ಪ್ರಧಾನ ಮಂತ್ರಿಯವರ ಕಛೇರಿ

ಉತ್ತರ ಪ್ರದೇಶದ ಕುಶಿನಗರದಲ್ಲಿ ಬಹು ಅಭಿವೃದ್ಧಿ ಉಪಕ್ರಮಗಳಿಗೆ ಚಾಲನೆ ನೀಡಿ ಪ್ರಧಾನ ಮಂತ್ರಿ ಅವರ ಭಾಷಣ

Posted On: 20 OCT 2021 5:07PM by PIB Bengaluru

ಭಾರತ್ ಮಾತಾ ಕೀ ಜೈ!

ಭಾರತ್ ಮಾತಾ ಕೀ ಜೈ!

ಭಗವಾನ್ ಬುದ್ಧ ಅವರ ಪರಿನಿರ್ವಾಣದ ಸ್ಥಳವಾದ ಕುಶಿನಗರದ ನಿಮಗೆಲ್ಲರಿಗೂ ಶುಭಾಶಯಗಳು!. ಇಂದು ನಾನು ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ್ದೇನೆ ಮತ್ತು ನೀವು ಬಹಳ ದೀರ್ಘ ಕಾಲದಿಂದ ಕಾಯುತ್ತಿದ್ದ ವೈದ್ಯಕೀಯ ಕಾಲೇಜಿಗೆ ಶಂಕುಸ್ಥಾಪನೆಯನ್ನು ಮಾಡಿದ್ದೇನೆ. ಈಗ ವಿಮಾನಗಳು ಇಲ್ಲಿಂದ ಹಾರಾಟ ಆರಂಭ ಮಾಡಲಿವೆ ಮತ್ತು ಗಂಭೀರ ಖಾಯಿಲೆಗಳಿಗೆ ಇಲ್ಲಿ ಚಿಕಿತ್ಸಾ ಸೌಲಭ್ಯ ಇರಲಿದೆ. ಇದರೊಂದಿಗೆ ನಿಮ್ಮೆಲ್ಲರ ಬಹಳ ದೊಡ್ಡ ಕನಸು ನನಸಾದಂತಾಗಿದೆ. ನಿಮ್ಮೆಲ್ಲರಿಗೂ ಬಹಳ ಅಭಿನಂದನೆಗಳು.

ಉತ್ತರ ಪ್ರದೇಶ ರಾಜ್ಯಪಾಲರಾದ ಶ್ರೀಮತಿ ಆನಂದಿ ಬೆನ್ ಪಟೇಲ್ ಜೀ, ಜನಪ್ರಿಯ ಕರ್ಮಯೋಗಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಜೀ, ಉತ್ತರ ಪ್ರದೇಶದ ಬಿ.ಜೆ.ಪಿ.ಯ ಬಹಳ ಚೈತನ್ಯಶೀಲ ಅಧ್ಯಕ್ಷ ಶ್ರೀ ಸ್ವತಂತ್ರ ದೇವ್ ಜೀ, ಉತ್ತರ ಪ್ರದೇಶ ಸರಕಾರದ ಸಚಿವರಾದ ಶ್ರೀ ಸೂರ್ಯ ಪ್ರತಾಪ್ ಸಾಹೀ ಈ, ಶ್ರೀ ಸುರೇಶ್ ಕುಮಾರ್ ಖನ್ನಾ ಜೀ, ಶ್ರೀ ಸ್ವಾಮಿ ಪ್ರಸಾದ್ ಮೌರ್ಯಾ ಜೀ, ಡಾ. ನೀಲಕಂಠ್ ತಿವಾರಿ ಜೀ, ನನ್ನ ಸಹೋದ್ಯೋಗಿ ಸಂಸದ ಶ್ರೀ ವಿಜಯ ಕುಮಾರ್ ದುಬೇ ಜೀ, ಮತ್ತು ಡಾ. ರಾಮಪತಿ ರಾಂ ತ್ರಿಪಾಠೀ ಜೀ, ಇತರ ಜನ ಪ್ರತಿನಿಧಿಗಳೇ, ಮತ್ತು ಇಲ್ಲಿಗೆ ಬಹಳ ದೊಡ್ಡ ಸಂಖ್ಯೆಯಲ್ಲಿ ಬಂದಿರುವ ನನ್ನ ಪ್ರೀತಿಯ ಸಹೋದರಿಯರೇ ಹಾಗು ಸಹೋದರರೇ!!. ದೀವಾಳಿ ಮತ್ತು ಛಾತ್ ಪೂಜಾ ಬಹಳ ದೂರದಲ್ಲೇನು ಇಲ್ಲ. ಇದು ಹಬ್ಬದಾಚರಣೆಯ ಮತ್ತು ಸಂಭ್ರಮದ ಸಮಯ. ಇಂದು ಮಹರ್ಷಿ ವಾಲ್ಮೀಕಿ ಅವರ ಜನ್ಮ ವರ್ಷಾಚರಣೆ ಕೂಡಾ. ಸಂಪರ್ಕ, ಆರೋಗ್ಯ, ಮತ್ತು ಕುಶಿನಗರಕ್ಕೆ ಉದ್ಯೋಗ ಒದಗಿಸುವುದಕ್ಕೆ ಸಂಬಂಧಿಸಿದ  ನೂರಾರು ಕೋಟಿ ರೂಪಾಯಿಗಳ ಮೌಲ್ಯದ ಹೊಸ ಯೋಜನೆಗಳನ್ನು ಈ ಪವಿತ್ರ ಸಂದರ್ಭದಲ್ಲಿ ಹಸ್ತಾಂತರಿಸಲು ನನಗೆ ಬಹಳ ಸಂತೋಷವಿದೆ.

ಸಹೋದರರೇ ಮತ್ತು ಸಹೋದರಿಯರೇ,

ಮಹರ್ಷಿ ವಾಲ್ಮೀಕಿ ರಾಮಾಯಣದ ಮೂಲಕ ನಮಗೆ ಭಗವಾನ್ ರಾಮ ಮತ್ತು ತಾಯಿ ಜಾನಕಿಯನ್ನು ಪರಿಚಯಿಸಿದ್ದು ಮಾತ್ರವಲ್ಲ, ಸಮಾಜದ ಸಾಮೂಹಿಕ ಶಕ್ತಿಯ ಬಗ್ಗೆ ನಮಗೆ ತಿಳಿಸಿಕೊಟ್ಟರು ಮತ್ತು ಪ್ರತೀ ಗುರಿಯನ್ನು ಸಾಮೂಹಿಕ ಪ್ರಯತ್ನಗಳ ಮೂಲಕ ಹೇಗೆ ಸಾಧಿಸಬಹುದು ಎಂಬುದನ್ನೂ ತೋರಿಸಿಕೊಟ್ಟರು. ಕುಶಿನಗರವು ಈ ತತ್ವಶಾಸ್ತ್ರದ ಬಹಳ ಶ್ರೀಮಂತ ಮತ್ತು ಪವಿತ್ರ ಸ್ಥಳವಾಗಿದೆ.

ಸಹೋದರರೇ ಮತ್ತು ಸಹೋದರಿಯರೇ,

ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಬಡವರಿಂದ ಹಿಡಿದು ಮಧ್ಯಮ ವರ್ಗದವರೆಗೆ, ಗ್ರಾಮಗಳಿಂದ ಹಿಡಿದು ನಗರಗಳವರೆಗೆ ಇಡೀ ವಲಯದ ಚಿತ್ರಣವನ್ನು ಬದಲು ಮಾಡಬಲ್ಲುದು. ಮಹಾರಾಜಗಂಜ್ ಮತ್ತು ಕುಶಿನಗರವನ್ನು ಜೋಡಿಸುವ ರಸ್ತೆ ಅಗಲಗೊಳಿಸುವಿಕೆಯಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಉತ್ತಮ ಸಂಪರ್ಕ ದೊರೆಯುವುದಲ್ಲದೆ ರಾಂಕೋಲಾ ಮತ್ತು ಸಿಸ್ವಾ ಸಕ್ಕರೆ ಕಾರ್ಖಾನೆಗಳನ್ನು ತಲುಪುವಲ್ಲಿ ಕಬ್ಬು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳು ಕೂಡಾ ಪರಿಹಾರವಾಗಲಿವೆ. ಕುಶಿನಗರದಲ್ಲಿ ಹೊಸ ಸರಕಾರಿ ವೈದ್ಯಕೀಯ ಕಾಲೇಜಿನಿಂದಾಗಿ ನಿಮಗೆ ಉತ್ತಮ ಚಿಕಿತ್ಸಾ ಸೌಲಭ್ಯಗಳು ಲಭಿಸಲಿವೆ. ಬಿಹಾರದ ಗಡಿ ಭಾಗದ ಪ್ರದೇಶಗಳೂ ಇದರಿಂದ ಪ್ರಯೋಜನ ಪಡೆಯಲಿವೆ. ಇಲ್ಲಿಯ ಅನೇಕ ಯುವಜನತೆ ವೈದ್ಯರಾಗುವ ತಮ್ಮ ಕನಸನ್ನು ಈಡೇರಿಸಿಕೊಳ್ಳಲು ಸಮರ್ಥರಾಗುವರು.  ಸ್ವಾತಂತ್ರ್ಯದ ಎಪ್ಪತ್ತೈದು ವರ್ಷಗಳ ಬಳಿಕ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಮಗುವು ತನ್ನ ಮಾತೃ ಭಾಷೆಯಲ್ಲಿ ಕಲಿಯಬಹುದು ಮತ್ತು ಬಡ ತಾಯಿಯ ಮಗ ಕೂಡಾ ವೈದ್ಯನಾಗಬಹುದು ಅಥವಾ ಇಂಜಿನಿಯರ್ ಆಗಬಹುದು ಎಂಬ ನಿಟ್ಟಿನಲ್ಲಿ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಈಗ ಅಲ್ಲಿ ಭಾಷೆಯ ಅಡೆತಡೆಯಿಂದಾಗಿ ಆತನ ಅಭಿವೃದ್ಧಿಯ ಪಯಣದಲ್ಲಿ ಯಾವುದೇ ಅಡ್ಡಿ ಆತಂಕಗಳು ಇಲ್ಲ. ಇಂತಹ ಹಲವು ಪ್ರಯತ್ನಗಳಿಂದ ಸಾವಿರಾರು ಮಂದಿ ಮುಗ್ಧ ಜನರನ್ನು ಪೂರ್ವಾಂಚಲದಲ್ಲಿಯ ಮೆದುಳು ಜ್ವರದಂತಹ ಮಾರಕ ಖಾಯಿಲೆಗಳಿಂದ ರಕ್ಷಿಸಲಾಗಿದೆ.

ಸ್ನೇಹಿತರೇ,

ಗಂಡಕ್ ನದಿಯ ಸುತ್ತಲಿನ ನೂರಾರು ಗ್ರಾಮಗಳನ್ನು ನೆರೆ ಹಾವಳಿಯಿಂದ ರಕ್ಷಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ.ಹಲವು ಪ್ರದೇಶಗಳಲ್ಲಿ ದಂಡೆಗಳ ನಿರ್ಮಾಣ, ಕುಶಿನಗರ್ ಸರಕಾರಿ ಕಾಲೇಜಿನ ಸ್ಥಾಪನೆ ಮತ್ತು ಅಂಗವೈಕಲ್ಯ ಇರುವ ಮಕ್ಕಳಿಗೆ ಕಾಲೇಜುಗಳಂತಹ ಕ್ರಮಗಳು ಈ ವಲಯವನ್ನು ಅಭಾವ, ಕೊರತೆಯ ಸ್ಥಿತಿಯಿಂದ ಆಶೋತ್ತರಗಳ ಸ್ಥಿತಿಯತ್ತ ಕೊಂಡೊಯ್ಯಲಿವೆ. ಗ್ರಾಮಗಳನ್ನು, ಬಡವರನ್ನು, ದಲಿತರನ್ನು, ಅವಕಾಶವಂಚಿತರನ್ನು, ಹಿಂದುಳಿದವರನ್ನು, ಬುಡಕಟ್ಟು ಜನರನ್ನು ಮತ್ತು ಅಂತಹ ವಿಭಾಗದವರನ್ನು ಮೂಲ ಸೌಕರ್ಯದೊಂದಿಗೆ ಬೆಸೆಯುವ ನಿಟ್ಟಿನಲ್ಲಿ  ಕಳೆದ ಆರೇಳು ವರ್ಷಗಳಿಂದ ಚಾಲ್ತಿಯಲ್ಲಿರುವ ಆಂದೋಲನದ ಬಹು ಮುಖ್ಯವಾದ ಭಾಗ ಇದಾಗಿದೆ.

ಸ್ನೇಹಿತರೇ,

ಮೂಲ ಸೌಕರ್ಯಗಳು ಲಭ್ಯವಾದಾಗ, ಅಲ್ಲಿ ದೊಡ್ಡ ಕನಸುಗಳನ್ನು ಕಾಣಲು ಧೈರ್ಯ ಬರುತ್ತದೆ. ಮತ್ತು ಆ ಕನಸುಗಳನ್ನು ನನಸು ಮಾಡುವ ಉತ್ಸಾಹವೂ ಬರುತ್ತದೆ. ವಸತಿ ರಹಿತ ಬಡವರು ಮತ್ತು ಕೊಳೆಗೇರಿಯಲ್ಲಿ ಬದುಕುತ್ತಿದ್ದವರು ಪಕ್ಕಾ ಮನೆಯನ್ನು ಹೊಂದಿದಾಗ, ಮನೆಯಲ್ಲಿ ಶೌಚಾಲಯ ನಿರ್ಮಾಣ ಆದಾಗ, ವಿದ್ಯುತ್ ಸಂಪರ್ಕ, ಅನಿಲ ಸಂಪರ್ಕ, ಮತ್ತು ನಳ್ಳಿ ನೀರು ಹೊಂದಿದಾಗ,  ಆ ಬಡವರ ಆತ್ಮವಿಶ್ವಾಸ ಹಲವು ಪಟ್ಟು ಅಧಿಕಗೊಳ್ಳುತ್ತದೆ. ಈ ಸೌಲಭ್ಯಗಳು ಬಡವರಲ್ಲಿ ಬಡವರಿಗೆ ತ್ವರಿತವಾಗಿ ತಲುಪುತ್ತಿರುವುದರಿಂದ, ಬಡವರು ಇದೇ ಮೊದಲ ಬಾರಿಗೆ,  ಇಂದು ಅಧಿಕಾರದಲ್ಲಿರುವ ಸರಕಾರ ತಮ್ಮ ನೋವುಗಳನ್ನು ಮತ್ತು ಸಮಸ್ಯೆಗಳನ್ನು ಅರ್ಥ ಮಾಡಿಕೊಂಡಿದೆ ಎಂಬ ಭಾವನೆಯನ್ನು ಮೂಡಿಸಿಕೊಂಡಿದ್ದಾರೆ. ಇಂದು ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂಪೂರ್ಣ ಪ್ರಾಮಾಣಿಕತೆಯೊಂದಿಗೆ ಉತ್ತರ ಪ್ರದೇಶದ ಅಭಿವೃದ್ಧಿಯಲ್ಲಿ ತೊಡಗಿಕೊಂಡಿವೆ. ಎರಡು ಇಂಜಿನ್ ಗಳ ಸರಕಾರ ದುಪ್ಪಟ್ಟು ಶಕ್ತಿಯನ್ನು ಬಳಸಿ ಪರಿಸ್ಥಿತಿಯಲ್ಲಿ ಸುಧಾರಣೆಗಳನ್ನು ತರುತ್ತಿದೆ. 2017ರಲ್ಲಿ ಯೋಗೀ ಜೀ ಅವರು ಅಧಿಕಾರ ವಹಿಸಿಕೊಳ್ಳುವುದಕ್ಕೆ ಮೊದಲು ಇಲ್ಲಿದ್ದ ಸರಕಾರ ನಿಮ್ಮ ಸಮಸ್ಯೆಗಳ ಬಗ್ಗೆ ಕಾಳಜಿ ಹೊಂದಿರಲಿಲ್ಲ. ಅದು ಕೇಂದ್ರ ಸರಕಾರದ ಯೋಜನೆಗಳ ಲಾಭ ಉತ್ತರ ಪ್ರದೇಶದ ಬಡವರ ಮನೆಗಳಿಗೆ ತಲುಪಿಸಲು ಇಚ್ಛಿಸುತ್ತಿರಲಿಲ್ಲ. ಆದುದರಿಂದ ಪ್ರತೀ ಯೋಜನೆಯೂ, ಪ್ರತೀ ಮೂಲ ಸೌಕರ್ಯ ಸಂಬಂಧಿತ ಯೋಜನೆಯೂ ಉತ್ತರ ಪ್ರದೇಶದ ಹಿಂದಿನ ಆಡಳಿತದಲ್ಲಿ  ವಿಳಂಬವಾಗುತ್ತಾ ಸಾಗಿತು. ರಾಮ ಮನೋಹರ ಲೋಹಿಯಾ ಹೇಳುತ್ತಿದ್ದರು- “ಕರ್ಮವನ್ನು ಕರುಣೆಯೊಂದಿಗೆ ಜೋಡಿಸಿ, ಅದನ್ನು ಪೂರ್ಣ ಕರುಣೆಯೊಂದಿಗೆ ಜೋಡಿಸಿ” ಎಂದು.

ಆದರೆ ಈ ಮೊದಲು ಸರಕಾರಗಳನ್ನು ನಡೆಸುತ್ತಿದ್ದವರು ಬಡವರ ನೋವಿನ ಬಗ್ಗೆ ಕಾಳಜಿ ವಹಿಸುತ್ತಿರಲಿಲ್ಲ.; ಈ ಮೊದಲಿನ ಸರಕಾರಗಳು ಕರ್ಮವನ್ನು ಹಗರಣಗಳು ಮತ್ತು ಅಪರಾಧಗಳ ಜೊತೆ ಜೋಡಿಸಿದ್ದವು. ಈ ಜನರ ಗುರುತಿಸುವಿಕೆ ರಾಜವಂಶದ ಜೊತೆಗಿತ್ತೇ ಹೊರತು ಅದು ಸಮಾಜವಾದಿಯದಾಗಿರಲಿಲ್ಲ ಎಂಬುದು ಉತ್ತರ ಪ್ರದೇಶದ ಜನತೆಗೆ ಬಹಳ ಚೆನ್ನಾಗಿ ತಿಳಿದಿದೆ. ಈ ಜನರು ತಮ್ಮ ಕುಟುಂಬಗಳಿಗಾಗಿ ಒಳಿತು ಮಾಡಿದರು ಮತ್ತು ಉತ್ತರ ಪ್ರದೇಶದ ಹಾಗು ಸಮಾಜದ ಹಿತಾಸಕ್ತಿಯನ್ನು ಮರೆತುಬಿಟ್ಟರು.

ಸ್ನೇಹಿತರೇ,

ದೇಶದ ಬಹಳ ದೊಡ್ಡ ರಾಜ್ಯವಾಗಿರುವುದರಿಂದ ಮತ್ತು ಬಹಳ ಹೆಚ್ಚಿನ ಜನಸಂಖ್ಯೆ ಹೊಂದಿರುವುದರಿಂದ, ಒಂದು ಕಾಲದಲ್ಲಿ ಉತ್ತರ ಪ್ರದೇಶವು ದೇಶದ ಯಾವುದೇ ಪ್ರಮುಖ ಆಂದೋಲನಕ್ಕೆ ಒಂದು ಸವಾಲಾಗಿ ಪರಿಗಣಿಸಲ್ಪಟ್ಟಿತ್ತು. ಆದರೆ ಇಂದು ಉತ್ತರ ಪ್ರದೇಶವು ದೇಶದ ಪ್ರತೀ ಪ್ರಮುಖ ಆಂದೋಲನದ ಯಶಸ್ಸಿನಲ್ಲಿ ಪ್ರಮುಖವಾದಂತಹ ಪಾತ್ರವನ್ನು ವಹಿಸುತ್ತಿದೆ. ಅದು ಸ್ವಚ್ಛ ಭಾರತ ಅಭಿಯಾನ ಇರಲಿ ಅಥವಾ ಕೊರೊನಾ ವಿರುದ್ಧದ ಆಂದೋಲನ ಇರಲಿ ದೇಶವು ಕಳೆದ ಕೆಲವು ವರ್ಷಗಳಲ್ಲಿ ಉತ್ತರ ಪ್ರದೇಶದ ಈ ಸಾಮರ್ಥ್ಯವನ್ನು ಮನಗಂಡಿದೆ. ದಿನಕ್ಕೆ ಗರಿಷ್ಠ ಲಸಿಕೆಗಳನ್ನು ಹಾಕುವ ರಾಜ್ಯ ದೇಶದಲ್ಲಿದ್ದರೆ ಅದು ಉತ್ತರ ಪ್ರದೇಶ. ಕ್ಷಯದ ವಿರುದ್ಧ ದೇಶದ ಹೋರಾಟದಲ್ಲಿಯೂ ಉತ್ತರ ಪ್ರದೇಶ ಉತ್ತಮ  ಸಾಧನೆ ಮಾಡಲು ಪ್ರಯತ್ನಿಸುತ್ತಿದೆ. ನ್ಯೂನ ಪೋಷಣೆ ವಿರುದ್ಧದ ಹೋರಾಟವನ್ನು ಮುಂದಿನ ಹಂತಕ್ಕೆ ನಾವು ಕೊಂಡೊಯ್ಯುವಾಗ ಉತ್ತರ ಪ್ರದೇಶದ ಪಾತ್ರ ಬಹಳ ಮುಖ್ಯ. .

ಸ್ನೇಹಿತರೇ,

ಉತ್ತರ ಪ್ರದೇಶದಲ್ಲಿ ಕರ್ಮಯೋಗಿಯ ಸರಕಾರ ರಚನೆಯಾದ ಬಳಿಕ ಮಾತೆಯರು ಮತ್ತು ಸಹೋದರಿಯರು ಬಹಳ ಪ್ರಯೋಜನಗಳನ್ನು ಪಡೆದಿದ್ದಾರೆ. ನಿರ್ಮಾಣ ಮಾಡಲಾದ ಬಹುತೇಕ ಹೊಸ ಮನೆಗಳು ಸಹೋದರಿಯರ ಹೆಸರಿನಲ್ಲಿ ನೋಂದಣಿಯಾಗಿವೆ, ಶೌಚಾಲಯಗಳ ನಿರ್ಮಾಣದಿಂದ ಅನುಕೂಲತೆಗಳು ಒದಗಣೆಯಾಗಿರುವುದು ಮಾತ್ರವಲ್ಲ, ಅವರ ಘನತೆ ಕೂಡಾ ರಕ್ಷಣೆಯಾಗಿದೆ. ಉಜ್ವಲಾ ಅಡುಗೆ ಅನಿಲ ಸಂಪರ್ಕದ ಬಳಿಕ ಅವರು ಹೊಗೆಯಿಂದ ಮುಕ್ತರಾಗಿದ್ದಾರೆ. ಮತ್ತು ಮನೆಗಳಿಗೆ ಕೊಳವೆ ಮೂಲಕ ನೀರು ಪೂರೈಸುವ ಆಂದೋಲನ ಪ್ರಗತಿಯಲ್ಲಿದೆ. ಇದರಿಂದ ಸಹೋದರಿಯರು ನೀರಿಗಾಗಿ ಅಲೆದಾಡಬೇಕಾಗಿಲ್ಲ. ಬರೇ ಎರಡು ವರ್ಷಗಳಲ್ಲಿ, ಉತ್ತರ ಪ್ರದೇಶದ 27 ಲಕ್ಷ ಕುಟುಂಬಗಳು ಶುದ್ಧ ಕುಡಿಯುವ ನೀರಿನ ಸಂಪರ್ಕವನ್ನು ಪಡೆದಿವೆ.

ಸ್ನೇಹಿತರೇ,

ಭವಿಷ್ಯದಲ್ಲಿ ಉತ್ತರ ಪ್ರದೇಶದ ಗ್ರಾಮೀಣ ಪ್ರದೇಶಗಳಲ್ಲಿ ಸಮೃದ್ಧಿಯ ಹೊಸ ಬಾಗಿಲುಗಳನ್ನು ತೆರೆಯುವ ಇನ್ನೊಂದು ಯೋಜನೆಯನ್ನು ಕೇಂದ್ರ ಸರಕಾರ ಆರಂಭ ಮಾಡಿದೆ. ಈ ಯೋಜನೆಯ ಹೆಸರು-ಪಿ.ಎಂ. ಸ್ವಾಮಿತ್ವ ಯೋಜನಾ. ಇದರಡಿಯಲ್ಲಿ ಗ್ರಾಮಗಳಲ್ಲಿಯ ಮನೆಗಳ ಮಾಲಕತ್ವದ ದಾಖಲೆಗಳನ್ನು ನೀಡಲಾಗುತ್ತದೆ. ಗ್ರಾಮೀಣ ಭೂಮಿ ಮತ್ತು ಆಸ್ತಿಗಳನ್ನು ಡ್ರೋನ್ ಗಳ ಸಹಾಯದಿಂದ ಮ್ಯಾಪ್ ಮಾಡಲಾಗುತ್ತದೆ. ಆಸ್ತಿಯ ಕಾನೂನುಬದ್ಧ ಕಾಗದ ಪತ್ರಗಳನ್ನು ಪಡೆಯುವುದರಿಂದ ಬೇರೆಯವರು ಅಕ್ರಮವಾಗಿ ಆಸ್ತಿಯನ್ನು ವಶಪಡಿಸಿಕೊಳ್ಳುವ ಭಯ ನಿವಾರಣೆಯಾಗುತ್ತದೆ. ಮತ್ತು ಬ್ಯಾಂಕುಗಳಿಂದ ಸಾಲ ಪಡೆಯುವುದಕ್ಕೂ ಬಹಳ ಸುಲಭವಾಗುತ್ತದೆ. ತಮ್ಮ ಮನೆ ಅಥವಾ ಭೂಮಿಯನ್ನು ಆಧಾರವಾಗಿಟ್ಟುಕೊಂಡು ತಮ್ಮ ಕೆಲಸ ಆರಂಭ ಮಾಡಲು ಇಚ್ಛಿಸುವ ಉತ್ತರ ಪ್ರದೇಶದ ಯುವ ಜನತೆಗೆ ಸ್ವಾಮಿತ್ವ ಯೋಜನೆಯಿಂದ ಬಹಳಷ್ಟು ಪ್ರಯೋಜನವಾಗಲಿದೆ.

ಸಹೋದರರೇ ಮತ್ತು ಸಹೋದರಿಯರೇ,

ಕಳೆದ ನಾಲ್ಕೂವರೆ ವರ್ಷಗಳಲ್ಲಿ , ಉತ್ತರ ಪ್ರದೇಶದಲ್ಲಿ ಕಾನೂನಿನ ಆಡಳಿತಕ್ಕೆ ಗರಿಷ್ಠ ಆದ್ಯತೆಯನ್ನು ನೀಡಲಾಗಿದೆ. 2017ಕ್ಕೆ ಮೊದಲು ಇದ್ದ ಸರಕಾರಗಳ ನೀತಿ ಏನಾಗಿತ್ತೆಂದರೆ-ಲೂಟಿ ಮಾಡಲು ಮಾಫಿಯಾಕ್ಕೆ ಮುಕ್ತ ಸ್ವಾತಂತ್ರ್ಯ. ಇಂದು ಯೋಗೀ ಜೀ ಅವರ ನಾಯಕತ್ವದಲ್ಲಿ ಮಾಫಿಯಾವು ಕ್ಷಮೆಯನ್ನು ಬೇಡುತ್ತಿದೆ. ಯೋಗೀ ಜೀ ಅವರು ಕೈಗೊಂಡ ಕ್ರಮಗಳು ಮಾಫಿಯಾದಲ್ಲಿ ಭಯವನ್ನು ಬಿತ್ತಿವೆ ಮತ್ತು ಅವರೀಗ ಅದರ ಪರಿಣಾಮವನ್ನು ಅನುಭವಿಸುತ್ತಿದ್ದಾರೆ. ಯೋಗೀ ಜೀ ಮತ್ತು ಅವರ ತಂಡವು ಬಡವರ, ದಲಿತರ, ತಳವರ್ಗದವರ, ಹಿಂದುಳಿದವರ, ಭೂಮಿಯ ಮೇಲೆ ಕಣ್ಣು ಹಾಕಿ ಅದನ್ನು ಅಕ್ರಮವಾಗಿ ತಮ್ಮ ವಶದಲ್ಲಿರಿಸಿಕೊಳ್ಳುತ್ತಿದ್ದ ಭೂಮಾಫಿಯಾವನ್ನು ಮಟ್ಟ ಹಾಕಿದೆ.

ಸ್ನೇಹಿತರೇ,

ಕಾನೂನಿನ ಆಡಳಿತ ಇದ್ದಾಗ, ಕ್ರಿಮಿನಲ್ ಗಳಲ್ಲಿ ಭಯ ಇರುತ್ತದೆ  ಮತ್ತು ಅಭಿವೃದ್ಧಿ ಯೋಜನೆಗಳ ಪ್ರಯೋಜನಗಳು ಬಡವರು-ದಲಿತರು-ತುಳಿತಕ್ಕೊಳಗಾದವರಿಗೆ ಬಹಳ ತ್ವರಿತವಾಗಿ ತಲುಪುತ್ತವೆ. ಹೊಸ ರಸ್ತೆಗಳು, ರೈಲ್ವೇಗಳು, ವೈದ್ಯಕೀಯ ಕಾಲೇಜುಗಳು, ಮತ್ತು ವಿದ್ಯುತ್ತಿಗೆ ಸಂಬಂಧಿಸಿದ ಮೂಲಸೌಕರ್ಯವನ್ನು ತ್ವರಿತವಾಗಿ  ಕಲ್ಪಿಸಲು ಸಾಧ್ಯವಾಗುತ್ತದೆ. ಯೋಗೀ ಜೀ ಅವರ ತಂಡ ಇದನ್ನು ಮಾಡಿ ತೋರಿಸುತ್ತಿದೆ ಉತ್ತರ ಪ್ರದೇಶದಲ್ಲಿ ಈ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. ಈಗ ಉತ್ತರ ಪ್ರದೇಶದಲ್ಲಿ ಕೈಗಾರಿಕಾ ಅಭಿವೃದ್ಧಿ ಬರೇ ಒಂದು ಅಥವಾ ಎರಡು ನಗರಗಳಿಗೆ ಸೀಮಿತವಾಗಿಲ್ಲ, ಬದಲು ಅದು ಪೂರ್ವಾಂಚಲದ ಜಿಲ್ಲೆಗಳನ್ನೂ ತಲುಪುತ್ತಿದೆ.

ಸ್ನೇಹಿತರೇ,

ಉತ್ತರ ಪ್ರದೇಶದ ಬಗ್ಗೆ ಸದಾ ಒಂದು ಸಂಗತಿಯನ್ನು ಹೇಳಲಾಗುತ್ತದೆ ಅದೆಂದರೆ, ಈ ರಾಜ್ಯವು ದೇಶಕ್ಕೆ ಗರಿಷ್ಠ ಸಂಖ್ಯೆಯ ಪ್ರಧಾನ ಮಂತ್ರಿಗಳನ್ನು ನೀಡಿದೆ. ಇದು ಉತ್ತರ ಪ್ರದೇಶದ ವೈಶಿಷ್ಟ್ಯ. ಆದರೆ ಉತ್ತರ ಪ್ರದೇಶದ ಗುರುತಿಸುವಿಕೆಯನ್ನು ಇದರ ಮೂಲಕ ಮಾತ್ರವೇ ನೋಡಲಾಗದು. ಉತ್ತರ ಪ್ರದೇಶ ಬರೇ 6-7 ದಶಕಗಳಿಗೆ ಸೀಮಿತಗೊಳ್ಳಬಾರದು!. ಕಾಲಾತೀತವಾದ ಚರಿತ್ರೆಯನ್ನು ಹೊಂದಿರುವ ನೆಲ ಇದು. ಅದರ ಕೊಡುಗೆಯೂ ಕಾಲಾತೀತವಾದುದು. ಮರ್ಯಾದಾ ಪುರುಷೋತ್ತಮ ಭಗವಾನ್ ರಾಮ ಈ ನೆಲದಲ್ಲಿ ಅವತರಿಸಿದರು. ಅದೇ ರೀತಿ ಕೃಷ್ಣ ಕೂಡಾ. ಜೈನ ಧರ್ಮದ 24 ತೀರ್ಥಂಕರರ ಪೈಕಿ 18 ಮಂದಿ ಉತ್ತರ ಪ್ರದೇಶದಲ್ಲಿಯೇ ಅವತರಿಸಿದರು. ನೀವು ಮಧ್ಯಕಾಲೀನ ಅವಧಿಯತ್ತ ನೋಡಿದರೆ ತುಲಸೀದಾಸ ಮತ್ತು ಕಬೀರದಾಸ ಕೂಡಾ ಈ ನೆಲದಲ್ಲಿ ಜನಿಸಿದವರು. ಈ ರಾಜ್ಯದ ಮಣ್ಣು, ನೆಲ ಸಮಾಜ ಸುಧಾರಕ ಸಂತ ರವಿದಾಸರಿಗೆ ಜನ್ಮ ನೀಡಿದ ಹೆಮ್ಮೆಯನ್ನು ಹೊಂದಿದೆ. ನೀವು ಎಲ್ಲಿಗೇ ಹೋಗಿ, ಅದರ  ಭೂತಕಾಲ, ವರ್ತಮಾನ ಮತ್ತು ಭವಿಷ್ಯ ಉತ್ತರ ಪ್ರದೇಶದ ಕೊಡುಗೆ ಇಲ್ಲದೆ ಪೂರ್ಣವಾಗುವುದಿಲ್ಲ, ಎಲ್ಲ ಕಡೆಗಳಲ್ಲಿಯೂ ಯಾತ್ರಾ ಸ್ಥಳಗಳನ್ನು ಹೊಂದಿರುವ ರಾಜ್ಯ ಉತ್ತರ ಪ್ರದೇಶ. ಮತ್ತು ಅಲ್ಲಿ ಕಣ ಕಣದಲ್ಲಿಯೂ ಒಂದು ಶಕ್ತಿ ಇದೆ. ವೇದಗಳನ್ನು ಮತ್ತು ಪುರಾಣಗಳನ್ನು ನೈಮಿಷಾರಣ್ಯದಲ್ಲಿ ಬರೆಯಲಾಯಿತು. ಯಾತ್ರಾಸ್ಥಳ ಅಯೋಧ್ಯಾ ಅವಧ್ ವಲಯದಲ್ಲಿದೆ.ಶೈವ ಭಕ್ತರ  ಪವಿತ್ರ ಕಾಶಿ ಪೂರ್ವಾಂಚಲದಲ್ಲಿದೆ!. ಬಾಬಾ ಗೋರಖ್ ನಾಥ ಅವರ ತಪೋಭೂಮಿ ಗೋರಖ್ ಪುರದಲ್ಲಿದೆ. ಮತ್ತು ಬಾಲ್ಲಿಯಾವು ಮಹರ್ಷಿ ಭೃಗು ಅವರ ಸ್ಥಳ. ಬುಂದೇಲ್ ಖಂಡದಲ್ಲಿ ಅಗಣಿತ ವೈಭವದ ಚಿತ್ರಕೂಟ ಯಾತ್ರಾ ಕೇಂದ್ರವಿದೆ. ತೀರ್ಥರಾಜ್ ಪ್ರಯಾಗ್ ಕೂಡಾ ನಮ್ಮ ಉತ್ತರ ಪ್ರದೇಶದಲ್ಲಿದೆ. ಇದು ಇಲ್ಲಿಗೆ ಮುಗಿಯುವುದಿಲ್ಲ. ನೀವು ಕಾಶಿಗೆ ಬಂದರೆ ಆಗ ನಿಮ್ಮ ಪ್ರಯಾಣ ಭಗವಾನ್ ಬುದ್ಧ ತನ್ನ ಮೊದಲ ಧರ್ಮೋಪದೇಶ ನೀಡಿದ ಸಾರಾನಾಥಕ್ಕೆ ಭೇಟಿ ಕೊಡದಿದ್ದರೆ ಪೂರ್ಣಗೊಳ್ಳುವುದಿಲ್ಲ. ನಾವು ಈಗಾಗಲೇ ಕುಶಿನಗರದಲ್ಲಿದ್ದೇವೆ.  ಜಗತ್ತಿನಾದ್ಯಂತ ಬುದ್ಧ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಇಂದು ಜನರು ಇಲ್ಲಿಗೆ ಮೊದಲ ಅಂತಾರಾಷ್ಟ್ರೀಯ ವಿಮಾನದ ಮೂಲಕ ಬಂದಿದ್ದಾರೆ. ವಿವಿಧ ದೇಶಗಳ ಜನರು ಕುಶಿನಗರಕ್ಕೆ ಬಂದಾಗ ಅವರು ಯಾತ್ರಾಸ್ಥಳಗಳಾದ ಶ್ರಾವಸ್ಥಿ, ಕೌಸಾಂಭಿ, ಮತ್ತು ಸಾಂಕಿಸಾಗಳಿಗೆ ಭೇಟಿ ನೀಡುತ್ತಾರೆ. ಶ್ರಾವಸ್ತಿಯು ಜೈನ ತೀರ್ಥಂಕರ ಸಂಭವನಾಥ್ ಜೀ ಅವರ ಜನ್ಮ ಸ್ಥಳ. ಅದೇ ರೀತಿ ಅಯೋಧ್ಯಾ ಭಗವಾನ್ ಋಷಭದೇವ ಅವರ ಜನ್ಮ ಭೂಮಿ. ಮತ್ತು ಕಾಶಿಯು ತೀರ್ಥಂಕರ ಪಾರ್ಶ್ವನಾಥ ಮತ್ತು ಸುಪಾರ್ಶ್ವನಾಥ ಅವರ ಜನ್ಮಸ್ಥಳ. ಸಂಕ್ಷಿಪ್ತವಾಗಿ ಹೇಳುವುದಾದರೆ ಇಲ್ಲಿರುವ ಪ್ರತೀ ಸ್ಥಳವೂ ಅನೇಕ ಅವತಾರಗಳಿಂದ ಆಶೀರ್ವದಿಸಲ್ಪಟ್ಟಿದೆ. ನಮ್ಮ ಬಹಳ ಶ್ರೇಷ್ಠ ಸಿಖ್ ಗುರು ಪರಂಪರೆ ಕೂಡಾ ಉತ್ತರ ಪ್ರದೇಶದ ಜೊತೆ ಆಳವಾದ ಸಂಪರ್ಕವನ್ನು ಹೊಂದಿದೆ. ಆಗ್ರಾದಲ್ಲಿರುವ “ಗುರು ಕಾ ತಾಲ್” ಗುರುದ್ವಾರಾ ಈಗಲೂ ಗುರು ತೇಜ್ ಬಹಾದ್ದೂರ್ ಜೀ ಅವರ ಶೌರ್ಯ ಮತ್ತು ವೈಭವಕ್ಕೆ ಸಾಕ್ಷಿಯಾಗಿದೆ. ಅವರು ಔರಂಗಜೇಬನಿಗೆ ಸವಾಲೆಸೆದ ಸ್ಥಳ ಇದು. ಆಗ್ರಾದಲ್ಲಿರುವ ಗುರು ನಾನಕ್ ದೇವ್ ಗುರುದ್ವಾರ ಮತ್ತು ಫಿಲಿಬಿಟ್ ನಲ್ಲಿರುವ ಛತ್ತಾವಿ ಪದಶಾಹಿ ಗುರುದ್ವಾರ, ಗುರುನಾನಕ್ ಅವರ ಬೋಧನೆಗಳ ಪರಂಪರೆಯನ್ನು ಕಾಪಿಟ್ಟಿದೆ. ಉತ್ತರ ಪ್ರದೇಶದ ವೈಭವ ದೇಶಕ್ಕೆ ಮತ್ತು ಜಗತ್ತಿಗೆ ಬಹಳಷ್ಟನ್ನು ನೀಡಿದೆ ಮತ್ತು ಅದು ಬಹಳ ದೊಡ್ಡ ಕೊಡುಗೆ. ಉತ್ತರ ಪ್ರದೇಶದ ಜನತೆಯ ಸಾಮರ್ಥ್ಯವೂ ಬೃಹತ್ತಾದುದು. ಉತ್ತರ ಪ್ರದೇಶವು ಅದರ ಸಾಮರ್ಥ್ಯಕ್ಕೆ ಅನುಗುಣವಾಗಿ ಅದರ ಗುರುತಿಸುವಿಕೆಯನ್ನು ಪಡೆದುಕೊಳ್ಳಬೇಕು ಮತ್ತು ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು ಅವಕಾಶಗಳು ಅದಕ್ಕೆ ಲಭ್ಯವಾಗಬೇಕು ಎಂಬ ನಿಟ್ಟಿನಲ್ಲಿ ನಾವು ಕಾರ್ಯತತ್ಪರರಾಗಿದ್ದೇವೆ.

ಸ್ನೇಹಿತರೇ,

ಉತ್ತರ ಪ್ರದೇಶದ ಸಾಮರ್ಥ್ಯವನ್ನು ನಾನು ಕೊಂಡಾಡಿದಾಗ, ಉತ್ತರ ಪ್ರದೇಶವು ದೇಶದಲ್ಲಿ ಮತ್ತು ಜಗತ್ತಿನಲ್ಲಿ ಹೊಸ ಗುರುತಿಸುವಿಕೆಯನ್ನು ರೂಪಿಸಿಕೊಳ್ಳುತ್ತಿರುವುದನ್ನು ಶ್ಲಾಘಿಸಿದಾಗ   ಕೆಲವು ಜನರು ಸ್ಥಿಮಿತ ಕಳೆದುಕೊಳ್ಳುತ್ತಾರೆ ಎಂಬುದು ನನಗೆ ತಿಳಿದಿದೆ. ಆದರೆ ಸತ್ಯ ಹೇಳುವುದರಿಂದ ಕೆಲವು ಜನರಿಗೆ ಸ್ವಾಸ್ಥ್ಯ ಹದಗೆಡುತ್ತದಾದರೆ, ಆಗ ಗೋಸ್ವಾಮಿ ತುಲಸೀದಾಸ್ ಜೀ ಅವರಿಗಾಗಿ ಇದನ್ನು ಹೇಳಿದ್ದಾರೆ:

जहां सुमति तहं संपति नाना।

जहां कुमति तहं बिपति निदाना ।।

ಅಂದರೆ ಉತ್ತಮ ಬುದ್ದಿ ಜೀವಿ, ಸುಮನಸ್ಸಿನವರು  ಇದ್ದರೆ ಅಲ್ಲಿ ಸದಾ ಸಂತೋಷದ ಸ್ಥಿತಿ ಇರುತ್ತದೆ. ಮತ್ತು ಎಲ್ಲಿ ಕೀಳು, ಕೆಟ್ಟ   ಮನಸ್ಸಿನವರು  ಇರುತ್ತಾರೋ, ಅಲ್ಲಿ ಅಭದ್ರತೆಯ ನೆರಳು ಇರುತ್ತದೆ. ನಾವು ಬಡವರ ಸೇವೆ ಮಾಡುವ ಪ್ರತಿಜ್ಞೆಯೊಂದಿಗೆ ಮುನ್ನಡೆಯುತ್ತಿದ್ದೇವೆ. ಕೊರೊನಾ ಕಾಲದಲ್ಲಿ ದೇಶವು ಜಗತ್ತಿನ ಅತ್ಯಂತ ದೊಡ್ಡ ಉಚಿತ ಪಡಿತರ ಕಾರ್ಯಕ್ರಮವನ್ನು ಜಾರಿಗೆ ತಂದಿತು. ಉತ್ತರ ಪ್ರದೇಶದ ಸುಮಾರು 15 ಕೋಟಿ ಫಲಾನುಭವಿಗಳು ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಇಂದು ಜಗತ್ತಿನ ಅತ್ಯಂತ ದೊಡ್ಡ ಮತ್ತು ತ್ವರಿತಗತಿಯ ಲಸಿಕಾ ಆಂದೋಲನ-ಎಲ್ಲರಿಗೂ ಲಸಿಕೆ, ಉಚಿತ ಲಸಿಕೆಯು-100 ಕೋಟಿ ಗುರಿಯ ಅಂಚಿನಲ್ಲಿದೆ. ಉತ್ತರ ಪ್ರದೇಶದಲ್ಲಿ ಇದುವರೆಗೆ 12 ಕೋಟಿಗೂ ಅಧಿಕ ಲಸಿಕೆಗಳನ್ನು ಹಾಕಲಾಗಿದೆ.

ಸಹೋದರರೇ ಮತ್ತು ಸಹೋದರಿಯರೇ,

ಎರಡು ಇಂಜಿನ್ ಗಳ ಸರಕಾರ ರೈತರಿಂದ ಮಾಡುವ ಖರೀದಿಯಲ್ಲಿ ಹೊಸ ದಾಖಲೆಗಳನ್ನು ಸ್ಥಾಪಿಸುತ್ತಿದೆ. ಇದುವರೆಗೆ ಸುಮಾರು 80,000 ಕೋ.ರೂ.ಗಳು ರೈತರ ಉತ್ಪನ್ನಗಳ ಖರೀದಿಗಾಗಿ ಉತ್ತರ ಪ್ರದೇಶದ ರೈತರ ಬ್ಯಾಂಕ್ ಖಾತೆಗಳಿಗೆ ಜಮೆಯಾಗಿವೆ. ಇದೆಲ್ಲಕ್ಕಿಂತ ಮಿಗಿಲಾಗಿ ಪಿ.ಎಂ. ಕಿಸಾನ್ ಸಮ್ಮಾನ್ ನಿಧಿಯಡಿ ಉತ್ತರ ಪ್ರದೇಶದ ರೈತರ ಬ್ಯಾಂಕ್ ಖಾತೆಗಳಿಗೆ 37,000 ಕೋ.ರೂ.ಗಳಿಗೂ ಅಧಿಕ ಮೊತ್ತವನ್ನು ಜಮೆ ಮಾಡಲಾಗಿದೆ. ಮತ್ತು ಇದನ್ನು ಸಣ್ಣ ರೈತರ ಸುಧಾರಣೆಗಾಗಿ ಹಾಗು ಅವರನ್ನು ಬಲಪಡಿಸುವುದಕ್ಕಾಗಿ ಮಾಡಲಾಗುತ್ತಿದೆ.

ಭಾರತದ ಎಥೆನಾಲ್ ನೀತಿ ಉತ್ತರ ಪ್ರದೇಶದ ರೈತರಿಗೆ ಲಾಭ ತರಲಿದೆ. ಕಬ್ಬು ಮತ್ತು ಇತರ ಆಹಾರ ಧಾನ್ಯಗಳಿಂದ ತಯಾರಾಗುವ ಜೈವಿಕ ಇಂಧನ ವಿದೇಶಗಳಿಂದ ಆಮದಾಗುತ್ತಿರುವ ಕಚ್ಛಾ ತೈಲಕ್ಕೆ ಪ್ರಮುಖ ಪರ್ಯಾಯವಾಗಬಲ್ಲದು. ಯೋಗೀ ಜೀ ಮತ್ತು ಅವರ ಸರಕಾರ ಕಳೆದ ಕೆಲವು ವರ್ಷಗಳಲ್ಲಿ ಕಬ್ಬು ಬೆಳೆಗಾರರಿಗಾಗಿ ಬಹಳ ಶ್ಲಾಘನೀಯ ಕೆಲಸವನ್ನು ಮಾಡಿದೆ. ಇಂದು ಉತ್ತರ ಪ್ರದೇಶದಲ್ಲಿ ಕಬ್ಬು ಬೆಳೆಗಾರರಿಗೆ ಗರಿಷ್ಠ ದರ ದೊರೆಯುತ್ತಿದೆ. ಯೋಗೀ ಜೀ ಅಧಿಕಾರಕ್ಕೆ ಬರುವ ಮೊದಲು ಅಧಿಕಾರದಲ್ಲಿದ್ದ ಸರಕಾರಗಳ ಅವಧಿಯಲ್ಲಿ ಐದು ವರ್ಷಗಳಲ್ಲಿ ಕಬ್ಬು ಬೆಳೆಗಾರರಿಗೆ ಪಾವತಿ ಮಾಡಿದ ಮೊತ್ತ ಒಂದು ಲಕ್ಷ ಕೋಟಿ ರೂಪಾಯಿಗಳಿಗೂ ಕಡಿಮೆ. ಇದೇ ವೇಳೆ ಯೋಗೀ ಜೀ ಸರಕಾರ ಐದು ವರ್ಷಗಳನ್ನು ಪೂರ್ಣಗೊಳಿಸಿಲ್ಲದಿದ್ದರೂ 1.5 ಲಕ್ಷ ಕೋ.ರೂ.ಗಳನ್ನು ಕಬ್ಬು ಬೆಳೆಗಾರರಿಗೆ ಪಾವತಿ ಮಾಡಿದೆ. ಉತ್ತರ ಪ್ರದೇಶದಲ್ಲಿ ಜೈವಿಕ ಇಂಧನ ತಯಾರಿಸಲು ಎಥೆನಾಲ್ ಗಾಗಿ  ಸ್ಥಾಪನೆ ಮಾಡಲಾಗುತ್ತಿರುವ ಕಾರ್ಖಾನೆಗಳು   ಕಬ್ಬು ಬೆಳೆಗಾರರಿಗೆ ಇನ್ನಷ್ಟು ಸಹಾಯ ಮಾಡಲಿವೆ.

ಸಹೋದರರೇ ಮತ್ತು ಸಹೋದರಿಯರೇ,

ಉತ್ತರ ಪ್ರದೇಶದ ಆಶೋತ್ತರಗಳನ್ನು ಈಡೇರಿಸಲು ಇದು ಸಕಾಲ. ಸ್ವಾತಂತ್ರ್ಯದ ಈ ಪುಣ್ಯಕರ ಸಂದರ್ಭದಲ್ಲಿ, ನಾವೆಲ್ಲರೂ ಒಗ್ಗಟ್ಟಾಗಬೇಕಾದ ಕಾಲಘಟ್ಟ ಇದು. ನಾವು ಉತ್ತರ ಪ್ರದೇಶಕ್ಕಾಗಿ ಮುಂದಿನ ಐದು  ತಿಂಗಳಿಗಾಗಿ ಯೋಜನೆಗಳನ್ನು ರೂಪಿಸಬೇಕಾಗಿಲ್ಲ, ಆದರೆ ಮುಂದಿನ 25 ವರ್ಷಗಳಿಗಾಗಿ ಭದ್ರ ನೆಲೆಗಟ್ಟನ್ನು ಹಾಕಿ ಅವುಗಳನ್ನು ಮುಂದೆ ಕೊಂಡೊಯ್ಯಬೇಕಾಗಿದೆ. ಕುಶಿನಗರ್, ಪೂರ್ವಾಂಚಲ ಮತ್ತು ಉತ್ತರ ಪ್ರದೇಶಗಳ ಆಶೀರ್ವಾದದೊಂದಿಗೆ ಮತ್ತು ನಿಮ್ಮೆಲ್ಲರ ಪ್ರಯತ್ನದೊಂದಿಗೆ ಇದೆಲ್ಲ ಸಾಧ್ಯವಾಗಲಿದೆ. ಮತ್ತೊಮ್ಮೆ , ಹೊಸ ಸೌಲಭ್ಯಗಳಿಗಾಗಿ ನಾನು ನಿಮ್ಮೆಲ್ಲರನ್ನೂ ಬಹಳ ಅಭಿನಂದಿಸುತ್ತೇನೆ. ನಿಮಗೆಲ್ಲಾ ಮುಂಚಿತವಾಗಿಯೇ ದೀಪಾವಳಿ ಮತ್ತು ಛಾತ್ ಪೂಜಾದ ಶುಭಶಯಗಳು!. ಹೌದು, ನಾನು ಮತ್ತೆ ನಿಮ್ಮಲ್ಲೊಂದು ಕೋರಿಕೆ ಮುಂದಿಡುತ್ತೇನೆ. ಸ್ಥಳೀಯ ವಸ್ತುಗಳ ಬಗ್ಗೆ ದನಿ ಎತ್ತುವುದನ್ನು (ವೋಕಲ್) ಆಗುವುದನ್ನು ಮರೆಯಬೇಡಿ. ನಮ್ಮ ನೆರೆಯ ಸಹೋದರರು ಮತ್ತು ಸಹೋದರಿಯರ ಸಿಹಿತಿಂಡಿಗಳನ್ನು ನಾವು ಖರೀದಿ ಮಾಡುವುದರಿಂದ ದೀಪಾವಳಿ ಸಂದರ್ಭದಲ್ಲಿ ಅವರ ಜೀವನ ವರ್ಣಮಯವಾಗುತ್ತದೆ. ಅಲ್ಲಿ ಹೊಸ ದೀಪಗಳು ಬೆಳಗುತ್ತವೆ. ಮತ್ತು ಹೊಸ ಶಕ್ತಿ ಉದಿಸುತ್ತದೆ. ಆದುದರಿಂದ, ನಾವು ಹಬ್ಬಗಳ ಸಂದರ್ಭದಲ್ಲಿ ಗರಿಷ್ಠ ಪ್ರಮಾಣದಲ್ಲಿ ಸ್ಥಳೀಯ  ಖರೀದಿಸಬೇಕು. ಈ ಕೋರಿಕೆಯೊಂದಿಗೆ, ನಿಮಗೆಲ್ಲರಿಗೂ ಬಹಳ ಧನ್ಯವಾದಗಳು!

ಧನ್ಯವಾದಗಳು!

ಭಾರತ್ ಮಾತಾ ಕೀ ಜೈ!

ಭಾರತ್ ಮಾತಾ ಕೀ ಜೈ!

ಭಾರತ್ ಮಾತಾ ಕೀ ಜೈ!

ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

***



(Release ID: 1766208) Visitor Counter : 206