ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿಯವರು ಡಿಸೆಂಬರ್ 27 ರಂದು ಮಂಡಿಗೆ ಭೇಟಿ ನೀಡಲಿದ್ದು 11,000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಜಲವಿದ್ಯುತ್ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ


ಈ ವಲಯದಲ್ಲಿ ಬಳಕೆ ಮಾಡಿಕೊಳ್ಳದ ಜಲವಿದ್ಯುತ್ ಸಾಮರ್ಥ್ಯವನ್ನು ಬಳಸಿಕೊಳ್ಳಲು ಪ್ರಧಾನಮಂತ್ರಿಯವರ ಗಮನ ಹರಿಸಿರುವುದನ್ನು ಯೋಜನೆಗಳು ಪ್ರತಿಬಿಂಬಿಸುತ್ತವೆ

ಪ್ರಧಾನಮಂತ್ರಿಯವರು ರೇಣುಕಾಜಿ ಅಣೆಕಟ್ಟು ಯೋಜನೆಗೆ ಶಂಕುಸ್ಥಾಪನೆ ಮಾಡುವರು - ಸಹಕಾರಿ ಒಕ್ಕೂಟ ವ್ಯವಸ್ಥೆಯ ಪ್ರಧಾನಮಂತ್ರಿಯವರ ದೃಷ್ಟಿಕೋನದ ಅಡಿಯಲ್ಲಿ ಆರು ರಾಜ್ಯಗಳನ್ನು ಒಟ್ಟುಗೂಡಿಸುವ ಮೂಲಕ ಇದು ಕಾರ್ಯಸಾಧ್ಯವಾಗಿದೆ

ಯೋಜನೆಯು ತನ್ನ ನೀರಿನ ಪೂರೈಕೆಗೆ ಗಣನೀಯ ಸೇರ್ಪಡೆ ಮೂಲಕ ದೆಹಲಿಗೆ ಅಪಾರ ಪ್ರಯೋಜನಕಾರಿಯಾಗಿದೆ ಎಂದು ಸಾಬೀತುಪಡಿಸುತ್ತದೆ

ಲುಹ್ರಿ ಹಂತ 1 ಜಲ ವಿದ್ಯುತ್ ಯೋಜನೆ ಮತ್ತು ಧೌಲಸಿದ್ ಜಲ ವಿದ್ಯುತ್ ಯೋಜನೆಗೆ ಪ್ರಧಾನಮಂತ್ರಿಯವರು ಶಿಲಾನ್ಯಾಸ ಮಾಡಲಿದ್ದಾರೆ

ಸಾವ್ರಾ-ಕುದ್ದು ಜಲವಿದ್ಯುತ್ ಯೋಜನೆಯನ್ನು ಉದ್ಘಾಟಿಸಲಿರುವ ಪ್ರಧಾನಮಂತ್ರಿ

ಹಿಮಾಚಲ ಪ್ರದೇಶ ಜಾಗತಿಕ ಹೂಡಿಕೆದಾರರ ಮೇಳದ ಎರಡನೇ ಭೂಮಿ ಪೂಜೆ ಸಮಾರಂಭದ ಅಧ್ಯಕ್ಷತೆ ವಹಿಸಲಿರುವ ಪ್ರಧಾನಮಂತ್ರಿ

ಸುಮಾರು 28,000 ಕೋಟಿ ರೂ. ಮೌಲ್ಯದ ಯೋಜನೆಗಳ ಪ್ರಾರಂಭದ ಮೂಲಕ ಈ ಪ್ರದೇಶದಲ್ಲಿ ಹೂಡಿಕೆಗೆ ಉತ್ತೇಜನ ನೀಡುವ ನಿರೀಕ್ಷೆಯಿದೆ

Posted On: 26 DEC 2021 9:50AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021ರ ಡಿಸೆಂಬರ್ 27 ರಂದು ಹಿಮಾಚಲ ಪ್ರದೇಶದ ಮಂಡಿಗೆ ಭೇಟಿ ನೀಡಲಿದ್ದಾರೆ. ಅವರು ಸುಮಾರು 12 ಗಂಟೆ ಸುಮಾರಿಗೆ 11,000 ಕೋಟಿ ರೂಪಾಯಿಗಳ ಮೌಲ್ಯದ ಜಲವಿದ್ಯುತ್ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಕಾರ್ಯಕ್ರಮಕ್ಕೂ ಮುನ್ನ, ಅವರು ಸುಮಾರು ಬೆಳಗ್ಗೆ 11:30 ಕ್ಕೆ ಹಿಮಾಚಲ ಪ್ರದೇಶ ಜಾಗತಿಕ ಹೂಡಿಕೆದಾರರ ಸಭೆಯ ಎರಡನೇ ಭೂಮಿ ಪೂಜೆ ಸಮಾರಂಭದ ಅಧ್ಯಕ್ಷತೆಯನ್ನೂ ವಹಿಸಲಿದ್ದಾರೆ.

ದೇಶದಲ್ಲಿ ಲಭ್ಯವಿರುವ ಸಂಪನ್ಮೂಲಗಳ ಬಳಕೆಯಾಗದ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನಿರಂತರವಾಗಿ ಗಮನಹರಿಸಿದ್ದಾರೆ. ಹಿಮಾಲಯ ಪ್ರದೇಶದಲ್ಲಿ ಜಲವಿದ್ಯುತ್ ಸಾಮರ್ಥ್ಯವನ್ನು ಅತ್ಯುತ್ತಮವಾಗಿ ಬಳಸಿಕೊಳ್ಳುವುದು ಈ ನಿಟ್ಟಿನಲ್ಲಿ ಒಂದು ಹಂತವಾಗಿದೆ. ಈ ಭೇಟಿಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಉದ್ಘಾಟನೆ ಮಾಡುವ ಮತ್ತು ಶಂಕುಸ್ಥಾಪನೆ ನೆರವೇರಿಸಲಿರುವ ಯೋಜನೆಗಳು ಈ ನಿಟ್ಟಿನಲ್ಲಿ ಪ್ರಮುಖ ಕ್ರಮಗಳನ್ನು ಪ್ರತಿಬಿಂಬಿಸುತ್ತವೆ.

ಪ್ರಧಾನಮಂತ್ರಿಯವರು ರೇಣುಕಾಜಿ ಅಣೆಕಟ್ಟು ಯೋಜನೆಗೆ ಶಂಕುಸ್ಥಾಪನೆಯನ್ನೂ ನೆರವೇರಿಸಲಿದ್ದಾರೆ. ಸುಮಾರು ಮೂರು ದಶಕಗಳಿಂದ ಬಾಕಿ ಉಳಿದಿದ್ದ ಈ ಯೋಜನೆಯು ಪ್ರಧಾನಮಂತ್ರಿಯವರ ಸಹಕಾರ ಒಕ್ಕೂಟದ ದೃಷ್ಟಿಕೋನದ ಮೂಲಕ ಸಾಧ್ಯವಾಗಿದೆ, ಯೋಜನೆಯನ್ನು ಕಾರ್ಯಸಾಧ್ಯಗೊಳಿಸಲು ಆರು ರಾಜ್ಯಗಳಾದ ಅಂದರೆ ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಹರಿಯಾಣ, ರಾಜಸ್ಥಾನ, ಉತ್ತರಾಖಂಡ ಮತ್ತು ದೆಹಲಿಯನ್ನು ಕೇಂದ್ರವು ಒಟ್ಟುಗೂಡಿಸಿದೆ. ಸುಮಾರು 7000 ಕೋಟಿ ರೂ. ವೆಚ್ಚದಲ್ಲಿ 40 ಮೆಗಾವ್ಯಾಟ್ ಯೋಜನೆ ನಿರ್ಮಾಣವಾಗಲಿದೆ. ಇದರಿಂದ ವಾರ್ಷಿಕ ಸುಮಾರು 500 ದಶಲಕ್ಷ ಕ್ಯೂಬಿಕ್ ಮೀಟರ್ ನೀರು ಪಡೆಯಲು ಸಾಧ್ಯವಾಗಲಿದ್ದು, ಇದು ದೆಹಲಿಗೆ ಅಗಾಧವಾಗಿ ಪ್ರಯೋಜನಕಾರಿಯಾಗಿದೆ ಎಂದು ಸಾಬೀತುಪಡಿಸುತ್ತದೆ.

ಪ್ರಧಾನಮಂತ್ರಿಯವರು ಲುಹ್ರಿ ಹಂತ 1 ಜಲವಿದ್ಯುತ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 210 ಮೆಗಾವ್ಯಾಟ್ ಯೋಜನೆಯನ್ನು 1800 ಕೋಟಿ ರೂ. ಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾಗುವುದು. ಇದು ವರ್ಷಕ್ಕೆ 750 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಗೆ ಕಾರಣವಾಗುತ್ತದೆ. ಆಧುನಿಕ ಮತ್ತು ವಿಶ್ವಾಸಾರ್ಹ ಗ್ರಿಡ್ ಬೆಂಬಲವು ಪ್ರದೇಶದ ಸುತ್ತಮುತ್ತಲಿನ ರಾಜ್ಯಗಳಿಗೂ ಪ್ರಯೋಜನಕಾರಿಯಾಗಿದೆ.

ಪ್ರಧಾನಮಂತ್ರಿಯವರು ಧೌಲಸಿದ್ ಜಲವಿದ್ಯುತ್ ಯೋಜನೆಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದು ಹಮೀರ್‌ ಪುರ ಜಿಲ್ಲೆಯ ಮೊದಲ ಜಲವಿದ್ಯುತ್ ಯೋಜನೆಯಾಗಲಿದೆ. 66 ಮೆಗಾವ್ಯಾಟ್ ಸಾಮರ್ಥ್ಯದ ಈ ಯೋಜನೆಯನ್ನು 680 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾಗುವುದು. ಇದು ವರ್ಷಕ್ಕೆ 300 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಗೆ ಕಾರಣವಾಗುತ್ತದೆ.

ಪ್ರಧಾನಮಂತ್ರಿಯವರು ಸಾವ್ರಾ-ಕುದ್ದು ಜಲವಿದ್ಯುತ್ ಯೋಜನೆಯನ್ನು ಉದ್ಘಾಟಿಸಲಿದ್ದಾರೆ. ಸುಮಾರು 2080 ಕೋಟಿ ರೂಪಾಯಿ ವೆಚ್ಚದಲ್ಲಿ 111 ಮೆಗಾವ್ಯಾಟ್ ಯೋಜನೆಯನ್ನು ನಿರ್ಮಿಸಲಾಗಿದೆ. ಇದು ವರ್ಷಕ್ಕೆ 380 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಗೆ ಕಾರಣವಾಗುತ್ತದೆ ಮತ್ತು ರಾಜ್ಯವು ವಾರ್ಷಿಕವಾಗಿ 120 ಕೋಟಿ ರೂಪಾಯಿಗಳಷ್ಟು ಆದಾಯವನ್ನು ಗಳಿಸಲು ಸಹಾಯ ಮಾಡುತ್ತದೆ.

ಹಿಮಾಚಲ ಪ್ರದೇಶ ಜಾಗತಿಕ ಹೂಡಿಕೆದಾರರ ಮೇಳದ ಎರಡನೇ ಭೂಮಿ ಪೂಜೆ ಸಮಾರಂಭದ ಅಧ್ಯಕ್ಷತೆಯನ್ನು ಪ್ರಧಾನಮಂತ್ರಿ ವಹಿಸಲಿದ್ದಾರೆ. ಸುಮಾರು 28,000 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳ ಆರಂಭದ ಮೂಲಕ ಮೇಳ, ಈ ಪ್ರದೇಶದಲ್ಲಿ ಹೂಡಿಕೆಗೆ ಉತ್ತೇಜನ ನೀಡುವ ನಿರೀಕ್ಷೆಯಿದೆ.

***

DS/AKJ



(Release ID: 1785314) Visitor Counter : 186