ಪ್ರಧಾನ ಮಂತ್ರಿಯವರ ಕಛೇರಿ

ʻಜಾಗತಿಕ ಪಾಟೀದಾರ್ ವ್ಯಾಪಾರ ಶೃಂಗಸಭೆʼ ಉದ್ಘಾಟಿಸಿದ ಪ್ರಧಾನಿ


"ಇಂದು ಭಾರತದಲ್ಲಿ ತುಂಬಾ ಸಮೃದ್ಧತೆ ಇದೆ. ನಾವು ನಮ್ಮ ಆತ್ಮ ವಿಶ್ವಾಸವನ್ನು ಮತ್ತು ಆತ್ಮನಿರ್ಭರತೆಯ ನಮ್ಮ ಮನೋಭಾವವನ್ನು ಬಲಪಡಿಸಬೇಕಾಗಿದೆ"

"ಸಾಮಾನ್ಯ ಕುಟುಂಬಗಳ ಯುವಕರು ಸಹ ಉದ್ಯಮಿಗಳಾಗುವಂತಾಗಬೇಕು, ಕನಸು ಕಾಣಬೇಕು ಮತ್ತು ಉದ್ಯಮಶೀಲತೆಯ ಬಗ್ಗೆ ಹೆಮ್ಮೆ ಪಡಬೇಕೆಂಬುದ ಸರಕಾರದ ನಿರಂತರ ಪ್ರಯತ್ನವಾಗಿದೆ"

"ಪ್ರತಿಯೊಂದು ಸಣ್ಣ ಮತ್ತು ದೊಡ್ಡ ವ್ಯಾಪಾರವು ರಾಷ್ಟ್ರೀಯ ಪ್ರಗತಿಗೆ ಕೊಡುಗೆ ನೀಡುತ್ತಿದೆ ಮತ್ತು ʻಸಬ್ಕಾ ಪ್ರಯಾಸ್ʼನ ಈ ಮನೋಭಾವವು ʻಅಮೃತ ಕಾಲʼದಲ್ಲಿ ನವ ಭಾರತದ ಶಕ್ತಿಯಾಗುತ್ತಿದೆ"

ಪಾಟಿದಾರ್ ಸಮುದಾಯವು ತಂಡಗಳನ್ನು ರಚಿಸಿಕೊಂಡು ʻಫಿನ್ಟೆಕ್ʼ, ʻಎನ್ಇಪಿʼ ಮುಂತಾದ ಪ್ರಮುಖ ಕ್ಷೇತ್ರಗಳಲ್ಲಿ ನೀತಿಗಳ ಅನುಷ್ಠಾನಕ್ಕೆ ಸಲಹೆ ಮತ್ತು ಸಹಾಯ ಮಾಡಬೇಕು ಎಂದು ಪ್ರಧಾನಿ ಕೋರಿದರು

Posted On: 29 APR 2022 1:46PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ʻಸರ್ದಾರ್‌ಧಾಮ್ʼ ಆಯೋಜಿಸಿರುವ ʻಜಾಗತಿಕ ಪಾಟೀದಾರ್ ವ್ಯಾಪಾರ ಶೃಂಗಸಭೆʼಯನ್ನು (ಜಿಪಿಬಿಎಸ್) ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್ ಮತ್ತು ಕೇಂದ್ರ ಸಚಿವರು ಹಾಗೂ ಪ್ರಮುಖ ಕೈಗಾರಿಕೋದ್ಯಮಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ಸೂರತ್ ನಗರವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿ ಸ್ಥಾನ ಪಡೆದಿರುವ ಬಗ್ಗೆ ಗಮನ ಸೆಳೆದರು. ಸರ್ದಾರ್ ಪಟೇಲರ ಮಾತುಗಳನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಇಂದು ಭಾರತದಲ್ಲಿ ಬಹಳ ಸಮೃದ್ಧತೆ ಇದೆ ಎಂದರು. "ನಾವು ನಮ್ಮ ಆತ್ಮ ವಿಶ್ವಾಸವನ್ನು, ಆತ್ಮನಿರ್ಭರತಾ ಮನೋಭಾವವನ್ನು ಬಲಪಡಿಸಬೇಕಾಗಿದೆ. ಅಭಿವೃದ್ಧಿಯಲ್ಲಿ ಎಲ್ಲರ ಪಾಲ್ಗೊಳ್ಳುವಿಕೆ ಇದ್ದಾಗ ಮಾತ್ರ ಈ ವಿಶ್ವಾಸ ಬರುತ್ತದೆ, ಪ್ರತಿಯೊಬ್ಬರ ಪ್ರಯತ್ನವೂ ಇದರಲ್ಲಿ ಭಾಗಿಯಾಗುತ್ತದೆ," ಎಂದು ಹೇಳಿದರು.
ದೇಶದಲ್ಲಿ ಉದ್ಯಮಶೀಲತೆಯ ಮನೋಭಾವದ ಹೆಚ್ಚುತ್ತಿರುವ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಸರಕಾರವು ತನ್ನ ನೀತಿಗಳು ಮತ್ತು ಅದರ ಉಪಕ್ರಮಗಳ ಮೂಲಕ ನಿರಂತರವಾಗಿ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದೆ ಎಂದರು. ಸಾಮಾನ್ಯ ಕುಟುಂಬಗಳ ಯುವಕರು ಸಹ ಉದ್ಯಮಿಗಳಾಗಲು, ಕನಸು ಕಾಣಲು ಮತ್ತು ಉದ್ಯಮಶೀಲತೆಯ ಬಗ್ಗೆ ಹೆಮ್ಮೆ ಪಡುವಂತಹ ವಾತಾವರಣವನ್ನು ದೇಶದಲ್ಲಿ ಸೃಷ್ಟಿಸಬೇಕು ಎಂದರು. ಮುದ್ರಾ ಯೋಜನೆಯಂತಹ ಯೋಜನೆಗಳು ಈ ಹಿಂದೆ ಎಂದೂ ವ್ಯಾಪಾರದ ಬಗ್ಗೆ ಕನಸು ಕಾಣದ 
ಜನರಿಗೂ ವ್ಯಾಪಾರದಲ್ಲಿ ತೊಡಗಲು ಶಕ್ತಿಯನ್ನು ನೀಡುತ್ತಿವೆ ಎಂದು ಪ್ರಧಾನಿ ಹೇಳಿದರು. ಅಂತೆಯೇ,     ಸ್ಟಾರ್ಟ್ ಅಪ್ ಇಂಡಿಯಾʼ ಈ ಹಿಂದೆ ದುರ್ಗಮವಾಗಿ ಕಂಡುಬರುತ್ತಿದ್ದ ಆವಿಷ್ಕಾರ, ಪ್ರತಿಭೆ ಮತ್ತು ʻಯುನಿಕಾರ್ನ್ʼ ಕನಸುಗಳ ಸಾಕಾರಕ್ಕೆ ಸಹಾಯ ಮಾಡುತ್ತಿದೆ. ʻಉತ್ಪಾದನೆ ಆಧರಿತ ಪ್ರೋತ್ಸಾಹಧನʼವು ಸಾಂಪ್ರದಾಯಿಕ ವಲಯಗಳಲ್ಲಿ ಹೊಸ ಶಕ್ತಿಯನ್ನು ತುಂಬುತ್ತಿದೆ ಮತ್ತು ಹೊಸ ವಲಯಗಳಲ್ಲಿ ನವೀನ ಸಾಧ್ಯತೆಗಳನ್ನು ಸೃಷ್ಟಿಸುತ್ತಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಸಾಂಕ್ರಾಮಿಕ ರೋಗದ ಸವಾಲುಗಳ ಹೊರತಾಗಿಯೂ, ದೇಶದ ʻಎಂಎಸ್ಎಂಇʼ ವಲಯವು ವೇಗವಾಗಿ ಬೆಳೆಯುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಬೃಹತ್ ಆರ್ಥಿಕ ಬೆಂಬಲದೊಂದಿಗೆ ಈ ವಲಯದಲ್ಲಿ ಲಕ್ಷಾಂತರ ಉದ್ಯೋಗಗಳನ್ನು ರಕ್ಷಿಸಲಾಗಿದೆ ಮತ್ತು ಈಗ ಈ ಕ್ಷೇತ್ರವು ಉದ್ಯೋಗದ ಅನೇಕ ಹೊಸ ಮಾರ್ಗಗಳನ್ನು ಸೃಷ್ಟಿಸುತ್ತಿದೆ. ʻಪಿಎಂ-ಸ್ವನಿಧಿʼ ಯೋಜನೆಯು ಬೀದಿ ಬದಿ ವ್ಯಾಪಾರಿಗಳಿಗೆ ಔಪಚಾರಿಕ ಬ್ಯಾಂಕಿಂಗ್ ಮತ್ತು ಹಣಕಾಸು ಸೌಲಭ್ಯವನ್ನು ಒದಗಿಸುವ ಮೂಲಕ ಬೆಳವಣಿಗೆಯ ಯಶೋಗಾಥೆಯಲ್ಲಿ ಅವರನ್ನೂ ಸೇರ್ಪಡೆಗೊಳಿಸಿದೆ. ಈ ಯೋಜನೆಯನ್ನು ಇತ್ತೀಚೆಗೆ ಡಿಸೆಂಬರ್ 2024ರವರೆಗೆ ವಿಸ್ತರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಉದ್ಯಮಗಳು ರಾಷ್ಟ್ರೀಯ ಪ್ರಗತಿಗೆ ಕೊಡುಗೆ ನೀಡುತ್ತಿವೆ ಮತ್ತು ʻಸಬ್ ಕಾ ಪ್ರಯಾಸ್ʼನ ಈ ಮನೋಭಾವವು ʻಅಮೃತ ಕಾಲʼದಲ್ಲಿ ನವ ಭಾರತದ ಶಕ್ತಿಯಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಈ ವರ್ಷದ ಶೃಂಗಸಭೆಯು ಈ ಅಂಶವನ್ನು ವಿವರವಾಗಿ ಚರ್ಚಿಸುತ್ತಿರುವ ಬಗ್ಗೆ ಅವರು ಸಂತೋಷ ವ್ಯಕ್ತಪಡಿಸಿದರು.
ಗುಜರಾತ್‌ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳು, ದಾಖಲೀಕರಣದ ವಿಚಾರಗಳು, ಜಾಗತಿಕ ಉತ್ತಮ ಕಾರ್ಯವಿಧಾನಗಳು, ಸರ್ಕಾರದ ನೀತಿಗಳು ಹಾಗೂ ಅವುಗಳ ವಿಶ್ಲೇಷಣೆಯನ್ನು ಕೈಗೊಳ್ಳಲು ಅನುಭವಿ ಮತ್ತು ಯುವ ಸದಸ್ಯರನ್ನು ಒಳಗೊಂಡ ಗುಂಪುಗಳನ್ನು ರಚಿಸುವಂತೆ ಪಾಟೀದಾರ ಸಮುದಾಯಕ್ಕೆ ಮನವಿ ಮಾಡಿದರು. ʻಫಿನ್‌ಟೆಕ್ʼ, ಕೌಶಲ್ಯ ಅಭಿವೃದ್ಧಿ, ಹಣಕಾಸು ಒಳಗೊಳ್ಳುವಿಕೆ ಮತ್ತು ಶೈಕ್ಷಣಿಕ ಮುಂತಾದ ಕ್ಷೇತ್ರಗಳಲ್ಲಿ ಸರಕಾರದ ಹಸ್ತಕ್ಷೇಪಕ್ಕೆ ಇಂತಹ ತಂಡದ ಸಲಹೆಯನ್ನು ಸರಕಾರ  ಪಡೆಯಬಹುದು ಎಂದು ಅವರು ಹೇಳಿದರು. ಅಂತೆಯೇ, ರಾಷ್ಟ್ರೀಯ ಶಿಕ್ಷಣ ನೀತಿಯ ಸಮಗ್ರ ಅನುಷ್ಠಾನದ ಅತ್ಯುತ್ತಮ ಮಾರ್ಗದ ಅನ್ವೇಷಣೆಗಾಗಿಯೂ ಸಲಹೆ ಪಡೆಯಬಹುದು ಹಾಗೂ ಪ್ರತಿ ಹಂತದಲ್ಲೂ ಉಪಯುಕ್ತ ಮಧ್ಯಸ್ಥಿಕೆಯನ್ನು ಒದಗಿಸಬಹುದು ಎಂದರು. 

ಕೃಷಿಯನ್ನು ಆಧುನೀಕರಣಗೊಳಿಸುವ ಮತ್ತು ಕೃಷಿಯಲ್ಲಿ ಹೂಡಿಕೆಯನ್ನು ತರುವ ಮಾರ್ಗಗಳನ್ನು ಅನ್ವೇಷಿಸಲು ಶೃಂಗಸಭೆಯನ್ನು ಪ್ರಧಾನಿ ಕೇಳಿದರು. ಕೃಷಿಯ ಹೊಸ ಪದ್ಧತಿಗಳು ಮತ್ತು ಹೊಸ ಬೆಳೆಗಳನ್ನು ಸೂಚಿಸುವ ನಿಟ್ಟಿನಲ್ಲಿ ಗುಜರಾತ್‌ನ ಭೂಮಿಯನ್ನು ಅಧ್ಯಯನ ಮಾಡಲು ತಂಡಗಳನ್ನು ರಚಿಸುವಂತೆ ಅವರು ಸಲಹೆ ನೀಡಿದರು. ಕೆಲವು ದಶಕಗಳ ಹಿಂದೆ ಗುಜರಾತಿನ ರೈತರ ಆರ್ಥಿಕ ಚಿತ್ರಣವನ್ನು ಬದಲಿಸಿದ ಗುಜರಾತ್‌ನಲ್ಲಿನ ಹೈನುಗಾರಿಕೆ ಆಂದೋಲದ ಉದಾಹರಣೆಯನ್ನು ಅವರು ಉಲ್ಲೇಖಿಸಿದರು. ಕೃಷಿ ಆಧಾರಿತ ಕೈಗಾರಿಕೆಗಳನ್ನು ಉತ್ತೇಜಿಸುವ ಮಾರ್ಗಗಳನ್ನು ನಾವು ಕಂಡುಕೊಳ್ಳಬೇಕಾಗಿದೆ ಎಂದು ಅವರು ಕರೆ ನೀಡಿದರು. ಇಂತಹ ಪ್ರಯತ್ನಗಳು ಖಾದ್ಯತೈಲದ ಆಮದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ ಎಂದು ಹೇಳಿದ ಅವರು, ಆಹಾರ ಸಂಸ್ಕರಣಾ ಉದ್ಯಮದಲ್ಲಿನ ಸಾಧ್ಯತೆಗಳನ್ನು ಒತ್ತಿ ಹೇಳಿದರು. ಈ ಸಂಸ್ಥೆಗಳ ಆಗಮನದೊಂದಿಗೆ ಅನೇಕ ಅವಕಾಶಗಳು ಹೊರಹೊಮ್ಮುತ್ತಿರುವುದರಿಂದ ಉದಯೋನ್ಮುಖ ʻಎಫ್‌ಇಒʼಒಗಳತ್ತ ದೃಷ್ಟಿ ಹಾಯಿಸುವಂತೆ ಅವರು ಸಭಿಕರನ್ನು ಕೇಳಿದರು. ನೈಸರ್ಗಿಕ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುವಂತೆ ಪ್ರಧಾನಮಂತ್ರಿಯವರು ಕೇಳಿಕೊಂಡರು. ಸೌರ ಫಲಕಕ್ಕಾಗಿ ಹೆಚ್ಚುವರಿ ಅಥವಾ ಖಾಲಿ ಪ್ರದೇಶಗಳನ್ನು ಬಳಸುವ ಸಾಧ್ಯತೆಗಳನ್ನು ಪ್ರಧಾನಿ ಮೋದಿ ಒತ್ತಿ ಹೇಳಿದರು. ಇತ್ತೀಚೆಗೆ ಆರಂಭಿಸಲಾದ ʻಅಮೃತ ಸರೋವರʼ ಅಭಿಯಾನದಲ್ಲಿ ಕೊಡುಗೆ ನೀಡುವಂತೆ ಅವರು ಮನವಿ ಮಾಡಿದರು. ಇತ್ತೀಚೆಗೆ ನಡೆದ ಆಯುರ್ವೇದ ಶೃಂಗಸಭೆಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಗಿಡಮೂಲಿಕೆ ಮತ್ತು ಆಯುಷ್ ವಲಯದಲ್ಲಿನ ಹೊಸ ಸಾಧ್ಯತೆಗಳ ಬಗ್ಗೆ ಗಮನ ಸೆಳೆದರು. 
ಹಣಕಾಸು ಕ್ಷೇತ್ರದ ಬಗ್ಗೆ ಹೊಸ ದೃಷ್ಟಿಕೋನಕ್ಕೆ ಪ್ರಧಾನಮಂತ್ರಿಯವರು ಕರೆ ನೀಡಿದರು. ಕೈಗಾರಿಕೆಗಳು ದೊಡ್ಡ ನಗರಗಳ ಬದಲು ಸಣ್ಣ ನಗರಗಳಲ್ಲಿ ನೆಲಯೂರುವಂತಾಗಬೇಕು ಎಂದು ಅವರು ಒತ್ತಿ ಹೇಳಿದರು. ಹಳ್ಳಿಗಳಲ್ಲಿ ಕೈಗಾರಿಕಾ ಚಟುವಟಿಕೆಗಳನ್ನು ಉತ್ತೇಜಿಸಿದ ʻಜ್ಯೋತಿರ್ ಗ್ರಾಮ ಯೋಜನೆʼಯ ಉದಾಹರಣೆಯನ್ನು ಅವರು ನೀಡಿದರು. ಈಗ ಅಂತಹ ಕೆಲಸವನ್ನು ಸಣ್ಣ ಪಟ್ಟಣಗಳು ಮತ್ತು ನಗರಗಳಿಗೆ ವರ್ಗಾಯಿಸಬಹುದು ಎಂದು ಅವರು ಹೇಳಿದರು.
ಪಾಟೀದಾರ್ ಸಮುದಾಯದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡಲು ʻಮಿಷನ್ 2026' ಅಡಿಯಲ್ಲಿ ʻಜಿಪಿಬಿಎಸ್ʼ ಅನ್ನು ʻಸರ್ದಾರ್‌ರ್ಧಾಮ್' ಆಯೋಜಿಸುತ್ತಿದೆ. ಈ ಶೃಂಗಸಭೆಯನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ಆಯೋಜಿಸಲಾಗುತ್ತದೆ. ಮೊದಲ ಎರಡು ಶೃಂಗಸಭೆಗಳು 2018 ಮತ್ತು 2020ರಲ್ಲಿ ಗಾಂಧಿನಗರದಲ್ಲಿ ನಡೆದವು, ಮತ್ತು ಪ್ರಸ್ತುತ ಶೃಂಗಸಭೆ ಈಗ ಸೂರತ್‌ನಲ್ಲಿ ನಡೆಯುತ್ತಿದೆ. ʻಜಿಪಿಬಿಎಸ್-2022ʼರ ಮುಖ್ಯ ವಿಷಯವು "ಆತ್ಮನಿರ್ಭರ್ ಗುಜರಾತ್ ಮತ್ತು ಭಾರತಕ್ಕಾಗಿ ಆತ್ಮನಿರ್ಭರ್ ಸಮುದಾಯ" ಆಗಿದೆ. ಈ ಶೃಂಗಸಭೆಯು ಸಮುದಾಯದಲ್ಲಿ ಸಣ್ಣ, ಮಧ್ಯಮ ಮತ್ತು ದೊಡ್ಡ ಉದ್ಯಮಗಳನ್ನು ಒಗ್ಗೂಡಿಸುವ ಗುರಿಯನ್ನು ಹೊಂದಿದೆ; ಹೊಸ ಉದ್ಯಮಿಗಳನ್ನು ಪೋಷಿಸುವುದು ಮತ್ತು ಬೆಂಬಲಿಸುವುದು ಮತ್ತು ವಿದ್ಯಾವಂತ ಯುವಕರಿಗೆ ತರಬೇತಿ ಮತ್ತು ಉದ್ಯೋಗ ಸಹಾಯವನ್ನು ಒದಗಿಸುವುದು ಸಹ ಇದರ ಗುರಿಯಾಗಿದೆ. ಏಪ್ರಿಲ್ 29ರಿಂದ ಮೇ 1ರವರೆಗೆ ಆಯೋಜಿಸಲಾಗಿರುವ ಮೂರು ದಿನಗಳ ಶೃಂಗಸಭೆಯು ಸರ್ಕಾರಿ ಕೈಗಾರಿಕಾ ನೀತಿ, ʻಎಂಎಸ್ಎಂಇʼಗಳು, ನವೋದ್ಯಮಗಳು, ಆವಿಷ್ಕಾರಗಳ ವಿವಿಧ ಅಂಶಗಳನ್ನು ಒಳಗೊಂಡಿದೆ.

 

****



(Release ID: 1821305) Visitor Counter : 146