ಪ್ರಧಾನ ಮಂತ್ರಿಯವರ ಕಛೇರಿ

26.06.2022 ರಂದು ‘ಮನ್ ಕಿ ಬಾತ್’ ನ 90 ನೇ ಸಂಚಿಕೆಯಲ್ಲಿ ಪ್ರಧಾನ ಮಂತ್ರಿಯವರ ಭಾಷಣದ ಇಂಗ್ಲಿಷ್ ಅವತರಣಿಕೆ.

Posted On: 26 JUN 2022 11:49AM by PIB Bengaluru

ನಮಸ್ಕಾರ ನನ್ನ ಪ್ರೀತಿಯ ದೇಶವಾಸಿಗಳಿಗೆ ನಮಸ್ಕಾರ! ‘ಮನ್ ಕಿ ಬಾತ್’ಗಾಗಿ ನಿಮ್ಮೆಲ್ಲರಿಂದ ನನಗೆ ಅನೇಕ ಪತ್ರಗಳು ಬಂದಿವೆ; ನಾನು ಸಾಮಾಜಿಕ ಮಾಧ್ಯಮ ಮತ್ತು ನಮೋಆಪ್ (NaMoApp) ನಲ್ಲಿ ಹಲವಾರು ಸಂದೇಶಗಳನ್ನು ಸ್ವೀಕರಿಸಿದ್ದೇನೆ. ಅದಕ್ಕಾಗಿ ನಾನು ನಿಮಗೆ ತುಂಬಾ ಕೃತಜ್ಞನಾಗಿದ್ದೇನೆ. ಈ ಕಾರ್ಯಕ್ರಮದಲ್ಲಿ, ಪರಸ್ಪರ ಸ್ಫೂರ್ತಿದಾಯಕ ಪ್ರಯತ್ನಗಳನ್ನು ಚರ್ಚಿಸುವುದು ಮತ್ತು ಇಡೀ ದೇಶಕ್ಕೆ ಜನಾಂದೋಲನದ ಮೂಲಕ ಬದಲಾವಣೆಯ, ಪರಿವರ್ತನೆಯ ಕಥೆಯನ್ನು ಹೇಳುವುದು ನಮ್ಮ ಪ್ರಯತ್ನವಾಗಿದೆ. ಈ ಸಂಚಿಕೆಯಲ್ಲಿ, ದೇಶದ ಪ್ರತಿಯೊಬ್ಬ ಪ್ರಜೆಯ ಜೀವನದಲ್ಲಿ ಮಹತ್ತರವಾದ ಪ್ರಾಮುಖ್ಯತೆಯನ್ನು ಹೊಂದಿರುವ ದೇಶದ ಅಂತಹ ಒಂದು ಜನಾಂದೋಲನದ ಬಗ್ಗೆ ನಾನು ಇಂದು ನಿಮ್ಮೊಂದಿಗೆ ಚರ್ಚಿಸಲು ಬಯಸುತ್ತೇನೆ. ಆದರೆ, ಅದಕ್ಕೂ ಮುನ್ನ ನಾನು ಇಂದಿನ ಪೀಳಿಗೆಯ ಯುವಕರಿಗೆ, 24-25 ವರ್ಷ ವಯಸ್ಸಿನ ಯುವಕರಿಗೆ ಒಂದು ಪ್ರಶ್ನೆಯನ್ನು ಕೇಳಲು ಬಯಸುತ್ತೇನೆ ಮತ್ತು ಪ್ರಶ್ನೆ ತುಂಬಾ ಗಂಭೀರವಾಗಿದೆ ... ನನ್ನ ಪ್ರಶ್ನೆಯ ಬಗ್ಗೆ ವಿಚಾರ ಮಾಡಿ. ನಿಮ್ಮ ಹೆತ್ತವರು ನಿಮ್ಮ ವಯಸ್ಸಿನವರಾಗಿದ್ದಾಗ, ಒಮ್ಮೆ ಅವರ ಬದುಕುವ ಹಕ್ಕನ್ನು ಸಹ ಅವರಿಂದ ಕಸಿದುಕೊಳ್ಳಲಾಯಿತು ಎಂದು ನಿಮಗೆ ತಿಳಿದಿದೆಯೇ? ಇದು ಹೇಗೆ ಸಂಭವಿಸಿತು ಎಂದು ನೀವು ಯೋಚಿಸುತ್ತಿರಬಹುದು? ಇದು ಅಸಾಧ್ಯ! ಆದರೆ ನನ್ನ ಯುವ ಸ್ನೇಹಿತರೇ, ಇದು ನಮ್ಮ ದೇಶದಲ್ಲಿ ಒಮ್ಮೆ ಸಂಭವಿಸಿದೆ. ಇದು ಹಲವು ವರ್ಷಗಳ ಹಿಂದೆ 1975 ರಲ್ಲಿ ಸಂಭವಿಸಿತು. ತುರ್ತು ಪರಿಸ್ಥಿತಿ ಹೇರಿದಾಗ ಅದು ಜೂನ್ ತಿಂಗಳು. ಅದರಲ್ಲಿ ದೇಶದ ನಾಗರಿಕರ ಎಲ್ಲ ಹಕ್ಕುಗಳನ್ನು ಕಸಿದುಕೊಳ್ಳಲಾಯಿತು. ಹೀಗೆ ಕಸಿದುಕೊಂಡ ಹಕ್ಕುಗಳಲ್ಲಿ ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಎಲ್ಲಾ ಭಾರತೀಯರಿಗೆ ಒದಗಿಸಲಾದ 'ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯ' ದ ಹಕ್ಕು ಕೂಡಾ ಒಂದಾಗಿತ್ತು. ಆ ಸಮಯದಲ್ಲಿ ಭಾರತದ ಪ್ರಜಾಪ್ರಭುತ್ವವನ್ನು ಹೊಸಕಿ ಹಾಕುವ ಪ್ರಯತ್ನ ನಡೆಯಿತು. ದೇಶದ ನ್ಯಾಯಾಲಯಗಳು, ಸಾಂವಿಧಾನಿಕ ಸಂಸ್ಥೆಗಳು, ಪತ್ರಿಕಾ ಸಂಸ್ಥೆಗಳನ್ನು ನಿಯಂತ್ರಣಕ್ಕೆ ಒಳಪಡಿಸಲಾಯಿತು ಸೆನ್ಸಾರ್‌ಶಿಪ್‌ನ ಸ್ಥಿತಿಯು ಹೇಗಿತ್ತು ಎಂದರೆ ಅನುಮೋದನೆಯಿಲ್ಲದೆ, ಅನುಮತಿ ಇಲ್ಲದೆ ಯಾವುದನ್ನೂ ಮುದ್ರಿಸುವುದು ಅಸಾಧ್ಯವಾಗಿತ್ತು. ನನಗೆ ನೆನಪಿದೆ, ಖ್ಯಾತ ಗಾಯಕ ಕಿಶೋರ್ ಕುಮಾರ್ ಸರ್ಕಾರವನ್ನು ಶ್ಲಾಘಿಸಲು ನಿರಾಕರಿಸಿದಾಗ, ಅವರನ್ನು ನಿಷೇಧಿಸಲಾಯಿತು. ರೇಡಿಯೊದಲ್ಲಿ ಅವರ ಅವಕಾಶವನ್ನು ತಡೆಹಿಡಿಯಲಾಯಿತು. ಆದರೆ ಹಲವು ಪ್ರಯತ್ನಗಳು, ಸಾವಿರಾರು ಬಂಧನಗಳು ಮತ್ತು ಲಕ್ಷಾಂತರ ಜನರ ಮೇಲಿನ ದೌರ್ಜನ್ಯಗಳು ನಡೆದರೂ ಪ್ರಜಾಪ್ರಭುತ್ವದ ಮೇಲಿನ ಭಾರತದ ಜನರ ನಂಬಿಕೆ ಅಲುಗಾಡಲಿಲ್ಲ ... ಎಂದಿಗೂ ಇಲ್ಲ! ನಮಗೆ, ಭಾರತದ ಜನರಿಗೆ, ನಾವು ಶತಮಾನಗಳಿಂದ ಅನುಸರಿಸಿಕೊಂಡು ಬಂದಿರುವ ಪ್ರಜಾಪ್ರಭುತ್ವದ ಸಂಸ್ಕಾರಗಳು; ನಮ್ಮ ರಕ್ತನಾಳಗಳಲ್ಲಿರುವ ಪ್ರಜಾಪ್ರಭುತ್ವದ ಮನೋಭಾವ ಅಂತಿಮವಾಗಿ ಗೆಲುವು ಸಾಧಿಸಿದವು. ಭಾರತದ ಜನರು ತುರ್ತು ಪರಿಸ್ಥಿತಿಯನ್ನು ತೊಡೆದು ಹಾಕಿದರು ಮತ್ತು ಪ್ರಜಾಸತ್ತಾತ್ಮಕ ರೀತಿಯಲ್ಲಿ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಿದರು. ಪ್ರಜಾಸತ್ತಾತ್ಮಕ ರೀತಿಯಲ್ಲಿ ಸರ್ವಾಧಿಕಾರಿ ಮನಸ್ಥಿತಿ, ಸರ್ವಾಧಿಕಾರಿ ಧೋರಣೆಗಳನ್ನು ಸೋಲಿಸಿದ ಇಂತಹ ಉದಾಹರಣೆ ಇಡೀ ಜಗತ್ತಿನಲ್ಲಿ ಸಿಗುವುದು ಕಷ್ಟ. ತುರ್ತುಪರಿಸ್ಥಿತಿಯ ಸಮಯದಲ್ಲಿ, ದೇಶವಾಸಿಗಳ ಹೋರಾಟದಲ್ಲಿ ಭಾಗಿಯಾಗುವ-ಪ್ರಜಾಪ್ರಭುತ್ವದ ಸೈನಿಕನಾಗಿ ಸಾಕ್ಷಿಯಾಗುವ ಸೌಭಾಗ್ಯ ನನಗೆ ಲಭಿಸಿತ್ತು. ಇಂದು, ದೇಶವು ತನ್ನ ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸುತ್ತಿರುವಾಗ, ಅಮೃತ ಮಹೋತ್ಸವವನ್ನು ಆಚರಿಸುತ್ತಿರುವಾಗ, ಆ ಭಯಾನಕ ತುರ್ತು ಪರಿಸ್ಥಿತಿಯನ್ನು ನಾವು ಎಂದಿಗೂ ಮರೆಯಬಾರದು. ಮುಂದಿನ ಪೀಳಿಗೆಯೂ ಮರೆಯಬಾರದು. ಅಮೃತ ಮಹೋತ್ಸವವು ನೂರಾರು ವರ್ಷಗಳ ಗುಲಾಮಗಿರಿಯಿಂದ ಸ್ವಾತಂತ್ರ್ಯದ ವಿಜಯದ ಸಾಹಸದ ಕಥನವನ್ನು ಒಳಗೊಂಡಿರುವುದು ಮಾತ್ರವಲ್ಲದೆ, ಸ್ವಾತಂತ್ರ್ಯದ ನಂತರದ 75 ವರ್ಷಗಳ ಪ್ರಯಾಣವನ್ನೂ ಒಳಗೊಂಡಿದೆ. ನಾವು ಇತಿಹಾಸದ ಪ್ರತಿಯೊಂದು ಪ್ರಮುಖ ಹಂತದಿಂದ ಕಲಿಯುತ್ತಾ ಮುನ್ನಡೆಯಬೇಕಿದೆ.

ನನ್ನ ಪ್ರೀತಿಯ ದೇಶವಾಸಿಗಳೇ, ಜೀವನದಲ್ಲಿ ಆಕಾಶಕ್ಕೆ ಸಂಬಂಧಿಸಿದ ರಮ್ಯ ಕಥಾನಕಗಳಿಲ್ಲದವರು ಯಾರೂ ಇರಲಿಕ್ಕಿಲ್ಲ. ಬಾಲ್ಯದಲ್ಲಿ, ಆಗಸದ ಚಂದ್ರ ಮತ್ತು ನಕ್ಷತ್ರಗಳ ಕಥೆಗಳು ಎಲ್ಲರನ್ನೂ ಆಕರ್ಷಿಸುತ್ತವೆ. ಯುವಜನರಿಗೆ, ಆಕಾಶವನ್ನು ಮುಟ್ಟುವುದು ಎಂದರೆ ಕನಸುಗಳನ್ನು ನನಸಾಗಿಸುವುದು ಎಂದರ್ಥ. ಇಂದು, ನಮ್ಮ ಭಾರತವು ಹಲವಾರು ಕ್ಷೇತ್ರಗಳಲ್ಲಿ ಯಶಸ್ಸಿನ ಆಕಾಶವನ್ನು ಮುಟ್ಟುತ್ತಿರುವಾಗ, ಆಕಾಶ ಅಥವಾ ಬಾಹ್ಯಾಕಾಶವು ಸ್ಪರ್ಶ ಲಭ್ಯವಾಗದೇ ಉಳಿಯುವುದು ಹೇಗೆ ಸಾಧ್ಯ!. ಕಳೆದ ಕೆಲವು ವರ್ಷಗಳಲ್ಲಿ, ನಮ್ಮ ದೇಶದಲ್ಲಿ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದ ಅನೇಕ ದೊಡ್ಡ ಸಾಧನೆಗಳನ್ನು ಸಾಧಿಸಲಾಗಿದೆ. ದೇಶದ ಈ ಸಾಧನೆಗಳಲ್ಲಿ ಇನ್-ಸ್ಪೇಸ್ ಹೆಸರಿನ ಏಜೆನ್ಸಿಯ ರಚನೆಯೂ ಒಂದು … ಭಾರತದ ಖಾಸಗಿ ವಲಯಕ್ಕೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅವಕಾಶಗಳನ್ನು ಉತ್ತೇಜಿಸುವ ಏಜೆನ್ಸಿ ಇದು. ಈ ಆರಂಭವು ವಿಶೇಷವಾಗಿ ನಮ್ಮ ದೇಶದ ಯುವಜನರನ್ನು ಆಕರ್ಷಿಸಿದೆ. ಅನೇಕ ಯುವಕರಿಂದ ನನಗೆ ಈ ಸಂಬಂಧ ಸಂದೇಶಗಳು ಬಂದಿವೆ.

ಕೆಲವು ದಿನಗಳ ಹಿಂದೆ ನಾನು ಇನ್-ಸ್ಪೇಸ್‌ನ ಪ್ರಧಾನ ಕಛೇರಿಯನ್ನು ಲೋಕಾರ್ಪಣೆ ಮಾಡಲು ಹೋದಾಗ, ಅನೇಕ ಯುವ ಸ್ಟಾರ್ಟ್‌ಅಪ್‌ಗಳ ಆಲೋಚನೆಗಳು ಮತ್ತು ಉತ್ಸಾಹವನ್ನು ನೋಡಿದೆ. ನಾನು ಕೂಡ ಅವರ ಜೊತೆ ತುಂಬಾ ಹೊತ್ತು ಮಾತನಾಡಿದೆ. ಅವರ ಬಗ್ಗೆ ತಿಳಿದಾಗ ನಿಮಗೆ ಆಶ್ಚರ್ಯಪಡದೆ ಇರಲು ಸಾಧ್ಯವಾಗದು. ಉದಾಹರಣೆಗೆ, ಸ್ಪೇಸ್ ಸ್ಟಾರ್ಟ್-ಅಪ್‌ಗಳ (ಬಾಹ್ಯಾಕಾಶ ನವೋದ್ಯಮಗಳ) ಸಂಖ್ಯೆ ಮತ್ತು ವೇಗವನ್ನು ಗಮನಿಸಿ. ಕೆಲವು ವರ್ಷಗಳ ಹಿಂದೆ, ನಮ್ಮ ದೇಶದಲ್ಲಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಯಾರೂ ನವೋದ್ಯಮಗಳ ಬಗ್ಗೆ ಯೋಚಿಸಿರಲಿಲ್ಲ. ಇಂದು ಅವುಗಳ ಸಂಖ್ಯೆ ನೂರಕ್ಕೂ ಹೆಚ್ಚು. ಈ ಎಲ್ಲಾ ನವೋದ್ಯಮಗಳು ಈ ಹಿಂದೆ ಯೋಚಿಸಿರದ ಅಥವಾ ಖಾಸಗಿ ವಲಯಕ್ಕೆ ಅಸಾಧ್ಯವೆಂದು ಪರಿಗಣಿಸಲಾದ ಆಲೋಚನೆಗಳ ಮೇಲೆ ಕಾರ್ಯನಿರ್ವಹಿಸುತ್ತಿವೆ. ಉದಾಹರಣೆಗೆ, ಚೆನ್ನೈ ಮತ್ತು ಹೈದರಾಬಾದ್‌ಗಳು ಎರಡು ನವೋದ್ಯಮಗಳನ್ನು ಹೊಂದಿವೆ, ಅವುಗಳೆಂದರೆ - ಅಗ್ನಿಕುಲ್ ಮತ್ತು ಸ್ಕೈರೂಟ್! ಈ ಸ್ಟಾರ್ಟ್-ಅಪ್‌ಗಳು ಉಡಾವಣಾ ವಾಹನಗಳನ್ನು ಅಭಿವೃದ್ಧಿಪಡಿಸುತ್ತಿವೆ, ಅದು ಸಣ್ಣ ಪೇಲೋಡ್‌ಗಳನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯುತ್ತದೆ. ಈ ಮೂಲಕ ಬಾಹ್ಯಾಕಾಶಕ್ಕೆ ಉಡಾವಣೆಯ ವೆಚ್ಚ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಅದೇ ರೀತಿ, ಹೈದರಾಬಾದ್‌ನ ಮತ್ತೊಂದು ನವೋದ್ಯಮ ಧ್ರುವ ಸ್ಪೇಸ್, ಉಪಗ್ರಹ ಡಿಪ್ಲೋಯರ್ ಮತ್ತು ಉಪಗ್ರಹಗಳಿಗಾಗಿ ಉನ್ನತ ತಂತ್ರಜ್ಞಾನದ ಸೌರ ಪ್ಯಾನಲ್‌ಗಳ ತಯಾರಿಕೆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಬಾಹ್ಯಾಕಾಶದಲ್ಲಿ ತ್ಯಾಜ್ಯವನ್ನು ಗುರುತು ಮಾಡಲು ಪ್ರಯತ್ನಿಸುತ್ತಿರುವ ಮತ್ತೊಂದು ಬಾಹ್ಯಾಕಾಶ ನವೋದ್ಯಮ ದಿಗಂತರದ ತನ್ವೀರ್ ಅಹ್ಮದ್ ಅವರನ್ನು ನಾನು ಭೇಟಿ ಮಾಡಿದ್ದೇನೆ. ಬಾಹ್ಯಾಕಾಶದಲ್ಲಿಯ ತ್ಯಾಜ್ಯದ ಸಮಸ್ಯೆಯನ್ನು ನಿವಾರಿಸುವ ಕಾರ್ಯಾಚರಣಾ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಬೇಕು ಎಂದು ನಾನು ಅವರಿಗೆ ಹೇಳಿದ್ದೇನೆ. ದಿಗಂತರಾ ಮತ್ತು ಧ್ರುವ ಸ್ಪೇಸ್ ಎರಡೂ ಜೂನ್ 30 ರಂದು ಇಸ್ರೋದ ಉಡಾವಣಾ ವಾಹನದಿಂದ ತಮ್ಮ ಮೊದಲ ಉಡಾವಣೆ ಮಾಡಲಿವೆ. ಅದೇ ರೀತಿ ಬೆಂಗಳೂರಿನಲ್ಲಿರುವ ಬಾಹ್ಯಾಕಾಶ ನವೋದ್ಯಮ ಆಸ್ಟ್ರೋಮ್ ನ ಸಂಸ್ಥಾಪಕಿ ನೇಹಾ ಕೂಡ ಅದ್ಭುತ ಐಡಿಯಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ನವೋದ್ಯಮ ಚಪ್ಪಟೆ ಆಂಟೆನಾಗಳನ್ನು ತಯಾರಿಸುತ್ತಿದೆ ಅವು ಗಾತ್ರದಲ್ಲಿ ಚಿಕ್ಕದಾಗಿರುತ್ತವೆ, ಮಾತ್ರವಲ್ಲ ಅವುಗಳ ವೆಚ್ಚವೂ ತುಂಬಾ ಕಡಿಮೆ. ಈ ತಂತ್ರಜ್ಞಾನಕ್ಕೆ ಪ್ರಪಂಚದಾದ್ಯಂತ ಬೇಡಿಕೆ ಇರುವ ಸಾಧ್ಯತೆ ಇದೆ.

ಸ್ನೇಹಿತರೇ, ಇನ್-ಸ್ಪೇಸ್ ಕಾರ್ಯಕ್ರಮದಲ್ಲಿ ನಾನು ಮೆಹ್ಸಾನಾ ಶಾಲೆಯ ವಿದ್ಯಾರ್ಥಿನಿ ಬೇಟಿ ತನ್ವಿ ಪಟೇಲ್ ಅವರನ್ನು ಭೇಟಿಯಾಗಿದ್ದೆ. ಅವಳು ಅತ್ಯಂತ ಚಿಕ್ಕ ಉಪಗ್ರಹದ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾಳೆ, ಅದು ಮುಂದಿನ ಕೆಲವು ತಿಂಗಳುಗಳಲ್ಲಿ ಬಾಹ್ಯಾಕಾಶಕ್ಕೆ ಉಡಾವಣೆಯಾಗಲಿದೆ. ತನ್ವಿ ತನ್ನ ಕೆಲಸದ ಬಗ್ಗೆ ನನಗೆ ಗುಜರಾತಿಯಲ್ಲಿ ತುಂಬಾ ಸರಳವಾಗಿ ತಿಳಿಸಿದ್ದಾಳೆ. ಅಮೃತ್ ಮಹೋತ್ಸವದಲ್ಲಿ ತನ್ವಿಯಂತೆ, ದೇಶದ ಸುಮಾರು ಏಳುನೂರೈವತ್ತು ಶಾಲಾ ವಿದ್ಯಾರ್ಥಿಗಳು ಇಂತಹ 75 ಉಪಗ್ರಹಗಳ ಬಗ್ಗೆ ಕಾರ್ಯನಿರತರಾಗಿದ್ದಾರೆ ಮತ್ತು ಈ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ದೇಶದ ಸಣ್ಣ ಪಟ್ಟಣಗಳಿಂದ ಬಂದವರು ಎಂಬುದು ಬಹಳ ಸಂತೋಷದ ಸಂಗತಿ.

ಸ್ನೇಹಿತರೇ, ಕೆಲವು ವರ್ಷಗಳ ಹಿಂದೆ ಯಾರ ಮನಸ್ಸಿನಲ್ಲಿ ಬಾಹ್ಯಾಕಾಶದ ಚಿತ್ರವು ರಹಸ್ಯದಂತೆ ಕಾಡುತ್ತಿತ್ತೋ -ಅದೇ ಯುವಕರು ಇವರು. ದೇಶವು ಬಾಹ್ಯಾಕಾಶ ಸುಧಾರಣೆಗಳನ್ನು ಕೈಗೊಂಡಿತು ಮತ್ತು ಅದೇ ಯುವಕರು ಈಗ ತಮ್ಮದೇ ಆದ ಉಪಗ್ರಹಗಳನ್ನು ಉಡಾವಣೆ ಮಾಡುತ್ತಿದ್ದಾರೆ. ದೇಶದ ಯುವಜನತೆ ಆಕಾಶ ಮುಟ್ಟಲು ಸಿದ್ಧವಾಗಿರುವಾಗ ನಮ್ಮ ದೇಶ ಹಿಂದೆ ಬೀಳುವುದಾದರೂ ಹೇಗೆ?

ನನ್ನ ಪ್ರೀತಿಯ ದೇಶವಾಸಿಗಳೇ, 'ಮನ್ ಕಿ ಬಾತ್' ನಲ್ಲಿ, ನಿಮ್ಮ ಮನಸ್ಸನ್ನು ಸಂತೋಷಪಡಿಸುವ ಮತ್ತು ನಿಮಗೆ ಸ್ಫೂರ್ತಿ ನೀಡುವ ವಿಷಯದ ಕುರಿತು ಈಗ ಮಾತನಾಡೋಣ. ಇತ್ತೀಚೆಗೆ, ನಮ್ಮ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಮತ್ತೆ ಮುಖ್ಯಾಂಶಗಳಲ್ಲಿ ಕಾಣಿಸಿಕೊಂಡರು. ಒಲಿಂಪಿಕ್ಸ್ ನಂತರವೂ ಒಂದರ ಹಿಂದೆ ಒಂದರಂತೆ ಹೊಸ ದಾಖಲೆಗಳನ್ನು ಅವರು ಮಾಡುತ್ತಿದ್ದಾರೆ. ಫಿನ್‌ಲ್ಯಾಂಡ್‌ನಲ್ಲಿ ನಡೆದ ಪಾವೊ ನೂರ್ಮಿ ಕ್ರೀಡಾಕೂಟದಲ್ಲಿ ನೀರಜ್ ಬೆಳ್ಳಿ ಗೆದ್ದರು. ಅಷ್ಟೇ ಅಲ್ಲ, ತಮ್ಮದೇ ಜಾವೆಲಿನ್ ಥ್ರೋ ದಾಖಲೆಯನ್ನೂ ಅವರು ಮುರಿದಿದ್ದಾರೆ. ಕುರ್ಟಾನೆ ಕ್ರೀಡಾಕೂಟದಲ್ಲಿ ನೀರಜ್ ಚಿನ್ನ ಗೆಲ್ಲುವ ಮೂಲಕ ಮತ್ತೊಮ್ಮೆ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಅಲ್ಲಿನ ಹವಾಮಾನ ಪ್ರತಿಕೂಲವಾಗಿದ್ದಾಗಲೂ ಅವರು ಈ ಚಿನ್ನವನ್ನು ಗೆದ್ದರು. ಈ ಉತ್ಸಾಹ ಇಂದಿನ ಯುವಕರ ಲಕ್ಷಣವಾಗಿದೆ. ನವೋದ್ಯಮಗಳಿಂದ ಕ್ರೀಡಾ ಪ್ರಪಂಚದವರೆಗೆ, ಭಾರತದ ಯುವಜನತೆ ಹೊಸ ದಾಖಲೆಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ನಡೆದ ಖೇಲೋ ಇಂಡಿಯಾ ಯೂತ್ ಗೇಮ್ಸ್ ನಲ್ಲೂ ನಮ್ಮ ಆಟಗಾರರು ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಈ ಆಟಗಳಲ್ಲಿ ಒಟ್ಟು 12 ದಾಖಲೆಗಳನ್ನು ಮುರಿಯಲಾಗಿದೆ ಎಂದು ತಿಳಿದರೆ ನೀವು ಹರ್ಷಪಡುತ್ತೀರಿ - ಅಷ್ಟೇ ಅಲ್ಲ, 11 ಹೊಸ ದಾಖಲೆಗಳು ಮಹಿಳಾ ಆಟಗಾರರ ಹೆಸರಿನಲ್ಲಿ ನೋಂದಾವಣೆಯಾಗಿವೆ. ಮಣಿಪುರದ ಎಂ.ಮಾರ್ಟಿನಾ ದೇವಿ ವೇಟ್ ಲಿಫ್ಟಿಂಗ್ (ಭಾರ ಎತ್ತುಗೆಯಲ್ಲಿ) ನಲ್ಲಿ ಎಂಟು ದಾಖಲೆಗಳನ್ನು ಮಾಡಿದ್ದಾರೆ.

ಅದೇ ರೀತಿ ಸಂಜನಾ, ಸೋನಾಕ್ಷಿ ಮತ್ತು ಭಾವನಾ ಕೂಡ ವಿವಿಧ ದಾಖಲೆಗಳನ್ನು ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಅಂತಾರಾಷ್ಟ್ರೀಯ ಕ್ರೀಡಾ ಕ್ಷೇತ್ರದಲ್ಲಿ ಭಾರತದ ಘನತೆ ಎಷ್ಟರಮಟ್ಟಿಗೆ ಏರಲಿದೆ ಎಂಬುದನ್ನು ಈ ಆಟಗಾರರು ತಮ್ಮ ಕಠಿಣ ಪರಿಶ್ರಮದಿಂದ ಸಾಬೀತು ಮಾಡಿದ್ದಾರೆ. ನಾನು ಈ ಎಲ್ಲ ಆಟಗಾರರನ್ನು ಅಭಿನಂದಿಸುತ್ತೇನೆ ಮತ್ತು ಉತ್ತಮ ಭವಿಷ್ಯಕ್ಕಾಗಿ ಅವರಿಗೆ ಶುಭ ಹಾರೈಸುತ್ತೇನೆ.

ಸ್ನೇಹಿತರೇ, ಖೇಲೋ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ ಮತ್ತೊಂದು ವಿಶೇಷತೆ ಇದೆ. ಈ ಬಾರಿಯೂ ಇಂತಹ ಹಲವು ಪ್ರತಿಭೆಗಳು ಹೊರಹೊಮ್ಮಿವೆ. ಈ ಪ್ರತಿಭಾವಂತರು ತೀರಾ ಸಾಮಾನ್ಯ ಕುಟುಂಬದಿಂದ ಬಂದವರು. ಯಶಸ್ಸಿನ ಈ ಹಂತವನ್ನು ತಲುಪಲು ಈ ಆಟಗಾರರು ತಮ್ಮ ಜೀವನದಲ್ಲಿ ಸಾಕಷ್ಟು ಹೋರಾಟ ಮಾಡಿದ್ದಾರೆ. ಅವರ ಯಶಸ್ಸಿನಲ್ಲಿ, ಅವರ ಕುಟುಂಬ ಮತ್ತು ಪೋಷಕರು ಸಹ ದೊಡ್ಡ ಪಾತ್ರವನ್ನು ವಹಿಸಿದ್ದಾರೆ.

70 ಕಿಮೀ ಸೈಕ್ಲಿಂಗ್‌ನಲ್ಲಿ ಚಿನ್ನ ಗೆದ್ದ ಶ್ರೀನಗರದ ಆದಿಲ್ ಅಲ್ತಾಫ್ ಅವರ ತಂದೆ ಟೈಲರಿಂಗ್ ಕೆಲಸ ಮಾಡುತ್ತಾರೆ. ಆದರೆ, ಮಗನ ಕನಸುಗಳನ್ನು ನನಸಾಗಿಸಲು ಅವರು ಎಲ್ಲವನ್ನೂ ಮಾಡಿದ್ದಾರೆ. ಇಂದು ಆದಿಲ್ ತನ್ನ ತಂದೆ ಮತ್ತು ಇಡೀ ಜಮ್ಮು-ಕಾಶ್ಮೀರಕ್ಕೆ ಹೆಮ್ಮೆ ತಂದಿದ್ದಾರೆ. ಚಿನ್ನ ಗೆದ್ದ ಎಲ್.ಧನುಷ್ ಅವರ ತಂದೆ ಚೆನ್ನೈಯಲ್ಲಿ ಬಡಗಿ. ಸಾಂಗ್ಲಿಯ ಮಗಳು ಕಾಜೋಲ್ ಸರ್ಗರ್ ಅವರ ತಂದೆ ಚಹಾ ಮಾರಾಟಗಾರರಾಗಿ ಕೆಲಸ ಮಾಡುತ್ತಾರೆ. ಕಾಜೋಲ್ ತನ್ನ ತಂದೆಗೆ ಸಹಾಯ ಮಾಡುತ್ತಾ ಅದರ ಜೊತೆಗೆ ಭಾರ ಎತ್ತುಗೆಯನ್ನು ಅಭ್ಯಾಸ ಮಾಡುತ್ತಿದ್ದರು. ಅವರ ಮತ್ತು ಅವರ ಕುಟುಂಬದವರ ಈ ಕಠಿಣ ಪರಿಶ್ರಮವು ಫಲ ನೀಡಿತು ಮತ್ತು ಕಾಜೋಲ್ ಭಾರ ಎತ್ತುಗೆಯಲ್ಲಿ ಸಾಕಷ್ಟು ಪ್ರಶಂಸೆಯನ್ನು ಗಳಿಸಿದ್ದಾರೆ. ರೋಹ್ಟಕ್‌ನ ತನು ಇದೇ ರೀತಿಯ ಪವಾಡವನ್ನು ಮೆರೆದಿದ್ದಾರೆ. ತನು ಅವರ ತಂದೆ ರಾಜ್‌ಬೀರ್ ಸಿಂಗ್ ರೋಹ್ಟಕ್‌ನಲ್ಲಿ ಶಾಲಾ ಬಸ್ ಚಾಲಕ. ಕುಸ್ತಿಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ತನು ತನ್ನ ಮತ್ತು ತನ್ನ ಕುಟುಂಬದ ಹಾಗೂ ತಂದೆಯ ಕನಸನ್ನು ನನಸಾಗಿಸಿದ್ದಾರೆ.

ಸ್ನೇಹಿತರೇ, ಕ್ರೀಡಾ ಜಗತ್ತಿನಲ್ಲಿ ಈಗ ಭಾರತೀಯ ಆಟಗಾರರ ಪ್ರಾಬಲ್ಯ ಹೆಚ್ಚುತ್ತಿದೆ; ಇದೇ ವೇಳೆ, ಭಾರತೀಯ ಕ್ರೀಡೆಗಳ ಹೊಸ ಪ್ರತಿಷ್ಟೆಯೂ ಅನಾವರಣಗೊಳ್ಳುತ್ತಿದೆ. ಉದಾಹರಣೆಗೆ, ಖೇಲೋ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ, ಒಲಿಂಪಿಕ್ಸ್‌ನಲ್ಲಿರುವ ವಿಭಾಗಗಳ ಜೊತೆ, ಐದು ದೇಶೀಯ ಕ್ರೀಡೆಗಳನ್ನು ಈ ಬಾರಿ ಸೇರಿಸಲಾಗಿದೆ. ಈ ಐದು ಕ್ರೀಡೆಗಳು - ಗಟ್ಕಾ, ಥಾಂಗ್ ಥಾ, ಯೋಗಾಸನ, ಕಲರಿಪಯಟ್ಟು ಮತ್ತು ಮಲ್ಲಕಂಭ.

ಸ್ನೇಹಿತರೇ, ನಮ್ಮದೇ ದೇಶದಲ್ಲಿ ಶತಮಾನಗಳ ಹಿಂದೆ ಜನ್ಮತಾಳಿದ ಆಟವೊಂದರ ಅಂತಾರಾಷ್ಟ್ರೀಯ ಪಂದ್ಯಾವಳಿ...ಭಾರತದಲ್ಲಿ ನಡೆಯಲಿದೆ. ಇದುವೇ ಜುಲೈ 28 ರಿಂದ ಪ್ರಾರಂಭವಾಗುವ ಚೆಸ್ ಒಲಿಂಪಿಯಾಡ್ ಕ್ರೀಡಾಕೂಟ. ಈ ಬಾರಿ 180ಕ್ಕೂ ಹೆಚ್ಚು ದೇಶಗಳು ಚೆಸ್ ಒಲಿಂಪಿಯಾಡ್ ನಲ್ಲಿ ಭಾಗವಹಿಸುತ್ತಿವೆ. ಇಂದು ಕ್ರೀಡೆ ಮತ್ತು ದೈಹಿಕ ಕ್ಷಮತೆಯ ಚರ್ಚೆಯು ಇನ್ನೊಂದು ಹೆಸರಿಲ್ಲದೆ ಸಮಾಪನಗೊಳ್ಳದು - ಇದು ತೆಲಂಗಾಣದ ಪರ್ವತಾರೋಹಿ ಪೂರ್ಣಾ ಮಾಲಾವತ್ ಅವರ ಹೆಸರು. 7 ಸವಾಲುಗಳನ್ನು ಪೂರ್ಣಗೊಳಿಸುವ ಮೂಲಕ ಪೂರ್ಣಾ ತಮ್ಮ ಯಶಸ್ಸಿನ ಮುಡಿಗೆ ಮತ್ತೊಂದು ಗರಿಯನ್ನು ಸಿಕ್ಕಿಸಿಕೊಂಡಿದ್ದಾರೆ. ಅದು ಏಳು ಶಿಖರಗಳ ಸವಾಲು...ಅದು ಏಳು ಅತ್ಯಂತ ಕಷ್ಟಕರವಾದ ಮತ್ತು ಅತಿ ಎತ್ತರದ ಕಡಿದಾದ ಪರ್ವತ ಶಿಖರಗಳನ್ನು ಏರುವ ಸವಾಲು. ತನ್ನ ಅದಮ್ಯ ಉತ್ಸಾಹದಿಂದ, ಪೂರ್ವಾ ಅವರು ಉತ್ತರ ಅಮೆರಿಕಾದ ಮೌಂಟ್ ಡೆನಾಲಿಯ ಅತ್ಯುನ್ನತ ಕಡಿದಾದ ಶಿಖರವನ್ನು ಆರೋಹಣ ಮಾಡಿದ್ದಾರೆ ಮತ್ತು ದೇಶಕ್ಕೆ ಗೌರವವನ್ನು ತಂದಿದ್ದಾರೆ. ಈ ಪೂರ್ಣಾ ಕೇವಲ 13 ನೇ ವಯಸ್ಸಿನಲ್ಲಿ ಮೌಂಟ್ ಎವರೆಸ್ಟ್ ಏರುವ ಅದ್ಭುತ ಸಾಧನೆಯನ್ನು ಮಾಡಿದ ಭಾರತದ ಮಗಳು.

ಸ್ನೇಹಿತರೇ, ಕ್ರೀಡೆಯ ವಿಷಯಕ್ಕೆ ಬಂದರೆ, ಇಂದು ನಾನು ಭಾರತದ ಅತ್ಯಂತ ಪ್ರತಿಭಾವಂತ ಕ್ರಿಕೆಟಿಗರಲ್ಲಿ ಒಬ್ಬರಾದ ಮಿಥಾಲಿ ರಾಜ್ ಬಗ್ಗೆ ಚರ್ಚಿಸಲು ಬಯಸುತ್ತೇನೆ.

ಈ ತಿಂಗಳಷ್ಟೇ, ಅವರು ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ, ಇದು ಅನೇಕ ಕ್ರೀಡಾ ಪ್ರೇಮಿಗಳನ್ನು ಭಾವನಾತ್ಮಕವಾಗಿ ಕಂಗೆಡಿಸಿದೆ. ಮಿಥಾಲಿ ಅಸಾಧಾರಣ ಆಟಗಾರ್ತಿ ಮಾತ್ರವಲ್ಲ, ಹಲವು ಆಟಗಾರರಿಗೆ ಅವರು ಪ್ರೇರಣೆ ಒದಗಿಸಿದ್ದಾರೆ, ಸ್ಫೂರ್ತಿಯಾಗಿದ್ದಾರೆ. ಮಿಥಾಲಿ ಅವರಿಗೆ ಭವ್ಯ ಭವಿಷ್ಯಕ್ಕಾಗಿ ನಾನು ಶುಭ ಹಾರೈಸುತ್ತೇನೆ.

ನನ್ನ ಪ್ರೀತಿಯ ದೇಶವಾಸಿಗಳೇ, 'ಮನ್ ಕಿ ಬಾತ್' ನಲ್ಲಿ ನಾವು “ತ್ಯಾಜ್ಯದಿಂದ ಸಂಪತ್ತು” ಕುರಿತಂತೆ ಯಶಸ್ವಿ ಪ್ರಯತ್ನಗಳನ್ನು ಚರ್ಚಿಸುತ್ತಿರುತ್ತೇವೆ. ಇದಕ್ಕೆ ಒಂದು ಉದಾಹರಣೆಯೆಂದರೆ ಮಿಜೋರಾಂನ ರಾಜಧಾನಿ ಐಜ್ವಾಲ್. ಐಜ್ವಾಲ್‌ನಲ್ಲಿ ಸುಂದರವಾದ 'ಚಿಟ್ಟೆ ಲುಯಿ' ನದಿ ಇದೆ, ಇದು ವರ್ಷಗಳ ನಿರ್ಲಕ್ಷ್ಯದಿಂದಾಗಿ ಕೊಳಕಿನ ಮತ್ತು ಕಸದ ರಾಶಿಯಾಗಿ ಮಾರ್ಪಟ್ಟಿತ್ತು. ಕಳೆದ ಕೆಲವು ವರ್ಷಗಳಿಂದ ಈ ನದಿಯನ್ನು ಉಳಿಸುವ ಪ್ರಯತ್ನಗಳು ಪ್ರಾರಂಭವಾಗಿವೆ. ಇದಕ್ಕಾಗಿ ಸ್ಥಳೀಯ ಸಂಸ್ಥೆಗಳು, ಸ್ವಯಂಸೇವಾ ಸಂಸ್ಥೆಗಳು ಮತ್ತು ಸ್ಥಳೀಯ ಜನರು ಒಟ್ಟಾಗಿ ಚಿಟ್ಟೆ ಲುಯಿ ರಕ್ಷಿಸಿ ಎಂಬ ಕ್ರಿಯಾ ಯೋಜನೆಯನ್ನು ಅನುಷ್ಟಾನಿಸುತ್ತಿದ್ದಾರೆ. ನದಿ ಸ್ವಚ್ಛತೆಯ ಈ ಅಭಿಯಾನ ತ್ಯಾಜ್ಯದಿಂದ ಸಂಪತ್ತು ಸೃಷ್ಟಿಗೂ ಅವಕಾಶ ಕಲ್ಪಿಸಿದೆ. ವಾಸ್ತವದಲ್ಲಿ ಈ ನದಿ ಮತ್ತು ಅದರ ದಂಡೆಗಳು ಪ್ಲಾಸ್ಟಿಕ್ ಮತ್ತು ಪಾಲಿಥಿನ್ ತ್ಯಾಜ್ಯದಿಂದ ತುಂಬಿ ಹೋಗಿದ್ದವು. ನದಿ ಉಳಿಸಲು ಶ್ರಮಿಸುತ್ತಿರುವ ಸಂಸ್ಥೆ, ಈ ಪಾಲಿಥಿನ್ ಅಂದರೆ ನದಿಯಿಂದ ಹೊರ ತೆಗೆಯುವ ತ್ಯಾಜ್ಯವನ್ನು ಬಳಸಿ ರಸ್ತೆ ನಿರ್ಮಿಸಲು ನಿರ್ಧರಿಸಿತು. ಅದರಿಂದ, ಮಿಜೋರಾಂನ ಹಳ್ಳಿಯೊಂದರಲ್ಲಿ, ರಾಜ್ಯದ ಮೊದಲ ಪ್ಲಾಸ್ಟಿಕ್ ರಸ್ತೆಯನ್ನು ನಿರ್ಮಿಸಲಾಯಿತು ... ಅದು ಸ್ವಚ್ಛತೆ ಮತ್ತು ಅದು ಅಭಿವೃದ್ಧಿಯೂ ಆಗಿದೆ.

ಸ್ನೇಹಿತರೇ, ಪುದುಚೇರಿಯ ಯುವಕರು ತಮ್ಮ ಸ್ವಯಂಸೇವಾ ಸಂಸ್ಥೆಗಳ ಮೂಲಕ ಅಂತಹ ಒಂದು ಪ್ರಯತ್ನವನ್ನು ಕೈಗೊಂಡಿದ್ದಾರೆ. ಪುದುಚೇರಿ ಸಮುದ್ರ ತೀರದಲ್ಲಿದೆ. ಅಲ್ಲಿನ ಕಡಲ ತೀರಗಳು ಮತ್ತು ಸಮುದ್ರ ಸೌಂದರ್ಯವನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಾರೆ. ಪುದುಚೇರಿಯ ಸಮುದ್ರ ತೀರದಲ್ಲಿ ಪ್ಲಾಸ್ಟಿಕ್‌ನಿಂದ ಉಂಟಾಗುವ ಮಾಲಿನ್ಯ ಕೂಡಾ ಹೆಚ್ಚುತ್ತಿದೆ. ಇದರಿಂದ ಅದರ ಸಮುದ್ರ, ಮತ್ತು ಕಡಲ ದಂಡೆಗಳು ಮತ್ತು ಪರಿಸರವನ್ನು ಉಳಿಸಲು, ಇಲ್ಲಿನ ಜನರು 'ಜೀವನಕ್ಕಾಗಿ ಮರುಬಳಕೆ' ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಇಂದು, ಪುದುಚೇರಿಯ ಕಾರೈಕಲ್‌ನಲ್ಲಿ ಪ್ರತಿದಿನ ಸಾವಿರಾರು ಕಿಲೋಗ್ರಾಂಗಳಷ್ಟು ಕಸವನ್ನು ಸಂಗ್ರಹಿಸಿ ವಿಂಗಡಿಸಲಾಗುತ್ತದೆ. ಸಾವಯವ ತ್ಯಾಜ್ಯವನ್ನು ಗೊಬ್ಬರವಾಗಿ ಮಾಡಲಾಗುತ್ತದೆ. ಉಳಿದ ತ್ಯಾಜ್ಯವನ್ನು ಪ್ರತ್ಯೇಕಿಸಿ ಮರುಬಳಕೆ ಮಾಡಲಾಗುತ್ತದೆ. ಇಂತಹ ಪ್ರಯತ್ನಗಳು ಕೇವಲ ಸ್ಪೂರ್ತಿದಾಯಕವಾಗಿ ಮಾತ್ರವಲ್ಲ, ಏಕ ಬಳಕೆಯ ಪ್ಲಾಸ್ಟಿಕ್ ವಿರುದ್ಧ ಭಾರತದ ಅಭಿಯಾನಕ್ಕೆ ವೇಗವನ್ನು ನೀಡುತ್ತವೆ.

ಸ್ನೇಹಿತರೇ, ನಾನು ನಿಮ್ಮೊಂದಿಗೆ ಮಾತನಾಡುತ್ತಿರುವ ಈ ಸಮಯದಲ್ಲಿ, ಹಿಮಾಚಲ ಪ್ರದೇಶದಲ್ಲಿ ವಿಶಿಷ್ಟವಾದ ಸೈಕ್ಲಿಂಗ್ ಯಾತ್ರೆ ನಡೆಯುತ್ತಿದೆ. ಇದರ ಬಗ್ಗೆಯೂ ನಾನು ನಿಮಗೆ ಹೇಳಲು ಬಯಸುತ್ತೇನೆ. ಸ್ವಚ್ಛತೆಯ ಸಂದೇಶ ಸಾರುವ ಸೈಕ್ಲಿಸ್ಟ್‌ಗಳ (ಸೈಕಲ್ ಸವಾರರ) ಗುಂಪು ಶಿಮ್ಲಾದಿಂದ ಮಂಡಿಗೆ ಹೊರಟಿದೆ. ಈ ಜನರು ಪರ್ವತದ ರಸ್ತೆಗಳಲ್ಲಿ ಸುಮಾರು ನೂರ ಎಪ್ಪತ್ತೈದು ಕಿಲೋಮೀಟರ್ ದೂರವನ್ನು ಸೈಕ್ಲಿಂಗ್ ಮೂಲಕ ಕ್ರಮಿಸುತ್ತಾರೆ. ಈ ಗುಂಪಿನಲ್ಲಿ ಮಕ್ಕಳು ಹಾಗೂ ಹಿರಿಯರು ಇದ್ದಾರೆ. ನಮ್ಮ ಪರಿಸರ ಸ್ವಚ್ಛವಾಗಿದ್ದರೆ, ನಮ್ಮ ಪರ್ವತಗಳು ಮತ್ತು ನದಿಗಳು, ನಮ್ಮ ಸಮುದ್ರಗಳು ಸ್ವಚ್ಛವಾಗಿ ಉಳಿಯುತ್ತವೆ; ನಮ್ಮ ಆರೋಗ್ಯವೂ ಸುಧಾರಿಸುತ್ತದೆ. ಅಂತಹ ಪ್ರಯತ್ನಗಳ ಬಗ್ಗೆ ನೀವು ನನಗೆ ಬರೆಯುತ್ತಲೇ ಇರಿ.

ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ದೇಶದಲ್ಲಿ ಈಗ ಮುಂಗಾರು ಆವರಿಸುತ್ತಿದೆ. ಹಲವು ರಾಜ್ಯಗಳಲ್ಲಿ ಮಳೆ ಹೆಚ್ಚುತ್ತಿದೆ. ‘ಜಲ’ ಮತ್ತು ‘ಜಲ ಸಂರಕ್ಷಣೆ’ಯ ನಿಟ್ಟಿನಲ್ಲಿ ವಿಶೇಷ ಪ್ರಯತ್ನಗಳನ್ನು ಮಾಡುವ ಸಮಯವೂ ಇದಾಗಿದೆ. ನಮ್ಮ ದೇಶದಲ್ಲಿ, ಶತಮಾನಗಳಿಂದ, ಈ ಜವಾಬ್ದಾರಿಯನ್ನು ಸಮಾಜವು ಒಗ್ಗೂಡಿ ನಿಭಾಯಿಸುತ್ತಿದೆ. ನಿಮಗೆ ನೆನಪಿರಬಹುದು, 'ಮನ್ ಕಿ ಬಾತ್' ನಲ್ಲಿ ನಾವು ಒಮ್ಮೆ ಮೆಟ್ಟಿಲು ಬಾವಿಗಳ ಪರಂಪರೆಯನ್ನು ಚರ್ಚಿಸಿದ್ದೇವೆ. ಬಾವೊಲಿಗಳು ಎಂದರೆ ಬೃಹತ್ ಬಾವಿಗಳು, ಅವುಗಳು ಮೆಟ್ಟಿಲುಗಳನ್ನು ಹೊಂದಿರುತ್ತವೆ. ರಾಜಸ್ಥಾನದ ಉದಯಪುರದಲ್ಲಿ ನೂರಾರು ವರ್ಷಗಳಷ್ಟು ಹಳೆಯದಾದ ಅಂತಹ ಒಂದು ಮೆಟ್ಟಿಲು ಬಾವಿ ಇದೆ - ಅದುವೇ 'ಸುಲ್ತಾನ್ ಕಿ ಬಾವೊಲಿ'. ಇದನ್ನು ರಾವ್ ಸುಲ್ತಾನ್ ಸಿಂಗ್ ನಿರ್ಮಿಸಿದ್ದರು, ಆದರೆ ನಿರ್ಲಕ್ಷ್ಯದಿಂದಾಗಿ ಈ ಸ್ಥಳವು ಕ್ರಮೇಣ ಕಸದ ರಾಶಿಯಾಗಿ ಮಾರ್ಪಟ್ಟಿತು. ಒಂದು ದಿನ ಕೆಲವು ಯುವಕರು ತಿರುಗಾಡುತ್ತಾ ಈ ಮೆಟ್ಟಿಲುಬಾವಿಯನ್ನು ತಲುಪಿದರು ಮತ್ತು ಅದರ ಸ್ಥಿತಿಯನ್ನು ಕಂಡು ತುಂಬಾ ದುಃಖಿತರಾದರು. ಆ ಕ್ಷಣದಲ್ಲಿಯೇ ಈ ಯುವಕರು ಸುಲ್ತಾನ್ ಕಿ ಬಾವೋಲಿಯ ಚಿತ್ರ ಮತ್ತು ಅದೃಷ್ಟವನ್ನು ಬದಲಾಯಿಸಲು ನಿರ್ಧರಿಸಿದರು. ಅವರು ತಮ್ಮ ಈ ಕಾರ್ಯಾಚರಣೆಗೆ 'ಸುಲ್ತಾನ್ ಸೆ ಸುರ್-ತಾನ್' ಎಂದು ಹೆಸರಿಸಿದರು. ಇದೇನು ‘ಸುರ್ ತಾನ್! ನಿಮಗೆ ಆಶ್ಚರ್ಯವಾಗಿರಬಹುದು.ವಾಸ್ತವದಲ್ಲಿ ಅವರು ತಮ್ಮ ಪ್ರಯತ್ನಗಳ ಮೂಲಕ ಈ ಮೆಟ್ಟಿಲು ಬಾವಿಯನ್ನು ಪುನರುಜ್ಜೀವಗೊಳಿಸಿರುವುದು ಮಾತ್ರವಲ್ಲ ಅದನ್ನು ಸಂಗೀತದ ಸ್ವರಗಳು ಮತ್ತು ಮಾಧುರ್ಯಕ್ಕೆ ಜೋಡಿಸಿದ್ದಾರೆ. ಸುಲ್ತಾನನ ಮೆಟ್ಟಿಲು ಬಾವಿಯನ್ನು ಸ್ವಚ್ಛಗೊಳಿಸಿದ ನಂತರ, ಅದನ್ನು ಅಲಂಕರಿಸಿದ ಬಳಿಕ, ಸಾಮರಸ್ಯ ಮತ್ತು ಸಂಗೀತದ ಕಾರ್ಯಕ್ರಮವು ನಡೆಯುತ್ತದೆ. ಈ ಬದಲಾವಣೆಯ, ಪರಿವರ್ತನೆಯ ಬಗ್ಗೆ ತುಂಬಾ ಚರ್ಚೆಯಾಗುತ್ತಿದೆ, ಇದನ್ನು ನೋಡಲು ವಿದೇಶದಿಂದ ಸಾಕಷ್ಟು ಜನರು ಬರಲು ಪ್ರಾರಂಭಿಸಿದ್ದಾರೆ. ಈ ಯಶಸ್ವಿ ಪ್ರಯತ್ನದ ಪ್ರಮುಖ ಅಂಶವೆಂದರೆ ಅಭಿಯಾನವನ್ನು ಪ್ರಾರಂಭಿಸಿದ ಯುವಕರು ಚಾರ್ಟರ್ಡ್ ಅಕೌಂಟೆಂಟ್ ಗಳು. ಕಾಕತಾಳೀಯವೆಂಬಂತೆ, ಇನ್ನು ಕೆಲವೇ ದಿನಗಳಲ್ಲಿ, ಜುಲೈ 1ನ್ನು ಚಾರ್ಟರ್ಡ್ ಅಕೌಂಟೆಂಟ್ಸ್ ದಿನವನ್ನಾಗಿ ಆಚರಿಸಲಾಗುತ್ತದೆ. ನಾನು ದೇಶದ ಎಲ್ಲಾ ಸಿಎಗಳನ್ನು ಮುಂಚಿತವಾಗಿ ಅಭಿನಂದಿಸುತ್ತೇನೆ. ನಮ್ಮ ಜಲಮೂಲಗಳನ್ನು ಸಂಗೀತ ಮತ್ತು ಇತರ ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಜೋಡಿಸುವ ಮೂಲಕ ನಾವು ಇಂತಹದೇ ರೀತಿಯ ಜಾಗೃತಿಯ ಭಾವನೆಯನ್ನು ಮೂಡಿಸಬಹುದು. ಜಲ ಸಂರಕ್ಷಣೆ ಎಂದರೆ ಅದು ಜೀವ ಸಂರಕ್ಷಣೆ. ಇಂದಿನ ದಿನಗಳಲ್ಲಿ ಎಷ್ಟು 'ನದಿ ಉತ್ಸವ'ಗಳು ನಡೆಯುತ್ತಿವೆ ಎಂಬುದನ್ನು ನೀವು ನೋಡಿರಬಹುದು! ನಿಮ್ಮ ನಗರಗಳಲ್ಲಿ ಯಾವುದೇ ನೀರಿನ ಮೂಲಗಳಿದ್ದರೂ, ನೀವು ಒಂದಲ್ಲ ಒಂದು ಕಾರ್ಯಕ್ರಮವನ್ನು ಆಯೋಜಿಸುವಂತಾಗಬೇಕು.

ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ಉಪನಿಷತ್ತುಗಳು ಜೀವನ ಮಂತ್ರದ ಬಗ್ಗೆ ಉಲ್ಲೇಖಿಸುತ್ತವೆ- ‘ಚರೈವೇತಿ-ಚರೈವೇತಿ-ಚರೈವೇತಿ’- ಈ ಮಂತ್ರವನ್ನು ನೀವೂ ಕೇಳಿರಬಹುದು. ಇದರರ್ಥ – ಮುನ್ನಡೆಯುತ್ತಿರಿ, ಮುನ್ನಡೆಯುತ್ತಿರಿ ಎಂದು. ಈ ಮಂತ್ರವು ನಮ್ಮ ದೇಶದಲ್ಲಿ ತುಂಬಾ ಜನಪ್ರಿಯವಾಗಿದೆ ಏಕೆಂದರೆ ಅದು ಸದಾ ಚಲಿಸುತ್ತಲೇ ಇರುವ ಪ್ರಕೃತಿಯ ಭಾಗವಾಗಿದೆ. ಅದು ಚಲನಶೀಲವಾಗಿರುವಂತಹದು ಮತ್ತು ಸದಾ ಚಲಿಸುತ್ತಿರುವಂತಹದ್ದು. ಒಂದು ರಾಷ್ಟ್ರವಾಗಿ, ನಾವು ಸಾವಿರಾರು ವರ್ಷಗಳ ಅಭಿವೃದ್ಧಿಯ ಪ್ರಯಾಣದ ಮೂಲಕ ಇಲ್ಲಿಯವರೆಗೆ ಬಂದಿದ್ದೇವೆ. ಸಮಾಜವಾಗಿ, ನಾವು ಯಾವಾಗಲೂ ಹೊಸ ಆಲೋಚನೆಗಳನ್ನು, ಹೊಸ ಬದಲಾವಣೆಗಳನ್ನು ಸ್ವೀಕರಿಸುವ ಮೂಲಕ ಮುಂದೆ ಸಾಗಿದ್ದೇವೆ. ನಮ್ಮ ಸಾಂಸ್ಕೃತಿಕ ಚಲನಶೀಲತೆ ಮತ್ತು ಪ್ರವಾಸಗಳು ಇದಕ್ಕೆ ಸಾಕಷ್ಟು ಕೊಡುಗೆ ನೀಡಿವೆ. ಅದಕ್ಕಾಗಿಯೇ ನಮ್ಮ ಋಷಿಮುನಿಗಳು ಮತ್ತು ಸಂತರು ತೀರ್ಥಯಾತ್ರೆಯಂತಹ ಆಧ್ಯಾತ್ಮಿಕ ಜವಾಬ್ದಾರಿಗಳನ್ನು ನಮಗೆ ನೀಡಿದ್ದರು. ನಾವೆಲ್ಲರೂ ವಿವಿಧ ತೀರ್ಥಯಾತ್ರೆಗಳಿಗೆ ಹೋಗುತ್ತೇವೆ. ಈ ಬಾರಿ ಚಾರ್ ಧಾಮ್ ಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದನ್ನು ನೀವು ನೋಡಿರಬೇಕು. ನಮ್ಮ ದೇಶದಲ್ಲಿ ಕಾಲಕಾಲಕ್ಕೆ ವಿವಿಧ ದೇವಯಾತ್ರೆಗಳೂ ನಡೆಯುತ್ತವೆ. ದೇವ ಯಾತ್ರೆಗಳು... ಅಂದರೆ, ಇದರಲ್ಲಿ ಭಕ್ತರು ಮಾತ್ರವಲ್ಲದೆ ನಮ್ಮ ದೇವರುಗಳೂ ಪ್ರಯಾಣಿಸುತ್ತಾರೆ. ಇನ್ನು ಕೆಲವೇ ದಿನಗಳಲ್ಲಿ ಜುಲೈ 1 ರಂದು ಜಗನ್ನಾಥ ದೇವರ ಪ್ರಸಿದ್ಧ ಯಾತ್ರೆ ಆರಂಭವಾಗಲಿದೆ. ಒಡಿಶಾದ ಪುರಿ ಯಾತ್ರೆ ನಮಗೆಲ್ಲ ಚಿರಪರಿಚಿತ. ಈ ಸಂದರ್ಭದಲ್ಲಿ ಪುರಿಗೆ ಹೋಗುವ ಸೌಭಾಗ್ಯ, ಅದೃಷ್ಟ ಲಭಿಸುವಂತೆ ಮಾಡಲು ಜನರು ಬಹಳ ಪ್ರಯತ್ನಗಳನ್ನು ಮಾಡುತ್ತಾರೆ. ಇತರ ರಾಜ್ಯಗಳಲ್ಲಿಯೂ ಸಹ, ಜಗನ್ನಾಥ ಯಾತ್ರೆಗಳನ್ನು ಬಹಳ ಉತ್ಸಾಹದಿಂದ ಮತ್ತು ವಿಜೃಂಭಣೆಯಿಂದ ನಡೆಸಲಾಗುತ್ತದೆ. ಭಗವಾನ್ ಜಗನ್ನಾಥ ಯಾತ್ರೆಯು ಆಷಾಢ ಮಾಸದ ಎರಡನೇ ದಿನದಂದು ಪ್ರಾರಂಭವಾಗುತ್ತದೆ. ನಮ್ಮ ಗ್ರಂಥಗಳಲ್ಲಿ 'ಆಷಾಢಸ್ಯ ದ್ವಿತೀಯ ದಿವಸೇ... ರಥಯಾತ್ರೆ' ಎಂದಿರುತ್ತದೆ. ಸಂಸ್ಕೃತ ಶ್ಲೋಕಗಳು ಈ ವಿವರಣೆಯನ್ನು ನೀಡುತ್ತವೆ. ಗುಜರಾತ್‌ನ ಅಹಮದಾಬಾದ್‌ನಲ್ಲಿಯೂ ಪ್ರತಿ ವರ್ಷ ರಥಯಾತ್ರೆಯು ಆಷಾಢ ದ್ವಿತೀಯದಿಂದ ಪ್ರಾರಂಭವಾಗುತ್ತದೆ. ನಾನು ಗುಜರಾತಿನಲ್ಲಿದ್ದೆ, ಹಾಗಾಗಿ ಪ್ರತಿ ವರ್ಷ ಈ ಯಾತ್ರೆಯಲ್ಲಿ ಸೇವೆ ಸಲ್ಲಿಸುವ ಸೌಭಾಗ್ಯ ನನಗೂ ಸಿಗುತ್ತಿತ್ತು. ಆಷಾಢ ದ್ವಿತೀಯ, ಆಶಾಧಿ ಬಿಜ್ ಎಂದೂ ಕರೆಯಲ್ಪಡುವ ಈ ದಿನ ಕಚ್‌ನ ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ. ನನ್ನ ಎಲ್ಲಾ ಕಚ್ಚಿ ಸಹೋದರ ಸಹೋದರಿಯರಿಗೆ ನಾನು ಹೊಸ ವರ್ಷದ ಶುಭಾಶಯಗಳನ್ನು ಕೋರುತ್ತೇನೆ. ನನಗೆ ಈ ದಿನ ಬಹಳ ವಿಶೇಷ ದಿನವಾಗಿದೆ. ನನಗೆ ನೆನಪಿದೆ, ಆಷಾಢ ದ್ವಿತೀಯದ ಒಂದು ದಿನ ಮೊದಲು, ಅಂದರೆ, ಆಷಾಢದ ಮೊದಲ ತಿಥಿಯಂದು, ನಾವು ಗುಜರಾತ್‌ನಲ್ಲಿ ಸಂಸ್ಕೃತ ಉತ್ಸವವನ್ನು ಪ್ರಾರಂಭಿಸಿದೆವು. ಸಂಸ್ಕೃತ ಭಾಷೆಯಲ್ಲಿ ಹಾಡುಗಳು, ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅದು ಒಳಗೊಂಡಿದೆ. ಈ ಕಾರ್ಯಕ್ರಮದ ಹೆಸರು - 'ಆಷಾಢಸ್ಯ ಪ್ರಥಮ ದಿನ'. ಹಬ್ಬಕ್ಕೆ ಈ ವಿಶೇಷ ಹೆಸರು ಇಡುವುದರ ಹಿಂದೆಯೂ ಒಂದು ಕಾರಣವಿದೆ. ವಾಸ್ತವವಾಗಿ, ಮಹಾನ್ ಸಂಸ್ಕೃತ ಕವಿ ಕಾಳಿದಾಸನು ಆಷಾಢ ಮಾಸದ ಮಳೆಯ ಆಗಮನದ ಮೇಲೆ ಮೇಘದೂತವನ್ನು ಬರೆದನು. ಮೇಘದೂತಂನಲ್ಲಿ ಒಂದು ಶ್ಲೋಕವಿದೆ – ಆಷಾಢಸ್ಯ ಪ್ರಥಮ ದಿವಸೆ, ಮೇಘಂ ಆಶ್ಲಿಷ್ಟ ಸನುಮ್, ಅಂದರೆ ಆಷಾಢದ ಮೊದಲ ದಿನ ಮೋಡಗಳಿಂದ ಆವೃತವಾದ ಪರ್ವತ ಶಿಖರಗಳು ಎಂದು. ಈ ಶ್ಲೋಕವೇ ಈ ಕಾರ್ಯಕ್ರಮಕ್ಕೆ ಮೂಲಾಧಾರ.

ಸ್ನೇಹಿತರೇ, ಅದು ಅಹಮದಾಬಾದ್ ಇರಲಿ ಅಥವಾ ಪುರಿಯಿರಲಿ, ಜಗನ್ನಾಥ ದೇವರು ಈ ಪ್ರಯಾಣದ ಮೂಲಕ ನಮಗೆ ಅನೇಕ ಆಳವಾದ ಮಾನವ ಸಂದೇಶಗಳನ್ನು ನೀಡುತ್ತಾರೆ. ಭಗವಾನ್ ಜಗನ್ನಾಥ ಪ್ರಪಂಚದ ಅಧಿಪತಿ, ಆದರೆ ಬಡವರು ಮತ್ತು ದೀನ ದಲಿತರು ಅವರ ಪ್ರಯಾಣದಲ್ಲಿ ವಿಶೇಷ ಭಾಗವಹಿಸುವಿಕೆಯನ್ನು ಹೊಂದಿದ್ದಾರೆ. ಸಮಾಜದ ಪ್ರತಿಯೊಂದು ವರ್ಗ ಮತ್ತು ವ್ಯಕ್ತಿಗಳೊಂದಿಗೆ ದೇವರು ನಡೆಯುತ್ತಾರೆ. ಅದೇ ರೀತಿ ನಮ್ಮ ದೇಶದಲ್ಲಿ ನಡೆಯುವ ಎಲ್ಲಾ ಪ್ರಯಾಣಗಳಲ್ಲಿಯೂ ಬಡವ-ಬಲ್ಲಿದ ಎಂಬ ಭೇದ-ಭಾವವಿರುವುದಿಲ್ಲ. ಮೇಲಿನವರು-ಕೆಳಗಿನವರು ಎಂಬ ತಾರತಮ್ಯ ಇರುವುದಿಲ್ಲ. ಎಲ್ಲಾ ತಾರತಮ್ಯವನ್ನು ಮೀರಿ ಯಾತ್ರೆಯೇ ಇಲ್ಲಿ ಅತಿಮುಖ್ಯ. ಮಹಾರಾಷ್ಟ್ರದ ಪಂಢರಪುರದ ಯಾತ್ರೆಯ ಬಗ್ಗೆ ನೀವು ಕೇಳಿರಬಹುದು. ಪಂಢರಪುರ ಯಾತ್ರೆಯಲ್ಲಿ ಯಾರೊಬ್ಬರೂ ದೊಡ್ಡವರಲ್ಲ, ಹಾಗೂ ಚಿಕ್ಕವರಲ್ಲ. ಎಲ್ಲರೂ ವಾರಕರಿಗಳು, ಭಗವಾನ್ ವಿಠ್ಠಲನ ಸೇವಕರು. ಕೇವಲ 4 ದಿನಗಳ ನಂತರ, ಜೂನ್ 30 ರಿಂದ ಅಮರನಾಥ ಯಾತ್ರೆಯು ಕೂಡಾ ಪ್ರಾರಂಭಗೊಳ್ಳಲಿದೆ. ಅಮರನಾಥ ಯಾತ್ರೆಗಾಗಿ ದೇಶಾದ್ಯಂತ ಭಕ್ತರು ಜಮ್ಮು ಕಾಶ್ಮೀರವನ್ನು ತಲುಪುತ್ತಾರೆ. ಜಮ್ಮು ಕಾಶ್ಮೀರದ ಸ್ಥಳೀಯ ಜನರು ಈ ಯಾತ್ರೆಯ ಜವಾಬ್ದಾರಿಯನ್ನು ಸಮಾನ ಪೂಜ್ಯತೆಯಿಂದ ವಹಿಸಿ ಕೊಳ್ಳುತ್ತಾರೆ ಮತ್ತು ಯಾತ್ರಾರ್ಥಿಗಳೊಂದಿಗೆ ಸಹಕರಿಸುತ್ತಾರೆ.

ಸ್ನೇಹಿತರೇ, ದಕ್ಷಿಣದಲ್ಲಿ ಶಬರಿಮಲೆ ಯಾತ್ರೆಗೆ ಅಷ್ಟೇ ಮಹತ್ವವಿದೆ. ಶಬರಿಮಲೆಯ ಬೆಟ್ಟಗಳ ಮೇಲಿರುವ ಭಗವಾನ್ ಅಯ್ಯಪ್ಪನ ದರ್ಶನಕ್ಕಾಗಿ ಈ ಯಾತ್ರೆಯು ನಡೆಯುತ್ತದೆ. ಈ ಮಾರ್ಗವು ಸಂಪೂರ್ಣವಾಗಿ ಅರಣ್ಯದಿಂದ ಆವೃತವಾಗಿದ್ದ ಕಾಲದಿಂದಲೂ ಇದು ನಡೆದುಕೊಂಡು ಬಂದಿದೆ. ಇಂದಿಗೂ, ಜನರು ಈ ಯಾತ್ರೆಗಳಿಗೆ ಹೋದಾಗ, ಬಡವರಿಗೆ ಎಷ್ಟೊಂದು ಅವಕಾಶಗಳು ನಿರ್ಮಾಣವಾಗುತ್ತವೆ. ... ಧಾರ್ಮಿಕ ಆಚರಣೆಗಳಿಂದ ಹಿಡಿದು ವಸತಿ ವ್ಯವಸ್ಥೆಗಳವರೆಗೆ ... ಅಂದರೆ, ಈ ಯಾತ್ರೆಗಳು ನೇರವಾಗಿ ನಮಗೆ ಬಡವರ ಸೇವೆ ಮಾಡಲು ಅವಕಾಶವನ್ನು ನೀಡುತ್ತವೆ ಮತ್ತು ಅವರಿಗೂ ಅವು ಅಷ್ಟೇ ಪ್ರಯೋಜನಕಾರಿಯಾಗಿವೆ. ಅದಕ್ಕಾಗಿಯೇ ದೇಶವು ಈಗ ತೀರ್ಥಯಾತ್ರೆಯಲ್ಲಿ ಭಕ್ತರಿಗೆ ಸೌಲಭ್ಯಗಳನ್ನು ಹೆಚ್ಚಿಸಲು ಅನೇಕ ಪ್ರಯತ್ನಗಳನ್ನು ಮಾಡುತ್ತಿದೆ. ನೀವೂ ಕೂಡ ಇಂತಹ ಯಾತ್ರೆ ಕೈಗೊಂಡರೆ ಆಧ್ಯಾತ್ಮದ, ಭಕ್ತಿಯ ಜೊತೆಗೆ ಏಕ್ ಭಾರತ್-ಶ್ರೇಷ್ಠ ಭಾರತಗಳ ದರ್ಶನವೂ ಆಗುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೇ, ಎಂದಿನಂತೆ, ಈ ಬಾರಿಯೂ 'ಮನ್ ಕಿ ಬಾತ್' ಮೂಲಕ ನಿಮ್ಮೆಲ್ಲರೊಂದಿಗೆ ಸಂಪರ್ಕ ಸಾಧಿಸಿರುವುದು ಬಹಳ ಆಹ್ಲಾದಕರ ಅನುಭವ. ನಾವು ದೇಶವಾಸಿಗಳ ಯಶಸ್ಸು ಮತ್ತು ಸಾಧನೆಗಳನ್ನು ಚರ್ಚಿಸಿದ್ದೇವೆ. ಇದೆಲ್ಲದರ ನಡುವೆ ನಾವು ಕೊರೊನಾ ವಿರುದ್ಧ ಮುಂಜಾಗ್ರತೆ ವಹಿಸಬೇಕಿದೆ. ಆದಾಗ್ಯೂ, ಇಂದು ದೇಶವು ಲಸಿಕೆಯ ಸಮಗ್ರ ರಕ್ಷಣಾತ್ಮಕ ಕವಚವನ್ನು ಹೊಂದಿದೆ ಎಂಬುದು ತೃಪ್ತಿಯ ವಿಷಯವಾಗಿದೆ. ನಾವು ಸುಮಾರು 200 ಕೋಟಿ ಲಸಿಕೆ ಡೋಸ್ ಗಳ ಸನಿಹದಲ್ಲಿದ್ದೇವೆ. ದೇಶದಲ್ಲಿ ಮುನ್ನೆಚ್ಚರಿಕೆ ಡೋಸ್ ಕೂಡಾ ತ್ವರಿತವಾಗಿ ನೀಡಲಾಗುತ್ತಿದೆ. ನಿಮ್ಮ ಎರಡನೇ ಡೋಸ್ ನಂತರ ಮುನ್ನೆಚ್ಚರಿಕೆಯ ಡೋಸ್‌ಗೆ ಸಮಯವಾಗಿದ್ದರೆ, ನೀವು ಈ ಮೂರನೇ ಡೋಸ್ ಹಾಕಿಸಿಕೊಳ್ಳಬೇಕು. ನಿಮ್ಮ ಕುಟುಂಬದ ಸದಸ್ಯರು, ವಿಶೇಷವಾಗಿ ವಯಸ್ಸಾದವರು, ಮುನ್ನೆಚ್ಚರಿಕೆಯ ಡೋಸ್ ತೆಗೆದುಕೊಳ್ಳುವಂತೆ ಮಾಡಿ. ಕೈ ಸ್ವಚ್ಛತೆ ಮತ್ತು ಮುಖಗವಸುಗಳಂತಹ ಅಗತ್ಯ ಮುನ್ನೆಚ್ಚರಿಕೆಗಳನ್ನು ನಾವು ತೆಗೆದುಕೊಳ್ಳಬೇಕು. ಮಳೆಗಾಲದಲ್ಲಿ ಸುತ್ತಮುತ್ತಲಿನ ಕೊಳಚೆಯಿಂದ ಉಂಟಾಗುವ ರೋಗಗಳ ಬಗ್ಗೆಯೂ ಎಚ್ಚರ ವಹಿಸಬೇಕು. ನೀವೆಲ್ಲರೂ ಜಾಗರೂಕರಾಗಿರಿ, ಆರೋಗ್ಯದಿಂದಿರಿ ಮತ್ತು ಇದೇ ರೀತಿಯ ಸಕಾರಾತ್ಮಕ ಶಕ್ತಿಯೊಂದಿಗೆ ಮುನ್ನಡೆಯಿರಿ. ನಾವು ಮುಂದಿನ ತಿಂಗಳು ಮತ್ತೆ ಭೇಟಿಯಾಗೋಣ, ಅಲ್ಲಿಯವರೆಗೆ, ಅನೇಕ ಧನ್ಯವಾದಗಳು. ನಮಸ್ಕಾರ!.

******



(Release ID: 1837290) Visitor Counter : 180