ಹಣಕಾಸು ಸಚಿವಾಲಯ

ʻಅಗ್ನಿವೀರʼರನ್ನು ಬೆಂಬಲಿಸುವ ಮಾರ್ಗಗಳನ್ನು ಗುರುತಿಸಲು ಸಾರ್ವಜನಿಕ ವಲಯದ ಬ್ಯಾಂಕುಗಳು, ವಿಮಾ ಕಂಪನಿಗಳು ಮತ್ತು ಹಣಕಾಸು ಸಂಸ್ಥೆಗಳೊಂದಿಗೆ ಹಣಕಾಸು ಸೇವೆಗಳ ಇಲಾಖೆಯು (ಡಿಎಫ್ಎಸ್) ಸಭೆ ನಡೆಸಿತು


ಸೂಕ್ತ ಸಾಲ ಸೌಲಭ್ಯಗಳು, ಅಸ್ತಿತ್ವದಲ್ಲಿರುವ ಸರಕಾರಿ ಯೋಜನೆಗಳು ಮತ್ತು ವಿಮಾ ಉತ್ಪನ್ನಗಳ ಮೂಲಕ ʻಅಗ್ನಿವೀರʼರನ್ನು ಬೆಂಬಲಿಸಲು ಸಾರ್ವಜನಿಕ ಬ್ಯಾಂಕ್‌ಗಳು, ʻಪಿಎಸ್ಐಸಿʼಗಳು ಮತ್ತು ʻಎಫ್ಐʼಗಳು ವಿವಿಧ ಕಾರ್ಯವಿಧಾನಗಳನ್ನು ಯೋಜಿಸಲಿವೆ

Posted On: 16 JUN 2022 5:19PM by PIB Bengaluru

 

ಕೇಂದ್ರ ಸಚಿವ ಸಂಪುಟವು  2022ರ ಜೂನ್ 14ರಂದು ಸಶಸ್ತ್ರ ಪಡೆಗಳಲ್ಲಿ ಭಾರತೀಯ ಯುವಜನ ಸೇವೆಗಾಗಿ ʻಅಗ್ನಿಪಥ್ʼ ಎಂಬ ಆಕರ್ಷಕ ನೇಮಕಾತಿ ಯೋಜನೆಗೆ ಅನುಮೋದನೆ ನೀಡಿತು ಮತ್ತು ಈ ಯೋಜನೆಯಡಿ ಆಯ್ಕೆಯಾದ ಯುವಕರನ್ನು 'ಅಗ್ನಿವೀರʼರು ಎಂದು ಕರೆಯಲಾಗುತ್ತದೆ. ʻಅಗ್ನಿಪಥ್ʼ ಯೋಜನೆಯು ದೇಶಭಕ್ತ ಮತ್ತು ಸ್ಫೂರ್ತಿಯುತ ಯುವಕರಿಗೆ ನಾಲ್ಕು ವರ್ಷಗಳ ಕಾಲ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅನುವು ಮಾಡಿಕೊಡುತ್ತದೆ. ಸಶಸ್ತ್ರ ಪಡೆಗಳಲ್ಲಿ ʻಯುವ ಶಕ್ತಿʼ ಸಕ್ರಿಯಗೊಳಿಸಲು ʻಅಗ್ನಿಪಥ್ʼ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ.

ಅಗ್ನಿವೀರರು ತಮ್ಮ ಕರ್ತವ್ಯದ ಅವಧಿಯನ್ನು ಪೂರ್ಣಗೊಳಿಸಿದ ನಂತರ ಅವರನ್ನು ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಹೇಗೆ ಬೆಂಬಲಿಸಬಹುದೆಂಬ ಬಗ್ಗೆ ಮಾರ್ಗಗಳನ್ನು ಗುರುತಿಸುವ ಸಲುವಾಗಿ, ಹಣಕಾಸು ಸೇವೆಗಳ ಇಲಾಖೆಯ (ಡಿಎಫ್‌ಎಸ್) ಕಾರ್ಯದರ್ಶಿ ಅವರು ಇಂದು ಸಾರ್ವಜನಿಕ ವಲಯದ ಬ್ಯಾಂಕುಗಳು (ಪಿಎಸ್‌ಬಿ), ಸಾರ್ವಜನಿಕ ವಲಯದ ವಿಮಾ ಕಂಪನಿಗಳು (ಪಿಎಸ್‌ಐಸಿ) ಮತ್ತು ಹಣಕಾಸು ಸಂಸ್ಥೆಗಳ (ಎಫ್‌ಐ) ಮುಖ್ಯ ಕಾರ್ಯನಿರ್ವಾಹಕರೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ, ಮಿಲಿಟರಿ ವ್ಯವಹಾರಗಳ ಇಲಾಖೆಯ ಜಂಟಿ ಕಾರ್ಯದರ್ಶಿ ಅಗ್ನಿಪಥ್ ಯೋಜನೆಯ ಪ್ರಮುಖ ಅಂಶಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.

ಸಾರ್ವಜನಿಕ ವಲಯದ ಬ್ಯಾಂಕ್‌ಗಳು, ಪಿಎಸ್ಐಸಿಗಳು ಮತ್ತು ಎಫ್ಐಗಳು ಅಗ್ನಿವೀರರಿಗೆ ಅವರ ಶೈಕ್ಷಣಿಕ ಅರ್ಹತೆಗಳು ಮತ್ತು ಕೌಶಲ್ಯಗಳ ಆಧಾರದ ಮೇಲೆ ಸೂಕ್ತ ಸಾಮರ್ಥ್ಯಗಳಲ್ಲಿ ಸೂಕ್ತ ಪ್ರಯೋಜನಗಳು / ವಿನಾಯಿತಿಗಳು ಇತ್ಯಾದಿಗಳ ಮೂಲಕ ಉದ್ಯೋಗಾವಕಾಶಗಳನ್ನು ನೀಡುವ ಬಗ್ಗೆ ಪರಿಶೀಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಕೌಶಲ್ಯ ಉನ್ನತೀಕರಣ, ಉದ್ಯಮಗಳನ್ನು ಸ್ಥಾಪಿಸಲು ಶಿಕ್ಷಣ ಮತ್ತು ಸ್ವಯಂ-ಉದ್ಯೋಗ ಕೈಗೊಳ್ಳಲು ಸೂಕ್ತ ಸಾಲ ಸೌಲಭ್ಯಗಳ ಮೂಲಕ 'ಅಗ್ನಿವೀರ'ರನ್ನು ಬೆಂಬಲಿಸುವ ಸಾಧ್ಯತೆಗಳನ್ನು ಬ್ಯಾಂಕುಗಳು ಅನ್ವೇಷಿಸಲು ನಿರ್ಧರಿಸಲಾಯಿತು. ಅಸ್ತಿತ್ವದಲ್ಲಿರುವ ಮುದ್ರಾ, ʻಸ್ಟ್ಯಾಂಡ್ ಅಪ್ ಇಂಡಿಯಾʼ ಮುಂತಾದ ಸರಕಾರದ ಯೋಜನೆಗಳನ್ನು 'ಅಗ್ನಿವೀರ'ರಿಗೆ ಬೆಂಬಲವನ್ನು ವಿಸ್ತರಿಸಲು ಬಳಸಿಕೊಳ್ಳಲಾಗುವುದು.

 

****



(Release ID: 1834709) Visitor Counter : 141