ಪ್ರಧಾನ ಮಂತ್ರಿಯವರ ಕಛೇರಿ

ಜುಲೈ 4 ರಂದು ಗಾಂಧಿನಗರ್ ಮತ್ತು ಭೀಮಾವರಂಗೆ ಭೇಟಿ ನೀಡಲಿರುವ ಪ್ರಧಾನಮಂತ್ರಿ


ಆಂಧ್ರಪ್ರದೇಶದ ಭೀಮಾವರಂನಲ್ಲಿ ಸ್ವಾತಂತ್ರ್ಯ ಹೋರಾಟಗಾರ, ದಂತಕಥೆ ಅಲ್ಲೂರಿ ಸೀತಾರಾಮ ರಾಜು ಅವರ 125 ನೇ ಜನ್ಮ ಶತಮಾನೋತ್ಸವದ ವರ್ಷಾಚರಣೆಗೆ ಚಾಲನೆ ನೀಡಲಿರುವ ಪ್ರಧಾನಮಂತ್ರಿ

ಅಲ್ಲೂರಿ ಸೀತಾರಾಮ ರಾಜು ಅವರ 30 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣಗೊಳಿಸಲಿರುವ ಪ್ರಧಾನಮಂತ್ರಿ

ಗಾಂಧೀನಗರದಲ್ಲಿ ಡಿಜಿಟಲ್ ಇಂಡಿಯಾ ಸಪ್ತಾಹ ಉದ್ಘಾಟಿಸಲಿರುವ ಪ್ರಧಾನಮಂತ್ರಿ

ಮಾನವ ಕೇಂದ್ರೀತವಾಗಿ ನವ ಭಾರತ ನಿರ್ಮಾಣಕ್ಕೆ ವೇಗ : 2022 ರ ಡಿಜಿಟಲ್ ಸಪ್ತಾಹದ ಘೋಷವಾಕ್ಯ

‘ಡಿಜಿಟಲ್ ಇಂಡಿಯಾ ಭಾಷಿಣಿ’, ‘ಡಿಜಿಟಲ್ ಇಂಡಿಯಾ ಜೆನೆಸಿಸ್’ ಮತ್ತು ‘ಇಂಡಿಯಾ ಸ್ಟಾಕ್ ಡಾಟ್ ಗ್ಲೋಬಲ್’ ನ ಪ್ರಾರಂಭ ಮತ್ತು “ನನ್ನ ಕಾರ್ಯಕ್ರಮ’ ಹಾಗೂ “ನನ್ನ ಗುರುತು’ ಕಾರ್ಯಕ್ರಮಗಳ ಸಮರ್ಪಣೆ

‘ಚಿಪ್ಸ್ ಟು ಸ್ಟಾರ್ಟ್ ಅಪ್ ಕಾರ್ಯಕ್ರಮದಡಿ ಬೆಂಬಲ ಪಡೆದ 30 ಸಂಸ್ಥೆಗಳ ಮೊದಲ ಸಮೂಹವನ್ನು ಪ್ರಕಟಿಸಲಿರುವ ಪ್ರಧಾನಮಂತ್ರಿ

Posted On: 01 JUL 2022 12:10PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022 ರ ಜುಲೈ 4 ರಂದು ಬೆಳಿಗ್ಗೆ 11 ಗಂಟೆಗೆ ಆಂಧ್ರಪ್ರದೇಶದ ಭೀಮಾವರಂ ಗೆ ಭೇಟಿ ನೀಡಲಿದ್ದು, ಸ್ವಾತಂತ್ರ್ಯ ಹೋರಾಟಗಾರ, ದಂತಕಥೆ ಅಲ್ಲೂರಿ ಸೀತಾರಾಮ ರಾಜು ಅವರ 125 ನೇ ಜನ ದಿನೋತ್ಸವದ ವರ್ಷಾಚರಣೆಗೆ ಚಾಲನೆ ನೀಡಲಿದ್ದಾರೆ. ಬಳಿಕ ಸಂಜೆ 4.30 ಕ್ಕೆ ಪ್ರಧಾನಮಂತ್ರಿ ಅವರು ಗಾಂಧೀನಗರದಲ್ಲಿ ಡಿಟಿಜಲ್ ಇಂಡಿಯಾ 2022 ಸಪ್ತಾಹ ಉದ್ಘಾಟಿಸಲಿದ್ದಾರೆ.

 

ಭೀಮಾವರಂನಲ್ಲಿ ಪ್ರಧಾನಮಂತ್ರಿ  

 

ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದ ಭಾಗವಾಗಿ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಗೆ ಸೂಕ್ತ ಮನ್ನಣೆ ನೀಡುವ ಮತ್ತು ದೇಶಾದ್ಯಂತ ಅವರ ಬಗ್ಗೆ ಅರಿವು ಮೂಡಿಸಲು ಸರ್ಕಾರ ಬದ್ಧವಾಗಿದೆ. ಈ ಪ್ರಯತ್ನದ ಭಾಗವಾಗಿ ಪ್ರಧಾನಮಂತ್ರಿ ಅವರು ಭೀಮಾವರಂ ನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಅಲ್ಲೂರಿ ಸೀತಾರಾಮ ರಾಜು ಅವರ ಜನ್ಮದಿನದ ವರ್ಷಾಚರಣೆಯನ್ನು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಅಲ್ಲೂರಿ ಸೀತಾರಾಮ ರಾಜು ಅವರ 30 ಅಡಿ ಎತ್ತರದ ಕಂಚಿನ ಪುತ್ಥಳಿಯನ್ನು ಅನಾವರಣಗೊಳಿಸಲಿದ್ದಾರೆ.

 

ಅಲ್ಲೂರಿ ಸೀತಾರಾಮ ರಾಜು ಅವರು 1897 ರ ಜುಲೈ 4 ರಂದು ಜನ್ಮತಳೆದರು. ಪೂರ್ವಘಟ್ಟ ಪ್ರದೇಶದಲ್ಲಿ ಬುಡಕಟ್ಟು ಜನಾಂಗದ ಹಿತರಕ್ಷಣೆಗಾಗಿ ಬ್ರಿಟೀಷರ ವಿರುದ್ಧ ಅವರು ನಡೆಸಿದ ಹೋರಾಟವನ್ನು ಸ್ಮರಿಸಲಾಗುತ್ತಿದೆ. ಅವರು 1922 ರಲ್ಲಿ ರಂಪಾ ಬಂಡಾಯ ಹೋರಾಟವನ್ನು ಆರಂಭಿಸಿದರು. ಅವರನ್ನು “ಮಾನ್ಯಂ ವೀರುಡು” [ಅರಣ್ಯ ಪ್ರದೇಶದ ನಾಯಕ] ಎಂದು ಸ್ಥಳೀಯ ನಾಯಕರು ಗುರುತಿಸಿದ್ದರು.

 

ಇವರ ಜನ್ಮ ದಿನವನ್ನು ವರ್ಷಪೂರ್ತಿ ಆಚರಿಸಲು ಸರ್ಕಾರ ಹಲವಾರು ಕ್ರಮಗಳನ್ನು ರೂಪಿಸಿದೆ. ವಿಜಿ಼ಯನಗರ ಜಿಲ್ಲೆಯ ಪಂಡ್ರಂಗಿಯಲ್ಲಿರುವ ಅಲ್ಲೂರಿ ಸೀತಾರಾಮ ರಾಜು ಅವರ ಜನ್ಮ ಸ್ಥಳ ಮತ್ತು ಚಿಂತಪಲ್ಲಿ ಪೊಲೀಸ್ ಠಾಣೆ [ರಂಪಾ ದಂಗೆಗೆ 100 ವರ್ಷಗಳು ತುಂಬಿದೆ ; ಈ ಪೊಲೀಸ್ ಠಾಣೆಯ ಮೇಲಿನ ದಾಳಿಯಿಂದಾಗಿ ರಂಪಾ ದಂಗೆ ನಾಂದಿಯಾಯಿತು] ಯನ್ನು ಪುನರ್ ಸ್ಥಾಪಿಸಲಾಗುತ್ತಿದೆ. ಮೊಗಲ್ಲು ಪ್ರದೇಶದಲ್ಲಿ ಅಲ್ಲೂರಿ ಸೀತಾರಾಮ ರಾಜು ಅವರ ಧ್ಯಾನಮಂದಿರವನವನ್ನು ನಿರ್ಮಿಸಲು ಮತ್ತು ಅಲ್ಲಿ ಧ‍್ಯಾನಾವಸ್ಥೆಯಲ್ಲಿರುವ ಅಲ್ಲೂರಿ ಸೀತಾರಾಮ ರಾಜು ಅವರ ಪ್ರತಿಮೆಯೊಂದಿಗೆ ಅವರ ಜೀವನ ಚರಿತ್ರೆಯನ್ನು ಬಿಂಬಿಸುವ ಕಲಾ ರಚನೆಗಳು ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ಮಾಹಿತಿ ನೀಡುವ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗುತ್ತಿದೆ.

 

ಗಾಂಧೀನಗರದಲ್ಲಿ ಪ್ರಧಾನಮಂತ್ರಿ  

 

ಪ್ರಧಾನಮಂತ್ರಿ ಅವರು ಮಾನವ ಕೇಂದ್ರೀತವಾಗಿ ನವ ಭಾರತ ನಿರ್ಮಾಣಕ್ಕೆ ವೇಗ ನೀಡುವ 2022 ರ ಡಿಜಿಟಲ್ ಇಂಡಿಯಾ ಸಪ್ತಾಹಕ್ಕೆ ಚಾಲನೆ ನೀಡಲಿದ್ದಾರೆ. ತಂತ್ರಜ್ಞಾನ, ಕೈಗೆಟುಕುವ ಮತ್ತು ಸೇವೆಗಳನ್ನು ಸುಗಮಗೊಳಿಸುವ, ಸುಗಮ ಜೀವನ ಖಾತರಿಪಡಿಸುವ ಹಾಗೂ ನವೋದ್ಯಮಗಳಿಗೆ ಉತ್ತೇಜನ ನೀಡುವ ಬಹುಹಂತದ ಡಿಜಿಟಲ್ ಕ್ರಮಗಳಿಗೆ ಪ್ರಧಾನಮಂತ್ರಿ ಅವರು ಚಾಲನೆ ನೀಡಲಿದ್ದಾರೆ.

 

ಪ್ರಧಾನಮಂತ್ರಿ ಅವರು “ಡಿಜಿಟಲ್ ಇಂಡಿಯಾ ಭಾಷಿಣಿ”ಗೆ ಚಾಲನೆ ನೀಡಲಿದ್ದು, ಇದರಿಂದ ಸುಲಭವಾಗಿ ಅಂತರ್ಜಾಲ ಮತ್ತು ಡಿಜಿಟಲ್ ಸೇವೆಗಳನ್ನು ಭಾರತೀಯ ಭಾಷೆಗಳಲ್ಲಿ ಪಡೆಯಲು ಸಹಕಾರಿಯಾಗಲಿದ್ದು, ಇದರಲ್ಲಿ ಧ‍್ವನಿ ಆಧಾರಿತ ಸೇವೆ ಮತ್ತು ಭಾರತೀಯ ಭಾಷೆಗಳಲ್ಲಿ ವಿಷಯವನ್ನು ಸೃಜಿಸಲು ಸಹಕಾರಿಯಾಗಲಿದೆ. ಇದು ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಆಧಾರಿತವಾಗಿ ಭಾರತೀಯ ಭಾಷೆಗಳಲ್ಲಿ ಪರಿಹಾರವನ್ನು ಒದಗಿಸಲಿದ್ದು, ಬಹುಭಾಷಾ ದತ್ತಾಂಶ ಕ್ರೋಢೀಕರಣಕ್ಕೆ ಸಹಕಾರಿಯಾಗಲಿದೆ. ಡಿಜಟಿಲ್ ಇಂಡಿಯಾ ಭಾಷಿಣಿ ಭಾಷಾದಾನ ಎಂಬ ಕ್ರೌಡ್ ಸೋರ್ಸಿಂಗ್ ಉಪಕ್ರಮದ ಮೂಲಕ ದತ್ತಾಂಶಗಳನ್ನು ಸೃಜಿಸಲು ಮತ್ತು ಹೆಚ್ಚಿನ ಜನ ತೊಡಗಿಕೊಳ್ಳಲು ಸಹಕರಿಯಾಗಲಿದೆ.

 

ಪ್ರಧಾನಮಂತ್ರಿ ಅವರು “ಡಿಜಿಟಲ್ ಜೆನೆಸಿಸ್” [ನವೋದ್ಯಮಗಳ ನಾವೀನ್ಯತೆಗೆ ಮುಂದಿನ ಪೀಳಿಗೆಯ ಬೆಂಬಲ] ಗೆ ಚಾಲನೆ ನೀಡಲಿದ್ದು, ಭಾರತದ ಎರಡು ಮತ್ತು ಮೂರನೇ ಶ್ರೇಣಿಯ ನಗರಗಳಲ್ಲಿ ನವೋದ್ಯಮಗಳನ್ನು ಯಶಸ್ವಿಗೊಳಿಸಲು ಮತ್ತು ವೇದಿಕೆ ಸೃಷ್ಟಿಸುವ, ಅನ್ವೇಷಿಸುವ, ಬೆಂಬಲ, ಬೆಳವಣಿಗೆಗೆ ಪೂರಕವಾಗಿರುವ ಆಳವಾದ ರಾಷ್ಟ್ರೀಯ ನವೋದ್ಯಮ ತಂತ್ರಜ್ಞಾನ ವೇದಿಕೆಯನ್ನು ಒದಗಿಸಲಿದೆ. ಈ ಯೋಜನೆಗಾಗಿ ಒಟ್ಟು 750 ಕೋಟಿ ರೂಪಾಯಿ ನಿಗದಿ ಮಾಡಲಾಗಿದೆ.  

 

ಆಧಾರ್, ಯುಪಿಐ, ಲಸಿಕಾ ಕಾರ್ಯಕ್ರಮದ ಕೋವಿನ್ ವೇದಿಕೆ, ಸರ್ಕಾರದ ಇ ಮಾರುಕಟ್ಟೆಪ್ಲಸ್ [ಜಿ.ಇ.ಎಂ], ಧೀಕ್ಷಾ ವೇದಿಕೆ ಮತ್ತು ಆಯುಷ್ಮಾನ್ ಭಾರತ್ ಡಿಜಿಟಲ್ ಆರೋಗ್ಯ ಅಭಿಯಾನದಡಿ ಜಾರಿಗೊಳಿಸಲಾದ ಪ್ರಮುಖ ಜಾಗತಿಕ ಭಂಡಾರವಾಗಿರುವ “ಇಂಡಿಯಾ ಸ್ಟಾಕ್ ಗ್ಲೋಬಲ್” ಅನ್ನು ಪ್ರಧಾನಮಂತ್ರಿ ಅವರು ಪ್ರಾರಂಭಿಸಲಿದ್ದಾರೆ. ಜಾಗತಿಕ ಸಾರ್ವಜನಿಕ ಡಿಜಿಟಲ್ ಸರಕುಗಳನ್ನು ನಿರ್ಮಿಸುವ ವಲಯದಲ್ಲಿ ಭಾರತವನ್ನು ನಾಯಕನ್ನಾಗಿ ಮಾಡಲು ಮತ್ತು ಅಂತಹ ತಂತ್ರಜ್ಞಾನದ ಪರಿಹಾರಗಳನ್ನು ಹುಡುಕುತ್ತಿರುವ ಇತರೆ ದೇಶಗಳಿಗೆ ವ್ಯಾಪಕ ನೆರವು ಒದಗಿಸುತ್ತದೆ.  

 

ಸರ್ಕಾರದ ಸೇವೆಗಳನ್ನು ಜನರಿಗೆ ತಲುಪಿಸುವ ವೇದಿಕೆ “ನನ್ನ ಯೋಜನೆ”ಯನ್ನು ನಾಗರಿಕರಿಗಾಗಿ ಪ್ರಧಾನಮಂತ್ರಿ ಅವರು ಸಮರ್ಪಿಸಲಿದ್ದಾರೆ. ಈ ಪೋರ್ಟಲ್ ಹುಡುಕಾಟ, ಒಂದು ನಿಲುಗಡೆ ಮತ್ತು ಅನ್ವೇಷಣೆ ಮಾಡುವ ಅಂಶಗಳನ್ನು ಹೊಂದಿದೆ. ಬಳಕೆದಾರರು ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಬಹುದು. ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು “ಮೆರಿ ಪೆಹಚಾನ್ – ನ್ಯಾಷನ್ ಸಿಂಗಲ್ ಸೈನ್ ಆನ್ ಫಾರ್ ಒನ್ ಸಿಟಿಜ಼ನ್ ಲಾಗಿನ್” ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ನ್ಯಾಷನಲ್ ಸಿಂಗಲ್ ಸೈನ್ ಆನ್ [ಎನ್.ಎಸ್.ಎಸ್.ಒ] ಎನ್ನುವುದು ಬಳಕೆದಾರರ ದೃಢೀಕರಣ ಸೇವೆಯಾಗಿದ್ದು, ಇದರಲ್ಲಿ ಆನ್ ಲೈನ್ ಅಪ್ಲಿಕೇಶನ್ ಮತ್ತು ಸೇವೆಗಳಿಗಾಗಿ ಪ್ರವೇಶ ಪಡೆಯಬಹುದಾಗಿದೆ.   

 

‘ಚಿಪ್ಸ್ ಟು ಸ್ಟಾರ್ಟ್ ಅಪ್ [ಸಿ2ಎಸ್] ಕಾರ್ಯಕ್ರಮದಡಿ ಬೆಂಬಲ ಪಡೆದ 30 ಸಂಸ್ಥೆಗಳ ಮೊದಲ ಸಮೂಹವನ್ನು ಪ್ರಧಾನಮಂತ್ರಿ ಅವರು ಪ್ರಕಟಿಸಲಿದ್ದಾರೆ. ಬ್ಯಾಚಲರ್ಸ್, ಮಾಸ್ಟರ್ಸ್ ಮತ್ತು ಸಂಶೋಧನಾ ಹಂತದಲ್ಲಿ ಸೆಮಿಕಂಡಕ್ಟರ್ ಚಿಪ್ ಗಳ ವಿನ್ಯಾಸ ವಲಯದಲ್ಲಿ ವಿಶೇಷ ಮಾನವ ಸಂಪನ್ಮೂಲ ಅಭಿವೃದ್ಧಿಗಾಗಿ ತರಬೇತಿ ನೀಡುವುದು ಸಿ2ಎಸ್ ಕಾರ್ಯಕ್ರಮದ ಗುರಿಯಾಗಿದೆ ಮತ್ತು ದೇಶದಲ್ಲಿ ಸೆಮಿಕಂಡಕ್ಟರ್ ವಿನ್ಯಾಸದಲ್ಲಿ ತೊಡಗಿರುವ ಸ್ವಾರ್ಟ್ ಅಪ್ ಗಳ ಬೆಳವಣಿಗೆಗೆ ವೇಗವರ್ಧಕವಾಗಿ ಇದು ಕಾರ್ಯನಿರ್ವಹಿಸುತ್ತದೆ. ಇದು ಸಾಂಸ್ಥಿಕ ಮಟ್ಟದಲ್ಲಿ ಮಾರ್ಗದರ್ಶನ ನೀಡುತ್ತದೆ, ಜೊತೆಗೆ ಸಂಸ್ಥೆಗಳಿಗೆ ವಿನ್ಯಾಸಕ್ಕಾಗಿ ಅತ್ಯಾಧುನಿಕ ಸೌಲಭ್ಯಗಳು ಲಭ್ಯವಾಗುವಂತೆ ಮಾಡುತ್ತದೆ. ಸೆಮಿಕಂಡಕ್ಟರ್ ಪರಿಸರ ವಲಯದಲ್ಲಿ ಬಲವಾದ ವಿನ್ಯಾಸ ವ್ಯವಸ್ಥೆಯನ್ನು ನಿರ್ಮಿಸುವ ಉದ್ದೇಶದಿಂದ ಇದು ಸೆಮಿಕಂಡಕ್ಟರ್ ಅಭಿಯಾನದ ಭಾಗವಾಗಿದೆ.  

 

ಜುಲೈ 4 ರಿಂದ 6 ರ ವರೆಗೆ ಗಾಂಧೀನಗರದಲ್ಲಿ ಆಯೋಜಿಸಿರುವ ಡಿಜಿಟಲ್ ಇಂಡಿಯಾ ವೀಕ್ 2022, ಭೌತಿಕ ಕಾರ್ಯಕ್ರಮವಾಗಿದೆ. ಡಿಜಿಟಲ್ ಇಂಡಿಯಾ ವಾರ್ಷಿಕೋತ್ಸವದದ ಭಾಗವಾಗಿ ಈ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಆಧಾರ್, ಯುಪಿಐ, ಕೊವಿನ್, ಡಿಜಿಲಾಕರ್ ಮತ್ತಿತರ ಡಿಜಿಟಲ್ ವೇದಿಕೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಇಲ್ಲಿ ಸಾರ್ವಜನಿಕರಿಗಾಗಿ ಪ್ರದರ್ಶಿಸಲಾಗುತ್ತದೆ. ಇದು ಜಾಗತಿಕ ಪ್ರೇಕ್ಷಕರಿಗೆ ಭಾರತದ ತಾಂತ್ರಿಕ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ. ವ್ಯಾಪಕ ಶ್ರೇಣಿಯ ಪಾಲುದಾರರೊಂದಿಗೆ ಸಹಯೋಗ ಮತ್ತು ವ್ಯಾಪಾರ ಅವಕಾಶಗಳನ್ನು ಅನ್ವೇಷಿಸುತ್ತದೆ ಮತ್ತು ಮುಂದಿನ ಪೀಳಿಗೆಗೆ ಅವಕಾಶಗಳನ್ನು ಒದಗಿಸುತ್ತದೆ. ನವೋದ್ಯಮಗಳು, ಸರ್ಕಾರದ ಪ್ರಮುಖರು, ಕೈಗಾರಿಕೆ ಮತ್ತು ಶೈಕ್ಷಣಿಕ ಕ್ಷೇತ್ರದ ಗಣ್ಯರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. 200 ಕ್ಕೂ ಹೆಚ್ಚು ಡಿಜಿಟಲ್ ಮಳಿಗೆಗಳನ್ನು ಈ ಮೇಳ ಒಳಗೊಂಡಿದೆ. ಇದು ಬದುಕನ್ನು ಸುಲಭಗೊಳಿಸಿ ಡಿಜಿಟಲ್ ಪರಿಹಾರವನ್ನು ಅನಾವರಣಗೊಳಿಸುತ್ತದೆ. ಭಾರತೀಯ ಯುನಿಕಾರ್ನ್ ಗಳು ಮತ್ತು ನವೋದ್ಯಮಗಳು ಅಭಿವೃದ್ಧಿಪಡಿಸಿರುವ ಪರಿಹಾರಗಳನ್ನು ಸಹ ಇಲ್ಲಿ ಪ್ರದರ್ಶಿಸಲಾಗುತ್ತಿದೆ. ಜುಲೈ 7 ರಿಂದ 9 ರ ವರೆಗೆ ವರ್ಚುವಲ್ ಮೂಲಕ ಡಿಜಿಟಲ್ ಇಂಡಿಯಾ ಸಪ್ತಾಹ ಆಯೋಜಿಸಿದ್ದು, ಭಾರತದ ಜ್ಞಾನ ವಿನಿಯಮ ಅಂಶಗಳನ್ನು ಈ ಸಪ್ತಾಹ ಒಳಗೊಂಡಿದೆ.

********



(Release ID: 1838637) Visitor Counter : 142