ಪ್ರಧಾನ ಮಂತ್ರಿಯವರ ಕಛೇರಿ

ಗುಜರಾತ್ ಉದ್ಯೋಗ ಮೇಳದಲ್ಲಿ ಪ್ರಧಾನಮಂತ್ರಿಯವರ ಭಾಷಣ


ಒಂದು ವರ್ಷದಲ್ಲಿ ಗುಜರಾತ್ ನಲ್ಲಿ 35 ಸಾವಿರ ಹುದ್ದೆಗಳನ್ನು ಭರ್ತಿ ಮಾಡುವ ಗುರಿ   

ಕೇಂದ್ರ ಸರ್ಕಾರದಿಂದ 10 ಲಕ್ಷ ಉದ್ಯೋಗ ಒದಗಿಸಲು ಕ್ರಮ

Posted On: 29 OCT 2022 12:45PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್ ಉದ್ಯೋಗ ಮೇಳದಲ್ಲಿಂದು ವಿಡಿಯೋ ಸಂದೇಶದ ಮೂಲಕ ಮಾತನಾಡಿದರು.

ವಿವಿಧ ಶ್ರೇಣಿಗಳಲ್ಲಿ ಸಹಸ್ರಾರು ಹುದ್ದೆಗಳಿಗೆ ನೇಮಕಾತಿ ಪತ್ರ ಪಡೆದ ಯುವ ಅಭ್ಯರ್ಥಿಗಳನ್ನು ಪ್ರಧಾನಮಂತ್ರಿ ಅವರು ಇದೇ ಸಂದರ್ಭದಲ್ಲಿ ಅಭಿನಂದಿಸಿದರು. ಧನ್ತೇರಸ್ ದಿನದ ಶುಭ ಸಂದರ್ಭದಂದು ನಡೆದ ರಾಷ್ಟ್ರ ಮಟ್ಟದ ಉದ್ಯೋಗ ಮೇಳದಲ್ಲಿ 75,000 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಿದ್ದನ್ನು ಪ್ರಧಾನಮಂತ್ರಿ ಅವರು ನೆನಪುಮಾಡಿಕೊಂಡರು. ಧನ್ತೇರಸ್ ದಿನದಂದು ಪ್ರಧಾನಮಂತ್ರಿ ಅವರು ಮಾತನಾಡಿ, ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದೇ ರೀತಿಯ ಉದ್ಯೋಗ ಮೇಳ ಆಯೋಜಿಸುವುದಾಗಿ ಹೇಳಿದ್ದರು. ಗುಜರಾತ್ ನಲ್ಲಿ ನಿರೀಕ್ಷೆಯಂತೆ ಉದ್ಯೋಗ ಮೇಳ ನಡೆಯುತ್ತಿದೆ ಮತ್ತು ಗುಜರಾತ್ ಪಂಚಾಯತ್ ಸೇವಾ ಮಂಡಳಿಯಿಂದ 5000, ಗುಜರಾತ್ ಸಬ್ ಇನ್ಸೆಪೆಕ್ಟರ್ ನೇಮಕಾತಿ ಮಂಡಳಿ ಮತ್ತು ಲೋಕ್ ರಕ್ಷಕ್ ನೇಮಕಾತಿ ಮಂಡಳಿಯಿಂದ  8000 ಮಂದಿ ನೇಮಕಾತಿ ಪತ್ರ ಪಡೆಯುತ್ತಿದ್ದಾರೆ. ಗುಜರಾತ್ ಮುಖ್ಯಮಂತ್ರಿ ಹಾಗೂ ಅವರ ತಂಡ ತ್ವರಿತವಾಗಿ ಸ್ಪಂದಿಸಿದ ಕಾರಣಕ್ಕೆ ಪ್ರಧಾನಮಂತ್ರಿ ಅವರು ಅಭಿನಂದನೆ ಸಲ್ಲಿಸಿದರು. ಇತ್ತೀಚೆಗೆ ಗುಜರಾತ್ ನಲ್ಲಿ 10 ಸಾವಿರ ಮಂದಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಗಿದೆ ಮತ್ತು ಮುಂದಿನ ಒಂದು ವರ್ಷದಲ್ಲಿ 35 ಸಾವಿರ ಹುದ್ದೆಗಳನ್ನು ಭರ್ತಿ ಮಾಡುವ ಗುರಿ ಹೊಂದಿರುವುದಾಗಿ ತಿಳಿಸಿದರು.

ಗುಜರಾತ್ ನಲ್ಲಿ ಅನೇಕ ಉದ್ಯೋಗಾವಕಾಶಗಳು ಮತ್ತು ಸ್ವಯಂ ಉದ್ಯೋಗ ಸೃಷ್ಟಿಯಾಗಿದ್ದು, ಇದರ ಸಫಲತೆ ಹೊಸ ಕೈಗಾರಿಕಾ ನೀತಿಗೆ ಸಲ್ಲುತ್ತದೆ. 3 ಮತ್ತು 4 ನೇ ದರ್ಜೆಯ ಹುದ್ದೆಗಳಿಗೆ ಸಂದರ್ಶನ ರದ್ದುಪಡಿಸಿರುವ ಮತ್ತು ಓಜಸ್ ನಂತಹ ಡಿಜಿಟಲ್ ವೇದಿಕೆಯನ್ನು ಪ್ರಧಾನಮಂತ್ರಿ ಅವರು ಶ್ಲಾಘಿಸಿದರು. ಉದ್ಯೋಗ ಆಕಾಂಕ್ಷಿಗಳು ಮತ್ತು ಉದ್ಯೋಗದಾತರ ನಡುವೆ ರಾಜ್ಯದಲ್ಲಿ ಸುಗಮ ಸಂಪರ್ಕ ಕಲ್ಪಿಸಲು ಅನುಬಂಧನ್ ಮೊಬೈಲ್ ಆಪ್ ಮತ್ತು ವೆಬ್ ಪೋರ್ಟಲ್ ಸಹಕಾರಿಯಾಗಿದೆ. ಇದೇ ರೀತಿ ತ್ವರಿತವಾಗಿ ನೇಮಕಾತಿ ಮಾಡುತ್ತಿರುವ ಗುಜರಾತ್ ನಾಗರಿಕ ಸೇವಾ ಆಯೋಗದ ಮಾದರಿಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ ಎಂದರು.

ಮುಂಬರುವ ತಿಂಗಳುಗಳಲ್ಲಿ ಇದೇ ರೀತಿಯ ಉದ್ಯೋಗ ಮೇಳಗಳನ್ನು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸಲಾಗುವುದು. ಕೇಂದ್ರ ಸರ್ಕಾರ 10 ಲಕ್ಷ ಉದ್ಯೋಗ ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಅಭಿಯಾನದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಹ ಪಾಲುದಾರರಾದರೆ ಈ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಲಿದೆ. “ಕೊನೆಯ ಹಂತದ ವ್ಯಕ್ತಿಗೂ ಸಹ ಸೇವೆ ದೊರಕಿಸಿಕೊಡುವ ದೊಡ್ಡ ಅಭಿಯಾನ ಇದಾಗಿದೆ ಮತ್ತು ಸರ್ಕಾರಿ ಯೋಜನೆಗಳ ವ್ಯಾಪ್ತಿಯನ್ನು ಈ ಅಭಿಯಾನ ಭಾರೀ ಪ್ರಮಾಣದಲ್ಲಿ ಬಲಪಡಿಸುತ್ತದೆ” ಎಂದರು.

ಬರುವ 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ಯುವ ಸಮೂಹದ ಪಾತ್ರ ನಿರ್ಣಾಯಕವಾಗಿದೆ ಎಂದು ಒತ್ತಿ ಹೇಳಿದ ಅವರು, ಸಮಾಜ ಮತ್ತು ದೇಶದಲ್ಲಿ ತಮ್ಮ ಕರ್ತವ್ಯವನ್ನು ಪೂರ್ಣಗೊಳಿಸುವಂತೆ ಅವರು ಯುವ ಸಮೂಹಕ್ಕೆ ಕರೆ ನೀಡಿದರು. ನಿರಂತರವಾಗಿ ಕಲಿಯುತ್ತಿರಬೇಕು ಮತ್ತು ಕೌಶಲ್ಯ ಪಡೆಯಬೇಕು ಮತ್ತು ತಮ್ಮ ಬೆಳೆವಣಿಗೆಯ ಕೊನೆಯ ಹಂತದಲ್ಲಿ ಉದ್ಯೋಗ ಹುಡುಕುವುದು ಸೂಕ್ತವಲ್ಲ. “ಇದು ನಿಮಗೆ ಹಲವು ಬಾಗಿಲುಗಳನ್ನು ತೆರೆಯುತ್ತದೆ. ಅರ್ಪಣಾ ಮನೋಭಾವನೆಯಿಂದ ಕೆಲಸ ಮಾಡುವುದರಿಂದ ಹೇಳಿಕೊಳ್ಳಲು ಸಾಧ್ಯವಾಗದಂತಹ ತೃಪ್ತಿ ನಿಮಗೆ ದೊರೆಯುತ್ತದೆ ಮತ್ತು ಬೆಳವಣಿಗೆ ಹಾಗೂ ಪ್ರಗತಿಯ ಬಾಗಿಲುಗಳು ತೆರೆದುಕೊಳ್ಳುತ್ತವೆ” ಎಂದು ಪ್ರಧಾನಮಂತ್ರಿ ಅವರು ತಮ್ಮ ಭಾಷಣ ಪೂರ್ಣಗೊಳಿಸಿದರು.

**********



(Release ID: 1871823) Visitor Counter : 144