ಪ್ರಧಾನ ಮಂತ್ರಿಯವರ ಕಛೇರಿ

​​​​​​​ವಿಶ್ವ ಶಾಂತಿಗಾಗಿ ಜರುಗಿದ ಕೃಷ್ಣಗುರು ಏಕನಾಮ ಅಖಂಡ ಕೀರ್ತನೆ ಸಮಾರಂಭದಲ್ಲಿ ಪ್ರಧಾನಮಂತ್ರಿಯವರು ಮಾಡಿದ ಹಿಂದಿ ಭಾಷಣದ ಕನ್ನಡ ಅವತರಣಿಕೆ

Posted On: 03 FEB 2023 7:43PM by PIB Bengaluru

ಜೈ ಕೃಷ್ಣಗುರು!

ಜೈ ಕೃಷ್ಣಗುರು!

ಜೈ ಕೃಷ್ಣಗುರು!

ಜೈ ಜಯತೇ ಪರಮ ಕೃಷ್ಣಗುರು ಈಶ್ವರ!

ಕೃಷ್ಣಗುರು ಸೇವಾಶ್ರಮದಲ್ಲಿ ನೆರೆದಿರುವ ಎಲ್ಲ ಸಂತರು, ಋಷಿಮುನಿಗಳು ಮತ್ತು ಭಕ್ತರಿಗೆ ನನ್ನ ಗೌರವಪೂರ್ವಕ ನಮನಗಳು. ಕಳೆದ ಒಂದು ತಿಂಗಳಿನಿಂದ ಕೃಷ್ಣಗುರು ಏಕನಾಮ ಅಖಂಡ ಕೀರ್ತನೆ ನಡೆಯುತ್ತಿದೆ. ಕೃಷ್ಣಗುರುಜೀಯವರು ಪ್ರಚಾರ ಮಾಡಿದ ಪ್ರಾಚೀನ ಭಾರತೀಯ ಜ್ಞಾನ, ಸೇವೆ ಮತ್ತು ಮಾನವೀಯತೆಯ ಸಂಪ್ರದಾಯಗಳು ಇಂದಿಗೂ ಬೆಳೆಯುತ್ತಿರುವುದು ನನಗೆ ಸಂತೋಷ ತಂದಿದೆ. ಗುರುಕೃಷ್ಣ ಪ್ರೇಮಾನಂದ ಪ್ರಭು ಜೀ ಅವರ ಆಶೀರ್ವಾದ ಮತ್ತು ಸಹಕಾರ ಮತ್ತು ಕೃಷ್ಣಗುರುಗಳ ಭಕ್ತರ ಪ್ರಯತ್ನದಿಂದ ಈ ಸಂದರ್ಭದಲ್ಲಿ ದೈವತ್ವವು ಸ್ಪಷ್ಟವಾಗಿ ಗೋಚರಿಸುತ್ತದೆ. ನಾನು ಅಸ್ಸಾಂಗೆ ಬಂದು ನಿಮ್ಮೆಲ್ಲರೊಂದಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದೆಂದು ನಾನು ಬಯಸುತ್ತೇನೆ! ನಾನು ಹಿಂದೆ ಕೃಷ್ಣಗುರುಜೀಯವರ ಪವಿತ್ರ ನಿವಾಸಕ್ಕೆ ಬರಲು ಹಲವಾರು ಪ್ರಯತ್ನಗಳನ್ನು ಮಾಡಿದ್ದೇನೆ. ಆದರೆ ಬಹುಶಃ ನಾನು ನಿಮ್ಮಲ್ಲಿಗೆ ಬರಲು ಸಾಧ್ಯವಾಗದ ನನ್ನ ಪ್ರಯತ್ನದಲ್ಲಿ ಕೆಲವು ವಿಫಲತೆಗಳಿರಬೇಕು. ಕೃಷ್ಣಗುರುಗಳ ಆಶೀರ್ವಾದವು ಸದ್ಯದಲ್ಲಿಯೇ ಅಲ್ಲಿಗೆ ಬಂದು ನಿಮ್ಮೆಲ್ಲರಿಗೂ ನಮಸ್ಕರಿಸಿ ನಿಮ್ಮನ್ನು ಭೇಟಿಯಾಗಲು ಅವಕಾಶವನ್ನು ನೀಡಬೇಕೆಂದು ನಾನು ಬಯಸುತ್ತೇನೆ.

ಸ್ನೇಹಿತರೇ,

ಕೃಷ್ಣಗುರು ಜೀ  ಅವರು ವಿಶ್ವ ಶಾಂತಿಗಾಗಿ ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಒಂದು ತಿಂಗಳ ಅವಧಿಯ 'ಅಖಂಡ ಏಕನಾಮ ಜಪ' ಆಚರಣೆಯನ್ನು ಪ್ರಾರಂಭಿಸಿದರು. ನಮ್ಮ ದೇಶದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಪ್ರಾಚೀನ ಸಂಪ್ರದಾಯವಿದೆ. ಮತ್ತು ಈ ಘಟನೆಗಳ ಮುಖ್ಯ ವಿಷಯವೆಂದರೆ ಕರ್ತವ್ಯ. ಈ ಘಟನೆಗಳು ವ್ಯಕ್ತಿ ಮತ್ತು ಸಮಾಜದಲ್ಲಿ ಕರ್ತವ್ಯ ಪ್ರಜ್ಞೆಯನ್ನು ಪುನರುಜ್ಜೀವನಗೊಳಿಸುತ್ತವೆ. ದೇಶಾದ್ಯಂತ ಜನರು ಈ ಕಾರ್ಯಕ್ರಮಗಳಲ್ಲಿ ಒಟ್ಟುಗೂಡುತ್ತಿದ್ದರು ಮತ್ತು ಕಳೆದ 12 ವರ್ಷಗಳ ಘಟನೆಗಳನ್ನು ಚರ್ಚಿಸುತ್ತಾರೆ ಮತ್ತು ಪರಿಶೀಲಿಸುತ್ತಾರೆ, ವರ್ತಮಾನವನ್ನು ಮೌಲ್ಯಮಾಪನ ಮಾಡುತ್ತಾರೆ ಮತ್ತು ಭವಿಷ್ಯದ ನೀಲನಕ್ಷೆಯನ್ನು ರಚಿಸುತ್ತಾರೆ. ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳದ ಸಂಪ್ರದಾಯವೂ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. 2019 ರಲ್ಲಿಯೇ ಅಸ್ಸಾಂನ ಜನರು ಬ್ರಹ್ಮಪುತ್ರ ನದಿಯಲ್ಲಿ ಪುಷ್ಕರಂ ಸಮಾರಂಭವನ್ನು ಯಶಸ್ವಿಯಾಗಿ ಆಯೋಜಿಸಿದರು. ಈಗ ಮತ್ತೆ ಈ ಕಾರ್ಯಕ್ರಮ 12ನೇ ವರ್ಷದಲ್ಲಿ ಬ್ರಹ್ಮಪುತ್ರ ನದಿಯಲ್ಲಿ ನಡೆಯಲಿದೆ. ತಮಿಳುನಾಡಿನ ಕುಂಭಕೋಣಂನಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಮಹಾಮಹಂ ಹಬ್ಬವನ್ನು ಆಚರಿಸಲಾಗುತ್ತದೆ. ಭಗವಾನ್ ಬಾಹುಬಲಿಯ ‘ಮಹಾಮಸ್ತಕಾಭಿಷೇಕ’ ಕೂಡ 12 ವರ್ಷಗಳ ನಂತರವೇ ನಡೆಯುತ್ತದೆ. ನೀಲಗಿರಿ ಬೆಟ್ಟಗಳಲ್ಲಿ ಅರಳುವ ನೀಲಕುರಿಂಜಿ ಹೂವು ಕೂಡ 12 ವರ್ಷಗಳಿಗೊಮ್ಮೆ ಬೆಳೆಯುವುದು ಕಾಕತಾಳೀಯ. ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಕೃಷ್ಣಗುರು ಏಕನಾಮ ಅಖಂಡ ಕೀರ್ತನೆಯು ಅಂತಹ ಪ್ರಬಲ ಸಂಪ್ರದಾಯವನ್ನು ಸೃಷ್ಟಿಸುತ್ತಿದೆ. ಈ ‘ಕೀರ್ತನೆ’ ಈಶಾನ್ಯದ ಪರಂಪರೆ ಮತ್ತು ಅದರ ಆಧ್ಯಾತ್ಮಿಕ ಪ್ರಜ್ಞೆಯನ್ನು ಜಗತ್ತಿಗೆ ಪರಿಚಯಿಸುತ್ತಿದೆ. ಈ ಕಾರ್ಯಕ್ರಮಕ್ಕಾಗಿ ನಾನು ನಿಮ್ಮೆಲ್ಲರಿಗೂ ಅನೇಕಾನೇಕ ಶುಭಾಶಯಗಳನ್ನು ಕೋರುತ್ತೇನೆ.

ಸ್ನೇಹಿತರೇ,

ಕೃಷ್ಣಗುರು ಜೀ ಯವರ ಅಸಾಧಾರಣ ಪ್ರತಿಭೆ, ಅವರ ಆಧ್ಯಾತ್ಮಿಕ ತಿಳುವಳಿಕೆ ಮತ್ತು ಅವರಿಗೆ ಸಂಬಂಧಿಸಿದ ಅಸಾಧಾರಣ ಘಟನೆಗಳು ನಮಗೆಲ್ಲರಿಗೂ ಸ್ಫೂರ್ತಿ ನೀಡುತ್ತಲೇ ಇರುತ್ತವೆ. ಯಾವುದೇ ಕೆಲಸ ಅಥವಾ ವ್ಯಕ್ತಿ ಚಿಕ್ಕದಲ್ಲ ಅಥವಾ ದೊಡ್ಡದಲ್ಲ ಎಂದು ಅವರು ನಮಗೆ ಕಲಿಸಿದ್ದಾರೆ. ರಾಷ್ಟ್ರವು ಕಳೆದ ಎಂಟು-ಒಂಬತ್ತು ವರ್ಷಗಳಲ್ಲಿ ಸಂಪೂರ್ಣ ಸಮರ್ಪಣೆಯೊಂದಿಗೆ ಪ್ರತಿಯೊಬ್ಬರ ಅಭಿವೃದ್ಧಿಗಾಗಿ (ಸಬ್ಕಾ ವಿಕಾಸ್) ಎಲ್ಲರನ್ನು ಜೊತೆಯಲ್ಲಿ ಕರೆದೊಯ್ಯುವ (ಸಬ್ಕಾ ಸಾಥ್) ಅದೇ ಮನೋಭಾವದಿಂದ ತನ್ನ ಜನರ ಒಳಿತಿಗಾಗಿ ಕೆಲಸ ಮಾಡಿದೆ. ಇಂದು ಅಭಿವೃದ್ಧಿಯ ಓಟದಲ್ಲಿ ಹಿಂದುಳಿದವರಿಗೆ ದೇಶದ ಮೊದಲ ಆದ್ಯತೆಯಿದೆ. ಅಂದರೆ ದೇಶ ವಂಚಿತರಿಗೆ ಆದ್ಯತೆ ನೀಡುತ್ತಿದೆ. ಅಸ್ಸಾಂ ಆಗಿರಲಿ ಅಥವಾ ನಮ್ಮ ಈಶಾನ್ಯ ರಾಜ್ಯಗಳ ಪ್ರದೆಶವೇ ಆಗಿರಲಿ, ಅಭಿವೃದ್ಧಿ ಮತ್ತು ಸಂಪರ್ಕದ ವಿಚಾರದಲ್ಲಿ ದಶಕಗಳಿಂದ ನಿರ್ಲಕ್ಷಿಸಲಾಗಿದೆ. ಇಂದು ದೇಶವು ಅಸ್ಸಾಂ ಮತ್ತು ಈಶಾನ್ಯ ಭಾಗದ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ. ಈ ವರ್ಷದ ಬಜೆಟ್ ದೇಶ ಮತ್ತು ನಮ್ಮ ಭವಿಷ್ಯದ ಈ ಪ್ರಯತ್ನಗಳ ಬಲವಾದ ನೋಟವನ್ನು ಸಹ ಪ್ರದರ್ಶಿಸಿದೆ. ಈಶಾನ್ಯದ ಆರ್ಥಿಕತೆ ಮತ್ತು ಪ್ರಗತಿಯಲ್ಲಿ ಪ್ರವಾಸೋದ್ಯಮವು ಪ್ರಮುಖ ಪಾತ್ರ ವಹಿಸುತ್ತದೆ. ಪ್ರವಾಸೋದ್ಯಮ ಸಂಬಂಧಿತ ಅವಕಾಶಗಳನ್ನು ಹೆಚ್ಚಿಸಲು ಈ ವರ್ಷದ ಬಜೆಟ್‌ನಲ್ಲಿ ವಿಶೇಷ ನಿಬಂಧನೆಗಳನ್ನು ಮಾಡಲಾಗಿದೆ. ವಿಶೇಷ ಅಭಿಯಾನದ ಮೂಲಕ ದೇಶದ ಐವತ್ತು ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲಾಗುವುದು. ಆಧುನಿಕ ಮೂಲಸೌಕರ್ಯಗಳನ್ನು ರಚಿಸಲಾಗುವುದು, ವರ್ಚುವಲ್ ಸಂಪರ್ಕವನ್ನು ಸುಧಾರಿಸಲಾಗುವುದು ಮತ್ತು ಈ ನಿಟ್ಟಿನಲ್ಲಿ ಪ್ರವಾಸಿ ಸೌಲಭ್ಯಗಳನ್ನು ಸಹ ರಚಿಸಲಾಗುವುದು. ಈ ಅಭಿವೃದ್ಧಿ ಉಪಕ್ರಮಗಳಿಂದ ಈಶಾನ್ಯ ಭಾರತದ ರಾಜ್ಯಗಳು ಮತ್ತು ಅಸ್ಸಾಂ ಭಾರೀ ಪ್ರಯೋಜನಗಳನ್ನು ಪಡೆಯಲಿದೆ. ಅಂದಹಾಗೆ, ಇಂದು ನಾನು ಈ ಸಮಾರಂಭದಲ್ಲಿ ಒಟ್ಟುಗೂಡಿದ ಎಲ್ಲಾ ಸಂತರು ಮತ್ತು ವಿದ್ವಾಂಸರೊಂದಿಗೆ ಪ್ರಮುಖ ಮಾಹಿತಿಯನ್ನು ಹಂಚಿಕೊಳ್ಳಲು ಬಯಸುತ್ತೇನೆ. ಗಂಗಾ ವಿಲಾಸ್ ಕ್ರೂಸ್ ಬಗ್ಗೆ ನೀವೆಲ್ಲರೂ ಕೇಳಿರಬೇಕು. ಗಂಗಾ ವಿಲಾಸ್ ಕ್ರೂಸ್ ವಿಶ್ವದ ಅತಿ ಉದ್ದದ ನದಿ ವಿಹಾರವಾಗಿದೆ. ಈ ನೌಕಾಯಾನದಲ್ಲಿ ಹೆಚ್ಚಿನ ಸಂಖ್ಯೆಯ ವಿದೇಶಿ ಪ್ರವಾಸಿಗರೂ ಇದ್ದಾರೆ. ಬನಾರಸ್‌ ನಿಂದ ಪ್ರಾರಂಭವಾಗಿ ಪಾಟ್ನಾ, ಬಕ್ಸರ್, ಬಿಹಾರದ ಮುಂಗೇರ್ ಮತ್ತು ಬಂಗಾಳದ ಕೋಲ್ಕತ್ತಾದವರೆಗೆ ಈ ಕ್ರೂಸ್ ಬಾಂಗ್ಲಾದೇಶವನ್ನು ತಲುಪಿದೆ. ಶೀಘ್ರದಲ್ಲೇ ಅಸ್ಸಾಂ ತಲುಪಲಿದೆ. ಪ್ರವಾಸಿಗರಿಗೆ ಈ ಸ್ಥಳಗಳ ಜೊತೆಗೆ ನದಿಗಳ ಮೂಲಕ ಸಂಸ್ಕೃತಿಯನ್ನು ವಿವರವಾಗಿ ಪರಿಚಯಿಸಲಾಗುತ್ತಿದೆ. ಭಾರತದ ಅಮೂಲ್ಯವಾದ ಸಾಂಸ್ಕೃತಿಕ ಪರಂಪರೆಯ ಮಹತ್ತರವಾದ ಪ್ರಾಮುಖ್ಯತೆಯು ನಮ್ಮ ನದಿ ದಡದಲ್ಲಿದೆ, ಏಕೆಂದರೆ ನಮ್ಮ ಸಂಪೂರ್ಣ ಸಂಸ್ಕೃತಿಯ ಅಭಿವೃದ್ಧಿ ಪಯಣವು ನದಿ ದಡಗಳಿಗೆ ಸಂಬಂಧಿಸಿದೆ. ಗಂಗಾ ವಿಲಾಸ್ ವಿಹಾರ ನೌಕೆ ಮೂಲಕ ಅಸ್ಸಾಮಿ ಸಂಸ್ಕೃತಿ ಮತ್ತು ಸೌಂದರ್ಯವು ಹೊಸ ರೀತಿಯಲ್ಲಿ ಜಗತ್ತನ್ನು ತಲುಪುತ್ತದೆ ಎಂದು ನನಗೆ ಖಾತ್ರಿಯಿದೆ.  

ಸ್ನೇಹಿತರೇ,

ಕೃಷ್ಣಗುರು ಸೇವಾಶ್ರಮವು ವಿವಿಧ ಸಂಸ್ಥೆಗಳ ಮೂಲಕ ಸಾಂಪ್ರದಾಯಿಕ ಕರಕುಶಲ ಮತ್ತು ಕೌಶಲ್ಯಗಳಲ್ಲಿ ತೊಡಗಿರುವ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತದೆ. ಕಳೆದ ಕೆಲವು ವರ್ಷಗಳಲ್ಲಿ, ದೇಶವು ಈಶಾನ್ಯದ ಸಾಂಪ್ರದಾಯಿಕ ಕೌಶಲ್ಯಗಳನ್ನು ಜಾಗತಿಕ ಮಾರುಕಟ್ಟೆಗೆ ಹೊಸ ಗುರುತನ್ನು ನೀಡುವ ಮೂಲಕ ಸಂಪರ್ಕಿಸುವ ಐತಿಹಾಸಿಕ ದಿಕ್ಕಿನಲ್ಲಿ ತೊಡಗಿಸಿಕೊಂಡಿದೆ. ಇಂದು ದೇಶ ಮತ್ತು ಪ್ರಪಂಚದಾದ್ಯಂತದ ಜನರು ಅಸ್ಸಾಂನ ಕಲೆ, ಜನರ ಬಿದಿರಿನ ಬೆತ್ತದ ಕೌಶಲ್ಯಗಳನ್ನು ಅರಿತು ಸ್ಥಳೀಯ ಬಿದಿರು ಉತ್ಪನ್ನಗಳನ್ನು ಸ್ವಾಗತಿಸಿದ್ದಾರೆ.   ಈ ಹಿಂದೆ ಬಿದಿರನ್ನು ಮರಗಳ ವರ್ಗಕ್ಕೆ ಸೇರಿಸಿ ಕಡಿಯುವುದನ್ನು ಕಾನೂನುಬದ್ಧವಾಗಿ ನಿಷೇಧಿಸಲಾಗಿತ್ತು ಎಂಬುದು ನಿಮಗೆ ತಿಳಿದಿರುತ್ತದೆ. ಈ ಕಾನೂನನ್ನು ಗುಲಾಮಗಿರಿಯ ಅವಧಿಯಲ್ಲಿ ಜಾರಿಗೆ ತಂದ ಕಾನೂನು ಎಂದು ಬದಲಾಯಿಸಿದ್ದೇವೆ. ಬಿದಿರನ್ನು ಹುಲ್ಲಿನ ವಿಭಾಗದಲ್ಲಿ ಸೇರಿಸಿರುವುದರಿಂದ ಸಾಂಪ್ರದಾಯಿಕ ಉದ್ಯೋಗಕ್ಕೆ ಎಲ್ಲಾ ಮಾರ್ಗಗಳು ತೆರೆದುಕೊಂಡಿವೆ. ಈಗ ಈ ಉತ್ಪನ್ನಗಳ ಗುಣಮಟ್ಟ ಮತ್ತು ಪ್ರವೇಶವನ್ನು ಹೆಚ್ಚಿಸುವ ಮೂಲಕ ಅಂತಹ ಸಾಂಪ್ರದಾಯಿಕ ಕೌಶಲ್ಯ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ವಿಶೇಷ ನಿಬಂಧನೆಯನ್ನು ಮಾಡಲಾಗಿದೆ. ಅಂತಹ ಉತ್ಪನ್ನಗಳಿಗೆ ಮನ್ನಣೆ ನೀಡುವ ಸಲುವಾಗಿ ಪ್ರತಿ ರಾಜ್ಯದಲ್ಲೂ ‘ಏಕ್ತಾ ಮಾಲ್’ (ಯುನಿಟಿ ಮಾಲ್) ಅಭಿವೃದ್ಧಿಪಡಿಸಲು ಈ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಅಂದರೆ, ಅಸ್ಸಾಂನ ರೈತರು, ಕುಶಲಕರ್ಮಿಗಳು ಮತ್ತು ಯುವಕರು ತಯಾರಿಸಿದ ಉತ್ಪನ್ನಗಳು ತಮ್ಮ ಮಾರಾಟವನ್ನು ಹೆಚ್ಚಿಸುವ ಪ್ರಯತ್ನದಲ್ಲಿ ‘ಏಕ್ತಾ ಮಾಲ್’ನಲ್ಲಿ ವಿಶೇಷ ಪ್ರದರ್ಶನವನ್ನು ಹೊಂದಿರುತ್ತವೆ. ಅಷ್ಟೇ ಅಲ್ಲ, ಅಸ್ಸಾಂನ ಉತ್ಪನ್ನಗಳನ್ನು ರಾಜ್ಯದ ರಾಜಧಾನಿಗಳು ಮತ್ತು ಇತರ ಪ್ರಮುಖ ಪ್ರವಾಸಿ ತಾಣಗಳಲ್ಲಿ ನಿರ್ಮಿಸುವ ‘ಏಕ್ತಾ ಮಾಲ್’ನಲ್ಲಿ ಪ್ರದರ್ಶಿಸಲಾಗುತ್ತದೆ. ಪ್ರವಾಸಿಗರು ದೇಶದ ಇತರ ಭಾಗಗಳಲ್ಲಿ ‘ಏಕ್ತಾ ಮಾಲ್’ಗೆ ಭೇಟಿ ನೀಡಿದಾಗ ಅಸ್ಸಾಂನ ಉತ್ಪನ್ನಗಳಿಗೂ ಹೊಸ ಮಾರುಕಟ್ಟೆ ಸಿಗುತ್ತದೆ.  

ಸ್ನೇಹಿತರೇ,

ಅಸ್ಸಾಂನ ಕರಕುಶಲ ವಸ್ತುಗಳ ವಿಷಯಕ್ಕೆ ಬಂದರೆ, 'ಗಾಮೋಸಾ' ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ನಾನೇ 'ಗಾಮೋಸಾ' ಧರಿಸಲು ಬಹಳ ಇಷ್ಟಪಡುತ್ತೇನೆ. ಪ್ರತಿ ಸುಂದರವಾದ ‘ಗಾಮೋಸಾ’ದಲ್ಲಿಯೂ ಅಸ್ಸಾಂನ ಮಹಿಳೆಯರು, ನಮ್ಮ ತಾಯಂದಿರು ಮತ್ತು ಸಹೋದರಿಯರ ಬಹಳ ಶ್ರಮವಿದೆ. ಕಳೆದ ಎಂಟು-ಒಂಬತ್ತು ವರ್ಷಗಳಲ್ಲಿ ದೇಶದಲ್ಲಿ ‘ಗಾಮೋಸ’ದ ಆಕರ್ಷಣೆ ಮತ್ತು ಬೇಡಿಕೆ ಹೆಚ್ಚಿದೆ. ಈ ಬೃಹತ್ ಬೇಡಿಕೆಯನ್ನು ಪೂರೈಸಲು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಸ್ವಸಹಾಯ ಗುಂಪುಗಳನ್ನು ರಚಿಸಲಾಗಿದೆ. ಈ ಗುಂಪುಗಳಲ್ಲಿ ಲಕ್ಷಾಂತರ ಮಹಿಳೆಯರು ಉದ್ಯೋಗ ಪಡೆಯುತ್ತಿದ್ದಾರೆ. ಈಗ ಈ ಗುಂಪುಗಳು ಮುಂದೆ ಹೋಗಿ ದೇಶದ ಆರ್ಥಿಕತೆಯ ಶಕ್ತಿಯಾಗುತ್ತವೆ. ಈ ನಿಟ್ಟಿನಲ್ಲಿ ಈ ಬಾರಿಯ ಬಜೆಟ್‌ನಲ್ಲಿ ವಿಶೇಷ ಅವಕಾಶ ಕಲ್ಪಿಸಲಾಗಿದೆ. ಮಹಿಳೆಯರ ಆದಾಯವನ್ನು ಅವರ ಸಬಲೀಕರಣದ ಸಾಧನವನ್ನಾಗಿ ಮಾಡಲು ‘ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ’ ಯೋಜನೆಯನ್ನು ಸಹ ಪ್ರಾರಂಭಿಸಲಾಗಿದೆ. ಮಹಿಳೆಯರು ವಿಶೇಷವಾಗಿ ಉಳಿತಾಯದ ಮೇಲಿನ ಹೆಚ್ಚಿನ ಬಡ್ಡಿಯ ಲಾಭವನ್ನು ಪಡೆಯುತ್ತಾರೆ. ಅಲ್ಲದೆ, ಪ್ರಧಾನಮಂತ್ರಿ ಆವಾಸ್ ಯೋಜನೆಯ ಬಜೆಟ್ ಅನ್ನು ರೂ. 70,000 ಕೋಟಿಗಳಿಗೆ ಹೆಚ್ಚಿಸಲಾಗಿದೆ, ಇದರಿಂದ ಪಕ್ಕಾ ಮನೆ ಇಲ್ಲದ ಪ್ರತಿ ಬಡ ಕುಟುಂಬಕ್ಕೆ ಪಕ್ಕಾ ಮನೆ ಸಿಗುತ್ತದೆ. ಈ ಮನೆಗಳು ಹೆಚ್ಚಾಗಿ ಮಹಿಳೆಯರ ಹೆಸರಿನಲ್ಲಿ ನೋಂದಣಿಯಾಗಿವೆ. ಈ ಮನೆಗಳ ಕಾನೂನುಬದ್ಧ ಮಾಲೀಕರು ಮಹಿಳೆಯರು. ಅಸ್ಸಾಂ, ನಾಗಾಲ್ಯಾಂಡ್, ತ್ರಿಪುರಾ, ಮೇಘಾಲಯ ಮುಂತಾದ ಈಶಾನ್ಯ ರಾಜ್ಯಗಳ ಮಹಿಳೆಯರಿಗೆ ವ್ಯಾಪಕವಾಗಿ ಪ್ರಯೋಜನವನ್ನು ನೀಡುವ ಹಲವಾರು ಅವಕಾಶಗಳು ಈ ಬಜೆಟ್‌ನಲ್ಲಿವೆ ಮತ್ತು ಅವರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಾಗುತ್ತದೆ.

ಸ್ನೇಹಿತರೇ,

ದೈನಂದಿನ ಭಕ್ತಿ ಕಾರ್ಯಗಳಲ್ಲಿ, ನಂಬಿಕೆಯಿಂದ ನಿಮ್ಮ ಆತ್ಮಕ್ಕೆ ಸೇವೆಮಾಡಿ ಎಂದು ಕೃಷ್ಣಗುರುಗಳು ಹೇಳುತ್ತಿದ್ದರು. ಈ ಮಂತ್ರದಲ್ಲಿ ಆತ್ಮ ಸೇವೆ, ಸಮಾಜ ಸೇವೆ ಮತ್ತು ಸಮಾಜವನ್ನು ಅಭಿವೃದ್ಧಿಪಡಿಸುವ ಶಕ್ತಿ ಬಹಳಷ್ಟಿದೆ. ಸಮಾಜಕ್ಕೆ ಸಂಬಂಧಿಸಿದ ಪ್ರತಿಯೊಂದು ಆಯಾಮದಲ್ಲೂ ಕೃಷ್ಣಗುರು ಸೇವಾಶ್ರಮ ಈ ಮಂತ್ರದೊಂದಿಗೆ ಕೆಲಸ ಮಾಡುತ್ತಿರುವುದು ನನಗೆ ಖುಷಿ ತಂದಿದೆ. ನೀವು ನಡೆಸುತ್ತಿರುವ ಈ ಸೇವೆಗಳು ದೇಶದ ದೊಡ್ಡ ಶಕ್ತಿಯಾಗುತ್ತಿವೆ. ಸರ್ಕಾರ ದೇಶದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ ದೇಶದ ಕಲ್ಯಾಣ ಯೋಜನೆಗಳ ಜೀವಾಳ ಸಮಾಜದ ಶಕ್ತಿ ಮತ್ತು ಜನರ ಸಹಭಾಗಿತ್ವ. ದೇಶವು ಆರಂಭಿಸಿದ ಸ್ವಚ್ಛ ಭಾರತ ಅಭಿಯಾನವು ಜನರ ಸಹಭಾಗಿತ್ವದಿಂದ ಹೇಗೆ ಯಶಸ್ವಿಯಾಯಿತು ಎಂಬುದನ್ನು ನಾವು ನೋಡಿದ್ದೇವೆ. ಡಿಜಿಟಲ್ ಇಂಡಿಯಾ ಅಭಿಯಾನದ ಯಶಸ್ಸಿನ ಹಿಂದಿನ ದೊಡ್ಡ ಕಾರಣವೆಂದರೆ ಜನರ ಭಾಗವಹಿಸುವಿಕೆ. ದೇಶವನ್ನು ಸಶಕ್ತಗೊಳಿಸುವ ಇಂತಹ ಹಲವು ಯೋಜನೆಗಳನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಕೃಷ್ಣಗುರು ಸೇವಾಶ್ರಮದ ಪಾತ್ರ ಬಹಳ ಮಹತ್ವದ್ದಾಗಿದೆ. ಉದಾಹರಣೆಗೆ, ಸೇವಾಶ್ರಮವು ಮಹಿಳೆಯರು ಮತ್ತು ಯುವಕರಿಗಾಗಿ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ನಡೆಸುತ್ತದೆ. 'ಮಗಳನ್ನು ಉಳಿಸಿ, ಮಗಳಿಗೆ ಶಿಕ್ಷಣ ನೀಡಿ(ಬೇಟಿ-ಬಚಾವೋ, ಬೇಟಿ-ಪಢಾವೋ)' ಮತ್ತು 'ಪೋಷಣೆ(ಪೋಶನ್)' ನಂತಹ ಅಭಿಯಾನಗಳನ್ನು ಮುಂದಕ್ಕೆ ಕೊಂಡೊಯ್ಯುವ ಜವಾಬ್ದಾರಿಯನ್ನು ಸಹ ನೀವು ತೆಗೆದುಕೊಳ್ಳಬಹುದು. 'ಕ್ರೀಡಾ ಭಾರತ(ಖೇಲೋ ಇಂಡಿಯಾ)' ಮತ್ತು 'ಸ್ವಾಸ್ಥ್ಯ ಭಾರತ(ಫಿಟ್ ಇಂಡಿಯಾ)' ದಂತಹ ಅಭಿಯಾನಗಳೊಂದಿಗೆ ಹೆಚ್ಚು ಹೆಚ್ಚು ಯುವಕರನ್ನು ಸಂಪರ್ಕಿಸಲು ಸೇವಾಶ್ರಮದ ಪ್ರೇರಣೆ ಬಹಳ ಮುಖ್ಯವಾಗಿದೆ. ಯೋಗ ಮತ್ತು ಆಯುರ್ವೇದದ ಪ್ರಚಾರದಲ್ಲಿ ನಿಮ್ಮ ಭಾಗವಹಿಸುವಿಕೆ ಸಾಮಾಜಿಕ ರಚನೆಯನ್ನು ಬಲಪಡಿಸುತ್ತದೆ.

ಸ್ನೇಹಿತರೇ,

ಯಾವುದೇ ಉಪಕರಣದ ಸಹಾಯದಿಂದ, ಹಸ್ತಚಾಲಿತವಾಗಿ,  ಕೈಯಿಂದ ಕೆಲಸ ಮಾಡುವ ಕುಶಲಕರ್ಮಿಗಳು ನುರಿತ ಜನರು ಮತ್ತು ನಮ್ಮ ದೇಶದಲ್ಲಿ ವಿಶ್ವಕರ್ಮ ಎಂದು ಕರೆಯುತ್ತಾರೆ ಎಂದು ನಿಮಗೆ ತಿಳಿದಿದೆ. ದೇಶವು ಈಗ ಮೊದಲ ಬಾರಿಗೆ ಈ ಸಾಂಪ್ರದಾಯಿಕ ಕುಶಲಕರ್ಮಿಗಳ ಕೌಶಲ್ಯಗಳನ್ನು ಹೆಚ್ಚಿಸಲು ನಿರ್ಧರಿಸಿದೆ. ಅವರಿಗಾಗಿ ಪ್ರಧಾನಮಂತ್ರಿ-ವಿಶ್ವಕರ್ಮ ಕೌಶಲ್ ಸಮ್ಮಾನ್ ಅಂದರೆ ಪ್ರಧಾನಮಂತ್ರಿ ವಿಕಾಸ್ ಯೋಜನೆ ಆರಂಭಿಸಲಾಗುತ್ತಿದೆ ಮತ್ತು ಈ ವರ್ಷದ ಬಜೆಟ್‌ನಲ್ಲಿ ಇದನ್ನು ವಿವರವಾಗಿ ವಿವರಿಸಲಾಗಿದೆ. ಕೃಷ್ಣಗುರು ಸೇವಾಶ್ರಮ ವಿಶ್ವಕರ್ಮ ಮಿತ್ರರಿಗೂ ಈ ಯೋಜನೆಯ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಪ್ರಯೋಜನ ಪಡೆಯಬಹುದು.  

ಸ್ನೇಹಿತರೇ,

ಭಾರತದ ಪ್ರಯತ್ನ ಮತ್ತು ಉಪಕ್ರಮದ ಮೇರೆಗೆ ಇಡೀ ಜಗತ್ತು 2023 ಅನ್ನು ಸಿರಿಧಾನ್ಯ (ರಾಗಿ) ವರ್ಷ ಎಂದು ಆಚರಿಸುತ್ತಿದೆ. ಸಿರಿಧಾನ್ಯ  ಎಂದರೆ ವಿಶೇಷ ಧಾನ್ಯಗಳು. ಸಿರಿಧಾನ್ಯ ಈಗ ಶ್ರೀ ಅನ್ನದ ರೂಪದಲ್ಲಿ ಹೊಸ ಗುರುತು ಸಿಕ್ಕಿದೆ, ಗೌರವ, ಮಾನ್ಯತೆ ಪಡೆದಿದೆ. ಇದರ ಅರ್ಥವೇನೆಂದರೆ, ಎಲ್ಲಾ ಆಹಾರ ಧಾನ್ಯಗಳಲ್ಲಿ ಶ್ರೀ ಅನ್ನವು ಶ್ರೇಷ್ಠವಾಗಿದೆ. ಕೃಷ್ಣಗುರು ಸೇವಾಶ್ರಮ ಮತ್ತು ಇತರ ಎಲ್ಲಾ ಧಾರ್ಮಿಕ ಸಂಸ್ಥೆಗಳು ಶ್ರೀ ಅನ್ನದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸಬಹುದು. ಆಶ್ರಮದಲ್ಲಿ ವಿತರಿಸುವ ‘ಪ್ರಸಾದ’ವನ್ನು ಶ್ರೀ ಅನ್ನದಿಂದ ಮಾಡಿಸಬೇಕು ಎಂದು ಒತ್ತಾಯಿಸುತ್ತೇನೆ. ಅದೇ ರೀತಿ ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸವನ್ನು ಯುವ ಪೀಳಿಗೆಗೆ ಪರಿಚಯಿಸುವ ಅಭಿಯಾನ ನಡೆಯುತ್ತಿದೆ. ಈ ದಿಸೆಯಲ್ಲಿ ಅಸ್ಸಾಂ ಮತ್ತು ಈಶಾನ್ಯದ ಕ್ರಾಂತಿಕಾರಿಗಳ ಬಗ್ಗೆ ಸೇವಾಶ್ರಮ ಪ್ರಕಾಶನದಿಂದ ಬಹಳಷ್ಟು ಕೆಲಸ ಮಾಡಬಹುದು. 12 ವರ್ಷಗಳ ನಂತರ ಈ ಅಖಂಡ ಕೀರ್ತನೆ ಪುನಃ ನಡೆಯುವಾಗ ನಿಮ್ಮ ಮತ್ತು ದೇಶದ ಈ ಜಂಟಿ ಪ್ರಯತ್ನಗಳಿಂದ ನಾವು ಹೆಚ್ಚು ಸಶಕ್ತ ಭಾರತವನ್ನು ನಿರೀಕ್ಷಿಸುತ್ತೇವೆ ಎಂದು ನನಗೆ ಖಾತ್ರಿಯಿದೆ. ಈ ಆಶಯದೊಂದಿಗೆ, ನಾನು ಜೀ ಅವರಿಗೆ, ಎಲ್ಲಾ ಸಂತರು, ಎಲ್ಲಾ ಪುಣ್ಯಾತ್ಮರು ಹಾಗೂ ನಿಮಗೆಲ್ಲರಿಗೂ ನಾನು ಮತ್ತೊಮ್ಮೆ ಶುಭ ಹಾರೈಸುತ್ತೇನೆ.  

ಧನ್ಯವಾದಗಳು.

#ಹಕ್ಕು ನಿರಾಕರಣೆ: ಇದು ಪ್ರಧಾನಮಂತ್ರಿ ಅವರ ಹಿಂದಿ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು. 

*****



(Release ID: 1896799) Visitor Counter : 154