ಪ್ರಧಾನ ಮಂತ್ರಿಯವರ ಕಛೇರಿ

ಗುಜರಾತ್ನ ಸೋಮನಾಥದಲ್ಲಿ ಹೊಸ ʻಸರ್ಕ್ಯೂಟ್ ಹೌಸ್ʼ ಉದ್ಘಾಟಿಸಿದ ಪ್ರಧಾನಮಂತ್ರಿ


"ಸೋಮನಾಥ ದೇವಾಲಯವನ್ನು ನಾಶಪಡಿಸಿದ ಹಾಗೂ ಸರ್ದಾರ್ ಪಟೇಲರ ಪ್ರಯತ್ನದಿಂದ ದೇವಾಲಯವನ್ನು ನವೀಕರಿಸಿದ ಎರಡೂ ಸನ್ನಿವೇಶಗಳು ದೊಡ್ಡ ಸಂದೇಶವನ್ನು ಹೊಂದಿವೆ".

"ಇಂದು, ಪ್ರವಾಸಿ ಕೇಂದ್ರಗಳ ಅಭಿವೃದ್ಧಿಯು ಕೇವಲ ಸರಕಾರದ ಯೋಜನೆಗಳ ಒಂದು ಭಾಗವಲ್ಲ, ಅದು ಸಾರ್ವಜನಿಕ ಪಾಲ್ಗೊಳ್ಳುವಿಕೆಯ ಅಭಿಯಾನವಾಗಿದೆ. ದೇಶದ ಪಾರಂಪರಿಕ ತಾಣಗಳು ಮತ್ತು ನಮ್ಮ ಸಾಂಸ್ಕೃತಿಕ ಪರಂಪರೆಯ ಅಭಿವೃದ್ಧಿಯು ಇದಕ್ಕೆ ಉತ್ತಮ ಉದಾಹರಣೆಗಳಾಗಿವೆ" ಎಂದು ಪ್ರಧಾನಿ ಹೇಳಿದರು.

ದೇಶವು ಪ್ರವಾಸೋದ್ಯಮವನ್ನು ಸಮಗ್ರ ದೃಷ್ಟಿಕೋನದಿಂದ ನೋಡುತ್ತಿದೆ. ಸ್ವಚ್ಛತೆ, ಅನುಕೂಲತೆ, ಸಮಯ ಮತ್ತು ಚಿಂತನೆಯಂತಹ ಅಂಶಗಳು ಪ್ರವಾಸೋದ್ಯಮ ಯೋಜನೆಯ ಭಾಗವಾಗುತ್ತಿವೆ

"ನಮ್ಮ ಚಿಂತನೆ ನವೀನ ಮತ್ತು ಆಧುನಿಕವಾಗಿರಬೇಕು. ಆದರೆ ಇದೇ ವೇಳೆ, ನಮ್ಮ ಪ್ರಾಚೀನ ಪರಂಪರೆಯ ಬಗ್ಗೆ ನಾವು ಎಷ್ಟು ಹೆಮ್ಮೆ ಪಡುತ್ತೇವೆ ಎಂಬುದು ಸಹ ತುಂಬಾ ಮುಖ್ಯವಾಗಿದೆ"

Posted On: 21 JAN 2022 12:48PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್ನ ಸೋಮನಾಥದಲ್ಲಿ ನೂತನ ʻಸರ್ಕ್ಯೂಟ್ ಹೌಸ್ʼ ಅನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್, ರಾಜ್ಯ ಸಚಿವರು, ಸಂಸತ್ ಸದಸ್ಯರು, ದೇವಾಲಯದ ಟ್ರಸ್ಟ್ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಸೋಮನಾಥ ಸರ್ಕ್ಯೂಟ್ ಹೌಸ್ ಉದ್ಘಾಟನೆಗಾಗಿ ಗುಜರಾತ್ ಸರಕಾರ, ಸೋಮನಾಥ ದೇವಾಲಯದ ಟ್ರಸ್ಟ್ ಮತ್ತು ಭಕ್ತರನ್ನು ಅಭಿನಂದಿಸಿದರು. ಕಾಲಾಂತರದಲ್ಲಿ ಉಂಟಾದ ಹಾನಿಯ ಹೊರತಾಗಿಯೂ ದೇಗುಲದ ಗೋಪುರದಲ್ಲಿ ಭಾರತೀಯ ಪ್ರಜ್ಞೆಯು ಹೆಮ್ಮೆಯಿಂದ ರಾರಾಜಿಸುತ್ತಿರುವುದು ಭಕ್ತರ ಅನುಭವಕ್ಕೆ ಬರುತ್ತದೆ ಎಂದು ಅವರು ಹೇಳಿದರು. ಭಾರತೀಯ ನಾಗರಿಕತೆಯ ಸವಾಲಿನ ಪ್ರಯಾಣ ಮತ್ತು ನೂರಾರು ವರ್ಷಗಳ ಗುಲಾಮಗಿರಿಯ ಸನ್ನಿವೇಶಗಳ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಸೋಮನಾಥ ದೇವಾಲಯನಾಶವಾದ ಸಂದರ್ಭಗಳು ಮತ್ತು ಸರ್ದಾರ್ ಪಟೇಲ್ ಅವರ ಪ್ರಯತ್ನದಿಂದ ದೇವಾಲಯವನ್ನು ನವೀಕರಿಸಿದ ಸನ್ನಿವೇಶ – ಈ ಎರಡೂ ದೊಡ್ಡ ಸಂದೇಶವನ್ನು ಹೊಂದಿವೆ ಎಂದು ಹೇಳಿದರು. "ಇಂದು, ಆಜಾದಿ ಕಾ ಅಮೃತ್ ಮಹೋತ್ಸವದಲ್ಲಿ, ನಾವು ನಮ್ಮ ಗತದಿಂದ ಕಲಿಯಲು ಬಯಸುತ್ತೇವೆ, ಸೋಮನಾಥ್ನಂತಹ ಸಂಸ್ಕೃತಿ ಮತ್ತು ನಂಬಿಕೆಯ ಸ್ಥಳಗಳು ಅದರ ಕೇಂದ್ರಬಿಂದುವಾಗಿವೆ", ಎಂದು ಪ್ರಧಾನಿ ಗಮನಸೆಳೆದರು.

ವಿಶ್ವದ ಅನೇಕ ದೇಶಗಳ ಆರ್ಥಿಕತೆಯಲ್ಲಿ ಪ್ರವಾಸೋದ್ಯಮವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪ್ರಧಾನಿ ಹೇಳಿದರು. "ಪ್ರತಿಯೊಂದು ರಾಜ್ಯದಲ್ಲೂ ಮತ್ತು ಪ್ರತಿಯೊಂದು ಕ್ಷೇತ್ರದಲ್ಲೂ ಈ ರೀತಿಯ ಅನಂತ ಸಾಧ್ಯತೆಗಳಿವೆ", ಎಂದು ಅವರು ಹೇಳಿದರು. ದೇಶದ ಆಧ್ಯಾತ್ಮಿಕ ತಾಣಗಳ ವರ್ಚ್ಯುವಲ್ ʻಭಾರತ ದರ್ಶನʼದ ಬಗ್ಗೆ ಪ್ರಧಾನಮಂತ್ರಿಯವರು ವಿವರಿಸಿದರು. ಗುಜರಾತ್ನ ಸೋಮನಾಥ್, ದ್ವಾರಕಾ, ರಣ್ ಆಫ್ ಕಚ್ ಮತ್ತು ಗುಜರಾತ್ನ ಏಕತಾ ಪ್ರತಿಮೆ; ಉತ್ತರ ಪ್ರದೇಶದ ಅಯೋಧ್ಯೆ, ಮಥುರಾ, ಕಾಶಿ, ಪ್ರಯಾಗ್, ಕುಶಿನಗರ ಮತ್ತು ವಿಂಧ್ಯಾಚಲದಂತಹ ಸ್ಥಳಗಳು; ದೇವಭೂಮಿ ಉತ್ತರಾಖಂಡದ ಬದರೀನಾಥ್, ಕೇದಾರನಾಥ್; ಹಿಮಾಚಲ ಪ್ರದೇಶದ ಜ್ವಾಲಾ ದೇವಿ, ನೈನಾ ದೇವಿ; ದೈವಿಕ ಮತ್ತು ನೈಸರ್ಗಿಕ ಚೈತನ್ಯ ತುಂಬಿರುವ ಇಡೀ ಈಶಾನ್ಯ ಭಾರತ; ತಮಿಳುನಾಡಿನ ರಾಮೇಶ್ವರಂ; ಒಡಿಶಾದ ಪುರಿ; ಆಂಧ್ರಪ್ರದೇಶದ ತಿರುಮಲ; ಮಹಾರಾಷ್ಟ್ರದ ಸಿದ್ಧಿ ವಿನಾಯಕ; ಕೇರಳದ ಶಬರಿಮಲೆಯನ್ನು ಈ ಸಾಲಿನಲ್ಲಿ ಪಟ್ಟಿ ಮಾಡಿದರು. "ಈ ಸ್ಥಳಗಳು ನಮ್ಮ ರಾಷ್ಟ್ರೀಯ ಐಕ್ಯತೆ ಮತ್ತು ʻಏಕ್ ಭಾರತ್ ಶ್ರೇಷ್ಠ ಭಾರತ್ʼ ಆಶಯವನ್ನು ಪ್ರತಿನಿಧಿಸುತ್ತವೆ. ಇಂದು, ದೇಶವು ಈ ಕ್ಷೇತ್ರಗಳನ್ನು ಸಮೃದ್ಧಿಯ ಪ್ರಬಲ ಮೂಲಗಳಾಗಿ ನೋಡುತ್ತದೆ. ಇವುಗಳ ಅಭಿವೃದ್ಧಿಯ ಮೂಲಕ ನಾವು ವಿಸ್ತಾರವಾದ ಪ್ರದೇಶದ ಅಭಿವೃದ್ಧಿಗೆ ವೇಗ ನೀಡಬಹುದು,ʼʼ ಎಂದು ಅವರು ಹೇಳಿದರು.

ಕಳೆದ 7 ವರ್ಷಗಳಲ್ಲಿ ದೇಶವು ಪ್ರವಾಸೋದ್ಯಮದ ಸಾಮರ್ಥ್ಯವನ್ನು ಸಾಕಾರಗೊಳಿಸಲು ಅವಿರತವಾಗಿ ಶ್ರಮಿಸಿದೆ ಎಂದು ಪ್ರಧಾನಿ ಹೇಳಿದರು. "ಇಂದು, ಪ್ರವಾಸಿ ಕೇಂದ್ರಗಳ ಅಭಿವೃದ್ಧಿಯು ಕೇವಲ ಸರಕಾರದ ಯೋಜನೆಗಳ ಒಂದು ಭಾಗವಲ್ಲ, ಆದರೆ ಸಾರ್ವಜನಿಕ ಪಾಲ್ಗೊಳ್ಳುವಿಕೆಯ ಅಭಿಯಾನವಾಗಿದೆ. ದೇಶದ ಪಾರಂಪರಿಕ ತಾಣಗಳು ಮತ್ತು ನಮ್ಮ ಸಾಂಸ್ಕೃತಿಕ ಪರಂಪರೆಯ ಅಭಿವೃದ್ಧಿಯು ಇದಕ್ಕೆ ಉತ್ತಮ ಉದಾಹರಣೆಗಳಾಗಿವೆ,ʼʼ ಎಂದರು. ಥೀಮ್ ಆಧಾರಿತ 15 ಪ್ರವಾಸಿ ಸರ್ಕ್ಯೂಟ್ಗಳಂತಹ ಸರಕಾರದ ಕ್ರಮಗಳನ್ನು ಪ್ರಧಾನಿ ಪಟ್ಟಿ ಮಾಡಿದರು. ಉದಾಹರಣೆಗೆ, ʻರಾಮಾಯಣ ಸರ್ಕ್ಯೂಟ್ʼನಲ್ಲಿ ಭಗವಾನ್ ರಾಮನಿಗೆ ಸಂಬಂಧಿಸಿದ ಸ್ಥಳಗಳಿಗೆ ಭೇಟಿ ನೀಡಬಹುದು. ಇದಕ್ಕಾಗಿ ವಿಶೇಷ ರೈಲು ಪ್ರಾರಂಭಿಸಲಾಗಿದೆ. ನಾಳೆ ʻದಿವ್ಯ ಕಾಶಿ ಯಾತ್ರೆʼಗಾಗಿ ದೆಹಲಿಯಿಂದ ವಿಶೇಷ ರೈಲು ಪ್ರಾರಂಭಿಸಲಾಗುತ್ತಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಅದೇ ರೀತಿ ʻಬುದ್ಧ ಸರ್ಕ್ಯೂಟ್ʼ ಮೂಲಕ ಭಗವಾನ್ ಬುದ್ಧನಿಗೆ ಸಂಬಂಧಿಸಿದ ಸ್ಥಳಗಳಿಗೆ ಭೇಟಿ ಸುಲಭಗೊಳಿಸುತ್ತಿದೆ. ವಿದೇಶಿ ಪ್ರವಾಸಿಗರಿಗೆ ವೀಸಾ ನಿಯಮಗಳನ್ನು ಸಡಿಲಿಸಲಾಗಿದೆ ಮತ್ತು ಲಸಿಕೆ ಅಭಿಯಾನದಲ್ಲಿ ಪ್ರವಾಸಿ ತಾಣಗಳಿಗೆ ಆದ್ಯತೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಇಂದು ದೇಶವು ಪ್ರವಾಸೋದ್ಯಮವನ್ನು ಸಮಗ್ರ ದೃಷ್ಟಿಕೋನದಿಂದ ನೋಡುತ್ತಿದೆ ಎಂದು ಪ್ರಧಾನಿ ಹೇಳಿದರು. ಇಂದಿನ ಕಾಲದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ನಾಲ್ಕು ವಿಷಯಗಳು ಅಗತ್ಯವಾಗಿವೆ. ಮೊದಲು ಸ್ವಚ್ಛತೆ- ಈ ಮೊದಲು ನಮ್ಮ ಪ್ರವಾಸಿ ಸ್ಥಳಗಳು, ಪವಿತ್ರ ಯಾತ್ರಾ ಸ್ಥಳಗಳು ಸಹ ಅನೈರ್ಮಲ್ಯದಿಂದ ಕೂಡಿದ್ದವು. ಇಂದು ʻಸ್ವಚ್ಛ ಭಾರತ ಅಭಿಯಾನʼವು ಈ ಚಿತ್ರಣವನ್ನು ಬದಲಾಯಿಸಿದೆ. ಪ್ರವಾಸೋದ್ಯಮವನ್ನು ಉತ್ತೇಜಿಸುವಲ್ಲಿ ಮತ್ತೊಂದು ಪ್ರಮುಖ ಅಂಶವೆಂದರೆ ಅನುಕೂಲತೆ. ಆದರೆ, ಸೌಲಭ್ಯಗಳ ವ್ಯಾಪ್ತಿ ಕೇವಲ ಪ್ರವಾಸಿ ಸ್ಥಳಗಳಿಗೆ ಮಾತ್ರ ಸೀಮಿತವಾಗಬಾರದು ಎಂದು ಪ್ರಧಾನಿ ಹೇಳಿದರು. ಸಾರಿಗೆ, ಅಂತರ್ಜಾಲ, ಸರಿಯಾದ ಮಾಹಿತಿ, ವೈದ್ಯಕೀಯ ವ್ಯವಸ್ಥೆ ಮುಂತಾದ ಎಲ್ಲಾ ಸೌಲಭ್ಯಗಳು ಇರಬೇಕು. ಈ ನಿಟ್ಟಿನಲ್ಲಿ ದೇಶಾದ್ಯಂತ ಸರ್ವಾಂಗೀಣ ಕೆಲಸವನ್ನೂ ಮಾಡಲಾಗುತ್ತಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಮೂರನೇ ಪ್ರಮುಖ ಅಂಶವೆಂದರೆ ಸಮಯ. ಈಗಿನ ವೇಗದ ಯುಗದಲ್ಲಿ, ಜನರು ಕನಿಷ್ಠ ಸಮಯದಲ್ಲಿ ಗರಿಷ್ಠ ಸ್ಥಳಗಳನ್ನು ಸುತ್ತಲು ಬಯಸುತ್ತಾರೆ. ಪ್ರವಾಸೋದ್ಯಮವನ್ನು ಉತ್ತೇಜಿಸುವ ನಾಲ್ಕನೇ ಮತ್ತು ಅತ್ಯಂತ ಪ್ರಮುಖವಾದ ವಿಷಯವೆಂದರೆ ನಮ್ಮ ಆಲೋಚನೆ. ನಮ್ಮ ಚಿಂತನೆ ನವೀನ ಮತ್ತು ಆಧುನಿಕವಾಗಿರಬೇಕು. ಆದರೆ ಇದೇ ವೇಳೆ ಸಮಯದಲ್ಲಿ ನಾವು ನಮ್ಮ ಪ್ರಾಚೀನ ಪರಂಪರೆಯ ಬಗ್ಗೆ ಎಷ್ಟು ಹೆಮ್ಮೆ ಪಡುತ್ತೇವೆ ಎಂಬುದೂ ತುಂಬಾ ಮುಖ್ಯವಾಗಿದೆ ಎಂದರು.

ಸ್ವಾತಂತ್ರ್ಯದ ನಂತರ, ಹೊಸ ಬೆಳವಣಿಗೆಯೆಂದರೆ ಅದು ದೆಹಲಿಯ ಕೆಲವೇ ಕುಟುಂಬಗಳಿಗೆ ಮಾತ್ರ ಸೀಮಿತವಾಗಿತ್ತು ಎಂದು ಪ್ರಧಾನಿ ಹೇಳಿದರು. ಆದರೆ ಇಂದು ದೇಶವು ಆ ಸಂಕುಚಿತ ಚಿಂತನೆಯನ್ನು ಬಿಟ್ಟು ಹೊಸ ಹೆಮ್ಮೆಯ ಸ್ಥಳಗಳನ್ನು ನಿರ್ಮಿಸುತ್ತಿದೆ ಮತ್ತು ಅಂತಹ ಸ್ಥಳಗಳ ಭವ್ಯತೆಯನ್ನು ಹೆಚ್ಚಿಸುತ್ತಿದೆ. "ದೆಹಲಿಯಲ್ಲಿ ಬಾಬಾ ಸಾಹೇಬ್ ಸ್ಮಾರಕವನ್ನು, ರಾಮೇಶ್ವರಂನಲ್ಲಿ ಎಪಿಜೆ ಅಬ್ದುಲ್ ಕಲಾಂ ಸ್ಮಾರಕವನ್ನು ನಿರ್ಮಿಸಿದ್ದು ನಮ್ಮದೇ ಸರಕಾರ. ಅದೇ ರೀತಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಶ್ಯಾಮ್ ಜಿ ಕೃಷ್ಣ ವರ್ಮಾ ಅವರಿಗೆ ಸಂಬಂಧಿಸಿದ ಸ್ಥಳಗಳಿಗೆ ಸೂಕ್ತ ಸ್ಥಾನಮಾನ ನೀಡಲಾಗಿದೆ. ನಮ್ಮ ಬುಡಕಟ್ಟು ಸಮಾಜದ ಭವ್ಯ ಇತಿಹಾಸವನ್ನು ಹೊರತರಲು ದೇಶಾದ್ಯಂತ ಆದಿವಾಸಿ ವಸ್ತುಸಂಗ್ರಹಾಲಯಗಳನ್ನು ನಿರ್ಮಿಸಲಾಗುತ್ತಿದೆ", ಎಂದು ಪ್ರಧಾನಿ ಮಾಹಿತಿ ನೀಡಿದರು. ಹೊಸದಾಗಿ ಅಭಿವೃದ್ಧಿಪಡಿಸಲಾದ ಸ್ಥಳಗಳ ಸಾಮರ್ಥ್ಯದ ಬಗ್ಗೆ ವಿವರಿಸಿದ ಪ್ರಧಾನಮಂತ್ರಿಯವರು, ಕೋವಿಡ್ ಸಾಂಕ್ರಾಮಿಕದ ಹೊರತಾಗಿಯೂ 75 ಲಕ್ಷ ಜನರು ಏಕತಾ ಪ್ರತಿಮೆಯನ್ನು ನೋಡಲು ಬಂದಿದ್ದಾರೆ ಎಂದು ಹೇಳಿದರು. ಅಂತಹ ಸ್ಥಳಗಳು ಪ್ರವಾಸೋದ್ಯಮದ ಜೊತೆಗೆ ನಮ್ಮ ಗುರುತನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತವೆ ಎಂದು ಅವರು ಹೇಳಿದರು.

ʻವೋಕಲ್ ಫಾರ್ ಲೋಕಲ್ʼ (ಸ್ಥಳೀಯರಿಗಾಗಿ ಧ್ವನಿ) ಎಂಬ ತಮ್ಮ ಕರೆಯನ್ನು ಸಂಕುಚಿತವಾಗಿ ವ್ಯಾಖ್ಯಾನ ಮಾಡಬಾರದು. ಇದು ಸ್ಥಳೀಯ ಪ್ರವಾಸೋದ್ಯಮವನ್ನು ಒಳಗೊಂಡಿದೆ ಎಂದು ಎಂದು ಪ್ರಧಾನಿ ಸಲಹೆ ನೀಡಿದರು. ಯಾವುದೇ ವಿದೇಶ ಪ್ರವಾಸೋದ್ಯಮವನ್ನು ಕೈಗೊಳ್ಳುವ ಮೊದಲು ಭಾರತದ ಕನಿಷ್ಠ 15-20 ಸ್ಥಳಗಳಿಗೆ ಭೇಟಿ ನೀಡಬೇಕೆಂಬ ತಮ್ಮ ಮನವಿಯನ್ನು ಅವರು ಪುನರುಚ್ಚರಿಸಿದರು.

***



(Release ID: 1791611) Visitor Counter : 233