ಪ್ರಧಾನ ಮಂತ್ರಿಯವರ ಕಛೇರಿ

ಎಚ್ಸಿಡಬ್ಲ್ಯೂಎಸ್ ಮತ್ತು ಗೋವಾದಲ್ಲಿ ಕೋವಿಡ್ ಲಸಿಕೆ ಕಾರ್ಯಕ್ರಮದ ಫಲಾನುಭವಿಗಳ ಜೊತೆಗಿನ ಸಂವಾದದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಭಾಷಣ

Posted On: 18 SEP 2021 2:04PM by PIB Bengaluru

ಗೋವಾದ ಶಕ್ತಿಯುತ ಮತ್ತು ಜನಪ್ರಿಯ ಮುಖ್ಯಮಂತ್ರಿಯವರಾಧ ಶ್ರೀ ಪ್ರಮೋದ್ ಸಾವಂತ್ ಜೀ, ಕೇಂದ್ರ ಸಚಿವ ಸಂಪುಟದಲ್ಲಿ ನನ್ನ ಸಹೋದ್ಯೋಗಿ ಮತ್ತು ಗೋವಾದ ಪುತ್ರ ಶ್ರೀಪಾದ್ ನಾಯಕ್ ಜೀ, ಕೇಂದ್ರ ಸರ್ಕಾರದ ಮಂತ್ರಿಗಳ ಮಂಡಳಿಯಲ್ಲಿ ನನ್ನ ಸಹೋದ್ಯೋಗಿಯಾದ  ಡಾ. ಭಾರತಿ ಪ್ರವೀಣ್ ಪವಾರ್ ಜೀ, ಗೋವಾದ ಎಲ್ಲಾ ಮಂತ್ರಿಗಳು, ಸಂಸದರು ಮತ್ತು ಶಾಸಕರು, ಇತರ ಸಾರ್ವಜನಿಕ ಪ್ರತಿನಿಧಿಗಳು, ಎಲ್ಲಾ ಕೊರೊನಾ ಯೋಧರು ಮತ್ತು  ಸಹೋದರ ಸಹೋದರಿಯರೆ !

ನಿಮಗೆಲ್ಲರಿಗೂ ಗಣೇಶ ಹಬ್ಬದ ಶುಭಾಶಯಗಳು! ನಾಳೆ, ಅನಂತ ಚತುರ್ದಶಿಯ ಶುಭ ಸಂದರ್ಭದಲ್ಲಿ, ನಾವು ಗಣಪನಿಗೆ  ವಿದಾಯ ಹೇಳುತ್ತೇವೆ ಮತ್ತು ಪವಿತ್ರ ದಾರ ಅನಂತ ಸೂತ್ರವನ್ನು ನಮ್ಮ ಕೈಯಲ್ಲಿ ಕಟ್ಟುತ್ತೇವೆ. ಅನಂತ ಸೂತ್ರ ಎಂದರೆ ಸಂತೋಷ, ಜೀವನದಲ್ಲಿ ಸಮೃದ್ಧಿ ಮತ್ತು ದೀರ್ಘಾಯುಷ್ಯದ ಆಶೀರ್ವಾದ.

ಈ ಪವಿತ್ರ ದಿನದಂದು ಗೋವಾದ ಜನರು ಲಸಿಕೆ ಹಾಕಿಸಿಕೊಂಡಿದ್ದಕ್ಕೆ ನನಗೆ ಸಂತೋಷವಾಗಿದೆ. ಗೋವಾದ ಪ್ರತಿ ಅರ್ಹ ವ್ಯಕ್ತಿಯು ಲಸಿಕೆಯ ಒಂದು ಡೋಸ್ ಪಡೆದಿದ್ದಾರೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಇದೊಂದು ದೊಡ್ಡ ವಿಷಯವಾಗಿದೆ. ಇದಕ್ಕಾಗಿ ಗೋವಾದ ಎಲ್ಲ ಜನರಿಗೆ ಅನೇಕ ಅಭಿನಂದನೆಗಳು.

ಸ್ನೇಹಿತರೇ,

ಗೋವಾ ಕೂಡ ಭಾರತದ ವೈವಿಧ್ಯತೆಯ ಶಕ್ತಿಯನ್ನು ಕಾಣುವ ರಾಜ್ಯವಾಗಿದೆ. ಪೂರ್ವ ಮತ್ತು ಪಶ್ಚಿಮದ ಸಂಸ್ಕೃತಿ, ಜೀವನ ಮಟ್ಟ ಮತ್ತು ಆಹಾರ ಪದ್ಧತಿಗಳನ್ನು ಇಲ್ಲಿ ಕಾಣಬಹುದು. ಗಣೇಶೋತ್ಸವವನ್ನು ಇಲ್ಲಿಯೂ ಆಚರಿಸಲಾಗುತ್ತದೆ, ದೀಪಾವಳಿಯನ್ನೂ ವಿಜೃಂಭಣೆಯಿಂದ  ಆಚರಿಸಲಾಗುತ್ತದೆ ಮತ್ತು ಕ್ರಿಸ್ ಮಸ್ ಸಮಯದಲ್ಲಿ  ಗೋವಾದ ಸೌಂದರ್ಯ ಹೆಚ್ಚಾಗುತ್ತದೆ. ಹಾಗೆ ಆಚರಿಸುವಾಗ, ಗೋವಾ ಕೂಡ ತನ್ನ ಸಂಪ್ರದಾಯವನ್ನು ಅನುಸರಿಸುತ್ತದೆ. ಏಕ ಭಾರತ ಶ್ರೇಷ್ಠ ಭಾರತದ ಭಾವನೆಯನ್ನು   ನಿರಂತರವಾಗಿ ಬಲಪಡಿಸುವ ಗೋವಾದ ಪ್ರತಿಯೊಂದು ಸಾಧನೆಯು ನನಗೆ ಮಾತ್ರವಲ್ಲ, ಇಡೀ ರಾಷ್ಟ್ರಕ್ಕೆ ಸಂತೋಷ ಮತ್ತು ಹೆಮ್ಮೆಯನ್ನು ನೀಡುತ್ತದೆ. 

ಸಹೋದರ ಸಹೋದರಿಯರೆ,

ಈ ಮಹತ್ವದ ಸಂದರ್ಭದಲ್ಲಿ, ನನ್ನ ಸ್ನೇಹಿತ, ನಿಜವಾದ ಕರ್ಮಯೋಗಿ, ದಿವಂಗತ ಮನೋಹರ್ ಪರಿಕ್ಕರ್ ಜಿ ಅವರ ನೆನಪಾಗುವುದು ಬಹಳ ಸಹಜ. 100 ವರ್ಷಗಳಲ್ಲಿ ಗೋವಾ ಅತಿದೊಡ್ಡ ಬಿಕ್ಕಟ್ಟಿನ ವಿರುದ್ಧ ಹೋರಾಡಿದ ರೀತಿ, ಪರಿಕ್ಕರ್ ಜೀ ಅವರು ಇಂದು ನಮ್ಮ ನಡುವೆ ಇದ್ದರೆ ನಿಮ್ಮ ಸಾಧನೆಯ ಬಗ್ಗೆ ತುಂಬಾ ಹೆಮ್ಮೆ ಪಡುತ್ತಿದ್ದರು.

ಗೋವಾ ವಿಶ್ವದ ಅತಿದೊಡ್ಡ ಮತ್ತು ವೇಗವಾದ ಲಸಿಕೆ ಅಭಿಯಾನ  ‘ಎಲ್ಲರಿಗೂ ಉಚಿತ ಲಸಿಕೆ ‘ ಯ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕಳೆದ ಕೆಲವು ತಿಂಗಳುಗಳಲ್ಲಿ, ಪ್ರಮೋದ್ ಸಾವಂತ್ ಜಿ ನೇತೃತ್ವದಲ್ಲಿ ಗೋವಾ ಭಾರೀ ಮಳೆ, ಚಂಡಮಾರುತಗಳು, ಪ್ರವಾಹಗಳಂತಹ ನೈಸರ್ಗಿಕ ವಿಪತ್ತುಗಳನ್ನು ಧೈರ್ಯದಿಂದ ಎದುರಿಸಿದೆ. ಈ ಕೊರೊನಾ ಯೋಧರು, ಆರೋಗ್ಯ ಕಾರ್ಯಕರ್ತರು, ಟೀಮ್ ಗೋವಾ, ಈ ನೈಸರ್ಗಿಕ ಸವಾಲುಗಳ ನಡುವೆ   ಕೊರೊನಾ ಲಸಿಕೆಯ ವೇಗವನ್ನು ಕಾಪಾಡಿಕೊಂಡಿದ್ದಕ್ಕಾಗಿ ಎಲ್ಲರಿಗೂ ಅನೇಕ ಅಭಿನಂದನೆಗಳು.

ಇಲ್ಲಿ ಅನೇಕ ಸಹೋದ್ಯೋಗಿಗಳು ನಮ್ಮೊಂದಿಗೆ ಹಂಚಿಕೊಂಡ ಅನುಭವಗಳು ಈ ಅಭಿಯಾನವು ಎಷ್ಟು ಕಷ್ಟಕರವಾಗಿತ್ತು ಎಂಬುದನ್ನು ತೋರಿಸುತ್ತದೆ. ಉಕ್ಕಿ ಹರಿಯುವ ನದಿಗಳನ್ನು ದಾಟಿ ಸುರಕ್ಷಿತ ಲಸಿಕೆಗಳೊಂದಿಗೆ ದೂರದವರೆಗೆ ತಲುಪಲು ಕರ್ತವ್ಯ ಪ್ರಜ್ಞೆ, ಸಮಾಜದೆಡೆಗೆ ಭಕ್ತಿ ಮತ್ತು ಧೈರ್ಯ ಬೇಕು. ನೀವೆಲ್ಲರೂ ಎಡೆಬಿಡದೆ ಮಾನವೀಯತೆಯ ಸೇವೆ ಮಾಡುತ್ತಿದ್ದೀರಿ. ನಿಮ್ಮ ಸೇವೆ ಎಂದೆಂದಿಗೂ ನೆನಪಿನಲ್ಲಿ ಉಳಿಯುತ್ತದೆ.

ಸ್ನೇಹಿತರೇ,

ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್ ಎಂತಹ ಅದ್ಭುತ ಫಲಿತಾಂಶವನ್ನು ನೀಡಬಹುದು ಎಂಬುದನ್ನು ಗೋವಾ ಸರ್ಕಾರ, ನಾಗರಿಕರು, ಕೊರೊನಾ ಯೋಧರು ಮತ್ತು ಮುಂಚೂಣಿಯ ಕೆಲಸಗಾರರು ಪ್ರದರ್ಶಿಸಿದ್ದಾರೆ. ಸಾಮಾಜಿಕ ಮತ್ತು ಭೌಗೋಳಿಕ ಸವಾಲುಗಳನ್ನು ಎದುರಿಸುವ ರೀತಿಯು  ನಿಜವಾಗಿಯೂ ಶ್ಲಾಘನೀಯ. ಪ್ರಮೋದ್ ಜೀ ಮತ್ತು ನಿಮ್ಮ ತಂಡಕ್ಕೆ ಅನೇಕ ಅಭಿನಂದನೆಗಳು. ರಾಜ್ಯದ ಅತ್ಯಂತ ದೂರದ ಭಾಗಗಳಲ್ಲಿ, ಎಲ್ಲಾ ಉಪ ವಿಭಾಗಗಳಲ್ಲಿ ವೇಗವಾಗಿ ಲಸಿಕೆ ನೀಡಿರುವುದು ಇದಕ್ಕೆ ಉತ್ತಮ ಪುರಾವೆ.
ಗೋವಾ ತನ್ನ ಲಸಿಕೆ ನೀಡು ಕಾರ್ಯದ ವೇಗವನ್ನು ಕುಗ್ಗಿಸದಿರುವುದಕ್ಕೆ ನನಗೆ ಸಂತೋಷವಾಗಿದೆ. ನಾವು ಮಾತನಾಡುವ ಈ ಸಮಯದಲ್ಲೂ, ಎರಡನೇ ಡೋಸ್ಗಾಗಿ ರಾಜ್ಯದಲ್ಲಿ 'ಟೀಕಾ' ಹಬ್ಬ ನಡೆಯುತ್ತಿದೆ. ಇಂತಹ ಪ್ರಾಮಾಣಿಕ ಪ್ರಯತ್ನಗಳಿಂದಲೇ ಗೋವಾ ಸಂಪೂರ್ಣ ಲಸಿಕೆಯ ವಿಷಯದಲ್ಲಿ ದೇಶದ ಮುಂಚೂಣಿಯ ರಾಜ್ಯವಾಗಲು ಸಜ್ಜಾಗಿದೆ. ಮುಖ್ಯವಾಗಿ, ಗೋವಾ ತನ್ನ ಜನರಿಗೆ ಮಾತ್ರವಲ್ಲದೆ ಹೊರಗಿನಿಂದ ಬರುವ ಪ್ರವಾಸಿಗರು ಮತ್ತು ಕಾರ್ಮಿಕರಿಗೂ ಲಸಿಕೆ ಹಾಕುತ್ತಿದೆ.

ಸ್ನೇಹಿತರೇ,

ಈ ಸಂದರ್ಭದಲ್ಲಿ, ದೇಶದ ಆಡಳಿತಕ್ಕೆ ಸಂಬಂಧಿಸಿದ ಎಲ್ಲಾ ವೈದ್ಯರು, ವೈದ್ಯಕೀಯ ಸಿಬ್ಬಂದಿ ಮತ್ತು ಜನರನ್ನು ನಾನು ಪ್ರಶಂಸಿಸುತ್ತೇನೆ. ನಿಮ್ಮೆಲ್ಲರ ಪ್ರಯತ್ನದಿಂದಾಗಿ ನಿನ್ನೆ ಭಾರತವು ಒಂದೇ ದಿನದಲ್ಲಿ 2.5 ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ಹಾಕುವ ದಾಖಲೆಯನ್ನು ಮಾಡಿದೆ. ಶ್ರೀಮಂತ ಮತ್ತು ಶಕ್ತಿಶಾಲಿ ಎಂದು ಪರಿಗಣಿಸಲ್ಪಟ್ಟ ದೇಶಗಳು ಕೂಡ ಇದನ್ನು ಮಾಡಲು ಸಾಧ್ಯವಾಗಲಿಲ್ಲ. ನಿನ್ನೆ ನಾವು ದೇಶವು  ಲಸಿಕೆ ನೀಡುವಲ್ಲಿ ಹೆಚ್ಚುತ್ತಿರುವ ಸಂಖ್ಯೆನ್ನು ಉತ್ಸಾಹದಿಂದ ತುಂಬಿ ಕೋವಿನ್ ಡ್ಯಾಶ್ಬೋರ್ಡನ್ನು ಹೇಗೆ ಕಣ್ಣು ತೆಗೆಯದೆ ನೋಡುತ್ತಿತ್ತು ಎನ್ನುವುದನ್ನು ಗಮನಿಸಿದೆವು.

ನಿನ್ನೆ ಪ್ರತಿ ಗಂಟೆಗೆ 15 ಲಕ್ಷಕ್ಕೂ ಹೆಚ್ಚು ಲಸಿಕೆಗಳು, ಪ್ರತಿ ನಿಮಿಷಕ್ಕೆ 26,000 ಕ್ಕೂ ಹೆಚ್ಚು ಲಸಿಕೆಗಳು ಮತ್ತು ಪ್ರತಿ ಸೆಕೆಂಡಿಗೆ 425 ಕ್ಕಿಂತ ಹೆಚ್ಚು ಜನರು ಲಸಿಕೆಗಳನ್ನು ಪಡೆದರು. ಈ ಲಸಿಕೆಯನ್ನು ದೇಶದ ಪ್ರತಿ ಭಾಗದಲ್ಲಿ ಹರಡಿರುವ ಒಂದು ಲಕ್ಷಕ್ಕೂ ಹೆಚ್ಚು ಲಸಿಕೆ ಕೇಂದ್ರಗಳಲ್ಲಿ ಜನರಿಗೆ ನೀಡಲಾಗಿತ್ತು . ಭಾರತದ ಸ್ವಂತ ಲಸಿಕೆಗಳು, ಲಸಿಕೆ ನೀಡಯವಿಕೆಯ ಮತ್ತು ಕೌಶಲ್ಯದ ಮಾನವಶಕ್ತಿಯ  ಒಂದು ದೊಡ್ಡ ಜಾಲ ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸಿದೆ.

ಸ್ನೇಹಿತರೇ,

ನಿನ್ನೆಯ ಸಾಧನೆಯು ಕೇವಲ ಅಂಕಿಅಂಶಗಳಲ್ಲ, ಆದರೆ ಭಾರತವು ಹೊಂದಿರುವ ಸಾಮರ್ಥ್ಯಗಳನ್ನು ಜಗತ್ತು ಗುರುತಿಸಲಿದೆ. ಮತ್ತು ಅದರ  ಗುಣಗಾನವು  ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ.

ಸ್ನೇಹಿತರೇ,

ಇಂದು ನಾನು ನನ್ನ ಮನದಾಳದ ಮಾತನ್ನು  ಹೇಳಲು ಬಯಸುತ್ತೇನೆ. ಅನೇಕ ಜನ್ಮದಿನಗಳು ಬಂದಿವೆ ಮತ್ತು ಹೋಗಿವೆ, ಆದರೆ ನಾನು ಯಾವಾಗಲೂ ಆಚರಣೆಗಳಿಂದ ದೂರವಿರುತ್ತೇನೆ. ಆದರೆ ಈ ವಯಸ್ಸಿನಲ್ಲಿ, ನಿನ್ನೆಯ ದಿನ ನನಗೆ ತುಂಬಾ ಭಾವನಾತ್ಮಕವಾಗಿತ್ತು. ಹುಟ್ಟುಹಬ್ಬವನ್ನು ಆಚರಿಸಲು ಹಲವು ಮಾರ್ಗಗಳಿವೆ. ಜನರು ಕೂಡ ವಿಭಿನ್ನ ರೀತಿಯಲ್ಲಿ ಆಚರಿಸುತ್ತಾರೆ. ಮತ್ತು ಸಂಭ್ರಮಾಚರಣೆಯನ್ನು ತಪ್ಪು ಎಂದುಕೊಳ್ಳುವವರಲ್ಲಿ ನಾನಿಲ್ಲ. ಆದರೆ ನಿಮ್ಮ ಪ್ರಯತ್ನಗಳಿಂದ ನಿನ್ನೆಯ ದಿನ ನನಗೆ ಬಹಳ ವಿಶೇಷವಾದ ದಿನವಾಗಿದೆ.
ವೈದ್ಯಕೀಯ ಕ್ಷೇತ್ರದ ಜನರು, ಕಳೆದ ಒಂದೂವರೆ ಎರಡು ವರ್ಷಗಳಿಂದ ಹಗಲಿರುಳು ದುಡಿಯುತ್ತಿರುವವರು, ತಮ್ಮ ಜೀವದ ಬಗ್ಗೆ ಕಾಳಜಿ ವಹಿಸದೆ, ನಿನ್ನೆ ಲಸಿಕೆಯ ದಾಖಲೆಯನ್ನು ತೋರಿಸಿದ ರೀತಿಯಲ್ಲಿ ಕೊರೊನಾದ ವಿರುದ್ಧ ಹೋರಾಡಲು  ಜನರಿಗೆ ಸಹಾಯ ಮಾಡುತ್ತಿದ್ದಾರೆ , ಇದು ತುಂಬಾ ದೊಡ್ಡ ವಿಷಯ. ಪ್ರತಿಯೊಬ್ಬರೂ ಇದರಲ್ಲಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಜನರು ಅದನ್ನು ಸೇವೆಯೊಂದಿಗೆ ಜೋಡಿಸಿದ್ದಾರೆ. ಅವರ ಕರುಣೆ, ಕರ್ತವ್ಯ ಭಾವದಿಂದಾಗಿ   2.5 ಕೋಟಿ ಲಸಿಕೆ ಡೋಸ್ಗಳನ್ನು ನೀಡಲು ಸಾಧ್ಯವಾಯಿತು.
 
ಲಸಿಕೆಯ ಪ್ರತಿಯೊಂದು ಡೋಸ್ ಜೀವ ಉಳಿಸಲು ಸಹಾಯ ಮಾಡುತ್ತದೆ ಎಂದು ನಾನು ನಂಬುತ್ತೇನೆ. ಕಡಿಮೆ ಅವಧಿಯಲ್ಲಿ 2.5 ಕೋಟಿಗೂ ಹೆಚ್ಚು ಜನರಿಗೆ ಭದ್ರತೆ ಒದಗಿಸುವುದು ಬಹಳ ತೃಪ್ತಿಯನ್ನು ನೀಡುತ್ತದೆ. ಜನ್ಮದಿನಗಳು ಬರುತ್ತವೆ ಮತ್ತು ಹೋಗುತ್ತವೆ, ಆದರೆ ನಿನ್ನೆಯ ದಿನ  ನನ್ನ ಹೃದಯವನ್ನು ಮುಟ್ಟಿದೆ, ಅದು ಮರೆಯಲಾಗದಂತಹುದು,  ಎಷ್ಟು ಧನ್ಯವಾದ ಹೇಳಿದರೂ ಸಾಕಾಗುವುದಿಲ್ಲ. ನಾನು ಪ್ರತಿಯೊಬ್ಬರಿಗೂ ನನ್ನ ಹೃದಯದಾಳದಿಂದ ನಮಸ್ಕರಿಸುತ್ತೇನೆ ಮತ್ತು ಎಲ್ಲರಿಗೂ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.

ಸಹೋದರ ಸಹೋದರಿಯರೆ,

ಭಾರತದ ಲಸಿಕೆ ಅಭಿಯಾನವು ಆರೋಗ್ಯಕ್ಕೆ ರಕ್ಷಣಾತ್ಮಕ ಕವಚ  ಮಾತ್ರವಲ್ಲ, ಜೀವನೋಪಾಯದ ಕವಚವೂ  ಆಗಿದೆ. ಮೊದಲ ಡೋಸ್ನ ಸಂದರ್ಭದಲ್ಲಿ ಹಿಮಾಚಲವು ಶೇಕಡ ನೂರರಷ್ಟು   ಲಸಿಕೆಯನ್ನು ಪೂರ್ಣಗೊಳಿಸಿದೆ, ಹಾಗೆಯೇ ಗೋವಾ, ಚಂಡೀಗಢ  ಮತ್ತು ಲಕ್ಷದ್ವೀಪದ  ಎಲ್ಲ ಅರ್ಹ ವ್ಯಕ್ತಿಗಳು ಮೊದಲ ಡೋಸ್ ಪಡೆದಿದ್ದಾರೆ. ಮೊದಲ ಡೋಸ್ಗೆ ಸಂಬಂಧಿಸಿದಂತೆ ಸಿಕ್ಕಿಂ ಕೂಡ 100%ರಷ್ಟು ಶೀಘ್ರದಲ್ಲೇ ಆಗಲಿದೆ. ಅಂಡಮಾನ್ ಮತ್ತು ನಿಕೋಬಾರ್, ಕೇರಳ, ಲಡಾಖ್, ಉತ್ತರಾಖಂಡ, ದಾದ್ರಾ ಮತ್ತು ನಗರ ಹವೇಲಿ ಕೂಡ ಈ ಸಾಧನೆಗೆ ಹತ್ತಿರದಲ್ಲಿವೆ .

ಸ್ನೇಹಿತರೇ,
ಇದು ಹೆಚ್ಚು ಚರ್ಚೆಗೆ ಬರಲಿಲ್ಲ ಆದರೆ ಭಾರತವು ತನ್ನ ಲಸಿಕೆ ಅಭಿಯಾನದಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ರಾಜ್ಯಗಳಿಗೆ ಸಾಕಷ್ಟು ಆದ್ಯತೆಯನ್ನು ನೀಡಿದೆ. ನಾವು ಇದನ್ನು ಆರಂಭದಲ್ಲಿ ಹೇಳಲಿಲ್ಲ ಏಕೆಂದರೆ ಇದು ರಾಜಕೀಯಕ್ಕೆ ಕಾರಣವಾಗುತ್ತದೆ. ಆದರೆ ನಮ್ಮ ಪ್ರವಾಸೋದ್ಯಮ ತಾಣಗಳನ್ನು ಆದಷ್ಟು ಬೇಗ ತೆರೆಯುವುದು ಬಹಳ ಮುಖ್ಯವಾಗಿತ್ತು. ಈಗ ಉತ್ತರಾಖಂಡದಲ್ಲೂ ಚಾರ್-ಧಾಮ್ ಯಾತ್ರೆ ಸಾಧ್ಯವಾಗುತ್ತದೆ ಮತ್ತು ಈ ಎಲ್ಲಾ ಪ್ರಯತ್ನಗಳ ನಡುವೆ, ಗೋವಾ  100% ಹೊಂದಿರುವುದು ಬಹಳ ವಿಶೇಷವಾಗುತ್ತದೆ.
 
ಪ್ರವಾಸೋದ್ಯಮ ಕ್ಷೇತ್ರವನ್ನು ಪುನರುಜ್ಜೀವಗೊಳಿಸುವಲ್ಲಿ ಗೋವಾ ಪ್ರಮುಖ ಪಾತ್ರವನ್ನು ಹೊಂದಿದೆ. ಹೋಟೆಲ್ ಉದ್ಯಮದ ಜನರು, ಟ್ಯಾಕ್ಸಿ ಚಾಲಕರು, ವ್ಯಾಪಾರಿಗಳು, ಅಂಗಡಿಯವರು ಮತ್ತು ಎಲ್ಲರಿಗೂ ಲಸಿಕೆ ಹಾಕಿದರೆ, ಪ್ರವಾಸಿಗರು ಕೂಡ ಭದ್ರತೆಯ ಭಾವನೆಯಿಂದ ಇಲ್ಲಿಗೆ ಬರುತ್ತಾರೆ. ಈಗ ಗೋವಾ ವಿಶ್ವದ ಜನರು ಲಸಿಕೆಯ ರಕ್ಷಣಾತ್ಮಕ ಕವಚವನ್ನು ಪಡೆದುಕೊಂಡಿರುವ ಕೆಲವೇ ಅಂತಾರಾಷ್ಟ್ರೀಯ ಪ್ರವಾಸಿ ತಾಣಗಳಲ್ಲಿ ಸೇರಿಕೊಂಡಿದೆ. 

ಸ್ನೇಹಿತರೇ,

ಮೊದಲಿನಂತೆ ಪ್ರವಾಸಿ ಚಟುವಟಿಕೆಗಳು ನಡೆಯಲಿ ಮತ್ತು ಮುಂದಿನ ಪ್ರವಾಸೋದ್ಯಮ ಋತುವಿನಲ್ಲಿ ದೇಶ ಮತ್ತು ಪ್ರಪಂಚದ ಪ್ರವಾಸಿಗರು ಇಲ್ಲಿಗೆ ಬಂದು ಆನಂದಿಸಲಿ ಎಂದು ನಾವು ಬಯಸುತ್ತೇವೆ. ನಾವು ನಾವು ಲಸಿಕೆಯ ನೀಡುತ್ತಿರುವಾಗ ಎಷ್ಟು ಗಮನ ನೀಡುತ್ತೇವೆಯೋ ಅಷ್ಟೇ ಗಮನ ಕೊರೊನಕ್ಕೆ ಸಂಬಂಧಿಸಿದ ಮುನ್ನೆಚ್ಚರಿಕೆಗಳ ಬಗ್ಗೆ ನೀಡಿದರೆ ಮಾತ್ರ ಇದು  ಸಾಧ್ಯ. ಸೋಂಕು ಕಡಿಮೆಯಾಗಿದೆ ಆದರೆ ಇನ್ನೂ ನಾವು ಈ ವೈರಸ್ ಅನ್ನು ಲಘುವಾಗಿ ಪರಿಗಣಿಸಬೇಕಾಗಿಲ್ಲ. ಸುರಕ್ಷತೆ ಮತ್ತು ನೈರ್ಮಲ್ಯದ ಮೇಲೆ ಹೆಚ್ಚು ಗಮನಹರಿಸಿದರೆ ಹೆಚ್ಚು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.

ಸ್ನೇಹಿತರೇ,

ಇತ್ತೀಚೆಗೆ, ಕೇಂದ್ರ ಸರ್ಕಾರವು ವಿದೇಶಿ ಪ್ರವಾಸಿಗರನ್ನು ಪ್ರೋತ್ಸಾಹಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಭಾರತಕ್ಕೆ ಭೇಟಿ ನೀಡುವ 5 ಲಕ್ಷ ಪ್ರವಾಸಿಗರಿಗೆ ಉಚಿತ ವೀಸಾ ನೀಡಲು ನಿರ್ಧರಿಸಲಾಗಿದೆ. ಪ್ರಯಾಣ ಮತ್ತು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಪಾಲುದಾರರಿಗೆ 100% ಸರ್ಕಾರದ ಖಾತರಿಯೊಂದಿಗೆ 10 ಲಕ್ಷದವರೆಗೆ ಸಾಲವನ್ನು ನೀಡಲಾಗುತ್ತಿದೆ. ನೋಂದಾಯಿತ ಪ್ರವಾಸಿ ಗೈಡ್ ಗಳಿಗೆ   ರೂ 1 ಲಕ್ಷದವರೆಗೆ ಸಾಲವನ್ನು ಒದಗಿಸಲಾಗಿದೆ. ದೇಶದ ಪ್ರವಾಸೋದ್ಯಮ ಕ್ಷೇತ್ರದ ತ್ವರಿತ ಪ್ರಗತಿಗೆ ಸಹಾಯ ಮಾಡುವ ಪ್ರತಿಯೊಂದು ಹೆಜ್ಜೆಯನ್ನು  ಮುಂದೆ ಇಡಲು ಕೇಂದ್ರ ಸರ್ಕಾರ ಬದ್ಧವಾಗಿದೆ.

ಸ್ನೇಹಿತರೇ,

ಗೋವಾದ ಪ್ರವಾಸೋದ್ಯಮ ಕ್ಷೇತ್ರವನ್ನು ಆಕರ್ಷಕವಾಗಿಸಲು, ರೈತರು, ಮೀನುಗಾರರು ಮತ್ತು ಇತರರ ಅನುಕೂಲಕ್ಕಾಗಿ ಮೂಲಸೌಕರ್ಯವು ಡಬಲ್ ಎಂಜಿನ್ ಸರ್ಕಾರದ ಎರಡು ಶಕ್ತಿಯನ್ನು ಪಡೆಯುತ್ತಿದೆ. ಗೋವಾದಲ್ಲಿ, ವಿಶೇಷವಾಗಿ ಸಂಪರ್ಕಕ್ಕೆ ಸಂಬಂಧಿಸಿದ ಮೂಲಸೌಕರ್ಯಗಳ ಮೇಲೆ ಅಭೂತಪೂರ್ವ ಕೆಲಸವನ್ನು ಮಾಡಲಾಗುತ್ತಿದೆ. ಮೊಪಾದಲ್ಲಿ ನಿರ್ಮಿಸಲಾಗುತ್ತಿರುವ ಗ್ರೀನ್‌ ಫೀಲ್ಡ್ ವಿಮಾನ ನಿಲ್ದಾಣವು ಮುಂದಿನ ಕೆಲವು ತಿಂಗಳಲ್ಲಿ ಸಿದ್ಧಗೊಳ್ಳಲಿದೆ. ಈ ವಿಮಾನ ನಿಲ್ದಾಣವನ್ನು ರಾಷ್ಟ್ರೀಯ ಹೆದ್ದಾರಿಯೊಂದಿಗೆ ಸಂಪರ್ಕಿಸಲು ಸುಮಾರು 12,000 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಆರು ಪಥಗಳ ಆಧುನಿಕ ಹೆದ್ದಾರಿಯನ್ನು ನಿರ್ಮಿಸಲಾಗುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಗೋವಾದಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕಾಗಿ  ಮಾತ್ರ ಹೂಡಿಕೆ ಮಾಡಲಾಗಿದೆ.

ಮುಂದಿನ ಕೆಲವು ತಿಂಗಳಲ್ಲಿ ಉತ್ತರ ಗೋವಾವನ್ನು ದಕ್ಷಿಣ ಗೋವಾದೊಂದಿಗೆ ಸಂಪರ್ಕಿಸುವ 'ಜುವಾರಿ ಸೇತುವೆ' ಕೂಡ ಉದ್ಘಾಟನೆಯಾಗುತ್ತಿರುವುದು ತುಂಬಾ ಸಂತೋಷದ ವಿಷಯವಾಗಿದೆ. ನಿಮಗೆ ತಿಳಿದಿರುವಂತೆ, ಈ ಸೇತುವೆಯು ಪಣಜಿಯನ್ನು ಮಾರ್ಗಾವ್ ದೊಂದಿಗೆ ಜೋಡಿಸುತ್ತದೆ. ಗೋವಾ ವಿಮೋಚನಾ ಯುದ್ಧದ ಅನನ್ಯ ಕಥೆಯ ಸಾಕ್ಷಿಯಾಗಿರುವ ಅಗುಡಾ ಕೋಟೆ ಕೂಡ ಶೀಘ್ರದಲ್ಲೇ ಸಾರ್ವಜನಿಕರಿಗೆ ತೆರೆಯಲಾಗುವುದು ಎಂದು ನನಗೆ ತಿಳಿಸಲಾಗಿದೆ.

ಸಹೋದರ ಸಹೋದರಿಯರೆ,

ಮನೋಹರ್ ಪರಿಕ್ಕರ್ ಜಿ ಬಿಟ್ಟುಹೋದ ಗೋವಾದ ಅಭಿವೃದ್ಧಿಯ ಪರಂಪರೆಯನ್ನು ನನ್ನ ಸ್ನೇಹಿತ ಡಾ.ಪ್ರಮೋದ್ ಜಿ ಮತ್ತು ಅವರ ತಂಡವು ಸಂಪೂರ್ಣ ಸಮರ್ಪಣೆಯೊಂದಿಗೆ ಮುಂದುವರಿಸುತ್ತಿದೆ. ಸ್ವಾತಂತ್ರ್ಯದ ಯುಗದಲ್ಲಿ ದೇಶವು ಸ್ವಾವಲಂಬನೆಯ ಹೊಸ ಸಂಕಲ್ಪದೊಂದಿಗೆ ಮುಂದುವರಿಯುತ್ತಿರುವಾಗ, ಗೋವಾ ‘ಸ್ವಯಂಪೂರ್ಣ ಗೋವಾ’ದ ಪ್ರತಿಜ್ಞೆಯನ್ನೂ ತೆಗೆದುಕೊಂಡಿತು. ಆತ್ಮನಿರ್ಭರ ಭಾರತ ಸ್ವಯಂಪೂರ್ಣ ಗೋವಾದ ಈ ನಿರ್ಣಯದ ಅಡಿಯಲ್ಲಿ ಗೋವಾದಲ್ಲಿ 50 ಕ್ಕೂ ಹೆಚ್ಚು ಘಟಕಗಳ ನಿರ್ಮಾಣ ಆರಂಭವಾಗಿದೆ ಎಂದು ನನಗೆ ಹೇಳಲಾಗಿದೆ. ಇದು ಯುವಕರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಲ್ಲಿ ಮತ್ತು ರಾಷ್ಟ್ರೀಯ ಗುರಿಗಳನ್ನು ಸಾಧಿಸುವಲ್ಲಿ ಗೋವಾದ ಗಂಭೀರತೆಯನ್ನು ತೋರಿಸುತ್ತದೆ.

ಸ್ನೇಹಿತರೇ,

ಇಂದು ಗೋವಾ ಕೇವಲ ಕೋವಿಡ್ ಲಸಿಕೆ ಹಾಕುವಲ್ಲಿ ಮುಂಚೂಣಿಯಲ್ಲಿ ಮಾತ್ರವಲ್ಲದೆ ಹಲವು ಅಭಿವೃದ್ಧಿಯ ಅಂಶಗಳಲ್ಲಿ ದೇಶದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. ಗೋವಾದ ಗ್ರಾಮೀಣ ಮತ್ತು ನಗರ ಪ್ರದೇಶಗಳು ಸಂಪೂರ್ಣ ಬಯಲು ಶೌಚ ಮುಕ್ತವಾಗುತ್ತಿವೆ. ಗೋವಾದಲ್ಲಿ ಮೂಲಭೂತ ಸೌಕರ್ಯಗಳಾದ ವಿದ್ಯುತ್ ಮತ್ತು ನೀರಿನ ಬಗ್ಗೆ ತೃಪ್ತಿದಾಯಕ ಕೆಲಸಗಳನ್ನು ಮಾಡಲಾಗುತ್ತಿದೆ. 100% ವಿದ್ಯುದೀಕರಣ ಮಾಡಿದ ದೇಶದ ಏಕೈಕ ರಾಜ್ಯ ಗೋವಾ. ಗೋವಾದಲ್ಲಿ ಪ್ರತಿ ಮನೆಗೆ ನಲ್ಲಿ ನೀರಿನ ವ್ಯವಸ್ಥೆಯನ್ನು  ಅದ್ಭುತವಾಗಿ ಮಾಡಿದೆ.  ಗ್ರಾಮೀಣ ಗೋವಾದಲ್ಲಿ ಪ್ರತಿ ಮನೆಯಲ್ಲೂ ನಲ್ಲಿ ನೀರನ್ನು ಒದಗಿಸುವ ಪ್ರಯತ್ನ ಶ್ಲಾಘನೀಯ. ಜಲ ಜೀವನ್ ಮಿಷನ್ ಅಡಿಯಲ್ಲಿ, ದೇಶವು ಕಳೆದ ಎರಡು ವರ್ಷಗಳಲ್ಲಿ ಇದುವರೆಗೆ ಸುಮಾರು 5 ಕೋಟಿ ಕುಟುಂಬಗಳಿಗೆ ನಲ್ಲಿ ನೀರಿನ ಸೌಲಭ್ಯವನ್ನು ಕಲ್ಪಿಸಿದೆ.  ಗೋವಾ ಈ ಅಭಿಯಾನವನ್ನು ಮುಂದಕ್ಕೆ ಕೊಂಡೊಯ್ದ ರೀತಿಯಲ್ಲಿ, ಇದು 'ಉತ್ತಮ ಆಡಳಿತ' ಮತ್ತು 'ಈಸ್ ಆಫ್ ಲಿವಿಂಗ್' ಕಡೆಗೆ ಗೋವಾ ಸರ್ಕಾರದ ಆದ್ಯತೆಯನ್ನು ಸ್ಪಷ್ಟಪಡಿಸುತ್ತದೆ.

ಸಹೋದರ ಸಹೋದರಿಯರೆ,

ಕೊರೊನಾ ಅವಧಿಯಲ್ಲಿಯೂ ಉತ್ತಮ ಆಡಳಿತದ ಕಡೆಗೆ ಗೋವಾ ಸರ್ಕಾರವು ಈ ಬದ್ಧತೆಯನ್ನು ಪ್ರದರ್ಶಿಸಿದೆ. ಅಸಂಖ್ಯಾತ ಸವಾಲುಗಳನ್ನು ಎದುರಿಸುತ್ತಿದ್ದರೂ, ಗೋವಾ ತಂಡವು ಯಾವುದೇ ತಾರತಮ್ಯವಿಲ್ಲದೆ ಪ್ರತಿ ಫಲಾನುಭವಿಗೂ ಕೇಂದ್ರ ಸರ್ಕಾರ ಕಳುಹಿಸಿದ ಎಲ್ಲಾ ಸಹಾಯವನ್ನು ತಲುಪಿಸಿದೆ. ಪ್ರತಿಯೊಬ್ಬ ಬಡ, ರೈತ ಮತ್ತು ಮೀನುಗಾರರಿಗೆ ಸಹಾಯ ಮಾಡುವಲ್ಲಿ ಸರ್ವ ಪ್ರಯತ್ನಗಳನ್ನು ಮಾಡಿದೆ. ಗೋವಾದ ಬಡ ಕುಟುಂಬಗಳಿಗೆ ಉಚಿತ ಪಡಿತರವನ್ನು ತಿಂಗಳುಗಳ ಕಾಲ ಅತ್ಯಂತ ಪ್ರಾಮಾಣಿಕತೆಯಿಂದ ತಲುಪಿಸಲಾಗುತ್ತಿದೆ. ಗೋವಾದ ಅನೇಕ ಸಹೋದರಿಯರು ಕಷ್ಟದ ಸಮಯದಲ್ಲಿ ಉಚಿತ ಗ್ಯಾಸ್ ಸಿಲಿಂಡರ್ಗಳನ್ನು ಪಡೆಯುವ ಮೂಲಕ ಸಹಾಯವನ್ನು ಪಡೆದಿದ್ದಾರೆ.

ಪಿಎಂ ಕಿಸಾನ್ ಸಮ್ಮಾನ್ ನಿಧಿಯಿಂದ ಗೋವಾದ ರೈತರು ತಮ್ಮ ಬ್ಯಾಂಕ್ ಖಾತೆಗಳಲ್ಲಿ ನೇರವಾಗಿ ಕೋಟ್ಯಂತರ ರೂಪಾಯಿಗಳನ್ನು ಪಡೆದಿದ್ದಾರೆ. ಕೊರೊನಾ ಅವಧಿಯಲ್ಲಿ ಕೂಡ, ಇಲ್ಲಿ ಸಣ್ಣ ರೈತರು ಮಿಶನ್ ಮೋಡ್ನಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ಗಳನ್ನು ಪಡೆದಿದ್ದಾರೆ. ಇದಲ್ಲದೆ, ಗೋವಾದ ಹೆಚ್ಚಿನ ಸಂಖ್ಯೆಯ ರೈತರು ಮತ್ತು ಮೀನುಗಾರರು ಮೊದಲ ಬಾರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯವನ್ನು ಪಡೆದಿದ್ದಾರೆ. ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ, ಬೀದಿ ಬದಿ ವ್ಯಾಪಾರಿಗಳಿಗೆ ಗೋವಾದಲ್ಲಿ ಸಾಲ ನೀಡಲಾಗುತ್ತಿದೆ. ಈ ಎಲ್ಲಾ ಪ್ರಯತ್ನಗಳು ಪ್ರವಾಹದ ಸಮಯದಲ್ಲಿಯೂ ಗೋವಾದ ಜನರಿಗೆ ಬಹಳಷ್ಟು ಸಹಾಯ ಮಾಡಿದೆ.

ಸಹೋದರ ಸಹೋದರಿಯರೆ,

ಗೋವಾ ಅಪರಿಮಿತ ಸಾಧ್ಯತೆಗಳ ನಾಡು. ಗೋವಾ ಕೇವಲ ಒಂದು ರಾಜ್ಯವಲ್ಲ, ಇದು ಬ್ರಾಂಡ್ ಇಂಡಿಯಾದ ಬಲವಾದ ಗುರುತಾಗಿದೆ. ಗೋವಾದ ಈ ಪಾತ್ರವನ್ನು ವಿಸ್ತರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇಂದು ಗೋವಾದಲ್ಲಿ ಮಾಡುತ್ತಿರುವ ಒಳ್ಳೆಯ ಕೆಲಸದಲ್ಲಿ ನಿರಂತರತೆ ಬಹಳ ಅವಶ್ಯಕವಾಗಿದೆ. ಗೋವಾ ರಾಜಕೀಯ ಸ್ಥಿರತೆ ಮತ್ತು ಉತ್ತಮ ಆಡಳಿತದ ಲಾಭವನ್ನು ಬಹಳ ಸಮಯದ ನಂತರ ಪಡೆಯುತ್ತಿದೆ.

ಗೋವಾದಲ್ಲಿರುವ ಜನರು ಅದೇ ರೀತಿಯಲ್ಲಿ ಮುಂದುವರಿಯಲಿ ಎಂದು ಹಾರೈಸುತ್ತಾ, ನಿಮ್ಮೆಲ್ಲರಿಗೂ ಮತ್ತೊಮ್ಮೆ ಅನೇಕ ಅಭಿನಂದನೆಗಳು! ಪ್ರಮೋದ್ ಜೀ ಮತ್ತು ಅವರ ಇಡೀ ತಂಡಕ್ಕೆ ಅಭಿನಂದನೆಗಳು.

ಧನ್ಯವಾದಗಳು!

ಸೂಚನೆ:  ಇದು ಪ್ರಧಾನ ಮಂತ್ರಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು.

***



(Release ID: 1756285) Visitor Counter : 173