ಪ್ರಧಾನ ಮಂತ್ರಿಯವರ ಕಛೇರಿ

ಮಹಾರಾಷ್ಟ್ರದ ಮುಂಬೈನಲ್ಲಿ ಸುಮಾರು 38,800 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಉಪಕ್ರಮಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಮಂತ್ರಿಯವರು


ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯ ಅಡಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಅನುಮೋದಿತ ಸಾಲಗಳ ವರ್ಗಾವಣೆಗೆ ಚಾಲನೆ

ಮುಂಬೈ ಮೆಟ್ರೋ ರೈಲು ಮಾರ್ಗ-2ಎ ಮತ್ತು 7ನ್ನು ದೇಶಕ್ಕೆ ಸಮರ್ಪಿಸಿದ ಪ್ರಧಾನಿಗಳು

ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಮತ್ತು ಏಳು ಕೊಳಚೆ ನೀರು ಸಂಸ್ಕರಣಾ ಘಟಕಗಳ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ

20 ಹಿಂದೂ ಹೃದಯ ಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ಆಪ್ಲಾ ದವಾಖಾನಾ ಉದ್ಘಾಟನೆ

ಮುಂಬೈನಲ್ಲಿ ಸುಮಾರು 400 ಕಿಲೋಮೀಟರ್ ರಸ್ತೆಗಳಿಗೆ ರಸ್ತೆ ಕಾಂಕ್ರೀಟೀಕರಣ ಯೋಜನೆಯ ಪ್ರಾರಂಭ

"ಭಾರತದ ಸಂಕಲ್ಪದಲ್ಲಿ ಜಗತ್ತು ನಂಬಿಕೆಯನ್ನು ತೋರಿಸುತ್ತಿದೆ"

"ಛತ್ರಪತಿ ಶಿವಾಜಿ ಮಹಾರಾಜ್ ಅವರಿಂದ ಸ್ಫೂರ್ತಿ ಪಡೆದ, 'ಸೂರಜ್' ಮತ್ತು 'ಸ್ವರಾಜ್' ಮನೋಭಾವವು ಡಬಲ್ ಎಂಜಿನ್ ಸರ್ಕಾರದಲ್ಲಿ ಬಲವಾಗಿ ಸ್ಪಷ್ಟವಾಗಿ ಕಾಣುತ್ತಿದೆ" ಎಂದು ಹೇಳಿದ ಪ್ರಧಾನಿ

"ಭವಿಷ್ಯದ ಚಿಂತನೆ ಮತ್ತು ಆಧುನಿಕ ವಿಧಾನದೊಂದಿಗೆ ಭಾರತವು ತನ್ನ ಭೌತಿಕ ಮತ್ತು ಸಾಮಾಜಿಕ ಮೂಲಸೌಕರ್ಯಕ್ಕಾಗಿ ಖರ್ಚು ಮಾಡುತ್ತಿದೆ"

"ಇಂದಿನ ಅಗತ್ಯಗಳು ಮತ್ತು ಭವಿಷ್ಯದ ಸಾಧ್ಯತೆಗಳು ಎರಡರಲ್ಲೂ ಕೆಲಸ ನಡೆಯುತ್ತಿದೆ"

"ಅಮೃತ ಕಾಲದ ವೇಳೆಯಲ್ಲಿ, ಮಹಾರಾಷ್ಟ್ರದ ಅನೇಕ ನಗರಗಳು ಭಾರತದ ಬೆಳವಣಿಗೆಯನ್ನು ಮುನ್ನಡೆಸುತ್ತವೆ"

"ನಗರಗಳ ಅಭಿವೃದ್ಧಿಗಾಗಿ ಸಾಮರ್ಥ್ಯ ಮತ್ತು ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಲ್ಲ"

"ಮುಂಬೈನ ಅಭಿವೃದ್ಧಿಗೆ ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಸಂಸ್ಥೆಗಳ ನಡುವಿನ ಸಮನ್ವಯ ಅತ್ಯಗತ್ಯವಾಗಿದೆ"

"ಸ್ವನಿಧಿ ಯೋಜನೆಯು ಸಾಲ ಯೋಜನೆಗಿಂತ ಹೆಚ್ಚಿನದು, ಇದು ಬೀದಿ ಬದಿ ವ್ಯಾಪಾರಿಗಳ ಆತ್ಮಗೌರವದ ಅಡಿಪಾಯವಾಗಿದೆ"

"ಎಲ್ಲರ ಪ್ರಯಾಸ ಇರುವಾಗ ಅಸಾಧ್ಯವಾದುದು ಯಾವುದೂ ಇಲ್ಲ ಎಂಬುದಕ್ಕೆ ಡಿಜಿಟಲ್ ಇಂಡಿಯಾ ಒಂದು ಜೀವಂತ ಉದಾಹರಣೆಯಾಗಿದೆ"

Posted On: 19 JAN 2023 7:24PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಮುಂಬೈನಲ್ಲಿ ಹಲವು ಅಭಿವೃದ್ಧಿ ಉಪಕ್ರಮಗಳ ಉದ್ಘಾಟನೆ, ಸಮರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯ ಅಡಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಅನುಮೋದಿತ ಸಾಲಗಳ ವರ್ಗಾವಣೆಗೆ ಚಾಲನೆ ನೀಡುವುದು, ಮುಂಬೈ ಮೆಟ್ರೋ ರೈಲು ಮಾರ್ಗ-2ಎ ಮತ್ತು 7ನ್ನು ರಾಷ್ಟ್ರಕ್ಕೆ ಸಮರ್ಪಿಸುವುದು, ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಮತ್ತು ಏಳು ಒಳಚರಂಡಿ ಸಂಸ್ಕರಣಾ ಘಟಕಗಳ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ, 20 ಹಿಂದೂ ಹೃದಯ ಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ಆಪ್ಲಾ ದವಾಖಾನಾ ಉದ್ಘಾಟನೆ ಮತ್ತು ಮುಂಬೈನಲ್ಲಿ ಸುಮಾರು 400 ಕಿಲೋಮೀಟರ್ ರಸ್ತೆಗಳಿಗೆ ರಸ್ತೆ ಕಾಂಕ್ರೀಟೀಕರಣ ಯೋಜನೆಯನ್ನು ಪ್ರಾರಂಭಿಸುವುದು ಈ ಯೋಜನೆಗಳಲ್ಲಿ ಸೇರಿವೆ.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಮುಂಬೈಯನ್ನು ಉತ್ತಮ ಮೆಟ್ರೋಪಾಲಿಟನ್ ನಗರವಾಗಿ ಮಾಡುವಲ್ಲಿ ಇಂದಿನ ಯೋಜನೆಗಳು ಪ್ರಮುಖ ಪಾತ್ರ ವಹಿಸಲಿವೆ ಎಂದರು. ಪ್ರಧಾನಮಂತ್ರಿಯವರು ಫಲಾನುಭವಿಗಳು ಮತ್ತು ಮುಂಬೈಕರ್ ರನ್ನು ಅಭಿನಂದಿಸಿ, "ಸ್ವಾತಂತ್ರ್ಯದ ನಂತರ ಇದೇ ಮೊದಲ ಬಾರಿಗೆ ಭಾರತವು ತನ್ನ ಕನಸುಗಳನ್ನು ನನಸಾಗಿಸುವ ಧೈರ್ಯವನ್ನು ತೋರುತ್ತಿದೆ" ಎಂದು ಹೇಳಿದರು. ಭಾರತದಲ್ಲಿ ಹಿಂದಿನ ಅವಧಿಯನ್ನು ಬಡತನದ ಬಗ್ಗೆ ಮಾತ್ರ ಚರ್ಚಿಸಲಾಗುತ್ತಿದ್ದು, ಪ್ರಪಂಚದಿಂದ ನೆರವು ಪಡೆಯುವುದು ನಮ್ಮ ಏಕೈಕ ಆಯ್ಕೆಯಾಗಿತ್ತು ಎಂದು ಪ್ರಧಾನಿ ನೆನಪಿಸಿಕೊಂಡರು. ಭಾರತದ ಸಂಕಲ್ಪದಲ್ಲಿ ಜಗತ್ತು ನಂಬಿಕೆ ತೋರಿಸುತ್ತಿರುವುದು ಇದೇ ಮೊದಲ ಬರಿ ಎಂದು ಅವರು ಒತ್ತಿ ಹೇಳಿದರು. ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಭಾರತೀಯರು ಕಾತರದಿಂದ ಕಾಯುತ್ತಿರುವ ಈ ವೇಳೆಯಲ್ಲಿ, ಭಾರತದ ಬಗ್ಗೆ ಅದೇ ಆಶಾವಾದವನ್ನು ವಿಶ್ವದಲ್ಲಿ ಕಾಣಬಹುದು ಎಂದು ಪ್ರಧಾನಿ ಹೇಳಿದರು. ಭಾರತವು ತನ್ನ ಸಾಮರ್ಥ್ಯಗಳನ್ನು ಉತ್ತಮವಾಗಿ ಬಳಸಿಕೊಳ್ಳುತ್ತಿದೆ ಎಂಬ ನಂಬಿಕೆಯೇ ಈ ಸಕಾರಾತ್ಮಕತೆಗೆ ಕಾರಣ ಎಂದು ಅವರು ಹೇಳಿದರು. "ಇಂದು ಭಾರತವು ಅಭೂತಪೂರ್ವ ಆತ್ಮವಿಶ್ವಾಸದಿಂದ ತುಂಬಿದೆ. ಛತ್ರಪತಿ ಶಿವಾಜಿ ಮಹಾರಾಜರಿಂದ ಸ್ಫೂರ್ತಿ ಪಡೆದ 'ಸೂರಜ್' ಮತ್ತು 'ಸ್ವರಾಜ್ಯ'ದ ಮನೋಭಾವವು ಡಬಲ್ ಇಂಜಿನ್ ಸರ್ಕಾರದಲ್ಲಿ ಬಲವಾಗಿ ಸ್ಪಷ್ಟವಾಗಿ ಕಾಣುತ್ತಿದೆ" ಎಂದು ಪ್ರಧಾನಿ ಹೇಳಿದ್ದಾರೆ.

ನಮ್ಮ ದೇಶ ಮತ್ತು ಕೋಟ್ಯಂತರ ನಾಗರಿಕರಿಗೆ ಹಾನಿ ಮಾಡಿದ ಹಗರಣಗಳ ಯುಗವನ್ನು ಪ್ರಧಾನಿ ಸ್ಮರಿಸಿದರು. "ನಾವು ಈ ಚಿಂತನೆಯನ್ನು ಬದಲಾಯಿಸಿದ್ದೇವೆ. ಇಂದು ಭಾರತವು ಭವಿಷ್ಯದ ಚಿಂತನೆ ಮತ್ತು ಆಧುನಿಕ ವಿಧಾನದೊಂದಿಗೆ ತನ್ನ ಭೌತಿಕ ಮತ್ತು ಸಾಮಾಜಿಕ ಮೂಲಸೌಕರ್ಯಕ್ಕಾಗಿ ಖರ್ಚು ಮಾಡುತ್ತಿದೆ" ಎಂದು ಪ್ರಧಾನಿ ಹೇಳಿದ್ದಾರೆ. ಒಂದು ಕಡೆ ವಸತಿ, ಶೌಚಾಲಯ, ವಿದ್ಯುತ್, ನೀರು, ಅಡುಗೆ ಅನಿಲ, ಉಚಿತ ವೈದ್ಯಕೀಯ ಚಿಕಿತ್ಸೆ, ವೈದ್ಯಕೀಯ ಕಾಲೇಜುಗಳು, ಎ.ಐ.ಐ.ಎಂ.ಎಸ್ (ಏಮ್ಸ್), ಐ.ಐ.ಟಿ ಮತ್ತು ಐ.ಐ.ಎಂ ವೇಗವಾಗಿ ವಿಸ್ತರಿಸುತ್ತಿದ್ದರೆ, ಮತ್ತೊಂದೆಡೆ ಆಧುನಿಕ ಸಂಪರ್ಕವು ಅದೇ ವೇಗದಲ್ಲಿ ನಡೆಯುತ್ತಿದೆ ಎಂದು ಅವರು ಹೇಳಿದರು. "ಇಂದಿನ ಅಗತ್ಯಗಳು ಮತ್ತು ಭವಿಷ್ಯದ ಸಾಧ್ಯತೆಗಳು ಎರಡರಲ್ಲೂ ಕೆಲಸ ನಡೆಯುತ್ತಿದೆ" ಎಂದು ಅವರು ಹೇಳಿದರು. ಈ ಕಠಿಣ ಸಮಯದಲ್ಲೂ ಭಾರತವು 80 ಕೋಟಿ ನಾಗರಿಕರಿಗೆ ಉಚಿತ ಪಡಿತರವನ್ನು ಒದಗಿಸುದ್ದು, ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಅಭೂತಪೂರ್ವ ಹೂಡಿಕೆಗಳನ್ನು ಮಾಡುತ್ತಿದೆ ಎಂದು ಅವರು ಹೇಳಿದರು. "ಇದು ಇಂದಿನ ಭಾರತದ ಬದ್ಧತೆಯನ್ನು ಸೂಚಿಸುತ್ತದೆ ಮತ್ತು ವಿಕಾಸ ಭಾರತದ ಪರಿಕಲ್ಪನೆಯ ಪ್ರತಿಬಿಂಬವಾಗಿದೆ" ಎಂದು ಅವರು ಹೇಳಿದರು.

ವಿಕಾಸ ಭಾರತ ನಿರ್ಮಾಣದಲ್ಲಿ ನಗರಗಳ ಪಾತ್ರವನ್ನು ಪ್ರಧಾನಿ ಒತ್ತಿ ಹೇಳಿದರು. ಅಮೃತ ಕಾಲದ ಈ ಸಮಯದಲ್ಲಿ, ಮಹಾರಾಷ್ಟ್ರದ ಅನೇಕ ನಗರಗಳು ಭಾರತದ ಬೆಳವಣಿಗೆಗೆ ಚಾಲನೆ ನೀಡಲಿವೆ ಎಂದು ಅವರು ಹೇಳಿದರು. ಅದಕ್ಕಾಗಿಯೇ ಭವಿಷ್ಯಕ್ಕಾಗಿ ಮುಂಬೈಯನ್ನು ಸಿದ್ಧಪಡಿಸುವುದು ಡಬಲ್ ಎಂಜಿನ್ ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು. ಪ್ರಧಾನಿ ಶ್ರೀ ಮೋದಿಯವರು ಮುಂಬೈನ ಮೆಟ್ರೋದ ಉದಾಹರಣೆಯನ್ನು ನೀಡಿ, 2014 ರಲ್ಲಿ ಮುಂಬೈ 10-11 ಕಿ.ಮೀ ಉದ್ದದ ಮೆಟ್ರೋ ಮಾರ್ಗವನ್ನು ಹೊಂದಿತ್ತು, ಡಬಲ್ ಎಂಜಿನ್ ಸರ್ಕಾರದಲ್ಲಿ ಮೆಟ್ರೋ ತನ್ನ ಹೊಸ ವೇಗ ಮತ್ತು ಪ್ರಮಾಣವನ್ನು ಪಡೆದುಕೊಂಡಿದೆ, ಏಕೆಂದರೆ ಮುಂಬೈ 300 ಕಿ.ಮೀ ಮೆಟ್ರೋ ಜಾಲದ ಕಡೆಗೆ ವೇಗವಾಗಿ ಚಲಿಸುತ್ತಿದೆ ಎಂದರು.

ಭಾರತೀಯ ರೈಲ್ವೆ ಮತ್ತು ಮುಂಬೈ ಮೆಟ್ರೋದ ಪ್ರಗತಿಗಾಗಿ ದೇಶಾದ್ಯಂತ ಅತ್ಯಂತ ವೇಗದ ಮಿಷನ್ ಮೋಡ್ ನಲ್ಲಿ ಕೆಲಸಗಳನ್ನು ನಡೆಸಲಾಗುತ್ತಿದೆ ಮತ್ತು ಸ್ಥಳೀಯ ರೈಲುಗಳು ಸಹ ಇದರಿಂದ ಪ್ರಯೋಜನ ಪಡೆಯುತ್ತಿವೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಡಬಲ್ ಇಂಜಿನ್ ಸರ್ಕಾರವು ಉಳ್ಳ ಜನರಿಗೆ ಮಾತ್ರ ಲಭ್ಯವಿದ್ದ ಅದೇ ಸುಧಾರಿತ ಸೇವೆಗಳು, ಸ್ವಚ್ಛತೆ ಮತ್ತು ಪ್ರಯಾಣದ ವೇಗದ ಅನುಭವವನ್ನು ಸಾರ್ವಜನಿಕರಿಗೆ ನೀಡಲು ಶ್ರಮಿಸುತ್ತದೆ ಎಂದು ಅವರು ತಿಳಿಸಿದರು. ಇದರ ಪರಿಣಾಮವಾಗಿ, ಇಂದಿನ ರೈಲ್ವೆ ನಿಲ್ದಾಣಗಳನ್ನು ವಿಮಾನ ನಿಲ್ದಾಣಗಳಂತೆ ಅಭಿವೃದ್ಧಿಪಡಿಸಲಾಗುತ್ತಿದೆ ಮತ್ತು ಭಾರತದ ಅತ್ಯಂತ ಹಳೆಯ ರೈಲ್ವೆ ನಿಲ್ದಾಣಗಳಲ್ಲಿ ಒಂದಾದ ಛತ್ರಪತಿ ಮಹಾರಾಜ್ ಟರ್ಮಿನಸ್ ಈ ಉಪಕ್ರಮದ ಭಾಗವಾಗಿ ನವೀಕರಣಗೊಳ್ಳಲಿದೆ ಮತ್ತು 21 ನೇ ಶತಮಾನದ ಭಾರತದ ತೇಜಸ್ವಿ ಉದಾಹರಣೆಯಾಗಿ ಅದನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಪ್ರಧಾನಿ ಹೇಳಿದರು. "ಸಾರ್ವಜನಿಕರಿಗೆ ಉತ್ತಮ ಸೇವೆಗಳು ಲಭ್ಯವಾಗುವಂತೆ ಮಾಡುವುದು ಮತ್ತು ಪ್ರಯಾಣದ ಅನುಭವವನ್ನು ಸುಲಭಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ" ಎಂದು ಅವರು ತಿಳಿಸಿದರು. ರೈಲ್ವೆ ನಿಲ್ದಾಣವು ರೈಲ್ವೆಗೆ ಸಂಬಂಧಿಸಿದ ಸೇವೆಗಳಿಗೆ ಸೀಮಿತವಾಗಿರದೆ ಬಹು ಮಾದರಿ ಸಂಪರ್ಕದ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದರು. "ಬಸ್, ಮೆಟ್ರೋ, ಟ್ಯಾಕ್ಸಿ ಅಥವಾ ಆಟೋ ಸೇರಿದಂತೆ ಎಲ್ಲಾ ಸಾರಿಗೆ ವಿಧಾನಗಳನ್ನು ಒಂದೇ ಸೂರಿನಡಿ ಸಂಪರ್ಕಿಸಲಾಗುವುದು ಮತ್ತು ಇದು ಎಲ್ಲಾ ಪ್ರಯಾಣಿಕರಿಗೆ ತಡೆರಹಿತ ಸಂಪರ್ಕವನ್ನು ಒದಗಿಸುತ್ತದೆ" ಎಂದು ಪ್ರಧಾನಿ ಹೇಳಿದರು. ಪ್ರತಿ ನಗರದಲ್ಲಿಯೂ ಇಂತಹ ಬಹು ಮಾದರಿ ಸಂಪರ್ಕ ಕೇಂದ್ರಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಮುಂಬೈ ಲೋಕಲ್ ನ ತಾಂತ್ರಿಕ ಪ್ರಗತಿ, ಮೆಟ್ರೋ ಜಾಲದ ವಿಸ್ತರಣೆ, ವಂದೇ ಭಾರತ್ ರೈಲುಗಳು ಮತ್ತು ಬುಲೆಟ್ ಟ್ರೈನ್ ಗಿಂತ ವೇಗವಾಗಿ ಸುಧಾರಿತ ಸಂಪರ್ಕದೊಂದಿಗೆ ಮುಂಬರುವ ವರ್ಷಗಳಲ್ಲಿ ಮುಂಬೈ ನಗರವು ನವೀಕೃತವಾಗಲಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. "ಬಡ ಕಾರ್ಮಿಕರು ಮತ್ತು ಸಿಬ್ಬಂದಿಯಿಂದ ಹಿಡಿದು ಅಂಗಡಿ ಮುಂಗಟ್ಟು ಮತ್ತು ಬೃಹತ್ ವ್ಯಾಪಾರ ಮಾಲೀಕರವರೆಗೆ, ಮುಂಬೈನಲ್ಲಿ ವಾಸಿಸುವ ಎಲ್ಲರಿಗೂ ಇದು ಅನುಕೂಲಕರವಾಗಿರುತ್ತದೆ" ಎಂದು ಪ್ರಧಾನಿ ಹೇಳಿದ್ದಾರೆ. ನೆರೆಯ ಜಿಲ್ಲೆಗಳಿಂದ ಮುಂಬೈನ ಪ್ರಯಾಣ ಈಗ ಸುಲಭವಾಗಲಿದೆ ಎಂದು ಅವರು ಮಾಹಿತಿ ನೀಡಿದರು. ಕರಾವಳಿ ರಸ್ತೆ, ಇಂದೂ ಮಿಲ್ಸ್ ಸ್ಮಾರಕ, ನವೀ ಮುಂಬೈ ವಿಮಾನ ನಿಲ್ದಾಣ, ಫ್ರಾನ್ಸ್ ಹಾರ್ಬರ್ ಲಿಂಕ್ ಮತ್ತು ಅಂತಹ ಯೋಜನೆಗಳು ಮುಂಬೈಗೆ ಹೊಸ ಶಕ್ತಿಯನ್ನು ನೀಡುತ್ತವೆ ಎಂದು ಪ್ರಧಾನಿ ಒತ್ತಿ ಹೇಳಿದರು. ಧಾರಾವಿ ಪುನರ್ವಿಕಾಸ ಮತ್ತು ಓಲ್ಡ್ ಚೌಲ್ ಡೆವಲಪ್ಮೆಂಟ್ ನಂತಹ ಯೋಜನೆಗಳು ಮತ್ತೆ ದಾರಿಗೆ ಬರುತ್ತಿವೆ ಎಂದು ಗಮನಿಸಿದ ಅವರು, ಈ ಗಮನಾರ್ಹ ಸಾಧನೆಗಾಗಿ ಶ್ರೀ ಏಕನಾಥ್ ಶಿಂಧೆ ಮತ್ತು ಅವರ ತಂಡವನ್ನು ಅಭಿನಂದಿಸಿದರು. ಮುಂಬೈನಲ್ಲಿ ರಸ್ತೆಗಳ ಸುಧಾರಣೆಗಾಗಿ ಇಂದು ಕೈಗೊಂಡಿರುವ ಕಾಮಗಾರಿಗಳ ಬಗ್ಗೆಯೂ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಇದು ಡಬಲ್ ಎಂಜಿನ್ ಸರ್ಕಾರ ಮಾಡಿರುವ ಬದ್ಧತೆಯನ್ನು ತೋರಿಸುತ್ತದೆ ಎಂದರು.

ಭಾರತೀಯ ನಗರಗಳ ಸಂಪೂರ್ಣ ಪರಿವರ್ತನೆಗಾಗಿ ಕೆಲಸ ನಡೆಯುತ್ತಿದೆ ಎಂದು ಪ್ರಧಾನಿ ತಿಳಿಸಿದರು. ಮಾಲಿನ್ಯ ಮತ್ತು ಸ್ವಚ್ಚತೆಯಂತಹ ವ್ಯಾಪಕವಾದ ನಗರ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲಾಗುತ್ತಿದೆ. ಎಲೆಕ್ಟ್ರಿಕ್ ಮೊಬಿಲಿಟಿ ಮೂಲಸೌಕರ್ಯ, ಜೈವಿಕ ಇಂಧನ ಆಧಾರಿತ ಸಾರಿಗೆ ವ್ಯವಸ್ಥೆ, ಹೈಡ್ರೋಜನ್ ಇಂಧನದ ಮೇಲೆ ಮಿಷನ್ ಮೋಡ್ ಗಮನ, ತ್ಯಾಜ್ಯದಿಂದ ಸಂಪತ್ತಿನೆಡೆಗೆ ಚಲನೆ ಮತ್ತು ಶುದ್ಧ ನದಿಗಳನ್ನು ಖಚಿತಪಡಿಸಿಕೊಳ್ಳಲು ನೀರು ಸಂಸ್ಕರಣಾ ಘಟಕಗಳು ಈ ದಿಕ್ಕಿನಲ್ಲಿ ಕೆಲವು ಪ್ರಮುಖ ಹೆಜ್ಜೆಗಳಾಗಿವೆ. "ನಗರಗಳನ್ನು ಅಭಿವೃದ್ಧಿಪಡಿಸಲು ಸಾಮರ್ಥ್ಯ ಮತ್ತು ರಾಜಕೀಯ ಇಚ್ಛಾಶಕ್ತಿಗೆ ಯಾವುದೇ ಕೊರತೆಯಿಲ್ಲ. ಆದರೂ, ಮುಂಬೈನಂತಹ ನಗರದಲ್ಲಿ ಅಭಿವೃದ್ಧಿಯನ್ನು ಸಾಕಾರಗೊಳಿಸಲು ಸಾಧ್ಯವಿಲ್ಲ, ನಗರದ ಸ್ಥಳೀಯ ಸಂಸ್ಥೆ ಕೂಡ ತ್ವರಿತ ಅಭಿವೃದ್ಧಿಗೆ ಅದೇ ಆದ್ಯತೆಯನ್ನು ಹೊಂದಿದೆ. ಅದಕ್ಕಾಗಿಯೇ ಮುಂಬೈನ ಅಭಿವೃದ್ಧಿಯಲ್ಲಿ ಸ್ಥಳೀಯ ನಗರ ಸಂಸ್ಥೆಯ ಪಾತ್ರ ನಿರ್ಣಾಯಕವಾಗಿದೆ" ಎಂದ ಪ್ರಧಾನಿಯವರು, ಮೆಟ್ರೋಪಾಲಿಟನ್ ಗೆ ನಿಗದಿಪಡಿಸಿದ ಹಣವನ್ನು ಸರಿಯಾಗಿ ಬಳಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು. ಅಭಿವೃದ್ಧಿಯನ್ನು ರಾಜಕೀಯಗೊಳಿಸುವುದರ ವಿರುದ್ಧವೂ ಅವರು ಎಚ್ಚರಿಕೆ ನೀಡಿದರು. ಕೈಗೆಟುಕುವ ಮತ್ತು ಮೇಲಾಧಾರ ರಹಿತ ಸಾಲದೊಂದಿಗೆ 35 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಟ್ಟ ಪ್ರಧಾನ ಮಂತ್ರಿ ಸ್ವನಿಧಿಯಂತಹ ಯೋಜನೆಗಳು, ಮಹಾರಾಷ್ಟ್ರದಲ್ಲಿ 5 ಲಕ್ಷ ಫಲಾನುಭವಿಗಳನ್ನು ಹೊಂದಿದ್ದರೂ ಸಹ ಅದರ ಹಿಂದಿನ ರಾಜಕೀಯ ಕಾರಣಗಳಿಂದಾಗಿ ಅದಕ್ಕೆ ಅಡ್ಡಿಯಾಗಿತ್ತು ಎಂದು ಅವರು ವಿಷಾದಿಸಿದರು. ಇದಕ್ಕಾಗಿ ಅವರು ಕೇಂದ್ರದಿಂದ ಮಹಾರಾಷ್ಟ್ರದಿಂದ ಮುಂಬೈವರೆಗೆ ಸಮನ್ವಯದಿಂದ ಕಾರ್ಯನಿರ್ವಹಿಸುವ ಪರಿಪೂರ್ಣ ಸಮನ್ವಯ ಮತ್ತು ವ್ಯವಸ್ಥೆಯ ಅಗತ್ಯವನ್ನು ಒತ್ತಿ ಹೇಳಿದರು. ಸ್ವನಿಧಿ ಯೋಜನೆಯು ಸಾಲ ಯೋಜನೆಗಿಂತ ಹೆಚ್ಚಿನದಾಗಿದೆ ಎಂದು ಅವರು ಪುನರುಚ್ಚರಿಸಿದರು. ಇದು ಬೀದಿ ಬದಿ ವ್ಯಾಪಾರಿಗಳ ಆತ್ಮಗೌರವದ ಅಡಿಪಾಯ ಎಂದು ಬಣ್ಣಿಸಿದರು. ಫಲಾನುಭವಿಗಳನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ಅವರು ಅಲ್ಪಾವಧಿಯಲ್ಲಿ 50 ಸಾವಿರ ಕೋಟಿ ರೂಪಾಯಿಗಳ ಡಿಜಿಟಲ್ ವಹಿವಾಟು ನಡೆಸಿದ್ದಾರೆ ಎಂಬ ಅಂಶವನ್ನು ಶ್ಲಾಘಿಸಿದರು. "ಎಲ್ಲರ ಪ್ರಯಾಸ ಇದ್ದಾಗ ಅಸಾಧ್ಯವಾದುದು ಯಾವುದೂ ಇಲ್ಲ ಎಂಬುದಕ್ಕೆ ಡಿಜಿಟಲ್ ಇಂಡಿಯಾ ಒಂದು ಜೀವಂತ ಉದಾಹರಣೆಯಾಗಿದೆ" ಎಂದು ಅವರು ಹೇಳಿದರು. 
ಭಾಷಣದ ಕೊನೆಯಲ್ಲಿ ಪ್ರಧಾನಮಂತ್ರಿಯವರು ಬೀದಿ ಬದಿ ವ್ಯಾಪಾರಿಗಳನ್ನುದ್ದೇಶಿಸಿ ಮಾತನಾಡುತ್ತಾ, "ನಾನು ನಿಮ್ಮೊಂದಿಗೆ ಸದಾ ನಿಂತಿದ್ದೇನೆ. ನೀವು ಹತ್ತು ಹೆಜ್ಜೆ ಇಟ್ಟರೆ, ನಾನು ಹನ್ನೊಂದನೇ ಹೆಜ್ಜೆ ಇಡಲು ಸಿದ್ಧನಿದ್ದೇನೆ." ದೇಶದ ಸಣ್ಣ ಹಿಡುವಳಿದಾರರ ಕೆಲಸ ಮತ್ತು ಸಮರ್ಪಣೆಯಿಂದ ದೇಶವು ಹೊಸ ಎತ್ತರವನ್ನು ಸಾಧಿಸುತ್ತದೆ. ಅವರು ದೊಡ್ಡ ಬದಲಾವಣೆಯನ್ನು ಸೃಷ್ಟಿಸುತ್ತಾರೆ ಎಂಬ ನಂಬಿಕೆಯನ್ನು ಅವರು ವ್ಯಕ್ತಪಡಿಸಿದರು. ಇಂದಿನ ಅಭಿವೃದ್ಧಿ ಕಾರ್ಯಗಳಿಗಾಗಿ ಮುಂಬೈ ಮತ್ತು ಮಹಾರಾಷ್ಟ್ರದ ಜನರನ್ನು ಅವರು ಅಭಿನಂದಿಸಿದರು. ಶ್ರೀ ಶಿಂಧೆ ಜಿ ಮತ್ತು ದೇವೇಂದ್ರ ಜಿ ಜೋಡಿಯು ಮಹಾರಾಷ್ಟ್ರದ ಕನಸುಗಳನ್ನು ನನಸು ಮಾಡುತ್ತದೆ ಎಂದು ಭರವಸೆ ನೀಡಿದರು.

ಮಹಾರಾಷ್ಟ್ರದ ರಾಜ್ಯಪಾಲರಾದ ಶ್ರೀ ಭಗತ್ ಸಿಂಗ್ ಕೊಹ್ಸಾರಿ, ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ ಏಕನಾಥ್ ಶಿಂಧೆ, ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವೀಸ್, ಕೇಂದ್ರ ಸಚಿವರಾದ ಶ್ರೀ ಪಿಯೂಷ್ ಗೋಯಲ್, ಶ್ರೀ ನಾರಾಯಣ್ ರಾಣೆ, ಕೇಂದ್ರ ರಾಜ್ಯ ಸಚಿವರು, ಸಂಸತ್ ಸದಸ್ಯರು ಮತ್ತು ಮಹಾರಾಷ್ಟ್ರ ಸರ್ಕಾರದ ಸಚಿವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ:

ಪ್ರಧಾನಮಂತ್ರಿಯವರು ಮುಂಬೈನಲ್ಲಿ ಸುಮಾರು 38,800 ಕೋಟಿ ರೂ. ವೆಚ್ಚದ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ತಡೆರಹಿತ ನಗರ ಚಲನಶೀಲತೆಯನ್ನು ಒದಗಿಸುವುದು ಪ್ರಧಾನಮಂತ್ರಿಯವರ ಪ್ರಮುಖ ಗಮನದ ಕ್ಷೇತ್ರಗಳಲ್ಲಿ ಒಂದಾಗಿದೆ ಮತ್ತು ಇದಕ್ಕೆ ಅನುಗುಣವಾಗಿ, ಅವರು ಸುಮಾರು 12,600 ಕೋಟಿ ರೂ. ಮೌಲ್ಯದ ಮುಂಬೈ ಮೆಟ್ರೋ ರೈಲು ಮಾರ್ಗ-2ಎ ಮತ್ತು 7ನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ದಹಿಸರ್ ಇ ಮತ್ತು ಡಿಎನ್ ನಗರವನ್ನು ಸಂಪರ್ಕಿಸುವ ಮೆಟ್ರೋ ಮಾರ್ಗ 2ಎ (ಹಳದಿ ಮಾರ್ಗ) ಸುಮಾರು 18.6 ಕಿ.ಮೀ ಉದ್ದವಿದ್ದರೆ, ಅಂಧೇರಿ ಇ - ದಹಿಸರ್ ಇ ಯನ್ನು ಸಂಪರ್ಕಿಸುವ ಮೆಟ್ರೋ ಲೈನ್ 7 (ಕೆಂಪು ಮಾರ್ಗ) ಸುಮಾರು 16.5 ಕಿ.ಮೀ ಉದ್ದವಿದೆ. ಈ ಮಾರ್ಗಗಳಿಗೆ ಪ್ರಧಾನಮಂತ್ರಿಯವರು 2015ರಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದರು. 

ಸುಮಾರು 17,200 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಏಳು ಕೊಳಚೆ ನೀರು ಸಂಸ್ಕರಣಾ ಘಟಕಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು. ಮಲಾಡ್, ಭಾಂಡೂಪ್, ವರ್ಸೋವಾ, ಘಾಟ್ಕೋಪರ್, ಬಾಂದ್ರಾ, ಧಾರಾವಿ ಮತ್ತು ವರ್ಲಿಯಲ್ಲಿ ಈ ಕೊಳಚೆ ನೀರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗುವುದು. ಇವುಗಳು ಸುಮಾರು 2,460 ಕನಿಷ್ಠ ದ್ರವ ವಿಸರ್ಜನೆಯ (ಎಂ.ಎಲ್.ಡಿ.) ಸಂಯೋಜಿತ ಸಾಮರ್ಥ್ಯವನ್ನು ಹೊಂದಿರುತ್ತವೆ.

ಮುಂಬೈನಲ್ಲಿ ಆರೋಗ್ಯ ರಕ್ಷಣಾ ಮೂಲಸೌಕರ್ಯಗಳನ್ನು ಬಲಪಡಿಸುವ ಪ್ರಯತ್ನವಾಗಿ ಪ್ರಧಾನಮಂತ್ರಿಯವರು 20 ಹಿಂದೂ ಹೃದಯ ಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ಆಪ್ಲಾ ದವಾಖಾನಾವನ್ನು ಉದ್ಘಾಟಿಸಿದರು. ಈ ಹೊಸ ಉಪಕ್ರಮವು ಆರೋಗ್ಯ ತಪಾಸಣೆ, ಔಷಧಿಗಳು, ತನಿಖೆಗಳು ಮತ್ತು ರೋಗನಿರ್ಣಯದಂತಹ ಅಗತ್ಯ ವೈದ್ಯಕೀಯ ಸೇವೆಗಳನ್ನು ಜನರಿಗೆ ಸಂಪೂರ್ಣವಾಗಿ ಉಚಿತವಾಗಿ ಒದಗಿಸುತ್ತದೆ. ಮುಂಬೈನಲ್ಲಿ 360 ಹಾಸಿಗೆಗಳ ಭಾಂಡೂಪ್ ಮಲ್ಟಿಸ್ಪೆಷಾಲಿಟಿ ಮುನ್ಸಿಪಲ್ ಆಸ್ಪತ್ರೆ, ಗೋರೆಗಾಂವ್ (ಪಶ್ಚಿಮ) 306 ಹಾಸಿಗೆಗಳ ಸಿದ್ಧಾರ್ಥ್ ನಗರ ಆಸ್ಪತ್ರೆ ಮತ್ತು 152 ಹಾಸಿಗೆಗಳ ಓಶಿವಾರಾ ಹೆರಿಗೆ ಆಸ್ಪತ್ರೆಗಳ ಪುನರಾಭಿವೃದ್ಧಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದು ನಗರದ ಲಕ್ಷಾಂತರ ನಿವಾಸಿಗಳಿಗೆ ಪ್ರಯೋಜನವನ್ನು ನೀಡಿ, ಅವರಿಗೆ ಉನ್ನತ ದರ್ಜೆಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುತ್ತದೆ.

ಮುಂಬೈನಲ್ಲಿ ಸುಮಾರು 400 ಕಿಲೋಮೀಟರ್ ರಸ್ತೆಗೆ ರಸ್ತೆ ಕಾಂಕ್ರೀಟೀಕರಣ ಯೋಜನೆಯನ್ನು ಪ್ರಧಾನಿ ಪ್ರಾರಂಭಿಸಿದರು. ಈ ಯೋಜನೆಯನ್ನು ಸುಮಾರು 6,100 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಮುಂಬೈನಲ್ಲಿ ಸುಮಾರು 2050 ಕಿಲೋಮೀಟರ್ ವರೆಗೆ ವಿಸ್ತರಿಸಿರುವ ಒಟ್ಟು ರಸ್ತೆಗಳಲ್ಲಿ, 1200 ಕಿಲೋಮೀಟರ್ ಗಿಂತ ಹೆಚ್ಚು ರಸ್ತೆಗಳು ಕಾಂಕ್ರಿಟೀಕರಣಗೊಂಡಿವೆ ಅಥವಾ ಕಾಂಕ್ರೀಟೀಕರಣ ಪ್ರಕ್ರಿಯೆಯ ಹಾದಿಯಲ್ಲಿವೆ. ಆದಾಗ್ಯೂ, ಸುಮಾರು 850 ಕಿ.ಮೀ ಉದ್ದದ ಉಳಿದ ರಸ್ತೆಗಳು ರಸ್ತೆಗುಂಡಿಗಳ ಸವಾಲುಗಳನ್ನು ಎದುರಿಸುತ್ತಿವೆ, ಇದು ಸಾರಿಗೆಯ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತದೆ. ರಸ್ತೆ ಕಾಂಕ್ರೀಟೀಕರಣ ಯೋಜನೆಯು ಈ ಸವಾಲನ್ನು ನಿವಾರಿಸುವ ಗುರಿಯನ್ನು ಹೊಂದಿದೆ. ಈ ಕಾಂಕ್ರೀಟ್ ರಸ್ತೆಗಳು ವರ್ಧಿತ ಭದ್ರತೆಯೊಂದಿಗೆ ವೇಗದ ಪ್ರಯಾಣವನ್ನು ಖಚಿತಪಡಿಸುತ್ತವೆ, ಆದರೆ ಉತ್ತಮ ಒಳಚರಂಡಿ ಸೌಲಭ್ಯಗಳು ಮತ್ತು ಯುಟಿಲಿಟಿ ಡಕ್ಟ್ ಗಳನ್ನು ಒದಗಿಸುವುದರಿಂದ ರಸ್ತೆಗಳನ್ನು ನಿಯಮಿತವಾಗಿ ಅಗೆಯುವ ಕಷ್ಟವನ್ನು ತಪ್ಪಿಸಬಹುದು.

ಪ್ರಧಾನಿಯವರು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನ ಪುನರಾಭಿವೃದ್ಧಿಗೂ ಶಂಕುಸ್ಥಾಪನೆ ನೆರವೇರಿಸಿದರು. ಟರ್ಮಿನಸ್ ನ ದಕ್ಷಿಣ ಪಾರಂಪರಿಕ ಘಟಕದ ದಟ್ಟಣೆಯನ್ನು ನಿವಾರಿಸಿ, ಅದರ ಸೌಲಭ್ಯಗಳನ್ನು ಹೆಚ್ಚಿಸಿ, ಉತ್ತಮ ಬಹು ಮಾದರಿ ಏಕೀಕರಣ ಮತ್ತು ವಿಶ್ವಪ್ರಸಿದ್ಧ ಅಪ್ರತಿಮ ರಚನೆಯನ್ನು ಅದರ ಗತ ವೈಭವದಂತೆ ಸಂರಕ್ಷಿಸಿ ಪುನಃಸ್ಥಾಪಿಸುವ ದೃಷ್ಟಿಯಿಂದ ಈ ಪುನರಾಭಿವೃದ್ಧಿಯನ್ನು ಯೋಜಿಸಲಾಗಿದೆ. ಈ ಯೋಜನೆಯನ್ನು 1,800 ಕೋಟಿ ರೂ.ಗಳ ವೆಚ್ಚದಲ್ಲಿ ಮಾಡಲಾಗುವುದು. ಇದಲ್ಲದೆ, ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯ ಅಡಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಅನುಮೋದಿತ ಸಾಲಗಳ ವರ್ಗಾವಣೆಯನ್ನು ಪ್ರಧಾನಿ ಪ್ರಾರಂಭಿಸಿದರು.
 

*****



(Release ID: 1892755) Visitor Counter : 100