ಪ್ರಧಾನ ಮಂತ್ರಿಯವರ ಕಛೇರಿ

ಗಾಂಧಿನಗರದಲ್ಲಿ ಜಾಗತಿಕ ಆಯುಷ್ ಹೂಡಿಕೆ ಮತ್ತು ನಾವೀನ್ಯತಾ ಶೃಂಗಸಭೆ ಉದ್ಘಾಟಿಸಿದ ಪ್ರಧಾನಮಂತ್ರಿ


ಸಾರ್ವಜನಿಕ ಆರೋಗ್ಯ ವಲಯದಲ್ಲಿ ನಾವೀನ್ಯತಾ ಶಕ್ತಿ ಸಮರ್ಪಕವಾಗಿ ಬಳಸಿಕೊಂಡ ಭಾರತ ಸರ್ಕಾರ ಮತ್ತು ಪ್ರಧಾನಮಂತ್ರಿಗಳ ಕಾರ್ಯ ಶ್ಲಾಘಿಸಿದ ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕರು

“ನಿಮ್ಮ ನಾಯಕತ್ವದಿಂದಾಗಿ ಸಾಂಪ್ರದಾಯಿಕ ಔಷಧಗಳ ಬಳಕೆಯಲ್ಲಿ ಗಣನೀಯ ಬದಲಾವಣೆಯಾಗುತ್ತಿದೆ” – ಪ್ರಧಾನಮಂತ್ರಿ ಅವರಿಗೆ ಮಹಾ ನಿರ್ದೇಶಕರ ಹೇಳಿಕೆ

ಡಾ. ತೆದ್ರೊಸ್ ಗೆಬ್ರಿಯಾಸಿಸ್ ಅವರಿಗೆ ‘ತುಳಸಿ ಭಾಯ್’ ಗುಜರಾತಿ ಹೆಸರು ನೀಡಿದ ಪ್ರಧಾನಮಂತ್ರಿ

“ಆಯುಷ್ ವಲಯದಲ್ಲಿ ಬಂಡವಾಳ ಹೂಡಿಕೆ ಮತ್ತು ನಾವೀನ್ಯತೆಯ ಅಪರಿಮಿತ ಸಾಧ್ಯತೆಗಳು”

“ಆಯುಷ್ ವಲಯ 2014ರಲ್ಲಿ 3 ಬಿಲಿಯನ್ ಡಾಲರ್ ಗಿಂತ ಕಡಿಮೆ ಇತ್ತು, ಈಗ 18 ಬಿಲಿಯನ್ ಡಾಲರ್ ಗೂ ಅಧಿಕ ಹೆಚ್ಚಳ”

“ಭಾರತ ಗಿಡಮೂಲಿಕೆ ಸಸ್ಯಗಳ ನಿಧಿಯಾಗಿದ್ದು, ಒಂದು ರೀತಿಯಲ್ಲಿ ಅದು ನಮ್ಮ “ಹಸಿರು ಹೊನ್ನು”

“ಕಳೆದ ಕೆಲವು ವರ್ಷಗಳಿಂದೀಚೆಗೆ ನಾನಾ ದೇಶಗಳೊಂದಿಗೆ 50ಕ್ಕೂ ಅಧಿಕ ಒಡಂಬಡಿಕೆಗಳಿಗೆ ಸಹಿ. ನಮ್ಮ ಆಯುಷ್ ತಜ್ಞರಿಂದ ಭಾರತೀಯ ಮಾನಕ ಬ್ಯೋರೋ ಸಹಭಾಗಿತ್ವದಲ್ಲಿ ಐಎಸ್ಒ ಮಾನದಂಡಗಳ ಅಭಿವೃದ್ಧಿ. ಇದರಿಂದ 150ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಆಯುಷ್ ನ ಭಾರೀ ರಫ್ತು ಮಾರುಕಟ್ಟೆ ತೆರೆದುಕೊಳ್ಳಲಿದೆ’’

“ಎಫ್ಎಸ್ಎಸ್ಎಐನ ‘ಆಯುಷ್ ಆಹಾರ್’ ಗಿಡಮೂಲಿಕೆ ಪೌಷ್ಟಿಕಾಂಶ ಪೂರಕ ಉತ್ಪಾದಕರಿಗೆ ಹೆಚ್ಚಿನ ಪ್ರಮಾಣದಲ್ಲಿ ನೆರವು”

“ವಿಶೇಷ ಆಯುಷ್ ಗುರುತು ಜಗತ್ತಿನಾದ್ಯಂತ ಜನರಿಗೆ ಗುಣಮಟ್ಟದ ಆಯುಷ್ ಉತ್ಪನ್ನಗಳ ವಿಶ್ವಾಸಾರ್ಹತೆ ಮೂಡಿಸುತ್ತದೆ’’

“ದೇಶಾದ್ಯಂತ ಆಯುಷ್ ಉತ್ಪನ್ನಗಳ ಉತ್ಪಾದನೆ, ಸಂಶೋಧನೆ ಮತ್ತು ಉತ್ತೇಜನಕ್ಕೆ ಸರ್ಕಾರದಿಂದ ಆಯುಷ್ ಪಾರ್ಕ್ ಗಳ ಜಾಲ ಅಭಿವೃದ್ಧಿ”

“ಭಾರತಕ್ಕೆ ಆಯುಷ್ ಥೆರಪಿಗೆ ಆಗಮಿಸುವ ಜನರಿಗೆ ಭಾರತದಿಂದ ವಿಶೇಷ ಆಯುಷ್ ವೀಸಾ ಕ್ಯಾಟಗರಿ ಆರಂಭಿಸಲಾಗುವುದು’’

“ಆಯುರ್ವೇದ ಸಮೃದ್ಧಿಯ ಹಿಂದಿನ ಮುಖ್ಯ ಕಾರಣ ಮುಕ್ತ ಮೂಲ ಮಾದರಿಯಾಗಿದೆ’’

“ಅಮೃತ ಕಾಲದ ಮುಂದಿನ 25 ವರ್ಷ ಸಾಂಪ್ರದಾಯಿಕ ಔಷಧಗಳಿಗೆ ಸುವರ್ಣ ಯುಗವಾಗಲಿದೆ”

Posted On: 20 APR 2022 1:24PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್ ನ ಗಾಂಧಿನಗರದಲ್ಲಿ ಜಾಗತಿಕ ಆಯುಷ್ ಹೂಡಿಕೆ ಮತ್ತು ನಾವೀನ್ಯತೆ ಶೃಂಗಸಭೆಯನ್ನು ಉದ್ಘಾಟಿಸಿದರು. ಮಾರಿಷಸ್ ಪ್ರಧಾನಮಂತ್ರಿ ಶ್ರೀ ಪ್ರವಿಂದ್ ಕುಮಾರ್ ಜುಗನ್ನಾಥ್ ಮತ್ತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ) ಮಹಾ ನಿರ್ದೇಶಕ ಡಾ. ತೆದ್ರೋಸ್ ಗೆಬ್ರಿಯಾಸಿಸ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕೇಂದ್ರ ಸಚಿವರಾದ ಡಾ. ಮನ್ಸುಖ್ ಮಾಂಡವೀಯ, ಶ್ರೀ ಸರ್ಬಾನಂದ ಸೋನೋವಾಲ್, ಶ್ರೀ ಮುಂಜಾಪಾರಾ ಮಹೇಂದ್ರಭಾಯ್ ಮತ್ತು ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಭಾಯ್ ಪಟೇಲ್ ಅವರುಗಳೂ ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮೂರು ದಿನಗಳ ಶೃಂಗಸಭೆ 5 ಗೋಷ್ಠಿಗಳು, 8 ದುಂಡುಮೇಜಿನ ಸಭೆಗಳು, 6 ಕಾರ್ಯಾಗಾರ ಮತ್ತು 2 ವಿಚಾರ ಸಂಕಿರಣಗಳು ನಡೆದವು. ಸುಮಾರು 90 ಖ್ಯಾತ ಭಾಷಣಕಾರರು ಮತ್ತು 100 ಪ್ರದರ್ಶಕರ ಉಪಸ್ಥಿತಿ ಇತ್ತು. ಈ ಶೃಂಗಸಭೆ ಹೂಡಿಕೆಯ ಸಂಭವನೀಯತೆಯ ಪ್ರದೇಶವನ್ನು ಗುರುತಿಸಲು ಸಹಕಾರಿಯಾಗಲಿದೆ ಮತ್ತು ಆವಿಷ್ಕಾರ, ಸಂಶೋಧನೆ ಮತ್ತು ಅಭಿವೃದ್ಧಿ, ನವೋದ್ಯಮ ಪೂರಕ ಪರಿಸರ ಮತ್ತು ಯೋಗಕ್ಷೇಮ ಉದ್ಯಮಕ್ಕೆ ಮತ್ತಷ್ಟು ಶಕ್ತಿ ತುಂಬಲಿದೆ. ಇದು ಉದ್ಯಮದ ನಾಯಕರು, ಶೈಕ್ಷಣಿಕ ತಜ್ಞರು ಮತ್ತು ವಿದ್ವಾಂಸರನ್ನು ಒಗ್ಗೂಡಿಸುವುದಲ್ಲದೆ, ಭವಿಷ್ಯದ ಸಹಭಾಗಿತ್ವಗಳಿಗೆ ವೇದಿಕೆಯಾಗಿ ಕಾರ್ಯ ನಿರ್ವಹಿಸಲಿದೆ. 

            ಡಾ. ತೆದ್ರೋಸ್ ಗೆಬ್ರಿಯಾಸಿಸ್ ಅವರು, ರಾಜ್ಯದಲ್ಲಿ ಉಪಸ್ಥಿತರಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು ಮತ್ತು ಮಹಾತ್ಮ ಗಾಂಧಿಯವರ ದೇಶವನ್ನು “ಜಗತ್ತಿನ ಹೆಮ್ಮೆ” ಎಂದು ಬಣ್ಣಿಸಿದರು. ಜಾಮ್ ನಗರದಲ್ಲಿ ನಿನ್ನೆ ವಿಶ್ವ ಆರೋಗ್ಯ ಸಂಸ್ಥೆಯ ಸಾಂಪ್ರದಾಯಿಕ ಔಷಧಿಗಳ ಜಾಗತಿಕ ಕೇಂದ್ರ (ಜಿಸಿಟಿಎಂ) ಆರಂಭಿಸುವುದರ ಹಿಂದೆ ಭಾರತದ ‘‘ವಸುದೈವ ಕುಟುಂಬಕಂ” ತತ್ವ ಚಾಲನಾಶಕ್ತಿಯಾಗಿದೆ ಎಂದು ಅವರು ಹೇಳಿದರು. ಕೇಂದ್ರದ ಸ್ಥಾಪನೆ ಐತಿಹಾಸಿಕ ಮತ್ತು ಇದು ಮಹತ್ವದ ಪರಿವರ್ತನೆಯನ್ನು ತರಲಿದೆ ಎಂದು ಅವರು ಹೇಳಿದರು. ಸಾಂಪ್ರದಾಯಿಕ ಔಷಧವನ್ನು ಗರಿಷ್ಠ ಪ್ರಮಾಣದಲ್ಲಿ ಮತ್ತು ಸುಸ್ಥಿರ ರೀತಿಯಲ್ಲಿ ಬಳಕೆ ಮಾಡಿಕೊಳ್ಳಲು ದತ್ತಾಂಶ, ಪುರಾವೆಯ ಕಾರ್ಯಸೂಚಿ ಒಳಗೊಂಡ ಆವಿಷ್ಕಾರದ ಇಂಜಿನ್ ನಂತೆ ಕಾರ್ಯ ನಿರ್ವಹಿಸುವ ರೀತಿ ಕೇಂದ್ರವನ್ನು ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿದರು. ಸಾರ್ವಜನಿಕ ವಲಯದಲ್ಲಿ ನಾವೀನ್ಯತೆಯ ಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಂಡಿರುವುದಕ್ಕಾಗಿ ಪ್ರಧಾನಮಂತ್ರಿ ಮತ್ತು ಭಾರತ ಸರ್ಕಾರದ ಕಾರ್ಯವನ್ನು ಮಹಾ ನಿರ್ದೇಶಕರು ಶ್ಲಾಘಿಸಿದರು. ಸಾಂಪ್ರದಾಯಿಕ ಔಷಧಗಳ ಕುರಿತಂತೆ ಸಂಶೋಧನೆಗೆ ದತ್ತಾಂಶ ಸಂಗ್ರಹಿಸುವ ಕಾರ್ಯವನ್ನು ತ್ವರಿತಗೊಳಿಸಿರುವುದಕ್ಕಾಗಿ ಅವರು ಆಯುಷ್ ಸಚಿವಾಲಯವನ್ನು ಶ್ಲಾಘಿಸಿದರು. ಆಯುಷ್ ಉತ್ಪನ್ನಗಳಲ್ಲಿ ಜಾಗತಿಕ ಹೂಡಿಕೆ ಮತ್ತು ಬೇಡಿಕೆ ಹೆಚ್ಚಾಗುತ್ತಿರುವುದನ್ನು ಉಲ್ಲೇಖಿಸಿದ ಮಹಾನಿರ್ದೇಶಕರು, ಇಡೀ ವಿಶ್ವ ಭಾರತದತ್ತ ಬರುತ್ತಿದೆ ಮತ್ತು ಭಾರತ ಇಡೀ ವಿಶ್ವಕ್ಕೆ ತೆರಳುತ್ತಿದೆ ಎಂದರು. ಆರೋಗ್ಯ ಕ್ಷೇತ್ರದಲ್ಲಿ ಮತ್ತು ವಿಶೇಷವಾಗಿ ಸಾಂಪ್ರದಾಯಿಕ ಔಷಧಗಳ ಕ್ಷೇತ್ರದಲ್ಲಿ ಆವಿಷ್ಕಾರಗಳಿಗೆ ಪೂರಕ ವ್ಯವಸ್ಥೆಗೆ ದೀರ್ಘಾವಧಿಯ ಹೂಡಿಕೆ ಅಗತ್ಯವಿದೆ ಎಂದು ಪ್ರತಿಪಾದಿಸಿದ ಅವರು, ಆವಿಷ್ಕಾರಿಗಳಿಂದ ಸಾಂಪ್ರದಾಯಿಕ ಔಷಧಗಳ ಅಭಿವೃದ್ಧಿ, ಉದ್ಯಮದವರು ಮತ್ತು ಸರ್ಕಾರದಿಂದ ಸುಸ್ಥಿರ ಪರಿಸರ ಮತ್ತು ಸಮಾನತೆ ಕಾಯ್ದುಕೊಳ್ಳುವುದು. ಈ ಪರಂಪರೆಯನ್ನು ಅಭಿವೃದ್ಧಿಗೊಳಿಸುತ್ತಿರುವ ಸಮುದಾಯಗಳ ಹಿತಾಸಕ್ತಿಯನ್ನು ಸಂರಕ್ಷಿಸುವುದು ಮತ್ತು ಈ ಸಾಂಪ್ರದಾಯಿಕ ಔಷಧಗಳನ್ನು ಮಾರುಕಟ್ಟೆಗೆ ತಂದಾಗ ಬೌದ್ಧಿಕ ಹಕ್ಕುಗಳ ಲಾಭ ಹಂಚಿಕೆ ಸೇರಿದಂತೆ ಎಲ್ಲ ಪ್ರಯೋಜನಗಳು ಹಂಚಿಕೆಯಾಗಬೇಕು ಎಂದು ಅವರು ಹೇಳಿದರು.

 “ಈ ಪ್ರಮುಖ ಉಪಕ್ರಮದ ನಾಯಕತ್ವ ವಹಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು. ಈ ಒಂದೇ ಒಂದು ಕೇಂದ್ರ ನಿಮ್ಮ ನಾಯಕತ್ವದಿಂದಾಗಿ ಸಾಂಪ್ರದಾಯಕ ಔಷಧಗಳ ಬಳಕೆಯಲ್ಲಿ ಮಹತ್ವದ ಪರಿವರ್ತನೆ ತರಲಿದೆ ಎಂಬ ವಿಶ್ವಾಸ ತನಗಿದೆ” ಎಂದು ಪ್ರಧಾನಮಂತ್ರಿ ಅವರಿಗೆ ಧನ್ಯವಾದಗಳನ್ನು ಹೇಳುವ ಮೂಲಕ ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿ ತಮ್ಮ ಮಾತು ಮುಗಿಸಿದರು. ಅಲ್ಲದೆ ಮಾರಿಷಸ್ ಪ್ರಧಾನಮಂತ್ರಿ, ಪ್ರವಿಂದ್ ಕುಮಾರ್ ಜುಗನ್ನಾಥ್ ಅವರ ಸಾಂಪ್ರದಾಯಕ ಔಷಧಗಳ ಬದ್ಧತೆಯನ್ನು ಅವರು ಶ್ಲಾಘಿಸಿದರು. ವಿಶ್ವ ಆರೋಗ್ಯ ಸಂಸ್ಥೆ 75 ವರ್ಷ ಪೂರೈಸುತ್ತಿರುವುದರ ನಡುವೆಯೇ ಕಾಕತಾಳೀಯವೆಂಬಂತೆ, ಭಾರತೀಯ ಸ್ವಾತಂತ್ರ್ಯೋತ್ಸವ 75ನೇ ವರ್ಷದ ಆಜಾದಿ ಕಾ ಅಮೃತ ಮಹೋತ್ಸವ ನಡೆಯುತ್ತಿರುವುದು ಸಂತೋಷದ ಸಂಗತಿ ಎಂದು ಅವರು ಉಲ್ಲೇಖಿಸಿದರು.

            ಸಾಂಪ್ರದಾಯಕ ಔಷಧ ವಲಯದಲ್ಲಿ ಭಾರತ ಮತ್ತು ಗುಜರಾತ್ ನೀಡಿರುವ ಕೊಡುಗೆಯನ್ನು ಪ್ರವಿಂದ್ ಕುಮಾರ್ ಜುಗನ್ನಾಥ್ ಶ್ಲಾಘಿಸಿದರು. ಅಲ್ಲದೆ ತಮ್ಮ ದೇಶದಲ್ಲಿ ಆರೋಗ್ಯ ವಲಯದಲ್ಲಿ ಭಾರತ ನೀಡಿರುವ ನೆರವನ್ನು ಅವರು ಉಲ್ಲೇಖಿಸಿದರು. ಭಾರತದೊಂದಿಗಿನ ಸಾಮಾನ್ಯ ಸಂಬಂಧವನ್ನು ಉಲ್ಲೇಖಿಸಿದ ಮಾರಿಷಸ್ ಪ್ರಧಾನಮಂತ್ರಿ, ತಮ್ಮ ದೇಶದಲ್ಲಿ ಆಯುರ್ವೇದಕ್ಕೆ ನೀಡಿರುವ ಪ್ರಾಮುಖ್ಯವನ್ನು ಬಲವಾಗಿ ಪ್ರತಿಪಾದಿಸಿದರು. ಮಾರಿಷಸ್ ನಲ್ಲಿ ಆಯುರ್ವೇದಿಕ್ ಆಸ್ಪತ್ರೆಯನ್ನು ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದ ಅವರು, ಮೊದಲ ಲಾಕ್ ಡೌನ್ ವೇಳೆ ಸಾಂಪ್ರದಾಯಕ ಔಷಧಗಳನ್ನು ದೇಣಿಗೆ ನೀಡಿದ ಭಾರತಕ್ಕೆ ಧನ್ಯವಾದಗಳನ್ನು ಹೇಳಿದರು. “ಇದು ಒಗ್ಗಟ್ಟಿನ ಅನೇಕ ಸೂಚಕಗಳಲ್ಲಿ ಒಂದಾಗಿದೆ. ಅದಕ್ಕಾಗಿ ನಾವು ಭಾರತ ಸರ್ಕಾರಕ್ಕೆ ಮತ್ತು ವಿಶೇಷವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಸದಾ ಆಭಾರಿಯಾಗಿರುತ್ತೇವೆ” ಎಂದು ಪ್ರವಿಂದ್ ಕುಮಾರ್ ಜುಗನ್ನಾಥ್ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ, ಜಾಗತಿಕ ಆಯುಷ್ ಹೂಡಿಕೆ ಮತ್ತು ನಾವೀನ್ಯತೆ ಶೃಂಗಸಭೆಯ ಕಲ್ಪನೆಯು ಸಾಂಕ್ರಾಮಿಕ ಸಮಯದಲ್ಲಿ ಜನರ ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಆಯುಷ್ ಬಲವಾದ ಬೆಂಬಲವನ್ನು ನೀಡಿದಾಗ ಮತ್ತು ಆಯುಷ್ ಉತ್ಪನ್ನಗಳ ಆಸಕ್ತಿ ಮತ್ತು ಬೇಡಿಕೆಯ ಉಲ್ಬಣವನ್ನು ಕಂಡಾಗ ಅವರಿಗೆ ಬಂದಿತು ಎಂದು ಹೇಳಿದರು. ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಭಾರತ ಕೈಗೊಂಡ ಪ್ರಯತ್ನಗಳನ್ನು ನೆನಪಿಸಿಕೊಂಡ ಪ್ರಧಾನಮಂತ್ರಿ, ಸರಿಯಾದ ಸಮಯದಲ್ಲಿ ಹೂಡಿಕೆ ಮಾಡಿದರೆ ಆಧುನಿಕ ಫಾರ್ಮಾ ಕಂಪನಿಗಳು ಮತ್ತು ಲಸಿಕೆ ತಯಾರಕರು ಯಾವ ರೀತಿಯ ಭರವಸೆಯನ್ನು ನೀಡಬಲ್ಲರು ಎಂದು ಉಲ್ಲೇಖಿಸಿದರು. "ನಾವು ಇಷ್ಟು ಬೇಗ ಕರೋನಾ ಲಸಿಕೆಯನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ ಎಂದು ಯಾರಾದರೂ ಊಹಿಸಿದ್ದರೇ?", ಅವರು ಕೇಳಿದರು.

ಆಯುಷ್ ವಲಯದ ಪ್ರಗತಿಯನ್ನು ವಿವರಿಸಿದ ಪ್ರಧಾನಮಂತ್ರಿಯವರು “ನಾವು ಈಗಾಗಲೇ ಆಯುಷ್ ಔಷಧಿಗಳು, ಪೂರಕ ಉತ್ಪನ್ನಗಳು ಮತ್ತು ಸೌಂದರ್ಯವರ್ಧಕಗಳ ಉತ್ಪಾದನೆಯಲ್ಲಿ ಅಭೂತಪೂರ್ವ ಬೆಳವಣಿಗೆಯನ್ನು ಕಾಣುತ್ತಿದ್ದೇವೆ. 2014 ರಲ್ಲಿ, ಆಯುಷ್ ವಲಯವು 3 ಶತಕೋಟಿ ಡಾಲರ್ ಗಿಂತ ಕಡಿಮೆಯಿತ್ತು, ಇಂದು ಅದು 18 ಶತಕೋಟಿಗಿಂತ ಅಧಿಕ ಡಾಲರ್ ಗೆ ಹೆಚ್ಚಳವಾಗಿದೆ. ಸಾಂಪ್ರದಾಯಿಕ ಔಷಧಿಗಳ ಕ್ಷೇತ್ರದಲ್ಲಿ ನವೋದ್ಯಮ ಸಂಸ್ಕೃತಿಯನ್ನು ಪ್ರೋತ್ಸಾಹಿಸಲು ಆಯುಷ್ ಸಚಿವಾಲಯವು ಹಲವಾರು ಪ್ರಮುಖ ಉಪಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅವರು ಹೇಳಿದರು. ಕೆಲವು ದಿನಗಳ ಹಿಂದೆ ಅಖಿಲ ಭಾರತ ಆಯುರ್ವೇದ ಸಂಸ್ಥೆ ಅಭಿವೃದ್ಧಿಪಡಿಸಿದ ಇನ್‌ಕ್ಯುಬೇಶನ್ (ಸಂಪೋಷಣಾ) ಕೇಂದ್ರವನ್ನು ಉದ್ಘಾಟಿಸಲಾಗಿದೆ ಎಂದು ಶ್ರೀ ಮೋದಿ ತಿಳಿಸಿದರು. ಸದ್ಯದ ಯುನಿಕಾರ್ನ್‌ಗಳ ಯುಗವನ್ನು ವಿವರಿಸಿದ ಪ್ರಧಾನಿ, 2022ರಲ್ಲಿಯೇ ಭಾರತದಿಂದ ಇದುವರೆಗೆ 14 ಸ್ಟಾರ್ಟ್‌ಅಪ್‌ಗಳು ಯುನಿಕಾರ್ನ್ ಕ್ಲಬ್‌ಗೆ ಸೇರ್ಪಡೆಗೊಂಡಿವೆ ಎಂದು ಮಾಹಿತಿ ನೀಡಿದರು. "ನಮ್ಮ ಆಯುಷ್ ನವೋದ್ಯಮಗಳಿಂದ ಶೀಘ್ರದಲ್ಲೇ ಯುನಿಕಾರ್ನ್‌ಗಳು ಹೊರಹೊಮ್ಮುತ್ತವೆ ಎಂಬುದು ನನಗೆ ಖಾತ್ರಿಯಿದೆ" ಎಂದು ಅವರು ಆಶಿಸಿದರು.

ಔಷಧೀಯ ಸಸ್ಯಗಳ ಉತ್ಪಾದನೆಯು ರೈತರ ಆದಾಯ ಮತ್ತು ಜೀವನೋಪಾಯವನ್ನು ಹೆಚ್ಚಿಸಲು ಮತ್ತು ಉದ್ಯೋಗ ಸೃಷ್ಟಿಯ ವ್ಯಾಪ್ತಿಯನ್ನು ಹೆಚ್ಚಿಸಲು ಉತ್ತಮ ಸಾಧನವಾಗಿದೆ ಎಂದು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಗಿಡಮೂಲಿಕೆ ಸಸ್ಯಗಳ ಉತ್ಪಾದನೆಯಲ್ಲಿ ತೊಡಗಿರುವ ರೈತರಿಗೆ ಮಾರುಕಟ್ಟೆಯೊಂದಿಗೆ ಸುಲಭವಾಗಿ ಸಂಪರ್ಕ ಸಾಧಿಸಲು ಅಗತ್ಯ ಸೌಲಭ್ಯದ ಮಹತ್ವವನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಇದಕ್ಕಾಗಿ ಆಯುಷ್ ಇ-ಮಾರುಕಟ್ಟೆ ಸ್ಥಳದ ಆಧುನೀಕರಣ ಮತ್ತು ವಿಸ್ತರಣೆಗೂ ಸರಕಾರ ಶ್ರಮಿಸುತ್ತಿದೆ ಎಂದರು. "ಭಾರತವು ಗಿಡಮೂಲಿಕೆ ಸಸ್ಯಗಳ ನಿಧಿಯಾಗಿದೆ, ಅದು ಒಂದು ರೀತಿಯಲ್ಲಿ ನಮ್ಮ 'ಹಸಿರು ಚಿನ್ನ'" ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.

ಇತ್ತೀಚಿನ ವರ್ಷಗಳಲ್ಲಿ ಆಯುಷ್ ಉತ್ಪನ್ನಗಳ ರಫ್ತು ಉತ್ತೇಜಿಸಲು ಮಾಡಿದ ಅಭೂತಪೂರ್ವ ಪ್ರಯತ್ನಗಳನ್ನು ಪ್ರಧಾನಮಂತ್ರಿ ವಿವರಿಸಿದರು. ಇತರ ದೇಶಗಳೊಂದಿಗೆ ಆಯುಷ್ ಔಷಧಿಗಳ ಪರಸ್ಪರ ಗುರುತಿಸುವಿಕೆಗೆ ಒತ್ತು ನೀಡಲಾಗಿದೆ. ಇದಕ್ಕಾಗಿ ಕಳೆದ ಕೆಲವು ವರ್ಷಗಳಲ್ಲಿ ವಿವಿಧ ದೇಶಗಳೊಂದಿಗೆ 50 ಕ್ಕೂ ಒಡಂಬಿಕೆಗಳನ್ನು ಮಾಡಿಕೊಳ್ಳಲಾಗಿದೆ. “ನಮ್ಮ ಆಯುಷ್ ತಜ್ಞರು ಭಾರತೀಯ ಮಾನಕ ಬ್ಯೂರೋ (ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್) ಸಹಯೋಗದೊಂದಿಗೆ ಐಎಸ್ ಒ ಮಾನದಂಡಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಇದು 150 ಕ್ಕೂ ಹೆಚ್ಚು ದೇಶಗಳಲ್ಲಿ ಆಯುಷ್  ಉತ್ಪನ್ನಗಳಿಗೆ  ದೊಡ್ಡ ರಫ್ತು ಮಾರುಕಟ್ಟೆಯನ್ನು ತೆರೆಯುತ್ತದೆ ” ಎಂದು ಅವರು ಹೇಳಿದರು.

ಎಫ್ ಎಸ್ ಎಎಐ ಕಳೆದ ವಾರ ತನ್ನ ನಿಯಮಾವಳಿಗಳಲ್ಲಿ 'ಆಯುಷ್ ಆಹಾರ್' ಎಂಬ ಹೊಸ ಕ್ಯಾಟಗರಿಯನ್ನು ಘೋಷಿಸಿದೆ ಎಂದು ಶ್ರೀ ನರೇಂದ್ರ ಮೋದಿ ತಿಳಿಸಿದರು. ಇದು ಗಿಡಮೂಲಿಕೆ ಪೌಷ್ಟಿಕಾಂಶದ ಪೂರಕಗಳ ಉತ್ಪಾದಕರಿಗೆ ಹೆಚ್ಚು ಅನುಕೂಲವಾಗುತ್ತದೆ. ಅದೇ ರೀತಿ ಭಾರತ ಕೂಡ ವಿಶೇಷ ಆಯುಷ್ ಮಾರ್ಕ್ ಮಾಡಲು ಹೊರಟಿದೆ. ಭಾರತದಲ್ಲಿ ತಯಾರಾದ ಅತ್ಯುನ್ನತ ಗುಣಮಟ್ಟದ ಆಯುಷ್ ಉತ್ಪನ್ನಗಳಿಗೆ ಈ ಗುರುತು ಅನ್ವಯಿಸುತ್ತದೆ. ಈ ಆಯುಷ್ ಮಾರ್ಕ್ ಆಧುನಿಕ ತಂತ್ರಜ್ಞಾನದ ನಿಬಂಧನೆಗಳೊಂದಿಗೆ ಸುಸಜ್ಜಿತವಾಗಿರುತ್ತದೆ. "ಇದು ಪ್ರಪಂಚದಾದ್ಯಂತದ ಜನರಿಗೆ ಗುಣಮಟ್ಟದ ಆಯುಷ್ ಉತ್ಪನ್ನಗಳ ವಿಶ್ವಾಸವನ್ನು ನೀಡುತ್ತದೆ" ಎಂದು ಪ್ರಧಾನಿ ವಿವರಿಸಿದರು.

ದೇಶಾದ್ಯಂತ ಆಯುಷ್ ಉತ್ಪನ್ನಗಳ ಪ್ರಚಾರ, ಸಂಶೋಧನೆ ಮತ್ತು ಉತ್ಪಾದನೆಯನ್ನು ಉತ್ತೇಜಿಸಲು ಸರ್ಕಾರವು ಆಯುಷ್ ಪಾರ್ಕ್‌ಗಳ ಜಾಲವನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಪ್ರಧಾನಮಂತ್ರಿ ಪ್ರಕಟಿಸಿದರು. ಈ ಆಯುಷ್ ಪಾರ್ಕ್‌ಗಳು ಭಾರತದಲ್ಲಿ ಆಯುಷ್ ಉತ್ಪಾದನೆಗೆ ಹೊಸ ದಿಕ್ಸೂಚಿಯನ್ನು ನೀಡಲಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

ಸಾಂಪ್ರದಾಯಿಕ ಔಷಧದ ಸಾಮರ್ಥ್ಯದ ಬಗ್ಗೆ ಮಾತು ಮುಂದುವರಿಸುತ್ತಾ, ಪ್ರಧಾನಮಂತ್ರಿ ಕೇರಳದ ಪ್ರವಾಸೋದ್ಯಮ ವೃದ್ಧಿಯಲ್ಲಿ ಸಾಂಪ್ರದಾಯಿಕ ಔಷಧಿಗಳ ಪಾತ್ರ ಉಲ್ಲೇಖಿಸಿದರು. “ಈ ಸಾಮರ್ಥ್ಯ ಭಾರತದ ಮೂಲೆ ಮೂಲೆಯಲ್ಲಿದೆ.  'ಹೀಲ್ ಇನ್ ಇಂಡಿಯಾ' (ಭಾರತದಲ್ಲಿ ಗುಣಮುಖರಾಗಿ) ಈ ದಶಕದ ದೊಡ್ಡ ಬ್ರ್ಯಾಂಡ್ ಆಗಬಹುದು" ಎಂದು ಅವರು ಹೇಳಿದರು. ಆಯುರ್ವೇದ, ಯುನಾನಿ, ಸಿದ್ಧ ಇತ್ಯಾದಿಗಳನ್ನು ಆಧರಿಸಿದ ಸ್ವಾಸ್ಥ್ಯ ಕೇಂದ್ರಗಳು ಹೆಚ್ಚು ಜನಪ್ರಿಯವಾಗಬಹುದು ಎಂದರು. ಇದನ್ನು ಮತ್ತಷ್ಟು ಉತ್ತೇಜಿಸಲು, ಭಾರತಕ್ಕೆ ಬರಲು ಬಯಸುವ ವಿದೇಶಿ ಪ್ರಜೆಗಳಿಗೆ ಆಯುಷ್ ಚಿಕಿತ್ಸೆಯ ಪ್ರಯೋಜನವನ್ನು ಪಡೆಯಲು ಸರ್ಕಾರವು ಮತ್ತೊಂದು ಉಪಕ್ರಮವನ್ನು ತೆಗೆದುಕೊಳ್ಳುತ್ತಿದೆ. “ಶೀಘ್ರದಲ್ಲೇ ಭಾರತವು ವಿಶೇಷ ಆಯುಷ್ ವೀಸಾ ಕ್ಯಾಟಗರಿಯನ್ನು ಪರಿಚಯಿಸಲಿದೆ. ಇದು ಆಯುಷ್ ಚಿಕಿತ್ಸೆಗಾಗಿ ಭಾರತಕ್ಕೆ ಆಗಮಿಸುವ ಜನರಿಗೆ ಅನುಕೂಲವಾಗುತ್ತದೆ” ಎಂದು ಪ್ರಧಾನಮಂತ್ರಿ ಘೋಷಿಸಿದರು.

ಕೀನ್ಯಾದ ಮಾಜಿ ಪ್ರಧಾನಿ ರೈಲಾ ಒಡಿಂಗಾ ಅವರ ಪುತ್ರಿ ರೋಸ್ಮರಿ ಒಡಿಂಗಾ ಅವರು ಆಯುಷ್ ಚಿಕಿತ್ಸೆಯ ನಂತರ ತಮ್ಮ ದೃಷ್ಟಿಯನ್ನು ಮರಳಿ ಪಡೆದ ಆಯುರ್ವೇದ ಯಶೋಗಾಥೆಯನ್ನು ಪ್ರಧಾನ ಮಂತ್ರಿ ವಿವರಿಸಿದರು. ರೋಸ್ಮರಿ ಒಡಿಂಗಾ ಅವರು ಸಭಿಕರಲ್ಲಿ ಉಪಸ್ಥಿತರಿದ್ದರು ಮತ್ತು ಸಭೆಯು ಅವರಿಗೆ ಚಪ್ಪಾಳೆಗಳನ್ನು ನೀಡುತ್ತಿದ್ದಂತೆ ಪ್ರಧಾನಿ ಅವರನ್ನು ಸಭೆಗೆ ಪರಿಚಯಿಸಿದರು. 21 ನೇ ಶತಮಾನದ ಭಾರತವು ತನ್ನ ಅನುಭವಗಳನ್ನು ಮತ್ತು ತನ್ನ ಜ್ಞಾನವನ್ನು ಪ್ರಪಂಚದೊಂದಿಗೆ ಹಂಚಿಕೊಳ್ಳುವ ಮೂಲಕ ಮುನ್ನಡೆಯಲು ಬಯಸುತ್ತದೆ ಎಂದು ಅವರು ಮಾತು ಮುಂದುವರಿಸಿದರು. “ನಮ್ಮ ಪರಂಪರೆಯು ಇಡೀ ಮನುಕುಲಕ್ಕೆ ಒಂದು ಗತವೈಭವದಂತಿದೆ" ಎಂದು ಅವರು ಹೇಳಿದರು. ಆಯುರ್ವೇದದ ಸಮೃದ್ಧಿಯ ಹಿಂದಿನ ಪ್ರಮುಖ ಕಾರಣವೆಂದರೆ ಅದರ ಮುಕ್ತ ಮೂಲ ಮಾದರಿ ಎಂದು ಪ್ರಧಾನಮಂತ್ರಿ ಬಲವಾಗಿ ಪ್ರತಿಪಾದಿಸಿರು. ಇದನ್ನು ಐಟಿ ವಲಯದಲ್ಲಿನ ಮುಕ್ತ-ಮೂಲ (ಓಪನ್ ಸೋರ್ಸ್ )ನ ಆಂದೋಲನದೊಂದಿಗೆ ಹೋಲಿಸಿದ ಪ್ರಧಾನಮಂತ್ರಿ, ಆಯುರ್ವೇದ ಸಂಪ್ರದಾಯವು ಜ್ಞಾನವನ್ನು ಹಂಚಿಕೊಳ್ಳುವ ಮೂಲಕ ತನ್ನ ಶಕ್ತಿಯಿಂದ ಬಲವರ್ಧನೆಗೊಳಿಸಿಕೊಳ್ಳುತ್ತಾ ಹೋಗುತ್ತಿದೆ ಎಂದು ಒತ್ತಿ ಹೇಳಿದರು. ನಮ್ಮ ಪೂರ್ವಜರಿಂದ ಸ್ಫೂರ್ತಿ ಪಡೆದು ತೆರೆದ ಮೂಲಗಳ ಅದೇ ಮನೋಭಾವದಿಂದ ಕೆಲಸ ಮಾಡುವ ಅಗತ್ಯವನ್ನು ಅವರು ಬಲವಾಗಿ ಪ್ರತಿಪಾದಿಸಿದರು. ಮುಂದಿನ 25 ವರ್ಷಗಳ ಅಮೃತ ಕಾಲವು ಸಾಂಪ್ರದಾಯಿಕ ಔಷಧಿಗಳ ಸುವರ್ಣಯುಗವೆಂದು ಸಾಬೀತುಪಡಿಸುತ್ತದೆ ಎಂದು ಅವರು ಆಶಯ ವ್ಯಕ್ತಪಡಿಸಿದರು.

ಪ್ರಧಾನಮಂತ್ರಿ ಭಾಷಣವು ಅತ್ಯಂತ ವೈಯಕ್ತಿಕ ಮತ್ತು ಆಸಕ್ತಿದಾಯಕ ಟಿಪ್ಪಣಿಯೊಂದಿಗೆ ಸಮಾಪನಗೊಂಡಿತು. ಡಾ. ತೆದ್ರೋಸ್ ಗೆಬ್ರೆಯೆಸಿಸ್ ಅವರ ಭಾರತದ ಮೇಲಿನ ಪ್ರೀತಿ ಮತ್ತು ಅವರ ಭಾರತೀಯ ಶಿಕ್ಷಕರ ಮೇಲಿನ ಗೌರವ ಮತ್ತು ಗುಜರಾತ್‌ನ ಮೇಲಿನ ಅವರ ಪ್ರೀತಿಯನ್ನು ವಿವರಿಸುತ್ತಾ, ಶ್ರೀ ನರೇಂದ್ರ ಮೋದಿ ಅವರು ಅವರಿಗೆ ಗುಜರಾತಿಯ ‘ತುಳಸಿ ಭಾಯಿ’ ಹೆಸರನ್ನು ನೀಡಿದರು. ಭಾರತೀಯ ಸಂಪ್ರದಾಯದಲ್ಲಿ ತುಳಸಿಯ ಮಂಗಳಕರ ಮತ್ತು ಉದಾತ್ತ ಸ್ಥಾನಮಾನವನ್ನು ಅವರು ಪ್ರೇಕ್ಷಕರಿಗೆ ವಿವರಿಸಿದರು ಮತ್ತು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದುದಕ್ಕಾಗಿ ಡಬ್ಲೂಎಚ್ ಒ ಡಿಜಿ ಮತ್ತು ಮಾರಿಷಸ್‌ನ ಪ್ರಧಾನ ಮಂತ್ರಿ ಶ್ರೀ ಪ್ರವಿಂದ್ ಕುಮಾರ್ ಜುಗನ್ನಾಥ್ ಅವರಿಗೆ ಪ್ರಧಾನಿ ಧನ್ಯವಾದಗಳನ್ನು ಅರ್ಪಿಸಿದರು.

 

***

 



(Release ID: 1818425) Visitor Counter : 190