ಪ್ರಧಾನ ಮಂತ್ರಿಯವರ ಕಛೇರಿ

ರಾಷ್ಟ್ರವನ್ನುದ್ದೇಶಿಸಿ ಪ್ರಧಾನಮಂತ್ರಿ ಭಾಷಣ


ಪವಿತ್ರ ಗುರು ಪುರಬ್ ಮತ್ತು ಕರ್ತಾರ್‌ಪುರ್ ಸಾಹಿಬ್ ಕಾರಿಡಾರ್‌ ಅನ್ನು ಯಾತ್ರಿಗಳಿಗೆ ಮತ್ತೆ ಪ್ರವೇಶ ಮುಕ್ತಗೊಳಿಸಿದ ಸಂದರ್ಭದಲ್ಲಿ ದೇಶಕ್ಕೆ ಪ್ರಧಾನಿ ಶುಭಾಶಯ

"ಇಂದು ನಾನು ಇಡೀ ದೇಶಕ್ಕೆ ಒಂದು ವಿಷಯವನ್ನು ಹೇಳಲು ಬಂದಿದ್ದೇನೆ, ಅದೇನೆಂದರೆ ನಾವು ಎಲ್ಲಾ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದೇವೆ. ಈ ತಿಂಗಳ ಕೊನೆಯಲ್ಲಿ ಪ್ರಾರಂಭವಾಗುವ ಸಂಸತ್ ಅಧಿವೇಶನದಲ್ಲಿ, ನಾವು ಈ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಸಾಂವಿಧಾನಿಕ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತೇವೆ"

"2014ರಲ್ಲಿ ನನಗೆ ಪ್ರಧಾನಿಯಾಗಿ ದೇಶ ಸೇವೆ ಮಾಡುವ ಅವಕಾಶ ನೀಡಿದಾಗ, ನಾವು ಕೃಷಿ ಅಭಿವೃದ್ಧಿ ಮತ್ತು ರೈತ ಕಲ್ಯಾಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆವು"

"ನಾವು ಎಂಎಸ್ ಪಿಯನ್ನು ಹೆಚ್ಚಿಸಿರುವುದು ಮಾತ್ರವಲ್ಲದೆ, ದಾಖಲೆ ಸಂಖ್ಯೆಯ ಸರಕಾರಿ ಖರೀದಿ ಕೇಂದ್ರಗಳನ್ನು ತೆರೆದಿದ್ದೇವೆ. ನಮ್ಮ ಸರಕಾರವು ರೈತರು ಬೆಳೆದ ಉತ್ಪನ್ನಗಳ ಖರೀದಿಯಲ್ಲಿ ಕಳೆದ ಹಲವಾರು ದಶಕಗಳ ದಾಖಲೆಗಳನ್ನು ಮುರಿದಿದೆ"

"ದೇಶದ ರೈತರು, ವಿಶೇಷವಾಗಿ ಸಣ್ಣ ರೈತರನ್ನು ಬಲಪಡಿಸಬೇಕು, ಅವರು ತಮ್ಮ ಉತ್ಪನ್ನಗಳಿಗೆ ಸರಿಯಾದ ಬೆಲೆ ಮತ್ತು ಉತ್ಪನ್ನಗಳನ್ನು ಮಾರಾಟ ಮಾಡಲು ಗರಿಷ್ಠ ಆಯ್ಕೆಗಳನ್ನು ಪಡೆಯಬೇಕು ಎಂಬುದು ಮೂರು ಕೃಷಿ ಕಾನೂನುಗಳ ಉದ್ದೇಶವಾಗಿತ್ತು"

"ಕೃಷಿ ವಲಯದ ಹಿತದೃಷ್ಟಿಯಿಂದ ರೈತರ ಕಲ್ಯ

Posted On: 19 NOV 2021 9:55AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಿದರು.

ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಗುರುನಾನಕ್ ಜಯಂತಿಯ ಸಂದರ್ಭದಲ್ಲಿ ಜನತೆಗೆ ಶುಭ ಹಾರೈಸಿದರು. ಒಂದೂವರೆ ವರ್ಷಗಳ ಅಂತರದ ನಂತರ ಕರ್ತಾರ್‌ಪುರ್ ಸಬಿಹ್ ಕಾರಿಡಾರ್ ಅನ್ನು ಯಾತ್ರಿಗಳಿಗೆ ಮತ್ತೆ ಪ್ರವೇಶಮುಕ್ತ ಗೊಳಿಸಿರುವ ಬಗ್ಗೆಯೂ ಅವರು ಸಂತಸ ವ್ಯಕ್ತಪಡಿಸಿದರು.

"ನನ್ನ ಐದು ದಶಕಗಳ ಸಾರ್ವಜನಿಕ ಜೀವನದಲ್ಲಿ ರೈತರ ಸವಾಲುಗಳನ್ನು ನಾನು ಬಹಳ ಹತ್ತಿರದಿಂದ ನೋಡಿದ್ದೇನೆ, ಅದಕ್ಕಾಗಿಯೇ 2014ರಲ್ಲಿ ಪ್ರಧಾನಿಯಾಗಿ ದೇಶಕ್ಕೆ ಸೇವೆ ಸಲ್ಲಿಸಲು ನನಗೆ ಅವಕಾಶ ನೀಡಿದಾಗ, ನಾವು ಕೃಷಿ ಅಭಿವೃದ್ಧಿ ಮತ್ತು ರೈತ ಕಲ್ಯಾಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆವು," ಎಂದು ಪ್ರಧಾನಿ ಹೇಳಿದರು. ರೈತರ ಪರಿಸ್ಥಿತಿಗಳನ್ನು ಸುಧಾರಿಸಲು ಬೀಜಗಳು, ವಿಮೆ, ಮಾರುಕಟ್ಟೆ ಮತ್ತು ಉಳಿತಾಯದ ನಾಲ್ಕು ಹಂತದ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಧಾನಿ ವಿವರಿಸಿದರು.  ಉತ್ತಮ ಗುಣಮಟ್ಟದ ಬೀಜಗಳೊಂದಿಗೆ, ಸರಕಾರವು ರೈತರಿಗೆ ಬೇವು ಲೇಪಿತ ಯೂರಿಯಾ, ʻಮಣ್ಣಿನ ಆರೋಗ್ಯ ಕಾರ್ಡ್ʼ ಮತ್ತು ಸೂಕ್ಷ್ಮ ನೀರಾವರಿಯಂತಹ ಸೌಲಭ್ಯಗಳನ್ನು ನೀಡುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ರೈತರು ತಮ್ಮ ಕಠಿಣ ಪರಿಶ್ರಮಕ್ಕೆ ಪ್ರತಿಯಾಗಿ ತಮ್ಮ ಉತ್ಪನ್ನಗಳಿಗೆ ಸರಿಯಾದ ಬೆಲೆಯನ್ನು ಪಡೆಯುವಂತಾಗಲು ಅನೇಕ ಉಪಕ್ರಮಗಳನ್ನು ಸರಕಾರ ಕೈಗೊಂಡಿದೆ ಎಂದು ಪ್ರಧಾನಿ ಗಮನ ಸೆಳೆದರು. ದೇಶದಲ್ಲಿ ಗ್ರಾಮೀಣ ಮಾರುಕಟ್ಟೆ ಮೂಲಸೌಕರ್ಯವನ್ನು ಬಲಪಡಿಸಲಾಗಿದೆ. "ನಾವು ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಹೆಚ್ಚಿಸಿರುವುದು ಮಾತ್ರವಲ್ಲದೆ, ದಾಖಲೆ ಸಂಖ್ಯೆಯಲ್ಲಿ ಸರಕಾರಿ ಖರೀದಿ ಕೇಂದ್ರಗಳನ್ನು ತೆರೆದಿದ್ದೇವೆ. ನಮ್ಮ ಸರಕಾರವು ರೈತರು ಬೆಳೆದ  ಉತ್ಪನ್ನಗಳ ಖರೀದಿಯಲ್ಲಿ ಕಳೆದ ಹಲವಾರು ದಶಕಗಳ ದಾಖಲೆಗಳನ್ನು ಮುರಿದಿದೆ", ಎಂದು ಅವರು ಹೇಳಿದರು.

ರೈತರ ಸ್ಥಿತಿಯನ್ನು ಸುಧಾರಿಸುವ ಈ ಮಹಾನ್ ಅಭಿಯಾನದ ಭಾಗವಾಗಿ ದೇಶದಲ್ಲಿ ಮೂರು ಕೃಷಿ ಕಾನೂನುಗಳನ್ನು ರೂಪಿಸಲಾಯಿತು ಎಂದು ಪ್ರಧಾನಿ ಹೇಳಿದರು. ದೇಶದ ರೈತರು, ವಿಶೇಷವಾಗಿ ಸಣ್ಣ ರೈತರನ್ನು ಬಲಪಡಿಸಬೇಕು, ಅವರು ತಮ್ಮ ಉತ್ಪನ್ನಗಳಿಗೆ ಸೂಕ್ತ ಬೆಲೆ ಮತ್ತು ಉತ್ಪನ್ನಗಳನ್ನು ಮಾರಾಟ ಮಾಡಲು ಗರಿಷ್ಠ ಆಯ್ಕೆಗಳನ್ನು ಪಡೆಯಬೇಕು ಎಂಬುದು ಇದರ ಹಿಂದಿನ ಉದ್ದೇಶವಾಗಿತ್ತು. ಹಲವಾರು ವರ್ಷಗಳಿಂದ ದೇಶದ ರೈತರು, ದೇಶದ ಕೃಷಿ ತಜ್ಞರು ಮತ್ತು ದೇಶದ ರೈತ ಸಂಘಟನೆಗಳು ನಿರಂತರವಾಗಿ ಈ ಬೇಡಿಕೆಯನ್ನು ಇಡುತ್ತಾ ಬಂದಿದ್ದವು ಎಂದು ಪ್ರಧಾನಿ ಹೇಳಿದರು. ಈ ಹಿಂದೆಯೂ ಅನೇಕ ಸರಕಾರಗಳು ಈ ಬಗ್ಗೆ ಚಿಂತನ-ಮಂಥನ ಮಾಡಿದ್ದವು. ಈ ಬಾರಿಯೂ ಸಂಸತ್ತಿನಲ್ಲಿ ಚರ್ಚೆ ನಡೆಯಿತು, ಚಿಂತನ-ಮಂಥನ ನಡೆಯಿತು ಮತ್ತು ಆ ಬಳಿಕವಷ್ಟೇ ಈ ಕಾನೂನುಗಳನ್ನು ತರಲಾಯಿತು. ದೇಶದ ಮೂಲೆ ಮೂಲೆಗಳಲ್ಲಿ ಅನೇಕ ರೈತ ಸಂಘಟನೆಗಳು ಅದನ್ನು ಸ್ವಾಗತಿಸಿ ಬೆಂಬಲಿಸಿದವು ಎಂದು ಮೋದಿ ಅವರು ನೀಡಿದರು. ಈ ಕ್ರಮವನ್ನು ಬೆಂಬಲಿಸಿದ ಸಂಘಟನೆಗಳು, ರೈತರು ಮತ್ತು ವ್ಯಕ್ತಿಗಳಿಗೆ ಪ್ರಧಾನಿ ಕೃತಜ್ಞತೆ ಸಲ್ಲಿಸಿದರು.

ಕೃಷಿ ವಲಯದ ಹಿತದೃಷ್ಟಿಯಿಂದ ರೈತರ ಕಲ್ಯಾಣಕ್ಕಾಗಿ, ವಿಶೇಷವಾಗಿ ಸಣ್ಣ ರೈತರ ಕಲ್ಯಾಣಕ್ಕಾಗಿ, ಗ್ರಾಮೀಣ-ಬಡವರ ಉಜ್ವಲ ಭವಿಷ್ಯಕ್ಕಾಗಿ, ಸಂಪೂರ್ಣ ಪ್ರಾಮಾಣಿಕತೆ, ಸ್ಪಷ್ಟ ಆತ್ಮಸಾಕ್ಷಿ ಮತ್ತು ರೈತರ ಬಗ್ಗೆ ಸಮರ್ಪಣೆ ಭಾವದೊಂದಿಗೆ ಸರಕಾರ ಈ ಕಾನೂನುಗಳನ್ನು ತಂದಿದೆ ಎಂದು ಪ್ರಧಾನಿ ಹೇಳಿದರು. “ಆದರೆ, ಇಂತಹ ಪವಿತ್ರವಾದ, ಸಂಪೂರ್ಣ ನಿಷ್ಕಲ್ಮಶವಾದ, ರೈತರ ಆಸಕ್ತಿಯ ವಿಷಯವನ್ನು ನಮ್ಮ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ನಾವು ಕೆಲವು ರೈತರಿಗೆ ಅರ್ಥಮಾಡಿಸಲು ಸಾಧ್ಯವಾಗಲಿಲ್ಲ. ಕೃಷಿ ಅರ್ಥಶಾಸ್ತ್ರಜ್ಞರು, ವಿಜ್ಞಾನಿಗಳು, ಪ್ರಗತಿಪರ ರೈತರು ಕೂಡ ಕೃಷಿ ಕಾನೂನುಗಳ ಮಹತ್ವವನ್ನು ಅವರಿಗೆ ಅರ್ಥಮಾಡಿಸಲು ಗರಿಷ್ಠ ಪ್ರಯತ್ನಗಳನ್ನು ಮಾಡಿದರು", ಎಂದರು.  "ನಾವು ಎಲ್ಲಾ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದೇವೆ ಎಂದು ಇಡೀ ದೇಶದ ಜನತೆಗೆ ಹೇಳಲು ನಾನು ಬಂದಿದ್ದೇನೆ. ಈ ತಿಂಗಳ ಕೊನೆಯಲ್ಲಿ ಪ್ರಾರಂಭವಾಗುವ ಸಂಸತ್ ಅಧಿವೇಶನದಲ್ಲಿ, ನಾವು ಈ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಸಾಂವಿಧಾನಿಕ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತೇವೆ,ʼʼ ಎಂದು ಪ್ರಧಾನಿ ಹೇಳಿದರು.

ಇಂದು ಪವಿತ್ರ ಗುರು ಪುರಬ್ ದಿನವಾದ್ದರಿಂದ ಯಾರನ್ನೂ ದೂಷಿಸುವ ಸಂದರ್ಭವಲ್ಲ ಎಂದು ಪ್ರಧಾನಿ ಹೇಳಿದರು. ಜೊತೆಗೆ ರೈತರ ಕಲ್ಯಾಣಕ್ಕಾಗಿ ಕೆಲಸ ಮಾಡಲು ತಮ್ಮನ್ನು ತಾವು ಮರು ಸಮರ್ಪಣೆ ಮಾಡಿಕೊಂಡರು. ಇದೇ ವೇಳೆ, ಕೃಷಿ ಕ್ಷೇತ್ರಕ್ಕೆ ಮಹತ್ವದ ಉಪಕ್ರಮನ್ನು ಅವರು ಪ್ರಕಟಿಸಿದರು.  ಶೂನ್ಯ ಬಜೆಟ್ ಆಧಾರಿತ ಕೃಷಿಯನ್ನು ಉತ್ತೇಜಿಸಲು, ದೇಶದಲ್ಲಿ ಬದಲಾಗುತ್ತಿರುವ ಅಗತ್ಯಗಳಿಗೆ ಅನುಗುಣವಾಗಿ ಬೆಳೆ ಮಾದರಿಯನ್ನು ಬದಲಾಯಿಸಲು ಮತ್ತು ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚು ಪರಿಣಾಮಕಾರಿ ಮತ್ತು ಪಾರದರ್ಶಕಗೊಳಿಸಲು ಸಮಿತಿಯನ್ನು ರಚಿಸುವುದಾಗಿ ಅವರು ಘೋಷಿಸಿದರು. ಈ ಸಮಿತಿಯಲ್ಲಿ ಕೇಂದ್ರ ಸರಕಾರ, ರಾಜ್ಯ ಸರಕಾರಗಳು, ರೈತರು, ಕೃಷಿ ವಿಜ್ಞಾನಿಗಳು ಮತ್ತು ಕೃಷಿ ಅರ್ಥಶಾಸ್ತ್ರಜ್ಞರ ಪ್ರತಿನಿಧಿಗಳು ಇರಲಿದ್ದಾರೆ ಎಂದು ಪ್ರಧಾನಿ ಮಾಹಿತಿ ನೀಡಿದರು.

***



(Release ID: 1773216) Visitor Counter : 303