ಪ್ರಧಾನ ಮಂತ್ರಿಯವರ ಕಛೇರಿ

6ನೇ ಭಾರತ-ಜರ್ಮನಿ ಅಂತರ-ಸರ್ಕಾರೀಯ ಸಮಾಲೋಚನೆಗಳ ಮಹಾಧಿವೇಶನದ ಸಹ-ಅಧ್ಯಕ್ಷತೆ ವಹಿಸಿದ್ದ ಪ್ರಧಾನಮಂತ್ರಿ

Posted On: 02 MAY 2022 8:08PM by PIB Bengaluru

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು, ಭಾರತ-ಜರ್ಮನಿ ಅಂತರ-ಸರ್ಕಾರೀಯ ಸಮಾಲೋಚನೆಗಳ (ಐಜಿಸಿ) ಮಹಾಧಿವೇಶನದ ಸಹ ಅಧ್ಯಕ್ಷತೆಯನ್ನು ಜರ್ಮನಿಯ ಒಕ್ಕೂಟ ಗಣರಾಜ್ಯದ ಚಾನ್ಸಲರ್ ಮಾನ್ಯ ಶ್ರೀ ಓಲಾಫ್ ಸ್ಕೋಲ್ಜ್ ಅವರೊಂದಿಗೆ ವಹಿಸಿದ್ದರು. ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ, ಇಬ್ಬರೂ ನಾಯಕರು ದ್ವಿಪಕ್ಷೀಯ ಸಂಬಂಧದ ಪ್ರಮುಖ ಅಂಶಗಳನ್ನು ಒತ್ತಿ ಹೇಳಿದರು ಮತ್ತು ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ವಿನಿಮಯಮಾಡಿಕೊಂಡ ದೃಷ್ಟಿಕೋನಗಳನ್ನೂ ಹಂಚಿಕೊಂಡರು. ಭಾರತ-ಜರ್ಮನಿ ಸಹಭಾಗಿತ್ವವು ಸಂಕೀರ್ಣ ಜಗತ್ತಿನಲ್ಲಿ ಯಶಸ್ಸಿಗೆ ಒಂದು ಉದಾಹರಣೆಯಾಗಿ ಕಾರ್ಯನಿರ್ವಹಿಸಬಲ್ಲದು ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಭಾರತದ ಆತ್ಮನಿರ್ಭರ ಭಾರತ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಜರ್ಮನಿಗೆ ಅವರು ಆಹ್ವಾನಿಸಿದರು. ಎರಡೂ ಕಡೆಯಿಂದ ಭಾಗವಹಿಸಿದ್ದ ಸಚಿವರು ಮತ್ತು ಅಧಿಕಾರಿಗಳು ಐ.ಜಿ.ಸಿ.ಯ ವಿವಿಧ ಮಾರ್ಗೋಪಾಯಗಳ ಬಗ್ಗೆ ತಮ್ಮ ಸಂಕ್ಷಿಪ್ತ ವರದಿಗಳನ್ನು ಮಂಡಿಸಿದರು:
•    ವಿದೇಶಾಂಗ ವ್ಯವಹಾರಗಳು ಮತ್ತು ಭದ್ರತೆ.
•    ಆರ್ಥಿಕ, ಹಣಕಾಸು ನೀತಿ, ವೈಜ್ಞಾನಿಕ ಮತ್ತು ಸಾಮಾಜಿಕ ವಿನಿಮಯ.
•    ಹವಾಮಾನ, ಪರಿಸರ, ಸುಸ್ಥಿರ ಅಭಿವೃದ್ಧಿ ಮತ್ತು ಇಂಧನ.
ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್; ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್. ಜೈಶಂಕರ್; ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಭೂ ವಿಜ್ಞಾನಗಳ (ಸ್ವತಂತ್ರ ನಿರ್ವಹಣೆ) ಸಚಿವ ಡಾ. ಜಿತೇಂದ್ರ ಸಿಂಗ್; ಮತ್ತು ಕಾರ್ಯದರ್ಶಿ ಡಿಪಿಐಐಟಿ ಶ್ರೀ ಅನುರಾಗ್ ಜೈನ್ ಅವರು ಭಾರತದ ವತಿಯಿಂದ ಪ್ರಾತ್ಯಕ್ಷಿಕೆಗಳನ್ನು ನೀಡಿದರು. 
ಹಸಿರು ಮತ್ತು ಸುಸ್ಥಿರ ಅಭಿವೃದ್ಧಿ ಪಾಲುದಾರಿಕೆಯನ್ನು ಸ್ಥಾಪಿಸುವ ಉದ್ದೇಶದ ಜಂಟಿ ಘೋಷಣೆಗೆ (ಜೆಡಿಐ) ಪ್ರಧಾನಮಂತ್ರಿ ಮತ್ತು ಚಾನ್ಸಲರ್ ಸ್ಕೋಲ್ಜ್ ಅವರು ಸಹಿ ಹಾಕುವುದರೊಂದಿಗೆ ಮಹಾಧಿವೇಶನವು ಸಮಾರೋಪಗೊಂಡಿತು. ಈ ಪಾಲುದಾರಿಕೆಯು ಎಸ್.ಡಿಜಿಗಳು ಮತ್ತು ಹವಾಮಾನ ಕ್ರಮಗಳಲ್ಲಿ ಭಾರತ-ಜರ್ಮನಿ ಸಹಕಾರಕ್ಕೆ ಸಂಪೂರ್ಣ ಸರ್ಕಾರದ ವಿಧಾನವನ್ನು ಒದಗಿಸುತ್ತದೆ, ಇದರ ಅಡಿಯಲ್ಲಿ ಜರ್ಮನಿಯು 2030 ರವರೆಗೆ 10 ಶತಕೋಟಿ ಯುರೋಗಳ ಹೊಸ ಮತ್ತು ಹೆಚ್ಚುವರಿ ಅಭಿವೃದ್ಧಿ ನೆರವಿನ ಮುಂಗಡ ಬದ್ಧತೆಗೆ ಸಮ್ಮತಿಸಿದೆ. ಈ ಜೆಡಿಐ ಪಾಲುದಾರಿಕೆಗೆ ಉನ್ನತ ಮಟ್ಟದ ಸಮನ್ವಯ ಮತ್ತು ರಾಜಕೀಯ ನಿರ್ದೇಶನವನ್ನು ಒದಗಿಸಲು ಐಜಿಸಿಯ ಚೌಕಟ್ಟಿನೊಳಗೆ ಸಚಿವ ಕಾರ್ಯವಿಧಾನವನ್ನು ಸಹ ರೂಪಿಸುತ್ತದೆ. ಐಜಿಸಿಯ ನಂತರ ಜಂಟಿ ಹೇಳಿಕೆಯನ್ನು ಅಂಗೀಕರಿಸಲಾಯಿತು, .ಅದನ್ನು ಇಲ್ಲಿ ವೀಕ್ಷಿಸಬಹುದು
ಸಚಿವರ ದ್ವಿಪಕ್ಷೀಯ ಸಭೆಗಳಲ್ಲಿ ಹಲವಾರು ಒಪ್ಪಂದಗಳನ್ನು ಆಖೈರುಗೊಳಿಸಲಾಯಿತು. ಈ ಪಟ್ಟಿಯನ್ನು ಇಲ್ಲಿ ನೋಡಬಹುದಾಗಿದೆ..  

 

***



(Release ID: 1822298) Visitor Counter : 123