ಪ್ರಧಾನ ಮಂತ್ರಿಯವರ ಕಛೇರಿ

ಗುಜರಾತ್ ನ ಹೂಡಿಕೆದಾರರ ಶೃಂಗಸಭೆ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ


ವಾಹನ ಗುಜರಿ (ಸ್ಕ್ರ್ಯಾಪಿಂಗ್ ) ನೀತಿಗೆ ಚಾಲನೆ

ಕಾರ್ಯಸಾಧುವಾದ ಆರ್ಥಿಕ ಚಲಾವಣೆ ಸೃಷ್ಟಿಸುವುದು ಮತ್ತು ಎಲ್ಲ ಪಾಲುದಾರರಿಗೆ ಮೌಲ್ಯ ತಂದು ಅವರನ್ನು ಪರಿಸರಕ್ಕೆ ಜವಾಬ್ದಾರರನ್ನಾಗಿ ಮಾಡುವುದು ನಮ್ಮ ಉದ್ದೇಶ : ಪ್ರಧಾನಮಂತ್ರಿ

ದೇಶದ ವಾಹನ ಸಂಖ್ಯೆ ಆಧುನೀಕರಣದಲ್ಲಿ ಮತ್ತು ವೈಜ್ಞಾನಿಕ ರೀತಿಯಲ್ಲಿ ಅನರ್ಹ ವಾಹನಗಳನ್ನು ರಸ್ತೆಯಿಂದ ತೊಡೆದು ಹಾಕುವಲ್ಲಿ ವಾಹನ ಗುಜರಿ ನೀತಿ ಅತ್ಯಂತ ಪ್ರಮುಖ ಪಾತ್ರವಹಿಸಲಿದೆ : ಪ್ರಧಾನಮಂತ್ರಿ

ಶುದ್ಧ, ದಟ್ಟಣೆ ರಹಿತ ಮತ್ತು ಸುಗಮ ಸಂಚಾರದ ಗುರಿ 21ನೇ ಶತಮಾನದ ಭಾರತದ ಇಂದಿನ ಅಗತ್ಯವಾಗಿದೆ: ಪ್ರಧಾನಮಂತ್ರಿ

ಈ ನೀತಿ ಹತ್ತು ಸಾವಿರ ಕೋಟಿಗೂ ಅಧಿಕ ಹೊಸ ಬಂಡವಾಳ ಆಕರ್ಷಿಸಲಿದೆ ಹಾಗೂ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಲಿದೆ: ಪ್ರಧಾನಮಂತ್ರಿ

ಹೊಸ ಗುಜರಿ ನೀತಿ ತ್ಯಾಜ್ಯದಿಂದ ಸಂಪತ್ತು ಸೃಷ್ಟಿಸುವ ಚಲಾವಣೆಯ ಆರ್ಥಿಕತೆಗೆ ಅತ್ಯಂತ ಪ್ರಮುಖ ಕೊಂಡಿಯಾಗಿದೆ: ಪ್ರಧಾನಮಂತ್ರಿ

ಹಳೆಯ ವಾಹನ ಗುಜರಿ ಪ್ರಮಾಣ ಪತ್ರ ಹೊಂದಿರುವ ವ್ಯಕ್ತಿಗಳು ಹೊಸ ವಾಹನ ಖರೀದಿಯ ವೇಳೆ ನೋಂದಣಿಗೆ ಯಾವುದೇ ಹಣ ಪಾವತಿಸುವಂತಿಲ್ಲ ಹಾಗೂ ರಸ್ತೆ ತೆರಿಗೆ ಮೇಲೂ ಸಹ ಸ್ವಲ್ಪ ರಿಯಾಯಿತಿ ದೊರಕಲಿದೆ: ಪ್ರಧಾನಮಂತ್ರಿ

ವಾಹನ ಬಿಡಿಭಾಗಗಳ ಉತ್ಪಾದನೆಯ ಮೌಲ್ಯಸರಣಿಗೆ ಸಂಬಂಧಿಸಿದಂತೆ ಆಮದು ಅವಲಂಬನೆ ತಗ್ಗಿಸುವುದು ನಮ್ಮ ಪ್ರಯತ್ನ: ಪ್ರಧಾನಮಂತ್ರಿ

ಎಥೆನಾಲ್, ಹೈಡ್ರೋಜನ್ ಇಂಧನ, ಎಲೆಕ್ಟ್ರಿಕ್ ವಾಹನಗಳ ಸಂಚಾರ, ಸಂಶೋಧ

Posted On: 13 AUG 2021 12:34PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಗುಜರಾತ್ ಹೂಡಿಕೆದಾರರ ಶೃಂಗಸಭೆಯನ್ನುದ್ದೇಶಿಸಿ ಭಾಷಣ ಮಾಡಿದರು. ಸ್ವಯಂಪ್ರೇರಿತ ವಾಹನ ಆಧುನೀಕರಣ ಕಾರ್ಯಕ್ರಮ ಅಥವಾ ವಾಹನ ಗುಜರಿ ನೀತಿಯಡಿಯಲ್ಲಿ ವಾಹನ ಗುಜರಿ ಮೂಲಸೌಕರ್ಯ ಸ್ಥಾಪನೆಗೆ ಬಂಡವಾಳ ಆಕರ್ಷಿಸುವ ಉದ್ದೇಶದಿಂದ ಶೃಂಗಸಭೆಯನ್ನು ಆಯೋಜಿಸಲಾಗಿತ್ತು. ಅಲ್ಲದೆ ಅಲ್ಲಂಗ್ ನಲ್ಲಿ ಸಮಗ್ರ ಗುಜರಿ ತಾಣ ಅಭಿವೃದ್ಧಿಗೆ ಹಡಗು ಒಡೆಯುವ ಉದ್ಯಮದ ಜತೆ ಸಮನ್ವಯ ಸಾಧಿಸುವುದಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು ಹಾಗೂ ಗುಜರಾತ್ ಮುಖ್ಯಮಂತ್ರಿ ಸಂದರ್ಭದಲ್ಲಿ ಉಪಸ್ಥಿತರಿದ್ದರು

ವಾಹನ ಗುಜರಿ(ಸ್ಕ್ರ್ಯಾಪಿಂಗ್) ನೀತಿಗೆ ಇಂದು ಚಾಲನೆ ನೀಡಿರುವುದು ಭಾರತದ ಅಭಿವೃದ್ಧಿ ಪಯಣದಲ್ಲಿ ಅತ್ಯಂತ ಮಹತ್ವದ ಮೈಲುಗಲ್ಲಾಗಿದೆ. ವಾಹನ ಗುಜರಿ ಮೂಲಸೌಕರ್ಯ ಅಭಿವೃದ್ಧಿಗಾಗಿ ಗುಜರಾತ್ ಹೂಡಿಕೆದಾರರ ಸಮಾವೇಶ ಹೊಸ ಸಾಧ್ಯತೆಗಳನ್ನು ತೆರೆದಿದೆ. ಅನರ್ಹ ಮತ್ತು ಮಾಲಿನ್ಯಕಾರಕ ವಾಹನಗಳನ್ನು ಪರಿಸರಸ್ನೇಹಿ ವಿಧಾನದ ಮೂಲಕ ಹಂತ ಹಂತವಾಗಿ ತೊಡೆದು ಹಾಕುವುದು ವಾಹನ ಗುಜರಿ ನೀತಿಯಾಗಿದೆ. ನಮ್ಮ ಗುರಿ ಕಾರ್ಯಸಾಧುವಾದ ಚಲಾವಣೆಯ ಆರ್ಥಿಕತೆಯನ್ನು ಸೃಷ್ಟಿಸುವುದು ಮತ್ತು ಎಲ್ಲ ಪಾಲುದಾರರಿಗೆ ಮೌಲ್ಯವನ್ನು ತಂದು ಅವರನ್ನು ಪರಿಸರಕ್ಕೆ ಜವಾಬ್ದಾರರನ್ನಾಗಿ ಮಾಡುವುದುಎಂದು ಪ್ರಧಾನಮಂತ್ರಿ ಅವರು ಕಾರ್ಯಕ್ರಮಕ್ಕೂ ಮುನ್ನ ಮಾಡಿರುವ ಸರಣಿ ಟ್ವೀಟ್ ಗಳಲ್ಲಿ ಹೇಳಿದ್ದಾರೆ

 

ರಾಷ್ಟ್ರೀಯ ಆಟೊಮೊಬೈಲ್ ಗುಜರಿ ನೀತಿಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಮಂತ್ರಿ ಅವರು, ನೀತಿ ಆಟೊ ವಲಯ (ವಾಹನಗಳ ಬಿಡಿ ಭಾಗಗಳ)ಕ್ಕೆ ಮತ್ತು ನವಭಾರತದ ಸಾರಿಗೆಗೆ ಹೊಸ ಹೆಗ್ಗುರುತನ್ನು ತರಲಿದೆ. ನೀತಿ ದೇಶದ ವಾಹನಗಳ ಆಧುನೀಕರಣದಲ್ಲಿ ಹಾಗೂ ಅನರ್ಹ ವಾಹನಗಳನ್ನು ವೈಜ್ಞಾನಿಕ ರೀತಿಯಲ್ಲಿ ರಸ್ತೆಯಿಂದ ತೊಡೆದು ಹಾಕುವಲ್ಲಿ ಅತ್ಯಂತ ಪಾತ್ರವನ್ನು ವಹಿಸಲಿದೆ ಎಂದರು. ಸಾರಿಗೆ ವ್ಯವಸ್ಥೆಯಲ್ಲಿ ಆಧುನೀಕರಣದಿಂದಾಗಿ ಪ್ರಯಾಣ ಮತ್ತು ಸಾರಿಗೆಯ ಹೊರೆ ತಗ್ಗುವುದು ಮಾತ್ರವಲ್ಲದೆ, ಆರ್ಥಿಕ ಅಭಿವೃದ್ಧಿಗೂ ಕೂಡ ಸಹಾಯಕವಾಗುತ್ತದೆ ಎಂಬುದು ಸಾಬೀತಾಗಿದೆ. ಶುದ್ಧ, ದಟ್ಟಣೆರಹಿತ ಮತ್ತು ಸುಗಮ ಸಂಚಾರ ಗುರಿ 21ನೇ ಶತಮಾನದ ಭಾರತದಲ್ಲಿ ಅತ್ಯಂತ ಸಕಾಲಿಕವಾಗಿದೆ.

ಹೊಸ ಗುಜರಿ ನೀತಿ ಆರ್ಥಿಕತೆ ಚಲಾವಣೆ ಹಾಗೂ ತ್ಯಾಜ್ಯದಿಂದ ಸಂಪತ್ತು ಅಭಿಯಾನದಲ್ಲಿ ಅತ್ಯಂತ ಪ್ರಮುಖ ಕೊಂಡಿಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಅಲ್ಲದೆ ನೀತಿ ದೇಶದ ನಗರಗಳಲ್ಲಿನ ಮಾಲಿನ್ಯ ಪ್ರಮಾಣ ತಗ್ಗಿಸುವುದು ಹಾಗೂ ನಮ್ಮ ಪರಿಸರ ರಕ್ಷಣೆ ಹಾಗು ವೇಗದ ಅಭಿವೃದ್ಧಿಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಮರು ಬಳಕೆ, ಮರು ಸಂಸ್ಕರಣೆ ಮತ್ತು ಮರು ಚೇತರಿಕೆ ತತ್ವಗಳನ್ನು ಆಧರಿಸಿ ನೀತಿ ರೂಪಿಸಲಾಗಿದ್ದು, ಇದು ವಾಹನ ವಲಯ ಹಾಗೂ ಲೋಹದ(ಮೆಟಲ್) ವಲಯದಲ್ಲಿ ದೇಶ ಸ್ವಾವಲಂಬನೆ ಸಾಧಿಸಲು ಉತ್ತೇಜನ ನೀಡುತ್ತದೆ. ನೀತಿ ಸುಮಾರು ಹತ್ತು ಸಾವಿರ ಕೋಟಿಗೂ ಅಧಿಕ ಹೊಸ ಬಂಡವಾಳ ಆಕರ್ಷಿಸುವ ಜೊತೆಗೆ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಲಿವೆ.

ಭಾರತ ಇದೀಗ 75ನೇ ಸ್ವಾತಂತ್ರ್ಯೋತ್ಸವಕ್ಕೆ ಪ್ರವೇಶಿಸುತ್ತಿರುವ ಹಿನ್ನೆಲೆಯಲ್ಲಿ ಮುಂದಿನ 25 ವರ್ಷಗಳು ಅತ್ಯಂತ ಪ್ರಮುಖವಾದವು ಎಂದು ಪ್ರಧಾನಮಂತ್ರಿ ಹೇಳಿದರು. ಮುಂದಿನ 25 ವರ್ಷಗಳಲ್ಲಿ ಪ್ರತಿ ದಿನದ ಜೀವನದಲ್ಲಿ ಹಾಗೂ ದೈನಂದಿನ ವ್ಯಾಪಾರದ ವಿಧಾನಗಳಲ್ಲಿ ಹಲವು ಬದಲಾವಣೆಗಳನ್ನು ಕಾಣಬಹುದಾಗಿದೆ ಎಂದರು. ಬದಲಾವಣೆಯ ನಡುವೆಯೇ ನಮ್ಮ ಪರಿಸರ, ನಮ್ಮ ಭೂಮಿ, ನಮ್ಮ ಸಂಪನ್ಮೂಲ ಮತ್ತು ನಮ್ಮ ಕಚ್ಚಾ ಸಾಮಗ್ರಿಗಳನ್ನು ಸಂರಕ್ಷಿಸಬೇಕಾದ ಸಮಾನ ಅಗತ್ಯತೆ ಇದೆ ಎಂದು ಅವರು ಹೇಳಿದ್ದಾರೆ. ಭವಿಷ್ಯದಲ್ಲಿ ನಾವು ಆವಿಷ್ಕಾರ ಮತ್ತು ತಂತ್ರಜ್ಞಾನದ ಕುರಿತಂತೆ ಕಾರ್ಯ ನಿರ್ವಹಿಸಬಹುದಾಗಿದೆ. ಆದರೆ ನಾವು ಭೂತಾಯಿಯಿಂದ ಏನು ಪಡೆಯುತ್ತೇವೆ ಎನ್ನುವುದು ನಮ್ಮ ಕೈಯಲ್ಲಿಲ್ಲ ಎಂದರು.

ಒಂದೆಡೆ ಭಾರತ ಸಮುದ್ರದಾಳದ ಮಿಷನ್ ಮೂಲಕ ಹೊಸ ಸಾಧ್ಯತೆಗಳನ್ನು ಅನ್ವೇಷಿಸುತ್ತಿದೆ. ಮತ್ತೊಂದೆಡೆ ಅದು ಆರ್ಥಿಕತೆಯ ಚಲಾವಣೆಯನ್ನೂ ಸಹ ಉತ್ತೇಜಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಸುಸ್ಥಿರ ಮತ್ತು ಪರಿಸರಸ್ನೇಹಿ ಅಭಿವೃದ್ಧಿ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ ಎಂದು ಅವರು ಹೇಳಿದರು.

ಇಂಧನ ವಲಯದಲ್ಲಿ ಮಾಡಲಾಗಿರುವ ಅಪ್ರತಿಮ ಕಾರ್ಯದ ಕುರಿತು ಪ್ರಧಾನಮಂತ್ರಿ ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. ಭಾರತ, ಸೌರ ಮತ್ತು ಪವನ ವಿದ್ಯುತ್ ವಲಯದಲ್ಲಿ ಅಗ್ರ ಶ್ರೇಯಾಂಕದ ರಾಷ್ಟ್ರಗಳ ಸಾಲಿಗೆ ಸೇರ್ಪಡೆಯಾಗಿದೆ. ತ್ಯಾಜ್ಯದಿಂದ ಸಂಪತ್ತು ಅಭಿಯಾನವನ್ನು ಸ್ವಚ್ಛತಾ ಮತ್ತು ಆತ್ಮನಿರ್ಭರ ಭಾರತದೊಂದಿಗೆ ಸಂಯೋಜಿಸಬೇಕಿದೆ ಎಂದು ಶ್ರೀ ನರೇಂದ್ರ ಮೋದಿ ಅವರು ಬಲವಾಗಿ ಪ್ರತಿಪಾದಿಸಿದರು.

ನೀತಿಯಿಂದಾಗಿ ಸಾಮಾನ್ಯ ಜನರಿಗೆ ಎಲ್ಲ ವಿಧದಲ್ಲೂ ಹೆಚ್ಚಿನ ಲಾಭವಾಗಲಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಇದರ ಮೊದಲ ಲಾಭ ಎಂದರೆ ಹಳೆಯ ವಾಹನಗಳನ್ನು ಗುಜರಿಗೆ ಹಾಕಿದರಿಗೆ ಅದಕ್ಕೆ ಪ್ರಮಾಣಪತ್ರಗಳನ್ನು ನೀಡಲಾಗುವುದು. ಅಂತಹ ಪ್ರಮಾಣಪತ್ರಗಳನ್ನು ಹೊಂದಿರುವ ಯಾವುದೇ ವ್ಯಕ್ತಿ, ಹೊಸ ವಾಹನ ಖರೀದಿ ನಂತರ ನೋಂದಣಿಗೆ ಯಾವುದೇ ಹಣ ಪಾವತಿಸುವಂತಿಲ್ಲ. ಅಲ್ಲದೆ ಅಂತಹವರಿಗೆ ರಸ್ತೆ ತೆರಿಗೆಯಲ್ಲೂ ಸಹ ಸ್ವಲ್ಪಮಟ್ಟಿನ ವಿನಾಯಿತಿ ಲಭ್ಯವಾಗಲಿದೆ. ಎರಡನೆಯ ಲಾಭವೆಂದರೆ ಇದರಿಂದ ಹಳೆಯ ವಾಹನಗಳ ನಿರ್ವಹನಾ ವೆಚ್ಚ, ದುರಸ್ಥಿ ವೆಚ್ಚ ಮತ್ತು ಇಂಧನ ದಕ್ಷತೆಯನ್ನೂ ಸಹ ಉಳಿಸಬಹುದಾಗಿದೆ. ಮೂರನೇ ಲಾಭ ನೇರವಾಗಿ ಜೀವನಕ್ಕೆ ಸಂಬಂಧಿಸಿದ್ದು. ಹಳೆಯ ವಾಹನಗಳು ಮತ್ತು ಹಳೆಯ ತಂತ್ರಜ್ಞಾನದಿಂದಾಗಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಹೆಚ್ಚಿನ ಅಪಾಯವಿದೆ. ಇದರಿಂದ ಜನರಿಗೆ ಸ್ವಲ್ಪಮಟ್ಟಿನ ನೆಮ್ಮದಿ ಮೂಡಲಿದೆ. ನಾಲ್ಕನೆಯದಾಗಿ  ನಮ್ಮ ಆರೋಗ್ಯದ ಮೇಲೆ ಮಾಲಿನ್ಯದಿಂದ ಆಗುವ ಹಾನಿಕಾರಕ ಪರಿಣಾಮಗಳು ತಗ್ಗುತ್ತವೆ.

ಹೊಸ ನೀತಿಯಡಿ ವಾಹನಗಳನ್ನು ಅವುಗಳು ಖರೀದಿಸಿರುವ ವರ್ಷವನ್ನು ಆಧರಿಸಿ ಸುಮ್ಮನೆ ಗುಜರಿಗೆ ಹಾಕುವುದಿಲ್ಲ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ವಾಹನಗಳನ್ನು ವೈಜ್ಞಾನಿಕ ರೀತಿಯಲ್ಲಿ ಅಧಿಕೃತ, ಸ್ವಯಂಚಾಲಿತ ಪರೀಕ್ಷಾ ಕೇಂದ್ರಗಳ ಮೂಲಕ ತಪಾಸಣೆ ನಡೆಸಲಾಗುವುದು. ಅನರ್ಹ ವಾಹನಗಳನ್ನು ಮಾತ್ರ ವೈಜ್ಞಾನಿಕ ರೀತಿಯಲ್ಲಿ ಗುಜರಿಗೆ ಹಾಕಲಾಗುವುದು. ದೇಶಾದ್ಯಂತ ನೋಂದಾಯಿತ ವಾಹನಗಳ ಗುಜರಿ ಸೌಕರ್ಯ ತಂತ್ರಜ್ಞಾನ ಆಧಾರಿತವಾಗಿದೆ ಮತ್ತು ಪಾರದರ್ಶಕತೆ ಖಾತ್ರಿಪಡಿಸಲಾಗುವುದು

ಹೊಸ ನೀತಿಯಡಿ ಗುಜರಿಗೆ ಸಂಬಂಧಿಸಿದ ವಲಯಕ್ಕೆ ಹೊಸ ಶಕ್ತಿ ಮತ್ತು ಭದ್ರತೆ ದೊರಕಲಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಉದ್ಯೋಗಿಗಳು ಹಾಗು ಸಣ್ಣ ಉದ್ದಿಮೆದಾರರಿಗೆ ಸುರಕ್ಷಿತ ವಾತಾವರಣ ಲಭಿಸಲಿದೆ. ಅವರೂ ಸಹ ಸಂಘಟಿತ ವಲಯದ ಉದ್ಯೋಗಿಗಳಂತೆ ಎಲ್ಲ ಅನುಕೂಲಗಳನ್ನು ಪಡೆಯಬಹುದಾಗಿದೆ. ಅಧಿಕೃತ ಗುಜರಿ ಕೇಂದ್ರಗಳಲ್ಲಿ ಸಂಗ್ರಹಣಾ ಏಜೆಂಟ್ ಗಳಾಗಿ ಅವರು ಕಾರ್ಯನಿರ್ವಹಿಸಬಹುದು. ಕಳೆದ ವರ್ಷದಲ್ಲಿ ನಾವು 23,000 ಕೋಟಿ ರೂ. ಮೌಲ್ಯದ ಸ್ಕ್ರ್ಯಾಪ್ ಸ್ಟೀಲ್ ಅನ್ನು ಆಮದು ಮಾಡಿಕೊಳ್ಳಬೇಕಾಗಿತ್ತು ಮತ್ತು ನಮ್ಮ ಗುಜರಿ ಉತ್ಪಾದಕವಾಗಿಲಕ್ಲ, ನಾವು ಶಕ್ತಿ ಹಾಗೂ ಅಪರೂಪದ ಭೂಮಿಯ ಲೋಹಗಳನ್ನು ಮತ್ತೆ ಪಡೆಯುವುದು ಸಾಧ್ಯವಾಗುತ್ತಿಲ್ಲ ಎಂದು ಪ್ರಧಾನಿ ವಿಷಾಧಿಸಿದರು.

ಭಾರತೀಯ ಉದ್ಯಮವನ್ನು ಸುಸ್ಥಿರ ಮತ್ತು ಉತ್ಪಾದಕವನ್ನಾಗಿ ಮಾಡಲು ಹಾಗೂ  ಆತ್ಮನಿರ್ಭರ ಭಾರತ ಪ್ರಕ್ರಿಯೆಗೆ ವೇಗ ನೀಡಲು ನಿರಂತರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಆಟೋ ಮ್ಯಾನ್ಯುಫ್ಯಾಕ್ಚರಿಂಗ್ ಮೌಲ್ಯ ಸರಣಿಗೆ ಸಂಬಂಧಿಸಿದಂತೆ ಆಮದು ಅವಲಂಬನೆ ತಗ್ಗಿಸುವುದು ನಮ್ಮ ಪ್ರಯತ್ನವಾಗಿದೆ ಎಂದು ಅವರು ಬಲವಾಗಿ ಪ್ರತಿಪಾದಿಸಿದರು.

ಎಥೆನಾಲ್, ಹೈಡ್ರೋಜನ್ ಇಂಧನ ಅಥವಾ ವಿದ್ಯುತ್ ವಾಹನಗಳಿಗೆ ಸರ್ಕಾರ ಆದ್ಯತೆ ನೀಡುತ್ತಿದೆ. ಉದ್ಯಮದ ಸಕ್ರಿಯ ಪಾಲ್ಗೊಳ್ಳುವಿಕೆ ಇದಕ್ಕೆ ಅತ್ಯಂತ ಪ್ರಮುಖವಾಗಿದೆ. ಸಂಶೋಧನೆ ಮತ್ತು ಅಭಿವೃದ್ಧಿಯಿಂದ ಮೂಲಸೌಕರ್ಯದವರೆಗೆ ಉದ್ಯಮ ತನ್ನ ಪಾಲುದಾರಿಕೆಯನ್ನು ಹೆಚ್ಚಿಸಿಕೊಳ್ಳಬೇಕಿದೆ. ಮುಂದಿನ 25 ವರ್ಷಗಳಿಗೆ ಆತ್ಮನಿರ್ಭರ ಭಾರತದ ನೀಲನಕ್ಷೆಯನ್ನು ಹೊಂದುವಂತೆ ಅವರು ಕರೆ ನೀಡಿದರು. ಅದಕ್ಕಾಗಿ ನೀವು ಯಾವ ರೀತಿಯ ಸಹಾಯವನ್ನು ಬಯಸುತ್ತೀರೋ ಅದೆಲ್ಲವನ್ನು ನೀಡಲು ಸರ್ಕಾರ ಸಿದ್ಧವಿದೆ ಎಂದು ಅವರು ಭರವಸೆ ನೀಡಿದರು.

ದೇಶ ಇಂದು ಶುದ್ಧ, ದಟ್ಟಣೆರಹಿತ ಮತ್ತು ಸುಗಮ ಸಾರಿಗೆ ನಿಟ್ಟಿನಲ್ಲಿ ಸಾಗುತ್ತಿದ್ದು, ಹಳೆಯ ವಿಧಾನ ಹಾಗೂ ಪದ್ದತಿಗಳನ್ನು ಬದಲಾವಣೆ ಮಾಡಿಕೊಳ್ಳುವ ಅಗತ್ಯವಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಇಂದು ಭಾರತ ತನ್ನ ಪ್ರಜೆಗಳಿಗೆ ಜಾಗತಿಕ ನಿರ್ದಿಷ್ಟ ಗುಣಮಟ್ಟ ಮತ್ತು ಸುರಕ್ಷತೆಯನ್ನು ಒದಗಿಸಲು ಬದ್ಧವಾಗಿದೆ. ಭಾರತ್ ಸ್ಟೇಜ್-4ರಿಂದ ಭಾರತ್ ಸ್ಟೇಟ್-6ಕ್ಕೆ ಪರಿವರ್ತನೆಗೊಳ್ಳುತ್ತಿರುವುದರ ಹಿಂದಿನ ಆಲೋಚನೆಯು ಇದೆ ಆಗಿದೆ ಎಂದು ಪ್ರಧಾನಮಂತ್ರಿ ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

***



(Release ID: 1745423) Visitor Counter : 308