ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಫರಿದಾಬಾದ್ ನಲ್ಲಿ ಅತ್ಯಾಧುನಿಕ ಅಮೃತಾ ಆಸ್ಪತ್ರೆ ಉದ್ಘಾಟಿಸಿದ ಪ್ರಧಾನಿ 


“ಅಮ್ಮ ಪ್ರೀತಿ, ಸಹಾನುಭೂತಿ, ಸೇವೆ ಮತ್ತು ತ್ಯಾಗದ ಸಂಕೇತ. ಅವರು ಭಾರತದ ಆಧ್ಯಾತ್ಮಿಕ ಸಂಪ್ರದಾಯದ ಪ್ರತಿಬಿಂಬ’’ 


“ಭಾರತವು ಚಿಕಿತ್ಸೆಯನ್ನು ಸೇವೆ, ಯೋಗಕ್ಷೇಮವನ್ನು ದಾನವೆಂದು ಪರಿಗಣಿಸುವ ದೇಶ. ಇಲ್ಲಿ ಆರೋಗ್ಯ ಮತ್ತು ಅಧ್ಯಾತ್ಮಿಕತೆ ಪರಸ್ಪರ ಸಂಬಂಧ ಹೊಂದಿವೆ’’ 


“ನಮ್ಮ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆಗಳಿಂದ ಶಿಕ್ಷಣ ಮತ್ತು ವೈದ್ಯಕೀಯವನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ ಎಂದು ಕರೆಯುತ್ತೇವೆ. ಆದರೆ ನಾನು ಅದನ್ನು ‘ಪರಸ್ಪರ ಪ್ರಯಾಸ್ ‘ ಅನ್ನಾಗಿ ನೋಡುತ್ತೇನೆ’’ 


“ಆಧ್ಯಾತ್ಮಿಕ ನಾಯಕರ ಸಂದೇಶದಿಂದಾಗಿ ಭಾರತ ಇತರೆ ರಾಷ್ಟ್ರಗಳಲ್ಲಿ ಕಂಡುಬಂದಂತೆ ಲಸಿಕೆ ಹಿಂಜರಿತವನ್ನು ಎದುರಿಸಲಿಲ್ಲ’’ 


“ನಾವು ಗುಲಾಮಗಿರಿಯ ಮನಸ್ಥಿತಿಯನ್ನು ತ್ಯಜಿಸಿದಾಗ, ನಮ್ಮ ಕ್ರಿಯೆಗಳ ದಿಕ್ಕು ಕೂಡ ಬದಲಾಗುತ್ತದೆ’’ 


“ನಿಜವಾದ ಅಭಿವೃದ್ಧಿ ಎಂದರೆ ಅದು ಪ್ರತಿಯೊಬ್ಬರನ್ನೂ ತಲುಪುವುದು’’ 

Posted On: 24 AUG 2022 1:34PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಫರಿದಾಬಾದ್‌ನಲ್ಲಿ ಅತ್ಯಾಧುನಿಕ ಅಮೃತಾ ಆಸ್ಪತ್ರೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹರಿಯಾಣದ ರಾಜ್ಯಪಾಲ ಶ್ರೀ ಬಂಡಾರು ದತ್ತಾತ್ರೇಯ, ಮುಖ್ಯಮಂತ್ರಿ ಶ್ರೀ ಮನೋಹರ್ ಲಾಲ್, ಉಪಮುಖ್ಯಮಂತ್ರಿ ಶ್ರೀ ದುಷ್ಯಂತ್ ಚೌತಾಲಾ, ಕೇಂದ್ರ ಸಚಿವ ಶ್ರೀ ಕೃಷ್ಣ ಪಾಲ್ ಗುರ್ಜಾರ್, ಶ್ರೀ ಮಾತಾ ಅಮೃತಾನಂದಮಯಿ ಸೇರಿ ಹಲವರು ಗಣ್ಯರು ಉಪಸ್ಥಿತರಿದ್ದರು. 
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ, ದೇಶವು ಅಮೃತ ಕಾಲ ಪ್ರವೇಶಿಸುತ್ತಿರುವುದರಿಂದ, ಸಾಮೂಹಿಕ ಆಶಯಗಳು ಮತ್ತು ಸಂಕಲ್ಪಗಳು ರೂಪ ಪಡೆದುಕೊಳ್ಳುತ್ತಿರುವ ಸಮಯದಲ್ಲಿ ದೇಶವು ಶ್ರೀ ಮಾತಾ ಅಮೃತಾನಂದಮಯಿ ಅವರ ಆಶೀರ್ವಾದದ ಅಮೃತವನ್ನು ಪಡೆಯುತ್ತಿರುವುದು ಸೂಕ್ತವಾಗಿ ಹೊಂದಿಕೆಯಾಗುತ್ತಿದೆ ಎಂದರು. ಈ ಆಸ್ಪತ್ರೆಯು ಆಧುನಿಕತೆ ಮತ್ತು ಆಧ್ಯಾತ್ಮಿಕತೆಯ ಮಿಶ್ರಣವಾಗಿದ್ದು, ನಿರ್ಗತಿಕ ರೋಗಿಗಳಿಗೆ ಸುಲಭವಾಗಿ ಮತ್ತು ಕೈಗೆಟುಕುವ ಚಿಕಿತ್ಸೆಯ ಮಾಧ್ಯಮವಾಗಲಿದೆ ಎಂದು ಅವರು ಹೇಳಿದರು. “ಅಮ್ಮ ಪ್ರೀತಿ, ಸಹಾನುಭೂತಿ, ಸೇವೆ ಮತ್ತು ತ್ಯಾಗದ ಸಾಕಾರಮೂರ್ತಿ. ಅವರು ಭಾರತದ ಆಧ್ಯಾತ್ಮಿಕ ಸಂಪ್ರದಾಯದ ಪ್ರತಿಬಿಂಬ’’ ಎಂದು ಪ್ರಧಾನಿ ಅವರು ಬಣ್ಣಿಸಿದರು. 
ಭಾರತದ ಸೇವೆ ಮತ್ತು ಔಷಧಗಳ ಶ್ರೇಷ್ಠ ಸಂಪ್ರದಾಯದ ಕುರಿತು ಮಾತನಾಡಿದ ಪ್ರಧಾನಮಂತ್ರಿ ಅವರು “ಭಾರತದಲ್ಲಿ ಚಿಕಿತ್ಸೆಯು ಸೇವೆಯಾಗಿದೆ, ಯೋಗಕ್ಷೇಮವು ದಾನವಾಗಿದೆ. ಇಲ್ಲಿ ಆರೋಗ್ಯ ಮತ್ತು ಆಧ್ಯಾತ್ಮಿಕತೆ, ಎರಡೂ ಪರಸ್ಪರ ಸಂಬಂಧ ಹೊಂದಿವೆ. ನಮ್ಮಲ್ಲಿ ವೈದ್ಯ ವಿಜ್ಞಾನ ವೇದವಾಗಿದೆ. ನಾವು ನಮ್ಮ ವೈದ್ಯಕೀಯ ವಿಜ್ಞಾನಕ್ಕೆ ಆಯುರ್ವೇದದ ಹೆಸರನ್ನೂ ನೀಡಿದ್ದೇವೆ. ಶತಮಾನಗಳ ಗುಲಾಮಗಿರಿಯ ಸಂಕಷ್ಟದ ಅವಧಿಯಲ್ಲಿಯೂ ಭಾರತವು ತನ್ನ ಆಧ್ಯಾತ್ಮಿಕ ಮತ್ತು ಸೇವಾ ಪರಂಪರೆಯನ್ನು ಮರೆಯಲು ಎಂದಿಗೂ ಅವಕಾಶ ಮಾಡಿಕೊಡಲಿಲ್ಲ ಎಂದು ಅವರು ಸಭೆಗೆ  ನೆನಪು ಮಾಡಿಕೊಟ್ಟರು. 
ಪೂಜ್ಯ ಅಮ್ಮನವರಂತಹ ಸಂತರ ರೂಪದಲ್ಲಿ ಆಧ್ಯಾತ್ಮಿಕ ಶಕ್ತಿಯು ಸದಾ ದೇಶದ ಮೂಲೆ ಮೂಲೆಗಳಲ್ಲಿ ಪಸರಿಸುತ್ತಿರುವುದು ರಾಷ್ಟ್ರಕ್ಕೆ ಒಳ್ಳೆಯ ಅದೃಷ್ಟವಾಗಿದೆ ಎಂದು ಹೇಳಿದರು. ನಮ್ಮ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆಗಳು ಶಿಕ್ಷಣ ಮತ್ತು ವೈದ್ಯಕೀಯಕ್ಕೆ ಸಂಬಂಧಿಸಿದ ಜವಾಬ್ದಾರಿಗಳನ್ನು ನಿರ್ವಹಿಸುವ ಈ ವ್ಯವಸ್ಥೆಯು ಹಿಂದಿನ ಕಾಲದ ಪಿಪಿಪಿ ಮಾದರಿಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. “ಇದನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಎಂದು ಕರೆಯಲಾಗುತ್ತದೆ ಆದರೆ ನಾನು ಅದನ್ನು 'ಪರಸ್ಪರ್ ಪ್ರಯಾಸ್' (ಪರಸ್ಪರ ಪ್ರಯತ್ನ) ವಾಗಿ ನೋಡುತ್ತೇನೆ" ಎಂದು ಪ್ರಧಾನಮಂತ್ರಿ ಹೇಳಿದರು. 
ಮೇಡ್ ಇನ್ ಇಂಡಿಯಾ ಲಸಿಕೆ ಮತ್ತು ಕೆಲವು ಜನರು ಲಸಿಕೆ ಕುರಿತು ನಡೆಸಿದ ಅಪಪ್ರಚಾರದ ಬಗ್ಗೆ ಪ್ರಧಾನಮಂತ್ರಿ ಟೀಕಿಸಿದರು. ಅದರ ಪರಿಣಾಮ ಸಮಾಜದಲ್ಲಿ ಹಲವು ರೀತಿಯ ವದಂತಿಗಳು ಹಬ್ಬತೊಡಗಿದ್ದವು. ಆದರೆ ಸಮಾಜದ ಧಾರ್ಮಿಕ ಮುಖಂಡರು ಮತ್ತು ಆಧ್ಯಾತ್ಮಿಕ ಗುರುಗಳು ಒಗ್ಗೂಡಿ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಜನರನ್ನು ಹೇಳಿದಾಗ, ಅದರ ಪರಿಣಾಮವು ತಕ್ಷಣವೇ ಕಂಡುಬಂದಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಇತರೆ ದೇಶಗಳಲ್ಲಿ ಕಂಡುಬರುವ ರೀತಿಯ ಲಸಿಕೆ ಹಿಂಜರಿಕೆ ಭಾರತ ಎದುರಾಗಲಿಲ್ಲ ಎಂದರು. 
ಕೆಂಪು ಕೋಟೆಯ ಆವರಣದಿಂದ ದೇಶವನ್ನುದ್ದೇಶಿಸಿ ಮಾಡಿದ ಭಾಷಣವನ್ನು ಸ್ಮರಿಸಿದ ಪ್ರಧಾನಮಂತ್ರಿ, ಅಮೃತ ಕಾಲದ ಐದು ಸಂಕಲ್ಪಗಳ ದರ್ಶನವನ್ನು ದೇಶದ ಮುಂದಿಟ್ಟಿದ್ದೇನೆ ಮತ್ತು ಈ ಐದು ಸಂಕಲ್ಪಗಳಲ್ಲಿ ಒಂದು (ಪ್ರಾಣ) ಗುಲಾಮಗಿರಿಯ ಮನಸ್ಥಿತಿಯಿಂದ ಸಂಪೂರ್ಣ ಹೊರಬರುವುದಾಗಿದೆ ಎಂದು ಹೇಳಿದರು.ಈ ಸಮಯದಲ್ಲಿ ದೇಶದಲ್ಲೂ ಆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ ಎಂದು ಟೀಕಿಸಿದರು. “ನಾವು ಈ ಮನಸ್ಥಿತಿಯನ್ನು ತ್ಯಜಿಸಿದಾಗ, ನಮ್ಮ ಕ್ರಿಯೆಗಳ ದಿಕ್ಕು ಕೂಡ ಬದಲಾಗುತ್ತದೆ" ಎಂದು ಪ್ರಧಾನಮಂತ್ರಿ ಹೇಳಿದರು. ಈ ಬದಲಾವಣೆಗೆ ದೇಶದ ಸಾಂಪ್ರದಾಯಿಕ ಜ್ಞಾನದಲ್ಲಿ ನಂಬಿಕೆ ಹೆಚ್ಚುತ್ತಿರುವುದು ಕಾರಣವಾಗಿದ್ದು, ಅದು ದೇಶದ ಆರೋಗ್ಯ ವ್ಯವಸ್ಥೆಯಲ್ಲಿ ಗೋಚರಿಸುತ್ತದೆ ಎಂದು ಅವರು ಮಾತು ಮುಂದುವರಿಸಿದರು. ಯೋಗಕ್ಕೆ ಇಂದು ಜಾಗತಿಕ ಮನ್ನಣೆ ದೊರೆತಿದ್ದು, ಮುಂದಿನ ವರ್ಷ ಜಗತ್ತು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವನ್ನಾಗಿ ಆಚರಿಸಲಿದೆ ಎಂದರು. 
ಪ್ರಧಾನಮಂತ್ರಿ ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ, ಇಂದು ಹರಿಯಾಣವು ದೇಶದ ಅತ್ಯಂತ ಮುಂಚೂಣಿ ರಾಜ್ಯಗಳಲ್ಲಿ ಒಂದಾಗಿದೆ ಎಂದು ಹೇಳಿದರು, ಪ್ರತಿ ಮನೆಗೆ ಕೊಳಾಯಿ ಮೂಲಕ ನೀರಿನ ಸೌಲಭ್ಯವನ್ನು ಒದಗಿಸಲಾಗಿದೆ. ಬೇಟಿ ಬಚಾವೋ, ಬೇಟಿ ಪಢಾವೋ ಅಭಿಯಾನಕ್ಕೆ ಅತ್ಯುತ್ತಮ ಕೊಡುಗೆ ನೀಡಿದ ಹರಿಯಾಣದ ಜನರನ್ನು ಪ್ರಧಾನಮಂತ್ರಿ ಅಭಿನಂದಿಸಿದರು. ದೈಹಿಕ ಕ್ಷಮತೆ ಮತ್ತು ಕ್ರೀಡೆಯಂತಹ ವಿಷಯಗಳು ಹರಿಯಾಣದ ಸಂಸ್ಕೃತಿಯಲ್ಲಿಯೇ ಇವೆ ಎಂದು ಅವರು ಹೇಳಿದರು. 

ಹಿನ್ನೆಲೆ: 
ಫರಿದಾಬಾದ್‌ನಲ್ಲಿ ಅಮೃತಾ ಆಸ್ಪತ್ರೆಯನ್ನು ಪ್ರಧಾನಿ ಉದ್ಘಾಟಿಸಿರುವುದರಿಂದ ರಾಷ್ಟ್ರದ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್) ಆಧುನಿಕ ವೈದ್ಯಕೀಯ ಮೂಲಸೌಕರ್ಯಗಳಿಗೆ ಆದ್ಯತೆ ದೊರಕಲಿದೆ. ಮಾತಾ ಅಮೃತಾನಂದಮಯಿ ಮಠ ನಿರ್ವಹಿಸುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು 2600 ಹಾಸಿಗೆಗಳನ್ನು ಹೊಂದಿದೆ. ಸುಮಾರು 6000 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಆಸ್ಪತ್ರೆ, ಫರಿದಾಬಾದ್ ಮತ್ತು ಇಡೀ ಎನ್ ಸಿಆರ್ ಪ್ರದೇಶದ ಜನರಿಗೆ ಅತ್ಯಾಧುನಿಕ ಆರೋಗ್ಯ ಸೌಲಭ್ಯಗಳನ್ನು ಒದಗಿಸುತ್ತದೆ. 

 

 

******



(Release ID: 1854126) Visitor Counter : 161