ಜಲ ಶಕ್ತಿ ಸಚಿವಾಲಯ

ಯಶೋಗಾಥೆ: ಸ್ವಚ್ಛ ಭಾರತ ಯೋಜನೆ


ಕರ್ನಾಟಕದ ಗದಗ ಜಿಲ್ಲೆಯ 32 ಗ್ರಾಮ ಪಂಚಾಯಿತಿಗಳಲ್ಲಿ ಗುಲಾಬಿ ಶೌಚಾಲಯಗಳು

Posted On: 18 APR 2022 2:26PM by PIB Bengaluru

ನೈರ್ಮಲ್ಯವನ್ನು ಕೈಗೆಟುಕುವ ಹಾಗೂ ಸುರಕ್ಷಿತವನ್ನಾಗಿ ಮಾಡುವ ನಿಟ್ಟಿನಲ್ಲಿ ಹಾಗೂ ಇದೇ ವೇಳೆ, ಹದಿಹರೆಯದ ಹೆಣ್ಣುಮಕ್ಕಳಲ್ಲಿ ಋತುಚಕ್ರದ ದಿನಗಳಲ್ಲಿ ಉಂಟಾಗುವ ಮುಜುಗರವನ್ನು ನಿವಾರಿಸುವ ನಿಟ್ಟಿನಲ್ಲಿ ಕರ್ನಾಟಕದ ಗದಗ ಜಿಲ್ಲೆಯು  ಜಿಲ್ಲೆಯಾದ್ಯಂತ 32-ಗ್ರಾಮ ಪಂಚಾಯಿತಿಗಳಲ್ಲಿ (ಗ್ರಾ.ಪಂ.ಗಳಲ್ಲಿ) ಗುಲಾಬಿ ಶೌಚಾಲಯಗಳನ್ನು ನಿರ್ಮಿಸುತ್ತಿದೆ.

ಇವುಗಳಲ್ಲಿ 20 ಘಟಕಗಳು ಪೂರ್ಣಗೊಂಡಿದ್ದು, 12 ಘಟಕಗಳು ಅಂತಿಮ ಹಂತದಲ್ಲಿವೆ.   ಪ್ರತಿ ಘಟಕದ ವೆಚ್ಚ ರೂ.6 ಲಕ್ಷಗಳು - (ʻಎಂನರೇಗಾʼದಿಂದ ದಿಂದ 3 ಲಕ್ಷ ರೂ., ಸ್ವಚ್ಛ ಭಾರತ್‌ ಯೋಜನೆ -ಗ್ರಾಮೀಣʼದಿಂದ 1.8 ಲಕ್ಷ ರೂ. ಮತ್ತು ಗ್ರಾಮ ಪಂಚಾಯಿತಿಯ 15ನೇ ಹಣಕಾಸು ನಿಧಿಯಿಂದ ರೂ. 1.2 ಲಕ್ಷ).

ಇಂತಹ ಮೊದಲ ಘಟಕವನ್ನು ಮೊದಲು ಕೆ.ಎಚ್.ಪಾಟೀಲ್ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಲಾಯಿತು ಮತ್ತು ಯಶಸ್ವಿ ಪರೀಕ್ಷೆಯ ನಂತರ, ಅದನ್ನು ಇತರ ಹಳ್ಳಿಗಳಲ್ಲಿ ಪುನರಾವರ್ತಿಸಲಾಗುತ್ತಿದೆ.

ಸಾಕಷ್ಟು ನೀರು ಪೂರೈಕೆ, ಬೆಳಕು, ಬಟ್ಟೆ ಬದಲಾಯಿಸುವ ಕೋಣೆ ಮತ್ತು ಇತರ ಸೌಲಭ್ಯಗಳನ್ನು ಹೊಂದಿರುವ ಈ  ಹದಿಹರೆಯದ ಹುಡುಗಿಯರು ಮತ್ತು ಮಹಿಳೆಯರಿಗಾಗಿನ ನೈರ್ಮಲ್ಯ ಕೋಣೆಯು ʻಸ್ವಚ್ಛ ಭಾರತ ಯೋಜನೆ-ಗ್ರಾಮೀಣʼ (ಎಸ್‌ಬಿಎಂ-ಜಿ) ಅಡಿಯಲ್ಲಿ ಒಂದು ವಿನೂತನ ಪ್ರಯೋಗವಾಗಿದೆ. ಪ್ರತಿ ಘಟಕವು ಒಂದು ದಹನಕಾರಕವನ್ನು (ಇನ್‌ಸಿನರೇಟರ್‌) ಹೊಂದಿದ್ದು, ಸ್ಯಾನಿಟರಿ ಪ್ಯಾಡ್‌ಗಳು ಮತ್ತು ಮುಟ್ಟಿನ ತ್ಯಾಜ್ಯವನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಲು ಇದನ್ನು ಬಳಸಲಾಗುತ್ತದೆ.

ಋತುಚಕ್ರದ ನೈರ್ಮಲ್ಯ ನಿರ್ವಹಣೆಯು (ಎಂಎಚ್ಎಂ) ʻಸ್ವಚ್ಛ ಭಾರತ್ ಯೋಜನೆ-ಗ್ರಾಮೀಣʼ (ಎಸ್‌ಬಿಎಂ-ಜಿ) ಅಭಿಯಾನದ ಅಡಿಯಲ್ಲಿ ತ್ಯಾಜ್ಯ ನಿರ್ವಹಣೆಯ ಅವಿಭಾಜ್ಯ ಅಂಗವಾಗಿದೆ. ದೇಶದ ಬಾಲಕಿಯರು ಮತ್ತು ಮಹಿಳೆಯರ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಮಾತ್ರವಲ್ಲದೆ ಅವರ ಶಿಕ್ಷಣ ಮತ್ತು ಒಟ್ಟಾರೆ ಅಭಿವೃದ್ಧಿಯ ಮೇಲೆ ಪರಿಣಾಮ ಬೀರುವ ಈ ಸಾಮಾಜಿಕ ನಿಷೇಧಿತ ವಿಷಯದ ಮಹತ್ವವನ್ನು ಇದು ಒತ್ತಿಹೇಳುತ್ತದೆ.   ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ (ಡಿಡಿಡಬ್ಲ್ಯೂಎಸ್) ಎಲ್ಲಾ ಹದಿಹರೆಯದ ಹುಡುಗಿಯರು ಮತ್ತು ಮಹಿಳೆಯರನ್ನು ಬೆಂಬಲಿಸಲು ಮಾರ್ಗಸೂಚಿಗಳನ್ನು ಹೊರಡಿಸಿದೆ. ರಾಜ್ಯ ಸರಕಾರಗಳು, ಜಿಲ್ಲಾಡಳಿತಗಳು, ಎಂಜಿನಿಯರ್‌ಗಳು ಮತ್ತು ಸಂಬಂಧಪಟ್ಟ ಇಲಾಖೆಗಳಲ್ಲಿನ ತಾಂತ್ರಿಕ ತಜ್ಞರು, ಶಾಲಾ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು ಏನು ಮಾಡಬೇಕು ಎಂಬುದನ್ನು ಈ ಮಾರ್ಗಸೂಚಿಗಳು ವಿವರಿಸುತ್ತವೆ.

ಈ ಉಪಕ್ರಮವನ್ನು ಬಾಲಕಿಯರು ಮತ್ತು ಮಹಿಳೆಯರು ಶ್ಲಾಘಿಸಿದ್ದಾರೆ, ಇದು ಅವರ ಋತುಚಕ್ರದ ದಿನಗಳಲ್ಲಿ ಆಗುವ ಮುಜುಗರವನ್ನುನಿವಾರಿಸಲು ಸಹಾಯ ಮಾಡುತ್ತದೆ. 

ʻಸ್ವಚ್ಛ ಭಾರತ್ ಯೋಜನೆ-ಗ್ರಾಮೀಣʼ, ʻಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆʼ, 15ನೇ ಹಣಕಾಸು ಆಯೋಗದ ಮತ್ತು ಗ್ರಾ.ಪಂ. ನಿಧಿಗಳ ನಡುವೆ ಸಮನ್ವಯದಿಂದ ಶೌಚಾಲಯಗಳನ್ನು ನಿರ್ಮಿಸಲಾಗಿದೆ.   ಈ ವಿಶೇಷ ಉಪಕ್ರಮದಿಂದ ಸ್ವಚ್ಛ ಹಳ್ಳಿಗಳ ಕನಸು ನನಸಾಗುತ್ತಿದೆ.

ಗದಗದಲ್ಲಿ ಸೌಲಭ್ಯಗಳ ಸರಿಯಾದ ಬಳಕೆ ಮತ್ತು ನಿರ್ವಹಣೆಯನ್ನು ಖಾತರಿಪಡಿಸಿಕೊಳ್ಳುವ ನಿಟ್ಟಿನಲ್ಲಿ, ʻಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿʼ(ಎಸ್.ಡಿ.ಎಂ.ಸಿ) ಸದಸ್ಯರು, ಶಿಕ್ಷಕರು ಮತ್ತು ಗ್ರಾ.ಪಂ. ಸದಸ್ಯರನ್ನು ಕಾರ್ಯಕ್ರಮಕ್ಕೆ ಸೇರ್ಪಡೆಗೊಳಿಸಿ ಶಾಲಾ ಮಟ್ಟದಲ್ಲಿ ತರಬೇತಿಯನ್ನು ಆಯೋಜಿಸಲಾಗಿದೆ.  ಈ ವೇಳೆ ವಿಶೇಷವಾಗಿ ದಹನಕಾರಕಗಳ ಬಳಕೆಯ ಬಗ್ಗೆ ತರಬೇತಿ ನೀಡಲಾಗಿದೆ.

ʻಎನ್.ಆರ್‌.ಎಲ್.ಎಂʼ ಸ್ವಸಹಾಯ ಗುಂಪುಗಳ ಮೂಲಕ ಸ್ಯಾನಿಟರಿ ಪ್ಯಾಡ್‌ಗಳನ್ನು ತಯಾರಿಸಲು ಗ್ರಾಮದ ಮಹಿಳೆಯರಿಗೆ ತರಬೇತಿ ನೀಡುವ ಸಂಬಂಧ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಏತನ್ಮಧ್ಯೆ,  ಶಾಲಾ ಮಕ್ಕಳಿಗಾಗಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಗೋಡೆ ಬರಹ, ಕರಪತ್ರಗಳು, ಸಾರ್ವಜನಿಕ ಸ್ಥಳಗಳಲ್ಲಿ ವಿತರಿಸಲಾದ ಮತ್ತು ಅಂಟಿಸುವ ಭಿತ್ತಿಪತ್ರಗಳ ಮೂಲಕ ಅರಿವು ಮೂಡಿಸುವಂತಹ ಸಂದೇಶಗಳನ್ನು ನೀಡಲಾಗುತ್ತದೆ.  ಸ್ವಚ್ಛತೆ ಮತ್ತು ಸುರಕ್ಷಿತ ನೈರ್ಮಲ್ಯದ ಸಂದೇಶಗಳನ್ನು ಸಾಮಾಜಿಕ ಮಾಧ್ಯಮಗಳು ಮತ್ತು ಸಾಕ್ಷ್ಯಚಿತ್ರಗಳ ಮೂಲಕವೂ ತಲುಪಿಸಲಾಗುತ್ತಿದೆ.

 

***



(Release ID: 1817780) Visitor Counter : 233