ಪ್ರಧಾನ ಮಂತ್ರಿಯವರ ಕಛೇರಿ

ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಗೆ ಪ್ರಧಾನಿ ಚಾಲನೆ


"ಭಾರತವು ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮುತ್ತಿದೆ ಎಂಬ ಕಲ್ಪನೆಯು ವಿಶ್ವದ ಮನಸ್ಸಿನಲ್ಲಿ ಸ್ಥಿರಗೊಳ್ಳುತ್ತಿದೆ"

"ನೀತಿಯು ಕೇವಲ ಒಂದು ಆರಂಭವಾಗಿದೆ, ನೀತಿ ಮತ್ತು ಸಾಧನೆಯ ಕಾರ್ಯಕ್ಷಮತೆಯು ಜೊತೆಗೂಡಿದರೆ ಅದು ಪ್ರಗತಿಗೆ ಸಮಾನ"

"ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯು ಅನಿರೀಕ್ಷಿತವಾಗಿ ಹೊರಹೊಮ್ಮಿಪದ್ದಲ್ಲ, ಅದರ ಹಿಂದೆ 8 ವರ್ಷಗಳ ಕಠಿಣ ಪರಿಶ್ರಮವಿದೆ"

"13-14 ಪ್ರತಿಶತದಷ್ಟಿರುವ ಲಾಜಿಸ್ಟಿಕ್ಸ್ ವೆಚ್ಚವನ್ನು, ಸಾಧ್ಯವಾದಷ್ಟು ಬೇಗ ಸಿಂಗಲ್-ಡಿಜಿಟ್ ಗೆ (ಏಕ ಅಂಕಿಗೆ) ತರುವ ಗುರಿಯನ್ನು ನಾವೆಲ್ಲರೂ ಹೊಂದಿರಬೇಕು"

"ಏಕೀಕೃತ ಲಾಜಿಸ್ಟಿಕ್ಸ್ ಇಂಟರ್ಫೇಸ್ ಪ್ಲಾಟ್ಫಾರ್ಮ್-ಯುಲಿಪ್’ ಸಾರಿಗೆ ವಲಯಕ್ಕೆ ಸಂಬಂಧಿಸಿದ ಎಲ್ಲಾ ಡಿಜಿಟಲ್ ಸೇವೆಗಳನ್ನು ಒಂದೇ ಪೋರ್ಟಲಿಗೆ ತರುತ್ತದೆ"

"ಗತಿಶಕ್ತಿ ಮತ್ತು ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿ ಒಟ್ಟಾಗಿ ಈಗ ದೇಶವನ್ನು ಹೊಸ ಕೆಲಸದ ಸಂಸ್ಕೃತಿಯತ್ತ ಕೊಂಡೊಯ್ಯುತ್ತಿವೆ"

"ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ದೃಢ ನಿರ್ಧಾರ ಕೈಗೊಂಡಿರುವ ಭಾರತವು ಈಗ ಅಭಿವೃದ್ಧಿ ಹೊಂದಿದ ರಾಷ್ಟ್ರಗಳೊಂದಿಗೆ ಹೆಚ್ಚು ಸ್ಪರ್ಧಿಸಬೇಕಾಗಿದೆ, ಆದ್ದರಿಂದ ಎಲ್ಲವೂ ಸ್ಪರ್ಧಾತ್ಮಕವಾಗಿರಬೇಕು"

"ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯು ಮೂಲಸೌಕರ್ಯಗಳ ಅಭಿವೃದ್ಧಿ, ವ್ಯವಹಾರದ ವಿಸ್ತರಣೆ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಪಾರ ಸಾಮರ್ಥ್ಯವನ್ನು ಹೊಂದಿದೆ"

Posted On: 17 SEP 2022 7:41PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿ (ಎನ್ ಎಲ್ ಪಿ)ಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯ ಆರಂಭ, ಭಾರತವು ಅಭಿವೃದ್ಧಿ ಹೊಂದಿದ ದೇಶವಾಗಲು ಅದಕ್ಕೆ 'ಪ್ರಾಣ”ವನ್ನು  ತುಂಬುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಬಣ್ಣಿಸಿದರು. " ಕೊನೆಯ ಮೈಲಿಯವರೆಗೂ  ತ್ವರಿತಗತಿಯ ವಿತರಣೆಯನ್ನು ಖಚಿತಪಡಿಸಿಕೊಳ್ಳಲು, ಸಾರಿಗೆ ಸಂಬಂಧಿತ ಸವಾಲುಗಳನ್ನು ಕೊನೆಗೊಳಿಸಲು, ಉತ್ಪಾದಕರ ಸಮಯ ಮತ್ತು ಹಣವನ್ನು ಉಳಿಸಲು, ಕೃಷಿ ಉತ್ಪನ್ನಗಳು ಹಾಳಾಗುವುದನ್ನು, ವ್ಯರ್ಥವಾಗುವುದನ್ನು ತಡೆಗಟ್ಟಲು, ಸಂಘಟಿತ ಪ್ರಯತ್ನಗಳನ್ನು ಮಾಡಲಾಗಿದೆ ಮತ್ತು ಇಂದಿನ ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯು ಆ ಪ್ರಯತ್ನಗಳ ಅಭಿವ್ಯಕ್ತಿಗಳಲ್ಲಿ, ವಿವರಣೆಗಳಲ್ಲಿ ಒಂದಾಗಿದೆ”  ಎಂದು ಪ್ರಧಾನ ಮಂತ್ರಿ ಅವರು ಹೇಳಿದರು. ಸಮನ್ವಯದ ಸುಧಾರಣೆಗಳಿಂದುಂಟಾಗುವ  ಫಲಿತಾಂಶವು   ಈ ವಲಯದಲ್ಲಿ ಅಪೇಕ್ಷಿತ ವೇಗಕ್ಕೆ ಕಾರಣವಾಗಲಿದೆ.

ವಿಶ್ವದ 5ನೇ ಅತಿ ದೊಡ್ಡ ಅರ್ಥವ್ಯವಸ್ಥೆಯಾಗಿರುವ ಭಾರತದಲ್ಲಿ ಪರಿಸ್ಥಿತಿ ಬಹಳ ವೇಗವಾಗಿ ಬದಲಾಗುತ್ತಿದೆ ಎಂಬುದರತ್ತ ಪ್ರಧಾನಮಂತ್ರಿ ಅವರು ಗಮನ ಸೆಳೆದರು. ಇಂದು ಬೆಳಗ್ಗೆ ನಡೆದ ಚೀತಾ ಬಿಡುಗಡೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಸಾಮಾನು ಸರಂಜಾಮುಗಳು ಚೀತಾದಂತೆ ವೇಗವಾಗಿ ಚಲಿಸಬೇಕೆಂದು ನಾವೆಲ್ಲರೂ ಬಯಸುತ್ತೇವೆ ಎಂದೂ ಹೇಳಿದರು.

"ಮೇಕ್ ಇನ್ ಇಂಡಿಯಾ ಮತ್ತು ಭಾರತ ಸ್ವಾವಲಂಬಿಯಾಗುವ ಪ್ರತಿಧ್ವನಿ ಎಲ್ಲೆಡೆ ಕೇಳಿ ಬರುತ್ತಿದೆ. ಭಾರತವು ದೊಡ್ಡ ರಫ್ತು ಗುರಿಗಳನ್ನು ನಿಗದಿಪಡಿಸುತ್ತಿದೆ ಮತ್ತು ಅವುಗಳನ್ನು ಪೂರೈಸುತ್ತಿದೆ. ಭಾರತವು ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮುತ್ತಿದೆ ಎಂಬ ಕಲ್ಪನೆಯು ವಿಶ್ವದ ಮನಸ್ಸಿನಲ್ಲಿ ಸ್ಥಿರಗೊಳ್ಳುತ್ತಿದೆ. ನಾವು ಪಿಎಲ್ಐ ಯೋಜನೆಯನ್ನು ಅಧ್ಯಯನ ಮಾಡಿದರೆ, ಜಗತ್ತು ಅದನ್ನು ಒಪ್ಪಿಕೊಂಡಿದೆ ಎಂಬುದನ್ನು ನಾವು ಕಂಡುಕೊಳ್ಳುತ್ತೇವೆ”. 

ಇಂತಹ ಪರಿಸ್ಥಿತಿಯಲ್ಲಿ, ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯು ಎಲ್ಲ ವಲಯಗಳಿಗೆ ಹೊಸ ಶಕ್ತಿಯನ್ನು ತರುತ್ತದೆ ಎಂದು ಪ್ರಧಾನ ಮಂತ್ರಿ ಅವರು ಹೇಳಿದರು. ನೀತಿಯು ಒಂದು ಆರಂಭಿಕ ಹೆಜ್ಜೆಯಾಗಿದೆ ಮತ್ತು ನೀತಿ ಹಾಗು ಕಾರ್ಯನಿರ್ವಹಣೆಯು ಒಗ್ಗೂಡಿದಾಗ ಅದು  ಪ್ರಗತಿಗೆ ಸಮಾನವಾಗಿರುತ್ತದೆ ಎಂದು ಅವರು ಹೇಳಿದರು. ಕಾರ್ಯಕ್ಷಮತೆಗಾಗಿ ಮಾನದಂಡಗಳು, ಮಾರ್ಗಸೂಚಿ ಮತ್ತು ಕಾಲಮಿತಿಗಳು ಒಟ್ಟಿಗೆ ಸೇರಿದಾಗ, ಪ್ರಗತಿಗೆ ಸಮಾನವಾದ ನೀತಿ ಮತ್ತು ಕಾರ್ಯಕ್ಷಮತೆಯು ಹೊರಹೊಮ್ಮುತ್ತದೆ ಎಂದು ಅವರು ವಿವರಿಸಿದರು. "ಇಂದಿನ ಭಾರತವು ಯಾವುದೇ ನೀತಿಯನ್ನು ತರುವ ಮೊದಲು ಭೂಮಿಕೆಯನ್ನು ಸಿದ್ಧಪಡಿಸುತ್ತದೆ, ಆಗ ಮಾತ್ರ ಒಂದು ನೀತಿಯನ್ನು ಯಶಸ್ವಿಯಾಗಿ ಜಾರಿಗೆ ತರಲು ಸಾಧ್ಯ. ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯು  ಅನಿರೀಕ್ಷಿತವಾಗಿ ಉದಯಿಸಿದ್ದಲ್ಲ ಮತ್ತು ಅದರ ಹಿಂದೆ 8 ವರ್ಷಗಳ ಕಠಿಣ ಪರಿಶ್ರಮವಿದೆ. ನೀತಿ ಬದಲಾವಣೆಗಳು, ಪ್ರಮುಖ ನಿರ್ಧಾರಗಳು ಮತ್ತು ನಾನು ನನ್ನ ಬಗ್ಗೆ ಮಾತನಾಡಿದರೆ, ಅದರ ಹಿಂದೆ ನನ್ನ 22 ವರ್ಷಗಳ ಆಡಳಿತದ ಅನುಭವವಿದೆ", ಎಂದೂ ಅವರು ಹೇಳಿದರು.

ಸಾಗರಮಾಲಾ, ಭಾರತಮಾಲಾದಂತಹ ಯೋಜನೆಗಳು ವ್ಯವಸ್ಥಿತ ಮೂಲಸೌಕರ್ಯ ಅಭಿವೃದ್ಧಿಗಾಗಿ ಲಾಜಿಸ್ಟಿಕ್ಸ್ ಸಂಪರ್ಕವನ್ನು ಸುಧಾರಿಸಲು ಮೀಸಲಾದ ಸರಕು ಕಾರಿಡಾರ್ ಗಳ ಕೆಲಸವನ್ನು ತ್ವರಿತಗೊಳಿಸುತ್ತವೆ ಎಂಬುದನ್ನು ಪ್ರಧಾನಮಂತ್ರಿಯವರು ಪುನರುಚ್ಚರಿಸಿದರು. ಭಾರತೀಯ ಬಂದರುಗಳ ಒಟ್ಟು ಸಾಮರ್ಥ್ಯವು ಗಮನಾರ್ಹವಾಗಿ ಹೆಚ್ಚಾಗಿದೆ ಮತ್ತು ಕಂಟೇನರ್ ಹಡಗುಗಳ ಸರಾಸರಿ ನಿರ್ವಹಣಾ ಸಮಯವು 44 ಗಂಟೆಗಳಿಂದ 26 ಗಂಟೆಗಳಿಗೆ ಇಳಿದಿದೆ ಎಂಬುದರತ್ತಲೂ  ಶ್ರೀ ಮೋದಿ ಬೆಟ್ಟು ಮಾಡಿದರು. ರಫ್ತನ್ನು ಉತ್ತೇಜಿಸಲು, 40 ಏರ್ ಕಾರ್ಗೋ ಟರ್ಮಿನಲ್ ಗಳನ್ನು ನಿರ್ಮಿಸಲಾಗಿದೆ. 30 ವಿಮಾನ ನಿಲ್ದಾಣಗಳಿಗೆ ಕೋಲ್ಡ್ ಸ್ಟೋರೇಜ್ ಸೌಲಭ್ಯ ಒದಗಿಸಲಾಗಿದೆ. ದೇಶದಲ್ಲಿ 35 ಬಹು ಮಾದರಿ ಹಬ್ ಗಳು ಬರುತ್ತಿವೆ. "ಜಲಮಾರ್ಗಗಳ ಮೂಲಕ, ನಾವು ಪರಿಸರ ಸ್ನೇಹಿ ಮತ್ತು ಕಡಿಮೆ ವೆಚ್ಚದ ಸಾರಿಗೆಯನ್ನು ಒದಗಿಸಲು ಸಾಧ್ಯವಿದೆ. ಇದಕ್ಕಾಗಿ ದೇಶದಲ್ಲಿ ಅನೇಕ ಹೊಸ ಜಲಮಾರ್ಗಗಳನ್ನು ಸಹ ನಿರ್ಮಿಸಲಾಗುತ್ತಿದೆ" ಎಂದು ಪ್ರಧಾನ ಮಂತ್ರಿ ಹೇಳಿದರು. ಕೊರೊನಾ ಸಮಯದಲ್ಲಿ ಕಿಸಾನ್ ರೈಲು ಮತ್ತು ಕಿಸಾನ್ ಉಡಾನ್ ಪ್ರಯೋಗಗಳನ್ನು ಅವರು ಉಲ್ಲೇಖಿಸಿದರು. ಇಂದು 60 ವಿಮಾನ ನಿಲ್ದಾಣಗಳು ಕೃಷಿ ಉಡಾನ್ ಸೌಲಭ್ಯವನ್ನು ಹೊಂದಿವೆ. 

ಲಾಜಿಸ್ಟಿಕ್ ವಲಯವನ್ನು ಬಲಪಡಿಸಲು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಇ-ಸಂಚಿತ್ ಮೂಲಕ ಕಾಗದರಹಿತ ಎಕ್ಸಿಮ್ ವ್ಯಾಪಾರ ಪ್ರಕ್ರಿಯೆ, ಕಸ್ಟಮ್ಸ್ ಗೆ ಮುಖರಹಿತ ಮೌಲ್ಯಮಾಪನ, ಇ-ವೇ ಬಿಲ್ ಗಳಿಗೆ ಪ್ರಸ್ತಾವನೆಗಳು, ಫಾಸ್ಟ್ ಟ್ಯಾಗ್ ಇತ್ಯಾದಿಗಳಂತಹ ಉಪಕ್ರಮಗಳತ್ತ ಸರ್ಕಾರ ಕೆಲಸ ಮಾಡಿದೆ, ಇದು ಲಾಜಿಸ್ಟಿಕ್ಸ್ ವಲಯದ ದಕ್ಷತೆಯನ್ನು ಬಹಳಷ್ಟು ಹೆಚ್ಚಿಸಿದೆ ಎಂದರು. ಲಾಜಿಸ್ಟಿಕ್ಸ್ ವಲಯದ ಸಮಸ್ಯೆಗಳನ್ನು ಸರಳಗೊಳಿಸುವಲ್ಲಿ ಜಿಎಸ್ಟಿಯಂತಹ ಏಕೀಕೃತ ತೆರಿಗೆ ವ್ಯವಸ್ಥೆಯ ಮಹತ್ವವನ್ನು ಅವರು ಒತ್ತಿ ಹೇಳಿದರು. ಡ್ರೋನ್ ನೀತಿಯಲ್ಲಿ ಬದಲಾವಣೆ ಮತ್ತು ಅದನ್ನು ಪಿಎಲ್ಐ ಯೋಜನೆಯೊಂದಿಗೆ ಸಂಪರ್ಕಿಸುವುದರಿಂದ  ಲಾಜಿಸ್ಟಿಕ್ಸ್ ವಲಯದಲ್ಲಿ ಡ್ರೋನ್ ಗಳ ಬಳಕೆಯನ್ನು ಉತ್ತೇಜಿಸುತ್ತಿದೆ. "ಇಷ್ಟೆಲ್ಲ ಮಾಡಿದ ನಂತರವೇ, ನಾವು ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯನ್ನು ಹೊರತಂದಿದ್ದೇವೆ" ಎಂದು ಅವರು ವಿವರಿಸಿದರು. " 13-14 ಪ್ರತಿಶತದಷ್ಟಿದ್ದ ಲಾಜಿಸ್ಟಿಕ್ಸ್ ವೆಚ್ಚದಿಂದ, ಅದನ್ನು ಸಾಧ್ಯವಾದಷ್ಟು ಬೇಗ ಸಿಂಗಲ್-ಡಿಜಿಟ್ ಗೆ (ಏಕ ಅಂಕೆಗೆ) ತರುವ ಗುರಿಯನ್ನು ನಾವೆಲ್ಲ ಹೊಂದಿರಬೇಕು. ನಾವು ಜಾಗತಿಕವಾಗಿ ಸ್ಪರ್ಧಾತ್ಮಕರಾಗಬೇಕಾದರೆ ಇದು ಒಂದು ರೀತಿಯಲ್ಲಿ ಕಡಿಮೆ ಎತ್ತರದಲ್ಲಿ ಅಂದರೆ ಕೈಗೆಟಕುವಷ್ಟು ಹತ್ತಿರದಲ್ಲಿ  ತೂಗಾಡುತ್ತಿರುವ ಹಣ್ಣು ಆಗಿರಬೇಕಾಗಿದೆ", ಎಂದು ಪ್ರಧಾನ ಮಂತ್ರಿ  ಒತ್ತಿ ಹೇಳಿದರು.

ಏಕೀಕೃತ ಲಾಜಿಸ್ಟಿಕ್ಸ್ ಇಂಟರ್ಫೇಸ್ ಪ್ಲಾಟ್ಫಾರ್ಮ್ ಯುಲಿಪ್ ಸಾರಿಗೆ ವಲಯಕ್ಕೆ ಸಂಬಂಧಿಸಿದ ಎಲ್ಲಾ ಡಿಜಿಟಲ್ ಸೇವೆಗಳನ್ನು ಒಂದೇ ಪೋರ್ಟಲ್ ಗೆ ತರುತ್ತದೆ, ರಫ್ತುದಾರರನ್ನು ಬಹಳ ದೀರ್ಘ ಮತ್ತು ಜಟಿಲ ಪ್ರಕ್ರಿಯೆಗಳಿಂದ ಮುಕ್ತಗೊಳಿಸುತ್ತದೆ ಎಂದೂ  ಪ್ರಧಾನಿ ಹೇಳಿದರು.  ಅದೇ ರೀತಿ, ನೀತಿಯ ಅಡಿಯಲ್ಲಿ ಲಾಜಿಸ್ಟಿಕ್ ಸೇವೆಗಳನ್ನು ಸುಲಭಗೊಳಿಸುವ ಹೊಸ ಡಿಜಿಟಲ್ ಪ್ಲಾಟ್ಫಾರ್ಮ್ -ಇ-ಲಾಗ್ಸ್ ಸಹ ಪ್ರಾರಂಭಿಸಲಾಗಿದೆ. "ಈ ಪೋರ್ಟಲ್ ಮೂಲಕ, ಉದ್ಯಮ ಸಂಘಟನೆಗಳು ಅವರ ಕಾರ್ಯಾಚರಣೆಗಳು ಮತ್ತು ಕಾರ್ಯನಿರ್ವಹಣೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡುವ ಯಾವುದೇ ಸಮಸ್ಯೆಗಳ ಬಗ್ಗೆ  ನೇರವಾಗಿ ಸರ್ಕಾರಿ ಏಜೆನ್ಸಿಗಳೊಂದಿಗೆ ವ್ಯವಹರಿಸಬಹುದು ಅಂತಹ ಪ್ರಕರಣಗಳ ತ್ವರಿತ ಪರಿಹಾರಕ್ಕಾಗಿ ಸಂಪೂರ್ಣ ವ್ಯವಸ್ಥೆಯನ್ನು ಕೂಡಾ ಜಾರಿಗೆ ತರಲಾಗಿದೆ" ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಹಾ ಯೋಜನೆಯು ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯನ್ನು ಸರ್ವ ರೀತಿಯಿಂದಲೂ ಶ್ರದ್ಧೆಯಿಂದ ಬೆಂಬಲಿಸಲಿದೆ ಎಂಬುದರತ್ತಲೂ  ಶ್ರೀ ಮೋದಿ ಬೆಟ್ಟು ಮಾಡಿದರು.  ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಒದಗಿಸಿರುವ ಬೆಂಬಲವನ್ನು ಉಲ್ಲೇಖಿಸಿದ ಅವರು ಬಹುತೇಕ ಎಲ್ಲಾ ಇಲಾಖೆಗಳು ಒಟ್ಟಾಗಿ ಕೆಲಸ ಮಾಡಲು ಪ್ರಾರಂಭಿಸಿವೆ ಎಂದು ಸಂತೋಷ ವ್ಯಕ್ತಪಡಿಸಿದರು. "ರಾಜ್ಯ ಸರ್ಕಾರಗಳ ವಿವಿಧ ಮೂಲಸೌಕರ್ಯ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿಯ ಬೃಹತ್ ದತ್ತಾಂಶವನ್ನು ಸಿದ್ಧಪಡಿಸಲಾಗಿದೆ. ಇಂದು, ಸುಮಾರು 1500 ಪದರಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದತ್ತಾಂಶಗಳು ಪಿಎಂ ಗತಿಶಕ್ತಿ ಪೋರ್ಟಲ್ ನಲ್ಲಿ ಬರುತ್ತಿವೆ", ಎಂದೂ  ಪ್ರಧಾನಿ ಮಾಹಿತಿ ನೀಡಿದರು. "ಗತಿಶಕ್ತಿ ಮತ್ತು ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿ ಒಟ್ಟಾಗಿ ಈಗ ದೇಶವನ್ನು ಹೊಸ ಕೆಲಸದ ಸಂಸ್ಕೃತಿಯತ್ತ ಕೊಂಡೊಯ್ಯುತ್ತಿವೆ. ಇತ್ತೀಚೆಗೆ ಅನುಮೋದಿಸಲಾದ ಗತಿಶಕ್ತಿ ವಿಶ್ವವಿದ್ಯಾಲಯದಿಂದ ಹೊರಬರುವ ಪ್ರತಿಭೆಯು ಸಹ ಅದಕ್ಕೆ ಸಾಕಷ್ಟು ಸಹಾಯ ಮಾಡಲಿದೆ "ಎಂದು ಅವರು ಹೇಳಿದರು.

ಇಂದು ವಿಶ್ವವು ಭಾರತವನ್ನು 'ಪ್ರಜಾಸತ್ತಾತ್ಮಕ ಸೂಪರ್ ಪವರ್' ಎಂದು ನೋಡುತ್ತಿದೆ ಎಂದು ಪ್ರಧಾನಿ ಹೇಳಿದರು. ಭಾರತದ 'ಅಸಾಧಾರಣ ಪ್ರತಿಭಾ ಪರಿಸರ ವ್ಯವಸ್ಥೆ'ಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಆವರು ಇದು ಕ್ಷೇತ್ರ ತಜ್ಞರನ್ನು ಪ್ರಭಾವಿಸಿದೆ,  ಅವರು ಭಾರತದ 'ದೃಢನಿರ್ಧಾರ' ಮತ್ತು 'ಪ್ರಗತಿ'ಯನ್ನು ಶ್ಲಾಘಿಸುತ್ತಿದ್ದಾರೆ ಎಂದರು. "ಇಂದು ಭಾರತದ ಬಗ್ಗೆ ವಿಶ್ವದ ದೃಷ್ಟಿಕೋನ ಬದಲಾಗುತ್ತಿದೆ. ಇಂದು ಜಗತ್ತು ಭಾರತವನ್ನು ಬಹಳ ಧನಾತ್ಮಕವಾಗಿ ಮೌಲ್ಯಮಾಪನ ಮಾಡುತ್ತಿದೆ, ಅದು ಭಾರತದಿಂದ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ”.

ಜಾಗತಿಕ ಬಿಕ್ಕಟ್ಟಿನ ನಡುವೆ ಭಾರತ ಮತ್ತು ಭಾರತದ ಆರ್ಥಿಕತೆಯು ತೋರಿಸಿದ ಸ್ಥಿತಿಸ್ಥಾಪಕತ್ವವುಳ್ಳ ಪುನಶ್ಚೇತನವು ವಿಶ್ವಕ್ಕೆ ಹೊಸ ವಿಶ್ವಾಸವನ್ನು ತುಂಬಿದೆ ಎಂದು ಪ್ರಧಾನಿ ಹೇಳಿದರು. "ಕಳೆದ ವರ್ಷಗಳಲ್ಲಿ ಭಾರತ ಮಾಡಿದ ಸುಧಾರಣೆಗಳು, ಜಾರಿಗೆ ತಂದಿರುವ ನೀತಿಗಳು ಅಭೂತಪೂರ್ವವಾಗಿವೆ. ಆದ್ದರಿಂದಲೇ ನಮ್ಮ ಬಗ್ಗೆ ವಿಶ್ವದ ನಂಬಿಕೆ ಹೆಚ್ಚಾಗಿದೆ", ಎಂದು ಪ್ರಧಾನಿ ಹೇಳಿದರು. ವಿಶ್ವದ ನಂಬಿಕೆಗೆ ಅನುಗುಣವಾಗಿ ರಾಷ್ಟ್ರವು ಸಂಪೂರ್ಣವಾಗಿ ಬದುಕಬೇಕು ಎಂದು ಅವರು ಆಗ್ರಹಿಸಿದರು. "ಇದು ನಮ್ಮ ಜವಾಬ್ದಾರಿ, ನಮಗೆಲ್ಲರಿಗೂ ಜವಾಬ್ದಾರಿ ಇದೆ. ಇಂದು ಪ್ರಾರಂಭಿಸಲಾದ ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯು ಈ ನಿಟ್ಟಿನಲ್ಲಿ ದೇಶಕ್ಕೆ ಸಾಕಷ್ಟು ಸಹಾಯ ಮಾಡುತ್ತದೆ", ಎಂದು ಅವರು ಹೇಳಿದರು.

ಭಾರತೀಯರಲ್ಲಿ ಸ್ಪರ್ಧಾತ್ಮಕ ನಡವಳಿಕೆ ಬೇಕು ಎಂಬುದನ್ನು  ಪ್ರತಿಪಾದಿಸಿದ ಪ್ರಧಾನಮಂತ್ರಿಯವರು, "ಅಭಿವೃದ್ಧಿ ಹೊಂದಲು ನಿರ್ಧರಿಸಿರುವ ಭಾರತವು ಈಗ ಅಭಿವೃದ್ಧಿ ಹೊಂದಿದ ರಾಷ್ಟ್ರಗಳೊಂದಿಗೆ ಹೆಚ್ಚು ಸ್ಪರ್ಧಿಸಬೇಕಾಗಿದೆ, ಆದ್ದರಿಂದ ಎಲ್ಲವೂ ಸ್ಪರ್ಧಾತ್ಮಕವಾಗಿರಬೇಕು" ಎಂದು ಹೇಳಿದರು. ಅವರು "ಅದು ಸೇವಾ ವಲಯ, ಉತ್ಪಾದನಾ ವಲಯ, ಆಟೋಮೊಬೈಲ್, ಎಲೆಕ್ಟ್ರಾನಿಕ್ಸ್ ಆಗಿರಲಿ, ನಾವು ಪ್ರತಿಯೊಂದು ಕ್ಷೇತ್ರದಲ್ಲೂ ದೊಡ್ಡ ಗುರಿಗಳನ್ನು ನಿಗದಿಪಡಿಸಬೇಕು ಮತ್ತು ಅವುಗಳನ್ನು ಸಾಧಿಸಬೇಕು" ಎಂದು ಹೇಳಿದರು. ಭಾರತದಲ್ಲಿ ತಯಾರಾದ ಉತ್ಪನ್ನಗಳತ್ತ ವಿಶ್ವದ ಹೆಚ್ಚುತ್ತಿರುವ ಆಕರ್ಷಣೆಯ ಬಗ್ಗೆಯೂ ಪ್ರಧಾನಿ ಗಮನಸೆಳೆದರು. "ಅದು ಭಾರತದ ಕೃಷಿ ಉತ್ಪನ್ನಗಳಾಗಿರಲಿ, ಭಾರತದ ಮೊಬೈಲ್ ಆಗಿರಲಿ ಅಥವಾ ಭಾರತದ ಬ್ರಹ್ಮೋಸ್ ಕ್ಷಿಪಣಿಯಾಗಿರಲಿ, ಅವುಗಳನ್ನು ಇಂದು ವಿಶ್ವದಲ್ಲಿ ಚರ್ಚಿಸಲಾಗುತ್ತದೆ”. ವಿಶ್ವದಾದ್ಯಂತ ಲಕ್ಷಾಂತರ ಜೀವಗಳನ್ನು ಉಳಿಸಲು ಸಹಾಯ ಮಾಡಿದ ಭಾರತದಲ್ಲಿ ತಯಾರಾದ (ಮೇಡ್ ಇನ್ ಇಂಡಿಯಾ)  ಕೋವಿಡ್ ಲಸಿಕೆಗಳು ಮತ್ತು ಔಷಧಿಗಳನ್ನು ಪ್ರಧಾನ ಮಂತ್ರಿ ಅವರು ಉಲ್ಲೇಖಿಸಿದರು.

ಭಾರತದಲ್ಲಿ ತಯಾರಾದ ಉತ್ಪನ್ನಗಳು ವಿಶ್ವ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಲು, ಬಲವಾದ ಬೆಂಬಲ ವ್ಯವಸ್ಥೆಯನ್ನು ಹೊಂದುವುದು ನಿರ್ಣಾಯಕವಾಗಿದೆ ಎಂದು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು. "ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯು ಈ ಬೆಂಬಲ ವ್ಯವಸ್ಥೆಯನ್ನು ಆಧುನೀಕರಿಸಲು ನಮಗೆ ಬಹಳ ಸಹಾಯ ಮಾಡುತ್ತದೆ" ಎಂದು ಅವರು ಹೇಳಿದರು. ಲಾಜಿಸ್ಟಿಕ್ಸ್ ಗೆ ಸಂಬಂಧಿಸಿದ ಸಮಸ್ಯೆಗಳು ಕಡಿಮೆಯಾಗುತ್ತವೆ ಮತ್ತು ದೇಶದ ರಫ್ತುಗಳು ಹೆಚ್ಚಾದಾಗ, ಸಣ್ಣ ಕೈಗಾರಿಕೆಗಳು ಮತ್ತು ಅವುಗಳಲ್ಲಿ ಕೆಲಸ ಮಾಡುವ ಜನರು ಹೆಚ್ಚು ಪ್ರಯೋಜನ ಪಡೆಯುತ್ತಾರೆ ಎಂಬುದರತ್ತ ಶ್ರೀ ಮೋದಿ ಬೆಟ್ಟು ಮಾಡಿದರು. "ಲಾಜಿಸ್ಟಿಕ್ಸ್ ವಲಯವನ್ನು ಬಲಪಡಿಸುವುದರಿಂದ ಅದು ಸಾಮಾನ್ಯ ಜನರ ಜೀವನವನ್ನು ಸುಲಭಗೊಳಿಸುವುದಲ್ಲದೆ, ಕಾರ್ಮಿಕರು ಮತ್ತು ಕೆಲಸಗಾರರ ಗೌರವವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ" ಎಂದೂ ಪ್ರಧಾನ ಮಂತ್ರಿ ಅವರು ನುಡಿದರು.  

ತಮ್ಮ ಭಾಷಣವನ್ನು ಮುಕ್ತಾಯಗೊಳಿಸುವಾಗ ಪ್ರಧಾನಮಂತ್ರಿಯವರು, "ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯು ಮೂಲಸೌಕರ್ಯಗಳ ಅಭಿವೃದ್ಧಿ, ವ್ಯವಹಾರದ ವಿಸ್ತರಣೆ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುವಂತಹ  ಅಪಾರ ಸಾಮರ್ಥ್ಯವನ್ನು ಹೊಂದಿದೆ. ಈ ಸಾಧ್ಯತೆಗಳನ್ನು ನಾವು ಒಟ್ಟಾಗಿ ಅರಿತುಕೊಳ್ಳಬೇಕು" ಎಂದು ಹೇಳಿದರು.

ಲಾಜಿಸ್ಟಿಕ್ಸ್ ವಲಯದ ಪ್ರತಿನಿಧಿಗಳು, ಟಿವಿಎಸ್ ಸಪ್ಲೈ ಚೈನ್ ಸಲ್ಯೂಷನ್ಸ್ ವ್ಯವಸ್ಥಾಪಕ ನಿರ್ದೇಶಕ ಶ್ರೀ ಆರ್ ದಿನೇಶ್ ; ಅಗರ್ವಾಲ್ ಪ್ಯಾಕರ್ಸ್ ಮತ್ತು ಮೂವರ್ಸ್ ಸಿಇಒ ಶ್ರೀ ರಮೇಶ್ ಅಗರ್ವಾಲ್, ಎಕ್ಸ್ ಪ್ರೆಸ್ ಬೀಸ್ ಲಾಜಿಸ್ಟಿಕ್ಸ್ ನ ಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಅಮಿತಾಭ್ ಸಹಾ ಈ ಸಂದರ್ಭದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್, ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ಶ್ರೀ ನಿತಿನ್ ಗಡ್ಕರಿ, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ,  ಕೇಂದ್ರ ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್, ಕೇಂದ್ರ ಬಂದರು, ಹಡಗು ಮತ್ತು ಜಲಸಾರಿಗೆ ಸಚಿವ ಶ್ರೀ ಸರ್ಬಾನಂದ ಸೋನೊವಾಲ್, ಕೇಂದ್ರ ಶಿಕ್ಷಣ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಮತ್ತು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಹಾಯಕ  ಸಚಿವ,  ಶ್ರೀ ಸೋಮ್ ಪ್ರಕಾಶ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಇತರ ಅಭಿವೃದ್ಧಿ ಹೊಂದಿದ ಆರ್ಥಿಕತೆಗಳಿಗೆ ಹೋಲಿಸಿದರೆ ಭಾರತದಲ್ಲಿ ಲಾಜಿಸ್ಟಿಕ್ಸ್ ವೆಚ್ಚವು ಹೆಚ್ಚಾಗಿರುವುದರಿಂದ ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯ ಅಗತ್ಯವನ್ನು ಮನಗಾಣಲಾಯಿತು. ದೇಶೀಯ ಮತ್ತು ರಫ್ತು ಮಾರುಕಟ್ಟೆಗಳೆರಡರಲ್ಲೂ ಭಾರತೀಯ ಸರಕುಗಳ ಸ್ಪರ್ಧಾತ್ಮಕತೆಯನ್ನು ಸುಧಾರಿಸಲು ಭಾರತದಲ್ಲಿ ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡುವುದು ಅತ್ಯಗತ್ಯವಾಗಿದೆ. ಲಾಜಿಸ್ಟಿಕ್ಸ್ ವೆಚ್ಚದ ಕಡಿತವು ಆರ್ಥಿಕತೆಯ ವಿವಿಧ ವಲಯಗಳಲ್ಲಿ ದಕ್ಷತೆಯನ್ನು ಸುಧಾರಿಸುತ್ತದೆ, ಮೌಲ್ಯವರ್ಧನೆ ಮತ್ತು ಉದ್ಯಮಗಳನ್ನು ಉತ್ತೇಜಿಸುತ್ತದೆ.

2014 ರಿಂದ, ಸರ್ಕಾರವು ವ್ಯಾಪಾರವನ್ನು ಸುಲಭಗೊಳಿಸುವುದು ಮತ್ತು ಜೀವನವನ್ನು ಸುಲಭಗೊಳಿಸುವುದು ಸಹಿತ ಈ ಎರಡನ್ನೂ ಸುಧಾರಿಸಲು ಗಮನಾರ್ಹ ಒತ್ತು ನೀಡಿದೆ. ಇಡೀ ಲಾಜಿಸ್ಟಿಕ್ಸ್ ಪರಿಸರ ವ್ಯವಸ್ಥೆಯ ಅಭಿವೃದ್ಧಿಗಾಗಿ ಅಂತರ್ಶಿಸ್ತೀಯ, ಅಂತರ್ ವಲಯ ಮತ್ತು ಬಹು-ನ್ಯಾಯವ್ಯಾಪ್ತಿಯ ಚೌಕಟ್ಟನ್ನು ರೂಪಿಸುವ ಮೂಲಕ ಹೆಚ್ಚಿನ ವೆಚ್ಚ ಮತ್ತು ಅದಕ್ಷತೆಯ ಸಮಸ್ಯೆಗಳನ್ನು ಪರಿಹರಿಸುವ ಸಮಗ್ರ ಪ್ರಯತ್ನವಾದ ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯು ಈ ದಿಕ್ಕಿನಲ್ಲಿ ಮತ್ತೊಂದು ಹೆಜ್ಜೆಯಾಗಿದೆ. ಈ ನೀತಿಯು ಭಾರತೀಯ ಸರಕುಗಳ ಸ್ಪರ್ಧಾತ್ಮಕತೆಯನ್ನು ಸುಧಾರಿಸುವ, ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಪ್ರಯತ್ನವಾಗಿದೆ.

ಸಮಗ್ರ ಯೋಜನೆ ಮತ್ತು ಅನುಷ್ಠಾನದಲ್ಲಿ ಎಲ್ಲ ಭಾಗೀದಾರರನ್ನು ಒಗ್ಗೂಡಿಸುವ ಮೂಲಕ ವಿಶ್ವದರ್ಜೆಯ ಆಧುನಿಕ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದು ಪ್ರಧಾನಮಂತ್ರಿಯವರ ದೂರದೃಷ್ಟಿಯ ಚಿಂತನೆಯಾಗಿದೆ, ಇದರಿಂದ ಯೋಜನೆಯ ಅನುಷ್ಠಾನದಲ್ಲಿ ದಕ್ಷತೆ ಮತ್ತು ಸಂಯೋಜನೆಯನ್ನು ಸಾಧಿಸಲಾಗುತ್ತದೆ. ಪ್ರಧಾನಮಂತ್ರಿಯವರು ಕಳೆದ ವರ್ಷ ಬಹು-ಮಾದರಿ ಸಂಪರ್ಕಕ್ಕಾಗಿ  ಪ್ರಾರಂಭಿಸಿದ ರಾಷ್ಟ್ರೀಯ ಮಹಾ ಯೋಜನೆ- ಪಿಎಂ ಗತಿಶಕ್ತಿ ಈ ದಿಕ್ಕಿನಲ್ಲಿ ಒಂದು ಪ್ರವರ್ತಕ ಹೆಜ್ಜೆಯಾಗಿದೆ. ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯನ್ನು ಪ್ರಾರಂಭಿಸುವುದರೊಂದಿಗೆ ಪಿಎಂ ಗತಿಶಕ್ತಿಗೆ ಮತ್ತಷ್ಟು ಉತ್ತೇಜನ ಸಿಗಲಿದೆ ಮತ್ತು ಅದು ಪರಸ್ಪರ ಪೂರಕವಾಗಿರಲಿದೆ.  

 

 

*****



(Release ID: 1860432) Visitor Counter : 294