ಪ್ರಧಾನ ಮಂತ್ರಿಯವರ ಕಛೇರಿ

ʼಕೊನೆಯ ಮೈಲಿಯನ್ನು ತಲುಪುವುದುʼ ವಿಷಯವಾಗಿ ಬಜೆಟ್‌ ಕುರಿತ ವೆಬಿನಾರ್‌ನಲ್ಲಿ ಪ್ರಧಾನ ಮಂತ್ರಿಗಳ ಭಾಷಣ


"ಬಜೆಟ್‌ ಮಂಡನೆಯ ನಂತರದ ಕಾಲವು ಬಜೆಟ್‌ನ ಅನುಷ್ಠಾನ ಹಾಗೂ ಕಾಲಮಿತಿಯಲ್ಲಿ ಜಾರಿಯ ದೃಷ್ಟಿಯಿಂದ ಮಹತ್ವದ್ದೆನಿಸಿದೆ. ಇದು ತೆರಿಗೆದಾರರ ಹಣದ ಪ್ರತಿಯೊಂದು ಪೈಸೆಯ ಸದ್ಬಳಕೆ ಖಾತರಿಗೂ ಉಪಯುಕ್ತವಾಗಿದೆʼʼ

"ನಾವು ಉತ್ತಮ ಆಡಳಿತಕ್ಕೆ ಹೆಚ್ಚಿನ ಒತ್ತು ನೀಡಿದಂತೆ ಫಲಾನುಭವಿಗಳ ಕೊನೆಯ ಮೈಲಿ ತಲುಪುವ ಗುರಿ ಸಾಧನೆಗೂ ಸಹಕಾರಿಯಾಗಲಿದೆʼʼ

ʼʼಕೊನೆಯ ಮೈಲಿಯನ್ನು ತಲುಪುವುದು ಹಾಗೂ ನೀತಿಯ ಸಾರ್ಥಕತೆ ಪರಸ್ಪರ ಪೂರಕವಾಗಿರುತ್ತದೆʼʼ

"ಎಲ್ಲರನ್ನೂತಲುಪುವುದು ನಮ್ಮ ಗುರಿಯಾಗಿರುವಾಗ ತಾರತಮ್ಯ ಹಾಗೂ ಭ್ರಷ್ಟಾಚಾರಕ್ಕೆ ಅವಕಾಶ ನೀಡುವ ಪ್ರಶ್ನೆಯೇ ಇರುವುದಿಲ್ಲʼʼ

"ಈ ಬಾರಿಯ ಬಜೆಟ್‌ ಕೊನೆಯ ಮೈಲಿ ತಲುಪುವ ಮಂತ್ರವನ್ನು ಬುಡಕಟ್ಟು ಮತ್ತು ಗ್ರಾಮೀಣ ಪ್ರದೇಶಗಳಿಗೆ ಕೊಂಡೊಯ್ಯಲು ವಿಶೇಷ ಗಮನ ನೀಡಿದೆʼʼ

"ಇದೇ ಮೊದಲ ಬಾರಿಗೆ ನಮ್ಮ ದೇಶದ ಬುಡಕಟ್ಟು ಸಮುದಾಯಗಳ ದೊಡ್ಡ ಸಾಮರ್ಥ್ಯವನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿದೆ"

"ಬುಡಕಟ್ಟು ಸಮುದಾಯದಲ್ಲೇ ಅತ್ಯಂತ ಅಂಚಿನಲ್ಲಿರುವವರಿಗೆ ವಿಶೇಷ ಮಿಷನ್‌ ಅಡಿ ಸೌಲಭ್ಯಗಳನ್ನು ತ್ವರಿತವಾಗಿ ಕಲ್ಪಿಸಲು ಇಡೀ ದೇಶದಾದ್ಯಂತ ಪ್ರಯತ್ನ ನಡೆದಿದೆʼʼ

ʼʼಕೊನೆಯ ಮೈಲಿ ತಲುಪುವ ಗುರಿ ಸಾಧನೆಗೆ ʼಆಕಾಂಕ್ಷಿ ಜಿಲ್ಲೆʼ ಕಾರ್ಯಕ್ರಮವು ಯಶಸ್ವಿ ಮಾದರಿಯಾಗಿ ಹೊರಹೊಮ್ಮಿದೆʼʼ

Posted On: 27 FEB 2023 10:41AM by PIB Bengaluru

"ಕೊನೆಯ ಮೈಲಿ ತಲುಪುವುದುʼʼ ಕುರಿತಂತೆ ಬಜೆಟ್‌ ವೆಬ್‌ನಾರ್‌ನಲ್ಲಿ ಶ್ರೀ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾಷಣ ಮಾಡಿದರು. 2023-24ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಲಾದ ಯೋಜನೆ, ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ ಸಂಬಂಧ ಸಲಹೆ, ಹೊಸ ಚಿಂತನೆಗಳನ್ನು ಸ್ವೀಕರಿಸುವ ಸಲುವಾಗಿ ಬಜೆಟ್‌ ಮಂಡನೆ ನಂತರ ನಡೆಯುತ್ತಿರುವ 12 ಸರಣಿ ವೆಬ್‌ನಾರ್‌ ಸರಣಿಯ ಭಾಗವಾಗಿ ಇದು ನಾಲ್ಕನೇ ವೆಬಿನಾರ್‌ ಆಗಿದೆ.

ಆರಂಭದಲ್ಲಿ ಸಂಸತ್ತಿನಲ್ಲಿ ಬಜೆಟ್ ಮೇಲಿನ ಚರ್ಚೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಪ್ರಧಾನ ಮಂತ್ರಿಗಳು, "ಸರಕಾರವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕಳೆದ ಕೆಲ ವರ್ಷಗಳಿಂದ ಬಜೆಟ್‌ ಮಂಡನೆ ಬಳಿಕ ಸಂಬಂಧಪಟ್ಟ ಪಾಲುದಾರರೊಂದಿಗೆ ಸಂವಾದ ನಡೆಸುವ ಸಂಪ್ರದಾಯ ಆರಂಭಿಸಿದೆ. "ಬಜೆಟ್‌ ಅನುಷ್ಠಾನ ಹಾಗೂ ಯೋಜನೆಗಳನ್ನು ಫಲಾನುಭವಿಗಳಿಗೆ ಕಾಲಮಿತಿಯಲ್ಲಿ ತಲುಪಿಸುವಲ್ಲಿ ಮಹತ್ವದ್ದಾಗಿದೆ. ಹಾಗೆಯೇ ತೆರಿಗೆದಾರರ ಹಣದ ಪ್ರತಿ ಪೈಸೆಯನ್ನು ಸರಿಯಾಗಿ ಬಳಸಿಕೊಳ್ಳುವುದಕ್ಕೆ ಸಹಕಾರಿಯಾಗಲಿದೆ,ʼʼ ಎಂದು ಹೇಳಿದರು.

ಅಭಿವೃದ್ಧಿಗೆ ಹಣದ ಜತೆಗೆ ರಾಜಕೀಯ ಇಚ್ಛಾಶಕ್ತಿಯೂ ಅಗತ್ಯ ಎಂದು ಪ್ರಧಾನ ಮಂತ್ರಿಗಳು ಪ್ರತಿಪಾದಿಸಿದರು. ಉತ್ತಮ ಆಡಳಿತದ ಮಹತ್ವ ಹಾಗೂ ಗುರಿಗಳನ್ನು ತಲುಪುವಲ್ಲಿನ ಪ್ರಯತ್ನಗಳ ನಿರಂತರ ಮೇಲ್ವಿಚಾರಣೆಯನ್ನು ಒತ್ತಿ ಹೇಳಿದ ಪ್ರಧಾನ ಮಂತ್ರಿಗಳು, "ನಾವು ಉತ್ತಮ ಆಡಳಿತಕ್ಕೆ ಹೆಚ್ಚಿನ ಮಹತ್ವ ನೀಡುತ್ತೇವೆ. ಆ ಮೂಲಕ ಕೊನೆಯ ಮೈಲಿ ತಲುಪುವ ನಮ್ಮ ಗುರಿಯನ್ನು ಸುಲಭವಾಗಿ ಸಾಧಿಸಲು ಸಾಧ್ಯವಾಗಲಿದೆ,ʼʼ ಎಂದು ಹೇಳಿದರು. ʼಇಂದ್ರಧನುಷ್‌ʼ ಯೋಜನೆಯಡಿ ರೋಗನಿರೋಧಕಶಕ್ತಿ ವೃದ್ಧಿಸುವ ಹಾಗೂ ಲಸಿಕೀಕರಣದ ಪ್ರಯತ್ನವನ್ನು ಉದಾಹರಣೆಯಾಗಿ ನೀಡಿದ ಅವರು, "ಕೊರೊನಾ ಸಾಂಕ್ರಾಮಿಕ ರೋಗದ ಸಂದರ್ಭಲ್ಲಿ ಕೊನೆಯ ಮೈಲಿಗೆ ಸೌಲಭ್ಯ ಕಲ್ಪಿಸುವಲ್ಲಿ ಉತ್ತಮ ಆಡಳಿತದ ಶಕ್ತಿಯನ್ನು ಅನಾವರಣಗೊಳಿಸಿದೆ,ʼʼ ಎಂದು ತಿಳಿಸಿದರು.

ನೀತಿಗಳ ಸಾರ್ಥಕತೆ (ಪಾಲಿಸಿ ಆಫ್‌ ಸ್ಯಾಚುರೇಷನ್‌) ಚಿಂತನೆಯನ್ನು ವಿವರಿಸಿದ ಪ್ರಧಾನ ಮಂತ್ರಿಗಳು, "ಕೊನೆಯ ಮೈಲಿಯನ್ನು ತಲುಪುವುದು ಹಾಗೂ ನೀತಿ ಸಾರ್ಥಕತೆ ಪರಸ್ಪರ ಪೂರಕವಾಗಿದ್ದು, ಕೊಡುಗೆ ನೀಡುವಂತಿವೆ,ʼʼ ಎಂದರು. ಈ ಹಿಂದೆ ಬಡವರು ಮೂಲ ಸೌಲಭ್ಯಗಳಿಗಾಗಿ ಸರಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದ ಸ್ಥಿತಿಯನ್ನು ಖಂಡಿಸಿದ ಪ್ರಧಾನ ಮಂತ್ರಿಗಳು, ಈದೀಗ ಸರಕಾರ ಜನರ ಮನೆ ಬಾಗಿಲಿಗೆ ಸೇವೆ ಒದಗಿಸುತ್ತಿದೆ. "ಪ್ರತಿಯೊಂದು ಮೂಲ ಸೌಕರ್ಯವು ಎಲ್ಲ ಪ್ರದೇಶದಲ್ಲಿರುವ ಎಲ್ಲ ಜನರಿಗೂ ತಲುಪಿಸಿದರೆ ಸ್ಥಳೀಯ ಮಟ್ಟದಲ್ಲಿ ಆಡಳಿತ ಕಾರ್ಯಶೈಲಿಯಲ್ಲಿ ದೊಡ್ಡ ಬದಲಾವಣೆ ಕಾಣಬಹುದಾಗಿದೆ. ನೀತಿಯ ಸಾರ್ಥಕತೆ ಚಿಂತನೆಯ ಹಿಂದೆ ಈ ಸದುದ್ದೇಶ ಅಡಗಿದೆ. ಪ್ರತಿಯೊಬ್ಬರನ್ನೂ ತಲುಪುವುದು ನಮ್ಮ ಗುರಿಯಾಗಿರುವಾಗ ತಾರತಮ್ಯ ತೋರುವ ಹಾಗೂ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡುವ ಪ್ರಶ್ನೆಯೇ ಇರುವುದಿಲ್ಲ. ಆಗ ಮಾತ್ರ ನಾವು ಕೊನೆಯ ಮೈಲಿ ತಲುಪುವ ಗುರಿ ಸಾಧಿಸಲು ಸಾಧ್ಯವಾಗಲಿದೆ,ʼʼ ಎಂದು ಹೇಳಿದರು.

"ಪಿಎಂ ಸ್ವಾನಿಧಿʼ ಯೋಜನೆಯನ್ನು ಉದಾಹರಣೆಯಾಗಿ ನೀಡಿದ ಪ್ರಧಾನ ಮಂತ್ರಿಗಳು "ಈ ಯೋಜನೆಯು ಬೀದಿಬದಿ ವ್ಯಾಪಾರಿಗಳು, ಡಿನೋಟಿಫೈಡ್‌ ಸಮುದಾಯಗಳು, ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳಿಗೆ ಔಪಚಾರಿಕ ಬ್ಯಾಂಕಿಂಗ್‌ ಸೇವೆ ಒದಗಿಸಿದೆ. ಹಳ್ಳಿಗಳಲ್ಲಿ 5 ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳ ಜತೆಗೆ 10 ಕೋಟಿ ಪ್ರಕರಣಗಳಲ್ಲಿ ಟೆಲಿ ಮೆಡಿಸಿನ್‌ ಚಿಕಿತ್ಸೆ ಒದಗಿಸಲು ಸಾಧ್ಯವಾಗಿದೆ,ʼʼ ಎಂದು ಹೆಮ್ಮೆಯಿಂದ ನುಡಿದರು.

""ಈ ಬಾರಿಯ ಬಜೆಟ್‌ ಕೊನೆಯ ಮೈಲಿಯನ್ನು ತಲುಪುವ ಮಂತ್ರವನ್ನು ಬುಡಕಟ್ಟು ಮತ್ತು ಗ್ರಾಮೀಣ ಪ್ರದೇಶಗಳಿಗೆ ಕೊಂಡೊಯ್ಯಲು ವಿಶೇಷ ಗಮನ ನೀಡಿದೆ. ಆ ಹಿನ್ನೆಲೆಯಲ್ಲಿ ಜಲ ಜೀವನ್‌ ಮಿಷನ್‌ ಯೋಜನೆಗೆ ಸಾವಿರಾರು ಕೋಟಿ ರೂ. ಹಣ ವಿನಿಯೋಗಿಸಲಾಗುತ್ತಿದೆ. ಹಾಗೆಯೇ 60000 ಅಮೃತ ಸರೋವರ ನಿರ್ಮಾಣ ಕಾರ್ಯವೂ ಆರಂಭವಾಗಿದ್ದು, ಈಗಾಗಲೇ 30000 ಸರೋವರಗಳು ನಿರ್ಮಾಣವಾಗಿವೆ. “ದಶಕಗಳಿಂದ ಈ ರೀತಿಯ ಸೌಲಭ್ಯಗಳಿಗಾಗಿ ಕಾಯುತ್ತಿರುವ ದೂರ ದೂರದ ಪ್ರದೇಶಗಳಲ್ಲಿನ ನೆಲೆಸಿರುವ ಭಾರತೀಯರ ಜೀವನಮಟ್ಟವನ್ನು ಈ ರೀತಿಯ ಅಭಿಯಾನಗಳು ಸುಧಾರಿಸುತ್ತಿವೆ. ನಾವು ನಮ್ಮ ಪ್ರಯತ್ನವನ್ನು ಇಲ್ಲಿಗೇ ನಿಲ್ಲಿಸಬೇಕಿಲ್ಲ. ಹೊಸ ನೀರಿನ ಸಂಪರ್ಕ ಕಲ್ಪಿಸುವ ಜತೆಗೆ ನೀರಿನ ಸದ್ಬಳಕೆಗೆ ಸೂಕ್ತ ಕಾರ್ಯ ವಿಧಾನವನ್ನೂ ರೂಪಿಸಬೇಕಿದೆ. ಜಲ ಸಮಿತಿಗಳನ್ನು ಇನ್ನಷ್ಟು ಬಲವರ್ಧನೆಗೊಳಿಸಲು ಏನೆಲ್ಲಾ ಮಾಡಬೇಕಿದೆ ಎಂಬ ಬಗ್ಗೆಯೂ ಪರಿಶೀಲಿಸಬೇಕಿದೆ,ʼʼ ಎಂದು ಹೇಳಿದರು.

"ಸುಭದ್ರ ಹಾಗೂ ಕೈಗೆಟುವ ದರದಲ್ಲಿ ಮನೆಗಳ ನಿರ್ಮಾಣಕ್ಕಾಗಿ ವಸತಿ ಯೋಜನೆ ಹಾಗೂ ತಂತ್ರಜ್ಞಾನದ ಜೋಡನೆ, ಸೌರಶಕ್ತಿಯ ಸದ್ಭಳಕೆಗೆ ಸುಲಭ ವಿಧಾನಗಳನ್ನು ಗುರುತಿಸುವುದು ಹಾಗೂ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಹೊಂದುವ ಗುಂಪು ವಸತಿ ಮಾದರಿಗಳನ್ನು ರೂಪಿಸುವ ಬಗ್ಗೆಯೂ ಪಾಲುದಾರರು ಚರ್ಚಿಸಬೇಕು. ಸರಕಾರವು ಈ ಬಾರಿಯ ಬಜೆಟ್‌ನಲ್ಲಿ ಬಡವರಿಗೆ ವಸತಿ ಸೌಲಭ್ಯ ಕಲ್ಪಿಸಲುವ ಯೋಜನೆಗೆ 80000 ಕೋಟಿ ರೂ. ಕಾಯ್ದಿರಿಸಿದೆ,ʼʼ ಎಂದು ಪ್ರಧಾನ ಮಂತ್ರಿಗಳು ಹೇಳಿದರು.

"ದೇಶದಲ್ಲಿ ಇದೇ ಪ್ರಥಮ ಬಾರಿ ನಮ್ಮ ದೇಶದ ಬುಡಕಟ್ಟು ಸಮುದಾಯದ ಸಾಮರ್ಥ್ಯವನ್ನು ದೊಡ್ಡ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿದೆ. ಈ ಬಾರಿಯ ಬಜೆಟ್‌ನಲ್ಲೂ ಬುಡಕಟ್ಟು ಜನಾಂಗದ ಅಭಿವೃದ್ಧಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಏಕಲವ್ಯ ವಸತಿ ಶಾಲೆಗಳಿಗೆ ದೊಡ್ಡ ಪ್ರಮಾಣದಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆ ಹಿನ್ನೆಲೆಯಲ್ಲಿ ಈ ಶಾಲೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಪ್ರತಿಕ್ರಿಯೆ ಗಮನಿಸಬೇಕು. ಹಾಗೆಯೇ ಈ ಮಕ್ಕಳು ದೊಡ್ಡ ನಗರಗಳ ಶಾಲಾ ಮಕ್ಕಳು ಪಡೆಯುವ ಅವಕಾಶವನ್ನು ಹೇಗೆ ಪಡೆಯಬಹುದು ಎಂಬ ಬಗ್ಗೆಯೂ ಚಿಂತಿಸಬೇಕು. ಈ ಶಾಲೆಗಳಲ್ಲಿ ಹೆಚ್ಚು ಹೆಚ್ಚು ಅಟಲ್‌ ಟಿಂಕೆರಿಂಗ್‌ ಲ್ಯಾಬ್ಸ್‌ಗಳನ್ನು ತೆರೆಯುವುದು ಹಾಗೂ ಸ್ಟಾರ್ಟ್‌ಅಪ್‌ಗಳಿಗೆ ಸಂಬಂಧಪಟ್ಟಂತೆ ಕಾರ್ಯಾಗಾರಗಳನ್ನು ನಡೆಸುವ ಅಗತ್ಯವಿದೆ,ʼʼ ಎಂದು ಒತ್ತಿ ಹೇಳಿದರು

ಮಾತು ಮುಂದುವರಿಸಿದ ಪ್ರಧಾನ ಮಂತ್ರಿಗಳು, "ಮೊದಲ ಬಾರಿಗೆ ಬುಡಕಟ್ಟು ಸಮುದಾಯಗಳಲ್ಲಿ ಅಂಚಿನಲ್ಲಿರುವವರಿಗೆಂದೇ ವಿಶೇಷ ಮಿಷನ್‌ ಯೋಜನೆಗೆ ಚಾಲನೆ ನೀಡಲಾಗಿದೆ. ದೇಶದ 200 ಜಿಲ್ಲೆಗಳಲ್ಲಿನ 22000ಕ್ಕೂ ಹೆಚ್ಚಿನ ಗ್ರಾಮಗಳಲ್ಲಿನ ಬುಡಕಟ್ಟು ಸಮುದಾಯದ ಸ್ನೇಹಿತರಿಗೆ ಸೌಲಭ್ಯ ಕಲ್ಪಿಸುವ ಕಾರ್ಯವನ್ನು ವ್ಯಾಪಕವಾಗಿ ಕೈಗೊಳ್ಳಬೇಕಿದೆ. ಪಸ್ಮಾಂಡ ಮುಸ್ಲಿಮರೂ ಒಳಗೊಂಡಂತೆ ಎಲ್ಲರಿಗೂ ಸೌಲಭ್ಯ ಕಲ್ಪಿಸಬೇಕಿದೆ. ಇದಕ್ಕಾಗಿ ಬಜೆಟ್‌ನಲ್ಲಿ ಗುರಿಯನ್ನೂ ನಿಗದಿಪಡಿಸಲಾಗಿದೆ. ಇದರ ಯಶಸ್ವಿ ಅನುಷ್ಠಾನಕ್ಕೆ ರಾಷ್ಟ್ರವ್ಯಾಪಿ ಪ್ರಯತ್ನ ನಡೆಯಬೇಕಿದೆ. ಹಾಗಾಗಿ ಆರೋಗ್ಯ ಕ್ಷೇತ್ರದಲ್ಲಿರುವ ಪಾಲುದಾರರು ಹೆಚ್ಚಿನ ಶ್ರಮವಹಿಸಿ ತ್ವರಿತವಾಗಿ ಕಾರ್ಯ ನಿರ್ವಹಿಸಬೇಕು,ʼʼ ಎಂದು ಕರೆ ನೀಡಿದರು

ʼಆಕಾಂಕ್ಷಿ ಜಿಲ್ಲೆʼ ಕಾರ್ಯಕ್ರಮವು ಕೊನೆಯ ಮೈಲಿ ತಲುಪುವ ಗುರಿ ಸಾಧನೆಗೆ ಯಶಸ್ವಿ ಮಾದರಿಯಾಗಿ ರೂಪುಗೊಂಡಿದೆ. ಆ ಪ್ರಯತ್ನವನ್ನು ಇನ್ನಷ್ಟು ಮುಂದೆ ಕೊಂಡೊಯ್ಯುವ ನಿಟ್ಟಿನಲ್ಲಿ ದೇಶದ 500 ಬ್ಲಾಕ್‌ಗಳಲ್ಲಿ ಆಕಾಂಕ್ಷಿ ಬ್ಲಾಕ್‌ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ಆಕಾಂಕ್ಷಿ ಜಿಲ್ಲೆ ಕಾರ್ಯಕ್ರಮಕ್ಕೆ ಅನುಸರಿಸಿದ ಮಾನದಂಡಗಳನ್ನೇ ಆಕಾಂಕ್ಷಿ ಬ್ಲಾಕ್‌ ಕಾರ್ಯಕ್ರಮಗಳಲ್ಲೂ ಅಳವಡಿಸಿಕೊಳ್ಳುವುದನ್ನು ಗಮನದಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸಬೇಕು. ಬ್ಲಾಕ್‌ ಮಟ್ಟದಲ್ಲಿಯೇ ಆರೋಗ್ಯಕರ ಸ್ಪರ್ಧೆಯ ವಾತಾವರಣ ಸೃಷ್ಟಿಸಬೇಕು,ʼʼ ಎಂದು ಹೇಳುವ ಮೂಲಕ ಪ್ರಧಾನ ಮಂತ್ರಿಗಳು ಮಾತಿಗೆ ವಿರಾಮ ಹೇಳಿದರು.

 

***



(Release ID: 1902788) Visitor Counter : 140