ಪ್ರಧಾನ ಮಂತ್ರಿಯವರ ಕಛೇರಿ

​​​​​​​ಕುಲು ದಸರಾದಲ್ಲಿ ಭಾಗವಹಿಸಿದ ಪ್ರಧಾನ ಮಂತ್ರಿ

Posted On: 05 OCT 2022 4:21PM by PIB Bengaluru

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಹಿಮಾಚಲ ಪ್ರದೇಶದ ಕುಲುವಿನ ಧಲ್ಪುರ್ ಮೈದಾನದಲ್ಲಿ ನಡೆದ ಕುಲು  ದಸರಾ ಹಬ್ಬ ಆಚರಣೆಯಲ್ಲಿ ಪಾಲ್ಗೊಂಡರು.

ಪ್ರಧಾನಮಂತ್ರಿಯವರು ಆಗಮಿಸುತ್ತಿದ್ದಂತೆ ಅವರನ್ನು ಸ್ವಾಗತಿಸಲಾಯಿತು. ಉತ್ಸವ ಮೂರ್ತಿ ಭಗವಾನ್ ರಘುನಾಥ್ ಜೀ ಅವರ ಆಗಮನದ ಬಳಿಕ ರಥಯಾತ್ರೆಯ ಪ್ರಾರಂಭವನ್ನು ಘೋಷಿಸಲಾಯಿತು.. ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿಯವರನ್ನು ಸ್ವಾಗತಿಸಲು ಬೃಹತ್ ಜನಸಮೂಹ ನೆರೆದಿತ್ತು. ಇತರ ಲಕ್ಷಾಂತರ ಭಕ್ತರೊಂದಿಗೆ ಪ್ರಧಾನಮಂತ್ರಿಯವರು ಮುಖ್ಯ ಆಕರ್ಷಣೆಯಾದ ಭಗವಾನ್ ರಘುನಾಥ ಜೀಯತ್ತ  ನಡೆದರು ಮತ್ತು ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಪ್ರತಿಯೊಬ್ಬರಿಗೂ ಕೈಮುಗಿದು ಶುಭಾಶಯಗಳನ್ನು ಹೇಳಿದ  ಪ್ರಧಾನಮಂತ್ರಿಯವರು, ಐತಿಹಾಸಿಕ ಕುಲು  ದಸರಾ ಆಚರಣೆಯಲ್ಲಿ ದೇವತೆಗಳ ಭವ್ಯ ಮಹಾಸಭೆಯನ್ನೊಳಗೊಂಡ  ದೈವಿಕ ರಥಯಾತ್ರೆಯನ್ನು ಸಾಕ್ಷೀಕರಿಸಿದರು. ಕುಲು ದಸರಾ ಆಚರಣೆಯಲ್ಲಿ ಇದೇ ಮೊದಲ ಬಾರಿಗೆ ಭಾರತದ ಪ್ರಧಾನ ಮಂತ್ರಿಯವರು ಭಾಗವಹಿಸಿದ್ದು ಇದೊಂದು ಐತಿಹಾಸಿಕ ಘಟನೆಯಾಗಿದೆ.

ಅಂತಾರಾಷ್ಟ್ರೀಯ ಕುಲು ದಸರಾ ಉತ್ಸವವನ್ನು 2022 ರ ಅಕ್ಟೋಬರ್ 5 ರಿಂದ 11 ರವರೆಗೆ ಕುಲುವಿನ ಧಲ್ಪುರ್ ಮೈದಾನದಲ್ಲಿ ಆಚರಿಸಲಾಗುತ್ತದೆ. ಈ ಉತ್ಸವವು ಕಣಿವೆಯ 300 ಕ್ಕೂ ಹೆಚ್ಚು ದೇವತೆಗಳ ಸಭೆ ಎಂಬ ಅರ್ಥದಲ್ಲಿ ವಿಶಿಷ್ಟ ಹಾಗು ಅನನ್ಯವಾಗಿದೆ. ಉತ್ಸವದ ಮೊದಲ ದಿನದಂದು, ಅದ್ಭುತವಾಗಿ  ಅಲಂಕರಿಸಿದ ಪಲ್ಲಕ್ಕಿಗಳನ್ನು ಏರಿ ದೇವತೆಗಳು  ಮುಖ್ಯ ದೇವತೆಯಾದ  ಭಗವಾನ್ ರಘುನಾಥ್ ಜೀ ಅವರ ದೇವಾಲಯಕ್ಕೆ ತೆರಳಿ ನಮನಗಳನ್ನು ಸಲ್ಲಿಸಿ  ನಂತರ ಧಲ್ಪುರ್ ಮೈದಾನಕ್ಕೆ ತೆರಳುತ್ತಾರೆ.

ಪ್ರಧಾನಮಂತ್ರಿಯವರೊಂದಿಗೆ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಶ್ರೀ ಜೈ ರಾಮ್ ಠಾಕೂರ್, ಹಿಮಾಚಲ ಪ್ರದೇಶದ ರಾಜ್ಯಪಾಲ ಶ್ರೀ ರಾಜೇಂದ್ರ ವಿಶ್ವನಾಥ ಅರ್ಲೇಕರ್, ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಅನುರಾಗ್ ಠಾಕೂರ್ ಮತ್ತು ಬಿಜೆಪಿ ರಾಜ್ಯ ಅಧ್ಯಕ್ಷ ಶ್ರೀ ಸುರೇಶ್ ಕುಮಾರ್ ಕಶ್ಯಪ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ಪ್ರಧಾನಮಂತ್ರಿಯವರು ಬಿಲಾಸ್ ಪುರದ ಎ.ಐ.ಐ.ಎಂ.ಎಸ್. ಅನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದರು. ಅವರು ಹಿಮಾಚಲ ಪ್ರದೇಶದ ಬಿಲಾಸ್ಪುರದ ಲುಹ್ನುವಿನಲ್ಲಿ ಅನೇಕ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ್ದರು.

*****



(Release ID: 1865544) Visitor Counter : 139