ಪ್ರಧಾನ ಮಂತ್ರಿಯವರ ಕಛೇರಿ
ಗುಜರಾತ್ನ ಅಹಮದಾಬಾದ್ನಿಂದ ರಾಷ್ಟ್ರಕ್ಕೆ ನಾನಾ ರೈಲ್ವೆ ಯೋಜನೆಗಳ ಲೋಕಾರ್ಪಣೆ ವೇಳೆ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Posted On:
31 OCT 2022 8:43PM by PIB Bengaluru
ನನ್ನ ಸಂಪುಟ ಸಹೋದ್ಯೋಗಿಗಳಾದ ಶ್ರೀ ಅಶ್ವಿನಿ ವೈಷ್ಣವ್ ಜಿ, ದರ್ಶನಾಬೆನ್ ಜರ್ದೋಶ್, ಗುಜರಾತ್ನ ಸಚಿವರೇ, ಸಂಸದರು ಮತ್ತು ಶಾಸಕರೇ ಮತ್ತು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿರುವ ನನ್ನ ಪ್ರೀತಿಯ ಸಹೋದರ ಸಹೋದರಿಯರೇ.. !
ಗುಜರಾತ್ನ ಅಭಿವೃದ್ಧಿ ಮತ್ತು ಅದರ ಸಂಪರ್ಕದ ದೃಷ್ಟಿಯಿಂದ ಇಂದು ದೊಡ್ಡ ದಿನವಾಗಿದ್ದು, ಗಮನಾರ್ಹ ಪ್ರದೇಶದಲ್ಲಿ ಬ್ರಾಡ್ ಗೇಜ್ ಮಾರ್ಗ ಲಭ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದ ಗುಜರಾತ್ ನ ಲಕ್ಷಾಂತರ ಜನರಿಗೆ ಇಂದಿನಿಂದ ಸ್ವಲ್ಪ ಪರಿಹಾರ ಸಿಗಲಿದೆ. ಇದೀಗ ಸ್ವಲ್ಪ ಸಮಯದ ಹಿಂದೆ, ಅಸರ್ವಾ ರೈಲು ನಿಲ್ದಾಣದಲ್ಲಿ ಅಸರ್ವಾ-ಉದಯಪುರ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರುವ ಅವಕಾಶ ನನಗೆ ಸಿಕ್ಕಿತು. ಲುನಿಧರ್ನಿಂದ ಜೆಟಲ್ಸರ್ವರೆಗೆ ಬ್ರಾಡ್ಗೇಜ್ನಲ್ಲಿ ಸಂಚರಿಸಲಿರುವ ರೈಲುಗಳಿಗೂ ಇಂದೂ ಹಸಿರು ನಿಶಾನೆ ತೋರಲಾಗಿದೆ.
ಮಿತ್ರರೇ,
ಇಂದಿನ ಕಾರ್ಯಕ್ರಮ ಕೇವಲ ಎರಡು ರೈಲ್ವೆ ಯೋಜನೆಗಳಿಗೆ ಸೀಮಿತವಾಗಿಲ್ಲ. ಯಶಸ್ವಿಯಾಗಿ ಪೂರ್ಣಗೊಂಡಿರುವ ಈ ಯೋಜನೆಗಳು ಎಷ್ಟು ನಿರ್ಣಾಯಕ ಎಂಬುದನ್ನು ಗುಜರಾತ್ ರಾಜ್ಯದ ಹೊರಗಿನ ಜನರು ಸುಲಭವಾಗಿ ಊಹಿಸಲು ಸಾಧ್ಯವಿಲ್ಲ. ಈ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಲ್ಲಿ ದಶಕಗಳೇ ಕಳೆದು ಹೋಗಿವೆ. ಆದರೆ ಈ ಕಾಮಗಾರಿಯನ್ನು ಪೂರ್ಣಗೊಳಿಸುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟವಾಗಿದೆ.
ಮಿತ್ರರೇ,
ಬ್ರಾಡ್ ಗೇಜ್ ಇಲ್ಲದ ರೈಲು ಮಾರ್ಗವು ಯಾರೊಂದಿಗೂ ಸಂಪರ್ಕವಿಲ್ಲದ ಏಕಾಂಗಿ ದ್ವೀಪದಂತಿದೆ. ಇದು ಅಂತರ್ಜಾಲವಿಲ್ಲದ ಕಂಪ್ಯೂಟರ್, ಕೇಬಲ್ ಇಲ್ಲದ ಟಿವಿ ಅಥವಾ ನೆಟ್ವರ್ಕ್ ಇಲ್ಲದ ಮೊಬೈಲ್ನಂತೆ. ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳು ದೇಶದ ಇತರ ರಾಜ್ಯಗಳಿಗೆ ಹೋಗುವಂತಿಲ್ಲ, ಬೇರೆ ರಾಜ್ಯಗಳ ರೈಲುಗಳು ಇಲ್ಲಿಗೆ ಬರುವಂತಿಲ್ಲ. ಇದೀಗ ಇಂದಿನಿಂದ ಈ ಇಡೀ ಮಾರ್ಗವನ್ನು ಉನ್ನತೀಕರಿಸಲಾಗಿದೆ. ಇದೀಗ ಅಸರ್ವಾದಿಂದ ಹಿಮ್ಮತ್ನಗರದ ಮೂಲಕ ಉದಯಪುರದವರೆಗಿನ ಮೀಟರ್ ಗೇಜ್ ಮಾರ್ಗವನ್ನು ಬ್ರಾಡ್ ಗೇಜ್ ಆಗಿ ಪರಿವರ್ತಿಸಲಾಗಿದೆ. ಮತ್ತು ಇಂದು ಈ ಕಾರ್ಯಕ್ರಮದಲ್ಲಿ ಗುಜರಾತ್ ಮತ್ತು ರಾಜಸ್ಥಾನದ ಜನರು ಅಧಿಕ ಸಂಖ್ಯೆಯಲ್ಲಿ ನಮ್ಮೊಂದಿಗೆ ಸೇರಿದ್ದಾರೆ. ಲುನಿಧರ್ ಮತ್ತು ಜೆಟಲ್ಸರ್ ನಡುವೆ ಗೇಜ್ ಪರಿವರ್ತನೆ ಕಾರ್ಯವು ಈ ಪ್ರದೇಶದಲ್ಲಿ ರೈಲ್ವೆ ಸಂಪರ್ಕವನ್ನು ಸುಧಾರಿಸುತ್ತದೆ. ಇಲ್ಲಿಂದ ಹೊರಡುವ ರೈಲುಗಳು ದೇಶದ ಯಾವುದೇ ಭಾಗಕ್ಕೆ ಸಂಚರಿಸಲು ಸಾಧ್ಯವಾಗುತ್ತದೆ.
ಮಿತ್ರರೇ,
ಈ ಮಾರ್ಗ ಮೀಟರ್ ಗೇಜ್ ಮಾರ್ಗದಿಂದ ಬ್ರಾಡ್ ಗೇಜ್ಗೆ ಬದಲಾದಾಗ, ಅದು ಹಲವು ಹೊಸ ಸಾಧ್ಯತೆಗಳನ್ನು ತರುತ್ತದೆ. ಆದ್ದರಿಂದ ಅಸರ್ವಾದಿಂದ ಉದಯಪುರದವರೆಗಿನ 300 ಕಿಮೀ ರೈಲು ಮಾರ್ಗವನ್ನು ಬ್ರಾಡ್ ಗೇಜ್ಗೆ ಪರಿವರ್ತಿಸುವುದು ಅತ್ಯಂತ ನಿರ್ಣಾಯಕವಾಗಿದೆ. ಈ ರೈಲು ವಿಭಾಗವನ್ನು ಬ್ರಾಡ್ ಗೇಜ್ ಆಗಿ ಪರಿವರ್ತಿಸುವುದರೊಂದಿಗೆ ಗುಜರಾತ್ ಮತ್ತು ರಾಜಸ್ಥಾನದ ಬುಡಕಟ್ಟು ಪ್ರದೇಶಗಳು ದೆಹಲಿ ಮತ್ತು ಉತ್ತರ ಭಾರತಕ್ಕೆ ಸಂಪರ್ಕ ಕಲ್ಪಿಸುತ್ತವೆ. ಈ ಬ್ರಾಡ್ ಗೇಜ್ನಿಂದಾಗಿ ಈಗ ಅಹಮದಾಬಾದ್ ಮತ್ತು ದೆಹಲಿಗೆ ಪರ್ಯಾಯ ಮಾರ್ಗ ಲಭ್ಯವಾಗವಿದೆ. ಅಲ್ಲದೆ, ಕಛ್ ಮತ್ತು ಉದಯಪುರದ ಪ್ರವಾಸಿ ಸ್ಥಳಗಳ ನಡುವೆ ನೇರ ರೈಲು ಸಂಪರ್ಕವನ್ನು ಸಹ ಸ್ಥಾಪಿಸಲಾಗಿದ್ದು, ಇದು ಕಛ್, ಉದಯಪುರ, ಚಿತ್ತೋರ್ಗಢ ಮತ್ತು ನಾಥದ್ವಾರದ ಪ್ರವಾಸಿ ತಾಣಗಳಿಗೆ ಉತ್ತೇಜನ ದೊರಕಲಿದೆ. ಇಲ್ಲಿನ ವ್ಯಾಪಾರಿಗಳು ದೆಹಲಿ, ಮುಂಬೈ ಮತ್ತು ಅಹಮದಾಬಾದ್ನಂತಹ ಪ್ರಮುಖ ಕೈಗಾರಿಕಾ ಕೇಂದ್ರಗಳಿಗೆ ನೇರವಾಗಿ ಸಂಪರ್ಕಿಸುವ ಪ್ರಯೋಜನ ಪಡೆಯುತ್ತಾರೆ. ನಿರ್ದಿಷ್ಟವಾಗಿ ಹಿಮತ್ನಗರದ ಟೈಲ್ಸ್ ಉದ್ಯಮವು ಬಹಳಷ್ಟು ಪ್ರಯೋಜನ ಪಡೆಯಲಿದೆ. ಅಂತೆಯೇ, ಲುನಿಧರ್-ಜೆಟಲ್ಸರ್ ರೈಲು ಮಾರ್ಗವನ್ನು ಬ್ರಾಡ್ ಗೇಜ್ಗೆ ಪರಿವರ್ತಿಸುವುದರೊಂದಿಗೆ, ಧಾಸಾ-ಜೆಟಲ್ಸರ್ ವಿಭಾಗವು ಈಗ ಸಂಪೂರ್ಣವಾಗಿ ಬ್ರಾಡ್ ಗೇಜ್ಗೆ ಪರಿವರ್ತನೆಯಾಗಿದೆ. ಈ ರೈಲು ಮಾರ್ಗವು ಬೋಟಾಡ್, ಅಮ್ರೇಲಿ ಮತ್ತು ರಾಜ್ಕೋಟ್ ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ, ಇದು ಈವರೆಗೆ ಸೀಮಿತ ರೈಲು ಸಂಪರ್ಕವನ್ನು ಹೊಂದಿದೆ. ಈ ಮಾರ್ಗವು ಪೂರ್ಣಗೊಂಡರೆ, ಭವನಗರ ಮತ್ತು ಅಮ್ರೇಲಿಯ ಜನರು ಸೋಮನಾಥ ಮತ್ತು ಪೋರಬಂದರ್ಗೆ ನೇರ ಸಂಪರ್ಕವನ್ನು ಹೊಂದುವರು.
ಮತ್ತು ಮಿತ್ರರೇ, ಇದು ಮತ್ತೊಂದು ಪ್ರಯೋಜನವನ್ನು ಸಹ ಹೊಂದಿದೆ. ಭವನಗರ ಮತ್ತು ಸೌರಾಷ್ಟ್ರ ಪ್ರದೇಶದ ರಾಜ್ಕೋಟ್, ಪೋರಬಂದರ್ ಮತ್ತು ವೆರಾವಲ್ನಂತಹ ನಗರಗಳ ನಡುವಿನ ಅಂತರವೂ ಈ ಮಾರ್ಗದಿಂದ ತಗ್ಗಲಿದೆ. ಪ್ರಸ್ತುತ ಭವನಗರ ಮತ್ತು ವೆರಾವಲ್ ನಡುವಿನ ಅಂತರವು ಸುಮಾರು 470 ಕಿಲೋಮೀಟರ್ ಗಳಷ್ಟಿದ್ದು, ಇದು ಪ್ರಯಾಣಕ್ಕೆ 12 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಈ ಬ್ರಾಡ್ ಗೇಜ್ ಕಾಮಗಾರಿ ಪೂರ್ಣಗೊಂಡು ಹೊಸ ಮಾರ್ಗ ಆರಂಭವಾದ ಬಳಿಕ ಇದೀಗ 290 ಕಿ.ಮೀ.ಗಿಂತ ಕಡಿಮೆಯಾಗಲಿದೆ. ಇದರಿಂದಾಗಿ ಪ್ರಯಾಣದ ಅವಧಿಯೂ 12 ಗಂಟೆಯಿಂದ ಆರೂವರೆ ಗಂಟೆಗಳಿಗೆ ಇಳಿಕೆಯಾಗಲಿದೆ.
ಮಿತ್ರರೇ,
ಹೊಸ ಮಾರ್ಗ ಸಂಚಾರಕ್ಕೆ ಮುಕ್ತವಾದ ನಂತರ, ಭವನಗರ-ಪೋರಬಂದರ್ ನಡುವಿನ ಅಂತರವು ಸುಮಾರು 200 ಕಿಲೋಮೀಟರ್ ಗಳಷ್ಟು ತಗ್ಗಲಿದೆ ಮತ್ತು ಭವನಗರ-ರಾಜ್ ಕೋಟ್ ನಡುವಿನ ಅಂತರವು ಸುಮಾರು 30 ಕಿಲೋಮೀಟರ್ ಗಳಷ್ಟು ಕಡಿಮೆಯಾಗಿದೆ. ಈ ರೈಲು ಮಾರ್ಗವು ಈಗ ಜನನಿಬಿಡ ಸುರೇಂದ್ರನಗರ-ರಾಜ್ಕೋಟ್-ಸೋಮನಾಥ್-ಪೋರಬಂದರ್ ಮಾರ್ಗದ ನಡುವೆ ಪರ್ಯಾಯ ಮಾರ್ಗವಾಗಿದೆ. ಬ್ರಾಡ್ ಗೇಜ್ ಮಾರ್ಗದಲ್ಲಿ ಚಲಿಸುವ ರೈಲುಗಳು ಗುಜರಾತ್ನ ಕೈಗಾರಿಕಾ ಅಭಿವೃದ್ಧಿಗೆ ವೇಗ ನೀಡಲಿವೆ. ಗುಜರಾತ್ನಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಉತ್ತೇಜಿಸುತ್ತದೆ ಮತ್ತು ಈ ಹಿಂದೆ ದೇಶದಿಂದ ಸಂಪರ್ಕ ಕಡಿತಗೊಂಡ ಪ್ರದೇಶಗಳನ್ನೂ ಸಹ ಸಂಪರ್ಕಿಸುತ್ತದೆ. ಇಂದು ರಾಷ್ಟ್ರೀಯ ಏಕತಾ ದಿನದಂದು ಈ ಯೋಜನೆಯನ್ನು ಸಮರ್ಪಿಸುವುದು ನಿಜಕ್ಕೂ ವಿಶೇಷವಾಗಿದೆ.
ಮಿತ್ರರೇ,
ಡಬಲ್ ಇಂಜಿನ್ ಸರ್ಕಾರವು ಕೆಲಸ ಮಾಡುವಾಗ, ಅದರ ಪರಿಣಾಮವು ಕೇವಲ ಎರಡು ಪಟ್ಟು ಅಲ್ಲ, ಹಲವು ಪಟ್ಟಾಗಿರುತ್ತದೆ. ಇಲ್ಲಿ, ಒಂದು ಮತ್ತು ಒಂದು ಕೇವಲ ಎರಡು ಆಗುವುದಿಲ್ಲ ಆದರ ಬದಲಿಗೆ 11 ಆಗುತ್ತದೆ. ಗುಜರಾತ್ನಲ್ಲಿನ ರೈಲು ಮೂಲಸೌಕರ್ಯ ಅಭಿವೃದ್ಧಿಯು ಅದಕ್ಕೆ ಒಂದು ಉದಾಹರಣೆಯಾಗಿದೆ. ಗುಜರಾತ್ನಲ್ಲಿ ಹೊಸ ರೈಲು ಮಾರ್ಗಗಳಿಗಾಗಿ ಪದೇ ಪದೇ ಕೇಂದ್ರ ಸರ್ಕಾರವನ್ನು ಸಂಪರ್ಕಿಸುತ್ತಿದ್ದ 2014ರ ಹಿಂದಿನ ಸಮಯವನ್ನು ನಾನು ಎಂದಿಗೂ ಮರೆಯುವುದಿಲ್ಲ. ರೈಲ್ವೆಗೆ ಸಂಬಂಧಿಸಿದಂತೆ ಗುಜರಾತ್ಗೆ ಇತರ ವಲಯಗಳಲ್ಲಿಯೂ ಅನ್ಯಾಯವಾಗಿದೆ. ಆದರೆ ಡಬಲ್ ಇಂಜಿನ್ ಸರ್ಕಾರದಿಂದ ಗುಜರಾತಿನಲ್ಲಿ ಕಾಮಗಾರಿಯ ವೇಗ ಹೆಚ್ಚಿರುವುದು ಮಾತ್ರವಲ್ಲ, ಅದನ್ನು ಮತ್ತಷ್ಟು ವಿಸ್ತರಣೆ ಮಾಡುವ ಶಕ್ತಿಯೂ ಬಂದಿದೆ. 2009 ಮತ್ತು 2014ರ ನಡುವೆ ಗುಜರಾತ್ನಲ್ಲಿ 125 ಕಿಲೋಮೀಟರ್ಗಿಂತ ಕಡಿಮೆ ರೈಲ್ವೆ ಮಾರ್ಗ ಡಬ್ಲಿಂಗ್ ಕೆಲಸ ಮಾಡಲಾಗಿತ್ತು ಆದರೆ 2014 ಮತ್ತು 2022ರ ನಡುವೆ ಗುಜರಾತ್ನಲ್ಲಿ 550 ಕಿಲೋಮೀಟರ್ಗೂ ಅಧಿಕ ರೈಲ್ವೆ ಮಾರ್ಗ ಡಬ್ಲಿಂಗ್ ಕಾಮಗಾರಿ ಮಾಡಲಾಗಿದೆ. ಅದೇ ರೀತಿ, ಗುಜರಾತ್ನಲ್ಲಿ 2009 ಮತ್ತು 2014 ರ ನಡುವೆ ಕೇವಲ 60 ಕಿಲೋಮೀಟರ್ ಮಾರ್ಗ ವಿದ್ಯುದೀಕರಣಗೊಂಡಿದ್ದರೆ, 2014 ಮತ್ತು 2022ರ ನಡುವೆ 1700 ಕಿಮೀಗೂ ಅಧಿಕ ಮಾರ್ಗ ವಿದ್ಯುದೀಕರಣಗೊಂಡಿದೆ. ಅಂದರೆ ಹಿಂದಿನ ಸರ್ಕಾರಗಳಿಗಿಂತ ಡಬಲ್ ಇಂಜಿನ್ ಸರ್ಕಾರವು ಹಲವಾರು ಪಟ್ಟು ಅಧಿಕ ಕೆಲಸ ಮಾಡಿದೆ.
ಮತ್ತು ಮಿತ್ರರೇ,
ನಾವು ಕೇವಲ ವ್ಯಾಪ್ತಿ ಮತ್ತು ವೇಗವನ್ನು ಸುಧಾರಿಸಿಲ್ಲ, ಆದರೆ ಗುಣಮಟ್ಟ, ಅನುಕೂಲತೆ, ಸುರಕ್ಷತೆ ಮತ್ತು ಶುಚಿತ್ವದಂತಹ ಹಲವು ಹಂತಗಳಲ್ಲಿ ಸುಧಾರಣೆಗಳನ್ನು ಮಾಡಿದ್ದೇವೆ. ದೇಶಾದ್ಯಂತ ರೈಲು ನಿಲ್ದಾಣಗಳ ಸ್ಥಿತಿಯ ಸುಧಾರಣೆ ಇಂದು ಸ್ಪಷ್ಟವಾಗಿ ಗೋಚರಿಸುತ್ತದೆ. ಒಂದು ಕಾಲದಲ್ಲಿ ಕೇವಲ ಸ್ಥಿತಿವಂತರಿಗೆ ಮಾತ್ರ ಲಭ್ಯವಿದ್ದ ವಾತಾವರಣವನ್ನೇ ಬಡವರು ಮತ್ತು ಮಧ್ಯಮ ವರ್ಗದವರಿಗೂ ನೀಡಲಾಗುತ್ತಿದೆ. ಗಾಂಧಿನಗರ ನಿಲ್ದಾಣ ಎಷ್ಟು ಆಧುನಿಕ ಮತ್ತು ಭವ್ಯವಾಗಿದೆ ಎಂಬುದನ್ನು ನೀವು ನೋಡಬಹುದು..! ಈಗ ಅಹಮದಾಬಾದ್ ನಿಲ್ದಾಣವನ್ನು ಕೂಡ ಅದೇ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದಲ್ಲದೆ, ಭವಿಷ್ಯದಲ್ಲಿ, ಸೂರತ್, ಉದ್ನಾ, ಸಾಬರಮತಿ, ಸೋಮನಾಥ್ ಮತ್ತು ನ್ಯೂ ಭುಜ್ನಂತಹ ನಿಲ್ದಾಣಗಳು ಸಹ ಆಧುನಿಕ ರೂಪದಲ್ಲಿ ನಿಮ್ಮ ಮುಂದಿರಲಿವೆ. ಈಗ ಗಾಂಧಿನಗರ ಮತ್ತು ಮುಂಬೈ ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೇವೆಯೂ ಆರಂಭವಾಗಿದೆ. ಈ ಮಾರ್ಗದಲ್ಲಿ ಅತ್ಯಂತ ವೇಗದ ರೈಲು ಸೇವೆ ಆರಂಭಿಸುವ ಮೂಲಕ ಇದು ದೇಶದ ಪ್ರಮುಖ ವ್ಯಾಪಾರ ಕಾರಿಡಾರ್ ಆಗಿ ಮಾರ್ಪಟ್ಟಿದೆ. ಡಬಲ್ ಇಂಜಿನ್ ಸರ್ಕಾರದಿಂದ ಮಾತ್ರ ಈ ಸಾಧನೆ ಸಾಧ್ಯ.
ಮಿತ್ರರೇ,
ಪಶ್ಚಿಮ ರೈಲ್ವೆಯ ಅಭಿವೃದ್ಧಿಗೆ ಹೊಸ ಆಯಾಮ ನೀಡಲು, 12 ಗತಿ ಶಕ್ತಿ ಸರಕು (ಕಾರ್ಗೋ) ಟರ್ಮಿನಲ್ಗಳನ್ನು ಸಹ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ವಡೋದರ ವಲಯದಲ್ಲಿ ಮೊದಲ ಗತಿ ಶಕ್ತಿ ಬಹು ಮಾದರಿ ಸರಕು ಟರ್ಮಿನಲ್ ಕಾರ್ಯಾರಂಭ ಮಾಡಿದೆ. ಶೀಘ್ರದಲ್ಲೇ ಉಳಿದ ಟರ್ಮಿನಲ್ಗಳು ಸಹ ಸೇವೆ ಒದಗಿಸಲು ಸಿದ್ಧವಾಗುತ್ತವೆ. ಡಬಲ್ ಎಂಜಿನ್ ಸರ್ಕಾರದಿಂದ ಪ್ರತಿಯೊಂದು ಕ್ಷೇತ್ರದಲ್ಲೂ ಅಭಿವೃದ್ಧಿಯ ವೇಗ ಮತ್ತು ಶಕ್ತಿ ಎರಡೂ ಹೆಚ್ಚಾಗಿದೆ.
ಮಿತ್ರರೇ,
ಸ್ವಾತಂತ್ರ್ಯದ ನಂತರ ಹಲವು ದಶಕಗಳ ಕಾಲ ಶ್ರೀಮಂತ-ಬಡವರ ಅಂತರ, ನಗರ-ಗ್ರಾಮೀಣ ಅಂತರ ಮತ್ತು ಅಸಮತೋಲಿತ ಅಭಿವೃದ್ಧಿ ನಮ್ಮ ದೇಶಕ್ಕೆ ಪ್ರಮುಖ ಸವಾಲುಗಳಾಗಿವೆ. ದೇಶದ ಈ ಸವಾಲುಗಳನ್ನು ಪರಿಹರಿಸುವಲ್ಲಿ ನಮ್ಮ ಸರ್ಕಾರವೂ ತೊಡಗಿಸಿಕೊಂಡಿದೆ. ಮೂಲಸೌಕರ್ಯಗಳಿಗೆ ಒತ್ತು ನೀಡುವುದು, ಮಧ್ಯಮ ವರ್ಗದವರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಮತ್ತು ಬಡವರಿಗೆ ಬಡತನದ ವಿರುದ್ಧ ಹೋರಾಟ ನಡೆಸುವ ಮಾರ್ಗೋಪಾಯಗಳನ್ನು ಒದಗಿಸುವುದು ಮತ್ತಿತರ "ಸರ್ವರ ಅಭಿವೃದ್ಧಿ’ಗಾಗಿ ನಮ್ಮ ನೀತಿ ಸ್ಪಷ್ಟವಾಗಿದೆ. ಇಂದು ಇಡೀ ದೇಶದಲ್ಲಿ ಅಭಿವೃದ್ಧಿಯ ಈ ಪರಂಪರೆ ಆರಂಭಿಸಲಾಗಿದೆ. ಬಡವರಿಗೆ ಪಕ್ಕಾ ಮನೆ, ಶೌಚಾಲಯ, ವಿದ್ಯುತ್, ನೀರು, ಅಡುಗೆ ಅನಿಲ, ಉಚಿತ ಚಿಕಿತ್ಸೆ, ವಿಮೆ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಇವು ಉತ್ತಮ ಆಡಳಿತದ ಸಂಕೇತಗಳಾಗಿವೆ. ಇಂದು, ಮೆಟ್ರೋ ಸಂಪರ್ಕ, ವಿದ್ಯುತ್ ವಾಹನಗಳು, ಸೌರಶಕ್ತಿ, ಅಗ್ಗದ ಅಂತರ್ಜಾಲ, ಉತ್ತಮ ರಸ್ತೆಗಳು, ಏಮ್ಸ್, ವೈದ್ಯಕೀಯ ಕಾಲೇಜುಗಳು, ಐಐಟಿಗಳಂತಹ ಮೂಲಸೌಕರ್ಯಗಳು ದೇಶವಾಸಿಗಳಿಗೆ ಹೊಸ ಅವಕಾಶಗಳನ್ನು ಒದಗಿಸುತ್ತಿವೆ. ಸಾಮಾನ್ಯ ಕುಟುಂಬಗಳ ಜೀವನವು ಸುಲಭವಾಗಿದೆ ಮತ್ತು ಪ್ರಯಾಣ ಮತ್ತು ವ್ಯಾಪಾರ ಮತ್ತು ವ್ಯಾಪಾರವನ್ನು ನಡೆಸುವುದು ಸುಲಭ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ.
ಸಹೋದರರು ಮತ್ತು ಸಹೋದರಿಯರೇ,
ದೇಶದಲ್ಲಿ ಸಂಪರ್ಕ ಮೂಲಸೌಕರ್ಯಗಳ ಅಭಿವೃದ್ಧಿಯ ವಿಧಾನದಲ್ಲಿ ಈಗ ತೀವ್ರ ಬದಲಾವಣೆಯಾಗಿದೆ. ಈಗ ಸಂಪರ್ಕದ ಕೆಲಸವನ್ನು ಆಲಸ್ಯದಿಂದ ಮಾಡಲಾಗುತ್ತಿಲ್ಲ; ಒಂದು ಸ್ಥಳದಲ್ಲಿ ರಸ್ತೆ ನಿರ್ಮಿಸಿದರೆ, ಇನ್ನೊಂದು ಸ್ಥಳದಲ್ಲಿ ರೈಲು ಹಳಿಯನ್ನು ಹಾಕಿದರೆ ಮೂರನೇ ಸ್ಥಳದಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗುತ್ತಿತ್ತು. ಬದಲಾಗಿ ಇದೀಗ ಸಮಗ್ರ ಸಂಪರ್ಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಅಂದರೆ, ನಾನಾ ಸಾರಿಗೆ ವಿಧಾನಗಳು ಸಹ ಪರಸ್ಪರ ಸಂಪರ್ಕ ಹೊಂದಿವೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲಾಗುತ್ತಿದೆ. ಇಲ್ಲಿ ಅಹಮದಾಬಾದ್ನಲ್ಲಿಯೇ ರೈಲು, ಮೆಟ್ರೋ ಮತ್ತು ಬಸ್ಗಳ ಸೌಲಭ್ಯಗಳನ್ನು ಪರಸ್ಪರ ಸಂಪರ್ಕಿಸಲಾಗುತ್ತಿದೆ. ಇತರ ನಗರಗಳಲ್ಲಿಯೂ ಇದೇ ರೀತಿಯ ಕೆಲಸ ಮಾಡಲಾಗುತ್ತಿದೆ. ಪ್ರಯಾಣಿಕರ ಪ್ರಯಾಣವಾಗಲಿ ಅಥವಾ ಸರಕು ಸಾಗಣೆಯಾಗಲಿ, ಎಲ್ಲ ರೀತಿಯಲ್ಲೂ ತಡೆರಹಿತ ಸಂಪರ್ಕವಿರಬೇಕು.ಆದ್ದರಿಂದ ವಿವಿಧ ಸಾರಿಗೆ ವಿಧಾನಗಳನ್ನು ಸುಲಭವಾಗಿ ಪಡೆಯಬಹುದು ಎಂಬುದನ್ನು ನಾವು ಖಾತ್ರಿಪಡಿಸಿಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ. ಇದರಿಂದ ಸಮಯದ ಉಳಿತಾಯದ ಜೊತೆಗೆ ಹಣವೂ ಉಳಿತಾಯವಾಗುತ್ತದೆ.
ಮಿತ್ರರೇ,
ಗುಜರಾತ್ ಪ್ರಮುಖ ಕೈಗಾರಿಕಾ ತಾಣವಾಗಿದೆ. ಇಲ್ಲಿ ಸರಕು ಸಾಗಣೆ ವೆಚ್ಚವು ದೊಡ್ಡ ಸಮಸ್ಯೆಯಾಗಿತ್ತು. ಅದರ ಪರಿಣಾಮವಾಗಿ, ವ್ಯಾಪಾರಗಳು ಮಾತ್ರವಲ್ಲದೆ ಸರಕುಗಳ ಬೆಲೆಯೂ ಹೆಚ್ಚಾಯಿತು. ಆದ್ದರಿಂದ, ಇಂದು ರೈಲ್ವೆ, ಹೆದ್ದಾರಿ, ವಿಮಾನ ನಿಲ್ದಾಣಗಳು ಅಥವಾ ಬಂದರುಗಳ ಸಂಪರ್ಕವನ್ನು ಸುಧಾರಿಸಲು ಒತ್ತು ನೀಡಲಾಗುತ್ತಿದೆ. ಗುಜರಾತಿನ ಬಂದರುಗಳನ್ನು ಸುದೃಢಗೊಳಿಸಿದಾಗ ಅದು ಇಡೀ ದೇಶದ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಕಳೆದ 8 ವರ್ಷಗಳಲ್ಲಿ ನಾವೂ ಇದನ್ನು ಅನುಭವಿಸಿದ್ದೇವೆ. ಈ ಅವಧಿಯಲ್ಲಿ, ಗುಜರಾತ್ನ ಬಂದರುಗಳ ಸಾಮರ್ಥ್ಯವು ಬಹುತೇಕ ದುಪ್ಪಟ್ಟಾಗಿದೆ.ಈಗ ಗುಜರಾತ್ನ ಬಂದರುಗಳನ್ನು ಪಶ್ಚಿಮ ನಿರ್ದಿಷ್ಟ ಸರಕು ಸಾಗಣೆ ಕಾರಿಡಾರ್ ಮೂಲಕ ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸಲಾಗುತ್ತಿದೆ. ಅದರ ಬಹುಪಾಲು ಭಾಗ ಈಗಾಗಲೇ ಪೂರ್ಣಗೊಂಡಿದೆ. ಸರಕು ರೈಲುಗಳಿಗೆ ಹಾಕಲಾಗುತ್ತಿರುವ ವಿಶೇಷ ಮಾರ್ಗಗಳು ಗುಜರಾತ್ನಲ್ಲಿ ಕೈಗಾರಿಕೆಗಳನ್ನು ವಿಸ್ತರಿಸುತ್ತವೆ. ಹೊಸ ಕ್ಷೇತ್ರಗಳಿಗೆ ಅವಕಾಶಗಳು ಸೃಷ್ಟಿಯಾಗಲಿವೆ. ಅದೇ ರೀತಿ ಸಾಗರಮಾಲಾ ಯೋಜನೆಯಡಿ ಇಡೀ ಕರಾವಳಿಯಲ್ಲಿ ಉತ್ತಮ ರಸ್ತೆಗಳ ಜಾಲ ಸೃಷ್ಟಿಸಲಾಗುತ್ತಿದೆ.
ಮಿತ್ರರೇ,
ಅಭಿವೃದ್ಧಿ ನಿರಂತರ ಪ್ರಕ್ರಿಯೆ. ಅಭಿವೃದ್ಧಿಯ ಗುರಿಗಳು ಬೆಟ್ಟದ ತುದಿ ಇದ್ದಂತೆ. ನಾವು ಒಂದು ಶಿಖರವನ್ನು ತಲುಪಿದ ತಕ್ಷಣ, ಇನ್ನೊಂದು ಶಿಖರವು ಹಿಂದಿನದಕ್ಕಿಂತ ಎತ್ತರದಲ್ಲಿ ಕಾಣಿಸಲು ಆರಂಭಿಸುತ್ತದೆ. ನಂತರ ಅದನ್ನು ತಲುಪುವ ಪ್ರಯತ್ನಗಳು ನಡೆಯುತ್ತವೆ. ಅಭಿವೃದ್ಧಿಯು ಅಂತಹ ಒಂದು ಪ್ರಕ್ರಿಯೆ. ಗುಜರಾತ್ ಕಳೆದ 20 ವರ್ಷಗಳಲ್ಲಿ ಅಭಿವೃದ್ಧಿಯ ಹಲವು ಶಿಖರಗಳನ್ನು ಏರಿದೆ. ಆದರೆ ಮುಂಬರುವ 25 ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ಗುಜರಾತ್ನ ಬೃಹತ್ ಗುರಿ ನಮ್ಮ ಮುಂದಿದೆ. ಕಳೆದ ಎರಡು ದಶಕಗಳಲ್ಲಿ ನಾವು ಹೇಗೆ ಒಟ್ಟಾಗಿ ಯಶಸ್ಸನ್ನು ಸಾಧಿಸಿದ್ದೇವೆಯೋ ಅದೇ ರೀತಿಯಲ್ಲಿ ಪ್ರತಿಯೊಬ್ಬ ಗುಜರಾತಿಯೂ ಈ ‘ಅಮೃತ ಕಾಲ’ದಲ್ಲಿ ಅಭಿವೃದ್ಧಿ ಪಯಣದಲ್ಲಿ ಭಾಗವಹಿಸಬೇಕಾಗಿದೆ. ‘ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಅಭಿವೃದ್ಧಿ ಹೊಂದಿದ ಗುಜರಾತ್ ಅನ್ನು ನಿರ್ಮಿಸುವುದು’ ನಮ್ಮ ಧ್ಯೇಯವಾಗಿದೆ. ಮತ್ತು ಒಬ್ಬ ಗುಜರಾತಿಯು ಒಮ್ಮೆ ಏನನ್ನಾದರೂ ಮಾಡಲು ನಿರ್ಧರಿಸಿದರೆ, ಅವನು ಅದನ್ನು ಸಾಧಿಸುವುದನ್ನು ಖಾತ್ರಿಪಡಿಸಿಕೊಳ್ಳುತ್ತಾನೆ ಎಂದು ನಮಗೆಲ್ಲರಿಗೂ ತಿಳಿದಿದೆ. ಇಂದು ಸರ್ದಾರ್ ಪಟೇಲ್ ಅವರ ಜನ್ಮದಿನ. ಇದು ದೇಶಕ್ಕೆ ಹೆಮ್ಮೆಯ ಕ್ಷಣ. ಈ ಮಹಾನ್ ವ್ಯಕ್ತಿತ್ವವು ಭಾರತವನ್ನು ಒಗ್ಗೂಡಿಸಲು ಮಾಡಿದ್ದರ ಫಲವನ್ನು ಇಂದು ನಾವು ಪಡೆಯುತ್ತಿದ್ದೇವೆ. ಸರ್ದಾರ್ ವಲ್ಲಭಭಾಯಿ ಪಟೇಲ್ ದೇಶದ ಮೊದಲ ಗೃಹ ಸಚಿವರಾಗಿದ್ದರು. ದೇಶವನ್ನು ಒಗ್ಗೂಡಿಸುವ ಕೆಲಸ ಮಾಡಿದ್ದರು. ಪ್ರತಿಯೊಬ್ಬ ಭಾರತೀಯನೂ ಸರ್ದಾರ್ ಪಟೇಲ್ ಬಗ್ಗೆ ಹೆಮ್ಮೆಪಡುತ್ತಾನೆ, ಅಲ್ಲವೇ? ಸರ್ದಾರ್ ವಲ್ಲಭಭಾಯಿ ಪಟೇಲ್ ಬಿಜೆಪಿ ಸೇರಿದ್ದಾರಾ? ಅವರು ಬಿಜೆಪಿಯವರಲ್ಲ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಕಾಂಗ್ರೆಸ್ಸಿನ ಮಹಾನ್ ನಾಯಕರಾಗಿದ್ದರು. ಇಂದು ಅವರ ಜನ್ಮದಿನದಂದು ನಾನು ಎರಡು ಪತ್ರಿಕೆಗಳನ್ನು ನೋಡಿದೆ. ಕಾಂಗ್ರೆಸ್ ಪಕ್ಷ ಗುಜರಾತಿ ಪತ್ರಿಕೆಗಳಲ್ಲಿ ಪೂರ್ಣ ಪುಟದ ಜಾಹೀರಾತುಗಳನ್ನು ಪ್ರಕಟಿಸಿದೆ. ಈ ಜಾಹೀರಾತುಗಳನ್ನು ಕಾಂಗ್ರೆಸ್ ಸರ್ಕಾರ ಪ್ರಕಟಿಸಿದೆ. ಆದರೆ ಆ ಜಾಹೀರಾತಿನಲ್ಲಿ ಇಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದಂದು ಸರ್ದಾರ್ ಪಟೇಲ್ ಅವರ ಹೆಸರಾಗಲಿ ಅಥವಾ ಫೋಟೋ ಆಗಲಿ ಇಲ್ಲ. ಅಲ್ಲಿ ಅವರಿಗೆ ಗೌರವ ಕೂಡ ನೀಡಿಲ್ಲ. ಅದೂ ಗುಜರಾತಿನ ನೆಲದಲ್ಲಿಯೇ ಅವರಿಗೆ ಘೋರ ಅಪಮಾನ..! ಸರ್ದಾರ್ ಪಟೇಲರನ್ನು ತನ್ನೊಂದಿಗೆ ಜೋಡಿಸಲು ಸಾಧ್ಯವಾಗದ ಕಾಂಗ್ರೆಸ್ ದೇಶವಾಸಿಗಳೊಂದಿಗೆ ಹೇಗೆ ಬೆರೆಯುತ್ತದೆ? ಇದು ಸರ್ದಾರ್ ಸಾಹೇಬರಿಗೆ ಹಾಗೂ ದೇಶಕ್ಕೆ ಮಾಡಿದ ಅವಮಾನ. ಅವರು ಬಿಜೆಪಿಯವರಲ್ಲ. ಅವರು ಕಾಂಗ್ರೆಸ್ ಸೇರಿದ್ದರು. ಆದರೆ ಅವರು ದೇಶಕ್ಕಾಗಿ ಬದುಕಿದರು ಮತ್ತು ದೇಶಕ್ಕೆ ಅಪಾರ ಕೊಡುಗೆ ನೀಡಿದರು. ಇಂದು ನಾವು ವಿಶ್ವದ ಅತಿದೊಡ್ಡ ಪ್ರತಿಮೆಯನ್ನು ಸ್ಥಾಪಿಸಿರುವುದಕ್ಕೆ ಹೆಮ್ಮೆಪಡುತ್ತೇವೆ. ಆದರೆ ಅವರ ಹೆಸರನ್ನು ಹೇಳಲು ಇವರು ಸಿದ್ಧರಿಲ್ಲ.
ಸಹೋದರ ಸಹೋದರಿಯರೇ,
ಇಂತಹ ಧೋರಣೆಯನ್ನು ಗುಜರಾತ್ ಅಥವಾ ದೇಶ ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ.
ಮಿತ್ರರೇ,
ಈ ರೈಲುಮಾರ್ಗವು ದೇಶದ ಹಲವು ಭಾಗಗಳನ್ನು ಸಂಪರ್ಕಿಸುತ್ತದೆ. ಉತ್ತರದಿಂದ ದಕ್ಷಿಣಕ್ಕೆ ಮತ್ತು ಪೂರ್ವದಿಂದ ಪಶ್ಚಿಮಕ್ಕೆ ತ್ವರಿತ ವೇಗದಲ್ಲಿ ಸಂಪರ್ಕಿಸುವ ಪ್ರಕ್ರಿಯೆಯನ್ನು ವೇಗಗೊಳಿಸುವ ಕಾಮಗಾರಿ ನಿರಂತರವಾಗಿ ನಡೆಯುತ್ತದೆ. ಇಂದು ನೀವು ಸಹ ಅದರ ಲಾಭವನ್ನು ಪಡೆಯುತ್ತೀರಿ. ನಿಮಗೆ ನನ್ನ ಶುಭಾಶಯಗಳು!
ತುಂಬಾ ಧನ್ಯವಾದಗಳು!
ಘೋಷಣೆ: ಇದು ಪ್ರಧಾನಿ ಭಾಷಣದ ಯಥಾವತ್ ಅನುವಾದವಲ್ಲ, ಅವರು ಮೂಲತಃ ಹಿಂದಿಯಲ್ಲಿ ಭಾಷಣ ಮಾಡಿದರು.
*****
(Release ID: 1873078)
Read this release in:
English
,
Urdu
,
Hindi
,
Marathi
,
Bengali
,
Manipuri
,
Assamese
,
Punjabi
,
Odia
,
Tamil
,
Telugu