ಪ್ರಧಾನ ಮಂತ್ರಿಯವರ ಕಛೇರಿ

ಭಾರತೀಯ ರಿಸರ್ವ್ ಬ್ಯಾಂಕಿನ ಎರಡು ವಿನೂತನ ಗ್ರಾಹಕ ಕೇಂದ್ರಿತ ಉಪಕ್ರಮಗಳ ಕಾರ್ಯಾರಂಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

Posted On: 12 NOV 2021 3:01PM by PIB Bengaluru

ನಮಸ್ಕಾರ್ ಜೀ, ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಜೀ, ರಿಸರ್ವ ಬ್ಯಾಂಕಿನ ಗವರ್ನರ್ ಶ್ರೀ ಶಕ್ತಿಕಾಂತ್ ದಾಸ್ ಜೀ, ಕಾರ್ಯಕ್ರಮದಲ್ಲಿ ಹಾಜರಿರುವ ಇತರ ಗಣ್ಯರೇ, ಮಹಿಳೆಯರೇ ಮತ್ತು ಮಹನೀಯರೇ!. ಹಣಕಾಸು ಸಚಿವಾಲಯ, ಆರ್.ಬಿ.ಐ. ಮತ್ತು  ಇತರ ಹಣಕಾಸು ಸಂಸ್ಥೆಗಳು ಈ ಕೊರೊನಾದ ಸವಾಲಿನ ಕಾಲದಲ್ಲಿ ಬಹಳ ಶ್ಲಾಘನೀಯವಾದಂತಹ ಕೆಲಸವನ್ನು ಮಾಡಿವೆ. ಅಮೃತ ಮಹೋತ್ಸವದ ಈ ಸಂದರ್ಭ ಮತ್ತು 21 ನೇ ಶತಮಾನದ ಈ ಪ್ರಮುಖ ದಶಕ ದೇಶದ ಅಭಿವೃದ್ಧಿಯಲ್ಲಿ ಬಹಳ ಪ್ರಮುಖವಾದ ಪಾತ್ರವನ್ನು ವಹಿಸಲಿದೆ. ಆದುದರಿಂದ ಆರ್.ಬಿ.ಐ. ಗೆ ಇದರಲ್ಲಿ ಬಹಳ ಮಹತ್ವದ ಮತ್ತು ಬಹಳ ದೊಡ್ಡದಾದ ಪಾತ್ರವಿದೆ. ಆರ್.ಬಿ.ಐ. ತಂಡವು ದೇಶದ ಆಶೋತ್ತರಗಳಿಗೆ ತಕ್ಕಂತೆ ಕಾರ್ಯನಿರ್ವಹಣೆ ಮಾಡುತ್ತದೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ.

ಸ್ನೇಹಿತರೇ,

ಕಳೆದ 6-7 ವರ್ಷಗಳಲ್ಲಿ, ಕೇಂದ್ರ ಸರಕಾರವು ಸಾಮಾನ್ಯ ಜನರ ಹಿತಾಸಕ್ತಿಗಳಿಗೆ ಆದ್ಯತೆಯನ್ನು ನೀಡುತ್ತಿದೆ. ನಿಯಂತ್ರಕ ವ್ಯವಸ್ಥೆಯಾಗಿ ಆರ್.ಬಿ.ಐ. ಯು ಇತರ ಹಣಕಾಸು ಸಂಸ್ಥೆಗಳ ಜೊತೆ ನಿರಂತರ ಸಂಪರ್ಕವನ್ನು ಸಾಧಿಸಿಕೊಂಡು ಬರುತ್ತಿದೆ. ಜನ ಸಾಮಾನ್ಯರ ಅನುಕೂಲಕ್ಕಾಗಿ ಮತ್ತು ಸವಲತ್ತುಗಳ ಸುಧಾರಣೆಗಾಗಿ ಆರ್.ಬಿ.ಐ. ಯು ಹಲವಾರು ಕ್ರಮಗಳನ್ನು ಕೈಗೊಂಡಿರುವುದು ನನಗೆ ಸಂತೋಷದ  ಸಂಗತಿಯಾಗಿದೆ. ಇಂದು ಇದಕ್ಕೆ ಇನ್ನೊಂದು ಹೆಜ್ಜೆಯನ್ನು ಸೇರಿಸಲಾಗಿದೆ. ಇಂದು ಕಾರ್ಯಾರಂಭ ಮಾಡಲಾದ ಎರಡು ಯೋಜನೆಗಳು ದೇಶದಲ್ಲಿ ಹೂಡಿಕೆಯ ವ್ಯಾಪ್ತಿಯನ್ನು ವಿಸ್ತರಿಸಲಿವೆ ಮತ್ತು ಬಂಡವಾಳ ಮಾರುಕಟ್ಟೆ ಪ್ರವೇಶವನ್ನು ಸುಲಭ ಮಾಡಲಿವೆ. ಮತ್ತು ಹೂಡಿಕೆದಾರರಿಗೆ ಹೆಚ್ಚು ಭದ್ರತೆಯನ್ನು ಒದಗಿಸಲಿವೆ. ದೇಶದ ಸಣ್ಣ ಹೂಡಿಕೆದಾರರಿಗೆ ಚಿಲ್ಲರೆ ನೇರ ಯೋಜನೆಯ (ರಿಟೈಲ್ ಡೈರೆಕ್ಟ್ ) ಮೂಲಕ ಸರಕಾರಿ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡಲು ಸರಳ ಮತ್ತು ಸುರಕ್ಷಿತ ಮಾಧ್ಯಮವೊಂದು ದೊರೆತಂತಾಗಿದೆ. ಅದೇ ರೀತಿ ಒಂದು ದೇಶ, ಒಂದು ಒಂಬುಡ್ಸ್ ಮನ್ ವ್ಯವಸ್ಥೆ ಕೂಡಾ ಇಂದು ಸಮಗ್ರ ಒಂಬುಡ್ಸ್ ಮನ್ ಯೋಜನೆಯ ಮೂಲಕ ಬ್ಯಾಂಕಿಂಗ್ ವಲಯದಲ್ಲಿ ರೂಪುಗೊಂಡಿದೆ. ಇದು ಪ್ರತಿಯೊಂದು ದೂರನ್ನು ಕೂಡಾ ಪರಿಹರಿಸಲು ಸಹಾಯ ಮಾಡಲಿದೆ ಮತ್ತು ಬ್ಯಾಂಕ್ ಗ್ರಾಹಕರ ಸಮಸ್ಯೆಗಳನ್ನು ಸಕಾಲದಲ್ಲಿ ಯಾವುದೇ ಅಡೆ ತಡೆಗಳಿಲ್ಲದೆ ಪರಿಹರಿಸಲಿದೆ. ನನ್ನ ಅಭಿಪ್ರಾಯದ ಪ್ರಕಾರ ಪ್ರಜಾಪ್ರಭುತ್ವದ ಅತ್ಯಂತ ದೊಡ್ಡ ಶಕ್ತಿಯು ಅದರ ಕುಂದು ಕೊರತೆ ಪರಿಹಾರ ವ್ಯವಸ್ಥೆ ಎಷ್ಟೊಂದು ಬಲಿಷ್ಟವಾಗಿದೆ, ಸೂಕ್ಷ್ಮವಾಗಿದೆ ಮತ್ತು  ಕ್ರಿಯಾಶೀಲವಾಗಿದೆ ಎಂಬುದರಲ್ಲಿದೆ. ಇದು ಪ್ರಜಾಪ್ರಭುತ್ವಕ್ಕೆ ಅತ್ಯಂತ ದೊಡ್ಡ ಪರೀಕ್ಷೆ ಕೂಡಾ.

ಸ್ನೇಹಿತರೇ,

ರಿಟೈಲ್ ಡೈರೆಕ್ಟ್ ಯೋಜನೆಯು ಆರ್ಥಿಕತೆಯಲ್ಲಿ ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ಸ್ಫೂರ್ತಿಯನ್ನು ಅತ್ಯಂತ ಎತ್ತರಕ್ಕೆ ಒಯ್ಯಲಿದೆ. ದೇಶದ ಅಭಿವೃದ್ಧಿಯಲ್ಲಿ ಸರಕಾರಿ ಸೆಕ್ಯುರಿಟಿಗಳ ಮಾರುಕಟ್ಟೆ ವಹಿಸುತ್ತಿರುವ ಪಾತ್ರದ ಬಗ್ಗೆ ಜನತೆಗೆ ಸಾಮಾನ್ಯವಾಗಿ ತಿಳಿದಿರುತ್ತದೆ. ದೇಶವು ತನ್ನ ಭೌತಿಕ ಮತ್ತು ಡಿಜಿಟಲ್ ಮೂಲಸೌಕರ್ಯವನ್ನು ಅಭೂತಪೂರ್ವ ಹೂಡಿಕೆಗಳ ಮೂಲಕ ಆಧುನೀಕರಣ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವಾಗ ಅತ್ಯಂತ ಸಣ್ಣ ಹೂಡಿಕೆದಾರರ ಪ್ರಯತ್ನಗಳು, ಸಹಕಾರ ಮತ್ತು ಸಹಭಾಗಿತ್ವ ಬಹಳ ದೊಡ್ಡ ಸಹಾಯವನ್ನು ಮಾಡಬಲ್ಲದು. ಇದುವರೆಗೆ ನಮ್ಮ ಮಧ್ಯಮ ವರ್ಗ, ಉದ್ಯೋಗಿಗಳು, ಸಣ್ಣ ವರ್ತಕರು, ಹಿರಿಯ ನಾಗರಿಕರು ಅಂದರೆ ಸಣ್ಣ ಮೊತ್ತದ  ಉಳಿತಾಯ ಇರುವವರು ಪರೋಕ್ಷವಾಗಿ ಬ್ಯಾಂಕುಗಳು, ವಿಮಾ ಮತ್ತು ಮ್ಯೂಚುವಲ್ ಫಂಡ್ ಗಳನ್ನು ಸರಕಾರಿ ಹೂಡಿಕೆಗಳಲ್ಲಿ ಹೂಡಿಕೆ ಮಾಡುವುದಕ್ಕಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಈಗ ಅವರಿಗೆ ಸುರಕ್ಷಿತ ಹೂಡಿಕೆಗಾಗಿ ಇನ್ನೊಂದು ದೊಡ್ಡ ಅವಕಾಶ ಲಭ್ಯವಾಗುತ್ತಿದೆ. ಈಗ ದೇಶದ ಬಹಳ ದೊಡ್ಡ ವಲಯವು ಸರಕಾರಿ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡಲು ಸಮರ್ಥವಾಗಲಿದೆ ಮತ್ತು ಸುಲಭವಾಗಿ ದೇಶದ ಸಂಪತ್ತು ನಿರ್ಮಾಣದಲ್ಲಿ ನೇರವಾಗಿ ಭಾಗಿಯಾಗಲಿದೆ.  ಭಾರತದಲ್ಲಿ ಎಲ್ಲಾ ಸರಕಾರಿ ಸೆಕ್ಯುರಿಟಿಗಳೂ ಖಚಿತ ಸೆಟ್ಲ್ಮೆಂಟ್  (ಪ್ರತಿಫಲ) ಪ್ರಸ್ತಾವನೆಯನ್ನು ಒಳಗೊಂಡಿರುತ್ತವೆ ಎಂಬುದು ನಿಮಗೆಲ್ಲಾ ತಿಳಿದಿದೆ. ಇಂತಹ ಸಂದರ್ಭದಲ್ಲಿ ಸಣ್ಣ ಹೂಡಿಕೆದಾರರು ಭದ್ರತೆಯ ಭರವಸೆಯನ್ನು ಪಡೆಯುತ್ತಾರೆ. ಸಣ್ಣ ಹೂಡಿಕೆದಾರರಿಗೆ ಉತ್ತಮ ಪ್ರತಿಫಲದ ಭರವಸೆಯೂ ಲಭಿಸುತ್ತದೆ. ಮತ್ತು ಸರಕಾರಕ್ಕೆ ಕೂಡಾ ಮೂಲ ಸೌಕರ್ಯ ಅಭಿವೃದ್ಧಿಗೆ ಹಾಗು ದೇಶದ ಜನಸಾಮಾನ್ಯನ ಆಶೋತ್ತರಗಳಿಗೆ ಅನುಗುಣವಾಗಿ ನವಭಾರತದ ಇತರ ವ್ಯವಸ್ಥೆಗಳನ್ನು ಮಾಡಲು ಅವಶ್ಯ ಸಂಪನ್ಮೂಲಗಳೂ ದೊರೆಯುತ್ತವೆ. ಇದು ಸಾಮೂಹಿಕ ಶಕ್ತಿ ಮತ್ತು ನಾಗರಿಕರ ಪ್ರಯತ್ನ ಹಾಗು ಸ್ವಾವಲಂಬಿ ಭಾರತ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸರಕಾರದ ಪ್ರಯತ್ನ.

ಸ್ನೇಹಿತರೇ,

ಸಾಮಾನ್ಯವಾಗಿ ಹಣಕಾಸಿಗೆ ಸಂಬಂಧಿಸಿದ ವಿಷಯ ಸ್ವಲ್ಪ ತಾಂತ್ರಿಕವಾದುದಾಗಿರುತ್ತದೆ ಮತ್ತು ಸಾಮಾನ್ಯ ಜನರು ಶೀರ್ಷಿಕೆ ನೋಡಿದ ಕೂಡಲೇ ಅದನ್ನು ಓದದೇ ಬಿಟ್ಟು ಬಿಡುತ್ತಾರೆ. ಈ ವಿಷಯಗಳನ್ನು ಜನ ಸಾಮಾನ್ಯರಿಗೆ ಉತ್ತಮ ರೀತಿಯಲ್ಲಿ ತಿಳಿಯ ಹೇಳುವುದು ಈ ಕ್ಷಣದ ಆವಶ್ಯಕತೆಯಾಗಿದೆ. ನಾವು ಹಣಕಾಸು ಸೇರ್ಪಡೆ ಬಗ್ಗೆ ಮಾತನಾಡುತ್ತಿರುವಾಗ, ಈ ದೇಶದ ಕಟ್ಟ ಕಡೆಯ ವ್ಯಕ್ತಿಯೂ ಈ ಪ್ರಕ್ರಿಯೆಯಲ್ಲಿ ಬರುವಂತೆ ಮಾಡಬೇಕು ಎಂಬುದು ನಮ್ಮ ಇರಾದೆಯಾಗಿರುತ್ತದೆ. ಈ ಎಲ್ಲಾ ಸಂಗತಿಗಳ ಬಗ್ಗೆಯೂ ನೀವು ತಜ್ಞರು ತಿಳಿದಿರುವಿರಿ, ಆದರೆ ಈ ದೇಶದ ಜನಸಾಮಾನ್ಯರಿಗೆ ಈ ಎಲ್ಲಾ ಮಾಹಿತಿಗಳು ತಿಳಿದಿದ್ದರೆ ಅದರಿಂದ ಅವರಿಗೆ ಹೆಚ್ಚಿನ ಸಹಾಯವಾಗುತ್ತದೆ. ಈ ಯೋಜನೆಯಲ್ಲಿ ಅಲ್ಲಿ ಫಂಡ್ ಮ್ಯಾನೇಜರುಗಳ ಅಗತ್ಯವಿಲ್ಲ ಎಂಬುದೂ ಅವರಿಗೆ ತಿಳಿದಿರಬೇಕು. ಮತ್ತು ರಿಟೈಲ್ ಡೈರೆಕ್ಟ್ ಗಿಲ್ಟ್” ಖಾತೆ (ಆರ್.ಡಿ.ಜಿ.) ಯನ್ನು ಅವರೇ ತೆರೆಯಬಹುದು. ಈ ಖಾತೆಯನ್ನು ಆನ್ ಲೈನ್ ಮೂಲಕ ತೆರೆಯಬಹುದು ಮತ್ತು ಜನರು ಕೂಡಾ ಆನ್ ಲೈನ್ ನಲ್ಲಿ ಸೆಕ್ಯುರಿಟಿಗಳ ವ್ಯವಹಾರ ಮಾಡಬಹುದು. ಇದು ವೇತನದಾರರಿಗೆ ಮತ್ತು ಪಿಂಚಣಿ ಪಡೆಯುತ್ತಿರುವವರಿಗೆ ಮನೆಯಲ್ಲಿ ಕುಳಿತೇ ಮಾಡಬಹುದಾದ ಸುರಕ್ಷಿತ ಹೂಡಿಕೆಗೆ ಒಂದು ಅವಕಾಶ. ಅವರು ಎಲ್ಲಿಗೂ ಹೋಗಬೇಕಾಗಿಲ್ಲ. ನೀವು ವ್ಯವಹಾರವನ್ನು ಅಂತರ್ಜಾಲ ಇರುವ ಮೊಬೈಲ್ ಮೂಲಕ ಮಾಡಬಹುದು. ಈ ಆರ್.ಡಿ.ಜಿ. ಖಾತೆ ಹೂಡಿಕೆದಾರರ ಉಳಿತಾಯ ಖಾತೆಗಳಿಗೆ ಜೋಡಿಸಲ್ಪಟ್ಟಿರುವುದರಿಂದ ಮಾರಾಟ ಮತ್ತು ಖರೀದಿ ಸ್ವಯಂಚಾಲಿತವಾದ ರೀತಿಯಲ್ಲಿ ಸಾಧ್ಯವಾಗುತ್ತದೆ. ಜನರಿಗೆ ಇದು ಒದಗಿಸುವ ಅನುಕೂಲತೆಗಳನ್ನು ನೀವು ಕಲ್ಪಿಸಿಕೊಳ್ಳಬಹುದು.

ಸ್ನೇಹಿತರೇ,

ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಹೂಡಿಕೆಗೆ ಅನುಕೂಲಕರ ವಾತಾವರಣ ನಿರ್ಮಾಣ ಮತ್ತು ನಂಬಿಕೆಗಳು  ಅನುಕೂಲತೆಗಳಷ್ಟೇ ಹಣಕಾಸು ಸೇರ್ಪಡೆ ಮತ್ತು ಸುಲಭದಲ್ಲಿ ಪ್ರವೇಶ ಲಭ್ಯತೆಗಳೂ ಮುಖ್ಯವಾದವುಗಳು.  ಬಲಿಷ್ಟವಾದ ಬ್ಯಾಂಕಿಂಗ್ ವ್ಯವಸ್ಥೆ ಬಲಿಷ್ಟ ಆರ್ಥಿಕತೆಗೆ ಬಹಳ ಮುಖ್ಯ. 2014ಕ್ಕೆ ಮೊದಲು ದೇಶದ ಬ್ಯಾಂಕಿಂಗ್ ವ್ಯವಸ್ಥೆಗೆ ಮಾಡಲಾಗಿರುವ ಹಾನಿಯ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿದೆ. ಆಗ ಪರಿಸ್ಥಿತಿ ಹೇಗಿತ್ತು ?. ಕಳೆದ ಏಳು ವರ್ಷಗಳಲ್ಲಿ, ಎನ್.ಪಿ.ಎ.ಗಳನ್ನು ಪಾರದರ್ಶಕವಾಗಿ ಗುರುತಿಸಲಾಗಿದೆ. ಪರಿಹಾರ ಮತ್ತು ವಸೂಲಿಗೆ ಆದ್ಯತೆ ನೀಡಲಾಗಿದೆ. ಸಾರ್ವಜನಿಕ ರಂಗದ ಬ್ಯಾಂಕುಗಳಿಗೆ ಬಂಡವಾಳವನ್ನು ಮರು ಪೂರಣ ಮಾಡಲಾಗಿದೆ. ಮತ್ತು ಹಣಕಾಸು ವ್ಯವಸ್ಥೆಯಲ್ಲಿ ಹಾಗು ಸಾರ್ವಜನಿಕ ರಂಗದ ಬ್ಯಾಂಕುಗಳಲ್ಲಿ ಅನೇಕ ಸುಧಾರಣೆಗಳನ್ನು ತರಲಾಗಿದೆ. ಈ ಮೊದಲು ವ್ಯವಸ್ಥೆಯ ಪ್ರಯೋಜನಗಳನ್ನು ಪಡೆದು ಉದ್ದೇಶಪೂರ್ವಕ ಸುಸ್ತಿದಾರರಾಗುತ್ತಿರುವವರಿಗೆ ಈಗ ಮಾರುಕಟ್ಟೆಯಿಂದ ಬಂಡವಾಳ ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ. ಕೈಗೊಳ್ಳಲಾಗುತ್ತಿರುವ ಕ್ರಮಗಳಿಂದ ಬ್ಯಾಂಕಿಂಗ್ ವಲಯದಲ್ಲಿ ಹೊಸ ನಂಬಿಕೆ ಮತ್ತು ಶಕ್ತಿ ಮರಳುತ್ತಿದೆ. ಸಾರ್ವಜನಿಕ ರಂಗದ ಬ್ಯಾಂಕುಗಳ ಆಡಳಿತದಲ್ಲಿ ಸುಧಾರಣೆ ಇರಲಿ, ನಿರ್ಧಾರ ಕೈಗೊಳ್ಳುವುದಿರಲಿ, ವರ್ಗಾವಣೆ, ನೇಮಕ, ಸಣ್ಣ ಬ್ಯಾಂಕುಗಳನ್ನು ವಿಲಯನಗೊಳಿಸಿ  ದೊಡ್ಡ ಬ್ಯಾಂಕುಗಳ ಸೃಷ್ಟಿ, ಅಥವಾ ರಾಷ್ಟ್ರೀಯ ಆಸ್ತಿ ಮರುನಿರ್ಮಾಣ ಕಂಪೆನಿ ಲಿಮಿಟೆಡ್ ಇರಲಿ –ಇಂತಹ ಕ್ರಮಗಳಿಂದ ಹೊಸ ಶಕ್ತಿ ಸಂಚಯವಾಗುತ್ತಿದೆ.

ಸ್ನೇಹಿತರೇ,

ಬ್ಯಾಂಕಿಂಗ್ ವಲಯವನ್ನು ಇನ್ನಷ್ಟು ಬಲಪಡಿಸಲು ಸಹಕಾರಿ ಬ್ಯಾಂಕುಗಳನ್ನು ಕೂಡಾ ಆರ್.ಬಿ.ಐ. ವ್ಯಾಪ್ತಿಗೆ ತರಲಾಗಿದೆ. ಇದರಿಂದ ಈ ಬ್ಯಾಂಕ್ ಗಳ ಆಡಳಿತದಲ್ಲಿ ಸುಧಾರಣೆ ಸಾಧ್ಯವಾಗಲಿದೆ ಮಾತ್ರವಲ್ಲ ವ್ಯವಸ್ಥೆಯಲ್ಲಿ ಮಿಲಿಯಾಂತರ ಠೇವಣಿದಾರರ ವಿಶ್ವಾಸ, ನಂಬಿಕೆ ಕೂಡಾ ಬಲಿಷ್ಟಗೊಳ್ಳುತ್ತಿದೆ. ಇತ್ತೀಚಿನ ದಿನಗಳಲ್ಲಿ ಠೇವಣಿದಾರರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಹಲವಾರು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಒಂದು ದೇಶ ಒಂದು ಒಂಬುಡ್ಸ್ ಮನ್ ವ್ಯವಸ್ಥೆಯು ಠೇವಣಿದಾರರ ಮತ್ತು ಹೂಡಿಕೆದಾರರ ಬದ್ಧತೆಯನ್ನು ಬಲಪಡಿಸಿದೆ. ಇಂದು ಆರಂಭಿಸಲಾದ ಯೋಜನೆ 44 ಕೋಟಿ ಸಾಲದ ಖಾತೆಯನ್ನು ಹೊಂದಿರುವವರಿಗೆ ಮತ್ತು ಬ್ಯಾಂಕುಗಳಲ್ಲಿ 220 ಕೋಟಿ ಠೇವಣಿ ಖಾತೆಗಳನ್ನು ಹೊಂದಿರುವವರಿಗೆ,  ಎನ್.ಬಿ.ಎಫ್.ಸಿ. ಮತ್ತು  ಪೂರ್ವ ಪಾವತಿ ಸಲಕರಣೆಗಳನ್ನು ಹೊಂದಿರುವವರಿಗೆ  ನೇರವಾಗಿ ಪರಿಹಾರಗಳನ್ನು, ಸಮಾಧಾನವನ್ನು  ಒದಗಿಸಲಿದೆ. ಈಗ ಅಲ್ಲಿ ಆರ್.ಬಿ.ಐ.ಯಿಂದ ನಿಯಂತ್ರಿಸಲ್ಪಡುವಂತಹ ಸಂಸ್ಥೆಗಳಿಗೆ ನೋಂದಣಿ, ಖಾತೆದಾರರ ಪತ್ತೆ ಮತ್ತು ಕುಂದುಕೊರತೆಗಳ ಮೇಲಣ ನಿಗಾ ವ್ಯವಸ್ಥೆಗೆ ಏಕ ವೇದಿಕೆ ಇರಲಿದೆ. ಇದನ್ನು ಬೇರೆ ಮಾತುಗಳಲ್ಲಿ ಹೇಳುವುದಾದರೆ ಖಾತೆದಾರರು ಈಗ ಕುಂದುಕೊರತೆ ಪರಿಹಾರಕ್ಕೆ  ಸುಲಭದ ವ್ಯವಸ್ಥೆಯನ್ನು ಪಡೆದಿದ್ದಾರೆ. ಉದಾಹರಣೆಗೆ ಮೊದಲು ಯಾರಾದರೊಬ್ಬರು ಲಕ್ನೋದಲ್ಲಿ ಬ್ಯಾಂಕ್ ಖಾತೆಯನ್ನು ಹೊಂದಿದ್ದರೆ, ಮತ್ತು ಅವರು ದಿಲ್ಲಿಯಲ್ಲಿ ಕೆಲಸ ಮಾಡುತ್ತಿದ್ದರೆ ಅವರು ಆಗ ಲಕ್ನೋದಲ್ಲಿಯ ಒಂಬುಡ್ಸ್ ಮನ್ ಅವರಿಗೆ ಮಾತ್ರವೇ ದೂರು ನೀಡಬಹುದಾಗಿತ್ತು. ಆದರೆ ಈಗ ಅವರಿಗೆ ಭಾರತದ ಯಾವ ಪ್ರದೇಶದಿಂದಾದರೂ ದೂರು ದಾಖಲಿಸುವ ಸೌಲಭ್ಯ ದೊರಕಿದೆ. ಆನ್ ಲೈನ್ ಮತ್ತು ಸೈಬರ್ ವಂಚನೆಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಬಗೆಹರಿಸಲು ಆರ್.ಬಿ.ಐ.ಯು ಈ ಯೋಜನೆಯಲ್ಲಿ  ಕೃತಕ ಬುದ್ಧಿಮತ್ತೆಯನ್ನು ವ್ಯಾಪಕವಾಗಿ ಬಳಸುವ ಅವಕಾಶವನ್ನು ಮಾಡಿಕೊಂಡಿದೆ ಎಂಬುದಾಗಿ ನನಗೆ ತಿಳಿಸಲಾಗಿದೆ. ಇದರಿಂದ ಬ್ಯಾಂಕುಗಳು ಮತ್ತು ತನಿಖಾ ಏಜೆನ್ಸಿಗಳ ನಡುವೆ ಸಾಧ್ಯವಾದಷ್ಟು ಅತ್ಯಲ್ಪ  ಸಮಯದಲ್ಲಿ ಸಮನ್ವಯ ಸಾಧಿಸುವುದಕ್ಕೆ ಸಾಧ್ಯವಾಗಲಿದೆ. ಅತ್ಯಂತ ಬೇಗ ಕ್ರಮಗಳನ್ನು ಕೈಗೊಂಡರೆ ವಂಚನೆಯಲ್ಲಿ ಕಳೆದುಕೊಂಡ ಹಣವನ್ನು ವಸೂಲು ಮಾಡುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ಇಂತಹ ಕ್ರಮಗಳ ಮೂಲಕ ಡಿಜಿಟಲ್ ವ್ಯವಹಾರಗಳ ಆಳ ಅಗಲ ಹೆಚ್ಚಲಿದೆ ಮತ್ತು ಗ್ರಾಹಕರ ಒಳಗೊಳ್ಳುವಿಕೆಯೂ ಹೆಚ್ಚಲಿದೆ, ಗ್ರಾಹಕರ ನಂಬಿಕೆಯೂ ವೃದ್ಧಿಯಾಗಲಿದೆ.

ಸ್ನೇಹಿತರೇ,

ಕಳೆದ ಕೆಲವು ವರ್ಷಗಳಲ್ಲಿ ದೇಶದ ಬ್ಯಾಂಕಿಂಗ್ ಮತ್ತು ಹಣಕಾಸು ವಲಯಗಳಲ್ಲಿ ಶಕ್ತಿಯನ್ನು ನೋಡಿದ್ದೇವೆ. ಹಣಕಾಸು ಸೇರ್ಪಡೆಯಿಂದ ಹಿಡಿದು ತಾಂತ್ರಿಕ ಸಮಗ್ರತೆಯವರೆಗೆ ಮತ್ತು ಇತರ ಸುಧಾರಣೆಗಳವರೆಗೆ ಕೋವಿಡ್ ನಂತಹ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಈ ಬದಲಾವಣೆ ಆಗಿದೆ. ಇದು ಕೂಡಾ ಜನಸಾಮಾನ್ಯರಿಗೆ ಸೇವೆ ನೀಡಿದ ತೃಪ್ತಿಯನ್ನು ಖಾತ್ರಿಪಡಿಸುತ್ತದೆ. ಆರ್.ಬಿ.ಐ. ಯ ನಿರ್ಧಾರಗಳು ಸರಕಾರದ ದೊಡ್ಡ ನಿರ್ಧಾರಗಳ ಪರಿಣಾಮಗಳನ್ನು ವಿಸ್ತರಿಸುವಲ್ಲಿ ಬಹಳ ದೊಡ್ಡ ಸಹಾಯ ಮಾಡಿವೆ. ಈ ಬಿಕ್ಕಟ್ಟಿನ ಸಮಯದಲ್ಲಿಯೂ ಧೈರ್ಯದ ನಿರ್ಧಾರಗಳನ್ನು ಕೈಗೊಂಡ ಆರ್.ಬಿ.ಐ. ಗವರ್ನರ್ ಮತ್ತು ಅವರ ಇಡೀ  ತಂಡವನ್ನು ನಾನು ಸಾರ್ವಜನಿಕವಾಗಿ ಅಭಿನಂದಿಸುತ್ತೇನೆ. ಸರಕಾರ ಘೋಷಿಸಿದ ಮುಂಗಡ ಖಾತ್ರಿ ಯೋಜನೆ ಅಡಿಯಲ್ಲಿ 2.90 ಲಕ್ಷ ಕೋ.ರೂ.ಗಳಿಗೂ ಅಧಿಕ ಮೊತ್ತದ ಸಾಲಗಳನ್ನು ಮಂಜೂರು ಮಾಡಲಾಗಿದೆ. ಇದರಿಂದ 1.25 ಕೋಟಿ ಫಲಾನುಭವಿಗಳಿಗೆ ಪ್ರಯೋಜನಗಳಾಗಿವೆ. ಎಂ.ಎಸ್.ಎಂ.ಇ.ಗಳು ಮತ್ತು ನಮ್ಮ ಮಧ್ಯಮವರ್ಗದ ಸಣ್ಣ ಉದ್ಯಮಿಗಳಿಗೆ ಅವರ ಉದ್ಯಮಗಳನ್ನು ಇನ್ನಷ್ಟು ಬಲಪಡಿಸಲು ಇದರಿಂದ ಸಾಧ್ಯವಾಗಿದೆ.

ಸ್ನೇಹಿತರೇ,

ಕೋವಿಡ್ ಅವಧಿಯಲ್ಲಿಯೇ ಸಣ್ಣ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಲು ಸರಕಾರ ವಿಶೇಷ ಪ್ರಚಾರಾಂದೋಲನವನ್ನು ಕೈಗೊಂಡಿತ್ತು. ಇದರಡಿಯಲ್ಲಿ 2.5 ಕೋಟಿಗೂ ಅಧಿಕ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಗಳನ್ನು ನೀಡಲಾಗಿದೆ ಮತ್ತು ಅವರು ಸುಮಾರು 2.75 ಲಕ್ಷ ಕೋ.ರೂ.ಗಳ ಕೃಷಿ ಸಾಲವನ್ನು ಪಡೆದಿದ್ದಾರೆ. ಸುಮಾರು 26 ಲಕ್ಷ ಬೀದಿ ಬದಿ ವ್ಯಾಪಾರಿಗಳು, ಕೈಗಾಡಿಗಳಲ್ಲಿ ವಸ್ತುಗಳನ್ನು, ತರಕಾರಿಗಳನ್ನು ಮಾರುವವರು ಪಿ.ಎಂ.ಸ್ವನಿಧಿ ಯೋಜನೆ ಅಡಿಯಲ್ಲಿ ಸಾಲ ಪಡೆದಿದ್ದಾರೆ. ಕೋವಿಡ್ ನಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ 26 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ಹಣಕಾಸು ಸಹಾಯ ಪಡೆಯುವಲ್ಲಿ ಅದು ನೀಡಿರುವ ಬೆಂಬಲವನ್ನು ನೀವು ಕಲ್ಪಿಸಿಕೊಳ್ಳಬಹುದು. ಈ ಯೋಜನೆಯು ಅವರನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಜೋಡಿಸಿತು. ಇಂತಹ ಅನೇಕ ಮಧ್ಯಪ್ರವೇಶಗಳು ಗ್ರಾಮಗಳಲ್ಲಿ ಮತ್ತು ನಗರಗಳಲ್ಲಿ ಆರ್ಥಿಕ ಚಟುವಟಿಕೆಗಳನ್ನು ಪುನರಾರಂಭ ಮಾಡುವಲ್ಲಿ ಬಹಳ ಪ್ರಮುಖವಾದಂತಹ ಪಾತ್ರವನ್ನು ವಹಿಸಿವೆ.

ಸ್ನೇಹಿತರೇ,

ಆರು-ಏಳು ವರ್ಷಗಳ ಹಿಂದಿನವರೆಗೆ ಬ್ಯಾಂಕಿಂಗ್, ಪಿಂಚಣಿ, ವಿಮಾ ಇತ್ಯಾದಿಗಳನ್ನು ಭಾರತದ ಪ್ರತ್ಯೇಕ ಕ್ಲಬ್ ಎಂಬಂತೆ ಪರಿಗಣಿಸಲಾಗುತ್ತಿತ್ತು. ಈ ಎಲ್ಲಾ ಸೌಲಭ್ಯಗಳೂ ಸಾಮಾನ್ಯ ನಾಗರಿಕರಿಂದ, ಬಡ ಕುಟುಂಬಗಳಿಂದ, ರೈತರಿಂದ, ಸಣ್ಣ ವ್ಯಾಪಾರಿಗಳಿಂದ, ಮತ್ತು ವ್ಯಾಪಾರೋದ್ಯಮಿಗಳಿಂದ, ಮಹಿಳೆಯರಿಂದ, ದಲಿತರು-ಅವಕಾಶವಂಚಿತರು-ಹಿಂದುಳಿದವರಿಂದ ದೂರವೇ ಉಳಿದಿದ್ದವು. ಬಡವರಿಗೆ ಈ ಸೌಲಭ್ಯಗಳನ್ನು ಒದಗಿಸುವ ಜವಾಬ್ದಾರಿ ಹೊಂದಿದ್ದವರು ಇದರ ಬಗ್ಗೆ ಗಮನವನ್ನೇ ಕೊಡಲಿಲ್ಲ. ಬದಲು ಅಲ್ಲಿ ಯಾವುದೇ ಬದಲಾವಣೆಗಳಾಗಬಾರದು ಎಂಬ ಸ್ಥಾಪಿತ ಸಂಪ್ರದಾಯವಿತ್ತು ಮತ್ತು ಬಡವರಿಗೆ ಅವುಗಳ ಬಾಗಿಲುಗಳನ್ನು ಮುಚ್ಚುವುದಕ್ಕೆ ವಿವಿಧ ವಾದಗಳನ್ನು ಮುಂದಿಡಲಾಗುತ್ತಿತ್ತು. ಅಲ್ಲಿ ಬ್ಯಾಂಕ್ ಶಾಖೆ ಇಲ್ಲ, ಸಿಬ್ಬಂದಿಗಳಿಲ್ಲ, ಅಂತರ್ಜಾಲ ಇಲ್ಲ, ಮತ್ತು ಜನರಲ್ಲಿ ಅರಿವು ಇಲ್ಲ ಎಂದು ಹೇಳುವುದರಲ್ಲಿ ಅವರಿಗೆ ಯಾವುದೇ ನಾಚಿಕೆ ಎಂಬುದಿರಲಿಲ್ಲ. ಯಾವ ರೀತಿಯ ವಾದಗಳನ್ನು ಮುಂದಿಡಲಾಗುತ್ತಿತ್ತು?. ಅನುತ್ಪಾದಕ ಉಳಿತಾಯ ಮತ್ತು ಅನೌಪಚಾರಿಕ ಮುಂಗಡಗಳಿಂದ ಜನ ಸಾಮಾನ್ಯರ ಪರಿಸ್ಥಿತಿ ಹದಗೆಡುತ್ತಿತ್ತು ಮತ್ತು ದೇಶದ ಅಭಿವೃದ್ಧಿಯಲ್ಲಿ ಅವರ ಪಾತ್ರವೂ ಬಹಳ ನಗಣ್ಯ ಪ್ರಮಾಣದಲ್ಲಿತ್ತು. ಪಿಂಚಣಿ ಮತ್ತು ವಿಮೆಗಳು ಸಂಪತ್ತು ಇರುವ ಕುಟುಂಬಗಳಿಗೆ ಮಾತ್ರ ಎಂದು ನಂಬಲಾಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗುತ್ತಿದೆ. ಇಂದು ಹಣಕಾಸು ಸೇರ್ಪಡೆ ಮಾತ್ರವಲ್ಲ, ಸುಲಭ ಪ್ರವೇಶ ಅಥವಾ ಲಭ್ಯತೆ ಬ್ಯಾಂಕಿಂಗ್ ಮತ್ತು ಹಣಕಾಸು ಕ್ಷೇತ್ರದಲ್ಲಿ ಭಾರತದ ಗುರುತಿಸುವಿಕೆಯಾಗುತ್ತಿದೆ. ಇಂದು ಸಮಾಜದ ಪ್ರತೀ  ವ್ಯಕ್ತಿಯು 60 ವರ್ಷ ವಯಸ್ಸಿನ ಬಳಿಕ ಪಿಂಚಣಿ ಯೋಜನೆಗೆ ಸೇರಬಹುದು. ಸುಮಾರು 38 ಕೋಟಿ ದೇಶವಾಸಿಗಳು ಪಿ.ಎಂ. ಜೀವನ್ ಜ್ಯೋತಿ ಬೀಮಾ ಯೋಜನಾ ಮತ್ತು ಪಿ.ಎಂ.ಸುರಕ್ಷಾ ಬೀಮಾ ಯೋಜನಾ ಅಡಿಯಲ್ಲಿ ತಲಾ 2 ಲಕ್ಷ ರೂ.ಗಳ ವಿಮಾ ರಕ್ಷೆಯನ್ನು ಹೊಂದಿದ್ದಾರೆ. ದೇಶದ ಬಹುತೇಕ ಪ್ರತೀ ಹಳ್ಳಿಯೂ ಬ್ಯಾಂಕ್ ಶಾಖೆಯ ಸೌಲಭ್ಯವನ್ನು ಹೊಂದಿದೆ ಅಥವಾ 5 ಕಿಲೋ ಮೀಟರ್ ವ್ಯಾಪ್ತಿಯೊಳಗೇ ಬ್ಯಾಂಕಿಂಗ್ ಕರೆಸ್ಪಾಂಡೆಂಟ್ ರನ್ನು ಹೊಡಿದೆ. ಇಂದು ದೇಶಾದ್ಯಂತ 8.5 ಲಕ್ಷ ಬ್ಯಾಂಕಿಂಗ್ ಸಂಪರ್ಕ ಬಿಂದುಗಳಿವೆ. ಇದರಿಂದ ಪ್ರತಿಯೊಬ್ಬ ನಾಗರಿಕರಿಗೂ ಬ್ಯಾಂಕಿಂಗ್ ವ್ಯವಸ್ಥೆಯ ಪ್ರವೇಶ ಲಭ್ಯತೆ ಹೆಚ್ಚಾಗಿದೆ. ಜನ್ ಧನ್ ಯೋಜನಾದಲ್ಲಿ 42 ಕೋಟಿಗೂ ಅಧಿಕ ಶೂನ್ಯ ಶಿಲ್ಕು ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದ್ದು, ಅವುಗಳಲ್ಲಿ ಇಂದು ಸಾವಿರಾರು ಕೋ.ರೂ.ಗಳು ಜಮೆ ಮಾಡಲ್ಪಟ್ಟಿವೆ. ಮಹಿಳೆಯರು, ದಲಿತರು, ಹಿಂದುಳಿದವರು –ಬುಡಕಟ್ಟಿನ ಜನರು ಒಳಗೊಂಡಂತೆ ವ್ಯಾಪಾರೋದ್ಯಮಿಗಳ ಹೊಸ ತಲೆಮಾರು ಮುದ್ರಾ ಯೋಜನೆಯಿಂದಾಗಿ ರೂಪುಗೊಂಡಿದೆ. ಮತ್ತು ಬೀದಿ ಬದಿ ವ್ಯಾಪಾರಿಗಳೂ ಸ್ವನಿಧಿ ಯೋಜನೆಯ ಮೂಲಕ ಸಾಂಸ್ಥಿಕ ಮುಂಗಡ ವ್ಯವಸ್ಥೆಗೆ ಸೇರ್ಪಡೆಯಾಗಲು ಸಾಧ್ಯವಾಗಿದೆ.

ಸ್ನೇಹಿತರೇ,

ಕಟ್ಟ ಕಡೆಯ ಹಂತದವರೆಗೂ ಹಣಕಾಸು ಸೇರ್ಪಡೆಯೊಂದಿಗೆ ಡಿಜಿಟಲ್ ಸಶಕ್ತೀಕರಣದ ವಿಸ್ತರಣೆಯು ದೇಶದ ಜನರಿಗೆ ಹೊಸ ಶಕ್ತಿಯನ್ನು ನೀಡಿದೆ. 31 ಕೋಟಿಗೂ ಅಧಿಕ ರುಪೇ ಕಾರ್ಡ್ ಗಳು ಮತ್ತು ಸುಮಾರು 50 ಲಕ್ಷ ಪಿ.ಒ.ಎಸ್.ಗಳು/ಎಂ.-ಪಿ.ಒ.ಎಸ್.ಯಂತ್ರಗಳು ದೇಶದ ಮೂಲೆ ಮೂಲೆಗಳಲ್ಲಿಯೂ ಡಿಜಿಟಲ್ ವರ್ಗಾವಣೆ ವ್ಯವಹಾರವನ್ನು ಸಾಧ್ಯ ಮಾಡಿವೆ. ಯು.ಪಿ.ಐ.ಯು ಭಾರತವನ್ನು ಬಹಳ ಸಣ್ಣ ಅವಧಿಯಲ್ಲಿ ಡಿಜಿಟಲ್ ವರ್ಗಾವಣೆಯನ್ನು ಸಾಧಿಸಿದ ವಿಶ್ವದ ಪ್ರಮುಖ ದೇಶವನ್ನಾಗಿಸಿದೆ. ಕಳೆದ ಬರೇ 7 ವರ್ಷಗಳಲ್ಲಿ ಭಾರತವು ಡಿಜಿಟಲ್ ವರ್ಗಾವಣೆಗಳಿಗೆ ಸಂಬಂಧಿಸಿದಂತೆ 19 ಪಟ್ಟು ಹೆಚ್ಚಳವನ್ನು ಸಾಧಿಸಿದೆ. ಇಂದು ನಮ್ಮ ಬ್ಯಾಂಕಿಂಗ್ ವ್ಯವಸ್ಥೆ 24 ಗಂಟೆಯೂ, ವಾರದ 7 ದಿನಗಳೂ ಮತ್ತು 12 ತಿಂಗಳುಗಳ ಕಾಲವೂ ಯಾವುದೇ ಅವಧಿಯಲ್ಲಿ ಮತ್ತು ದೇಶದ ಯಾವುದೇ ಸ್ಥಳದಲ್ಲಿ ಕಾರ್ಯಾಚರಿಸುತ್ತಿರುತ್ತದೆ. ಇದರ ಪ್ರಯೋಜನಗಳನ್ನು ನಾವು ಕೋರೋನಾ ಅವಧಿಯಲ್ಲಿ ನೋಡಿದ್ದೇವೆ.

ಸ್ನೇಹಿತರೇ,

ಆರ್.ಬಿ.ಐ.ಯು ಸೂಕ್ಷ್ಮಗ್ರಾಹೀ ನಿಯಂತ್ರಕನಾಗಿ ಮತ್ತು ಬದಲಾಗುತ್ತಿರುವ ಪರಿಸ್ಥಿತಿಗಳಲ್ಲಿ ತನ್ನನ್ನು ತಾನು ಸಿದ್ಧವಾಗಿರಿಸಿಕೊಂಡಿರುವ ರೀತಿ ದೇಶಕ್ಕೆ ಬಹಳ ದೊಡ್ಡ ಬಲವನ್ನು ತಂದಿದೆ. ಈಗಿನ ದಿನ ಮಾನಗಳಲ್ಲಿ ಭಾರತೀಯ ನವೋದ್ಯಮಗಳು ಹೇಗೆ ಹಣಕಾಸು ತಂತ್ರಜ್ಞಾನದಲ್ಲಿ (ಫಿನ್ ಟೆಕ್) ಜಾಗತಿಕ ಚಾಂಪಿಯನ್ ಆಗುತ್ತಿವೆ ಎಂಬುದಕ್ಕೆ ನೀವೇ ಸಾಕ್ಷಿಯಾಗಿದ್ದೀರಿ. ಈ ಕ್ಷೇತ್ರದಲ್ಲಿ ತಂತ್ರಜ್ಞಾನ ಬಹಳ ತ್ವರಿತವಾಗಿ ಬದಲಾಗುತ್ತಿದೆ. ನಮ್ಮ ದೇಶದ ಯುವಜನತೆ ಭಾರತವನ್ನು ಜಾಗತಿಕ ಅನ್ವೇಷಣೆಗಳ ಶಕ್ತಿ ಕೇಂದ್ರವನ್ನಾಗಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಹಣಕಾಸು ವ್ಯವಸ್ಥೆಗಳನ್ನು ವಿಶ್ವ ದರ್ಜೆಯಲ್ಲಿರಿಸಲು ನಮ್ಮ ನಿಯಂತ್ರಕ ವ್ಯವಸ್ಥೆ ಈ ಬದಲಾವಣೆಗಳ ಬಗ್ಗೆ ಜಾಗ್ರತ ಸ್ಥಿತಿಯಲ್ಲಿರುವುದು ಬಹಳ ಮುಖ್ಯ ಮತ್ತು ಅದಕ್ಕೆ ಸೂಕ್ತವಾದ ಮತ್ತು ಸಶಕ್ತೀಕರಣಗೊಳಿಸುವ ಪರಿಸರ ವ್ಯವಸ್ಥೆಯನ್ನು ರೂಪಿಸುವುದೂ ಅಷ್ಟೇ ಮುಖ್ಯ.

ಸ್ನೇಹಿತರೇ,

ನಾವು ದೇಶದ ನಾಗರಿಕರ ಆವಶ್ಯಕತೆಗಳನ್ನು ಕೇಂದ್ರವನ್ನಾಗಿಸಿಕೊಳ್ಳಬೇಕು ಮತ್ತು ಹೂಡಿಕೆದಾರರ ನಂಬಿಕೆಯನ್ನು ನಿರಂತರವಾಗಿ ಬಲಪಡಿಸಿಕೊಳ್ಳುತ್ತಿರಬೇಕು. ಸೂಕ್ಷ್ಮ ಮತ್ತು ಹೂಡಿಕೆದಾರ ಸ್ನೇಹಿ ತಾಣವಾಗಿ ಭಾರತದ ಹೊಸ ಗುರುತಿಸುವಿಕೆಯನ್ನು ಆರ್.ಬಿ.ಐ.ಯು ನಿರಂತರವಾಗಿ  ಬಲಪಡಿಸುತ್ತದೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ. ಈ ಭಾರೀ ಸುಧಾರಣೆಗಾಗಿರುವ ಉಪಕ್ರಮಗಳಿಗಾಗಿ ಮತ್ತು ತಾಂತ್ರಿಕ ಅನ್ವೇಷಣೆಗಳಿಗಾಗಿ ಮತ್ತೊಮ್ಮೆ ಎಲ್ಲಾ ಭಾಗೀದಾರರಿಗೆ ನಾನು ಶುಭವನ್ನು ಹಾರೈಸುತ್ತೇನೆ.

ಬಹಳ ಬಹಳ ಧನ್ಯವಾದಗಳು!

ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿ ಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

***



(Release ID: 1771668) Visitor Counter : 350