ರಾಷ್ಟ್ರಪತಿಗಳ ಕಾರ್ಯಾಲಯ

ಭಾರತದ ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು 74ನೇ ಗಣರಾಜ್ಯೋತ್ಸವದ ಮುನ್ನಾದಿನದಂದು ರಾಷ್ಟ್ರವನ್ನುದ್ದೇಶೀಸಿ ಮಾಡಿದ ಭಾಷಣ

Posted On: 25 JAN 2023 7:42PM by PIB Bengaluru

ಪ್ರೀತಿಯ ಸಹ ನಾಗರಿಕರೇ,

ನಮಸ್ಕಾರ!

74 ನೇ ಗಣರಾಜ್ಯೋತ್ಸವದ ಮುನ್ನಾದಿನದಂದು, ದೇಶ ಮತ್ತು ವಿದೇಶದಲ್ಲಿರುವ ಪ್ರತಿಯೊಬ್ಬ ಭಾರತೀಯರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳು. ನಾವೀಗ ಗಣರಾಜ್ಯವಾಗಿ 75ನೇ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಸಂವಿಧಾನವು ಜಾರಿಗೆ ಬಂದ ದಿನದಿಂದ ಇಂದಿನವರೆಗೆ, ಇದು ಅನೇಕ ರಾಷ್ಟ್ರಗಳಿಗೆ ಸ್ಫೂರ್ತಿ ನೀಡಿದ ಅದ್ಭುತ ಪ್ರಯಾಣವಾಗಿದೆ. ಪ್ರತಿಯೊಬ್ಬ ಪ್ರಜೆಯೂ ಭಾರತದ ಕಥೆಯ ಬಗ್ಗೆ ಹೆಮ್ಮೆ ಪಡಲು ಕಾರಣವಿದೆ. ನಾವು ಗಣರಾಜ್ಯೋತ್ಸವವನ್ನು ಆಚರಿಸುವಾಗ, ನಾವು ಸಾಧಿಸಿರುವುದನ್ನು, ಒಟ್ಟಾಗಿ ಒಂದು ರಾಷ್ಟ್ರವಾಗಿ ಸಂಭ್ರಮಿಸುತ್ತೇವೆ.

ಭಾರತವು ಸಹಜವಾಗಿ, ಅತ್ಯಂತ ಪ್ರಾಚೀನ ಜೀವಂತ ನಾಗರಿಕತೆಗಳಲ್ಲಿ ಒಂದಾಗಿದೆ. ಭಾರತವನ್ನು ಪ್ರಜಾಪ್ರಭುತ್ವದ ತಾಯಿ ಎಂದು ಕರೆಯಲಾಗುತ್ತದೆ. ಆಧುನಿಕ ಗಣರಾಜ್ಯವಾಗಿ, ನಾವಿನ್ನೂ ಚಿಕ್ಕವರು. ಸ್ವಾತಂತ್ರ್ಯ ಪಡೆದ ಆರಂಭಿಕ ವರ್ಷಗಳಲ್ಲಿ, ನಾವು ಅಸಂಖ್ಯಾತ ಸವಾಲುಗಳನ್ನು ಮತ್ತು ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸಿದ್ದೇವೆ. ಅತಿ ಹೆಚ್ಚು ಬಡತನ ಮತ್ತು ಅನಕ್ಷರತೆಗಳು ವಿದೇಶೀಯರ ದೀರ್ಘ ಆಳ್ವಿಕೆಯ ಅನೇಕ ದುಷ್ಪರಿಣಾಮಗಳಲ್ಲಿ ಎರಡು ಮಾತ್ರ. ಆದರೂ ಭಾರತದ ಚೈತನ್ಯ ಕುಂದಲಿಲ್ಲ. ಭರವಸೆ ಮತ್ತು ವಿಶ್ವಾಸದೊಂದಿಗೆ, ನಾವು ಮನುಕುಲದ ಇತಿಹಾಸದಲ್ಲಿ ವಿಶಿಷ್ಟವಾದ ಪ್ರಯೋಗವನ್ನು ಪ್ರಾರಂಭಿಸಿದೆವು. ವಿಶಾಲವಾದ ಮತ್ತು ವೈವಿಧ್ಯಮಯವಾದ ಜನಸ್ತೋಮವು ಒಂದು ರಾಷ್ಟ್ರವಾಗಿ, ಒಟ್ಟಾಗಿ ಉಳಿದಿರುವುದು ಅಭೂತಪೂರ್ವವಾದುದು. ನಾವೆಲ್ಲಾ ಒಂದು, ನಾವೆಲ್ಲರೂ ಭಾರತೀಯರು ಎಂಬ ನಂಬಿಕೆಯಿಂದ ನಾವು ಹಾಗೆ ಮಾಡಿದೆವು. ನಾವು ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ಯಶಸ್ವಿಯಾಗಿದ್ದೇವೆ. ಏಕೆಂದರೆ ಹಲವಾರು ಧರ್ಮಗಳು ಮತ್ತು ಹಲವಾರು ಭಾಷೆಗಳು ನಮ್ಮನ್ನು ವಿಭಜಿಸಲಿಲ್ಲ, ಬದಲಿಗೆ ಅವು ನಮ್ಮನ್ನು ಒಗ್ಗೂಡಿಸಿವೆ. ಇದು ಭಾರತದ ಸತ್ವವಾಗಿದೆ.

ಕಾಲದ ಪರೀಕ್ಷೆಯನ್ನು ಎದುರಿಸಿದ ಸಂವಿಧಾನದ ಹೃದಯಭಾಗದಲ್ಲಿ ಆ ಸತ್ವವು ಇತ್ತು. ಸ್ವಾತಂತ್ರ್ಯ ಹೋರಾಟದ ಫಲಿತಾಂಶವಾದ ಸಂವಿಧಾನವು ಗಣರಾಜ್ಯದ ಆಡಳಿತವನ್ನು ಪ್ರಾರಂಭಿಸಿತು. ಮಹಾತ್ಮ ಗಾಂಧೀಜಿಯವರ ನೇತೃತ್ವದ ರಾಷ್ಟ್ರೀಯ ಚಳವಳಿಯ ಉದ್ದೇಶವು ಸ್ವಾತಂತ್ರ್ಯವನ್ನು ಪಡೆಯುವುದರ ಜೊತೆಗೆ ನಮ್ಮದೇ ಆದರ್ಶಗಳನ್ನು ಮರುಶೋಧಿಸುವುದೂ ಆಗಿತ್ತು. ದಶಕಗಳ ಕಾಲದ ಆ ಹೋರಾಟ ಮತ್ತು ತ್ಯಾಗವು ವಸಾಹತುಶಾಹಿ ಆಳ್ವಿಕೆಯಿಂದ ಮಾತ್ರವಲ್ಲದೆ ನಮ್ಮ ಮೇಲೆ ಹೇರಿದ ಮೌಲ್ಯಗಳು ಮತ್ತು ಜಾಗತಿಕ ಸಂಕುಚಿತ ದೃಷ್ಟಿಕೋನಗಳಿಂದ ಮುಕ್ತಿ ಪಡೆಯಲು ನಮಗೆ ಸಹಾಯ ಮಾಡಿತು. ಕ್ರಾಂತಿಕಾರಿಗಳು ಮತ್ತು ಸುಧಾರಕರು ದಾರ್ಶನಿಕರು ಮತ್ತು ಆದರ್ಶವಾದಿಗಳೊಂದಿಗೆ ಕೈಜೋಡಿಸಿ ಶಾಂತಿ, ಸಹೋದರತ್ವ ಮತ್ತು ಸಮಾನತೆಯ ನಮ್ಮ ಪ್ರಾಚೀನ ಮೌಲ್ಯಗಳ ಬಗ್ಗೆ ತಿಳಿದುಕೊಳ್ಳಲು ನಮಗೆ ಸಹಾಯ ಮಾಡಿದರು. ಆಧುನಿಕ ಭಾರತೀಯ ಮನಸ್ಸನ್ನು ರೂಪಿಸಿದವರು ವಿದೇಶಗಳ ಪ್ರಗತಿಪರ ವಿಚಾರಗಳನ್ನು ಸಹ ಸ್ವಾಗತಿಸಿದರು, ವೇದಗಳು ಹೇಳುವ: ಆ ನೋ ಭದ್ರಃ ಕ್ರತವೋ ಯನ್ತು ವಿಶ್ವತ: “ನಮಗೆ ಉದಾತ್ತ ಚಿಂತನೆಗಳು ಎಲ್ಲಾ ದಿಕ್ಕುಗಳಿಂದಲೂ ಬರಲಿ”ಎಂಬುದನ್ನು ಅವರು ಅನುಸರಿಸಿದರು. ಸುದೀರ್ಘ ಮತ್ತು ಗಾಢವಾದ ಚಿಂತನಾ ಪ್ರಕ್ರಿಯೆಯು ನಮ್ಮ ಸಂವಿಧಾನದಲ್ಲಿ ಉತ್ತುಂಗಕ್ಕೇರಿತು.

ನಮ್ಮ ಸಂವಿಧಾನವು ಪ್ರಪಂಚದ ಅತ್ಯಂತ ಹಳೆಯ ಜೀವಂತ ನಾಗರಿಕತೆಯ ಮಾನವತಾವಾದದ ತತ್ತ್ವ ಮತ್ತು ಇತ್ತೀಚಿನ ಇತಿಹಾಸದಲ್ಲಿ ಹೊರಹೊಮ್ಮಿದ ಹೊಸ ಆಲೋಚನೆಗಳಿಂದ ಪ್ರೇರಿತವಾಗಿದೆ. ಸಂವಿಧಾನದ ಕರಡು ಸಮಿತಿಯ ನೇತೃತ್ವ ವಹಿಸಿದ ಮತ್ತು ಅದಕ್ಕೆ ಅಂತಿಮ ರೂಪ ನೀಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ರಾಷ್ಟ್ರವು ಸದಾ ಕೃತಜ್ಞವಾಗಿರುತ್ತದೆ. ಸಂವಿಧಾನದ ಮೊದಲ ಕರಡನ್ನು ಸಿದ್ಧಪಡಿಸಿದ ನ್ಯಾಯಶಾಸ್ತ್ರಜ್ಞ ಬಿ.ಎನ್. ರಾವ್ ಮತ್ತು ಸಂವಿಧಾನ ರಚನೆಯಲ್ಲಿ ಸಹಾಯ ಮಾಡಿದ ಇತರ ತಜ್ಞರು ಮತ್ತು ಅಧಿಕಾರಿಗಳನ್ನೂ ಸಹ ಇಂದು ನಾವು ಸ್ಮರಿಸಿಕೊಳ್ಳಬೇಕು.  ಆ ಕರಡು ಸಮಿತಿಯ ಸದಸ್ಯರು ಭಾರತದ ಎಲ್ಲಾ ಪ್ರದೇಶಗಳು ಮತ್ತು ಸಮುದಾಯಗಳನ್ನು ಪ್ರತಿನಿಧಿಸಿದ್ದರು ಮತ್ತು ಅವರಲ್ಲಿ 15 ಮಹಿಳೆಯರೂ ಸೇರಿದ್ದರು ಎಂಬ ಬಗ್ಗೆ ನಮಗೆ ಹೆಮ್ಮೆ ಇದೆ.

ಅವರ ದೂರದರ್ಶಿತ್ವವು ಸಂವಿಧಾನದಲ್ಲಿ ಪ್ರತಿಪಾದಿಸಲ್ಪಟ್ಟಿದೆ, ನಮ್ಮ ಗಣರಾಜ್ಯಕ್ಕೆ ನಿರಂತರವಾಗಿ ಮಾರ್ಗದರ್ಶನ ನೀಡುತ್ತಿದೆ. ಬಹುತೇಕ ಬಡ ಮತ್ತು ಅನಕ್ಷರಸ್ಥ ರಾಷ್ಟ್ರವಾಗಿದ್ದ ಭಾರತವು ಈ ಅವಧಿಯಲ್ಲಿ, ಜಾಗತಿಕ ವೇದಿಕೆಯಲ್ಲಿ ಆತ್ಮವಿಶ್ವಾಸದಿಂದ ಕೂಡಿದ ರಾಷ್ಟ್ರವಾಗಿ ರೂಪಾಂತರಗೊಂಡಿದೆ. ಸಂವಿಧಾನ ನಿರೂಪಕರು ತಮ್ಮ ಸಾಮೂಹಿಕ ಬುದ್ಧಿಮತ್ತೆಯಿಂದ ನಮಗೆ ಮಾರ್ಗದರ್ಶನ ನೀಡದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ.

ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಇತರರು ನಮಗೆ ಮುನ್ನೋಟ ಮತ್ತು ನೈತಿಕ ಚೌಕಟ್ಟನ್ನು ನೀಡಿದರು, ಆ ಮಾರ್ಗದಲ್ಲಿ ನಡೆಯುವುದು ನಮ್ಮ ಜವಾಬ್ದಾರಿಯಾಗಿದೆ. ನಾವು ಬಹುಮಟ್ಟಿಗೆ ಅವರ ನಿರೀಕ್ಷೆಗಳಿಗೆ ಹತ್ತಿರವಾಗಿದ್ದೇವೆ ಮತ್ತು ಗಾಂಧೀಜಿಯವರ ಎಲ್ಲರ ಏಳಿಗೆಯ ಆದರ್ಶವಾದ 'ಸರ್ವೋದಯ' ವನ್ನು ಸಾಕಾರಗೊಳಿಸಲು ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ ಎಂಬುದು ನಮಗೆ ತಿಳಿದಿದೆ. ಆದರೂ, ನಾವು ಎಲ್ಲಾ ರಂಗಗಳಲ್ಲಿ ಸಾಧಿಸಿರುವ ಪ್ರಗತಿಯು ಉತ್ತೇಜನಕಾರಿಯಾಗಿದೆ.

ಆತ್ಮೀಯ ದೇಶಬಾಂಧವರೇ,

ನಮ್ಮ ‘ಸರ್ವೋದಯ’ಅಭಿಯಾನದಲ್ಲಿ, ಆರ್ಥಿಕ ರಂಗದಲ್ಲಿ ಮಾಡಿದ ಪ್ರಗತಿಯು ಅತ್ಯಂತ ಉತ್ತೇಜನಕಾರಿಯಾಗಿದೆ. ಕಳೆದ ವರ್ಷ, ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಈ ಸಾಧನೆಯು ಪ್ರಪಂಚದಾದ್ಯಂತ ಹೆಚ್ಚಿನ ಆರ್ಥಿಕ ಅನಿಶ್ಚಿತತೆ ಇರುವ ಸಮಯದಲ್ಲಿ ಬಂದಿದೆ ಎಂಬುದನ್ನು ಒತ್ತಿಹೇಳಬೇಕಾಗಿದೆ. ಸಾಂಕ್ರಾಮಿಕ ರೋಗವು ನಾಲ್ಕನೇ ವರ್ಷವನ್ನು ಪ್ರವೇಶಿಸಿದೆ, ಇದು ಪ್ರಪಂಚದ ಬಹುತೇಕ ಭಾಗಗಳಲ್ಲಿ ಆರ್ಥಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರಿದೆ. ಕೋವಿಡ್-19 ಸಾಂಕ್ರಾಮಿಕವು ತನ್ನ ಆರಂಭಿಕ ಹಂತದಲ್ಲಿ ಭಾರತದ ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮ ಬೀರಿತು. ಆದರೂ, ನಮ್ಮ ಸಮರ್ಥ ನಾಯಕತ್ವದ ಮಾರ್ಗದರ್ಶನ ಮತ್ತು ನಮ್ಮ ಸ್ಥಿತಿಸ್ಥಾಪಕತ್ವದಿಂದಾಗಿ ನಾವು ಶೀಘ್ರವಾಗಿ ಕುಸಿತದಿಂದ ಹೊರಬಂದೆವು ಮತ್ತು ಬೆಳವಣಿಗೆಯ ಪಯಣವನ್ನು ಪುನರಾರಂಭಿಸಿದೆವು. ಆರ್ಥಿಕತೆಯ ಬಹುತೇಕ ವಲಯಗಳು ಸಾಂಕ್ರಾಮಿಕದ ಪರಿಣಾಮದಿಂದ ಹೊರಬಂದಿವೆ. ಭಾರತವು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿದೆ. ಸರ್ಕಾರದ ಸಕಾಲಿಕ ಮತ್ತು ಸಕ್ರಿಯ ಮಧ್ಯಸ್ಥಿಕೆಯಿಂದ ಇದು ಸಾಧ್ಯವಾಗಿದೆ. ನಿರ್ದಿಷ್ಟವಾಗಿ, ‘ಆತ್ಮನಿರ್ಭರ ಭಾರತ’ಉಪಕ್ರಮವು ಜನರಲ್ಲಿ ಉತ್ತಮ ಪ್ರತಿಕ್ರಿಯೆಗೆ ಕಾರಣವಾಗಿದೆ. ವಲಯ-ನಿರ್ದಿಷ್ಟ ಪ್ರೋತ್ಸಾಹ ಯೋಜನೆಗಳೂ ಇದರಲ್ಲಿ ಸೇರಿವೆ.

ಸಮಾಜದ ಅಂಚಿನಲ್ಲಿರುವವರನ್ನು ಸಹ ಈ ಯೋಜನೆಗಳು ಮತ್ತು ಕಾರ್ಯಕ್ರಮಗಳಲ್ಲಿ ಸೇರಿಸಿಕೊಳ್ಳಲಾಗಿದೆ ಮತ್ತು ಅವರ ಸಂಕಷ್ಟಗಳನ್ನು ನಿವಾರಿಸಲು ಸಹಾಯ ಮಾಡಲಾಗಿದೆ ಎಂಬುದು ಅತ್ಯಂತ ತೃಪ್ತಿಯ ವಿಷಯವಾಗಿದೆ. ಕೋವಿಡ್-19 ಸಾಂಕ್ರಾಮಿಕದಿಂದಾಗಿ ದೇಶವು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದ ಸಮಯದಲ್ಲಿ, ಮಾರ್ಚ್ 2020 ರಲ್ಲಿ ಘೋಷಿಸಲಾದ 'ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ'ಯ ಮೂಲಕ, ಸರ್ಕಾರವು ಬಡ ಕುಟುಂಬಗಳಿಗೆ ಆಹಾರ ಭದ್ರತೆಯನ್ನು ಖಾತ್ರಿಪಡಿಸಿತು. ಈ ಸಹಾಯದಿಂದಾಗಿ, ಯಾರೂ ಹಸಿವಿನಿಂದ ಬಳಲುತ್ತಿಲ್ಲ. ಬಡ ಕುಟುಂಬಗಳ ಕಲ್ಯಾಣವನ್ನು ಮುಖ್ಯವಾಗಿಟ್ಟುಕೊಂಡು, ಈ ಯೋಜನೆಯ ಅವಧಿಯನ್ನು ಸತತವಾಗಿ ವಿಸ್ತರಿಸಲಾಯಿತು, ಸುಮಾರು 81 ಕೋಟಿ ಸಹ ನಾಗರಿಕರಿಗೆ ಪ್ರಯೋಜನವನ್ನು ನೀಡಲಾಯಿತು. ಈ ನೆರವನ್ನು ಇನ್ನಷ್ಟು ವಿಸ್ತರಿಸಿ, 2023ರ ಅವಧಿಯಲ್ಲಿಯೂ ಸಹ ಫಲಾನುಭವಿಗಳು ತಮ್ಮ ಮಾಸಿಕ ಪಡಿತರವನ್ನು ಉಚಿತವಾಗಿ ಪಡೆಯುತ್ತಾರೆ ಎಂದು ಸರ್ಕಾರ ಘೋಷಿಸಿದೆ. ಈ ಐತಿಹಾಸಿಕ ನಡೆಯೊಂದಿಗೆ ಸರ್ಕಾರವು ದುರ್ಬಲ ವರ್ಗದವರ ಬಗ್ಗೆ ಕಾಳಜಿ ವಹಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದೆ ಮತ್ತು ಅವರು ಆರ್ಥಿಕ ಅಭಿವೃದ್ಧಿಯಿಂದ ಪ್ರಯೋಜನ ಪಡೆಯುವಂತೆ ಮಾಡಿದೆ.

ಆರ್ಥಿಕತೆಯು ಉತ್ತಮವಾದ ತಳಹದಿಯ ಮೇಲಿದ್ದು, ನಾವು ಶ್ಲಾಘನೀಯ ಉಪಕ್ರಮಗಳನ್ನು ಪ್ರಾರಂಭಿಸಲು ಮತ್ತು ಅವುಗಳನ್ನು ಮುಂದುವರೆಸಲು ಸಮರ್ಥರಾಗಿದ್ದೇವೆ. ಎಲ್ಲಾ ನಾಗರಿಕರು ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ತಮ್ಮ ನಿಜವಾದ ಸಾಮರ್ಥ್ಯವನ್ನು ಅರಿತುಕೊಂಡು ಪ್ರಗತಿ ಹೊಂದುವಂತಹ ವಾತಾವರಣವನ್ನು ಸೃಷ್ಟಿಸುವುದು ಅಂತಿಮ ಗುರಿಯಾಗಿದೆ. ಶಿಕ್ಷಣವು ಈ ಉದ್ದೇಶಕ್ಕಾಗಿ ಸರಿಯಾದ ಅಡಿಪಾಯವನ್ನು ಹಾಕುತ್ತದೆ, ರಾಷ್ಟ್ರೀಯ ಶಿಕ್ಷಣ ನೀತಿಯು ಮಹತ್ವಾಕಾಂಕ್ಷೆಯ ಬದಲಾವಣೆಗಳನ್ನು ಪರಿಚಯಿಸಿದೆ. ಇದು ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣದ ಸಾಧನವಾಗಿ ಮತ್ತು ಸತ್ಯವನ್ನು ಅನ್ವೇಷಿಸುವ ಸಾಧನವಾಗಿ ಶಿಕ್ಷಣದ ಸರಿಯಾದ ಗುರಿಗಳನ್ನು ತಿಳಿಸುತ್ತದೆ. ಈ ನೀತಿಯು ನಮ್ಮ ನಾಗರಿಕತೆಯ ಕಲಿಕೆಗಳನ್ನು ಸಮಕಾಲೀನ ಜೀವನಕ್ಕೆ ಪ್ರಸ್ತುತವಾಗಿಸುತ್ತದೆ ಮತ್ತು 21 ನೇ ಶತಮಾನದ ಸವಾಲುಗಳಿಗೆ ಪರಿಹಾರ ಹುಡುಕುವವರನ್ನು ಸಿದ್ಧಪಡಿಸುತ್ತದೆ. ಕಲಿಕೆಯ ಪ್ರಕ್ರಿಯೆಯನ್ನು ವಿಸ್ತರಿಸುವಲ್ಲಿ ಮತ್ತು ಆಳವಾಗಿಸುವಲ್ಲಿ ತಂತ್ರಜ್ಞಾನದ ಪಾತ್ರವನ್ನು ರಾಷ್ಟ್ರೀಯ ಶಿಕ್ಷಣ ನೀತಿ ಪ್ರೋತ್ಸಾಹಿಸುತ್ತದೆ.

 ಕೋವಿಡ್-19 ರ ಆರಂಭಿಕ ದಿನಗಳಿಂದಲೂ ನಾವು ಅರಿತುಕೊಂಡಂತೆ, ತಂತ್ರಜ್ಞಾನವು ಜೀವನವನ್ನು ಬದಲಾಯಿಸುವ ಸಾಧ್ಯತೆಗಳನ್ನು ಒದಗಿಸಿದೆ. ಡಿಜಿಟಲ್ ಇಂಡಿಯಾ ಮಿಷನ್ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು ಒಳಗೊಳ್ಳುವ ಮೂಲಕ ಗ್ರಾಮೀಣ-ನಗರಗಳ ಅಂತರವನ್ನು ಕಡಿಮೆ ಮಾಡಲು ಶ್ರಮಿಸುತ್ತಿದೆ. ದೂರದ ಸ್ಥಳಗಳಲ್ಲಿ ಹೆಚ್ಚು ಹೆಚ್ಚು ಜನರು ಅಂತರ್ಜಾಲದ ಲಾಭವನ್ನು ಪಡೆಯುತ್ತಿದ್ದಾರೆ ಮತ್ತು ಮೂಲಸೌಕರ್ಯಗಳು ವಿಸ್ತರಿಸಿದಂತೆ ಸರ್ಕಾರದ ವಿವಿಧ ಸೇವೆಗಳನ್ನು ಪಡೆಯುತ್ತಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ಸಾಧನೆಗಳ ಬಗ್ಗೆ ಹೆಮ್ಮೆ ಪಡಲು ನಮಗೆ ಅನೇಕ ಕಾರಣಗಳಿವೆ. ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಬೆರಳೆಣಿಕೆಯಷ್ಟು ಪ್ರವರ್ತಕ ದೇಶಗಳಲ್ಲಿ ಭಾರತವೂ ಒಂದಾಗಿದೆ. ಈ ವಲಯದಲ್ಲಿ ದೀರ್ಘಕಾಲದಿಂದ ಬಾಕಿ ಉಳಿದಿದ್ದ ಸುಧಾರಣೆಗಳು ಜಾರಿಯಾಗುತ್ತಿರುವುದರಿಂದ, ಖಾಸಗಿ ಉದ್ಯಮಗಳನ್ನು ಈ ಮಹಾಯಾನದಲ್ಲಿ ಸೇರಲು ಈಗ ಆಹ್ವಾನಿಸಲಾಗಿದೆ. ಭಾರತೀಯ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯುವ 'ಗಗನಯಾನ್' ಕಾರ್ಯಕ್ರಮವು ಪ್ರಗತಿಯಲ್ಲಿದೆ. ಇದು ಭಾರತದ ಮೊದಲ ಮಾನವ ಬಾಹ್ಯಾಕಾಶ ಯೋಜನೆಯಾಗಿದೆ. ಆದರೂ, ನಾವು ನಕ್ಷತ್ರಗಳನ್ನು ತಲುಪಿದಾಗಲೂ, ನಮ್ಮ ಬೇರುಗಳು ಭೂಮಿಯಲ್ಲಿಯೇ ಇರುತ್ತವೆ.

 ಭಾರತದ ಮಂಗಳಯಾನವನ್ನು ಅಸಾಧಾರಣ ಮಹಿಳೆಯರ ತಂಡವು ಮುನ್ನಡೆಸಿತು. ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳು ಇತರ ಕ್ಷೇತ್ರಗಳಲ್ಲಿಯೂ ಸಹ ಹಿಂದುಳಿದಿಲ್ಲ. ಮಹಿಳಾ ಸಬಲೀಕರಣ ಮತ್ತು ಲಿಂಗ ಸಮಾನತೆ ಈಗ ಘೋಷಣೆಗಳಾಗಿ ಮಾತ್ರ ಉಳಿದಿಲ್ಲ, ಏಕೆಂದರೆ ಇತ್ತೀಚಿನ ವರ್ಷಗಳಲ್ಲಿ ನಾವು ಇವುಗಳಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸಿದ್ದೇವೆ. ‘ಬೇಟಿ ಬಚಾವೋ, ಬೇಟಿ ಪಢಾವೋ’ಅಭಿಯಾನದಲ್ಲಿ ಜನರ ಪಾಲ್ಗೊಳ್ಳುವಿಕೆಯೊಂದಿಗೆ, ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳಾ ಪ್ರಾತಿನಿಧ್ಯ ಹೆಚ್ಚುತ್ತಿದೆ. ನಾನು ವಿವಿಧ ರಾಜ್ಯಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿದಾಗ ಮತ್ತು ವಿವಿಧ ವೃತ್ತಿಪರರ ನಿಯೋಗಗಳನ್ನು ಭೇಟಿ ಮಾಡಿದಾಗ, ಯುವತಿಯರ ಆತ್ಮವಿಶ್ವಾಸವು ನನ್ನನ್ನು ಬೆರಗುಗೊಳಿಸುತ್ತದೆ. ಭವಿಷ್ಯದ ಭಾರತವನ್ನು ರೂಪಿಸಲು ಅವರು ಹೆಚ್ಚು ಶ್ರಮಿಸುತ್ತಾರೆ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರನ್ನು ಅವರ ಸಾಮರ್ಥ್ಯಕ್ಕೆ ತಕ್ಕಂತೆ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲು ಪ್ರೋತ್ಸಾಹಿಸಿದರೆ ಯಾವ ಪವಾಡಗಳನ್ನು ತಾನೇ ಸಾಧಿಸಲಾಗುವುದಿಲ್ಲ?

ಅದೇ ಸಬಲೀಕರಣದ ದೃಷ್ಟಿಕೋನವು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳನ್ನು ಒಳಗೊಂಡಂತೆ ಸಮಾಜದ ಅಂಚಿನಲ್ಲಿರುವ ಸಮುದಾಯಗಳ ಬಗ್ಗೆ ಸರ್ಕಾರದ ಕಾರ್ಯವಿಧಾನದ ಮಾರ್ಗದರ್ಶಿಯಾಗಿದೆ. ವಾಸ್ತವವಾಗಿ, ಈ ಗುರಿಯು ಅಡೆತಡೆಗಳನ್ನು ತೆಗೆದುಹಾಕುವುದು ಮತ್ತು ಅಭಿವೃದ್ಧಿಯಲ್ಲಿ ಅವರಿಗೆ ಸಹಾಯ ಮಾಡುವುದು ಮಾತ್ರವಲ್ಲ, ಅವರಿಂದ ಕಲಿಯುವುದು ಕೂಡ ಆಗಿದೆ. ನಿರ್ದಿಷ್ಟವಾಗಿ, ಬುಡಕಟ್ಟು ಸಮುದಾಯಗಳು ಪರಿಸರವನ್ನು ರಕ್ಷಿಸುವುದರಿಂದ ಹಿಡಿದು ಸಮಾಜವನ್ನು ಒಗ್ಗೂಡಿಸುವವರೆಗೆ ಅನೇಕ ಕ್ಷೇತ್ರಗಳಲ್ಲಿ ಸಮೃದ್ಧವಾದ ತಿಳುವಳಿಕೆಯನ್ನು ಹೊಂದಿವೆ.

ಆತ್ಮೀಯ ಸಹ ನಾಗರಿಕರೇ,

ಇತ್ತೀಚಿನ ವರ್ಷಗಳಲ್ಲಿ ಆಡಳಿತದ ಎಲ್ಲಾ ಆಯಾಮಗಳನ್ನು ಪರಿವರ್ತಿಸಲು ಮತ್ತು ಜನರ ಸೃಜನಶೀಲ ಶಕ್ತಿಯನ್ನು ಹೊರತರಲು ಕೈಗೊಂಡ ಸರಣಿ ಉಪಕ್ರಮಗಳ ಪರಿಣಾಮವಾಗಿ, ಜಗತ್ತು ಭಾರತವನ್ನು ಗೌರವದ ಹೊಸ ಭಾವನೆಯಿಂದ ನೋಡಲು ಪ್ರಾರಂಭಿಸಿದೆ. ವಿವಿಧ ವಿಶ್ವ ವೇದಿಕೆಗಳಲ್ಲಿ ನಮ್ಮ ಮಧ್ಯಸ್ಥಿಕೆಗಳು ಧನಾತ್ಮಕ ಫಲಿತಾಂಶಗಳನ್ನು ನೀಡಿವೆ. ವಿಶ್ವ ವೇದಿಕೆಯಲ್ಲಿ ಭಾರತ ಗಳಿಸಿದ ಗೌರವವು ಹೊಸ ಅವಕಾಶಗಳು ಮತ್ತು ಜವಾಬ್ದಾರಿಗಳಿಗೆ ಕಾರಣವಾಗಿದೆ. ಈ ವರ್ಷ, ನಿಮಗೆ ತಿಳಿದಿರುವಂತೆ, ಭಾರತವು ಜಿ-20 ರಾಷ್ಟ್ರಗಳ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದೆ. ಸಾರ್ವತ್ರಿಕ ಭ್ರಾತೃತ್ವದ ನಮ್ಮ ಧ್ಯೇಯವಾಕ್ಯದೊಂದಿಗೆ, ನಾವು ಎಲ್ಲರ ಶಾಂತಿ ಮತ್ತು ಸಮೃದ್ಧಿಯ ಪರ ಇದ್ದೇವೆ. ಹೀಗಾಗಿ, ಜಿ - 20 ಅಧ್ಯಕ್ಷ ಸ್ಥಾನವು ಪ್ರಜಾಪ್ರಭುತ್ವ ಮತ್ತು ಬಹುಪಕ್ಷೀಯತೆಯನ್ನು ಉತ್ತೇಜಿಸಲು ಒಂದು ಅವಕಾಶವಾಗಿದೆ ಮತ್ತು ಉತ್ತಮ ಜಗತ್ತು ಮತ್ತು ಉತ್ತಮ ಭವಿಷ್ಯವನ್ನು ರೂಪಿಸಲು ಸೂಕ್ತ ವೇದಿಕೆಯಾಗಿದೆ. ಭಾರತದ ನಾಯಕತ್ವದಲ್ಲಿ, ಜಿ-20 ಹೆಚ್ಚು ಸಮಾನ ಮತ್ತು ಸುಸ್ಥಿರ ವಿಶ್ವ ಕ್ರಮಾಂಕವನ್ನು ನಿರ್ಮಿಸುವ ತನ್ನ ಪ್ರಯತ್ನಗಳನ್ನು ಇನ್ನಷ್ಟು ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದು ನನಗೆ ಖಾತ್ರಿಯಿದೆ.

 ಜಿ-20 ವಿಶ್ವದ ಜನಸಂಖ್ಯೆಯ ಸುಮಾರು ಮೂರನೇ ಎರಡರಷ್ಟು ಮತ್ತು ಜಾಗತಿಕ ಜಿಡಿಪಿಯ ಸುಮಾರು 85 ಪ್ರತಿಶತವನ್ನು ಪ್ರತಿನಿಧಿಸುತ್ತದೆ, ಇದು ಜಾಗತಿಕ ಸವಾಲುಗಳ ಬಗ್ಗೆ ಚರ್ಚಿಸಲು ಮತ್ತು ಪರಿಹಾರಗಳನ್ನು ಕಂಡುಹಿಡಿಯಲು ಸೂಕ್ತವಾದ ವೇದಿಕೆಯಾಗಿದೆ. ನನ್ನ ಅಭಿಪ್ರಾಯದಲ್ಲಿ, ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಅವುಗಳಲ್ಲಿ ಹೆಚ್ಚು ಒತ್ತು ನೀಡಬೇಕಾದ ವಿಷಯವಾಗಿವೆ. ಜಾಗತಿಕ ತಾಪಮಾನ ಹೆಚ್ಚುತ್ತಿದೆ ಮತ್ತು ಹವಾಮಾನ ವೈಪರೀತ್ಯದ ಘಟನೆಗಳು ಹೆಚ್ಚಾಗುತ್ತಿವೆ. ನಾವೀಗ ಸಂದಿಗ್ಧತೆಯಲ್ಲಿದ್ದೇವೆ: ಹೆಚ್ಚು ಹೆಚ್ಚು ಜನರನ್ನು ಬಡತನದಿಂದ ಮೇಲೆತ್ತಲು, ನಮಗೆ ಆರ್ಥಿಕ ಬೆಳವಣಿಗೆಯ ಅಗತ್ಯವಿದೆ, ಆದರೆ ಆ ಬೆಳವಣಿಗೆಯು ಪಳೆಯುಳಿಕೆ ಇಂಧನದಿಂದಲೂ ಬರುತ್ತದೆ. ದುರದೃಷ್ಟವಶಾತ್, ಬಡವರು ಇತರರಿಗಿಂತ ಹೆಚ್ಚಾಗಿ ಜಾಗತಿಕ ತಾಪಮಾನದ ಹೊರೆಯನ್ನು ಹೊರುತ್ತಿದ್ದಾರೆ. ಪರ್ಯಾಯ ಇಂಧನ ಮೂಲಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಜನಪ್ರಿಯಗೊಳಿಸುವುದು ಇವುಗಳ ಪರಿಹಾರಗಳಲ್ಲಿ ಒಂದಾಗಿದೆ. ಸೌರಶಕ್ತಿ ಮತ್ತು ವಿದ್ಯುತ್‌ ವಾಹನಗಳಿಗೆ ಸಂಬಂಧಿಸಿದ ನೀತಿಯ ಮೂಲಕ ಭಾರತವು ಈ ದಿಕ್ಕಿನಲ್ಲಿ ಶ್ಲಾಘನೀಯ ಮುನ್ನಡೆ ಸಾಧಿಸಿದೆ. ಆದಾಗ್ಯೂ, ಜಾಗತಿಕ ಮಟ್ಟದಲ್ಲಿ, ಉದಯೋನ್ಮುಖ ಆರ್ಥಿಕತೆಗಳಿಗೆ ತಂತ್ರಜ್ಞಾನ ವರ್ಗಾವಣೆ ಮತ್ತು ಹಣಕಾಸಿನ ಬೆಂಬಲದ ರೂಪದಲ್ಲಿ ಮುಂದುವರಿದ ರಾಷ್ಟ್ರಗಳಿಂದ ಸಹಾಯ ಹಸ್ತದ ಅಗತ್ಯವಿದೆ.

 ಅಭಿವೃದ್ಧಿ ಮತ್ತು ಪರಿಸರದ ನಡುವಿನ ಸಮತೋಲನವನ್ನು ಕಾಪಾಡಿಕೊಳ್ಳಲು, ನಾವು ಪ್ರಾಚೀನ ಸಂಪ್ರದಾಯಗಳನ್ನು ಹೊಸ ದೃಷ್ಟಿಕೋನದಿಂದ ನೋಡಬೇಕು. ನಾವು ನಮ್ಮ ಮೂಲಭೂತ ಆದ್ಯತೆಗಳನ್ನು ಮರುಪರಿಶೀಲಿಸಬೇಕಾಗಿದೆ. ಸಾಂಪ್ರದಾಯಿಕ ಜೀವನ ಮೌಲ್ಯಗಳ ವೈಜ್ಞಾನಿಕ ಅಂಶಗಳನ್ನು ಅರ್ಥಮಾಡಿಕೊಳ್ಳಬೇಕು. ನಾವು ಮತ್ತೊಮ್ಮೆ, ಪ್ರಕೃತಿಯನ್ನು ಗೌರವಿಸುವ ಮತ್ತು ವಿಶಾಲವಾದ ಬ್ರಹ್ಮಾಂಡದ ಮುಂದೆ ವಿನೀತರಾಗುವ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ವಿವೇಚನಾರಹಿತ ಕೈಗಾರಿಕೀಕರಣದ ವಿಪತ್ತುಗಳನ್ನು ಮುಂಗಾಣುವ ಮೂಲಕ, ಅದರ ಮಾರ್ಗಗಳನ್ನು ಸರಿಪಡಿಸುವಂತೆ ಜಗತ್ತನ್ನು ಎಚ್ಚರಿಸಿದ ಮಹಾತ್ಮ ಗಾಂಧಿಯವರು ನಮ್ಮ ಕಾಲದ ನಿಜವಾದ ಪ್ರವಾದಿ ಎಂದು ನಾನು ಹೇಳುತ್ತೇನೆ.

ಈ ನಾಜೂಕಿನ ಗ್ರಹದಲ್ಲಿ ನಮ್ಮ ಮಕ್ಕಳು ನೆಮ್ಮದಿಯಿಂದ ಬದುಕಬೇಕೆಂದು ನಾವು ಬಯಸಿದರೆ ನಾವು ನಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ಅಂತಹ ಬದಲಾವಣೆಗಳಲ್ಲಿ ಒಂದು ಆಹಾರಕ್ಕೆ ಸಂಬಂಧಿಸಿದೆ. ವಿಶ್ವಸಂಸ್ಥೆಯು ಭಾರತದ ಸಲಹೆಯನ್ನು ಸ್ವೀಕರಿಸಿ, 2023 ಅನ್ನು ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಘೋಷಿಸಿದೆ ಎಂಬುದನ್ನು ಹೇಳಲು ನನಗೆ ಸಂತೋಷವಾಗುತ್ತಿದೆ. ಸಿರಿಧಾನ್ಯಗಳು ನಮ್ಮ ಆಹಾರದ ಅತ್ಯಗತ್ಯ ಅಂಶಗಳಾಗಿದ್ದವು ಮತ್ತು ಅವು ಸಮಾಜದ ವಿವಿಧ ವರ್ಗಗಳಲ್ಲಿ ಮತ್ತೆ ಜನಪ್ರಿಯವಾಗುತ್ತಿವೆ. ಸಿರಿಧಾನ್ಯಗಳಂತಹ ಒರಟಾದ ಧಾನ್ಯಗಳು ಪರಿಸರ ಸ್ನೇಹಿಯಾಗಿರುತ್ತವೆ. ಏಕೆಂದರೆ ಅವು ಬೆಳೆಯಲು ಕಡಿಮೆ ನೀರಿನ ಅಗತ್ಯವಿರುತ್ತದೆ ಮತ್ತು ಅವು ಹೆಚ್ಚಿನ ಮಟ್ಟದ ಪೌಷ್ಟಿಕಾಂಶವನ್ನು ಒದಗಿಸುತ್ತವೆ. ಹೆಚ್ಚು ಹೆಚ್ಚು ಜನರು ಸಿರಿಧಾನ್ಯಗಳತ್ತ ಮುಖ ಮಾಡಿದರೆ, ಅದು ಪರಿಸರವನ್ನು ಸಂರಕ್ಷಿಸಲು ಮತ್ತು ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಗಣರಾಜ್ಯಕ್ಕೆ ಇನ್ನೂ ಒಂದು ವರ್ಷ ಸಂದಿದೆ ಮತ್ತು ಮತ್ತೊಂದು ವರ್ಷ ಪ್ರಾರಂಭವಾಗುತ್ತಿದೆ. ಇದು ಅಭೂತಪೂರ್ವ ಬದಲಾವಣೆಯ ಸಮಯ. ಸಾಂಕ್ರಾಮಿಕ ರೋಗದ ಉಲ್ಬಣದೊಂದಿಗೆ, ಪ್ರಪಂಚವು ಕೆಲವೇ ದಿನಗಳಲ್ಲಿ ಬದಲಾಗಿದೆ. ಈ ಮೂರು ವರ್ಷಗಳಲ್ಲಿ, ಅಂತಿಮವಾಗಿ ವೈರಸ್ ಅನ್ನು ಹಿಮ್ಮೆಟ್ಟಿಸಿದ್ದೇವೆ ಎಂದು ನಾವು ಅಂದುಕೊಂಡ ಕೂಡಲೇ, ಅದು ಮತ್ತೆ ತನ್ನ ಕುರೂಪದ ಮುಖವನ್ನು ತೋರಿಸುತ್ತದೆ. ಆದಾಗ್ಯೂ, ಭಯಪಡುವ ಅಗತ್ಯವಿಲ್ಲ ಏಕೆಂದರೆ ಈ ಅವಧಿಯಲ್ಲಿ ನಮ್ಮ ನಾಯಕತ್ವ, ನಮ್ಮ ವಿಜ್ಞಾನಿಗಳು ಮತ್ತು ವೈದ್ಯರು, ನಮ್ಮ ಆಡಳಿತಗಾರರು ಮತ್ತು 'ಕೊರೋನಾ ವಾರಿಯರ್ಸ್' ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಾರೆ ಎಂಬುದನ್ನು ನಾವು ನೋಡಿದ್ದೇವೆ. ಅದೇ ಸಮಯದಲ್ಲಿ, ನಮ್ಮಲ್ಲಿ ಪ್ರತಿಯೊಬ್ಬರೂ ಜಾಗೃತವಾಗಿರಬೇಕು ಮತ್ತು ಜಾಗರೂಕರಾಗಿರಬೇಕು ಎಂಬುದನ್ನೂ ಸಹ ಕಲಿತಿದ್ದೇವೆ.

ಆತ್ಮೀಯ ಸಹ ನಾಗರಿಕರೇ,

ನಮ್ಮ ಗಣರಾಜ್ಯದ ಇದುವರೆಗಿನ ಅಭಿವೃದ್ಧಿಯ ಪಯಣದಲ್ಲಿ ಅಮೂಲ್ಯ ಕೊಡುಗೆ ನೀಡಿದ, ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಹಲವು ತಲೆಮಾರುಗಳ ಜನರು ಪ್ರಶಂಸೆಗೆ ಅರ್ಹವಾಗಿದ್ದಾರೆ. “ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್, ಜೈ ಅನುಸಂಧಾನ್”ಎಂಬ ಮನೋಭಾವಕ್ಕೆ ತಕ್ಕಂತೆ ನಮ್ಮ ದೇಶವು ಪ್ರಗತಿ ಕಾಣಲು ಕಾರಣರಾಗಿರುವ ರೈತರು, ಕಾರ್ಮಿಕರು, ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳ ಪಾತ್ರವನ್ನು ನಾನು ಪ್ರಶಂಸಿಸುತ್ತೇನೆ. ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡುವ ಪ್ರತಿಯೊಬ್ಬ ನಾಗರಿಕನನ್ನು ನಾನು ಶ್ಲಾಘಿಸುತ್ತೇನೆ. ಭಾರತದ ಸಂಸ್ಕೃತಿ ಮತ್ತು ನಾಗರಿಕತೆಯ ಮಹಾನ್ ರಾಯಭಾರಿಗಳಾದ ವಿದೇಶಗಳಲ್ಲಿರುವ ನಮ್ಮ ಭಾರತೀಯರಿಗೂ ನಾನು ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.

ನಮ್ಮ ಗಡಿಯನ್ನು ಕಾಪಾಡುವ ಮತ್ತು ದೇಶಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗಿರುವ ನಮ್ಮ ಯೋಧರಿಗೆ ಗಣರಾಜ್ಯೋತ್ಸವದ ಸಂದರ್ಭದಲ್ಲಿ ನನ್ನ ವಿಶೇಷ ಮೆಚ್ಚುಗೆಯನ್ನು ತಿಳಿಸುತ್ತೇನೆ. ತಮ್ಮ ಸಹ ನಾಗರಿಕರಿಗೆ ಆಂತರಿಕ ಭದ್ರತೆಯನ್ನು ಒದಗಿಸುವ ಅರೆಸೇನಾ ಪಡೆಗಳು ಮತ್ತು ಪೊಲೀಸ್ ಪಡೆಗಳ ಎಲ್ಲಾ ಯೋಧರಿಗೆ ನನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತೇನೆ. ಕರ್ತವ್ಯದ ಹಾದಿಯಲ್ಲಿ ಪ್ರಾಣ ತ್ಯಾಗ ಮಾಡಿದ ನಮ್ಮ ಸಶಸ್ತ್ರ ಪಡೆಗಳು, ಅರೆಸೇನಾ ಪಡೆಗಳು ಮತ್ತು ಪೊಲೀಸ್ ಪಡೆಗಳ ಎಲ್ಲಾ ಧೈರ್ಯಶಾಲಿಗಳಿಗೆ ನನ್ನ ಗೌರವ ನಮನಗಳು. ಎಲ್ಲಾ ಪ್ರೀತಿಯ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ನನ್ನ ಆಶೀರ್ವಾದಗಳು. ಈ ಗಣರಾಜ್ಯೋತ್ಸವದಂದು, ಮತ್ತೊಮ್ಮೆ ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು.

ಧನ್ಯವಾದಗಳು,

ಜೈ ಹಿಂದ್!

ಜೈ ಭಾರತ್!

*****



(Release ID: 1893975) Visitor Counter : 183