ಪ್ರಧಾನ ಮಂತ್ರಿಯವರ ಕಛೇರಿ

ಶಿಕ್ಷಕರ ದಿನದಂದು ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ


"ಶಿಕ್ಷಣ ಕ್ಷೇತ್ರದಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಪ್ರಯತ್ನಗಳು ನಮಗೆಲ್ಲರಿಗೂ ಸ್ಫೂರ್ತಿದಾಯಕವಾಗಿವೆ"

"ಶಿಕ್ಷಕರೂ ಆಗಿರುವ ಭಾರತದ ಹಾಲಿ ರಾಷ್ಟ್ರಪತಿಗಳಿಂದ ಸನ್ಮಾನಿತರಾಗುವುದು ಹೆಚ್ಚು ಮಹತ್ವದ್ದಾಗಿದೆ"

"ಒಬ್ಬ ಶಿಕ್ಷಕನ ಪಾತ್ರ ಒಬ್ಬ ವ್ಯಕ್ತಿಗೆ ಬೆಳಕು ತೋರುವುದು, ಮತ್ತು ಅವರು ಕನಸುಗಳನ್ನು ಕಟ್ಟುವಂತೆ ಮಾಡುವುದು ಮತ್ತು ಕನಸುಗಳನ್ನು ಸಂಕಲ್ಪವಾಗಿ ಪರಿವರ್ತಿಸುವುದನ್ನು ಕಲಿಸುವುದಾಗಿದೆ"

"ಈ ಸರ್ಕಾರಿ ದಾಖಲೆಯು ವಿದ್ಯಾರ್ಥಿಗಳ ಜೀವನದ ಆಧಾರವಾಗಿ ಬದಲಾಗುವ ರೀತಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ".

"2047 ರ ಕನಸನ್ನು ಹೊಂದದಿರುವ ಯಾವುದೇ ವಿದ್ಯಾರ್ಥಿ ಇಡೀ ದೇಶದಲ್ಲಿ ಇರಬಾರದು"


"ದoಡಿ ಯಾತ್ರೆ ಮತ್ತು ಭಾರತ ಬಿಟ್ಟು ತೊಲಗಿ ಚಳವಳಿಗಳ ನಡುವಿನ ವರ್ಷಗಳಲ್ಲಿ ರಾಷ್ಟ್ರವನ್ನು ಆವರಿಸಿದ ಸ್ಫೂರ್ತಿಯನ್ನು ಮರುಸೃಷ್ಟಿಸುವ ಅಗತ್ಯವಿದೆ"

Posted On: 05 SEP 2022 6:18PM by PIB Bengaluru

ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರೊಂದಿಗೆ ಸಂವಾದ ನಡೆಸಿದರು.


ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೆ ಗೌರವ ನಮನ ಸಲ್ಲಿಸಿದರು. ಒಡಿಶಾದ ದೂರದ ಸ್ಥಳಗಳಲ್ಲಿ ಬೋಧನೆ ಮಾಡಿದ ಶಿಕ್ಷಕರೂ ಆಗಿರುವ ಭಾರತದ ಹಾಲಿ ರಾಷ್ಟ್ರಪತಿಗಳಿಂದ ಸನ್ಮಾನಿತರಾಗುವುದು ಹೆಚ್ಚು ಮಹತ್ವದ್ದಾಗಿದೆ ಎಂದು ಅವರು ಶಿಕ್ಷಕರಿಗೆ ತಿಳಿಸಿದರು. "ಇಂದು, ದೇಶವು ಆಜಾದಿ ಕಾ ಅಮೃತ ಮಹೋತ್ಸವದ ತನ್ನ ಬೃಹತ್ ಕನಸುಗಳನ್ನು ಈಡೇರಿಸಲು ಪ್ರಾರಂಭಿಸಿರುವಾಗ, ಶಿಕ್ಷಣ ಕ್ಷೇತ್ರದಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಪ್ರಯತ್ನಗಳು ನಮಗೆಲ್ಲರಿಗೂ ಸ್ಫೂರ್ತಿ ನೀಡುತ್ತವೆ. ಈ ಸಂದರ್ಭದಲ್ಲಿ, ರಾಷ್ಟ್ರಪ್ರಶಸ್ತಿ ಪಡೆದ ಎಲ್ಲ ಶಿಕ್ಷಕರನ್ನು ನಾನು ಅಭಿನಂದಿಸುತ್ತೇನೆ", ಎಂದು ಪ್ರಧಾನಮಂತ್ರಿ ಹೇಳಿದರು.


ಶಿಕ್ಷಕರ ಜ್ಞಾನ ಮತ್ತು ಸಮರ್ಪಣಾ ಭಾವವನ್ನು ಎತ್ತಿ ತೋರಿಸಿದ ಪ್ರಧಾನಮಂತ್ರಿಯವರು, ಅವರ ಅತಿದೊಡ್ಡ ಗುಣ ಸಕಾರಾತ್ಮಕ ದೃಷ್ಟಿಕೋನವಾಗಿದ್ದು, ಇದು ಅವರ ವಿದ್ಯಾರ್ಥಿಗಳ ಸುಧಾರಣೆಗಾಗಿ ಅವಿರತವಾಗಿ ಶ್ರಮಿಸಲು ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದರು. "ಒಬ್ಬ ವ್ಯಕ್ತಿಗೆ ಬೆಳಕನ್ನು ತೋರಿಸುವುದು ಶಿಕ್ಷಕರ ಕೆಲಸವಾಗಿದ್ದು, ಅವರು ಕನಸುಗಳನ್ನು ಬಿತ್ತುತ್ತಾರೆ ಮತ್ತು ಕನಸುಗಳನ್ನು ಸಂಕಲ್ಪವಾಗಿ ಪರಿವರ್ತಿಸಲು ಅವರಿಗೆ ಕಲಿಸುತ್ತಾರೆ" ಎಂದು ಪ್ರಧಾನಮಂತ್ರಿ ಹೇಳಿದರು. 2047ರ ಭಾರತದ ಸ್ಥಿತಿ ಮತ್ತು ಭವಿಷ್ಯ ಇಂದಿನ ವಿದ್ಯಾರ್ಥಿಗಳ ಮೇಲೆ ಅವಲಂಬಿತವಾಗಿದೆ ಮತ್ತು ಅವರ ಭವಿಷ್ಯವನ್ನು ಇಂದಿನ ಶಿಕ್ಷಕರು ರೂಪಿಸುತ್ತಿದ್ದಾರೆ, ಆದ್ದರಿಂದ ನೀವು ವಿದ್ಯಾರ್ಥಿಗಳಿಗೆ ಅವರ ಜೀವನವನ್ನು ರೂಪಿಸಲು ಮತ್ತು ದೇಶದ ರೂಪುರೇಷೆಗಳಿಗೆ ರೂಪ ನೀಡುವಲ್ಲಿ ಸಹಾಯ ಮಾಡುತ್ತಿದ್ದೀರಿ ಎಂದು ಪ್ರಧಾನಮಂತ್ರಿ ಹೇಳಿದರು. ಒಬ್ಬ ಶಿಕ್ಷಕನು ವಿದ್ಯಾರ್ಥಿಯ ಕನಸುಗಳೊಂದಿಗೆ ಸಂಬಂಧ ಹೊಂದಿದಾಗ, ಅವರ ಗೌರವ ಮತ್ತು ವಾತ್ಸಲ್ಯವನ್ನು ಪಡೆಯುವಲ್ಲಿ ಅವನು ಯಶಸ್ಸನ್ನು ಸಾಧಿಸುತ್ತಾನೆ ಎಂದು ಪ್ರಧಾನಮಂತ್ರಿ ಹೇಳಿದರು.


ವಿದ್ಯಾರ್ಥಿಗಳ ಜೀವನದ ವಿವಿಧ ಕ್ಷೇತ್ರಗಳಲ್ಲಿನ ಸಂಘರ್ಷ ಮತ್ತು ವಿರೋಧಾಭಾಸಗಳನ್ನು ತೊಡೆದುಹಾಕುವ ಮಹತ್ವವನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಒಬ್ಬ ವಿದ್ಯಾರ್ಥಿಯು ಶಾಲೆಯಲ್ಲಿ, ಸಮಾಜದಲ್ಲಿ ಮತ್ತು ಮನೆಯಲ್ಲಿ ಯಾವುದೇ ಸಂಘರ್ಷ ಅನುಭವಿಸುತ್ತಿಲ್ಲ ಎಂಬುದನ್ನು ಖಚಿತಪಡಿಸುವುದು ಮುಖ್ಯ ಎಂದು ಅವರು ಹೇಳಿದರು. ವಿದ್ಯಾರ್ಥಿಗಳನ್ನು ಪೋಷಿಸಲು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಕುಟುಂಬಗಳೊಂದಿಗೆ ಪಾಲುದಾರರು ಸಮಗ್ರ ವಿಧಾನದ ಅಗತ್ಯವನ್ನು ಅವರು ಒತ್ತಿ ಹೇಳಿದರು. ವಿದ್ಯಾರ್ಥಿಗಳ ವಿಚಾರದಲ್ಲಿ ಇಷ್ಟಾನಿಷ್ಟಗಳು ಇರಬಾರದು ಮತ್ತು ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ಸಮಾನವಾಗಿ ಕಾಣಬೇಕು ಎಂದು ಅವರು ಸಲಹೆ ನೀಡಿದರು.


ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಬಂದಿರುವ ಮೆಚ್ಚುಗೆಯನ್ನು ಎತ್ತಿ ತೋರಿಸಿದ ಪ್ರಧಾನಮಂತ್ರಿಯವರು, ಇದು ಸರಿಯಾದ ನಿಟ್ಟಿನಲ್ಲಿ ಇಟ್ಟ ಒಂದು ಹೆಜ್ಜೆಯಾಗಿದೆ ಎಂದು ಹೇಳಿದರು. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಒಂದಕ್ಕಿಂತ ಹೆಚ್ಚು ಬಾರಿ ಓದುವ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಮಹಾತ್ಮಾ ಗಾಂಧಿಯವರ ಉದಾಹರಣೆ ನೀಡಿ, ಅವರು ಭಗವದ್ಗೀತೆಯನ್ನು ಮತ್ತೆ ಮತ್ತೆ ಓದುತ್ತಿದ್ದರು, ಪ್ರತಿಬಾರಿಯೂ ಅವರು ಹೊಸ ಅರ್ಥವನ್ನು ಕಂಡುಕೊಳ್ಳುತ್ತಿದ್ದರು ಎಂದರು.  ಈ ಸರ್ಕಾರಿ ದಾಖಲೆಯು ವಿದ್ಯಾರ್ಥಿಗಳ ಜೀವನದ ಆಧಾರವಾಗಿ ಬದಲಾಗುವ ರೀತಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. "ನೀತಿಯನ್ನು ರೂಪಿಸುವಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸಿದ್ದಾರೆ" ಎಂದು ಅವರು ಹೇಳಿದರು. ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಅವರು ಒತ್ತಿ ಹೇಳಿದರು.


ಸ್ವಾತಂತ್ರ್ಯೋತ್ಸವದ 'ಪಂಚ ಪ್ರಾಣ'ದ ಘೋಷಣೆಯನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಈ ಪಂಚ ಪ್ರಾಣಗಳ ಬಗ್ಗೆ ಶಾಲೆಗಳಲ್ಲಿ ನಿಯಮಿತವಾಗಿ ಚರ್ಚಿಸಬಹುದು, ಇದರಿಂದ ಅದರ ಉತ್ಸಾಹವು ವಿದ್ಯಾರ್ಥಿಗಳಿಗೆ ಸ್ಪಷ್ಟವಾಗುತ್ತದೆ ಎಂದು ಸಲಹೆ ನೀಡಿದರು. ಈ ನಿರ್ಣಯಗಳನ್ನು ರಾಷ್ಟ್ರದ ಪ್ರಗತಿಗೆ ಒಂದು ಮಾರ್ಗವಾಗಿ ಶ್ಲಾಘಿಸಲಾಗುತ್ತಿದೆ ಮತ್ತು ಅವುಗಳನ್ನು ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ ತಿಳಿಸುವ ಮಾರ್ಗವನ್ನು ನಾವು ಕಂಡುಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು. "ಇಡೀ ದೇಶದಲ್ಲಿ 2047 ರ ಕನಸು ಕಾಣದ ಯಾವುದೇ ವಿದ್ಯಾರ್ಥಿ ಇರಬಾರದು" ಎಂದು ಪ್ರಧಾನಮಂತ್ರಿ ಹೇಳಿದರು. ದಾಂಡಿ ಯಾತ್ರೆ ಮತ್ತು ಭಾರತ ಬಿಟ್ಟು ತೊಲಗಿ ಚಳವಳಿಗಳ ನಡುವಿನ ವರ್ಷಗಳಲ್ಲಿ ರಾಷ್ಟ್ರವನ್ನು ಆವರಿಸಿದ ಸ್ಫೂರ್ತಿಯನ್ನು ಮರುಸೃಷ್ಟಿಸುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.
ಯುನೈಟೆಡ್ ಕಿಂಗ್ ಡಮ್ ಅನ್ನು ಹಿಂದಿಕ್ಕಿ ವಿಶ್ವದ 5ನೇ ಅತಿ ದೊಡ್ಡ ಆರ್ಥಿಕ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತದ ಸಾಧನೆಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಸುಮಾರು 250 ವರ್ಷಗಳ ಕಾಲ ಭಾರತವನ್ನು ಆಳಿದವರನ್ನು ಹಿಂದಿಕ್ಕಿದ ಸಂತೋಷವು 6ನೇ ಅತಿ ದೊಡ್ಡ ಆರ್ಥಿಕತೆಯಿಂದ 5ನೇ ಅತಿ ದೊಡ್ಡ ಆರ್ಥಿಕತೆಯವರೆಗಿನ ಸುಧಾರಿತ ಶ್ರೇಯಾಂಕದ ಅಂಕಿಅಂಶಗಳನ್ನು ಮೀರಿಸುತ್ತದೆ ಎಂದರು. ಭಾರತವು ಇಂದಿನ ಜಗತ್ತಿನಲ್ಲಿ ಹೊಸ ಎತ್ತರವನ್ನು ಸಾಧಿಸಲು ಕಾರಣವಾದ ತಿರಂಗದ ಸ್ಫೂರ್ತಿಯನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. "ಈ ಮನೋಭಾವವು ಇಂದು ಅತ್ಯಗತ್ಯವಾಗಿದೆ", ಎಂದು ಪ್ರಧಾನಮಂತ್ರಿ ಹೇಳಿದರು. 1930 ರಿಂದ 1942 ರವರೆಗೆ ಪ್ರತಿಯೊಬ್ಬ ಭಾರತೀಯನೂ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದಾಗ ಕಾಣುತ್ತಿದ್ದ ದೇಶಕ್ಕಾಗಿ ಬದುಕುವ, ದುಡಿಯುವ ಮತ್ತು ಸಾಯುವ ಮನೋಭಾವ ಪ್ರತಿಯೊಬ್ಬರಲ್ಲೂ ಪ್ರಜ್ವಲಿಸಬೇಕು ಎಂದು ಪ್ರಧಾನಮಂತ್ರಿ ಕರೆ ನೀಡಿದರು. "ನಾನು ನನ್ನ ದೇಶವನ್ನು ಹಿಂದೆ ಉಳಿಯಲು ಬಿಡುವುದಿಲ್ಲ" ಎಂದು ಪ್ರಧಾನಮಂತ್ರಿ ಹೇಳಿದರು. "ನಾವು ಸಾವಿರಾರು ವರ್ಷಗಳ ಗುಲಾಮಗಿರಿಯ ಸಂಕೋಲೆಗಳನ್ನು ಮುರಿದಿದ್ದೇವೆ, ಮತ್ತು ಈಗ ನಾವು ನಿಲ್ಲಿಸುವುದಿಲ್ಲ. ನಾವು ಮುಂದೆ ಸಾಗುತ್ತೇವೆ", ಎಂದು ಪ್ರಧಾನಮಂತ್ರಿ ಪುನರುಚ್ಚರಿಸಿದರು. ತಮ್ಮ ಭಾಷಣವನ್ನು ಮುಕ್ತಾಯಗೊಳಿಸುವಾಗ, ಪ್ರಧಾನಮಂತ್ರಿಯವರು, ಭಾರತದ ಭವಿಷ್ಯದಲ್ಲಿ ಇದೇ ರೀತಿಯ ಮನೋಭಾವವನ್ನು ಮೈಗೂಡಿಸಿಕೊಳ್ಳಬೇಕು, ಇದರಿಂದ ಅದರ ಶಕ್ತಿಯು ಅನೇಕ ಪಟ್ಟು ಹೆಚ್ಚಾಗುತ್ತದೆ ಎಂದು ದೇಶದ ಶಿಕ್ಷಕರಿಗೆ ತಿಳಿಯಪಡಿಸಿದರು.


ಕೇಂದ್ರ ಶಿಕ್ಷಣ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಮತ್ತು ಶಿಕ್ಷಣ ಖಾತೆ ರಾಜ್ಯ ಸಚಿವೆ ಶ್ರೀಮತಿ ಅನ್ನಪೂರ್ಣ ದೇವಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಹಿನ್ನೆಲೆ
ಶಿಕ್ಷಕರಿಗೆ ರಾಷ್ಟ್ರ ಪ್ರಶಸ್ತಿಗಳನ್ನು ನೀಡುವ ಉದ್ದೇಶವು ತಮ್ಮ ಬದ್ಧತೆ ಮತ್ತು ಕಠಿಣ ಪರಿಶ್ರಮದ ಮೂಲಕ ಶಾಲಾ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವುದಲ್ಲದೆ ತಮ್ಮ ವಿದ್ಯಾರ್ಥಿಗಳ ಜೀವನವನ್ನು ಶ್ರೀಮಂತಗೊಳಿಸುವ ದೇಶದ ಕೆಲವು ಅತ್ಯುತ್ತಮ ಶಿಕ್ಷಕರ ಅನನ್ಯ ಕೊಡುಗೆಯನ್ನು ಗುರುತಿಸುವುದು ಮತ್ತು ಗೌರವಿಸುವುದಾಗಿದೆ. 


ಶಿಕ್ಷಕರಿಗೆ ನೀಡಲಾಗುವ ರಾಷ್ಟ್ರ ಪ್ರಶಸ್ತಿಗಳು ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಕೆಲಸ ಮಾಡುವ ಪ್ರತಿಭಾನ್ವಿತ ಶಿಕ್ಷಕರಿಗೆ ಸಾರ್ವಜನಿಕ ಮನ್ನಣೆಯನ್ನು ನೀಡುತ್ತವೆ. ಈ ವರ್ಷದ ಪ್ರಶಸ್ತಿಗೆ ದೇಶಾದ್ಯಂತದ 45 ಶಿಕ್ಷಕರನ್ನು ಕಠಿಣ ಮತ್ತು ಪಾರದರ್ಶಕವಾದ ಮೂರು ಹಂತದ ಆನ್ ಲೈನ್ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಗಿದೆ.

 

*****



(Release ID: 1856959) Visitor Counter : 265