ಪ್ರಧಾನ ಮಂತ್ರಿಯವರ ಕಛೇರಿ

ಭುಜ್ ನಲ್ಲಿ ಸುಮಾರು 4400 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ


ಪ್ರಧಾನಿ ಅವರಿಂದ ಸ್ಮೃತಿ ವನ ಸ್ಮಾರಕ ಲೋಕಾರ್ಪಣೆ

“ಸ್ಮೃತಿ ವನ ಸ್ಮಾರಕ ಮತ್ತು ವೀರ್ ಬಾಲ್ ಸ್ಮಾರಕ ಗುಜರಾತ್ ನ ಕಛ್ ಮತ್ತು ಇಡೀ ದೇಶ ಅನುಭವಿಸಿದ ನೋವಿನ ಸಂಕೇತ’’

“ಕಛ್ ತನ್ನ ಕಾಲ ಮೇಲೆ ತಾನು ನಿಲ್ಲಲು ಸಾಧ್ಯವಿಲ್ಲವೆಂದು ಹಲವರು ಹೇಳುತ್ತಿದ್ದರು. ಆದರೆ ಇಂದು ಕಛ್ ಜನತೆ ಸಂಪೂರ್ಣ ಚಿತ್ರಣವನ್ನೇ ಬದಲಾಯಿಸಿದ್ದಾರೆ’’

“ಸಾವು ಮತ್ತು ವಿಪತ್ತಿನ ನಡುವೆ 2001ರಲ್ಲಿ ನಾವು ಕೆಲವು ನಿರ್ಣಯಗಳನ್ನು ಮಾಡಿದ್ದನ್ನು ನೀವು ನೋಡಬಹುದು ಮತ್ತು ಇಂದು ಅವು ಸಾಕಾರವಾಗಿವೆ. ಅಂತೆಯೇ, ನಾವು ಇಂದು ಮಾಡುವ ಸಂಕಲ್ಪಗಳು 2047ರ ವೇಳೆಗೆ ಖಂಡಿತಾ ಸಾಕಾರಗೊಳ್ಳಲಿವೆ’’

“ಕಛ್ ತಾನೊಂದೇ ಮೇಲೆದಿದ್ದು ಮಾತ್ರವಲ್ಲದೆ, ಇಡೀ ಗುಜರಾತ್ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದೆ’’


“ಗುಜರಾತ್ ಪ್ರಕೃತಿ ವಿಕೋಪಗಳನ್ನು ಎದುರಿಸುತ್ತಿದ್ದಾಗ, ಸಂಚು ರೂಪಿಸುವ ಅವಧಿ ಆರಂಭವಾಯಿತು. ದೇಶದಲ್ಲಿ ಮತ್ತು ಜಗತ್ತಿನಲ್ಲಿ ಗುಜರಾತ್ ನ ಮಾನಹಾನಿ ಮಾಡಲು ಮತ್ತು  ಬಂಡವಾಳ ಹರಿದುಬರುವುದನ್ನು ತಡೆಯಲು ಒಂದಾದ ನಂತರ ಒಂದು ಪಿತೂರಿಗಳನ್ನು ಹೆಣೆಯಲಾಯಿತು’’

“ಧೋಲವಿರದ ಪ್ರತಿಯೊಂದು ಇಟ್ಟಿಗೆಯು ನಮ್ಮ ಪೂರ್ವಜರ ಕೌಶಲ್ಯ, ಜ್ಞಾನ ಮತ್ತು ವಿಜ್ಞಾನವನ್ನು ತೋರಿಸುತ್ತದೆ’’

“ಕಛ್ ನ ಅಭಿವೃದ್ಧಿ ಸಬ್ ಕಾ ಪ್ರಯಾಸ್ ನ ಅರ್ಥಪೂರ್ಣ ಬದಲಾವಣೆಗೆ ಒಂದು ಅತ್ತ್ಯುತ್ತಮ ಉದಾಹರಣೆಯಾಗಿದೆ’’

Posted On: 28 AUG 2022 2:35PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭುಜ್‌ನಲ್ಲಿ ಸುಮಾರು 4400 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಅದಕ್ಕೂ ಮುನ್ನ ಅವರು ಭುಜ್ ಜಿಲ್ಲೆಯಲ್ಲಿ ಸ್ಮೃತಿ ವಾನ್ ಸ್ಮಾರಕವನ್ನು ಉದ್ಘಾಟಿಸಿದರು. ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಭುಜ್‌ನಲ್ಲಿರುವ ಸ್ಮೃತಿ ವಾನ್ ಸ್ಮಾರಕ ಮತ್ತು ಅಂಜಾರ್‌ನಲ್ಲಿರುವ ವೀರ್ ಬಾಲ್ ಸ್ಮಾರಕಗಳು ಕಛ್, ಗುಜರಾತ್ ಮತ್ತು ಇಡೀ ದೇಶ ಹಂಚಿಕೊಂಡ ನೋವಿನ ಸಂಕೇತಗಳಾಗಿವೆ ಎಂದು ಹೇಳಿದರು. ಅಂಜಾರ್ ಸ್ಮಾರಕದ ಪರಿಕಲ್ಪನೆಯು ಮೂಡಿದಾಗ ಮತ್ತು ಸ್ವಯಂಪ್ರೇರಿತ ಕೆಲಸವಾದ ‘ಕರ ಸೇವೆ’ ಮೂಲಕ ಸ್ಮಾರಕ ಪೂರ್ಣಗೊಳಿಸಲು ನಿರ್ಣಯ ತೆಗೆದುಕೊಳ್ಳಲಾಯಿತು ಎಂದು ಅವರು ಸ್ಮರಿಸಿಕೊಂಡರು. ಭೀಕರ ಭೂಕಂಪದಲ್ಲಿ ಬಲಿಯಾದ ಜೀವಗಳ ಸ್ಮರಣಾರ್ಥ ಭಾರವಾದ ಹೃದಯದಿಂದ ಸ್ಮಾರಕಗಳನ್ನು ಸಮರ್ಪಿಸಲಾಗುತ್ತಿದೆ ಎಂದರು. ಇಂದು ಜನರು ಆತ್ಮೀಯವಾಗಿ ಸ್ವಾಗತ ಮಾಡಿದ್ದಕ್ಕಾಗಿ ಅವರು ಧನ್ಯವಾದಗಳನ್ನು ಅರ್ಪಿಸಿದರು. ಇಂದು ತನ್ನ ಹೃದಯದಲ್ಲಿ ಅನೇಕ ಭಾವನೆಗಳು ಹಾದುಹೋದವು ಎಂದು ನೆನಪಿಸಿಕೊಂಡರು ಮತ್ತು ಅಗಲಿದ ಆತ್ಮಗಳನ್ನು ಸ್ಮರಿಸುವಲ್ಲಿ, ಸ್ಮೃತಿ ವಾನ್ ಸ್ಮಾರಕವು 9/11 ಸ್ಮಾರಕ ಮತ್ತು ಹಿರೋಶಿಮಾ ಸ್ಮಾರಕಕ್ಕೆ ಸಮಾನವಾಗಿದೆ ಎಂದು ಎಲ್ಲಾ ವಿನಮ್ರವಾಗಿ ನುಡಿದರು. ಪ್ರಕೃತಿಯ ಸಮತೋಲನ ಮತ್ತು ನಡವಳಿಕೆಯು ಎಲ್ಲರಿಗೂ ಸ್ಪಷ್ಟವಾಗಿ ತಿಳಿಯಲು ಜನರು ಮತ್ತು ಶಾಲಾ ಮಕ್ಕಳನ್ನು ಸ್ಮಾರಕಕ್ಕೆ ಅಗ್ಗಾಗ್ಗೆ ಭೇಟಿ ನೀಡಬೇಕು ಎಂದು  ಹೇಳಿದರು. ಪ್ರಧಾನಿ ವಿನಾಶಕಾರಿ ಭೂಕಂಪದ ಮುನ್ನಾದಿನವನ್ನು ನೆನಪಿಸಿಕೊಂಡರು. “ಭೂಕಂಪ ಸಂಭವಿಸಿದಾಗ ನನಗೆ ನೆನಪಿದೆ, ನಾನು ಎರಡನೇ ದಿನವೇ ಇಲ್ಲಿಗೆ ತಲುಪಿದ್ದೆ. ಆಗ ನಾನು ಮುಖ್ಯಮಂತ್ರಿಯೂ ಆಗಿರಲಿಲ್ಲ, ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿದ್ದೆ ಅಷ್ಟೇ. ನಾನು ಹೇಗೆ ಮತ್ತು ಎಷ್ಟು ಜನರಿಗೆ ಸಹಾಯ ಮಾಡಲು ಸಾಧ್ಯವಿದೆ ಎಂಬುದರ ಅರಿವು ನನಗಿರಲಿಲ್ಲ. ಆದರೆ ದುಃಖದ ಸಮಯದಲ್ಲಿ ನಾನು ನಿಮ್ಮೆಲ್ಲರ ನಡುವೆ ಇರುತ್ತೇನೆಂದು ನಿರ್ಧರಿಸಿದ್ದೆ ಮತ್ತು ನಾನು ಮುಖ್ಯಮಂತ್ರಿ ಆದ ನಂತರ ಆ ಸೇವೆಯ ಅನುಭವ ನನಗೆ ತುಂಬಾ ಸಹಾಯ ಮಾಡಿತು’’ ಎಂದು ಅವರು ಹೇಳಿದರು. ಆ ಪ್ರದೇಶದ ಜೊತೆಗಿನ ಅವರ ಆಳವಾದ ಮತ್ತು ಸುದೀರ್ಘ ಒಡನಾಟವನ್ನು ಅವರು ನೆನಪಿಸಿಕೊಂಡರು ಮತ್ತು ಬಿಕ್ಕಟ್ಟಿನ ಸಂದರ್ಭದಲ್ಲಿ ಕೆಲಸ ಮಾಡಿದ ಜನರನ್ನು ಅವರು ನೆನಪಿಸಿಕೊಂಡರು ಮತ್ತು ಗೌರವ ವಂದನೆ ಸಲ್ಲಿಸಿದರು. ಪ್ರಧಾನಮಂತ್ರಿ ಮಾತು ಮುಂದುವರಿಸಿ “ಕಛ್ ಸದಾ ಒಂದು ವಿಶೇಷತೆಯನ್ನು ಹೊಂದಿದೆ, ಆ ಬಗ್ಗೆ ನಾನು ಆಗಾಗ್ಗೆ ಚರ್ಚಿಸುತ್ತೇನೆ. ಇಲ್ಲಿ ದಾರಿಯಲ್ಲಿ ನಡೆಯುವ ವ್ಯಕ್ತಿಯೊಬ್ಬ ಕನಸು ಬಿತ್ತಿದರೂ ಅದನ್ನು ದೊಡ್ಡ ಆಲದ ಮರವನ್ನಾಗಿ ಬೆಳೆಸಲು ಇಡೀ ಕಛ್ ಒಳಗೊಳ್ಳುತ್ತದೆ. ಕಛ್ನ ಸಂಸ್ಕಾರ ಪ್ರತಿ ಆತಂಕವನ್ನು, ಪ್ರತಿ ಮೌಲ್ಯಮಾಪನವನ್ನು ತಪ್ಪಾಗಿಸಿವೆ. ಈಗ ಕಛ್ ತನ್ನ ಕಾಲಿನ ಮೇಲೆ ನಿಲ್ಲಲು ಸಾಧ್ಯವಿಲ್ಲ ಎಂದು ಅನೇಕರು ಹೇಳಿದ್ದರು, ಆದರೆ ಇಂದು ಕಛ್ನ ಜನರು ಇಲ್ಲಿನ ಇಡೀ ಚಿತ್ರಣವನ್ನು ಸಂಪೂರ್ಣವಾಗಿ ಬದಲಾಯಿಸಿದ್ದಾರೆ ಎಂದರು.  ಭೂಕಂಪದ ನಂತರದ ಮೊದಲ ದೀಪಾವಳಿಯನ್ನು ತಾವು ಮತ್ತು ತಮ್ಮ ರಾಜ್ಯ ಸಚಿವ ಸಂಪುಟ ಸಹೋದ್ಯೋಗಿಗಳು ಜನರೊಂದಿಗೆ ಒಗ್ಗಟ್ಟಿನಿಂದ ಪ್ರದೇಶದಲ್ಲಿ ಆಚರಿಸಿದ್ದನ್ನು ಪ್ರಧಾನಿ ಸ್ಮರಿಸಿಕೊಂಡರು. ಆ ಸವಾಲಿನ ಘಳಿಗೆಯಲ್ಲಿ, ವಿಪತ್ತನ್ನು ನಾವು ಅವಕಾಶವನ್ನಾಗಿ ಪರಿವರ್ತಿಸುತ್ತೇವೆ(‘ಆಪ್ದಾ ಸೆ ಅವಸರ್’) ಎಂದು ಘೋಷಿಸಿದ್ದೇವು. ನಾನು ಕೆಂಪು ಕೋಟೆಯ ಆವರಣದಿಂದ “2047 ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ದೇಶವಾಗಲಿದೆ’’ ಎಂದು ಹೇಳಿದ್ದೇನೆ. ಅಂದು ಸಾವು ಮತ್ತು ದುರಂತದ ನಡುವೆ ನಾವು ಕೆಲವು ನಿರ್ಣಯಗಳನ್ನು ಮಾಡಿದ್ದೇವೆ ಮತ್ತು ಅವು ಇಂದು ಸಾಕಾರವಾಗಿವೆ ಎಂಬುದನ್ನು ನೀವು ನೋಡಬಹುದು. ಅಂತೆಯೇ ಇಂದು ನಾವು ಏನನ್ನುನಿರ್ಣಯಿಸುತ್ತೇವೆಯೋ 2047 ರಲ್ಲಿ ನಾವು ಖಂಡಿತವಾಗಿಯೂ ಅವುಗಳನ್ನು ಸಾಕಾರಗೊಳಿಸುತ್ತೇವೆ ಎಂದು ಅವರು ಹೇಳಿದರು. 2001ರಲ್ಲಿ ಸಂಪೂರ್ಣ ವಿನಾಶದ ನಂತರ ಮಾಡಿದ ವಿಶ್ವಾಸಾರ್ಹ ಕಾರ್ಯಗಳನ್ನು  ಪ್ರಮುಖವಾಗಿ ಪ್ರಸ್ತಾಪಿಸಿದ ಅವರು, 2003ರಲ್ಲಿ ಕಛ್ ನಲ್ಲಿ ಕ್ರಾಂತಿಗುರು ಶ್ಯಾಮ್‌ ಜಿ ಕೃಷ್ಣವರ್ಮ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು, ಜೊತೆಗೆ 35 ಕ್ಕೂ ಅಧಿಕ ಹೊಸ ಕಾಲೇಜುಗಳನ್ನು ಸಹ ತೆರೆಯಲಾಯಿತು ಎಂದು ಹೇಳಿದರು. ಭೂಕಂಪ ನಿಗ್ರಹ ಜಿಲ್ಲಾ ಆಸ್ಪತ್ರೆಗಳು ಮತ್ತು ಪ್ರದೇಶದಲ್ಲಿ 200ಕ್ಕೂ ಅಧಿಕ  ಚಿಕಿತ್ಸಾಲಯಗಳ ಕಾರ್ಯನಿರ್ವಹಣೆ ಕುರಿತು ಅವರು ಮಾತನಾಡಿದರು ಮತ್ತು ಅಂದಿನ ದಿನಗಳಲ್ಲಿದ್ದ ನೀರಿನ ಕೊರತೆ ದೂರವಾಗಿ ಇಂದು ಪ್ರತಿ ಮನೆಗೆ ಪವಿತ್ರ ನರ್ಮದೆಯ ಶುದ್ಧ ನೀರು ಸಿಗುತ್ತಿದೆ, ಪ್ರದೇಶದಲ್ಲಿ ನೀರಿನ ಲಭ್ಯತೆಯನ್ನು ಖಾತ್ರಿಪಡಿಸುವ ಕ್ರಮಗಳ ಬಗ್ಗೆ ಅವರು ವಿವರಿಸಿದರು.  ಕಛ್ ಜನತೆಯ ಆಶೀರ್ವಾದದಿಂದ ಎಲ್ಲಾ ಪ್ರಮುಖ ಪ್ರದೇಶಗಳಿಗೆ ನರ್ಮದಾ ನದಿಯ ನೀರಿನ ಸಂಪರ್ಕ ಕಲ್ಪಿಸಲಾಗಿದೆ ಎಂದರು. “ಕಛ್ ಭುಜ್ ನಾಲೆಯು ಪ್ರದೇಶದ ಜನರು ಮತ್ತು ರೈತರಿಗೆ ಪ್ರಯೋಜನ ಕಲ್ಪಿಸುತ್ತದೆ’’ ಎಂದು ಅವರು ಹೇಳಿದರು. ಹಣ್ಣು ಉತ್ಪಾದನೆಯಲ್ಲಿ ಇಡೀ ಗುಜರಾತ್‌ನಲ್ಲಿಯೇ ಪ್ರಥಮ ಸ್ಥಾನ ಪಡೆದಿರುವ ಕಛ್ ಜಿಲ್ಲೆಗೆ ಅವರು ಅಭಿನಂದನೆ ಸಲ್ಲಿಸಿದರು. ಜಾನುವಾರು ಸಾಕಾಣೆ ಮತ್ತು ಹಾಲು ಉತ್ಪಾದನೆಯಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದೆ ಎಂದು ಅವರು ಶ್ಲಾಘಿಸಿದರು. “ಕಛ್ ತನ್ನಷ್ಟಕ್ಕೆ ತಾನು ಪ್ರಗತಿ ಸಾಧಿಸಿರುವುದು ಮಾತ್ರವಲ್ಲದೆ ಇಡೀ ಗುಜರಾತ್ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದೆ’’ಎಂದು ಅವರು ಹೇಳಿದರು.ಗುಜರಾತ್ ಒಂದರ ನಂತರ ಒಂದು ಬಿಕ್ಕಟ್ಟಿಗೆ ಸಿಲುಕಿದ ಸಮಯವನ್ನು ಪ್ರಧಾನಿ ಅವರು ಸ್ಮರಿಸಿಕೊಂಡರು. “ಗುಜರಾತ್ ಪ್ರಕೃತಿ ವಿಕೋಪವನ್ನು ಎದುರಿಸುತ್ತಿರುವಾಗ ಪಿತೂರಿಗಳ ಅವಧಿ ಪ್ರಾರಂಭವಾಯಿತು. ದೇಶ ಮತ್ತು ಇಡೀ ಜಗತ್ತಿನಲ್ಲಿ ಗುಜರಾತಿಗೆ ಮಾನಹಾನಿ ಮಾಡುವ ಉದ್ದೇಶದಿಂದ ಇಲ್ಲಿ ಬಂಡವಾಳ ಹೂಡಿಕೆಯನ್ನು ತಡೆಯಲು ಒಂದರ ಹಿಂದೆ ಒಂದು ಪಿತೂರಿ ಹೆಣೆಯಲಾಗಿದೆ. ಇಂತಹ ಪರಿಸ್ಥಿತಿಯಲ್ಲೂ ಗುಜರಾತ್ ವಿಪತ್ತು ನಿರ್ವಹಣಾ ಕಾಯ್ದೆಯನ್ನು ಜಾರಿಗೊಳಿಸಿದ ದೇಶದ ಮೊದಲ ರಾಜ್ಯವಾಯಿತು ಎಂಬುದನ್ನು ಪ್ರಧಾನಿ ಪ್ರಮುಖವಾಗಿ ಪ್ರಸ್ತಾಪಿಸಿದರು. ಕಾಯಿದೆಯ ಪ್ರೇರಣೆ ಪಡೆದು ಇಡೀ ದೇಶಕ್ಕೆ ಇದೇ ರೀತಿಯ ಕಾನೂನನ್ನು ರೂಪಿಸಲಾಗಿದೆ. ಈ ಕಾಯ್ದೆಯು ಸಾಂಕ್ರಾಮಿಕ ಸಮಯದಲ್ಲಿ ದೇಶದ ಪ್ರತಿಯೊಂದು ಸರ್ಕಾರಗಳಿಗೂ ಸಹಾಯ ಮಾಡಿದೆ’’ ಎಂದು ಅವರು ಹೇಳಿದರು. ಗುಜರಾತಿನ ಅವಹೇಳನ ಮತ್ತು ಪಿತೂರಿಗಳನ್ನು ಧಿಕ್ಕರಿಸುವ ಎಲ್ಲಾ ಪ್ರಯತ್ನಗಳನ್ನು ನಿರ್ಲಕ್ಷಿಸಿ, ಗುಜರಾತ್ ಹೊಸ ಕೈಗಾರಿಕಾ ಪಥವನ್ನು ರೂಪಿಸಿತು ಎಂದು ಅವರು ಹೇಳಿದರು. ಅದರಲ್ಲಿ ಕಚ್ ಅತಿ ದೊಡ್ಡ ಫಲಾನುಭವಿಗಳಲ್ಲಿ  ಒಂದು. ಕಛ್ ಇಂದು ವಿಶ್ವದಲ್ಲೇ ಅತಿ ದೊಡ್ಡ ಸಿಮೆಂಟ್ ಸ್ಥಾವರಗಳನ್ನು ಹೊಂದಿದೆ ಎಂದು ಹೇಳಿದರು. ವೆಲ್ಡಿಂಗ್ ಪೈಪ್ ತಯಾರಿಕೆಯಲ್ಲಿ ಕಚ್ ವಿಶ್ವದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಕಛ್ ನಲ್ಲಿ ವಿಶ್ವದ ಎರಡನೇ ಅತಿ ದೊಡ್ಡ ಜವಳಿ ಸ್ಥಾವರವಿದೆ. ಏಷ್ಯಾದ ಮೊದಲ ವಿಶೇಷ ವಿತ್ತ ವಲಯ(ಎಸ್ ಇಝಡ್) ಕಛ್ ನಲ್ಲಿ ಆರಂಭವಾಯಿತು. ಕಾಂಡ್ಲಾ ಮತ್ತು ಮುಂದ್ರಾ ಬಂದರುಗಳು ಭಾರತದ ಸರಕುಗಳ ಶೇ.30ರಷ್ಟನ್ನು ನಿರ್ವಹಿಸುತ್ತವೆ ಮತ್ತು ಇವು ದೇಶಕ್ಕೆ ಶೇ.30ರಷ್ಟು ಉಪ್ಪನ್ನು ಉತ್ಪಾದಿಸುತ್ತವೆ. ಕಛ್, ಸೌರ ಮತ್ತು ಪವನ ಶಕ್ತಿಯಿಂದ 2500 ಮೆಗಾವ್ಯಾಟ್  ವಿದ್ಯುತ್ ಉತ್ಪಾದಿಸುತ್ತದೆ ಮತ್ತು ಕಛ್ ನಲ್ಲಿ ಅತಿದೊಡ್ಡ ಸೌರ ಹೈಬ್ರಿಡ್ ಪಾರ್ಕ್ ತಲೆ ಎತ್ತಲಿದೆ. ದೇಶದಲ್ಲಿಂದು ನಡೆಯುತ್ತಿರುವ ಹಸಿರು ಮನೆ ಅಭಿಯಾನದಲ್ಲಿ ಗುಜರಾತ್ ದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಅಂತೆಯೇ, ಗುಜರಾತ್ ವಿಶ್ವದ ಗ್ರೀನ್ ಹೌಸ್ ರಾಜಧಾನಿಯಾಗಿ ತನ್ನ ಛಾಪು ಮೂಡಿಸಿದಾಗ, ಕಛ್ ಅದಕ್ಕೆ ಸಾಕಷ್ಟು ಕೊಡುಗೆ ನೀಡಲಿದೆ ಎಂದರು. ಪ್ರಧಾನಿ ಅವರು ಕೆಂಪು ಕೋಟೆಯ ಆವರಣದಿಂದ ಘೋಷಿಸಿದ್ದ ಪಂಚಪ್ರಾಣದಲ್ಲಿ ಒಂದಾದ ನಮ್ಮ ಹೆಮ್ಮೆಯ ಪರಂಪರೆಯನ್ನು ಸ್ಮರಿಸುತ್ತಾ, ಕಛ್ನ ಸಮೃದ್ಧಿ ಮತ್ತು ಶ್ರೀಮಂತಿಕೆಯನ್ನು ಪ್ರಮುಖವಾಗಿ ಉಲ್ಲೇಖಿಸಿದರು.ಧೋಲವೀರ ನಗರ ನಿರ್ಮಾಣದಲ್ಲಿನ ಪರಿಣತಿಯನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು. “ಕಳೆದ ವರ್ಷವಷ್ಟೇ ಧೋಲಾವೀರಾಗೆ ವಿಶ್ವ ಪಾರಂಪರಿಕ ತಾಣದ ಸ್ಥಾನಮಾನ ದೊರೆತಿದೆ. ಧೋಲವೀರದ ಪ್ರತಿಯೊಂದು ಇಟ್ಟಿಗೆಯು ನಮ್ಮ ಪೂರ್ವಜರ ಕೌಶಲ್ಯ, ಜ್ಞಾನ ಮತ್ತು ವಿಜ್ಞಾನವನ್ನು ಪ್ರದರ್ಶಿಸುತ್ತದೆ’’ ಎಂದು ಪ್ರಧಾನಿ ಹೇಳಿದರು. ಅಂತೆಯೇ, ದೀರ್ಘಕಾಲದಿಂದ ನಿರ್ಲಕ್ಷಿಸಲ್ಪಟ್ಟ ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸುವುದು ಸಹ ಒಬ್ಬರ ಪರಂಪರೆಯ ಬಗ್ಗೆ ಹೆಮ್ಮೆ ಪಡುವ ಭಾಗವಾಗಿದೆ ಎಂದರು. ಶ್ಯಾಮ್‌ ಜಿ ಕೃಷ್ಣ ವರ್ಮಾ ಅವರ ಅವಶೇಷಗಳನ್ನು ಮರಳಿ ತರುವ ಸುಯೋಗ ತಮಗೆ ದೊರಕಿತ್ತು ಎಂದು ಅವರು ಸ್ಮರಿಸಿದರು. ಮಾಂಡವಿಯಲ್ಲಿನ ಸ್ಮಾರಕ ಮತ್ತು ಏಕತೆಯ ಪ್ರತಿಮೆ ಕೂಡ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಗಳು ಎಂದು ಅವರು ಹೇಳಿದರು. ಕಛ್ ನ ಅಭಿವೃದ್ಧಿಯು ‘ಸಬ್ ಕಾ ಪ್ರಯಾಸ್’ ನಿಂದಾಗಿ ಆಗಿರುವ ಅರ್ಥಪೂರ್ಣ ಬದಲಾವಣೆಗೆ ಪರಿಪೂರ್ಣ ಉದಾಹರಣೆಯಾಗಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. “ಕಛ್ ಕೇವಲ ಒಂದು ಸ್ಥಳವಲ್ಲ, ಆದರೆ ಇದು ಒಂದು ಚೈತನ್ಯ, ಜೀವಂತ ಭಾವನೆಯ ಸಂಕೇತ. ಈ ಚೈತನ್ಯವೇ ಆಜಾದಿ ಕಾ ಅಮೃತ ಕಾಲದ ಬೃಹತ್ ಸಂಕಲ್ಪಗಳ ಸಾಕಾರದ ಮಾರ್ಗವನ್ನು ನಮಗೆ ತೋರಿಸುತ್ತದೆ’’ ಎಂದು ಪ್ರಧಾನಮಂತ್ರಿ ಹೇಳಿದರು. ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್, ಸಂಸದ ಶ್ರೀ ಸಿ. ಆರ್. ಪಾಟೀಲ್ ಮತ್ತು ಗುಜರಾತ್ ವಿಧಾನಸಭೆಯ ಸ್ಪೀಕರ್ ಶ್ರೀ ವಿನೋದ್ ಎಲ್ ಚಾವ್ಡಾ, ಡಾ. ನಿಮಾಬೆನ್ ಆಚಾರ್ಯ, ರಾಜ್ಯ ಸಚಿವರಾದ ಕೀರ್ತಿಸಿಂಗ್ ವಘೇಲಾ ಮತ್ತು ಜಿತುಭಾಯಿ ಚೌಧರಿ  ಉಪಸ್ಥಿತರಿದ್ದರು.

ಯೋಜನೆಯ ವಿವರಗಳು : ಪ್ರಧಾನಮಂತ್ರಿ ಭುಜ್ ಜಿಲ್ಲೆಯಲ್ಲಿ ಸ್ಮೃತಿ ವಾನ್ ಸ್ಮಾರಕವನ್ನು ಉದ್ಘಾಟಿಸಿದರು. ಸ್ಮೃತಿ ವಾನ್ ಪ್ರಧಾನಮಂತ್ರಿ ಅವರ ದೂರದೃಷ್ಟಿಯ ಒಂದು ಉಪಕ್ರಮವಾಗಿದೆ.ಭುಜ್‌ನಲ್ಲಿ ಕೇಂದ್ರೀಕೃತವಾಗಿದ್ದ 2001ರ ಭೂಕಂಪದ ಸಮಯದಲ್ಲಿ ಪ್ರಾಣ ಕಳೆದುಕೊಂಡ ಸುಮಾರು 13,000 ಜನರ ಸಾವಿನ ನಂತರ ಜನರು ತೋರಿದ ಪುಟ್ಟಿದೇಳುವ ಮನೋಭಾವ ಪ್ರೇರೇಪಿಸಲು ಸುಮಾರು 470 ಎಕರೆ ಪ್ರದೇಶದಲ್ಲಿ ಇದನ್ನು ನಿರ್ಮಿಸಲಾಗಿದೆ. ಸ್ಮಾರಕವು ಭೂಕಂಪದ ಸಮಯದಲ್ಲಿ ಪ್ರಾಣ ಕಳೆದುಕೊಂಡ ಜನರ ಹೆಸರುಗಳನ್ನು ಒಳಗೊಂಡಿದೆ. ಅತ್ಯಾಧುನಿಕ ಸ್ಮೃತಿ ವ್ಯಾನ್ ಭೂಕಂಪದ ವಸ್ತುಸಂಗ್ರಹಾಲಯವು ಏಳು ವಿಷಯಗಳನ್ನು ಆಧರಿಸಿ ಏಳು ಬ್ಲಾಕ್‌ಗಳಲ್ಲಿ ವಿಭಜಿಲಾಗಿದೆ: ಪುನರ್ಜನ್ಮ, ಮರುಶೋಧನೆ, ಮರುಸ್ಥಾಪನೆ, ಪುನರ್ ನಿರ್ಮಾಣ, ಮರುಚಿಂತನೆ, ಪುನರುಜ್ಜೀವನ ಮತ್ತು ನವೀಕರಣ. ಮೊದಲ ಬ್ಲಾಕ್ ಭೂಮಿಯ ವಿಕಸನ ಮತ್ತು ಪ್ರತಿ ಬಾರಿ ಜಯಿಸಲು ಭೂಮಿಯ ಸಾಮರ್ಥ್ಯವನ್ನು ಚಿತ್ರಿಸುವ ಮರುಜನ್ಮದ ವಿಷಯವನ್ನು  ಆಧರಿಸಿದೆ. ಎರಡನೇ ಬ್ಲಾಕ್ ಗುಜರಾತ್‌ನ ಭೂಗೋಳ ಮತ್ತು ರಾಜ್ಯವು  ಎದುರಿಸಿದ ವಿವಿಧ ಗಂಭೀರ ನೈಸರ್ಗಿಕ ವಿಕೋಪಗಳನ್ನು ತೋರಿಸುತ್ತದೆ. ಮೂರನೇ ಬ್ಲಾಕ್, 2001ರ ಭೂಕಂಪದ ನಂತರದ ತಕ್ಷಣದ ಪರಿಣಾಮಗಳ ಚಿತ್ರಣವನ್ನು ಹಿಂತಿರುಗಿ ನೋಡುವಂತೆ ಮಾಡುತ್ತದೆ.   ಬ್ಲಾಕ್‌ನಲ್ಲಿರುವ ಗ್ಯಾಲರಿಗಳು ವ್ಯಕ್ತಿಗಳು ಮತ್ತು ಸಂಸ್ಥೆಗಳು ಕೈಗೊಂಡಿರುವ ಭಾರಿ ಪ್ರಮಾಣದ ಪರಿಹಾರ ಪ್ರಯತ್ನಗಳನ್ನು ತಿಳಿಸುತ್ತವೆ. ನಾಲ್ಕನೇ ಬ್ಲಾಕ್, ಗುಜರಾತ್‌ನ ಪುನರ್ ನಿರ್ಮಾಣದ ಉಪಕ್ರಮಗಳು ಮತ್ತು 2001ರ ಭೂಕಂಪದ ನಂತರದ ಯಶೋಗಾಥೆಗಳನ್ನು ಪ್ರದರ್ಶಿಸುತ್ತದೆ. ಐದನೇ ಬ್ಲಾಕ್, ಸಂದರ್ಶಕರಿಗೆ ವಿವಿಧ ರೀತಿಯ ವಿಪತ್ತುಗಳ ಬಗ್ಗೆ ಮತ್ತು ಯಾವ ಸಮಯದಲ್ಲಿ ಯಾವ ರೀತಿಯ ವಿಪತ್ತಿಗೆ ಭವಿಷ್ಯದ ಸಿದ್ಧತೆಯ ಬಗ್ಗೆ ಯೋಚಿಸಲು ಮತ್ತು ತಿಳಿಯಲು ಪ್ರೇರೇಪಣೆ ನೀಡುತ್ತದೆ. ಆರನೇ ಬ್ಲಾಕ್ ನಮಗೆ ಸಿಮ್ಯುಲೇಟರ್ ಸಹಾಯದಿಂದ ಭೂಕಂಪದ ಅನುಭವ ಪಡೆಯಲು ಸಹಾಯ ಮಾಡುತ್ತದೆ. ಅನುಭವವನ್ನು 5ಡಿ ಸಿಮ್ಯುಲೇಟರ್‌ನಲ್ಲಿ ವಿನ್ಯಾಸಗೊಳಿಸಲಾಗಿದೆ ಮತ್ತು ಇದನ್ನು ಭೂಮಿಯ ಮೇಲಿನ ವಾಸ್ತವ ಚಿತ್ರಣವನ್ನು ಜನರಿಗೆ ಕಟ್ಟಿಕೊಡಲು ಉದ್ದೇಶಿಸಲಾಗಿದೆ. ಏಳನೇ ಬ್ಲಾಕ್ ಮೃತರ ಆತ್ಮಗಳಿಗೆ ಗೌರವ ಸಲ್ಲಿಸಲು ಸ್ಥಳಾವಕಾಶವನ್ನು ಒದಗಿಸುತ್ತದೆ.  ಪ್ರಧಾನಮಂತ್ರಿ ಅವರು ಭುಜ್‌ನಲ್ಲಿ ಸುಮಾರು 4400 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಸರ್ದಾರ್ ಸರೋವರ ಯೋಜನೆಯ ಕಚ್ಛ್ ಶಾಖಾ ನಾಲೆಯನ್ನೂ ಪ್ರಧಾನಿ ಉದ್ಘಾಟಿಸಿದರು. ಕಾಲುವೆಯ ಒಟ್ಟು ಉದ್ದ ಸುಮಾರು 357 ಕಿ.ಮೀ., ಕಾಲುವೆಯ ಒಂದು ಭಾಗವನ್ನು 2017ರಲ್ಲಿ ಪ್ರಧಾನಮಂತ್ರಿ ಉದ್ಘಾಟಿಸಿದರು ಮತ್ತು ಉಳಿದ ಭಾಗವನ್ನು ಈಗ ಉದ್ಘಾಟನೆ ಮಾಡಲಾಗಿದೆ. ಕಛ್‌ನಲ್ಲಿ ನೀರಾವರಿ ಸೌಲಭ್ಯಗಳನ್ನು ಒದಗಿಸಲು ಮತ್ತು ಕಛ್ ಜಿಲ್ಲೆಯ ಎಲ್ಲಾ 948 ಗ್ರಾಮಗಳು ಮತ್ತು 10 ಪಟ್ಟಣಗಳಿಗೆ ಕುಡಿಯುವ ನೀರನ್ನು ಒದಗಿಸಲು ನಾಲೆ ಸಹಾಯ ಮಾಡುತ್ತದೆ. ಸರ್ಹಾದ್ ಡೈರಿಯ ಹೊಸ ಸ್ವಯಂಚಾಲಿತ ಹಾಲು ಸಂಸ್ಕರಣಾ ಮತ್ತು ಪ್ಯಾಕಿಂಗ್ ಘಟಕ ಸೇರಿದಂತೆ ಹಲವಾರು ಇತರ ಯೋಜನೆಗಳನ್ನು ಪ್ರಧಾನಿ ಉದ್ಘಾಟಿಸಿದರು. ಭುಜ್ ನ ಪ್ರಾದೇಶಿಕ ವಿಜ್ಞಾನ ಕೇಂದ್ರ; ಗಾಂಧಿಧಾಮದಲ್ಲಿರುವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಕನ್ವೆನ್ಷನ್ ಸೆಂಟರ್; ಅಂಜಾರ್ ನಲ್ಲಿ ವೀರ್ ಬಾಲ ಸ್ಮಾರಕ; ನಖತ್ರಾನಾದಲ್ಲಿ 2 ಭುಜ್ ಉಪಕೇಂದ್ರ ಮೊದಲಾದವು ಸೇರಿವೆ.  ಅಲ್ಲದೆ, ಪ್ರಧಾನಮಂತ್ರಿ ಅವರು ಭುಜ್-ಭೀಮಸರ್ ರಸ್ತೆ ಅಭಿವೃದ್ಧಿ ಸೇರಿದಂತೆ 1500 ಕೋಟಿ ರೂ.ಗೂ ಅಧಿಕ ಮೌಲ್ಯದ ನಾನಾ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.  

 

देश में आज जो ग्रीन हाउस अभियान चल रहा है, उसमें गुजरात की बहुत बड़ी भूमिका है।

इसी तरह जब गुजरात, दुनिया भर में ग्रीन हाउस कैपिटल के रूप में अपनी पहचान बनाएगा, तो उसमें कच्छ का बहुत बड़ा योगदान होगा: PM @narendramodi

— PMO India (@PMOIndia) August 28, 2022

 

*********



(Release ID: 1855463) Visitor Counter : 119