ಪ್ರಧಾನ ಮಂತ್ರಿಯವರ ಕಛೇರಿ

“ಗ್ಲೋಬಲ್ ಸಿಟಿಜನ್ ಲೈವ್” ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವೀಡಿಯೋ ಮೂಲಕ ಮಾಡಿದ ಭಾಷಣ

Posted On: 25 SEP 2021 10:50PM by PIB Bengaluru

ನಮಸ್ತೇ!

ಈ ಯುವ ಮತ್ತು ಉತ್ಸಾಹೀ ಸಮುದಾಯವನ್ನು ಉದ್ದೇಶಿಸಿ ಮಾತನಾಡುವುದು ಬಹಳ ಹರ್ಷದ ಸಂಗತಿ. ನನ್ನೆದುರು ಜಾಗತಿಕ ಸಮುದಾಯವಿದೆ, ಅದು ನಮ್ಮ ಭೂಗ್ರಹದ ಸುಂದರ ವೈವಿಧ್ಯವನ್ನು ಒಳಗೊಂಡಿದೆ.

ಜಾಗತಿಕ ನಾಗರಿಕರ ಆಂದೋಲನವು ವಿಶ್ವವನ್ನು ಒಗ್ಗೂಡಿಸಲು ಸಂಗೀತ ಮತ್ತು ಸೃಜನಶೀಲತೆಯನ್ನು ಬಳಸುತ್ತದೆ. ಕ್ರೀಡೆಯಂತೆ ಸಂಗೀತ ಕೂಡಾ ಒಗ್ಗೂಡಿಸುವ ಅಂತರ್ಗತವಾದಂತಹ ಸಾಮರ್ಥ್ಯವನ್ನು  ಹೊಂದಿದೆ. ಖ್ಯಾತರಾದ ಹೆನ್ರಿ ಡೇವಿಡ್ ಥೋರಿಯೋ ಒಂದೊಮ್ಮೆ ಹೇಳಿದ್ದರು, ಅದನ್ನು ನಾನು ಉಲ್ಲೇಖಿಸುತ್ತೇನೆ: “ನಾನು ಸಂಗೀತವನ್ನು ಕೇಳಿದಾಗ, ನನಗೆ ಅಪಾಯದ ಭಯ ಇಲ್ಲದಂತಾಗುತ್ತದೆ. ನಾನು ಅಪಾಯದಿಂದ ದೂರವಾಗಿರುತ್ತೇನೆ. ನನಗೆ ಯಾವ ವೈರಿಗಳೂ ಕಾಣುವುದಿಲ್ಲ. ನಾನು ಪ್ರಾಚೀನ ಕಾಲಕ್ಕೆ ಸಂಬಂಧಪಟ್ಟವನಂತೆ ಮತ್ತು ಅದೇ ಕಾಲಕ್ಕೆ ಆಧುನಿಕ ಕಾಲಕ್ಕೂ ಸಂಬಂಧಿಸಿದವನಂತೆ ಭಾವಿಸುತ್ತೇನೆ.”

ಸಂಗೀತಕ್ಕೆ ನಮ್ಮ ಬದುಕಿನಲ್ಲಿ ಸಮಾಧಾನವನ್ನು ತರುವ ಶಕ್ತಿ ಇದೆ. ಅದು ಮನಸ್ಸನ್ನು ಮತ್ತು ಇಡೀ ದೇಹವನ್ನು ಶಾಂತಗೊಳಿಸುತ್ತದೆ. ಭಾರತವು ಹಲವು ಸಂಗೀತ ಪರಂಪರೆಗಳ ತವರು. ಪ್ರತೀ ರಾಜ್ಯದಲ್ಲಿಯೂ ಮತ್ತು ಪ್ರತೀ ವಲಯದಲ್ಲಿಯೂ ಹಲವು ಶೈಲಿಯ ಸಂಗೀತಗಳಿವೆ. ನಾನು ನಿಮಗೆಲ್ಲರಿಗೂ ಭಾರತಕ್ಕೆ ಬರಲು ಮತ್ತು ಸಂಗೀತ ರೋಮಾಂಚನವನ್ನು ಮತ್ತು ವೈವಿಧ್ಯವನ್ನು ಅನ್ವೇಷಿಸಲು ಆಹ್ವಾನವನ್ನು ನೀಡುತ್ತೇನೆ.

ಸ್ನೇಹಿತರೇ,

ಸುಮಾರು ಎರಡು ವರ್ಷಗಳಾಗಿವೆ, ಮಾನವತೆಯು ಜೀವಮಾನದಲ್ಲೊಮ್ಮೆ ಎದುರಾಗುವ  ಜಾಗತಿಕ ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿದೆ. ಜಾಗತಿಕ ಸಾಂಕ್ರಾಮಿಕದ ವಿರುದ್ಧ ಹೋರಾಟದ ನಮ್ಮ ಪರಸ್ಪರ ಹಂಚಿಕೊಂಡಂತಹ ಅನುಭವಗಳು ನಾವು ಒಗ್ಗೂಡಿದ್ದಾಗ ಬಲಿಷ್ಠರಾಗಿರುತ್ತೇವೆ ಮತ್ತು ಉತ್ತಮ ರೀತಿಯಲ್ಲಿರುತ್ತೇವೆ ಎಂಬುದನ್ನು ಕಲಿಸಿಕೊಟ್ಟಿದೆ. ನಮ್ಮ ಕೋವಿಡ್ ವಾರಿಯರ್ ಗಳು, ವೈದ್ಯರು, ದಾದಿಯರು, ವೈದ್ಯಕೀಯ ಸಿಬ್ಬಂದಿಗಳು ಜಾಗತಿಕ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಬಹಳ ಉತ್ತಮವಾದ ಸೇವೆಯನ್ನು ಸಾಮೂಹಿಕ ಸ್ಫೂರ್ತಿಯ ಮೂಲಕ ಸಲ್ಲಿಸಿರುವುದರ ನೋಟಗಳನ್ನು ನೋಡಿದ್ದೇವೆ. ಇದೇ ಉತ್ಸಾಹವನ್ನು ನಾವು ವಿಜ್ಞಾನಿಗಳಲ್ಲೂ ಮತ್ತು ಅನ್ವೇಷಕರಲ್ಲಿಯೂ ನೋಡಿದ್ದೇವೆ. ಅವರು ದಾಖಲೆ ಅವಧಿಯಲ್ಲಿ ಹೊಸ ಲಸಿಕೆಗಳನ್ನು ರೂಪಿಸಿದ್ದಾರೆ. ಇತರ ಎಲ್ಲ ವಿಷಯಗಳ ಮೇಲೂ ಮಾನವ ಪುನಶ್ಚೇತನ ಮೇಲುಗೈ ಸಾಧಿಸಿರುವ  ರೀತಿಯನ್ನು ತಲೆಮಾರುಗಳು ನೆನಪಿನಲ್ಲಿಡುತ್ತವೆ.

ಸ್ನೇಹಿತರೇ,

ಕೋವಿಡ್ ಜೊತೆಗೆ ಇತರ ಸವಾಲುಗಳೂ ಉಳಿದಿವೆ. ಈಗಲೂ ಕಾಡುತ್ತಿರುವ ದೊಡ್ಡ ಸವಾಲೆಂದರೆ ಬಡತನ. ಬಡವರು ಸರಕಾರವನ್ನು ಹೆಚ್ಚು ಹೆಚ್ಚು ಅವಲಂಬಿಸುವಂತೆ ಮಾಡುವ ಮೂಲಕ ಬಡತನದ ವಿರುದ್ಧ ಹೋರಾಡಲಾಗದು. ಬಡವರು ಸರಕಾರಗಳನ್ನು ವಿಶ್ವಾಸದ ಪಾಲುದಾರ ಎಂಬುದಾಗಿ ನೋಡಲು ಆರಂಭಿಸಿದರೆ ಮಾತ್ರವೇ ಬಡತನದ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ. ನಂಬಿಕಸ್ಥ ಪಾಲುದಾರರು ಬಡತನದ ವಿಷವರ್ತುಲವನ್ನು ತುಂಡು ಮಾಡಲು ಸಮರ್ಥವಾದಂತಹ ಮೂಲಸೌಕರ್ಯ ಅವರಿಗೆ ಲಭ್ಯವಾಗುವಂತೆ ಮಾಡುತ್ತಾರೆ.

ಸ್ನೇಹಿತರೇ,

ಬಡವರನ್ನು ಸಶಕ್ತರನ್ನಾಗಿಸಿದರೆ, ಅವರು ಬಡತನದ ವಿರುದ್ಧ ಹೋರಾಡಲು ಶಕ್ತಿಯನ್ನು ಗಳಿಸುತ್ತಾರೆ. ಮತ್ತು ಅದರಿಂದಾಗಿ ಬ್ಯಾಂಕಿಂಗ್ ಸೌಲಭ್ಯ ಹೊಂದಿಲ್ಲದವರನ್ನು ಬ್ಯಾಂಕಿಂಗ್ ಸೌಲಭ್ಯಕ್ಕೆ ಒಳಪಡಿಸುವುದು, ಮಿಲಿಯಾಂತರ ಜನತೆಯನ್ನು  ಸಾಮಾಜಿಕ ಸುರಕ್ಷೆ ವ್ಯಾಪ್ತಿಯಲ್ಲಿ ತರುವುದು,  500 ಮಿಲಿಯನ್ ಭಾರತೀಯರಿಗೆ ಗುಣಮಟ್ಟದ ಮತ್ತು ಉಚಿತ ಆರೋಗ್ಯ ಸೇವೆ ಒದಗಿಸುವುದು-ಈ ನಿಟ್ಟಿನಲ್ಲಿ ನಾವು ಕ್ರಮಗಳನ್ನು ಕೈಗೊಂಡೆವು. ನಮ್ಮ ನಗರಗಳಲ್ಲಿ ಮತ್ತು ಹಳ್ಳಿಗಳಲ್ಲಿ ಮನೆ ಇಲ್ಲದವರಿಗಾಗಿ 30 ಮಿಲಿಯನ್ ಮನೆಗಳನ್ನು ನಿರ್ಮಿಸಲಾಗಿದೆ ಎಂಬ ಸಂಗತಿ ನಿಮಗೆ ಸಂತೋಷ ತರಬಹುದು. ಮನೆ ಎಂಬುದು ಬರೇ ಆಶ್ರಯ ತಾಣ ಮಾತ್ರವಲ್ಲ. ತಲೆಯ ಮೇಲಿನ ಸೂರು ಜನರಿಗೆ ಘನತೆಯನ್ನು ತರುತ್ತದೆ. ಭಾರತದಲ್ಲಿ ನಡೆಯುತ್ತಿರುವ ಇನ್ನೊಂದು ಜನತಾ ಆಂದೋಲನ ಎಂದರೆ ಪ್ರತೀ ಮನೆಗೂ ಕುಡಿಯುವ ನೀರಿನ ಸಂಪರ್ಕವನ್ನು  ಒದಗಿಸುವ ಆಂದೋಲನ. ಸರಕಾರವು ಮುಂದಿನ ತಲೆಮಾರಿನ ಮೂಲಸೌಕರ್ಯಗಳನ್ನು ಒದಗಿಸಲು ಟ್ರಿಲಿಯಾಂತರ ಡಾಲರುಗಳನ್ನು ವ್ಯಯಿಸುತ್ತಿದೆ. ಕಳೆದ ವರ್ಷದ  ಹಲವಾರು ತಿಂಗಳು ಕಾಲ ಮತ್ತು ಈಗ ನಮ್ಮ 800 ಮಿಲಿಯನ್  ನಾಗರಿಕರಿಗೆ ಉಚಿತ ಆಹಾರ ಧಾನ್ಯಗಳನ್ನು ಒದಗಿಸಲಾಗಿದೆ.  ಈ ಮತ್ತು ಇತರ ಹಲವು ಕ್ರಮಗಳು ಬಡತನದ ವಿರುದ್ಧ ಹೋರಾಡಲು ಶಕ್ತಿಯನ್ನು ಕೊಡುತ್ತವೆ.

ಸ್ನೇಹಿತರೇ,

ಹವಾಮಾನ ವೈಪರೀತ್ಯದ ಭಯ ನಮ್ಮೆದುರು ಬೃಹತ್ತಾಗಿ  ನಿಂತು ಕಾಡುತ್ತಿದೆ. ಜಗತ್ತು ಇಲ್ಲಿ ತಿಳಿದುಕೊಳ್ಳಬೇಕಾದ ಮತ್ತು ಒಪ್ಪಿಕೊಳ್ಳಬೇಕಾದ  ಅಂಶವೆಂದರೆ ಜಾಗತಿಕ ಪರಿಸರದಲ್ಲಿ ಯಾವುದೇ ಬದಲಾವಣೆ ಮೊದಲು ಆರಂಭವಾಗುವುದು ನಮ್ಮೊಳಗೇ ಮತ್ತು ನಮ್ಮಿಂದಲೇ.  ವಾತಾವರಣ ಬದಲಾವಣೆಯನ್ನು ತಡೆಗಟ್ಟುವ  ಅತ್ಯಂತ ಸರಳ ಮತ್ತು ಅತ್ಯಂತ ಯಶಸ್ವೀ ದಾರಿ ಎಂದರೆ ಪ್ರಕೃತಿಯ ಜೊತೆ ಸೌಹಾರ್ದ ಸಾಧಿಸುವಂತಹ ಜೀವನ ವಿಧಾನವನ್ನು ಅಳವಡಿಸಿಕೊಳ್ಳುವುದು.

ಶ್ರೇಷ್ಠರಾದ ಮಹಾತ್ಮಾ ಗಾಂಧಿ ಅವರು ಶಾಂತಿ ಮತ್ತು ಅಹಿಂಸೆಗೆ ಸಂಬಂಧಿಸಿದ ತಮ್ಮ ಚಿಂತನೆಗೆ ಹೆಸರಾದವರು. ಆದರೆ ನಿಮಗೆ ಗೊತ್ತೇ, ಅವರೂ ಜಗತ್ತಿನ ಅತ್ಯಂತ ದೊಡ್ಡ ಪರಿಸರವಾದಿಗಳಲ್ಲಿ ಒಬ್ಬರಾಗಿದ್ದರು. ಅವರು ಶೂನ್ಯ ಇಂಗಾಲ ಹೆಜ್ಜೆಗುರುತುಗಳ  ಜೀವನ ವಿಧಾನವನ್ನು ಅನುಸರಿಸಿದ್ದರು. ಅವರು ಏನೆಲ್ಲಾ ಕಾರ್ಯಗಳನ್ನು ಮಾಡಿದ್ದರೋ, ಅವುಗಳಲ್ಲಿ ನಮ್ಮ ಭೂಗ್ರಹದ ಕಲ್ಯಾಣವನ್ನು ಅವರು ಉಳಿದೆಲ್ಲಾ ವಿಷಯಗಳಿಗಿಂತ ಗರಿಷ್ಠ ಆದ್ಯತೆಯಲ್ಲಿ ಇರಿಸಿದ್ದರು. ಅವರು ವಿಶ್ವಸ್ಥ ಎಂಬ ಸಿದ್ಧಾಂತವನ್ನು ಪ್ರತಿಪಾದಿಸಿದ್ದರು, ಅದರಲ್ಲಿ ನಾವೆಲ್ಲಾ ಭೂಗ್ರಹದ ಕಾಳಜಿ ವಹಿಸುವ ಜವಾಬ್ದಾರಿಯನ್ನು ಹೊಂದಿರುವ ವಿಶ್ವಸ್ಥರು ಆಗಿದ್ದೇವೆ.

ಪ್ಯಾರಿಸ್ ಬದ್ಧತೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಾಗುತ್ತಿರುವ ಭಾರತವು ಇಂದು ಜಿ.-20 ರಾಷ್ಟ್ರಗಳ ಪಟ್ಟಿಯಲ್ಲಿ ಈ ಬದ್ಧತೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮುನ್ನಡೆಯುತ್ತಿರುವ ಏಕೈಕ ರಾಷ್ಟ್ರವಾಗಿದೆ. ಭಾರತವು ಅಂತಾರಾಷ್ಟ್ರೀಯ ಸೌರ ಮಿತ್ರಕೂಟದ ಬ್ಯಾನರಿನಡಿಯಲ್ಲಿ ಮತ್ತು ವಿಪತ್ತು ಪುನಶ್ಚೇತನ ಮೂಲಸೌಕರ್ಯಕ್ಕಾಗಿರುವ ಮಿತ್ರಕೂಟದಡಿಯಲ್ಲಿ ಜಗತ್ತನ್ನು ಒಗ್ಗೂಡಿಸಿದ ಹೆಮ್ಮೆಯನ್ನು ಹೊಂದಿದೆ.

ಸ್ನೇಹಿತರೇ,

ಭಾರತದ ಅಭಿವೃದ್ಧಿ ಎಂದರೆ ಮನುಕುಲದ ಅಭಿವೃದ್ಧಿ ಎಂದು ನಾವು ಭಾವಿಸಿದ್ದೇವೆ. ನಾನು ಬಹುಷಃ ವಿಶ್ವದ ಅತ್ಯಂತ ಹಳೆಯ ಧರ್ಮಗ್ರಂಥವಾದ ಋಗ್ವೇದವನ್ನು ಉಲ್ಲೇಖಿಸುವ ಮೂಲಕ ನನ್ನ ಭಾಷಣವನ್ನು ಕೊನೆಗೊಳಿಸುತ್ತೇನೆ. ಅದರ ಪದ್ಯಗಳು ಜಾಗತಿಕ ನಾಗರಿಕರನ್ನು ಪೋಷಿಸುವ ಮಾನದಂಡಗಳಲ್ಲಿ   ಈಗಲೂ ಸುವರ್ಣ ಮಾನದಂಡಗಳಂತಿವೆ.

ಋಗ್ವೇದ ಹೇಳುತ್ತದೆ:

संगच्छध्वंसंवदध्वंसंवोमनांसिजानताम्

देवाभागंयथापूर्वेसञ्जानानाउपासते||

समानोमन्त्रःसमितिःसमानीसमानंमनःसहचित्तमेषाम्।

समानंमन्त्रम्अभिमन्त्रयेवःसमानेनवोहविषाजुहोमि।।

समानीवआकूति: समानाहृदयानिव: |

समानमस्तुवोमनोयथाव: सुसहासति||

ಇದರ ಅರ್ಥ:

ನಾವು ಜೊತೆಗೂಡಿ ಮುನ್ನಡೆಯೋಣ, ಒಂದೇ ಧ್ವನಿಯಲ್ಲಿ ಮಾತನಾಡುತ್ತ

ನಮ್ಮ ಮನಸ್ಸುಗಳು ಒಪ್ಪಂದದಲ್ಲಿರಲಿ ಮತ್ತು ನಾವು ನಮ್ಮಲ್ಲಿರುವುದನ್ನು ಹಂಚಿಕೊಳ್ಳೋಣ, ದೇವರು ಪರಸ್ಪರ ಹಂಚಿಕೊಂಡಂತೆ

ನಮ್ಮಲ್ಲಿ ಹಂಚಿಕೊಂಡಂತಹ ಉದ್ದೇಶಗಳಿರಲಿ ಮತ್ತು ಹಂಚಿಕೊಳ್ಳುವಂತಹ ಮನಸ್ಸುಗಳಿರಲಿ. ಅಂತಹ ಏಕತೆಗಾಗಿ ನಾವು ಪ್ರಾರ್ಥಿಸೋಣ

ನಮ್ಮಲ್ಲಿ ನಮ್ಮೆಲ್ಲರನ್ನೂ ಒಗ್ಗೂಡಿಸುವ ಹಂಚಿಕೊಂಡಂತಹ ಆಶಯಗಳಿರಲಿ ಮತ್ತು ಆಶೋತ್ತರಗಳಿರಲಿ

ಸ್ನೇಹಿತರೇ,

ಜಾಗತಿಕ ನಾಗರಿಕರಿಗಾಗಿ ಇದಕ್ಕಿಂತ ಉತ್ತಮ ಪ್ರಣಾಳಿಕೆ ಬೇರೆ ಯಾವುದಿರಬಹುದು?. ನಾವು ಪರಸ್ಪರ ಒಗ್ಗೂಡಿ ಕೆಲಸ ಮಾಡುತ್ತಿರೋಣ.

ದಯಾಳು, ಮತ್ತು ಕೇವಲ  ಎಲ್ಲರನ್ನೂ ಒಳಗೊಳ್ಳುವ ಭೂಗ್ರಹಕ್ಕಾಗಿ

ಧನ್ಯವಾದಗಳು.

ಬಹಳ ಧನ್ಯವಾದಗಳು.

ನಮಸ್ತೇ.

***



(Release ID: 1758287) Visitor Counter : 224