ಪ್ರಧಾನ ಮಂತ್ರಿಯವರ ಕಛೇರಿ

ಗ್ರೇಟರ್ ನೋಯ್ಡಾದಲ್ಲಿ ಅಂತಾರಾಷ್ಟ್ರೀಯ ಡೈರಿ ಒಕ್ಕೂಟದ ವಿಶ್ವ ಡೈರಿ ಶೃಂಗಸಭೆ 2022ನ್ನು ಉದ್ಘಾಟಿಸಿದ ಪ್ರಧಾನಮಂತ್ರಿ 


"ಭಾರತದ ಹೈನುಗಾರಿಕೆ ಕ್ಷೇತ್ರವು 'ಸಾಮೂಹಿಕ ಉತ್ಪಾದನೆ'ಗಿಂತ ಹೆಚ್ಚಾಗಿ 'ಜನಸಮೂಹಗಳ ಉತ್ಪಾದನೆ' ವೈಶಿಷ್ಟ್ಯತೆಯಿಂದ ಕೂಡಿದೆ

"ಭಾರತದಲ್ಲಿನ ಡೈರಿ ಸಹಕಾರ ರಂಗ ಇಡೀ ವಿಶ್ವದಲ್ಲಿಯೇ ವಿಶಿಷ್ಟವಾಗಿದೆ ಮತ್ತು ಬಡ ರಾಷ್ಟ್ರಗಳಿಗೆ ಉತ್ತಮ ವ್ಯಾಪಾರ ಮಾದರಿಯಾಗಿದೆ"

"ಡೈರಿ ಸಹಕಾರ ಸಂಸ್ಥೆಗಳು ದೇಶದ ಎರಡು ಲಕ್ಷಕ್ಕೂ ಹೆಚ್ಚು ಹಳ್ಳಿಗಳ ಸುಮಾರು ಎರಡು ಕೋಟಿ ರೈತರಿಂದ ದಿನಕ್ಕೆ ಎರಡು ಬಾರಿ ಹಾಲನ್ನು ಸಂಗ್ರಹಿಸುತ್ತಿದ್ದು, ಅದನ್ನು ಗ್ರಾಹಕರಿಗೆ ತಲುಪಿಸುತ್ತವೆ"

"ಗ್ರಾಹಕರಿಂದ ಪಡೆಯುವ ಹಣದ ಶೇಕಡಾ 70 ಕ್ಕಿಂತ ಹೆಚ್ಚು ಭಾಗವು ನೇರವಾಗಿ ರೈತರಿಗೆ ಹೋಗುತ್ತದೆ"

"ಮಹಿಳೆಯರು ಭಾರತದ ಡೈರಿ ಕ್ಷೇತ್ರದ ನಿಜವಾದ ನಾಯಕರು"

"ಎಂಟೂವರೆ ಲಕ್ಷ ಕೋಟಿ ರೂ.ಗಳಿಗೂ ಹೆಚ್ಚಿರುವ ಹೈನುಗಾರಿಕೆ ಕ್ಷೇತ್ರ ಗೋಧಿ ಮತ್ತು ಅಕ್ಕಿ ಉತ್ಪಾದನೆಯ ಸಂಯೋಜಿತ ಮೌಲ್ಯಕ್ಕಿಂತ ಹೆಚ್ಚಾಗಿದೆ"

"ಭಾರತವು 2014 ರಲ್ಲಿ 146 ದಶಲಕ್ಷ ಟನ್ ಹಾಲನ್ನು ಉತ್ಪಾದಿಸಿತ್ತು. ಇದು ಈಗ 210 ದಶಲಕ್ಷ ಟನ್ ಗಳಿಗೆ ಏರಿದೆ. ಅಂದರೆ, ಸುಮಾರು 44 ಪ್ರತಿಶತದಷ್ಟು ಹೆಚ್ಚಳವಾಗಿದೆ"

" ಹಾಲು ಉತ್ಪಾದನೆಯು ಜಾಗತಿಕ ವೃದ್ಧಿ ದರ ಶೇ. 2 ಕ್ಕೆ ಪ್ರತಿಯಾಗಿ ಭಾರತದ ವಾರ್ಷಿಕ ವೃದ್ಧಿ ದರ ಶೇ. 6 ರಷ್ಟು ಹೆಚ್ಚಾಗುತ್ತಿದೆ"

"ಭಾರತವು ಹೈನುಗಾರಿಕೆ ಪ್ರಾಣಿಗ

Posted On: 12 SEP 2022 12:36PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್ ಪೋ ಸೆಂಟರ್ ಮತ್ತು ಮಾರ್ಟ್ ನಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಡೈರಿ ಒಕ್ಕೂಟದ ವಿಶ್ವ ಡೈರಿ ಶೃಂಗಸಭೆ (ಐಡಿಎಫ್ ಡಬ್ಲ್ಯೂಡಿಎಸ್) 2022 ಕ್ಕ ಚಾಲನೆ ನೀಡಿದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಹೈನುಗಾರಿಕೆಯ ಪ್ರಪಂಚದ ಎಲ್ಲ ಗಣ್ಯರು ಇಂದು ಭಾರತದಲ್ಲಿ ಸೇರಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು. ವಿಶ್ವ ಡೈರಿ ಶೃಂಗಸಭೆಯು ವಿಚಾರಗಳ ವಿನಿಮಯಕ್ಕೆ ಉತ್ತಮ ಮಾಧ್ಯಮವಾಗಲಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. "ಹೈನುಗಾರಿಕೆ ಕ್ಷೇತ್ರದ ಸಾಮರ್ಥ್ಯವು ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ನೀಡುವುದಲ್ಲದೆ, ವಿಶ್ವದಾದ್ಯಂತದ ಕೋಟ್ಯಂತರ ಜನರಿಗೆ ಜೀವನೋಪಾಯದ ಪ್ರಮುಖ ಮೂಲವಾಗಿದೆ" ಎಂದು ಅವರು ಹೇಳಿದರು.

ಭಾರತದ ಸಾಂಸ್ಕೃತಿಕ ಭೂರಮೆಯಲ್ಲಿ 'ಪಶು ಧನ್' ಮತ್ತು ಕ್ಷೀರ ಸಂಬಂಧಿತ ವ್ಯವಹಾರದ ಕೇಂದ್ರ ಬಿಂದುವಾಗಿರುವುದನ್ನು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು. ಇದು ಭಾರತದ ಹೈನುಗಾರಿಕೆ ವಲಯಕ್ಕೆ ಅನೇಕ ವಿಶಿಷ್ಟ ಗುಣಲಕ್ಷಣಗಳನ್ನು ನೀಡಿದೆ. ವಿಶ್ವದ ಇತರ ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಭಿನ್ನವಾಗಿ, ಭಾರತದಲ್ಲಿ ಹೈನುಗಾರಿಕೆ ಕ್ಷೇತ್ರದ ಪ್ರೇರಕ ಶಕ್ತಿ ಸಣ್ಣ ರೈತರು ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಭಾರತದ ಹೈನುಗಾರಿಕೆ ವಲಯವು "ಸಾಮೂಹಿಕ ಉತ್ಪಾದನೆ"ಗಿಂತ ಹೆಚ್ಚಾಗಿ "ಜನಸಮೂಹದ ಉತ್ಪಾದನೆ" ಯಿಂದ ವಿಶಿಷ್ಟವೇನಿಸಿದೆ. ಒಂದು, ಎರಡು ಅಥವಾ ಮೂರು ಜಾನುವಾರುಗಳನ್ನು ಹೊಂದಿರುವ ಈ ಸಣ್ಣ ರೈತರ ಪ್ರಯತ್ನದ ಆಧಾರದ ಮೇಲೆ ಭಾರತವು ಅತಿ ಹೆಚ್ಚು ಹಾಲು ಉತ್ಪಾದಿಸುವ ದೇಶವಾಗಿದೆ. ಈ ವಲಯವು ದೇಶದ 8 ಕೋಟಿಗೂ ಹೆಚ್ಚು ಕುಟುಂಬಗಳಿಗೆ ಉದ್ಯೋಗವನ್ನು ಒದಗಿಸುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಭಾರತೀಯ ಹೈನುಗಾರಿಕೆ ವ್ಯವಸ್ಥೆಯ ಎರಡನೇ ವಿಶಿಷ್ಟ ಗುಣಲಕ್ಷಣವನ್ನು ವಿವರಿಸಿದ ಪ್ರಧಾನಮಂತ್ರಿಯವರು, ಭಾರತದಲ್ಲಿ ಹೈನುಗಾರಿಕೆ ಸಹಕಾರಿ ರಂಗದ ಇಷ್ಟು ದೊಡ್ಡ ಜಾಲವಿದೆ ಮತ್ತು ಇಡೀ ವಿಶ್ವದಲ್ಲಿ ಅಂತಹ ಉದಾಹರಣೆಯನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ ಎಂದು ಪುನರುಚ್ಚರಿಸಿದರು. ಈ ಡೈರಿ ಸಹಕಾರ ಸಂಸ್ಥೆಗಳು ದೇಶದ ಎರಡು ಲಕ್ಷಕ್ಕೂ ಹೆಚ್ಚು ಹಳ್ಳಿಗಳ ಸುಮಾರು ಎರಡು ಕೋಟಿ ರೈತರಿಂದ ದಿನಕ್ಕೆ ಎರಡು ಬಾರಿ ಹಾಲನ್ನು ಸಂಗ್ರಹಿಸಿ ಗ್ರಾಹಕರಿಗೆ ತಲುಪಿಸುತ್ತಿವೆ ಎಂದು ಶ್ರೀ ಮೋದಿ ಹೇಳಿದರು. ಇಡೀ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳಿಲ್ಲ ಮತ್ತು ಗ್ರಾಹಕರಿಂದ ಪಡೆಯುವ ಹಣದ ಶೇಕಡಾ 70ಕ್ಕಿಂತ ಹೆಚ್ಚು ನೇರವಾಗಿ ರೈತರ ಜೇಬಿಗೆ ಹೋಗುತ್ತದೆ ಎಂಬ ಅಂಶದ ಬಗ್ಗೆ ಪ್ರಧಾನಮಂತ್ರಿಯವರು ಗಮನ ಸೆಳೆದರು. "ಇಡೀ ವಿಶ್ವದಲ್ಲಿ ಬೇರೆ ಯಾವುದೇ ದೇಶವು ಈ ಅನುಪಾತವನ್ನು ಹೊಂದಿಲ್ಲ" ಎಂದು ಪ್ರಧಾನಮಂತ್ರಿ ಹೇಳಿದರು. ಡೈರಿ ಕ್ಷೇತ್ರದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಯ ದಕ್ಷತೆಯನ್ನು ಅವರು ಒತ್ತಿ ಹೇಳಿದರು ಮತ್ತು ಇದು ಇತರ ದೇಶಗಳಿಗೆ ಬಹುವಿಧಧ ಪಾಠವಾಗಿದೆ ಎಂದು ಹೇಳಿದರು.

ಪ್ರಧಾನಮಂತ್ರಿಯವರ ಪ್ರಕಾರ, ಮತ್ತೊಂದು ವಿಶಿಷ್ಟ ಲಕ್ಷಣ, ಅನೇಕ ಪ್ರತಿಕೂಲ ಪರಿಸ್ಥಿತಿಗಳನ್ನು ತಡೆದುಕೊಳ್ಳಬಲ್ಲ ದೇಶೀಯ ತಳಿಗಳದ್ದು. ಗುಜರಾತಿನ ಗಟ್ಟಿಮುಟ್ಟಾದ ಎಮ್ಮೆ ತಳಿಯಾದ ಕಚ್ ಪ್ರದೇಶದ ಬನ್ನಿ ಬಫಲೋ ತಳಿಯ ಉದಾಹರಣೆಯನ್ನು ಅವರು ನೀಡಿದರು.  ಮುರ್ರಾ, ಮೆಹ್ಸಾನಾ, ಜಫ್ರಾಬಾದಿ, ನೀಲಿ ರವಿ ಮತ್ತು ಪಂಢರಪುರಿಯಂತಹ ಇತರ ಎಮ್ಮೆ ತಳಿಗಳ ಬಗ್ಗೆಯೂ ಅವರು ಮಾತನಾಡಿದರು; ಗೋವಿನ ತಳಿಗಳಲ್ಲಿ, ಅವರು ಗಿರ್, ಸಾಹಿವಾಲ್, ರಾಥಿ, ಕಂಕ್ರೇಜ್, ಥಾರ್ಪಾರ್ಕರ್ ಮತ್ತು ಹರಿಯಾಣವನ್ನು ಉಲ್ಲೇಖಿಸಿದರು.

ಹೈನುಗಾರಿಕೆ ಕ್ಷೇತ್ರದಲ್ಲಿ ಪ್ರಧಾನಮಂತ್ರಿಯವರು ಒತ್ತಿ ಹೇಳಿದ ಮತ್ತೊಂದು ವಿಶಿಷ್ಟ ಲಕ್ಷಣ ಮಹಿಳೆಯರ ಶಕ್ತಿ. ಭಾರತದ ಹೈನುಗಾರಿಕೆ ಕ್ಷೇತ್ರದಲ್ಲಿನ ಕಾರ್ಯಪಡೆಯಲ್ಲಿ ಮಹಿಳೆಯರಿಗೆ ಶೇ.70ರಷ್ಟು ಪ್ರಾತಿನಿಧ್ಯವಿದೆ ಎಂದು ಪ್ರಧಾನಮಂತ್ರಿ ಅವರು ತಿಳಿಸಿದರು. "ಮಹಿಳೆಯರೇ ಭಾರತದ ಡೈರಿ ಕ್ಷೇತ್ರದ ನಿಜವಾದ ನಾಯಕರು" ಎಂದು ಅವರು ಹೇಳಿದರು, "ಇಷ್ಟು ಮಾತ್ರವಲ್ಲ, ಭಾರತದಲ್ಲಿ ಡೈರಿ ಸಹಕಾರ ಸಂಸ್ಥೆಗಳ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಸದಸ್ಯರು ಮಹಿಳೆಯರೇ ಆಗಿದ್ದಾರೆ" ಎಂದು ಅವರು ಹೇಳಿದರು. ಎಂಟೂವರೆ ಲಕ್ಷ ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಹೈನುಗಾರಿಕೆಯು ಗೋಧಿ ಮತ್ತು ಅಕ್ಕಿಯ ಒಟ್ಟು ಮೌಲ್ಯಕ್ಕಿಂತ ಹೆಚ್ಚಾಗಿದೆ ಎಂದು ಅವರು ಹೇಳಿದರು. ಇದೆಲ್ಲವೂ ಭಾರತದ ಮಹಿಳಾ ಶಕ್ತಿಯಿಂದ ಪ್ರೇರಿತವಾಗಿದೆ ಎಂದರು.

2014ರಿಂದೀಚೆಗೆ ಭಾರತದ ಹೈನುಗಾರಿಕೆ ಕ್ಷೇತ್ರದ ಸಾಮರ್ಥ್ಯವನ್ನು ಹೆಚ್ಚಿಸಲು ಸರ್ಕಾರ ಅವಿರತವಾಗಿ ಶ್ರಮಿಸಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಇದು ಹಾಲಿನ ಉತ್ಪಾದನೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ, ಇದರಿಂದಾಗಿ ರೈತರ ಆದಾಯದಲ್ಲಿ ಹೆಚ್ಚಳವೂ ಆಗುತ್ತಿದೆ. "ಭಾರತವು 2014 ರಲ್ಲಿ 146 ದಶಲಕ್ಷ ಟನ್ ಹಾಲನ್ನು ಉತ್ಪಾದಿಸಿತ್ತು. ಇದು ಈಗ 210 ದಶಲಕ್ಷ ಟನ್ ಗಳಿಗೆ ಏರಿದೆ. ಅಂದರೆ, ಸುಮಾರು 44 ಪ್ರತಿಶತದಷ್ಟು ಹೆಚ್ಚಳವಾಗಿದೆ", ಎಂದು ಪ್ರಧಾನಮಂತ್ರಿ ಗಮನಸೆಳೆದರು. ಜಾಗತಿಕ ಮಟ್ಟದಲ್ಲಿ ಶೇಕಡಾ 2 ರಷ್ಟು ಕ್ಷೀರ ಉತ್ಪಾದನಾ ವೃದ್ಧಿ ದರಕ್ಕೆ ಹೋಲಿಸಿದರೆ, ಭಾರತದಲ್ಲಿ ಹಾಲು ಉತ್ಪಾದನೆಯ ವೃದ್ಧಿ ದರ ಶೇಕಡಾ 6 ಕ್ಕಿಂತ ಹೆಚ್ಚು ವೇಗದಲ್ಲಿ ಸಾಗುತ್ತಿದೆ ಎಂದು ಅವರು ಉಲ್ಲೇಖಿಸಿದರು.

ಉತ್ಪಾದನೆಯನ್ನು ಹೆಚ್ಚಿಸುವತ್ತ ಗಮನ ಹರಿಸುವುದರ ಜೊತೆಗೆ ವಲಯಗಳ ಸವಾಲುಗಳನ್ನು ಎದುರಿಸುತ್ತಿರುವ ಬ್ಲಾಂಚ್ಡ್ (blanched) ಡೈರಿ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ರೈತರಿಗೆ ಹೆಚ್ಚುವರಿ ಆದಾಯ, ಬಡವರ ಸಬಲೀಕರಣ, ಸ್ವಚ್ಛತೆ, ರಾಸಾಯನಿಕ ಮುಕ್ತ ಕೃಷಿ, ಶುದ್ಧ ಇಂಧನ ಮತ್ತು ಜಾನುವಾರುಗಳ ಆರೈಕೆ ಈ ಪರಿಸರ ವ್ಯವಸ್ಥೆಯಲ್ಲಿ ಪರಸ್ಪರ ಸಂಬಂಧ ಹೊಂದಿದೆ. ಪಶು ಸಂಗೋಪನೆ ಮತ್ತು ಹೈನುಗಾರಿಕೆಯನ್ನು ಹಳ್ಳಿಗಳಲ್ಲಿ ಹಸಿರು ಮತ್ತು ಸುಸ್ಥಿರ ಬೆಳವಣಿಗೆಯ ಪ್ರಬಲ ಮಾಧ್ಯಮವಾಗಿ ಉತ್ತೇಜಿಸಲಾಗುತ್ತಿದೆ ಎಂದು ಅವರು ಒತ್ತಿ ಹೇಳಿದರು. ರಾಷ್ಟ್ರೀಯ ಗೋಕುಲ್ ಅಭಿಯಾನ, ಗೋಬರ್ಧನ್ ಯೋಜನೆ, ಹೈನುಗಾರಿಕೆ ಕ್ಷೇತ್ರದ ಡಿಜಿಟಲೀಕರಣ ಮತ್ತು ಜಾನುವಾರುಗಳಿಗೆ ಸಾರ್ವತ್ರಿಕ ಲಸಿಕೀಕರಣ ಮತ್ತು ಏಕ-ಬಳಕೆಯ ಪ್ಲಾಸ್ಟಿಕ್ ಅನ್ನು ನಿಷೇಧಿಸುವಂತಹ ಕ್ರಮಗಳಂತಹ ಯೋಜನೆಗಳು ಆ ದಿಕ್ಕಿನಲ್ಲಿ ಇಟ್ಟ ಹೆಜ್ಜೆಗಳಾಗಿವೆ ಎಂದರು.

ಆಧುನಿಕ ತಂತ್ರಜ್ಞಾನದ ಬಳಕೆಯ ಬಗ್ಗೆ ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಭಾರತವು ಹೈನುಗಾರಿಕೆಯ ಪ್ರಾಣಿಗಳ ಅತಿದೊಡ್ಡ ಡೇಟಾಬೇಸ್ ಅನ್ನು ರೂಪಿಸುತ್ತಿದೆ ಮತ್ತು ಹೈನುಗಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಾಣಿಯನ್ನು ತಲುಪಲಾಗುತ್ತಿದೆ ಎಂದು ಹೇಳಿದರು. "ನಾವು ಪ್ರಾಣಿಗಳ ಬಯೋಮೆಟ್ರಿಕ್ ಗುರುತಿಸುವಿಕೆಯನ್ನು ಮಾಡುತ್ತಿದ್ದೇವೆ. ನಾವು ಅದಕ್ಕೆ ಪಶು ಆಧಾರ್ ಎಂದು ಹೆಸರಿಟ್ಟಿದ್ದೇವೆ" ಎಂದು ಅವರು ಹೇಳಿದರು.

ಎಫ್.ಪಿಎಗಳು ಮತ್ತು ಮಹಿಳಾ ಸ್ವಸಹಾಯ ಗುಂಪುಗಳು ಮತ್ತು ನವೋದ್ಯಮಗಳಂತಹ ಬೆಳೆಯುತ್ತಿರುವ ಉದ್ಯಮಶೀಲ ಸ್ವರೂಪಗಳ ಬಗ್ಗೆ ಶ್ರೀ ಮೋದಿ ಒತ್ತಿ ಹೇಳಿದರು. ಈ ವಲಯವು ಇತ್ತೀಚಿನ ದಿನಗಳಲ್ಲಿ 1೦೦೦ ಕ್ಕೂ ಹೆಚ್ಚು ನವೋದ್ಯಮಗಳನ್ನು ಕಂಡಿದೆ ಎಂದು ಅವರು ಹೇಳಿದರು. ಅವರು ಗೋಬರ್ಧನ್ ಯೋಜನೆಯ ಪ್ರಗತಿಯ ಬಗ್ಗೆಯೂ ಮಾತನಾಡಿ, ಸಗಣಿಯಿಂದ (ಗೋಬರ್) ಡೈರಿ ಘಟಕಗಳು ತಮ್ಮದೇ ಆದ ವಿದ್ಯುತ್ ಉತ್ಪಾದಿಸುವ ಸ್ಥಿತಿಯನ್ನು ತಲುಪುವಂತೆ ಮಾಡುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು. ಇದರ ಪರಿಣಾಮವಾಗಿ ಲಭಿಸುವ ಗೊಬ್ಬರದಿಂದ ರೈತರಿಗೂ ಸಹಾಯವಾಗುತ್ತದೆ ಎಂದರು. 

ಕೃಷಿಗೆ ಹೋಲಿಕೆ ಮಾಡಿದ ಪ್ರಧಾನಮಂತ್ರಿಯವರು, ಪಶುಸಂಗೋಪನೆ ಮತ್ತು ವ್ಯವಸಾಯಕ್ಕೆ ವೈವಿಧ್ಯತೆಯ ಅಗತ್ಯವಿದೆ ಮತ್ತು ಏಕ ಸಂಸ್ಕೃತಿಯೊಂದೇ ಪರಿಹಾರವಾಗದಿರಬಹುದು ಎಂದು ಹೇಳಿದರು. ಇಂದು, ಭಾರತವು ದೇಶೀಯ ತಳಿಗಳು ಮತ್ತು ಹೈಬ್ರಿಡ್ ತಳಿಗಳೆರಡಕ್ಕೂ ಸಮಾನ ಗಮನ ಹರಿಸುತ್ತಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಇದು ಹವಾಮಾನ ಬದಲಾವಣೆಯಿಂದ ಉಂಟಾಗುವ ಹಾನಿಯ ಅಪಾಯವನ್ನು ಸಹ ತಗ್ಗಿಸುತ್ತದೆ ಎಂದು ಅವರು ವಿವರಿಸಿದರು.

ರೈತರ ಆದಾಯದ ಮೇಲೆ ಪರಿಣಾಮ ಬೀರುತ್ತಿರುವ ಮತ್ತೊಂದು ಪ್ರಮುಖ ಸಮಸ್ಯೆಯಾದ ಪ್ರಾಣಿಗಳಿಗೆ ಬರುವ ರೋಗಗಳ ಬಗ್ಗೆ ಪ್ರಧಾನಮಂತ್ರಿಯವರು ಪ್ರಸ್ತಾಪಿಸಿದರು. "ಪ್ರಾಣಿ ಅನಾರೋಗ್ಯಕ್ಕೆ ಒಳಗಾದಾಗ ಅದು ರೈತನ ಜೀವನದ ಮೇಲೆ ಪರಿಣಾಮ ಬೀರುತ್ತದೆ, ಇದು ಅವನ ಆದಾಯದ ಮೇಲೆ ಪರಿಣಾಮ ಬೀರುತ್ತದೆ. ಇದು ಪ್ರಾಣಿಗಳ ದಕ್ಷತೆ, ಅದರ ಹಾಲಿನ ಗುಣಮಟ್ಟ ಮತ್ತು ಇತರ ಸಂಬಂಧಿತ ಉತ್ಪನ್ನಗಳ ಮೇಲೂ ಪರಿಣಾಮ ಬೀರುತ್ತದೆ", ಎಂದು ಅವರು ಹೇಳಿದರು. ಈ ದಿಸೆಯಲ್ಲಿ, ಭಾರತವು ಪ್ರಾಣಿಗಳಿಗೆ ಸಾರ್ವತ್ರಿಕ ಲಸಿಕೆ ನೀಡುವತ್ತ ಶ್ರಮಿಸುತ್ತಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. "2025ರ ವೇಳೆಗೆ, ನಾವು ಶೇ.100 ಪ್ರಾಣಿಗಳಿಗೆ ಕಾಲು ಮತ್ತು ಬಾಯಿ ರೋಗ ಹಾಗೂ ಬ್ರುಸೆಲ್ಲೋಸಿಸ್ ವಿರುದ್ಧ ಲಸಿಕೆ ನೀಡಲು ನಿರ್ಧರಿಸಿದ್ದೇವೆ. ಈ ದಶಕದ ಅಂತ್ಯದ ವೇಳೆಗೆ ಈ ರೋಗಗಳಿಂದ ಸಂಪೂರ್ಣವಾಗಿ ಮುಕ್ತರಾಗುವ ಗುರಿಯನ್ನು ನಾವು ಹೊಂದಿದ್ದೇವೆ", ಎಂದು ಪ್ರಧಾನಮಂತ್ರಿ ಹೇಳಿದರು.

ಇತ್ತೀಚಿನ ದಿನಗಳಲ್ಲಿ ಲಂಪಿ ಎಂಬ ರೋಗದಿಂದಾಗಿ ಭಾರತದ ಅನೇಕ ರಾಜ್ಯಗಳಲ್ಲಿ ಜಾನುವಾರುಗಳ ನಷ್ಟವಾಗುತ್ತಿರುವ ಬಗ್ಗೆ ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಕೇಂದ್ರ ಸರ್ಕಾರ, ವಿವಿಧ ರಾಜ್ಯ ಸರ್ಕಾರಗಳೊಂದಿಗೆ ಸೇರಿ, ಅದರ ಮೇಲೆ ನಿಗಾ ಇಡಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದೆ ಎಂದು ಎಲ್ಲರಿಗೂ ಭರವಸೆ ನೀಡಿದರು. "ನಮ್ಮ ವಿಜ್ಞಾನಿಗಳು ಲಂಪಿ ಚರ್ಮ ರೋಗಕ್ಕೆ ದೇಶೀಯ ಲಸಿಕೆಯನ್ನು ಸಹ ಸಿದ್ಧಪಡಿಸಿದ್ದಾರೆ" ಎಂದು ಪ್ರಧಾನಮಂತ್ರಿ ಹೇಳಿದರು. ಸಾಂಕ್ರಾಮಿಕ ರೋಗವನ್ನು ನಿಯಂತ್ರಣದಲ್ಲಿಡಲು ಪ್ರಾಣಿಗಳ ಚಲನವಲನಗಳನ್ನು ಪತ್ತೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಅದು ಪ್ರಾಣಿಗಳಿಗೆ ಲಸಿಕೆ ಹಾಕಿಸುವುದಾಗಿರಲಿ ಅಥವಾ ಇನ್ನಾವುದೇ ಆಧುನಿಕ ತಂತ್ರಜ್ಞಾನವಾಗಿರಲಿ, ಭಾರತವು ತನ್ನ ಪಾಲುದಾರ ರಾಷ್ಟ್ರಗಳಿಂದ ಕಲಿಯಲು ಪ್ರಯತ್ನಿಸುತ್ತಿರುವಾಗ ಹೈನುಗಾರಿಕೆ ಕ್ಷೇತ್ರಕ್ಕೆ ಕೊಡುಗೆ ನೀಡಲು ಸದಾ ಉತ್ಸುಕವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. "ಭಾರತವು ತನ್ನ ಆಹಾರ ಸುರಕ್ಷತಾ ಮಾನದಂಡಗಳ ಬಗ್ಗೆ ತ್ವರಿತವಾಗಿ ಕಾರ್ಯನಿರ್ವಹಿಸಿದೆ" ಎಂದು ಶ್ರೀ ಮೋದಿ ಹೇಳಿದರು.

ಭಾಷಣದ ಕೊನೆಯಲ್ಲಿ, ಭಾರತವು ಜಾನುವಾರು ವಲಯದ ಎಂಡ್-ಟು-ಎಂಡ್ ಚಟುವಟಿಕೆಗಳನ್ನು ಸೆರೆಹಿಡಿಯುವ ಡಿಜಿಟಲ್ ವ್ಯವಸ್ಥೆಯ ಮೇಲೆ ಶ್ರಮಿಸುತ್ತಿದೆ ಎಂದು ಪ್ರಧಾನಮಂತ್ರಿಯವರು ಪುನರುಚ್ಚರಿಸಿದರು. ಇದು ಈ ವಲಯವನ್ನು ಸುಧಾರಿಸಲು ಅಗತ್ಯವಿರುವ ನಿಖರವಾದ ಮಾಹಿತಿಯನ್ನು ಒದಗಿಸುತ್ತದೆ. ಈ ಶೃಂಗಸಭೆಯು ಇಂತಹ ಅನೇಕ ತಂತ್ರಜ್ಞಾನಗಳಿಗೆ ಸಂಬಂಧಿಸಿದಂತೆ ವಿಶ್ವದಾದ್ಯಂತ ನಡೆಯುತ್ತಿರುವ ಕಾರ್ಯಗಳನ್ನು ಮುಂದಿಡಲಿದೆ. ಈ ಕ್ಷೇತ್ರಕ್ಕೆ ಸಂಬಂಧಿಸಿದ ಪರಿಣತಿಯನ್ನು ಹಂಚಿಕೊಳ್ಳುವ ಮಾರ್ಗಗಳನ್ನು ಸೂಚಿಸುವಂತೆಯೂ ಪ್ರಧಾನಮಂತ್ರಿಯವರು ಉಪಸ್ಥಿತರಿದ್ದ ಪ್ರತಿಯೊಬ್ಬರಿಗೂ ಮನವಿ ಮಾಡಿದರು. "ಭಾರತದಲ್ಲಿ ಹೈನುಗಾರಿಕೆ ಕ್ಷೇತ್ರವನ್ನು ಸಶಕ್ತಗೊಳಿಸುವ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ನಾನು ಡೈರಿ ಉದ್ಯಮದ ಜಾಗತಿಕ ನಾಯಕರನ್ನು ಆಹ್ವಾನಿಸುತ್ತೇನೆ. ಅಂತಾರಾಷ್ಟ್ರೀಯ ಡೈರಿ ಒಕ್ಕೂಟ ಅತ್ಯುತ್ತಮ ಕಾರ್ಯ ಮತ್ತು ಕೊಡುಗೆಗಾಗಿ ನಾನು ಅವರನ್ನು ಶ್ಲಾಘಿಸುತ್ತೇನೆ", ಎಂದು ಪ್ರಧಾನಮಂತ್ರಿ ಅವರು ಭಾಷಣ ಮುಕ್ತಾಯಗೊಳಿಸಿದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್, ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಶ್ರೀ ಪುರುಷೋತ್ತಮ್ ರೂಪಾಲಾ, ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಖಾತೆ ರಾಜ್ಯ ಸಚಿವ ಡಾ. ಎಲ್. ಮುರುಗನ್, ಕೇಂದ್ರ ಕೃಷಿ ಮತ್ತು ಆಹಾರ ಸಂಸ್ಕರಣೆ ಖಾತೆ ರಾಜ್ಯ ಸಚಿವ ಶ್ರೀ ಸಂಜೀವ್ ಕುಮಾರ್ ಬಲ್ಯಾನ್, ಸಂಸತ್ ಸದಸ್ಯರಾದ ಶ್ರೀ ಸುರೇಂದ್ರ ಸಿಂಗ್  ನಗರ್  ಮತ್ತು ಡಾ. ಮಹೇಶ್ ಶರ್ಮಾ,  ಅಂತಾರಾಷ್ಟ್ರೀಯ ಡೈರಿ ಒಕ್ಕೂಟದ ಅಧ್ಯಕ್ಷರಾದ ಶ್ರೀ ಪಿ.ಬ್ರಾಝಾಲೆ ಮತ್ತು ಅಂತಾರಾಷ್ಟ್ರೀಯ ಡೈರಿ ಒಕ್ಕೂಟದ ಮಹಾನಿರ್ದೇಶಕರಾದ ಶ್ರೀಮತಿ ಕ್ಯಾರೋಲಿನ್ ಎಮಂಡ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 75 ಲಕ್ಷ ರೈತರು ತಂತ್ರಜ್ಞಾನದ ಮೂಲಕ ಈ ಕಾರ್ಯಕ್ರಮದಲ್ಲಿ ಸಂಪರ್ಕಿತರಾಗಿದ್ದರು.

ಹಿನ್ನೆಲೆ
ಸೆಪ್ಟೆಂಬರ್ 12 ರಿಂದ 15 ರವರೆಗೆ ನಾಲ್ಕು ದಿನಗಳ ಕಾಲ ನಡೆಯುವ 'ಪೌಷ್ಟಿಕತೆ ಮತ್ತು ಜೀವನೋಪಾಯಕ್ಕೆ ಹೈನುಗಾರಿಕೆ' ವಿಷಯದ ಸುತ್ತ ಕೇಂದ್ರೀಕೃತವಾಗಿರುವ ಐಡಿಎಫ್ ಡಬ್ಲ್ಯುಡಿಎಸ್ 2022ನಲ್ಲಿ ಉದ್ಯಮದ ನಾಯಕರು, ತಜ್ಞರು, ರೈತರು ಮತ್ತು ನೀತಿ ಯೋಜಕರು ಸೇರಿದಂತೆ ಜಾಗತಿಕ ಮತ್ತು ಭಾರತೀಯ ಡೈರಿ ಬಾಧ್ಯಸ್ಥರು ಸಭೆ ಸೇರಿದ್ದಾರೆ. ಐಡಿಎಫ್ ಡಬ್ಲ್ಯೂಡಿಎಸ್ 2022 ರಲ್ಲಿ 50 ದೇಶಗಳಿಂದ ಸುಮಾರು 1500 ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಅಂತಹ ಕೊನೆಯ ಶೃಂಗಸಭೆಯು ಸುಮಾರು ಅರ್ಧ ಶತಮಾನದ ಹಿಂದೆ 1974 ರಲ್ಲಿ ಭಾರತದಲ್ಲಿ ನಡೆದಿತ್ತು.

ಭಾರತೀಯ ಹೈನುಗಾರಿಕೆ ಉದ್ಯಮವು ವಿಶಿಷ್ಟವಾಗಿದೆ ಏಕೆಂದರೆ ಇದು ಸಣ್ಣ ಮತ್ತು ಅತಿಸಣ್ಣ ಹೈನುಗಾರರನ್ನು, ವಿಶೇಷವಾಗಿ ಮಹಿಳೆಯರನ್ನು ಸಬಲೀಕರಣಗೊಳಿಸುವ ಸಹಕಾರಿ ಮಾದರಿಯನ್ನು ಆಧರಿಸಿದೆ. ಪ್ರಧಾನಮಂತ್ರಿಯವರ ದೂರದೃಷ್ಟಿಯಿಂದ ಪ್ರೇರಿತವಾದ ಸರ್ಕಾರವು ಹೈನುಗಾರಿಕೆ ಕ್ಷೇತ್ರದ ಸುಧಾರಣೆಗಾಗಿ ಅನೇಕ ಕ್ರಮಗಳನ್ನು ಕೈಗೊಂಡಿದ್ದು, ಇದರ ಪರಿಣಾಮವಾಗಿ ಕಳೆದ ಎಂಟು ವರ್ಷಗಳಲ್ಲಿ ಹಾಲು ಉತ್ಪಾದನೆಯಲ್ಲಿ ಶೇ.44ಕ್ಕಿಂತ ಹೆಚ್ಚು ಹೆಚ್ಚಳವಾಗಿದೆ. ಭಾರತೀಯ ಡೈರಿ ಉದ್ಯಮದ ಯಶೋಗಾಥೆ, ಜಾಗತಿಕ ಹಾಲಿನ ಸುಮಾರು ಶೇ.23 ರಷ್ಟಿದ್ದು, ವಾರ್ಷಿಕವಾಗಿ ಸುಮಾರು 210 ದಶಲಕ್ಷ ಟನ್ ಗಳಷ್ಟು ಉತ್ಪಾದಿಸುತ್ತದೆ ಮತ್ತು 8 ಕೋಟಿಗೂ ಹೆಚ್ಚು ಹೈನುಗಾರರನ್ನು ಸಬಲೀಕರಣಗೊಳಿಸುತ್ತಿದೆ, ಇದನ್ನು ಐಡಿಎಫ್ ಡಬ್ಲ್ಯೂಡಿಎಸ್ 2022 ರಲ್ಲಿ ಪ್ರದರ್ಶಿಸಲಾಗುವುದು. ಈ ಶೃಂಗಸಭೆಯು ಭಾರತೀಯ ಹೈನುಗಾರರಿಗೆ ಜಾಗತಿಕ ಉತ್ತಮ ರೂಢಿಗಳಿಗೆ ತೆರೆದುಕೊಳ್ಳಲು ನೆರವಾಗುತ್ತದೆ.

 

*****



(Release ID: 1858836) Visitor Counter : 388