿಕ ಎಥೆನಾಲ್ ಅನ್ನು ತೈಲ ಕಂಪನಿಗಳಿಗೆ ಮಾರಾಟ ಮಾಡಿವೆ.  ಇದರಿಂದ ಕಬ್ಬು ಬೆಳೆಗಾರರಿಗೆ ಸಕಾಲದಲ್ಲಿ ಪಾವತಿ ಮಾಡಲು ಅನುಕೂಲವಾಗಿದೆ. 2013-14ರಿಂದ ಕಳೆದ ಹಂಗಾಮಿನವರೆಗೆ ಸಕ್ಕರೆ ಕಾರ್ಖಾನೆಗಳಿಂದ 70 ಸಾವಿರ ಕೋಟಿ ರೂ.ಮೌಲ್ಯದ ಎಥೆನಾಲ್ ಅನ್ನು ಖರೀದಿಸಲಾಗಿದೆ. ಈ ಹಣ ಕಬ್ಬು ಬೆಳೆಗಾರರಿಗೆ ತಲುಪಿದೆ.

ಈ ವರ್ಷದ ಕೇಂದ್ರ ಬಜೆಟ್ ನಲ್ಲಿ ಕೂಡ ರೈತರಿಗೆ ವಿಶೇಷವಾಗಿ ಕಬ್ಬು ಬೆಳೆಗಾರರಿಗೆ ಹಲವು ಅಂಶಗಳನ್ನು ಪ್ರಸ್ತಾಪಿಸಲಾಗಿದೆ. ಕಬ್ಬು ಬೆಳೆಗಾರರು ಸಕ್ಕರೆ ಸಹಕಾರಿಗಳಿಂದ ಮತ್ತು ತೆರಿಗೆ ವಿನಾಯಿತಿಯಿಂದ ಸುಮಾರು 10 ಸಾವಿರ ಕೋಟಿಗೂ ಅಧಿಕ ಸಹಾಯವನ್ನು ಪಡೆಯಲಿದ್ದಾರೆ.

ನಮ್ಮ ದೇಶ, ಅವಕಾಶಗಳ ನೆಲವೀಡು, ಜಗತ್ತಿನಾದ್ಯಂತ ಎಲ್ಲ ಜನರು ಭಾರತದಲ್ಲಿನ ಅವಕಾಶಗಳನ್ನು ಎದುರು ನೋಡುತ್ತಿದ್ದಾರೆ. 2022ರಲ್ಲಿ ಭಾರತಕ್ಕೆ ದಾಖಲೆಯ ವಿದೇಶಿ ಬಂಡವಾಳ ಹರಿದುಬಂದಿದೆ. ಅದರಲ್ಲಿ ಬಹುತೇಕ ಕರ್ನಾಟಕಕ್ಕೂ ಅನುಕೂಲವಾಗಿದೆ. ಕೊರೊನಾ ಸಾಂಕ್ರಾಮಿಕದ ನಡುವೆಯೇ ಸುಮಾರು 4 ಲಕ್ಷ ಕೋಟಿ ರೂ. ಹೂಡಿಕೆ ಕರ್ನಾಟಕಕ್ಕೆ ಬಂದಿದೆ. ಇದು ಡಬ್ಬಲ್ ಇಂಜಿನ್ ಸರ್ಕಾರದ ಪರಿಶ್ರಮದ ಪ್ರತಿಬಿಂಬವಾಗಿದೆ.

ಮಾಹಿತಿ ತಂತ್ರಜ್ಞಾನ ಮಾತ್ರವಲ್ಲದೆ, ಜೈವಿಕ ತಂತ್ರಜ್ಞಾನದಿಂದ ರಕ್ಷಣಾ ಉತ್ಪಾದನೆವರೆಗೆ ಪ್ರತಿಯೊಂದು ವಲಯದಲ್ಲೂ ಕರ್ನಾಟಕದಲ್ಲಿ ಚಟುವಟಿಕೆಗಳು ವಿಸ್ತರಣೆಯಾಗುತ್ತಿವೆ. ರಕ್ಷಣಾ, ವಾಯುನೆಲೆ ಮತ್ತು ಬಾಹ್ಯಾಕಾಶ ವಲಯಗಳಲ್ಲಿ ಅಭೂತಪೂರ್ವ ಹೂಡಿಕೆಗಳು ಬರುತ್ತಿವೆ. ಇದೀಗ ಕರ್ನಾಟಕವೂ ಸಹ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ತ್ವರಿತವಾಗಿ ಮುಂಚೂಣಿಯಲ್ಲಿದೆ.

ಡಬ್ಬಲ್ ಇಂಜಿನ್ ಸರ್ಕಾರದ ಈ ಎಲ್ಲ ಪ್ರಯತ್ನಗಳ ನಡುವೆಯೇ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಏನು ಮಾಡುತ್ತಿವೆ ? ಮೋದಿಗೆ ಸಮಾಧಿ ತೋಡುವ ಕನಸು ಕಾಣುತ್ತಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಕಾಂಗ್ರೆಸ್ ಮೋದಿಯ ಸಮಾಧಿ ತೆಗೆಯುವುದರಲ್ಲಿ  ಬ್ಯುಸಿಯಾಗಿದ್ದರೆ, ಮೋದಿ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಕಾಂಗ್ರೆಸ್ ಮೋದಿಯ ಸಮಾಧಿ ತೋಡುವುದರಲ್ಲಿ ತೊಡಗಿದ್ದರೆ, ಮೋದಿ ಬಡವರ ಜೀವನ ಸುಗಮಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಮೋದಿಯ ಸಮಾಧಿ ತೋಡುವ ಕನಸು ಕಾಣುತ್ತಿರುವ ಕಾಂಗ್ರೆಸ್ಸಿಗರಿಗೆ ದೇಶದ ಕೋಟ್ಯಾಂತರ ತಾಯಂದಿರು – ಸಹೋದರಿಯರು ಮತ್ತು ಪುತ್ರಿಯರ ಆಶೀರ್ವಾದ ತಿಳಿದಿಲ್ಲ. ದೇಶದ ಜನರ ಆಶೀರ್ವಾದವೇ ಮೋದಿ ಅವರಿಗೆ ರಕ್ಷಾ ಕವಚವಾಗಿದೆ.

ಕರ್ನಾಟಕದ ಕ್ಷಿಪ್ರ ಅಭಿವೃದ್ಧಿಗೆ ಡಬ್ಬಲ್ ಇಂಜಿನ್ ಸರ್ಕಾರ ಅತ್ಯಗತ್ಯ. ನಾನು ಮತ್ತೊಮ್ಮೆ ಈ ಭವ್ಯ ಕಾರ್ಯಕ್ರಮಕ್ಕಾಗಿ, ಈ ಭವ್ಯ ಆತಿಥ್ಯಕ್ಕಾಗಿ ಮತ್ತು ನಿಮ್ಮೆಲ್ಲರ ಆಶೀರ್ವಾದಕ್ಕಾಗಿ ನಾನು ಮಂಡ್ಯದ ಜನತೆಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಲು ಬಯಸುತ್ತೇನೆ. ಈ ಎಲ್ಲ ಅಭಿವೃದ್ಧಿ ಯೋಜನೆಗಳಿಗಾಗಿ ನಾನು ನಿಮ್ಮೆಲ್ಲರಿಗೂ ಹೃದಯಪೂರ್ವಕಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಭಾರತ್ ಮಾತಾ ಕಿ ಜೈ, ಭಾರತ್ ಮಾತಾ ಕಿ ಜೈ..!

ಭಾರತ್ ಮಾತಾ ಕಿ ಜೈ, ಭಾರತ್ ಮಾತಾ ಕಿ ಜೈ..!

ತುಂಬಾ ತುಂಬಾ ಧನ್ಯವಾದಗಳು.

ಘೋಷಣೆ: ಇದು ಪ್ರಧಾನಮಂತ್ರಿಗಳ ಭಾಷಣದ ಯಥಾವತ್‌ ಅನುವಾದವಲ್ಲ, ಅವರು ಮೂಲತಃ ಹಿಂದಿಯಲ್ಲಿ ಭಾಷಣ ಮಾಡಿದರು.

****



(Release ID: 1906459) Visitor Counter : 151